Saturday, March 5, 2016

ನೀ ಬಂದ ರಭಸಕ್ಕೆ ಹರಡಿ ರಾಡಿ ರಂಗೋಲಿ,
ದಿಕ್ಕಾಪಾಲಾದ ಹೆಬ್ಬಾಗಿಲ ತರಗಲೆ ರಾಶಿ,
ಜಾಗ ತಪ್ಪಿ ಮಖಾಡೆ ಬಿದ್ದುಕೊಂಡ ಕಾಲೊರೆಸು,
ತಳ್ಳಿಸಿಕೊಂಡ ಬಾಗಿಲದುರಿ ಉದುರಿದ ತೋರಣದೆಲೆ..
ಒಳಬಂದು ಪೊಟ್ಟಣ ಬಿಚ್ಚಿ ಹಂಚಿದ ಮತ್ತಿಗೆ
ಘಮ್ಮೆಂದು ಸುತ್ತಿಸುಳಿದೊಮ್ಮೆ
ಮರುಘಳಿಗೆಗೇ ಮಂದ, ಸ್ತಬ್ಧ ಗಾಳಿ!
ಕೆದರಿ ತಲೆ, ಕರಗಿ ಹಣೆಬೊಟ್ಟು,
ಜಾರಿ ಮುದುರಿ ವಸ್ತ್ರ, ಕೂತಲ್ಲೆ ಕಲ್ಲಾದ ನಾನು!

ಎಲ್ಲೆಡೆ ನಿಶ್ಶಬ್ದಗದ್ದಲವೆಬ್ಬಿಸಿ
ಸರ್ರನೆ ತೆರಳಿದ್ದಿನ್ನೂ ಅರಗಿಲ್ಲವೆಂಬಂತೆ
ಬಿಡದೆ ಗಾಳಿಗಾಡುತಿರುವ
ಮುಚ್ಚಿಕೊಳಲಾಗದೆ, ಪೂರ ತೆರಕೊಳಲಾಗದೆ
ಒಂದೆಡೆಗೂ ಮುಟ್ಟಲಾಗದೆ
ತ್ರಿಶಂಕು ಮೌನಹುಯ್ದಾಟದಲಿ
ಮೇಲಿನಗುಳಿ ಸಿಗಿಸಿರದ
ಎರಡರಲೊಂದು ಬಾಗಿಲು!

ಇದೋ ಈ ಗುಂಗಿನೊಳಗೆ
ಮುಂಚಲಿಸುತಲೇ ಮತ್ತೆ ಮತ್ತೆ ಸುತ್ತುತಿವೆ
ತುಂಬುಕಣ್ಣಕೊಳದೆರಡು ಮೀನು!
ಒಂದರ ಹಿಂದೊಂದು,
ನಲಿವಿನೆಲ್ಲ ಬಣ್ಣ ಹೊತ್ತೊಂದು,
ನೋವಿನ ನಿರ್ವರ್ಣದ್ದೊಂದು...


ಸುಮ್ಮನೆ ಉರುವಲಿಲ್ಲದೆ ಉರಿವ ಮಿದುಹೃದಯ,
ಸುಮ್ಮನೆ ಹರಿವ ಕಣ್ಣೀರುಗಳಿಗೆ ತವರು-ಗಮ್ಯಗಳಿರುವುದಿಲ್ಲ
ಸುಮ್ಮನೆ ಹಾಗೇ ಗಾಳಿಯಂತೆ ಮುಟ್ಟಿಹೋದ ಅನುಭೂತಿಗೆ
ಒಂದಷ್ಟು ಗರಿಗಳನೋ, ಅಷ್ಟೆಷ್ಟೊ ನಿಟ್ಟುಸಿರನೋ ಹಚ್ಚಿದ್ದಾದರೆ
ಆಗಲೂ ಅದು ಕಣ್ಣಿನ ಲೆಕ್ಕಕ್ಕೆಟುಕುವುದಿಲ್ಲ!
ಏನಾಗುತಿತ್ತು ಅಂದು ಬಂದಿರದಿದ್ದರೆ?
ನೂರು ಬಾರಿ ಬೊಬ್ಬಿಟ್ಟು ವ್ಯರ್ಥ ಕಾಲಪ್ರವಾಹದಲರಗಿದ
ಪ್ರಶ್ನೆಯಿಂದು ತನ್ನಷ್ಟಕ್ಕೇ ಗುನುಗಿಕೊಳುತಿದೆ,
"ಅಂದು ಬರದಿದ್ದರೆ ಇನ್ನೇನಿಲ್ಲ, ಇಂದು ಬರುತಿರಲಿಲ್ಲ, ಅಷ್ಟೇ !"