Friday, November 30, 2012

ಆತ್ಮಸಖಿಗೊಂದು ಪತ್ರ.....


---------------------------------------------------------------------------

ಸನ್ಮಿತ್ರರೇ, ದೈನಂದಿನ ಜೀವನದಲ್ಲಿ ಎದುರಾಗುವ ಅದೆಷ್ಟೋ ಸನ್ನಿವೇಶಗಳು, ಸಿಕ್ಕುವ ಮಾಹಿತಿಗಳು ನಮ್ಮೊಳಗೆ ಭಾವನೆಗಳ ಮಹಪೂರವನ್ನೇ ಹರಿಸುವಷ್ಟು ಪರಿಣಾಮಕಾರಿಗಳಾಗಿರುತ್ತವೆ. ಎಷ್ಟೋ ಬಾರಿ ಆ ಭಾವನೆಯ ಜಾಡು ಹೇಗಿರುತ್ತದೆ ಅಂದರೆ, ಅನಿವಾರ್ಯ ಕಾರಣಗಳಿಗಾಗಿ ತೀರಾ ಹತ್ತಿರದ ಸುತ್ತಮುತ್ತಲಿ ಅದನ್ನ ಹರಿಯಬಿಡಲಾಗುವುದಿಲ್ಲ. ಹಾಗಾಗಿ ಅಂಥ ಕೆಲ ಸಂದರ್ಭಗಳಲ್ಲಿ ನನಗನಿಸಿದ ಭಾವನೆಗಳನ್ನು ಅವು ಮೂಡಿದ ಹಾಗೆ ನನ್ನ ಕಾಲ್ಪನಿಕ ಗೆಳತಿಯೊಬ್ಬಳಲ್ಲಿ ಹಂಚಿಕೊಳ್ಳುವ ಹಾಗೂ ಅಮೂಲಕ ನಿಮಗೂ ಆ ಅನಿಸಿಕೆಗಳನ್ನು ಪರಿಚಯಿಸುವ ಯತ್ನ ಮಾಡುತ್ತಿದ್ದೇನೆ. ಕಾಲ್ಪನಿಕ ಗೆಳತಿ ಯಾಕೆಂದರೆ, ಮಧ್ಯೆ ಮಧ್ಯೆ ತಡೆಯುವ ಹಾಗೂ ತನ್ನ ಅಭಿಪ್ರಾಯ ತೂರಿಸುವ ಗೋಜಿಗವಳು ಹೋಗಲಾರಳು ಅನ್ನುವ ಕಾರಣ- ಅಷ್ಟೆ. ಆ ಕಾಲ್ಪನಿಕ ಪಾತ್ರದಲ್ಲಿ ನನ್ನ ನಿಜಜೀವನದ ಗೆಳೆತನದ ಛಾಯೆ ಖಂಡಿತಾ ಅಡಗಿಕೂತಿರುತ್ತದೆ. ಅನುಭವವಲ್ಲದ ಅಭಿವ್ಯಕ್ತಿ ಹೇಗೆ ತಾನೇ ರೂಪ ತಾಳೀತು ಅಲ್ಲವೇ? ಈ ಶೃಂಖಲೆಯ ಮೊದಲ ಪತ್ರ.......

-----------------------------------------------------------------------------

ಸಖೀ, ಯಾವತ್ತಿನಂತೆ ಇಂದೂ ಆ ಬೆಕ್ಕು ಅದರ ಪುಟಾಣಿಗಳೊಂದಿಗೆ ಬಂದಾಗ ನಿನ್ನ ನೆನಪು ತುಂಬ ಹೊತ್ತು ಮನ ತುಂಬಿತ್ತು ಕಣೇ...ನಾನೂ ನೀನೂ ನಿಮ್ಮನೆ ಬೆಕ್ಕಿನ ಕರ್ರಗಿನ ಮೂರುಕಾಲಿನ ಒಂದು ನಿತ್ರಾಣಿ ಮರಿಗೆ ತಮ್ಮನಿಗೆ ಮದ್ದುಣಿಸಲು ತಂದಿದ್ದ ಪಿಲ್ಲರ್ ನಲ್ಲಿ ಹಾಲುತುಂಬಿ ಸಾಕಿದ್ದು, ಮೊರವೊಂದಕ್ಕೆ ಗೋಣಿಚೀಲ ಹಾಸಿ ಮಲಗಿಸಿ, ಗಳಿಗೆಗೊಮ್ಮೆ ಜೀವಂತವಾಗಿದೆಯೇ ಎಂದು ನೋಡುತ್ತಿದ್ದುದು, ಕ್ಷಣಕ್ಷಣ ಬಿಗಡಾಯಿಸುತ್ತಿದ್ದ ಅದರ ಆರೋಗ್ಯಕ್ಕಾಗಿ ಕಣ್ಣೀರಿಡುತ್ತಾ ಮನಸಿಲ್ಲದಿದ್ದರೂ ಅದರ ಸಾವಿಗೆ ಕಾಯುತ್ತಿದ್ದೇವೇನೋ ಅನಿಸುತ್ತಿದ್ದುದು... ಈ ಎಲ್ಲಾ ಭಾವನೆಗಳೂ ನಿನ್ನೆಯವೇನೋ ಅನಿಸುವಷ್ಟು ತಾಜಾವಾಗಿವೆ ಕಣೆ ಎದೆಗೂಡಲ್ಲಿ. ಈಗ ಒಂದಾರೇಳು ತಿಂಗಳ ಹಿಂದೆ ಇದೂ ಒಂದು ಪುಟಾಣಿಯೇ. ಹೇಗೋ ಅಮ್ಮನೊಂದಿಗೆ ಮಾಳಿಗೆಯೇರಿ ಬಿಟ್ಟಿತ್ತು. ಮುಂದೊಂದು ದಿನ ಜಾಗ ಬದಲಿಸಲು ಆ ಅಮ್ಮ ಕೆಳಗಿಂದ ಕರೆವಾಗ ಹಾರುವ ಧೈರ್ಯವಾಗದೆ, ಅಮ್ಮ ಕಣ್ಣಿಂದ ಮರೆಯಾಗುವುದನ್ನೂ ತಡೆಯಲಾರದೆ, ಹೃದಯವಿದ್ರಾವಕವಾಗಿ ಕೂಗುತ್ತಾ ದಿನವೆಲ್ಲ ಚಿಟ್ಟೆನಿಸುವಂತೆ ಮಾಡಿತ್ತು. ತಡೆಯದೇ ನಾನು ಹರಸಾಹಸ ಮಾಡಿ ಅದರಮ್ಮನ ಗುರ್ರ್ರ್ ಗಳ ನಡುವೆ ಹೇಗೋ ಧೈರ್ಯ ಮಾಡಿ ಕೆಳಗೆ ತಂದಿಟ್ಟಿದ್ದೆ. ಈಗ ನೋಡು ಅದರ ಮರಿಗಳಿಗಾಗಿ ವಾರಕೊಂದರಂತೆ ಹೊಸಹೊಸ ಜಾಗ ಹುಡುಕಿ ಠೀವಿಯಿಂದ ಕರೆದೊಯ್ಯುವ ಪರಿ...! ಜಗತ್ತೆಷ್ಟು ದೊಡ್ಡ ದೊಡ್ಡ ಹೆಜ್ಜೆಯಿಟ್ಟು ಮುನ್ನಡೆಯುತ್ತಿದೆ, ಅದರದೇ ಅಂಗಗಳಾದ ನಮ್ಮ ಮನಸ್ಸಿನ ನಡಿಗೆ ಇನ್ನೂ ಅದೆಷ್ಟೋ ಹೆಜ್ಜೆ ಹಿಂದಿದೆ ಅನಿಸುವುದಿಲ್ಲವೇನೇ ಒಮ್ಮೊಮ್ಮೆ? ಅದುಬಿಡು.... ನಾನಿಂದು ನಿನ್ನಲ್ಲಿ ಹಂಚಿಕೊಳ್ಳಬೇಕಾಗಿರುವ ಅರ್ಥವಾಗದ ವಿಷಯ ಯಾವುದು ಗೊತ್ತೇನೇ? ಈ ಬೆಕ್ಕಿನ ಅಪ್ಪನೇ ಅದರ ಮರಿಗಳಿಗೂ ಅಪ್ಪ!! ಇದು ಪ್ರಕೃತಿಯ ಅತ್ಯಂತ ಸಹಜ ನಿಯಮವೇನೋ ಅನ್ನುವಷ್ಟರ ಮಟ್ಟಿಗೆ ವಂಶಾಭಿವೃದ್ಧಿಯ ವೇಳೆ ಅವು ನಿರಾಳ. ಅದನ್ನ ಒಪ್ಪಿಕೊಳ್ಳುವುದು ನಮಗೆ ಅತ್ಯಂತ ಕಷ್ಟದ ವಿಷಯವೆನಿಸುವುದು ಮತ್ತು ಆ ಬಗ್ಗೆ ಯೋಚಿಸುವುದೂ ಅಸಹ್ಯವೆನಿಸುವುದು- ಇದಕ್ಕೆ ಕಾರಣ, ನಮ್ಮಲ್ಲಿರುವ ಮನಸು ಅಂತೀಯಾ? ಮನಸು ಬೆಕ್ಕಿಗಿರುವುದಿಲ್ಲವಾ? ನಾನು ನಗುಮುಖದಿಂದಿಕ್ಕಿದರೆ ಮಾತ್ರ ಧೈರ್ಯವಾಗಿ ಓಡಿಬಂದು ಕಾಲುನೆಕ್ಕಿ,ಮೈಯೆಲ್ಲ ನನ್ನ ಕಾಲಿಗುಜ್ಜಿ ಮುದ್ದಿಸಿ ಹಾಲು ಕುಡಿದೋಡುವ ಇದೇ ಬೆಕ್ಕು, ಅದರ ಕೂಗಿಗೆ ಸಿಟ್ಟಿಗೆದ್ದು ಹಾಳಾಗಿ ಹೋಗು ಎನ್ನುವ ಭಾವದಲ್ಲಿಕ್ಕಿದ ಹಾಲು ಕುಡಿಯಲು ಬರುವ ಮಂದಗತಿಯ ನಡೆಯೇ ಬೇರೆ ಗೊತ್ತಾ? ಮನಸೆಂಬುದಿಲ್ಲದಿದ್ದರೆ ಇದು ಸಾಧ್ಯವೇನೇ ಸಖೀ? ಇರಲಿ ಬಿಡು ಅದರದ್ದು ನಮಗರ್ಥವಾಗದ ಜೀವನ ಶೈಲಿ ಅಂದುಕೊಂಡು ಬಿಡಬಹುದೇನೋ....ಆದರೆ ನಿನ್ನೆ ಪೇಪರ್ ನಲ್ಲಿ ಓದಿದ ಒಂದು ಸುದ್ಧಿ ಸಾಮಾನ್ಯವಾಗಿ ಒಂದು ಓದಿಗೆ ಅಥವಾ ಒಂದು ದೃಶ್ಯ ವೀಕ್ಷಣೆಗೆ ಕಣ್ಣೀರಾಗದ ನನ್ನನ್ನೂ ಅಳಿಸಿತ್ತು ಕಣೇ.. ಬಿಕ್ಕಿಬಿಕ್ಕಿ ಅತ್ತು ಬಿಟ್ಟೆ.. ನನಗೇ ಗಾಭರಿಯಾಗುವಷ್ಟು..ಯಾಕೆಂದರೆ ಆ ಪಾಟಿ ಅಳುತ್ತಿರುವುದು ಯಾಕೆ ಅಂತನೇ ಗೊತ್ತಿರದ ಅಳು ಅದು. ಸಣ್ಣ ಮಕ್ಕಳು ಒಪ್ಪಿಕೊಳ್ಳಲಾರದ್ದೇನಾದರೂ ನಡೆಯುತ್ತಿದ್ದಾಗ ಪ್ರತಿಕ್ರಿಯಿಸುವಂತಿತ್ತು ನನ್ನ ಮನಸಿನ ಅಸಹಾಯಕತೆಯ ಅಭಿವ್ಯಕ್ತಿ...

ಒಂದು ಹನ್ನೆರಡು ವರ್ಷದ ಹೆಣ್ಣುಮಗುವನ್ನ ಅದರ ಅಪ್ಪ, ಅಣ್ಣ ಮತ್ತು ಚಿಕ್ಕಪ್ಪ ಸೇರಿ ಎರಡು ವರ್ಷಗಳಿಂದ ನಿರಂತರ ಅತ್ಯಾಚಾರಕ್ಕೊಡ್ಡುತ್ತಿದ್ದರಂತೆ. ಶಾಲೆಯಿಂದೊಂದು ದಿನ ಮನೆಗೆ ಹೋಗಲಾರೆ ಎಂದಳುತ್ತಿದ್ದ ಮಗುವನ್ನು ಪುಸಲಾಯಿಸಿ ಜಾಣತನದಿಂದ ಕೇಳಿ ತಿಳಿದ ಉಪಾಧ್ಯಾಯಿನಿಯೊಬ್ಬರು ಈ ವಿಷಯ ಬಯಲು ಮಾಡಿದ್ದರು..ಇಷ್ಟೇ ಕಣೆ ನನ್ನಿಂದ ಓದಲಾದದ್ದು. ಮುಂದೆ ಕೈಕಾಲೆಲ್ಲ ಕಸುವಳಿದಂತಾಗಿ ಕಣ್ಣುಕತ್ತಲಿಟ್ಟುಬಿಟ್ಟಿತ್ತು. ಅವಳಮ್ಮ ಇದ್ದಳೇ ಇಲ್ಲವೇ... ಈ ಮುಂತಾದ ಈಗ ಏಳುತ್ತಿರುವ ಪ್ರಶ್ನೆಗಳು ಆಗ ಏಳಲೇ ಇಲ್ಲ ನೋಡು. ಹೌದು ನಿಜವೇ, ಇದೇನೂ ಹೊಸದಲ್ಲ, ಎರಡು ವರ್ಷದ ಮಗುವನ್ನೂ ಲೈಂಗಿಕಶೋಷಣೆಗೊಳಪಡಿಸಿದ್ದನ್ನು ಓದಿದ್ದೇನೆ, ಸಂಕಟಪಟ್ಟಿದ್ದೇನೆ. ಆದರೆ, ಈ ಸಾಲುಗಳು ಒಂದು ಕ್ಷಣ ಕಾಲಕೆಳಗಿನ ನೆಲ ಕುಸಿಯುವಂತಾಗಿಸಿದವು...ಬಹುಶಃ ಆ ಮಗುವಿನದು ಹೆಚ್ಚುಕಮ್ಮಿ ನನ್ನ ಪುಟಾಣಿಯ ವಯಸ್ಸಾಗಿರುವುದರಿಂದ ಆ ಮಟ್ಟಿಗಿನ ಸಂಕಟವಾಯಿತೋ ಏನೋ.. ಇದೆಂಥ ಅಭದ್ರತೆಯಲ್ಲಿ ಇದೆ ಕಣೇ ನಮ್ಮ ಹೆಣ್ಣುಕಂದಮ್ಮಗಳ ಜೀವನ..?! ಕಿರುಚಿ ಅಳಬೇಕೆನಿಸುತ್ತಿದೆ.

ಅತ್ಯಾಚಾರವೆಂಬುವುದೇ ತೀರಾ ಮನಸ್ಸನ್ನು ಘಾಸಿಗೊಳಿಸಿ, ಮನೋಸ್ಥೈರ್ಯವನ್ನ ಚೂರುಚೂರಾಗಿಸುವ ಅನುಭವ. ಅದರಲ್ಲೂ ಭದ್ರತೆಗೆ ಪೂರಕವಾಗಬೇಕಾದ ಅನುಬಂಧಗಳೇ ಆ ಜೀವಂತ ಸಾವಿನ ನೋವನ್ನಿತ್ತಾಗ... ಆ ಮಗುವಿಗೆ ಸತ್ತುಬಿಡುವಾ ಅನ್ನಿಸುವಷ್ಟೂ ವಯಸ್ಸಾಗಿಲ್ಲ ಕಣೇ... ಅದರ ಮನಸಿನ ನೋವು ಯಾವ ಪರಿಯದ್ದಿದ್ದೀತು..ಆಗತಾನೇ ಅರಳಿದ ಹೂವಿನಂಥ ಅದರ ಆ ಮೃದು ಮಧುರ ಮೈಮನಸು ಹೊಸಕಿಹಾಕಲ್ಪಟ್ಟಿತ್ತು ಅದೂ ಒಮ್ಮೆ ಅಲ್ಲ, ನೂರಾರು ಬಾರಿ.

ಇಲ್ಲ ಕಣೆ, ಪದೇ ಪದೇ ಅತ್ಯಾಚಾರವೆಸಗಿದ ಅವರಿಗೊಮ್ಮೆಯೂ ಹಿಂಜರಿಕೆಯಾಗಲಿಲ್ಲವೇ ಎಂಬ ಪ್ರಶ್ನೆ ಹುಟ್ಟಿದರೂ ಅಲ್ಲೇ ಮರೆಯೂ ಆಯಿತು. ಮೊದಲಬಾರಿ ಆ ಕಂದಮ್ಮನನ್ನು ಉಪಯೋಗಿಸಿಕೊಂಡಾಗ ಅಳುಕದ, ಹಿಂಜರಿಯದ ಮನಸು, ಅದು ಮನುಷ್ಯರ ಮನಸೇ ಅಲ್ಲ, ಮೃಗಗಳದು. ಅವರ ಬಗ್ಗೆ ಯಾವ ಯೋಚನೆಯೂ ಬರುತ್ತಿಲ್ಲ ನನಗೆ, ನನ್ನ ಕಾಡುತ್ತಿರುವುದು- ಆ ಮುಗ್ಧ ಜೀವದ ಅಸಹಾಯಕ ನೋವು.. ಮುಂದಿನ ಆ ಜೀವನದಲ್ಲಿ ಮತ್ತದರ ಪರಿಣಾಮ.

ಎಲ್ಲ ಬಿಡು.. ಯಾವುದೋ ವಿಷಯಕ್ಕೆ ಹತ್ತಾರು ವರ್ಷಗಳಿಂದ ನಮ್ಮೊಡನಿದ್ದು ಬಾಳು ಹಂಚಿಕೊಂಡ ಗಂಡಂದಿರೇ ಒಮ್ಮೊಮ್ಮೆ ಮನಸಿನ "ಒಲ್ಲೆ" ಎನ್ನುವ ಮಾತನ್ನು ತಿಳಿದೋ ತಿಳಿಯದೆಯೋ ದೇಹವನ್ನು ಬಳಸಿಕೊಂಡರೆ ನಾವದೆಷ್ಟು ಅಸಹಾಯಕತೆ ಅನುಭವಿಸುವುದಿಲ್ಲಾ... ಹೇಳು.. ಅದೆಷ್ಟು ರೋಷ ಉಕ್ಕಿ ಬರುವುದಿಲ್ಲ, ಅದೆಷ್ಟು ಕಣ್ಣೀರಿಳಿಯುವುದಿಲ್ಲ..! ಅದೂ ನಾವವರ ಜೊತೆ ಬಾಳಿನ ಅತ್ಯಂತ ರಮಣೀಯ ಕ್ಷಣಗಳನ್ನೂ ಹಂಚಿಕೊಂಡಿರುತ್ತೇವೆ, ನಮ್ಮ ಎಷ್ಟೋ ಸಂತಸಗಳಿಗೆ, ರೋಮಾಂಚನಗಳಿಗವರೇ ಕಾರಣರಾಗಿರುತ್ತಾರೆ, ಅಲ್ಲದೆ ಆ ಸಂಬಂಧ ಆ ಕ್ರಿಯೆಯನ್ನು ತನ್ನೊಳಗಿನ ಅವಿಭಾಜ್ಯ ಅಂಗವಾಗಿ ಹೊಂದಿರುವಂಥದ್ದು .ಆದರಿಲ್ಲಿ ಈ ಮಗು ಇನೂ ಒಬ್ಬರೊಡನೆ ದೇಹ ಹಂಚಿಕೊಳ್ಳುವ ವಿಷಯವನ್ನೇ ತಿಳಿದಿರಲಾರದ ವಯಸಿನಲ್ಲಿ ಅವರ ಇಚ್ಚೆಗನುಗುಣವಾಗಿ ಅದನ್ನವರಿಗೊಪ್ಪಿಸಬೇಕು ಅಂದರೆ, ಅದೆಂಥ ಅಸಹಾಯಕತೆಯಿದ್ದೀತು ಅದರ ಮುಂದೆ, ವಿರೋಧಿಸಿದಾಗ ಎಂಥೆಂಥ ಶಿಕ್ಷೆಗಳಿಗೊಡ್ಡಿಕೊಂಡಿರಬಹುದು, ಎರಡು ವರ್ಷಗಳ ಕಾಲ ಮುಚ್ಚಿಟ್ಟುಕೊಂಡ ಆ ಮಗುವನ್ನು ಇನ್ಯಾವ್ಯಾವ ತರಹದ ನಿಯಂತ್ರಣಗಳಲ್ಲಿಟ್ಟಿರಬಹುದು, ಅಲ್ಲದೇ ಮುಂದಿನ ಜೀವಿತಕಾಲದಲ್ಲಿ ಅದರ ಮನಸು ಲೈಂಗಿಕ ಜೀವನದ ಬಗ್ಗೆ ಅಸಹ್ಯವೆಂದಲ್ಲದೆ ಇನ್ನೆಂಥ ಭಾವನೆಯುಳಿಸಿಕೊಂಡೀತು ಹೇಳು... ಮತ್ತಳುತ್ತಿದ್ದೇನೆ ಕಣೆ...

ನಾವು ಚಿಕ್ಕವರಿದ್ದಾಗ ಅಣ್ಣ ನಾನು ಸುಮಾರು ಹದಿಮೂರು ಹದಿನಾಲ್ಕರ ವಯಸಿನ ನಂತರ ಒಂದೇ ಕುರ್ಚಿಯಲ್ಲಿ ಕೂತು, ಮೈಕೈ ಮುಟ್ಟಿ ತಮಾಷೆಯಾಡುವುದಾಗಲಿ, ಒಂದೇ ಕೋಣೆಯಲ್ಲಿ ಮಲಗುವುದಾಗಲಿ ನಿಷಿದ್ಧವಿತ್ತು. ಎಷ್ಟೊ ಬಾರಿ ಇದನ್ನು ನೆನೆಸಿಕೊಂಡಾಗ ಮುಂದಿನ ದಿನಗಳಲ್ಲಿ ಅಪ್ಪ-ಅಮ್ಮ, ಅಜ್ಜ-ಅಜ್ಜಿಯರ ಈ ನಿರ್ಬಂಧದ ಬಗ್ಗೆ ಇರಿಸುಮುರುಸಿನ ಭಾವನೆ ಬರುತ್ತಿತ್ತು, ಅರ್ಥವಾಗುತ್ತಿರಲಿಲ್ಲ, ತುಂಬಾ ಸಂಕುಚಿತ ಮನೋಭಾವನೆಯೆನಿಸಿದ್ದೂ ಇತ್ತು. ಬಹುಶಃ ಇಂಥ ಒಂದು ಪ್ರವೃತ್ತಿ ಮಾನವನ ಮನಸಿನಲ್ಲಿ ಸಂಬಂಧಗಳ ಯಾವ ಪರಿವೆಯೂ ಇಲ್ಲದ ಒಂದು ರೀತಿಯಲ್ಲಿ ಎದ್ದೇಳುವ ಸಾಧ್ಯತೆಗಳ ಬಗ್ಗೆ ಮುಂಚಿನಿಂದಲೂ ಸುಳಿವಿತ್ತು, ಹಾಗಾಗಿ ಅವರು ಅದಕ್ಕೆಡೆ ಮಾಡಿಕೊಡದಂತೆ ಈ ನಿಯಮಗಳನ್ನು ರೂಪಿಸಿದ್ದರು. ಹಾಗಾದರೆ ಮೂಲತಃ ಮಾನವನಿಗೂ, ಮೃಗಗಳಿಗೂ ದೈಹಿಕ ತೃಷೆಯ ವಿಷಯದಲ್ಲಿ ಎಳ್ಳಷ್ಟೂ ವ್ಯತ್ಯಾಸವಿಲ್ಲ ಅಂತೀಯಾ?

ಪ್ರಾಣಿಗಳಿಗಿಂತ ಮುಂದುವರಿದ, ಮೇಲ್ಮಟ್ಟದ ಮನೋಸ್ಥಿತಿ ನಮ್ಮದು ಎಂಬ ಪೊಳ್ಳು ಹೆಮ್ಮೆ ಈ ಸಂದರ್ಭದಲ್ಲಿ ತಲೆಕೆಳಗಾಗುವುದನ್ನು ನಾವೊಪ್ಪಿಕೊಳ್ಳಲೇಬೇಕು. ಅದೂ ಅವುಗಳಲ್ಲಿ ಹೀಗೆ ತಮ್ಮ ತೀಟೆ ತೀರಿಸಿಕೊಳ್ಳಲು ಬಹುಶಃ ಅಪ್ರಾಪ್ತ ವಯಸ್ಕ ಪ್ರಾಣಿಗಳನ್ನ್ಯಾವತ್ತೂ ಬಳಸಿಕೊಳ್ಳವು ಅನಿಸುತ್ತದೆ. ಅಷ್ಟರಮಟ್ಟಿಗಾದರೂ ನಿಯಮಗಳನ್ನು ಬಾಳಿನಲ್ಲಿ ಪರಿಪಾಲಿಸಿಕೊಂಡು ಬಾಳುವ ಅವುಗಳಿಗಿಂತ ನಾವು ಯಾವ ಅರ್ಥದಲ್ಲಿ ಮುಂದುವರಿದ ಜನಾಂಗದವರು ಕಣೇ..? ಅತೃಪ್ತಿಯ ಕೈಯ್ಯಲ್ಲಿ ಬುದ್ಧಿ, ದೇಹಗಳೆರಡನ್ನೂ ಕೊಟ್ಟು ನಾವು ಮನುಜರು, ಮಾನವ ಜನ್ಮ ದೊಡ್ಡದು ಅಂದುಕೊಳ್ಳುವುದರಲ್ಲಿ ಯಾವ ಪುರುಷಾರ್ಥವಿದೆ ಹೇಳು...

ಇಷ್ಟಕ್ಕೂ ಬರೀ ಮಾತುಗಳಲ್ಲಿ ರೋಷ ವ್ಯಕ್ತ ಪಡಿಸುವ ನಾವೂ ಒಂದು ರೀತಿಯಲ್ಲಿ ಮನುಷ್ಯತ್ವವಿಲ್ಲದವರೇ ಹೌದು. ಆ ಪಾಪಿಗಳಿಗೆ ಶಿಕ್ಷೆಯೇ ಆಗದೆ ಹೊರಬಂದು ರಾಜಾರೋಷವಾಗಿ ಬಾಳುವ ಸಂದರ್ಭಗಳೇ ಹೆಚ್ಚು. ಆದರೂ ಒಂದಷ್ಟು ವರ್ಷ ಕಾರಾಗೃಹವಾಸದ ಶಿಕ್ಷೆಯಾದೀತೇ ಹೊರತು ಇನ್ನದಕ್ಕಿಂತ ಹೆಚ್ಚಿನದೇನೂ ಅಲ್ಲ. ಮಾತಾಡುತ್ತಾ ಕೈಚೆಲ್ಲಿ ಕೂತುಬಿಡುವ ನಾವು ಪರೋಕ್ಷವಾಗಿ ಆ ಅಮಾನುಷತ್ವದ ಮುಂದೆ ಸೋಲೊಪ್ಪಿಕೊಂಡಂತೆಯೇ ಅಲ್ಲವೇನೇ? ನಮ್ಮ ನಮ್ಮ ಸ್ವಾರ್ಥದ ಕೋಟೆಯೊಳಗಡೆ ನಮ್ಮ ಸಮಯವನ್ನೂ, ಸತ್ವವನ್ನೂ ಬರೀ ನಮ್ಮೊಳಿತಿಗಾಗಿ ರಕ್ಷಿಸಿಕೊಳ್ಳುವುದನ್ನು, ಉಳಿಸಿ ಬಳಸಿಕೊಳ್ಳುವುದನ್ನು ಜೀವನದ ಪರಮಗುರಿಯಾಗಿಸಿಕೊಂಡ ಇಂದಿನ ಜೀವನಶೈಲಿಯಲ್ಲಿ ನಾನಾದರೂ ಏನು ಮಾಡಿಯೇನು, ನಾಲ್ಕಾರು ಗೆರೆ ಬರೆದು ಹಗುರಾದೇನು, ಮಗಳಿಗಿನ್ನೊಂದಷ್ಟು ಜಾಗ್ರತೆಯಾಗಿರು ಎಂದೆಚ್ಚರಿಸಿಯೇನು, ನಿನ್ನ ಜೊತೆ ಹಂಚಿಕೊಂಡೇನು ಅಷ್ಟೆ. ಮುಂದೆ ಮತ್ತದೇ ದಿನಚರಿಗಳಲ್ಲಿ ಮುಳುಗಿ ಹೋಗುವುದು .... ಇರಲಿಬಿಡು.. ಅಸಹಾಯಕತೆಯ ಕಾರಣ ಮುಂದೊಡ್ಡುವುದೂ ಒಂದೊಳ್ಳೆಯ ಕಳ್ಳನೆಪವಾಗಿಬಿಟ್ಟಿದೆ ಈಗೀಗ. ನೀರು ತುಂಬಿದ ಗುಳಿಯೆಡೆಗೇ ಹರಿದು ಬರುವ ನೀರು ಕೂಡಾ ದಾರಿ ಮಾಡಿಕೊಳ್ಳುವುದು ಎನ್ನುವ ನಿಜದಂತೆ ಅಸಹಾಯಕತೆಯೊಳಗಿದ್ದಷ್ಟೂ ಅದು ನಮ್ಮನ್ನು ಇನ್ನೂ ಇನ್ನೂ ಹುಡುಕಿಕೊಂಡು ಬರುವುದು ಎನ್ನುವ ಮಾತನ್ನರಿತುಕೊಳ್ಳಬೇಕಾಗಿರುವ ತುರ್ತು ಈಗ ಹೆಣ್ಣುಜನಾಂಗದ ಮುಂದೆ ಬೃಹದಾಕಾರವಾಗಿರುವುದಂತೂ ಸುಳ್ಳಲ್ಲ ಏನಂತೀಯಾ...

ಅವಳ ನೋವೊಳಗೆ ಕಳೆದುಹೋಗಿದ್ದೆ, ಬಾಕಿಯಿರುವ ನನ್ನ ಕೆಲಸಗಳು ಕಾಯುತ್ತಿವೆ, ಮತ್ತೊಮ್ಮೆ ಮಾತಾಡುವಾ, ಬರಲಾ...























Thursday, November 29, 2012

೨೨)


೧) ಹರಡಿಬಿಡೆ



ಹಸಿರನುಟ್ಟು, ಹಸಿರ ಹಾಸಿ, ಹಸಿರ ಹೊದೆದ ಸುಂದರಿ,

ಒಪ್ಪಿದೆ ಕಣೆ, ನೀನು ವಿಧಿ ಮೆಚ್ಚಿ ಹರಸಿದ ಕಿನ್ನರಿ

ತೃಪ್ತಿಯಿಂದ ನೀ ಮುಚ್ಚಿದ ಕಂಗಳೆರಡ ತೆರೆದು ಬಿಡೆ,

ಹೆಚ್ಚಿದ್ದರೆ, ಹಸಿರ ಸ್ವಲ್ಪ ಅತ್ತ ಇತ್ತ ಹರಡಿಬಿಡೆ

ಒಣಗಿ ಕರಕಲಾದವರು ನಿನ್ನ ಸುತ್ತ ತುಂಬಿಹರು

ಹಸಿರ ಉಸಿರಿಗಾಗಿ ಬಹಳ ಆಸೆಯಿಂದ ಕಾದಿಹರು



೨) ಬೆಳಗು ಸುಂದರವೇ



ಕೋಳಿ ಕೂಗದಿದ್ದರೂ ಬೆಳಗಾಗುವುದು ಗೊತ್ತಿತ್ತು

ಆದರೆ ನಿನ್ನೆಯವರೆಗೆ ಕೋಳಿಕೂಗಿನಿಂದ

ಬೆಳಗು ಇನ್ನೂ ಸುಂದರವೆನಿಸುತಿತ್ತು

ನಿನ್ನೆ ಕೋಳಿ ಮಂಕಾಗಿಬಿಟ್ಟಿತ್ತು, ಕೂಗಲಿಲ್ಲ

ಬೆಳಗು ಸುಂದರವಲ್ಲವೆಂದೇನೂ ಅನಿಸಲಿಲ್ಲ



೨೩) ಕಳಕೊಳ್ಳುವ ಕಳವಳ



ಒಮ್ಮೊಮ್ಮೆ ಅನಿಸುವುದು

ಕಳೆದುಕೊಳ್ಳುವುದೇ ಜೀವನವೇ?

ಹುಟ್ಟಿದೆ, ಸ್ವಾತಂತ್ರ್ಯ ಕಳೆದುಕೊಂಡೆ,

ಬೆಳೆಯುತ್ತಾ ಬಾಲ್ಯ, ಕಲಿಯುತ್ತಾ ಮುಗ್ಧತೆ

ಬೆರೆಯುತ್ತಾ ನಂಬಿಕೆ, ತೆರೆದುಕೊಳ್ಳುತ್ತಾ ಸ್ವಂತಿಕೆ

ಹೀಗೆ..............

ಎಲ್ಲೆಲ್ಲೊ ಕೂಡುವುದಿಲ್ಲದೇ,ಕಳೆಯುವುದನ್ನೇ ಕಂಡೆ.

ವಿಧಿಯಾಟಗಳಾಡುತ್ತಾ, ಆಟದೊಲವ ಕಳೆದುಕೊಂಡೆ

ಬಂಧಗಳಲಿ ಮುಳುಗುತ್ತಾ ಈಜುವಾಸೆ ಕಳೆದುಕೊಂಡೆ

ಕಳೆದುಕೊಳ್ಳುತ್ತಾ ಸಾಗುತ್ತಿದ್ದಾಗಲೊಮ್ಮೆನೀನು ಸಿಕ್ಕಿದೆ.

ಕೊನೆಗೂ ಪಡೆದುಕೊಂಡೆ ಅನ್ನಿಸಿತು, ಆದರೆ

ನಿನ್ನ ಬಗೆಯ ಯೋಚಿಸುತ್ತಾ ನನ್ನ ಚಿಂತನೆಗಳನ್ನು

ನಿನ್ನ ಅರ್ಥೈಸುವ ಯತ್ನಗಳಲಿ ನನ್ನ ಕನಸುಗಳನ್ನು

ನಿನ್ನೊಲವ ಗಳಿಸುವ ದಾರಿಯಲಿ ನನ್ನ ಬಾಳ ಗುರಿಯನ್ನು

ಕೊನೆಗೆ ನಿನ್ನ ಹೊಂದುವ ಹವಣಿಕೆಯಲಿ ನಿನ್ನನೇ

ಹೀಗೆ......ಕಳೆದುಕೊಳ್ಳುತ್ತಲೇ ಸಾಗಿದ್ದೆ.

ನೀನಿಲ್ಲದೇ ನಾನಿಲ್ಲವೆಂದರಿವಾಗಿ

ಈಗ ನನ್ನನೂ ಕಳಕೊಂಡಿರುವೆ.

ಇಂದು ಕಳೆದುಕೊಳ್ಳಲೇನೂ ಉಳಿದಿಲ್ಲ

ನಾನೂ ಸಹ.



೨೩) ಶ್ರೀ ರಕ್ಷೆ



ನಾ ನೋಯಬಾರದೆಂಬ ನಿನ್ನ ಹಾರೈಕೆಯೇ

ಶ್ರೀರಕ್ಷೆಯಲ್ಲವೇನೇ?

ನನಗೆಸೆದ ಬಾಣಗಳು ನಿನಗೆದುರಾಗುವುದು

ನನ್ನನಳಿಸ ಹೊರಟವರ ನೀ ಶಪಿಸುವುದು

"ಹೆಚ್ಚು ತೆರೆದುಕೊಳ್ಳದಿರು ಮಂದಾನಿಲಮಾತ್ರವಲ್ಲ

ಬಿರುಗಾಳಿಯೂ ಇಲ್ಲಿದೆ" ಎಂದೆಚ್ಚರಿಸುವುದು

ಮೊಳೆಯದ ನನ್ನೇಳಿಗೆಗಾಗಿ ತಳಮಳಿಸುವುದು

ನಾ ಜಾರುವಾಗ ಅಲ್ಲಿಂದಲೇ ಹಿಡಿದೆತ್ತುವುದು

ಹೀಗೇ..

ನಾನು ನೀನೇ ಎಂಬಂತೆ ನನ್ನ ಒಳಗೊಳ್ಳುವುದು

ಇವೆಲ್ಲಕ್ಕಿಂತ ಬೇರೆ ಆಸ್ತಿ ಬೇಕೇನೇ?

ನಿನ್ನನ್ನ ಸಖಿ ಎಂದು ಸೀಮಿತಗೊಳಿಸಲಾರೆ

ಬಹುಶಃ ನಾನಿದುವರೆಗೆ

ಕೆಟ್ಟವಳಾಗದಿದ್ದುದ್ದಕ್ಕೆ ಬಹುಮಾನ ನೀನು.

ನೀನೆಂದಿದ್ದರೂ ನನ್ನ ಒಲವು,

ನಾ ಗೆದ್ದಾಗ ನನ್ನ ಗೆಲುವು,

ನಾ ಬಿದ್ದಾಗ ಎದ್ದೇಳಿಸುವ ಬಲವು

ಹಿನ್ನಡೆ ಕಾಡಲು ಮುನ್ನುಗ್ಗಿಸುವ ಛಲವು

ಸದಾ ಅಲ್ಲೇ ಇದ್ದು ಆಧರಿಸುವ ನೆಲವು

ಇಷ್ಟೆಲ್ಲಾ ಪಡೆದು ನಾ ಏನು ನೀಡಲಿ?

ನಾನು ಸುಧಾಮ, ಒಳಗಿರುವುದು

ಒಂದು ಹಿಡಿ ಪ್ರೀತಿಯಷ್ಟೇ.

ಬೇಕಾದಷ್ಟು ಮೊಗೆದುಕೋ.

ಖಾಲಿಯಾದೀತೆಂದು ಹೆದರಬೇಡ,

ಅದಕಿದೆ ಅಕ್ಷಯದಗುಣ, ಅಮರತ್ವ,

ತೆಗೆದಷ್ಟೂ ಹಾಗೇ ಉಳಿಯುವ ಜೀವಸತ್ವ.



೨೪) ಮನದ್ದು ಪುಲ್ಲಿಂಗವೆ, ಸ್ತ್ರೀಲಿಂಗವೆ?

"ನನ್ನ ರಾತ್ರಿಗಳು ಕರಾಳ" ನೊಂದು ನುಡಿದರೊಬ್ಬಾತ.

ಅದಕೆ ನಿತ್ಯ ಶುಭರಾತ್ರಿ ಎಂದು ಹಾರೈಸಿದಳೊಬ್ಬಾಕೆ

ಅಲ್ಲಿದ್ದದು ಕರಾಳತೆಯ ನಿರಾಳವಾಗಿಸುವ ಆಶಯವಷ್ಟೆ.

ಹಚ್ಚಿದ್ದು ನಡುವಿನ ಸಮಾಜ ಅದಕೆ ಸುಳ್ಳುರೆಕ್ಕೆ.

ಸಮಾಜಕಿದು ಅರ್ಥವಾಗದ ಮಾತು

ರಾತ್ರಿ ಹತ್ತಕ್ಕೆ ಆಕೆಗೇಕೆ ಆತನ ಯೋಚನೆ ಬಂತು?!

ಗಂಡು ಗಂಡಿಗಾಗಿ ಹೆಣ್ಣು ಹೆಣ್ಣಿಗಾಗಿ ಮಿಡಿದರೆ,

ಅದು ಹೃದಯವಂತಿಕೆ.

ಗಂಡು ಹೆಣ್ಣಿಗಾಗಿ, ಹೆಣ್ಣು ಗಂಡಿಗಾಗಿ ತುಡಿದರೆ

ಅದು ಚರಿತ್ರಹೀನತೆಯೇ?

ಮನದ್ದು ಪುಲ್ಲಿಂಗವೇ, ಸ್ತ್ರೀಲಿಂಗವೇ?

ಸಮಾಜಕ್ಕಿದು ಗೊತ್ತಿದೆಯೇ?

ಈ ಸಲ್ಲದುಗಳ ಒತ್ತಡಕೆ

ಮಿದುಹೃದಯ ಕಳೆದುಕೊಂಡಿದೆ ಆಕಾ ರ

ಅಸ್ತವ್ಯಸ್ತ ನೆಲೆಯಿಂದ ಹುಟ್ಟಿದರೆ

ನಡೆನುಡಿನಗುಗಳು ಹೇಗಾದಾವು ನೇರ?

"ಹಾರೈಕೆ ಇದ್ದರೆ ಮನದಲ್ಲಿರಲಿ"

ಎಂದವರೇ, ನಿಮಗಿದು ಗೊತ್ತಿರಲಿ-

ಸುಪ್ತವಾಗಿದ್ದರೆ ಅದು ಭಾವನೆ, ಮಿಂಚುಹುಳದಂತೆ.

ಬೆಳಕಿದ್ದರೂ, ಕ್ಷಣಿಕ ಹೊಳಪು

ಅದೇ ವ್ಯಕ್ತವಾದಾಗ ಸ್ಪಂದನೆ, ಹುಣ್ಣಿಮೆ ಬೆಳ್ದಿಂಗಳಂತೆ.

ಕತ್ತಲನೂ ಬಿಳಿಯಾಗಿಸಬಲ್ಲುದು.

ಕಣ್ಮನಗಳ ನಡುವೆ ಪಾರದರ್ಶಕತೆಯಿರಲಿ

ಪ್ರಾಮಾಣಿಕತೆಯನೂ ಗುರ್ತಿಸುವ ದೃಷ್ಟಿ ಇರಲಿ

ಇದ್ದುದ ಇಲ್ಲವಾಗಿಸಿ, ಇಲ್ಲದ್ದ ಹುಟ್ಟಿಸಿ ನೋಡುವ

ಅತಿ ಮಡಿವಂತಿಕೆ ಇಂದೇ ಸಾಯಲಿ.



೨೫) ಮನಸ ನಡೆ



ಮನಸು ಅರ್ಥಮಾಡಿಕೊಳ್ಳಬೇಕಂತೆ

ಮಂಗನ ನಡೆ ಅಂದಾಜು ಮಾಡಿದವರುಂಟೇ?

ಈಗ ಬೋಳು ಬಯಲಂತಿತ್ತು,

ಬಿತ್ತಲು ಹಸಿರಬೀಜ ಹುಡುಕುತ್ತಿದ್ದೆ.

ಅಷ್ಟರಲ್ಲೇ ಕಡುಹಸುರುಟ್ಟು ಶೋಭಿಸತೊಡಗಿತು

ಮುಡಿಗೇರಿಸಲು ಕೆಂಗುಲಾಬಿಗಾಗಿ ಹುಡುಕುತ್ತಿದ್ದೆ,

ತಟ್ಟನೇ ಕೆಂಗುಲಾಬಿಯಾಗಿ ಅರಳಿಬಿಟ್ಟಿತ್ತು

ಕೆಂಬಣ್ಣ ಮನಮೋಹಿಸುತ್ತಿತ್ತು,

ಅಷ್ಟರಲ್ಲೇ ಬೆಂಕಿಯಾಗಿ ಉರಿಯತೊಡಗಿತು

ಆರಿಸಲು ನೀರಿಗಾಗಿ ಹುಡುಕುತ್ತಿದ್ದೆ,

ತಾನೇ ನೀರಾಗಿ ಕರಗತೊಡಗಿತ್ತು.

ನೀರತುಂಬಲೊಂದು ಪಾತ್ರೆ ಹುಡುಕುತ್ತಿದ್ದೆ,

ನನ್ನ ಕಣ್ಣೊಳಗೇ ಹರಿದು ಬಂದಿತ್ತು.

ಮಂಜಾದ ಕಂಗಳಿಗೆ ಎಲ್ಲವೂ ಅಸ್ಪಷ್ಟ

ಮನವನರಿಯುವುದು ಬಲು ಕಷ್ಟ

ಅದು ನನ್ನದಾದರೂ ಅಷ್ಟೆ,

ನಿಮ್ಮದಾದರೂ ಅಷ್ಟೆ.



೨೬) ಆಲಯವಾಗಲಾರೆ



ನೀನಂದೆ, "ಆಲಯವಾಗು ,

ಚೌಕಟ್ಟುಗಳ ಗೋಡೆಗಳುಳ್ಳದ್ದು,

ಸೂರು ಆಧರಿಸುವ ಕಂಬಗಳು,

ಆ ಕಂಬಗಳ ನದುವೆ ಅಂತರವುಳ್ಳದ್ದು,

ಪ್ರವೇಶವಿಲ್ಲದ ಗರ್ಭಗುಡಿಯುಳ್ಳದ್ದು,

ಒಳಗೆ ಮುಟ್ಟಲಾಗದ ದೇವನಿರುವದ್ದು,

ಆಗ ನಿನ್ನೊಳಗೆ ಪೂಜೆ ನಡೆಯುವುದು."

ನಿನ್ನ ಸಲಹೆಗೊಂದು ನಮನವಿದೆ

ಆದರೆ,

ಹುಟ್ಟಿನಿಂದಲೇ ನಾನೊಂದು ಬಯಲು ಕಣೇ.

ಸೀಮೆಗಳು ಬೇಕಿಲ್ಲ, ಗೋಡೆಗಳಿಲ್ಲ,

ಸೂರೇ ಇಲ್ಲ, ಕಂಬಗಳೂ ಬೇಕಿಲ್ಲ

ಇಲ್ಲಿ ಪ್ರವೇಶವಿಲ್ಲದ ತಾಣವಿಲ್ಲ

ಮುಟ್ಟಬಾರದ ದೈವತ್ವವೂ ಇಲ್ಲ.

ಯಾರಾದರೂ ಬರಲಿ,

ಹೂ ಬೆಳೆಯಲಿ, ಫಲ ಪಡೆಯಲಿ,

ಬಾವಿ ತೋಡಲಿ, ದಾರಿ ಹೂಡಲಿ,

ಯೋಗ್ಯವೆನಿಸಿದರೆ ಮನೆ ಕಟ್ಟಲಿ

ಊರು ಮಾಡಲಿ, ನೆಲೆ ನಿಲ್ಲಲಿ.

ಬೇಡವೆನಿಸಿದರೆ ದಾಟಿಹೋಗಲಿ

ದಾಟಿಹೋದವರು ಎದೆಯ ಮೆಟ್ಟಿ,

ಅಳಿಯದ ಗಾಯಮಾಡುವರು ಎಂದೆಯ?

ಅದು ಇದ್ದದ್ದೇ, ಮೆಟ್ಟದೆ ಒಳಬರುವುದು ಹೇಗೆ?

ಮುಂದೆ ಬರುವರಲಿ ಒಬ್ಬರಿದ್ದಾರು

ಗಾಯವನೂ ವಾಸಿಮಾಡುವವರು.

ಕ್ಷಮಿಸು, ಆಲಯವಾಗಲಾರೆ

ಯಾಕೆಂದರೆ.............

ನನ್ನೊಳಗೆ ಪೂಜೆ ನಡೆಯಬೇಕಿಲ್ಲ

ಬದುಕು ನಡೆದರೆ ಸಾಕು,

ದೇಗುಲದ ಶಿಸ್ತಿನ ಮೌನಬೇಕಿಲ್ಲ,

ಜೀವಂತಿಕೆಯ ಸದ್ದಿರಬೇಕು.

ನಾ ಪವಾಡದ ನೆಲೆಯಾಗಬೇಕಿಲ್ಲ,

ನಿಜಪ್ರೀತಿಯ ಸೆಲೆಯಾಗಬೇಕು.



೨೭) ನಮೋನಮಃ

ಚಂದ್ರ ಕಣ್ಮರೆಯಾದ ರಾತ್ರಿ, ನಿದ್ದೆ ಮುರಿದಿತ್ತು.

ಕತ್ತಲು ಹೊರಕರೆದಿತ್ತು, ಹೊರನಡೆದೆ,

ನಿರ್ಜನಬೀದಿಗಳು, ನಿಶ್ಯಬ್ಧ ಮನೆಗಳು.

ಕತ್ತೆತ್ತಿದರೆ, ಆಹಾ!

ಕಪ್ಪು ಆಗಸದ ತುಂಬ ಚುಕ್ಕೆತಾರೆಗಳು.

ಇರುಳು ಕಾಡಲಿಲ್ಲ,

ಕಪ್ಪುಪರದೆಯಮೇಲೆ ಹೊಳಪು ಹೆಚ್ಚೆನಿಸಿತ್ತು

ನಾಯಿ ಊಳಿಡುತಿತ್ತು, ಗೂಬೆಯೂ ಕೂಗುತಿತ್ತು

ಭಯವಾಗಲೇ ಇಲ್ಲ,

ಅದರ ಹಿಂದಿನಮೌನ ಪ್ರಶಾಂತವೆನಿಸುತಿತ್ತು

ಹೊರಗಿನ ಪ್ರಕೃತಿಗೆ ನಮೋನಮಃ

ಕಪ್ಪುಹಿನ್ನೆಲೆಯಲ್ಲೂ ನಕ್ಷತ್ರವಿರಿಸಿದಕ್ಕಾಗಿ

ಬೆಚ್ಚಿಸುವ ಸದ್ದ ಜೊತೆ ಮೌನವನೂ ಇರಿಸಿದಕ್ಕಾಗಿ

ಒಳಗಿನ ಚೈತನ್ಯಕೂ ನಮೋನಮಃ

ಕತ್ತಲಲಿ ಮಿನುಗಿನ, ಶಬ್ಧದಲಿ ಶಾಂತಿಯ ಪಾತ್ರಗಳ

ನೇಪಥ್ಯದಿಂದ ಅರಿವಿನ ರಂಗಕೆ ತಂದುದಕಾಗಿ.



೨೮) ಗೋಕುಲಾಷ್ಟಮಿಯಂದು



ಕೃಷ್ಣಾ, ಆಗ ನಾನಿನ್ನೂ ಮಗು.

ಅಪ್ಪ ಹೇಳುತ್ತಿದ್ದರು,

ನೀನು ಭಕ್ತವತ್ಸಲನಂತೆ, ಅನಾಥರಕ್ಷಕನಂತೆ.

ಕತ್ತಲಿಗೆ ಹೆದರಿದಾಗ, ನೋವಿನಿಂದ ಅತ್ತಾಗ,

ಬೇಕಾದ್ದು ಸಿಕ್ಕದಾಗ, ಹೊಂದಿದ್ದು ಕಳೆದಾಗ

ಹೀಗೇ......ಕಾಡುವ ಗಳಿಗೆಗಳಲ್ಲೆಲ್ಲ

ನಿನ್ನ ಮೊರೆಹೋಗಲು ಕಲಿಸಿದ್ದರು

ಆಗೆಲ್ಲ ನಾನು ನಿನ್ನ ಕರೆದೆನೋ, ನೀನು ಒದಗಿದ್ದೆಯೋ

ನೆನಪಿಲ್ಲ.

ಈಗ ನಾನು ಮಗುವಲ್ಲ.

ನೀನೆನಗೆ ಎಂದೂ ಪವಾಡಪುರುಷನಾಗಿ,

ದೇವರಾಗಿ, ರಕ್ಷಕನಾಗಿ ದೊರೆಯಾಗಿ

ಕೊನೆಗೆ ಹಿರಿಯನಾಗಿಯೂ ಕಾಣುತ್ತಿಲ್ಲ.

ನೀನೆಂದಿದ್ದರೂ,

ನಿನ್ನರಿವಿನ ಸೀಮೆಯೊಳಗಿಹರೆಲ್ಲರ

ಮನೆಮನ ಲೂಟಿ ಮಾಡುತ್ತಾ,

ಅವರ ಬಯ್ಗುಳಕ್ಕೂ, ಪ್ರೀತಿಗೂ

ಅತ್ತಂತಾಡಿದರೂ, ಆನಂದವನೆ ಹಂಚುತ್ತಾ,

ಮಕರಂದಾದಿಗಳೊಡನೆ ಲೀಲೆಯೆಲ್ಲ ಆಡಿ,

ಕೊನೆಗೆ ಅವರನ್ನೇ ದೂರುತ್ತಾ,

ಅಮ್ಮನ ಗಮನ ಸೆಳೆಯಲು ಕಪಟವಾಡುವ

ನನ್ನ ಕಂದನ ಪ್ರತಿರೂಪವೆನಿಸುತ್ತೀಯ.

ಇದಕೆ...

ನನ್ನ ಮನೆತುಂಬ ನಾನಿಂದು ಬರೆದಿರುವ

ನಿನ್ನ ಪುಟ್ಟಹೆಜ್ಜೆಗಳೇ ಸಾಕ್ಷಿ.

ಹುಟ್ಟುಹಬ್ಬದ ಶುಭಾಶಯಗಳು ಮುದ್ದೂ......



೨೯) ಬರಡೂ ಹಸಿರಾಗುತ್ತದೆ



ಅಲ್ಲೊಂದಿತ್ತು ಬಟ್ಟಬೋಳು ಬಯಲು

ನಿರ್ಜನತೆಯ, ನಿಶ್ಯಬ್ಧದ್ದೆ ಕಾವಲು.

ಮೇಲೆ ಸುಡುವ ಬಿಸಿಲು,

ಭೂಮಿ ಒಣಗಿ ಬಿರುಕುಗಳು

ಪ್ರಕೃತಿ ಕಣ್ಣೀರು ಖಾಲಿಯಾದಂತೆ,

ಬರದಿ ಗರಬಡಿದು ಸ್ತಬ್ಧವಾದಂತಿತ್ತು.

ಒಂದುಮರವಿತ್ತು ಜೊತೆಗೆ ಒಂಟಿಯೆಂಬ ಅಳಲು

ಖಾಲಿಖಾಲಿ ಒಣಕೊಂಬೆಗಳು

ಲಟಲಟ ಮುರಿವ ರೆಂಬೆಗಳು

ಹಸಿರ ಕಳಕೊಂಡು ಬರಡಾಗಿದ್ದಕ್ಕೆ

ಅದು ಮೌನವಾಗಿ ಅಳುವಂತಿತ್ತು.

ಎಲ್ಲಿಂದಲೋ ಹಾರಿ ಬಂದವೆರಡು ಮೈನಾಗಳು

ಮೈಗೆ ಮೈತಾಗಿಸಿ, ಕೊಕ್ಕುಗಳ ಬೆಸೆದವು

ಚಿಲಿಪಿಲಿಯ ಲವಲವಿಕೆಯಿಂದ

ಪ್ರಕೃತಿಗೆ ಗೆಜ್ಜೆ ಕಟ್ಟಿದವು

ತಮ್ಮ ಪ್ರೀತಿಯಮೃತದಿಂದ

ಪಸೆಯನಿಷ್ಟು ತಂದವು

ಒಣಮರದಡಿ ಬಿದ್ದ ಅದರದೇ ಕಡ್ಡಿಗಳ

ಹೆಕ್ಕಿ ಗೂಡ ಕಟ್ಟಿದವು

ಮೊಟ್ಟೆಇಟ್ಟು, ಶಾಖ ಕೊಟ್ಟು

ಅಲ್ಲೇ ಮರಿ ಮಾಡಿದವು

ಮಳೆ ಬಂದಿಲ್ಲ, ಋತು ಬದಲಾಗಿಲ್ಲ,.

ಮರವೂ ಚಿಗುರಿಲ್ಲ, ಬಿಸಿಲೂ ಆರಿಲ್ಲ

ಆದರೆ,

ಈಗನ್ನಿಸುತ್ತಿಲ್ಲ, ಅದೊಂದು ಖಾಲಿ ಬಯಲು

ಜೀವಂತಿಕೆಯೆ ಬಂದಿತಲ್ಲಿ ಖಾಲಿಯನ್ನು ತುಂಬಲು

ಬರಡುತನ ಎಲ್ಲರಿಗು ಇದ್ದದ್ದೆ,

ಅವಗೆ ಇಂದು ಇವಗೆ ನಾಳೆ.

ಸಣ್ಣಪುಟ್ಟ ಖುಶಿ ಬಂದಾಗಲೂ

ಮನೆಮಾಡೆ ಒಳಗೆ ಸ್ವಾಗತಿಸಿದರೆ,

ಮುಂದೆ ಅವೇ ಮರಿಗಳ ಹುಟ್ಟಿಸಿ

ಖುಶಿಯನೇ ನೂರ್ಮಡಿಸಿಯಾವು

ಬರಡುತನ ಕಳೆದಾವು,

ಬಾಳು ಬೆಳಕಾಗಿಸಿಯಾವು



೩೦) ವಿವಶತೆ



ಗಂಧರ್ವಗಾಯನದೊಂದು ಸಂಜೆ

ಶ್ರುತಿ ಲಯ ಸಮ್ಮೇಳ, ಗಾಯಕನೂ ತನ್ಮಯ

ರಾಗಭಾವ ಸಮ್ಮೇಳ, ದೈವಸನ್ನಿಧಿಯ ಅನುಭವ

ಹಾಳುಗಳಿಗೆಯೊಂದರಲಿ, ತಂಬೂರಿ ತಂತಿ ಮುರಿಯಿತು,

ಬುರುಡೆ ಸೀಳಿತು, ರಸಭಂಗವಾಯ್ತು

ಅನುಭೂತಿ ನೊಂದು ವೇದಿಕೆಯಿಂದಿಳಿಯುವಂತಾಯ್ತು

ಸಿಂಗಾರಕ್ಕಿಟ್ಟ ಹೊನ್ನ ತಂಬೂರಿ ಕಪಾಟಿನೊಳಗೆ

ನುಡಿಯಲಾರದ ವಿವಶತೆಗೆ ಕಣ್ಣೀರಿಡುತಿತ್ತು.



೩೧) ಕ್ಷಮಿಸು



ಕ್ಷಮಿಸು

ನಿನ್ನ ಬಾಯಾರಿಕೆಗೆ ನಾ ನೀರಾಗಲಿಲ್ಲ,

ಹಸಿವೆಗೆ ತುತ್ತಿನೂಟವಾಗಲಿಲ್ಲ.

ನಿದ್ದೆಯಿಲ್ಲದ ರಾತ್ರಿಗೆ ಜೋಗುಳವಾಗಲಿಲ್ಲ.

ಬೇಸರ ತಣಿಸುವುದಕೆ ಹಾಡಾಗಲಿಲ್ಲ.

ದಣಿದು ಬಂದಾಗಲೆಲ್ಲ ನಗುವಾಗಲಿಲ್ಲ.

ಕಣ್ಣೀರೊರೆಸೊ ತುಂಡುವಸ್ತ್ರವಾಗಲಿಲ್ಲ.

ಪೂಜೆ ನಂಬದ ನೀನು ಪೂಜೆಗೆಂದೊಮ್ಮೆ

ಹೊರಟಾಗ ಹೂವಾಗಿಯೂ ಒದಗಲಿಲ್ಲ.

ಬಹುಶಃ........

ನಮ್ಮಿಬ್ಬರಿಗೂ ಇದೊಂದು ಅಪ್ರಿಯ ಸತ್ಯ

ನಾನೆಂದೂ ನಿನಗೊದಗಲೇ ಇಲ್ಲ.

ಯಾಕೆಂದರೆ, ಇದುವರೆಗೆ

ನಾನು ನಾನಾಗುವುದೇ ಸಾಧ್ಯವಾಗಿಲ್ಲ.



೩೨) ಹೂಗಳ ನಗು



ರಾತ್ರಿ ಗಾಳಿಮಳೆ ಜೋರಿಗೆ

ಪಾರಿಜಾತದ ಗೆಲ್ಲು ಕಿಟಕಿಯೆಡೆ ಬಾಗಿತ್ತು

ಮುಂಜಾನೆ ಕಿಟಕಿ ತೆರೆದೊಡನೆ

ಪುಟ್ಟರೆಂಬೆಯೊಂದು ಕಂಬಿಗಳೊಳ ಚಾಚಿತ್ತು

ರೆಂಬೆ ತುದಿಯಲ್ಲಲ್ಲಿ ಪುಟ್ಟ ಹೂ ಅರಳಿತ್ತು

ಕೆಂಪು ತೊಟ್ಟಿನ ಬಿಳಿಯ ಮೈ ಹಸುಗೂಸಿನಂತಿತ್ತು

ಅದಕೆ

ದೊಡ್ಡ ಮನೆಯ ಹಜಾರದ ದರ್ಶನವಾಗಿತ್ತು

ಶ್ರೀಮಂತಿಕೆಯ ಬಣ್ಣಗಳು ಕಣ್ಣು ಕುಕ್ಕಿತ್ತು

ಮೂಲೆಯಲಿತ್ತೊಂದು ದೊಡ್ಡ ಹೂದಾನಿ

ಅದರ ತುಂಬ ಅಂಗೈಯಗಲದ ಕೆಂಪು ಗುಲಾಬಿ

ಕಂಪಿಲ್ಲದ ಕೆಂಪು ಗುಲಾಬಿಯ ಕಂಡು

ಪಾರಿಜಾತಕೆ ಕಾಗದದ್ದೆಂಬ ವ್ಯಂಗ್ಯ ನಗು!

ಕ್ಷಣಕಾಲದದರ ಜೀವಿತವ ಕಂಡು ಗುಲಾಬಿಗೆ

ತನ್ನ ಜೀವನವೆ ಉದ್ದವೆಂಬ ಹೆಮ್ಮೆಯ ನಗು!









೩೩)ಯಾಕೆಂದರೆ.........

ನೀನಂದಿದ್ದೂ ಸರಿಯೇ

ನಿನ್ನಮ್ಮನ ಮುಂದುವರಿಕೆ ನೀನು,

ನಿನ್ನದು ನಿನ್ನ ಮಗಳು.

ಅಮ್ಮ ನಿನ್ನ ಗುರುವಾದರೆ,

ಮಗಳು ನಿನಗೆ ಗುರಿಯಾದಳು.

ಅಮ್ಮನದು ನಿನಗೆ ಧಾರೆಯಾದರೆ

ಮಗಳ ಪ್ರೀತಿ ಸೆಳೆವ ಅಯಸ್ಕಾಂತ.

ಅಮ್ಮ ನಿನಗೆ ಮಾದರಿಯಾದರೆ

ಮಗಳು ನಿನ್ನ ತದ್ರೂಪು.

ಅಮ್ಮ ಗಾಯಗಳಿಗೆ ಮುಲಾಮಾದರೆ

ಮಗಳು ಗಾಯಗಳೆಡೆಗಿನ ಮರೆವು

ಅಮ್ಮ ನಿನ್ನ ನುಡಿಗಳಲಿಹ ಸತ್ವವಾದರೆ

ಮಗಳು ಅದ ನಡೆಯಾಗಿಸುವ ಸತ್ಯ

ಅಮ್ಮ ಬಳಲಿಕೆಗೆ ಒರಗುಗಂಬವಾದರೆ

ಮಗಳು ನಿನ್ನ ತೂಗುವ ಉಯ್ಯಾಲೆ.

ಅಮ್ಮ ನಿನ್ನ ಕಣ್ಣೊರೆಸುವ ಕೈಯ್ಯಾದರೆ

ಮಗಳು ಕಣ್ಣೀರ ನಗುವಾಗಿಸುವ ಶಕ್ತಿ

ಹೀಗೆ ನನ್ನ ಬಾಳ ಭಾರ ಹೊತ್ತ

ಕಂಭಗಳಿವೆರಡು ಎಂದು ನೀನಂದದ್ದು

ನೂರಕ್ಕೆ ನೂರು ಸತ್ಯವಾದ ಮಾತು

ಯಾಕೆಂದರೆ ........

ನನ್ನಮ್ಮ ನನ್ನೆದುರಿನ ಕನ್ನಡಿಯಾದರೆ,

ನನ್ನ ಮಗಳದರೊಳಗಿನ ನನ್ನ ಪ್ರತಿಬಿಂಬ



೩೪) ಹೀಗೆರಡು ಅಗಲಿಕೆಗಳು



ಸಾವು ಅಗಲಿಸಿದವರ ನೋವು ಸಾವಬಯಕೆ ತಂದೀತು

ಬೇಡವೆಂದು ಬಿಟ್ಟುಹೋದವರದು ಕ್ಷಣಕ್ಷಣ ಸಾಯಿಸುವುದು

ಆ ಅಗಲಿಕೆಯಲಿ ತಲುಪಲಾಗದ ದೂರ ಚುಚ್ಚಿದರೆ

ಈ ತೊರೆಯುವಿಕೆಯಲಿ ತಿರಸ್ಕಾರದ ಉರಿ. .

ಆ ದೂರ ತಂದೀತು ಅಸಹಾಯಕತೆಯ ನೋವು,

ಈ ತಿರಸ್ಕಾರದಲಿ ಆತ್ಮವಿಶ್ವಾಸದ ಸಾವು.

ಅಸಹಾಯಕತೆಗೆ ಆತ್ಮವಿಶ್ವಾಸ ಆಸರೆಯಾದೀತು.

ಆತ್ಮವಿಶ್ವಾಸವಿಲ್ಲದ ಬಾಳು ಹೊರೆಯೇ ಹೌದು

ಹೊರೆಯಾದ ಬಾಳಿಗಿಂತ ಬೇಕೆ ಬೇರೆ ಸಾವು?



೩೫) ಮನಗಳೆರಡು ಸಂಧಿಸಿದಾಗ



ಮನಸುಗಳೆರಡು ಪರಸ್ಪರ ಸಂಧಿಸಿದ ಗಳಿಗೆ

ಅದು ಕರೆಯಿತು "ಈಗಲೇ ನನ್ನದಾಗು"

ಇದು ಹೇಳಿತು "ಬಹುಶಃ ಅದಾಗದು"

ಅದು ಹೇಳಿತು "ಅದಾಗಲೇಬೇಕು"

ಇದರುತ್ತರ "ಆಗಲೇಬೇಕಾದರೆ ಆದೀತು"

ಮರುಕ್ಷಣವೇ ಒಂದರೊಳಗೊಂದು ಇಳಿಯತೊಡಗಿ,

ಸಮರ್ಪಣೆ ಮೊಳೆಯತೊಡಗಿ,

ಇನ್ನುಳಿದದ್ದೆಲ್ಲಾ ಕರಗತೊಡಗಿ,

ಅದಕಿದಷ್ಟೆ ಇದಕದಷ್ಟೆ ಕಾಣುವಂತಾಯ್ತು.

ಆಗಲೇ ಅದಕೊಮ್ಮೆ ಭೂತದಾಳದ ಪ್ರಶ್ನೆ-

"ನೀ ನನ್ನದಲ್ಲವೇ?"

ಅದರ ಉತ್ತರ-

"ನೀ ನನ್ನ ದಾಟಿಹೋಗಿದ್ದೆಯಲ್ಲವೆ?"

"ಅದು ಕಾಲನಿರ್ಣಯ.

ಸಾವು ನಿನ್ನೊಳಗೆ ನನ್ನ ಕೊಂದಿತೆ?"

-ಮತ್ತೆ ಭೂತದ ಪ್ರಶ್ನೆ.

ಅದಕ್ಕೀಗ ಇಬ್ಬಗೆ- ನನ್ನದಲ್ಲದ ನಾನು

ಇದಕ್ಕೊದಗುವುದು ಹೇಗೆ?

ಅದು ನಿಂತಲ್ಲೆ ತಿರುಗಿ ಹಿಂದೆ ನೋಡುತ್ತಿದೆ,

ಇದು ನಡುವಲ್ಲಿ ನಿಂತು ತ್ರಿಶಂಕುವಾಗಿದೆ.

ಹಿಂತಿರುಗಲು ಇದಕ್ಕೆ ಹಿಂದೇನೂ ಇಲ್ಲ,

ಮುನ್ನಡೆಯಲು ಅಲ್ಲಿ ಸ್ವಾಗತವೂ ಇಲ್ಲ.



೩೬) ಹೆಣ್ಣಿನ ಪ್ರಶ್ನೆ



ಹೆಣ್ಣೊಂದರ ಮನ ಆಗಾಗ ಕೇಳುವುದು-

"ಎಲ್ಲಿದೆ ನನ್ನಮನೆ, ಯಾವುದು ನನ್ನಮನೆ?"

ಅಮ್ಮ ಹೇಳಿದ್ದಳು ಮದುವೆಯ ನಂತರ,

" ಇನ್ನು ನಿನ್ನ ಮನೆಯ ಸೇರಿ ಬೆಳಗು"

ಅಲ್ಲಿ ತಪ್ಪಾದಾಗಲೊಮ್ಮೆ ಅತ್ತೆ ಕೇಳುವರು

"ನಿನ್ನ ಮನೆಯಲ್ಲಿ ಇದು ಹೀಗೇ ಏನು?"

ಮೊದಲ ಆಷಾಢಕ್ಕೆ ತವರಿಗೆ ಹೋದಾಗ,

ಪಾತ್ರೆ ತೊಳೆದು ಇಟ್ಟ ಜಾಗ ಬದಲಾಯ್ತು.

ಅಮ್ಮ ನಕ್ಕುಹೇಳುತಾಳೆ "ನಿನ್ನ ಮನೆಯಲ್ಲಮ್ಮಾ"

ಹೊಸಿಲ ಬರೆವ ಗೆರೆಗಳಲ್ಲಿ ತವರ ಛಾಯೆಕಂಡು

ಅತ್ತೆ ಹೇಳುತಾರೆ- "ನಿನ್ನ ಮನೆಯಂತಲ್ಲಮ್ಮಾ,

ನನ್ನ ಮನೆಯಲ್ಲಿದ್ದೀಯ, ನಾ ಬರೆದಂತೆ ಬರಿ."

ಅಪ್ಪನ ಕನಸು, ಅಮ್ಮನ ಮನಸೇ ಅವಳಾದರೂ

ಅವರ ಪ್ರಕಾರ "ಈಗ ನೀ ಅವರವಳು"

ಅತ್ತೆಯ ಹೆಮ್ಮೆ, ಗಂಡನ ಒಲುಮೆ ಅವಳಾದರೂ,

ಅವರೂ ಹೇಳುವರು- "ಎಷ್ಟಾದರೂ ಅವರೆ ನಿನಗೆ ಹೆಚ್ಚು"

ಗೊಂಬೆಯಾಟದ ಗೊಂಬೆ ಈ ಹುಡುಗಿ

ಮತ್ತದೇ ಪ್ರಶ್ನೆಯೊಂದಿಗೆ ಕೂರುತಾಳೆ

"ಎಲ್ಲಿಗೆ, ಯಾರಿಗೆ ಸೇರಿದವಳು ನಾ?

ಎಲ್ಲಿದೆ ನನ್ನಮನೆ, ಇಲ್ಲಿಗೆ ಸುಮ್ಮನೆ ಬಂದೆನಾ? "



೩೭) ನಾ ಗರಿಕೆಯಾಗುವೆ



ಅಜ್ಜ ನೆಟ್ಟ ಮಾವಿನ ಮರದಲಿ

ನಾ ಮೊಳೆಯುತಿರುವೆ, ಪುಟ್ಟ ಚಿಗುರು.

ಇಲ್ಲಿ ಚಿಗುರುವ ಯೋಗವೋ, ಕರ್ಮವೋ-

ಅಪ್ಪ ಅಮ್ಮ ಇಲ್ಲಿದ್ದರು, ನಾನಿಲ್ಲಿ ಹುಟ್ಟಿದೆ,

ಬೇರಾವ ಕಾರಣವು ಇಲ್ಲ.

ಇಲ್ಲ, ಇಂದು ನನ್ನದಿದೆನಿಸುವುದಿಲ್ಲ

ಈಗಿನ ತುರ್ತಿಗಿದು ಶಕ್ಯವಾಗಿಲ್ಲ.

ಆಗಿನ ಮೌಲ್ಯಗಳನುಳಿಸಿಕೊಂಡಿಲ್ಲ

ನೆಟ್ಟವರ ಧ್ಯೇಯಗಳೂ ಕಾಣುತಿಲ್ಲ

ಹಣ್ಣು ನನ್ನವು ಮೇಲ್ವರ್ಗಕೇ ಎನ್ನುತಿದೆ

ಕೊಂಬೆಗಳಿಂದ ಅಕ್ಕಪಕ್ಕದವ ಚುಚ್ಚುತಿದೆ

ರೆಂಬೆಯಲೊಂದು ಕಾಳಸರ್ಪವನೂ ಸಾಕಿದೆ

ಒಣಗಿದೆಲೆಗಳ ಕಸವ ಸುತ್ತಲೂ ಬೀಳಿಸಿದೆ

ಭಯಗೊಂಡ ಜೀವಕುಲ ದೂರಕೇ ಓಡುತಿರೆ,

ಸ್ವಚ್ಛಗೊಳಿಸುವ ಕಾರ್ಯ ಅರ್ಧಕೇ ನಿಂತಿದೆ

ನೆರಳು ಇದ್ದರೂ, ದಣಿವಾರಿಸುತ್ತಿಲ್ಲ

ಹಣ್ಣಿದ್ದರೂ ಹಸಿವೆ ತಣಿಸುತ್ತಿಲ್ಲ

ಕೊಳೆತೆಲೆಗಳದೆ ನಾತ,

ಜೀವಸೆಲೆಯಿರದೆ ಮೌನದ್ದೆ ಕಾಟ

ಆದರೂ..........

ನಾನಿಲ್ಲೆ ಇರಬೇಕು, ಬೆಳೆಯಲೂ ಬೇಕು

ಇರುವೆ, ಆದರೆ.........

ಸಾವು ಬಂದಕ್ಷಣ ವರವೊಂದ ಕೇಳುವೆ,

ಮರುಜನ್ಮದಲಿ ನಾ ಗರಿಕೆಯಾಗುವೆ,

ಯಾರ ಗೆಲ್ಲೂ ಅಲ್ಲ, ಯಾರ ಹೂವೂ ಅಲ್ಲ

ಯಾರ ಹಣ್ಣೂ ಅಲ್ಲ, ಯಾರ ಬೀಜವೂ ಅಲ್ಲ.





೩೮) ಬಾಯಿಮಾತಷ್ಟೇ



ಮಾತು ಬೆಳ್ಳಿ ಮೌನ ಬಂಗಾರ ಅನ್ನುವರು,

ಬಾಯಿಗೇ ಕೈಹಾಕಿ ಮಾತು ಹೊರತೆಗೆಯುವರು.

ಕೈ ಕೆಸರಾದರೆ ಬಾಯಿ ಮೊಸರೆಂಬರು,

ಕೈ ಕೆಸರಾಗಿರುವವನ ಗೌರವಿಸಲರಿಯರು.

ಉಪ್ಪಿಗಿಂತ ರುಚಿ, ತಾಯಿಗಿಂತ ದೇವರಿಲ್ಲೆಂಬರು,

ಸ್ವಲ್ಪ ಹೆಚ್ಚುಕಮ್ಮಿಯಾದರೂ "ಥೂ" ಎಂದುಗಿಯುವರು.

ಅಜ್ಜ ನೆಟ್ಟ ಆಲದ ಮರದ ನೇಣು ಸಲ್ಲದೆಂಬರು,

ದೂರದಲಿ ಬಾಳು ಹುಡುಕಿದರೆ, ಭ್ರಷ್ಟನೆಂಬರು.

ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎಂಬರು,

ಹತ್ತಿರ ಸ್ಪಷ್ಟವಾಗಿರುವುದ ಕಾಣಬಯಸರು.

ಸೋಲೇ ಗೆಲುವಿಗೆ ಸೋಪಾನವೆಂಬರು

ಸೋತು ಕುಸಿವವಗಿನ್ನೆರಡು ಕಲ್ಲೆಸೆಯುವರು

ಗೆದ್ದೆತ್ತಿನ ಬಾಲ ಹಿಡಿವುದು ಸರಿಯಲ್ಲೆಂಬರು

ಗೆಲುವು ಇರದಲ್ಲಿ ಪ್ರೋತ್ಸಾಹಿಸಲರಿಯರು

ಮಾನವರ ನಡುವಿನಲಿ ಸಹಜತೆಯೆ ಕಳವಾಗಿ

ಕದ್ದ ಆಷಾಢಭೂತಿಗಳೆ ಜಗವಾಳುವವರಾಗಿ

ಮನದ ನುಡಿಯನು ಕೇಳಿ ಬಾಳುವೆ ಎಂದವಗೆ

ಸ್ವರ್ಗವೆನಿಸದೆ ನರಕವಾಗಿಹುದು ಈ ಭೂಮಿ.



೩೯) ನಾ ಮೂಲವಸ್ತುವಷ್ಟೆ.



ಕ್ಷಮಿಸು ಜೀವವೆ,

ನನ್ನ ನಡೆಗಳಿಗೆ ನಾ ಪ್ರತಿಕ್ರಿಯೆ ಕೇಳುವೆ.

ಮೀರಾಳಂತೆ ಅವಳ ಹಾಡಲ್ಲಿ ,

ರಾಧಾಳಂತೆ ಅವಳ ನಿರೀಕ್ಷೆಯಲ್ಲಿ,

ಅಕ್ಕಳಂತೆ ಅವಳ ಹಠಸಾಧನೆಯಲ್ಲಿ

ಅಭಿವ್ಯಕ್ತವಾಗದ ಅದ ನಾ ಕಾಣಲಾರೆ.

ಯಾಕೆಂದರೆ ಅವರು.........

ಹೆಣ್ಣುಜನ್ಮದ ಅತ್ಯುನ್ನತ ಮಾದರಿಗಳಾದರೆ,

ನಾನು ಹೆಣ್ಣು ಜೀವರಚನೆಯ ಮೂಲವಸ್ತುಗಳಾದ

ಆರಾಧನೆ ಮತ್ತದರ ಸ್ಪಂದನೆಗಳ ಮೊತ್ತ ಅಷ್ಟೇ.





೪೦) ಇಂದು



ಒಂದಕ್ಕೊಂದು ಅಪ್ಪಿಕೊಂಡಂತಿರುವ

ನಿನ್ನೆ ನಾಳೆಗಳೆಂಬೆರಡು ಬಂಡೆಗಳ

ನಡುವಿನ ಕಿರಿದಾದ ಅವಕಾಶವೇ ಇಂದು.

ಕಿರಿದಾದಾರೂ ಜಾಗವಿದ್ದಲ್ಲೆಲ್ಲ ಬಂದು ಸೇರುವ

ತ್ಯಾಜ್ಯಗಳಂತೆ ಇಲ್ಲು ಇವೆ ಕಸಕಡ್ಡಿ ಹಲವು

ಮೊದಲ ಕೆಲ ಹೆಜ್ಜೆಗಳಲಿ ರಭಸವಿದ್ದರೆ,

ತೊರೆಯದು ಕಸಕಡ್ಡಿ ಕೊಚ್ಚಿಕೊಂಡು ಹೋದೀತು,

ಇಂದೆಂಬ ಅವಕಾಶವದಕೆ ದಕ್ಕೀತು.

ನಿನ್ನೆನಾಳೆಗಳ ವಿಸ್ತಾರ ದಾಟಿದ ಮೇಲೆ,

ಬಯಲೆಲ್ಲ ಅದರದೇ ಆದೀತು.

ಸ್ವತಂತ್ರ ಹರಿವು, ಮಿತಿಯಿರದ ಸೆಳವು

ನೋಡಲೂ ಬಂದಾರು ಜನ ಆ ಮುಕ್ತ ಚೆಲುವು

೪೧)

೧) ಗೊಂಬೆ ಹೇಳಿದ್ದು



ದೊಡ್ಡ ಗೊಂಬೆಯೊಳಗೊಂದು ಗೊಂಬೆ,

ಅದರೊಳಗಿತ್ತು ಇನ್ನೊಂದು

ಇನ್ನೊಂದರೊಳಗೆ ಮತ್ತೊಂದು

ಆ ಮತ್ತೊಂದರೊಳಗೂ ಸಿಕ್ಕಿತ್ತು

ಕೊನೆಗೊಂದು ಪುಟ್ಟಗೊಂಬೆ.

ಎಲ್ಲೋ ಏನೋ ಹೋಲಿಕೆಯ ನೆನಪು!!!

ದೊಡ್ಡವರಂತೆ ಕಾಣುವ ಹಲವರು ಹೀಗೇ ತಾನೆ?

ಅವರೊಳಗ ಬಗೆಯುತ್ತಾ ಹೋದಂತೆಲ್ಲಾ

ಕೊನೆಗುಳಿಯುವುದು ಕ್ಷುದ್ರವ್ಯಕ್ತಿತ್ವವೇನೇ.



೨) ಕಳೆದು ಹೋಗುವಾ



ಉಳಿಸುವ ಇಚ್ಛೆಯಿಲ್ಲದಿದ್ದರೆ ಅಳಿಸಿಬಿಡು

ಎರವಲೆನಿಸುವ ಗಮನದ ಭಿಕ್ಷೆ ಬೇಡ

ಪ್ರೀತಿಯೆಂದೆಂದೂ ನಿಷ್ಕಲ್ಮಶ

ಅದು ನಂಜಾಗುವ ಮುನ್ನ

ನೀ ನಾನಿಲ್ಲವೆಂದುಕೊಳ್ಳುವ

ನಾ ನೀನಿರಲೇ ಇಲ್ಲವೆಂದುಕೊಳ್ಳುವ

ತಪ್ಪು ಕಲ್ಪನೆಯೊಳಗೆ ಕಳೆದುಹೋಗುವಾ.....



Wednesday, November 28, 2012


ನಾ ನಾಳೆ ಬರುವಾಗ....


------------------

ನಾ ಬರುವೆನೆಂದು ಸಿಂಗರಿಸಿಕೊಳಬೇಕೇನೇ ನೀನು?

ಹೊಸದಾಗಿ ತೋರುವಂಥದ್ದುಳಿಸಿದಿಯೇನೇ ಇನ್ನೂ...



ಒದಗಿದೊಂದೇ ನೋಟವದು, ಶರಣಾಗಿಸಿತ್ತು...

ಅಲ್ಲ...

ಕಣ್ಣು ದೊಡ್ಡವೆಂದಲ್ಲ... ಎರಡು ಕನ್ನಡಿಗಳೆಂದು..

ಮೂಗು ಚೂಪೆಂದಲ್ಲ, ಒಳಿತಿಗಷ್ಟೆ ತೆರೆವದ್ದೆಂದು,

ಬಾಯಿ ಪುಟ್ಟದೆಂದಲ್ಲ...ಒಂದು ಸತ್ಯವೆಂದು,

ನಗು ಚಂದವೆಂದಲ್ಲ..ಒಂದು ಮಗುವೆಂದು,

ಹಣೆ ಚಿಕ್ಕದೆಂದಲ್ಲ, ಶುದ್ಧಭಾವಗಳ ಮನೆಯೆಂದು,

ಭಂಗಿ ಸುಂದರವೆಂದಲ್ಲ, ಬಲುದೃಢವೆಂದು...

ಮರುಳಾದದ್ದು ಕಣೇ..., ಹೀಗಿದ್ದೆಲ್ಲೂ ಕಂಡಿರಲಿಲ್ಲ....



ನೀ ಬಳುಕೊ ಬಳ್ಳಿಯೆಂದಲ್ಲ.. ಸುಮಕೋಮಲೆಯೆಂದಲ್ಲ,

ಬಣ್ಣ ಬಿಳಿಯೆಂದಲ್ಲ... ಅಷ್ಟೆಲ್ಲಾ ಯಾಕೆ...

ಅನುಪಮ ಸುಂದರಿಯೆಂದಲ್ಲ ಮೆಚ್ಚಿದ್ದು....

ನಾ ಕಂಡಷ್ಟು ನಿನ್ನ ಕಂಡವರುಂಟೇನೇ....?

ಬಿಡು...ದೇಹವನಲ್ಲ... ಮನವನಣಿಯಾಗಿಸು

ನಾ ಕಂಡಂತೆ ಕಾಣಲಿಕೆ, ಒಪ್ಪಿದಂತೊಪ್ಪಲಿಕೆ,

ಮಣಿದಂತೆ ಮಣಿಯಲಿಕೆ, ಲೀನವಾಗಲಿಕೆ,

ಮತ್ತಾ ಮನೋಮಿಲನದಲ್ಲಿ ನೀನಿಲ್ಲವಾಗಲಿಕೆ...










Tuesday, November 27, 2012

ನನಗ್ಗೊತ್ತು....ಆದರೂ..


-----------------------

ನಾ ಬಲ್ಲೆ... ನೀ ಹೇಳುತಿರುವುದೆಲ್ಲ ಸುಳ್ಳು

ಆ ಸುಳ್ಳನೇ ನಂಬುವಾಸೆ...

ನಾ ಬಲ್ಲೆ.... ನಿನಲಿರುವುದೆಲ್ಲ ವಿತಂಡವಾದ

ಆ ವಾದಕೇ ಸೋಲುವಾಸೆ..

ನಾ ಬಲ್ಲೆ... ನೀ ಹಂಚುವುದೆಲ್ಲ ನಿನ್ನೊಳಗ ನೋವೇ

ಆ ನೋವಿಗೇ ಒಡ್ಡಿಕೊಳುವಾಸೆ..

ನಾ ಬಲ್ಲೆ... ನೀ ನನ್ನ ಕಾಣಬಯಸದಿರುವೆ...

ಮರೆಯಿಂದಲೇ ನಿನ್ನ ನೋಡುವಾಸೆ...

ನಾ ಬಲ್ಲೆ... ನಿನಲಿಲ್ಲದಿರುವುದೆನ್ನೆಡೆಗೆ ಒಲವೇ...

ಇಲ್ಲದ್ದಕೇ ನನ ಪ್ರೀತಿಬಳ್ಳಿ ಹಬ್ಬಿಸುವಾಸೆ..

ನಾ ಬಲ್ಲೆ.. ನೀನೆಲ್ಲವ ಮುಗಿಸಬಯಸಿರುವೆ

ಆ ಬಯಕೆಯಲೊಂದು ಜಾಗ ಪಡೆವಾಸೆ....

ನಾ ಬಲ್ಲೆ... ನೀ ಕೊನೆಗೆ ಕಾಯುತಿರುವೆ..

ಆ ಕೊನೆಯಲೂ ನಿನ್ನ ಬುಡದಲಿರುವಾಸೆ...



ಆಸೆಗಳಿಲ್ಲದ ನಿನ್ನ ಪ್ರೇಮಿಸುತಿರುವೆ....ಹಾಗಾಗಿ

ಶುರುವಿಂದ ಕೊನೆವರೆಗೆ ಜೀವಂತವಾಗುಳಿವಾಸೆ...







ಪ್ರಶ್ನೆಯಲ್ಲ, ಇದು ಕೋರಿಕೆ....


-----------------

ನೂರೊಂದು ಹೇಳಬೇಕು ನಾನು,

ದನಿಯಿಲ್ಲದ ಮಾತು ಕೇಳಬಲ್ಲೆಯ ನೀನು?

ಮತ್ತೊಮ್ಮೆ ಹಾಡಬೇಕು ನಾನು,

ಶಬ್ಧವಿಲ್ಲದ ಹಾಡ ಸವಿಯಬಲ್ಲೆಯ ನೀನು?

ಪುನಃ ಪುನಃ ಬಯಲಾಗಬೇಕು ನಾನು,

ನಾ ತೋರದುದನ್ನೂ ನೋಡಬಲ್ಲೆಯ ನೀನು?

ಇದ್ದೂ ಇಲ್ಲಿರದಂತಿರಬೇಕು ನಾನು,

ನಿನ್ನೆದೆಯಲಿ ಹಾಗಿರಿಸಿಕೊಳುವೆಯ ನೀನು?



ನೀ ಕೇಳದೇ ತಿಳಿದೀಯಬೇಕು ನಾನು,

ತಪ್ಪುತಿಳಿದರೆ ತಿದ್ದಬಲ್ಲೆಯ ನೀನು?

ನಿನ ಹೆಜ್ಜೆ ಮೇಲಿಟ್ಟೆನದು ನಡೆಯಬೇಕು ನಾನು,

ಎಡವದಂತೆ ಕರೆದೊಯ್ಯುವೆಯೇನು?

ನೀನಿತ್ತುದುಂಡೇ ತಣಿಯಬೇಕು ನಾನು,

ಮತ್ತೆ ಕೇಳದಂತೆ ಉಣಿಸುವೆಯೇನು?

ನಿನ ಮಡಿಲಲೇಳದಂತೆ ನಿದ್ರಿಸಬೇಕು ನಾನು,

ಅಂಥ ಜೋಗುಳವೊಂದು ನಿನ್ನಲಿದೆಯೇನು?



ಬಿಡು....ಯಾವುದಾಗದಿದ್ದರೂ ಇದಾದೀತೇನು..?

ನನಗೆ ನೀನೆಂದರೆ ನೀನೇ ಎಂದರಿಯಬಲ್ಲೆಯ ನೀನು?





Monday, November 26, 2012

   ನಮಸ್ಕಾರ.. ನಾನು ಅನುರಾಧಾ ಪ್ರಶಾಂತ್ ಸಾಮಗ. ನನ್ನ ಬರಹಗಳನ್ನು ಒತ್ತಟ್ಟಿಗೆ ಸೇರಿಸಿಡಲು ಅನುಕೂಲವಾಗುವಂತೆ ಭಾವಶರಧಿ ಎಂಬ ಈ ಬ್ಲಾಗ್ ನ ಬಾಗಿಲನ್ನು ತೆರೆಯುತ್ತಿದ್ದೇನೆ. ಅದರೊಳಗಿನ ಅವಕಾಶವನ್ನು ನನ್ನ ಅನಿಸಿಕೆಗಳಿಂದ ತುಂಬುತ್ತಿದ್ದೇನೆ. ನಿಮಗೆಲ್ಲರಿಗೂ ಭಾವಶರಧಿಯ ಅಲೆಗಳನ್ನು ವೀಕ್ಷಿಸಲು ಮತ್ತು ಇಚ್ಛೆಯಿದ್ದಲ್ಲಿ ಅದರಾಳದಲ್ಲಿ ಮುಳುಗೇಳಲು, ಅದರೊಡನೆ ಸಂವಾದಿಸಲು ಮನಸಾರೆ ಸ್ವಾಗತ ಮತ್ತು ತದನಂತರದ ಕಾಳಜಿಯ ಸಲಹೆಗಳಿಗೂ ಸದಾ ಸ್ವಾಗತ.


   ನಾಲ್ಕು ಗೋಡೆಗಳ ನಡುವೆ ಕಡಿಮೆಯೆಂದರೆ ಸುಮಾರು ಹತ್ತು ಹದಿನೈದು ವರ್ಷ ನಾವು ಶೈಕ್ಷಣಿಕವಾಗಿ ಕಲಿಯುವುದು, ಪದವೀಧರರಾಗುವುದು, ಎಂದು ಯಾವುದನ್ನು ಹೇಳುತ್ತೇವೋ ಅದು ಕಲಿಯುವ ಪ್ರಕ್ರಿಯೆಯನ್ನು ಕಲಿಯಲಿಕ್ಕೆ ಮಾತ್ರ ಎಂದು ನನ್ನ ಭಾವನೆಯೂ ಹೌದು, ಅನುಭವವೂ ಹೌದು. ಅದರೊಳಗಿನ ವಸ್ತುವಿಷಯದ ಮುಖಾಂತರಕ್ಕಿಂತ ಹೆಚ್ಚು ಅದನ್ನು ಅಭ್ಯಸಿಸಿದ ರೀತಿ, ಬೇಕಾದ ಶ್ರದ್ಧೆ, ಸಾಧನೆಗೆ ಇರಬೇಕಾದ ಬದ್ಧತೆ, ಪರಿಶ್ರಮದ ಗುಟ್ಟು, ಮತ್ತು ಸೋಲುಗೆಲುವಿನ ರುಚಿ-ಇವುಗಳ ಮೂಲಕ ಮುಂದಿನ ಜೀವನಕ್ಕೆ ಸಹಾಯ ಒದಗುವುದೆಂದು ನನ್ನ ಭಾವನೆ. ನಾನು ಶಾಲಾ ಕಾಲೇಜುಗಳಲ್ಲಿ ಅಭ್ಯಸಿಸಿದ ವಿಷಯವಲ್ಲದ ಸಾಹಿತ್ಯ ಇಂದು ನನ್ನ ಅತ್ಯಂತ ಅಚ್ಚುಮೆಚ್ಚಿನ ಸಂಗಾತಿಯಾಗಿದೆ, ಬದುಕುವ ಉದ್ದೇಶಗಳಲ್ಲೊಂದಾಗಿದೆ.ಓದುವ ಗೀಳಿದ್ದ ನನಗೆ ಹೇಳಿಕೊಳ್ಳುವಂಥ ಸಾಹಿತ್ಯದ ಕೌಟುಂಬಿಕ ಹಿನ್ನೆಲೆಯಿಲ್ಲದಿದ್ದರೂ ಮತ್ತು ತುಂಬಾ ಶ್ರೇಷ್ಠ ಮಟ್ಟಿನ ಓದುವಿಕೆಯಾಗಲಿ, ಅದಕ್ಕೆ ಪ್ರೋತ್ಸಾಹವಾಗಲೀ ಇರದಿದ್ದರೂ, ಚಂದಮಾಮ, ಸುಧಾ, ಪ್ರಜಾಮತಗಳಲ್ಲದೇ, ದಿನಪತ್ರಿಕೆಯ ಒಂದೂ ಅಕ್ಷರ ಬಿಡದೆ ಓದುವ ಮತ್ತದರಲ್ಲಿನ ವಸ್ತುವಿಷಯಕ್ಕಿಂತ ಹೆಚ್ಚಾಗಿ ಭಾಷೆಯ ಜಾಡನ್ನ, ಚಂದವನ್ನ ಅನಂದಿಸುವುದು ತುಂಬಾ ಖುಶಿ ಕೊಡುತ್ತಿತ್ತು. ಒಂದೇ ಒಂದು ಮನರಂಜನೆಯ ಸಾಧನವಾದ ರೇಡಿಯೋದಲ್ಲಿ ಬಿತ್ತರವಾಗುತ್ತಿದ್ದ ಹಾಡುಗಳೂ ಮನಸೆಳೆದು, ನಾನೂ ಹೀಗೇ ಬರೆದು ಹಾಡಬೇಕೆಂಬ ಆಸಕ್ತಿ ಹುಟ್ಟಿದ್ದೂ ನಿಜವೇ. ನಾಲ್ಕಾರು ಸಾಲು ಬರೆದು ಹಾಡುಗಾರಿಕೆಯಲ್ಲಿ ಸ್ವಲ್ಪ ಆಸಕ್ತಿ ಇದ್ದುದರಿಂದ ರಾಗ ಹಾಕಿ ಬೇಕಾದಷ್ಟು ಸಲ ಹಾಡಿ ಆನಂದಿಸುತ್ತಿದ್ದುದೂ ಇತ್ತು. ಕುವೆಂಪು, ಬೇಂದ್ರೆ, ಶಿವರುದ್ರಪ್ಪ, -ಇವರೇ ಮೊದಲಾದ ಎಲ್ಲಾ ಕವಿಗಳ ಹಾಡುಗಳನ್ನು ಸಿಕ್ಕಿಸಿಕ್ಕಿದಲ್ಲೆಲ್ಲ ಕಲಿತು ಹಾಡುವುದೊಂದು ಹುಚ್ಚಾಗಿತ್ತು. ಆ ಹಾಡುವಿಕೆ ಅದರೊಳಗಿನ ಶಬ್ಧಗಳ ಜಾದೂವನ್ನು ಪರಿಚಯಿಸಿತು, ದೇವರ ದಯೆ, ಹಿರಿಯರ ಆಶೀರ್ವಾದ ಆ ತಿಳಿವನ್ನು ಬರವಣಿಗೆಯನ್ನಾಗಿಸಿತು. ಹಿರಿಯರಿಗಾಗಿ ಮನೆಗೆ ಬರುತ್ತಿದ್ದ ಕಾದಂಬರಿಗಳನ್ನೂ ಕದ್ದೋದಿ, ಸಿಕ್ಕಿಬಿದ್ದು "ನಿನ್ನ ವಯಸಿಗದು ಬೇಡ" ಎಂದು ಬಯ್ಸಿಕೊಂಡದ್ದೂ ಇತ್ತು. ಬಹುಶಃ ಆ ಸಮಯದಲ್ಲಿ ನನ್ನ ಆಸಕ್ತಿಗೆ ಮೇವಾಗಿ ದೊರಕಿದ ಆ ಓದು, ಆ ಕೇಳ್ಮೆ ಇಂದು ನನ್ನನ್ನು ಆಧರಿಸುತ್ತಿದೆ. ಸುಮಾರು ಹತ್ತನೇ ವರ್ಷದಲ್ಲಿ ಮೊದಲ ಕವನಬರೆದದ್ದು, ತರಂಗದಲ್ಲಿ ಪ್ರಕಟವಾಗಿತ್ತು- "ಅಜ್ಜನ ಗಡ್ಡ."

ಮುಂದೆ ಕಾಲೇಜಿನ ದಿನಗಳಲ್ಲೂ ಬರೆದಿದ್ದೆ, ಆದರೆ ಸ್ವಭಾವತಃ ಹಿಂಜರಿಕೆಯವಳಾದ ನಾನದನ್ನು ಅತೀ ಸಮೀಪದ ಗೆಳೆತಿಯರಲ್ಲದೇ ಬೇರ್ಯಾರಿಗೂ ತೋರಿಸುತ್ತಿರಲಿಲ್ಲ. ಮುಂದೆ ಮದುವೆ, ಉದ್ಯೋಗ ಎಂದು ಬರೆಯಬೇಕೆಂಬ ತುಡಿತದ ನಡುವೆಯೇ ಸಮಯದ ಅಭಾವದಲ್ಲಿ ಬರವಣಿಗೆ ಕುಂಟುತ್ತ ಸಾಗಿತ್ತು. ಯಥಾಪ್ರಕಾರ ನಮ್ಮನಮ್ಮೊಳಗಲ್ಲದೇ ಹೊರಗಿನ ಪ್ರಪಂಚಕ್ಕೆ ಅದು ಪ್ರವೇಶಿಸಲಿಲ್ಲ. ೨೦೦೪ರಲ್ಲಿ "ಸ್ಪಂದನ" ಎಂಬ ಹೆಸರಿನ ಪುಟ್ಟದೊಂದು ಕವನಸಂಕಲನ ನನ್ನ ಮಾವನವರ ಪ್ರಕಾಶಕಮಿತ್ರರೊಬ್ಬರ ಸಹಾಯದಿಂದ ಹೊರಬಂತು. ನನ್ನ ಇಚ್ಛಾನುಸಾರ ಸಮಯವನ್ನು ಬಳಸಬೇಕು ಮತ್ತು ಬರವಣಿಗೆ ಹಾಗೂ ಹಾಡುವುದರ ಸಹವಾಸದಲ್ಲಿ ಉಳಿದ ಜೀವನ ಕಳೆಯಬೇಕೆಂಬ ಉದ್ದೇಶದಿಂದ ೨೦೦೮ ರಲ್ಲಿ ನಾನು ಬಿ ಎಸ್ ಎನ್ ಎಲ್ ನ ಸಬ್ ಡಿವಿಜನಲ್ ಇಂಜಿನಿಯರ್ ಹುದ್ದೆಯಿಂದ ಸ್ವ-ಇಚ್ಚೆಯ ನಿವೃತ್ತಿ ಪಡೆದುಕೊಂಡೆ ಮತ್ತು ಆಗಿನಿಂದ ಎಲ್ಲೋ ಕೈಜಾರಿ ಹೋಗುತ್ತಿದ್ದ ಆ ಹವ್ಯಾಸಗಳನ್ನು ಮುಚ್ಚಟೆಯಿಂದ ನನ್ನ ದಿನಚರಿಯೊಳಗೆ ವಾಪಾಸು ತಂದೆ. ಈಗ ಅವು ನನ್ನ ಮೆಚ್ಚಿನ ಮಿತ್ರರು ಮತ್ತು ನಾನವುಗಳ ಆರಾಧಕಳು. ಇತ್ತೀಚೆಗೆ ಗೆಳತಿ ದೀಪಾಶಿವ "ನಿನ್ನ ಬರವಣಿಗೆ ನಾಲ್ಕುಜನರ ದೃಷ್ಟಿಗೆ ಬೀಳದ ಹೊರತು ಸುಧಾರಿಸಲಾರದು, ತಪ್ಪುಗಳೂ ನಿನಗೆ ಕಾಣಬೇಕು, ಮೆಚ್ಚುಗೆಯೂ ಹರಿದುಬರಬೇಕು. ಆಗಲೇ ಆ ಕಲೆ ಬೆಳೆಯುವುದು" ಅಂತ ಹೇಳಿ ಬಲವಂತವಾಗಿ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಲು ಹೇಳಿದಳು. ಹಾಗೆ ನನ್ನ ಬರಹಗಳು ಎಫ್ ಬಿ ಮತ್ತು ಬಿ ಎಮ್ ವಿ ಗಳಲ್ಲಿ ಕಾಣಿಸಿಕೊಳ್ಳತೊಡಗಿದವು. ಅಲ್ಲಿಂದ ಕೃಷ್ಣಮೂರ್ತಿ ಸರ್ ಕನ್ನಡ ಬ್ಲಾಗ್ ಗೆ ಪರಿಚಯಿಸಿದರು. ಇಲ್ಲಿನ ಎಲ್ಲಾ ಸನ್ಮಿತ್ರರ ಪ್ರೋತ್ಸಾಹ ನನ್ನ ಉತ್ಸಾಹವನ್ನು ನೂರ್ಮಡಿಸಿದೆ. ಇದೀಗ ಬಹಳಷ್ಟು ಜನರ ಸಲಹೆಯಂತೆ ಸಹೋದರ ಪ್ರಕಾಶ್ ಶ್ರೀನಿವಾಸ್ ರವರ ಸಹಾಯದಿಂದ ನನ್ನ ಬ್ಲಾಗ್ ತೆರೆಯಲ್ಪಟ್ಟಿದೆ.

ಒಮ್ಮೊಮ್ಮೆ ಸ್ವಾನುಭವಕ್ಕೆ ಮತ್ತೊಮ್ಮೊಮ್ಮೆ ನನ್ನ ಪರಕಾಯ ಪ್ರವೇಶಕ್ಕೆ ತಕ್ಕಂತೆ ಭಾವಶರಧಿಯಲ್ಲೇಳುವ ಅಲೆಗಳ ಭರತ ಇಳಿತಗಳಿಗನುಗುಣವಾಗಿ ಇದೋ ಕೆಲವು ಬರಹಗಳು- ನನಗಾಗಿ ಮತ್ತು ನಿಮಗಾಗಿ.




೪೨) ಹಸಿವಿನ ಕರೆ



ದ್ರೋಣರ ಪರೀಕ್ಷೆಯಲಂದು ಅರ್ಜುನನಿಗೆ

ಮರದ ತುದಿಯ ಹಕ್ಕಿಯ ಕಣ್ಣುಮಾತ್ರ ಕಂಡಂತೆ,

ನನ್ನ ಹೆಮ್ಮೆಯ ತೋಟದೊಳ ಬಂದು ನಿಂತ,

ಬೀದಿ ಗುಡಿ ಸುವ ವಳ ಮಗಳಿಗೆ

ಅಲ್ಲಿನ ಹ ಸಿರು, ಜಾಜಿ ಹೂವಿನ ಕಂಪು,

ಪಾರಿಜಾತದ ಗಿಡದ ಮೇಲಿನ ಗಿಣಿಸಾಲು

ಗುಲಾಬಿಯ ಮೇಲಿನ ಬಣ್ಣದಚಿಟ್ಟೆಗಳು

ಅಕಾಶಮಲ್ಲಿಗೆಯ ಹೂಗೊಂಚಲು ....

ಯಾವವೂ ಕಾಣದೆ, ಮನೆಯೊಳಗಿದ್ದ

ನನ್ನ ಮಗಳ ಕೈಯ್ಯಲ್ಲಿನ ತಿಂಡಿಪೊಟ್ಟಣ

ಮಾತ್ರ ಕಾಣುತ್ತಿತ್ತು.............



ಪಂಚೇಂದ್ರಿಯಗಳಿಗಿಂತ ಹೊಟ್ಟೆಯ ಕರೆ

ಮತ್ತು

ಎಲ್ಲ ಆಸೆಗಳಿಗಿಂತ ಹಸಿವಿನ ಮೊರೆ

ಬಲಶಾಲಿಗಳೆನಿಸಿದವು.



೪೩) ನಿನ್ನ ಹುಟ್ಟುಹಬ್ಬಕೆ



ನಿನ್ನ ಹುಟ್ಟುಹಬ್ಬ ಇಂದು,

ಏನು ಉಡುಗೊರೆ ಕೊಡಲಿ" ಎಂದರೆ,

"ನಿನ್ನ ನಗು" ಎಂದೆಯಲ್ಲಾ,

ಇದಕಿಂತ ಬೇರೆನಗೆ ಬೇಕೆ?

ಏನು ಸಿಹಿ ಮಾಡಲಿ ಎಂದರೆ,

"ನಿನ್ನ ಮುತ್ತು" ಎಂದೆಯಲ್ಲಾ,

ಇದಕಿಂತ

ರಸಿಕತೆಯೆನಗೆ ಬೇಕೆ?

ದೇವರ ಬಳಿಸಾರಿ ನಮಿಸುವಾ ಎಂದರೆ,

ನಮ್ಮೊಲವಲ್ಲೇ ಆತನಿರುವ ಎಂದೆಯಲ್ಲಾ,

ಇದಕಿಂತ ಧನ್ಯತೆಯೆನಗೆ ಬೇಕೆ?

ವಯಸು ಮುಂದೋಡುತಿದೆ ಎಂದರೆ,

ಹುಡುಗಿ ನೀನಾಗಿರೆ, ನಾನೆಂದೂ ಯುವಕನೇ ಎಂದೆಯಲ್ಲಾ

ಇದಕಿಂತ ಮಾತೆನಗೆ ಬೇಕೆ?

ಹೊಸದಿರಿಸು ಧ ರಿಸೆಂದಿತ್ತರೆ,

ನಿನ್ನ ಘಮ ಬೆರೆತಾಗ ಹಳತೂ ಹೊಸತೆಂದೆಯಲ್ಲಾ,

ಇದಕಿಂತ ಮೆಚ್ಚುಗೆಯೆನಗೆ ಬೇಕೆ?

ಹೀಗೇ.......

ನನ್ನದಕೂ ನೀನೇ ಕೊಟ್ಟು, ನಿನ್ನದರಂದೂ ನನಗೇ

ಸೊಗವೆರೆಯುತಿರುವ ನೀನು,

ನನ್ನ ದೊರೆಯಲ್ಲ, ಪ್ರೀತಿಯ ಧಾರೆ.

ನನ್ನ ದೇವರಲ್ಲ, ನೆಮ್ಮದಿಯ ತವರು.



೪೪) ಬಸುರಿಬೆಕ್ಕು

ಬಸುರಿ ಬೆಕ್ಕಿನದು ಬಾಗಿಲಲ್ಲಿ ನಿಂತು ಕೂಗಾಟ

ಒಳಗವಳಿಗೆ ಬಿಡದೆ ಹಳೆಯ ನೆನಪುಗಳ ಕಾಟ.

ಒಡಲಲೇನೋ ಮೊಳೆತದ್ದು ಮೊದಲು ತಿಳಿದಾಗಿನ ಪುಳಕ

ತನ್ನದರೊಡನೆ ಅದರದೂ ಸೇರಿದಾಗಿನ ಉಸಿರ ತಾಳಮೇಳ,

ಒಡಲೊಳಗಿನ ಇರುವನು, ತನ್ನರಿವಿಗು ಹರಿಸಿದ ಮಿಸುಕಾಟ.

ಸದ್ದಿಗೋ ಹಸಿವೆಗೋ, ಬೆಚ್ಚಿ ಒದ್ದ ಪುಟ್ಟಕಾಲ ಸಂದೇಶ.

ಹೀಗೆ..........

ನೂರುನೋವೊಳಗೂ ಮುದ ನೀಡಿದ್ದ ನಿರೀಕ್ಷೆ, ಕೊನೆಗೆ ತಂದ ನಿರಾಸೆ.

ಚೈತನ್ಯದ ಚಿಲುಮೆಯಂದು ಹೊರಬಂದಾಗ ನಿಶ್ಚೇತನವಾದ ಅಸಹ್ಯಗಳಿಗೆ.

"ಬೇಡಮ್ಮಾ, ಕದ ತೆರೆಯಬೇಡ, ಇಲ್ಲೆ ಮರಿ ಮಾಡಿ, ಅದರಾಸೆಗೆ

ಕಂಟಬೆಕ್ಕು ವಾಸಹೂಡಿ, ಮರಿಯ ಕಾಯ್ವ ಸಹವಾಸ ಬೇಡವೆಮಗೆ"

ಮನೆಯೊಳಗಿಂದ ಮನೆಯೊಡತಿಯ ನಕಾರದ ಆದೇಶ

ಮನದೊಳಗಿಂದ ಕದತೆರೆಯೆಂಬ ತುಂಬು ಭಾವಾವೇಶ.

ಕೊನೆಗೊಮ್ಮೆ.........

ತುಂಬುಕಂಗಳಿಂದ ಒಳಗೆ ಸ್ವಾಗತಿಸಿ ಹೇಳಿದಳು

"ಬಾರೆ ಗೆಳತಿ, ತಾಯ್ತನದ ನಿನ್ನ ಕನಸು ಚೂರಾಗದು,

ನಿಶ್ಚಿಂತಳಾಗಿರು ಇಂದಿನಿಂದ ನಿನ್ನ ಮರಿಯು ನನ್ನದು"



೪೫)

೧) ಬೀಜವೇ, ನೆಲವೇ?



ನಾ ನಿನ್ನೊಳಗೆ ಬಿತ್ತಿದ್ದು ಗೊಡ್ಡುಬೀಜವೇನೋ,

ಮೊಳಕೆಯೊಡೆಯಲೇ ಇಲ್ಲ ನೋಡು.

ಆದರೆ ನೀ ಬಿತ್ತಿದ್ದು ಮೊಳೆತು,

ನನ್ನೊಳಗಿಲ್ಲಿ ಹಚ್ಚಹಸುರಾಗಿದೆ.

ಬೀಜದ ಸತ್ವ ಪ್ರಶ್ನಿಸಿದ್ದು ನನ್ನ ಆತ್ಮವಿಮರ್ಶೆ.

ಆದರೆ ನನ್ನದೇ ಆತ್ಮವಿಶ್ವಾಸ ಹೇಳುತಿದೆ,

ಬೀಜ ಮೊಳೆಯುವುದಕ್ಕೆ ನೆಲವೂ ಹಸನಿರಬೇಕು.



೨) ಮೌನದ ಬಿಸಿ



ಭಾವ ಬಳ್ಳಿಯಲಿ ಅರಳಿಹ ಸ್ನೇಹಕುಸುಮವೊಂದು

ಕಂಪು ತಾರದೆ ನಿನಗೆ ವಾಸನೆಯೆನಿಸಿದ್ದು ಯಾಕೆ?

ನೀ ನನ್ನತ್ತ ತೋರಿದ ಬೆಟ್ಟು,

ಅದರತ್ತ ತಲುಪಿದೆ ಕುಡುಗೋಲಾಗಿ.

ಗುಬ್ಬಿಗೆ ಬ್ರಹ್ಮಾಸ್ತ್ರಬೇಕಿಲ್ಲ,

ಈ ಬಳ್ಳಿ ಕುಯ್ಯಲು ಅಷ್ಟೆಲ್ಲ ಬೇಕಿಲ್ಲ,

ನಿನ್ನ ಉದಾಸೀನವೇ ಸಾಕು,

ಈ ಹೂವ ಬಾಡಿಸುವುದಷ್ಟು ಕಷ್ಟವಲ್ಲ,

ನಿನ್ನ ಮೌನದ ಬಿಸಿಯೇ ಸಾಕು.





೪೬) ಹಸಿರು ನೆನಪಿಸಿದ ಕಪ್ಪು



ಹಸುರು ರತ್ನಗಂಧಿಯ ಗಿಡದ ಮೇಲೆ

ಹಸುರು ಗಿಣಿಗಳ ಸಾಲು.

ಎರಡರ ಆತ್ಮಮಿಲನವಾದಂತೆ

ಅಲ್ಲಿರಲಿಲ್ಲ ಪ್ರತ್ಯೇಕತೆಯ ನೆರಳು

ಅಲ್ಲಿನ ಒಟ್ಟು ಸಾರಾಂಶ ಹಸುರೇ ಆಗಿತ್ತು.

ಹಸುರ ನೋಟದಲೇಕೆ ಮನಸು ಕಪ್ಪು ಕಾಣುತಿದೆ?

ತಪ್ಪುಗಳ ರಾಶಿಯಿದ್ದಾಗಲೂ ಹೀಗೆಯೇ

ನಿನ್ನದು ನನ್ನದೆಂದು ವಿಂಗಡಿಸಲಾಗದು

ನನ್ನದು ನಿನ್ನದ್ದ, ನಿನ್ನದು ನನ್ನದ್ದ ಇಮ್ಮಡಿಸಿ

ಅಲ್ಲೂ ಸಾರಾಂಶವೊಂದೇ ಮೂಡುವುದು,

ಆದರದರ ಬಣ್ಣ ಕಪ್ಪು.

ಕಣ್ಣ ಕಣ್ಣೀರಲ್ಲಿ ಕೆಂಪಾಗಿಸುವ ಕಪ್ಪು

ಎದೆಯ ಹಸಿರ ರಕ್ತ ಬಗಿಯುವ ಕಪ್ಪು.



೪೭)

೧) ಮರೆಯದಿರು



ನನಗೆ ತಾಗಲೆಂದೇ ನೀ ಕಳಿಸಿದ್ದು

ಬಂದು ತಲುಪಿದೆ, ಧನ್ಯವಾದಗಳು.

ಅಲ್ಲಿ ಬಿಸಿಯಾಗಿಯೇ ಹುಟ್ಟಿದ್ದರೂ,

ನನ್ನ ತಲುಪಿದಾಗ ಬಿಸಿಯಿರಲಿಲ್ಲ.

ಅಲ್ಲಿ ಚುಚ್ಚಲೆಂದೇ ಹೊರಟ ಬಾಣವಾದರೂ,

ಇಲ್ಲಿ ತಲುಪಿದ್ದು ಹೂವ ಹಿತಸ್ಪರ್ಶವಾಗಿ.

ಅಲ್ಲಿ ಸಿಟ್ಟು ಅದಕವಳಿಯಾಗಿ ಹುಟ್ಟಿದ್ದರೂ,

ಇಲ್ಲಿಗದು ನನ್ನನೆಮ್ಮದಿಯ ಜೊತೆ ಬಂದಿತ್ತು.

ಕೋಪಿಸಿಕೊಂಡಾದರೂ ಸರಿ, ಜೀವವೆ

ನೆನೆಯುತಿರು, ತೊರೆಯದಿರು,

ತೊರೆದು, ಮರೆಯದಿರು.



೨) ನಡೆದೀತೆ?



ಬಾಯಾರಿದ ಧರೆಯ ತಣಿಸುವಾಸೆಯಲಿ

ಮೋಡ ಹನಿಯಾಗತೊಡಗಿದ್ದಾಗಲೇ

ಅಕಾಲಗಾಳಿ ಬೀಸಿ ಮೋಡವ ಹೊತ್ತೊಯ್ದಿತೆಂದು

ಹಿಂದೆಯೇ ಮಳೆತುಂಬಿ ತಂದ ಇನ್ನೊಂದಕ್ಕೆ

ಧರೆ ಒಡ್ಡಿದ್ದ ಸೆರಗ ಮುಚ್ಚಿ ನಿರಾಕರಿಸಿದರೆ

ಅದರದೂ, ಅದರ ಸಂತಾನದ್ದೂ ಬಾಳು ನಡೆದೀತೆ?



೪೮) ಚೌತಿಯ ಚಂದ್ರ



ಅಂದು ಚೌತಿ, ನನ್ನಮ್ಮ ನನ್ನ ಪುಟ್ಟಿಗಂದಳು

"ಬಾ ಒಳಗೆ, ಚಂದ್ರನ ನೋಡಬೇಡ."

"ಯಾಕಜ್ಜೀ..?"-

ಪುಟ್ಟಿಯ ಪ್ರಶ್ನಾಮಾಲಿಕೆಯ ಹೊಸಮುತ್ತು.

ಗಣಪತಿಯ ಕತೆಗೆ ತಣಿಯದ ಪ್ರಶ್ನೆ ನನ್ನತ್ತ.

"ಆಮೇಲೆ ಹೇಳ್ತೇನಮ್ಮಾ" ಅಂದ

ನಾನೀಗ ಯೋಚನೆಯ ಕೂಪದೊಳಗೆ.

ಅದೇ ಸೊಗವೆರೆಯುವ ಚಂದ್ರ, ಅದೇ ಆಗಸ,

ಅದೇ ರಾತ್ರಿ, ಅವೇ ಕಾಂಬ ಕಂಗಳು.

ನಿನ್ನೆ ನಾಳೆಗಳಲವನು ಕಂಗಳ ಸೊಬಗು.

ಚಿಂತನೆಯ ಬದಲಾದ ಹಿನ್ನೆಲೆಯಲ್ಲಿ

ಇಂದು ಮಾತ್ರ ನೋಟಕೂ ನಿಷಿಧ್ಧ.

ಪ್ರಶ್ನೆಯಲಿ ಕಳೆದು ಹೋಗಿದ್ದೆ,

ಅಂಗಳದಿ ನಿಂದು ಅವನನೇ ನೋಡುತಿದ್ದೆ

ಅಮ್ಮ ಅಪವಾದದ ಭಯವೆಬ್ಬಿಸಿದಳು

ನಾನಂದೆ, "ನಾಳೆ ಕಂಡವರಾರು?

ಅಪವಾದವೆದುರಿಸಲು ನಾ, ಎಸಗಲು ಅವರು

ಇಲ್ಲದೆಯೇ ಹೋಗಬಹುದು, ಆದರೆ

ಇಂದಿನ ಚಂದ್ರ, ಮತ್ತವನ ಚೆಲುವೇ ನಿಜ

ನೋಡು ಬಾ ನೀನೂನೂ.



೪೯) ಮಾತುಮುತ್ತುಗಳು



೧)

ನಾ ನಿಂತ ನಿಲುವಲ್ಲಿ

ನನ್ನ ಪಾದದಡಿಯ ನೆಲದರಿವು ನನಗಷ್ಟೇ ಗೊತ್ತು.

ಹೂವೆಂದೋ ಇಲ್ಲ ಮುಳ್ಳೆಂದೋ

ನೀವು ಊಹಿಸಬಹುದು, ನಿಜ ಕಾಣಲಾಗದು

೨)

ಹಗಲುರಾತ್ರಿಗಳಂತೆ ಮಾತುಮೌನಗಳಿಗೂ,

ಕಾಲನಿಗದಿಯುಂಟು, ಕಾರ್ಯಕಾರಣಗಳುಂಟು.

ಎಷ್ಟು ಬಯಸಿದರೂ ಅವು ಅದಲುಬದಲಾಗವು.

ಹಾಗೆಂದು....

ದಿನ ಅಥವಾ ಬಾಯಿ ನಮ್ಮದಲ್ಲವೆನ್ನಲಾಗದು.



೫೦) ಚುಟುಕುದನಿ

೧)

ಕಂದನೆಂದೊಡನೆ ಅವಳ ಕಣ್ಮನಗಳಾವರಿಸುವ ನೀನು

ಬೇರ್ಯಾರೂ ಅಲ್ಲಿರಬಾರದೆಂದು ಅವಳ ಬಂಜೆಯಾಗಿಸಿದೆಯಾ?

೨)

ಸುಲಭವಾಗಿ ಅಕ್ಷರಗಳಾಗುವ ಈ ಎಲ್ಲಾ ಭಾವನೆಗಳು

ಮಾತಾಗುವ ಎಷ್ಟೋ ದಿನದ ಕನಸು ಕನಸಾಗಿಯೇ ಉಳಿಯಿತು.

೩)

ನೀ ನನ್ನ ಪ್ರೇಮಿಸಿದೆ ಎಂದರಿತಂದೇ ನಾನಿಲ್ಲವಾದೆ

ನಿನ್ನೊಳಗೇ ಕಳೆದುಹೋದದ್ದು ನಿನಗೇ ಸಿಕ್ಕದ ನೋವೇ?

೪)

ಗಾಢಮೋಡದ ಜೊತೆ ಬಂದು, ಭ್ರಮನಿರಸನ ಮಾಡುವ ಇತ್ತೀಚಿನ ಮಳೆಯಂತೆ

ಹೇಳಲೇಬೇಕೆನಿಸಿದ್ದು ಧಾವಿಸಿ ಬಂದು ಗಂಟಲಲ್ಲೇ ಕೆಲ ಹನಿಸುರಿಸಿ ಮೌನವಾಯಿತು.

೫)

ದೇವರಿಲ್ಲ ಎನ್ನುವವರೇ, ನಾಳೆ ಬಯಸಿದಲ್ಲೆಲ್ಲೂ ಸಾಂತ್ವನವಿಲ್ಲವಾದಾಗ,

ಅವನ ಮೌನಭರವಸೆಗೇ ನೀವೂ ಕಿವಿಯಾಗುವುವಿರಿ, ಒಪ್ಪಲಾರಿರಿ ಅಷ್ಟೇ.

೬)

ಸಿಹಿ ತಿನ್ನಗೊಡದ ಕಾಯಿಲೆಗೆ ಅಳುತ್ತಾ ಆ ದೊಡ್ಡ ಮನೆಯೊಡತಿ

ಹಸಿವೆ ತಾಳದೆ ಸತ್ತ ಕಂದಮ್ಮನ ಮಣ್ಣುಮಾಡಲು ಚಿಲ್ಲರೆ ಕಾಸಿತ್ತಳು.



೫೧)

೧)ಆತ್ಮದ ಬಂಧ



ಇಲ್ಲವೆನಿಸಿದುದರ ಕೊರಗಲ್ಲಿ ನೀ ಸವೆಸಿದೆಲ್ಲ ಕ್ಷಣಗಳು

ಇಲ್ಲವಾಗದೆ ಮರೆಯಾದುದಕೆ ಮಣಭಾರದ ಹೊರೆಯೇ ಹೌದು

ಆತ್ಮಗಳೆರಡರ ಬಂಧ ಜನ್ಮದಿಂದ ಜನ್ಮದವರೆಗೆ.

ಅದೆಲ್ಲಿಗೂ ಹೋಗಲಾರದು,

ಅಲ್ಲೇ ನಿನ್ನೊಳಗಿಂದ ನಿನ್ನನೇ ವೀಕ್ಷಿಸುತಿಹುದು.

ನಿನ್ನ ಕಣ್ಣೀರಿಗೆ ಅತ್ತು, ನೀ ನಗುವಾಗ ನಗುತಿಹುದು.



೨) ನಾ ಒಳ್ಳೆಯವಳು



ಆಡದೆ, ಒಳ್ಳೆಯವಳೆನಿಸುವ ನಿಟ್ಟಿನಲ್ಲಿ

ಕಳಕೊಂಡ ನೆಮ್ಮದಿಯ ಕ್ಷಣಗಳ ಹೋಲಿಕೆಯಲ್ಲಿ

ಪಡಕೊಂಡ ಕೆಡುಕೆನಲಿಲ್ಲದ ಸಮಾಧಾನ

ಬರೇ ಸ್ವಲ್ಪ, ಒಪ್ಪುವ ಮಾತೇ.

ಆದರೂ..................

ನನ್ನವರಲಾಗಲಿ, ಅದಲ್ಲದವರಲಾಗಲಿ

ತಪ್ಪಿಲ್ಲದೆ ಅನುಭವಿಸುವಾಗಲೂ

ಆಡಿ ಕೆಟ್ಟವಳೆನಿಸಿಕೊಳುವ ಧೈರ್ಯವಿಲ್ಲ.



೫೨) ಹೀಗೆರಡು ಪ್ರಶ್ನೆಗಳು



ಹಗಲೆಲ್ಲ ಜೊತೆಗಿದ್ದು ಸಾಕಷ್ಟು ಸುಖಿಸಿ,

ಪ್ರತಿರಾತ್ರಿಯೂ ಇಲ್ಲಸಲ್ಲದ ಕಾರಣವೊಡ್ಡಿ

ದೂರಾಗುವ, ಜಗದ ಇನ್ನೊಂದೆಡೆಗೆ

ಅದೇ ಸುಖವರಸಿ ಹೋಗುವ ರವಿಗಾಗಿ

ಮತ್ತೆ ಪ್ರತಿದಿನ ಬೆಳಿಗ್ಗೆ ಕಾಯುವ ಈ ಕಮಲದ್ದು

ಪ್ರೀತಿಯೆಂಬ ತಾಳ್ಮೆಯೇ ಅಥವಾ

ಪ್ರೀತಿಯೆಂಬ ಪೆದ್ದುತನವೇ ?!



ತನ್ನಲೇ ಪ್ರಾಣವಿರಿಸಿಕೊಂಡ ಇಳೆಗೆ

ಭಾನು ಉರಿಯಿತ್ತು ನೋಡುವ,

ತನ್ನಲೇ ನಲಿವನಿರಿಸಿದ ಚಕೋರಕೆ ಚಂದ್ರ

ಮಾಸವೊಂದರ ಕಾಲ ಕಾಣದೆ ಸತಾಯಿಸುವ,

ಈ ಉಪೇಕ್ಷೆ ................

ಇಳೆಯ ಮೇಲೆ ಭಾನುವಿನ,

ಚಕೋರನ ಮೇಲೆ ಚಂದ್ರಮನ,

ನಂಬಿಕೆಯ ಫಲಿತಾಂಶವೇ?





೫೩) ಗಿಡದ ಮೋಸ



ಅಲ್ಲೊಂದು ತೋಟ, ಒಳಗೆ ಹೂವಿಲ್ಲದ ಒಂದು ಹೂಗಿಡ.

ಹೂಬಿಡುವಷ್ಟು ಬೆಳೆಸದೆ ಆಕಾರಕಾಗಿ ಕತ್ತರಿಸುವ ಮಾಲಿ

ಅಲ್ಲಿ ನೋವು ಎಂದಿನಂತೆ ಸೆಳೆಯಿತು,

ದಿನವೂ ನಾ ಮುಟ್ಟಿ ಸ್ಪಂದಿವುದು ಶುರುವಾಯಿತು

ಮೊದಲೆಲ್ಲ ನಕ್ಕು ಅಲುಗಾಡಿದ್ದು ಮುಂದೊಮ್ಮೆ ಮುಳ್ಳಲಿ ಚುಚ್ಚಿತು

ಹೂವಾಗದ ಜನ್ಮ ಮುಳ್ಳಾದಾಗ ಚುಚ್ಚುವುದೇ ಅದರ ಧರ್ಮ-

ನನ್ನ ವಿಶ್ಲೇಷಣೆ.

ಮರುದಿನವೂ ಚುಚ್ಚಿದಾಗ ಎಲ್ಲೋ ಸಣ್ಣ ನೋವು

ಹಲವು ಗಾಯಗಳ ನಂತರ ಮನಒಲ್ಲದಿದ್ದರೂ

ಪರೀಕ್ಷೆಗಾಗಿ ದೂರದಿಂದ ವೀಕ್ಷಿಸಿದೆ.

ನಾ ಬಾಗಿ ಮುಟ್ಟಿದಾಗ ಮಾತ್ರ ಮುಳ್ಳುಜಾಗೃತ

ನಾನಿರದಾಗ ಗಿಡದ ನೋವಿನದೇ ಪ್ರದರ್ಶನದಾಟ

ಪ್ರೀತಿಯ ತಾಳ್ಮೆ ಗುಲಾಮತನವೆಂದುಕೊಂಡು

ತಮಗೆ ಮಿಡಿವ ಜೀವಗಳ ಚುಚ್ಚಲಿಕೇ ಮುಳ್ಳನೇಳಿಸುವದ

ನಾನೊಪ್ಪುವುದಿಲ್ಲ, ಆ ವ್ಯಕ್ತಿತ್ವಕ್ಕಿನ್ನು ಮಿಡಿಯುವುದಿಲ್ಲ.

ಈಗ ನಾ ಆ ತೋಟಕೇ ಹೋಗುವುದಿಲ್ಲ.





೫೪)

೧) ಬರೆವವರ ತುರ್ತು



ಹೂವು ಹಕ್ಕಿ ಬಾನು ಚುಕ್ಕಿಗಳು

ನೋವುನಲಿವು ಮೋಸದ್ರೋಹಗಳು

ಮಿಡಿತ ತುಡಿತ ಸರಸವಿರಸಗಳು

ಪ್ರೀತಿಪ್ರೇಮ ನಾಡುನುಡಿಗಳು

ಇವಿಷ್ಟೇ ಕವನವಾಗುವವೆಂದುಕೊಂಡಿದ್ದೆ.

ಹಸಿವೆ ಸಾವು ದಾಸ್ಯ ವಿಷಾದಗಳೂ

ಮಹಾಕಾವ್ಯಗಳಾಗುವುದ ಕಂಡು

ಬರೆಯಹೊರಟವಗೆ ಆಳಕಿಳಿಯುವ

ಮತ್ತು

ತೇಲುದೃಷ್ಟಿಯಲಿ ನೋಡಲಾಗದ

ಅನಿವಾರ್ಯತೆಯ ಅರಿವಾಯಿತು.



೨)ನೋಟ ಮತ್ತು ದೃಷ್ಟಿ

ಕಾಂತಿ ಕಾಣಬೇಕಾದರೆ ಕಾಂತಿಯರಸೊ ದೃಷ್ಟಿ ಬೇಕು

ಹೂಗಿಡದಲ್ಲಿ ಹೂವೂ ಇದೆ, ಮುಳ್ಳೂ ಇದೆ

ಅಂದೆಂದೋ ಚುಚ್ಚಿದ ಮುಳ್ಳ ನೆನೆಯುತ್ತಾ

ಬಳಿಸಾರಿದರೆ, ಭಯವೇ ಆಗುವುದು,

ಕಣ್ಣು ಹೂವ ನೋಡಿದರೂ, ದೃಷ್ಟಿಯಲಿ ಮುಳ್ಳೇ ಇದ್ದು,

ಹೂವ ತಡವಲಾಗದು, ಕಣ್ಮುಚ್ಚಿ ಮೈಮರೆಯಲಾಗದು



೫೫) ಪ್ರೀತಿ ನಾಪಾಸಾಗದು



ಪ್ರೀತಿಯ ಪರೀಕ್ಷಿಸುವುದು ಸಲ್ಲ,

ಅದು ನಾಪಾಸಾಗದು, ಆದರೆ ನಾವಷ್ಟೇ.

ಸೋಲುವ ಭಯವದಕಿಲ್ಲ.

ಪ್ರೀತಿಯೇ ಆದರೆ ಅಲ್ಲಿ ಶರತ್ತಿರುವುದಿಲ್ಲ,

ನಿರೀಕ್ಷೆ ಹುಸಿಯಾದರೆ, ಆ ಗಳಿಗೆಗಷ್ಟೇ,

ಪ್ರೀತಿ ಹುಸಿಯಾಗುವುದಿಲ್ಲ.

ರಾಮನೇ ಪರೀಕ್ಷಿಸಿ ಸೋತನಲ್ಲ!?

ಋಣಾನುಬಂಧವಿದ್ದಲ್ಲದು ಇರುವುದಷ್ಟೇ,

ಅದಕೆ ದೇವ- ಮಾನವರ ವ್ಯತ್ಯಾಸ ಗೊತ್ತಿಲ್ಲ.

ದಿನಕೊಮ್ಮೆ ಮರೆಯಾಗುವ ಸೂರ್ಯಗೆ ಸಾವಿದೆಯೇ?

ಹೊರಗಣ್ಣ ಮುಚ್ಚಿ ಒಳಗಣ್ಣಲದ ಕಾಣುವಾ.

ನಮ್ಮೊಳಗೇ ಹುಟ್ಟಿದ್ದು, ನಮ್ಮದೇ ಎಂದು ನಂಬುವಾ





೫೬) ಪ್ರೀತಿ ಕಾಣಿಸದು



ಪ್ರೀತಿ ಗಾಳಿಯಂತೆ, ಕಾಣಿಸದು,

ಉಸಿರಾಡಿಸುವುದು.

ಪ್ರೀತಿ ಕಂಪಿನಂತೆ, ಕಾಣಿಸದು,

ಮೈಮನ ತುಂಬುವುದು.

ಪ್ರೀತಿ ಖುಶಿಯಂತೆ, ಕಾಣಿಸದು,

ಮೈನವಿರೇಳಿಸುವುದು.

ಪ್ರೀತಿ ದೈವದಂತೆ, ಕಾಣಿಸದು,

ಬೀಳದಂತೆತ್ತುವುದು.

ಅದು ಹರಕೆಗೆ, ಹೊಗಳಿಕೆಗೆ, ಕಾಣಿಕೆಗೆ, ಹಾಸಿಗೆಗೆ

ಇಂಥವ್ಯಾವುವಕ್ಕೂ ಒಲಿಯದು.

ಅದೊಲಿಯುವುದಾದರೆ ನಂಬಿಕೆಗೆ, ನಂಬಿಕೆಗೆ

ಮತ್ತು ನಂಬಿಕೆಗೆ ಮಾತ್ರ





೫೭) ಬಾಳೆಂಬ ಕನ್ನಡಿ



ಬಾಳು ಕನ್ನಡಿಯಂತೆ

ನಮ್ಮೊಳಗ ನೇರ ಬಿಚ್ಚಿಡುವುದು

ಸೊಗಸಲ್ಲಿದ್ದರೆ ಸೊಗವ ,ಕೆಡುಕಿದ್ದರೆ ಕೆಡುಕ

ಪ್ರೇಮವಿದ್ದರೆ ಪ್ರೇಮವ, ದ್ವೇಷವಿದ್ದರೆ ದ್ವೇಷವ

ತಂದು ಮುಂದಿಡುವುದು.

ನಿನ್ನ ಕಾಣಿಸಲೆಂದು ಅವನ ಮುಂದದನಿಟ್ಟರೆ,

ಅಲ್ಲಿ ತನ್ನೊಳಗ ಕಂಡು ನಿನ್ನದೆಂದೆಣಿಸುವ

ಅವರಿವರ ಮಾತು ಬಿಡು,

ಮುಂದಿರುವ ಕನ್ನಡಿಯ ಮಾತ್ರ ನಂಬು.

ಮೆಚ್ಚುವಂಥದ್ದಿದ್ದರೆ ಬೆಳೆಸು

ಇಲ್ಲದಿದ್ದರೆ ಕಾಯಕಲ್ಪದಿ ಮೂಡಿಸು

ಅದನೂ, ನಿನ್ನನೂ ತಿಕ್ಕಿ ಬೆಳಗಿಸು

ಆಗಲೊಮ್ಮೆ...........

ಸುಂದರ ಬಿಂಬ ಮೂಡದಿದ್ದರೆ ಕೇಳು



೫೮) ದಿಟ್ಟ ನಿಲುವು



ಊರ ದೇವರ ಜಾತ್ರೆ,

ಉತ್ಸವ ಮೂರ್ತಿಯ ಮೆರವಣಿಗೆ

ನನ್ನ ಗಿಡವಂದೇ ಅರಳಿಸಿದ ಅಚ್ಚಬಿಳಿ ಗುಲಾಬಿಯ

ಮೂರ್ತಿಗರ್ಪಿಸೊ ಆಸೆಯಲಿ ಹಿಡಿದು ಕಾದಿದ್ದೆ.

ಹೂವು ಕೊಸರಿದಂತೆ, ಒಲ್ಲೆ ನಾ ಎಂದಂತೆ....!

ಕೈ ಸಡಲಿಸಿದೆ, ಬಿತ್ತು ನನದೆ ಪಾದದ ಮೇಲೆ.

"ದೇವಸನ್ನಿಧಿಗಿಂತ ಈ ಪಾದ ಹಿತವೆನಿಸಿತೇ?!!!"

ಹೂವು ಮಾತಾಡಿತು.....

"ಆ ಮೂರ್ತಿಯೇ ಕಾಣಿಸದಷ್ಟು ಹೂವಲ್ಲಿದೆ.

ಈಗ ಮೂರ್ತಿ ನನ್ನ ಗಮನಿಸದು,

ಬರೇ ಸಹಿಸಿ ಹೊರುವುದು.

ನೀನೆರೆದ ನೀರು ನನ್ನ ನೆತ್ತರಾಗಿಹುದು

ನೀನೆರೆದ ಪ್ರೀತಿ ನನ್ನ ಚೆಲುವೆ ಆಗಿಹುದು

ನನ್ನಿರುವೇ ಇಂದು ನಿನ್ನ ಸಂಭ್ರಮವಾಗಿಹುದು

ನನ್ನ ಸಹಿಸಿಕೊಳುವ ಆ ಗದ್ದುಗೆಗಿಂತ,

ಸಂಭ್ರಮಿಸುವ ನಿನ್ನ ಪಾದುಕೆಯೇ ಮೇಲು"

ಪುಟ್ಟ ಹೂವ ನಿಲುವು ಬೆಟ್ಟದಷ್ಟು

ದಿಟ್ಟವೆನಿಸಿತು, ದಿಟವೂ ಹೌದನಿಸಿತು.



೫೯) ಕ್ಷಮಿಸು ಜೀವವೇ....



ನಾನಾಗಲೇ ಬಂದಾಯ್ತು,

ನನ್ನದೆಲ್ಲವ ನಿನ್ನದಾಗಿಸಿಯಾಯ್ತು

ನನ್ನ ನಡೆ ಸಪ್ಪಳ ಮೆತ್ತಗಿತ್ತೇನೋ,

ಇಂದಿನವರೆಗೂ ನೀ ಕೇಳದಾದೆ.

ಕ್ಷಮಿಸು ಜೀವವೇ........

ನೀನಾಗ ಕಾಯುತಿದ್ದುದು ಅದಕಲ್ಲವೇನೋ

ನಾ ಬಾಗಿಲದೂಡಿ ಒಳನಡೆದದ್ದೂ ಸರಿಯಲ್ಲವೇನೋ

ಈಗ ನೀನಿಲ್ಲಿಂದ ಅಲ್ಲಿಗೆ ಕರೆಯುತಿರುವೆ,

ಬರಲೇನೂ ಇಲ್ಲಿಂದು ಉಳಿದಿಲ್ಲ,

ಅಲ್ಲಿ ಹಳತಾಗಿರುವುದ ನೀ ಕಾಣುತಿಲ್ಲ.



೬೦)ಹೀಗೆರಡು ದಾರಿಗಳು



ತಿರುವಿರದ, ಕವಲಿರದ ದಾರಿಯ ಪಥಿಕ,

ನೇರ ನಡೆಯುತಿರಬೇಕು

ದಾರಿ ತನ್ನಷ್ಟಕ್ಕೆ ಕೊನೆಯಾಗುವ ಮೊದಲು

ಮನದಾಸೆಗೆ ದಿಕ್ಕು ಬದಲಿಸಿದರೆ

ದಾರಿಗಳೇ ಇರದ ಕಾಡುಪಾಲು,

ಇಲ್ಲ,

ಕೊನೆ ಕಾಣದ ಕಣಿವೆ ಪಾಲು.



ಮುನ್ನಡೆಯುವವರು-

ಪಾಲಿಗೆ ಬಂದದ್ದು ಹೇಗಿದ್ದರೂ ಸರಿ

ದಾರಿ ಹೋದಂತೆಯೇ ನಡೆಯುತಿರಬೇಕು.

ಅದ ಬಯಸದವರು

ಹಿಂತಿರುಗಬೇಕಾದರೆ ಅದೇ ದಾರಿಯಲ್ಲ,

ವಿಧಿತೋರಿದ್ದಲ್ಲದ ಆರಿಸುವ ಧೈರ್ಯವಿರಬೇಕು



೬೧) ಪಿಸು ಮಾತುಗಳು



೧)

ದೇಹವ ನಂಬುವದಕ್ಕೊಂದು, ಮನಸ ನಂಬುವುದಕ್ಕೊಂದು

ಹೀಗೆ ಪ್ರೇಮಕ್ಕೆರಡು ವ್ಯಾಖ್ಯೆಗಳಾದಾಗ ಹೃದಯ ಪೆಚ್ಚಾಯಿತು.

೨)

ನೀ ಮುಂದೆಯೇ ಸಾಗುತಿರು, ಗುರಿ ನಿನ್ನ ಸಮೀಪಿಸಲಿ

ಹಿಂದೆಯೇ ನಾನಿದ್ದೇನೆ, ಯಾಕೆಂದರೆ, ನೀ ಈಗ ನನ್ನ ಗುರಿ

೩)

ನೋಯಿಸಿದಕೆ ಕ್ಷಮಿಸು,

ನೋವಿಳಿಸಲೆಂದೇ ಬಂದೆ, ದಾರಿಯಲಿ ನಗು ಹೆಕ್ಕಿ ತಂದೆ

ಅದರ ಕಂಪಲ್ಲಿ ನಿನ್ನ ನಿರಾಸೆ ಇದ್ದುದು ಕಾಣಲೇ ಇಲ್ಲ.

೪)

ನಾನಂಥದ್ದೇನೂ ಮಾಡದಾದೆ, ನಿನ್ನ ದೂರೂ ಸರಿಯೆ.

ನನಗಾಗದ್ದ ನಿನ್ನಿಂದ ಬಯಸಲಾರೆ, ಆದರೆ

ಒಮ್ಮೆ ಯೋಚಿಸುವೆಯ, ನೀ ನಾನಾಗಿದ್ದರೆ.....?



೬೨) ಆಗ ನಾನಿರುವುದಿಲ್ಲ.....



ನನ್ನ ಅಳಿಸಬೇಕೆಂದ ನಿನ್ನ ಮಾತು ಕೇಳಿತು

ಯಾರೆಂದು ನೀ ಹೇಳಿದ್ದಿರಬಹುದು,

ನಾ ಕೇಳದಾದೆ.

ನನ್ನ ನಾ ಅಳಿಸಲಾರೆ- ಯಾಕೆಂದರೆ,

ನೀ ನನ್ನೊಳಗಿದ್ದೀಯಲ್ಲಾ....!

ಬಹುಶಃ ನಿನ್ನಿಂದಲೂ ಅದಾಗದು- ಯಾಕೆಂದರೆ,

ನಾನಿರುವುದು ನಿನ್ನ ಹಣೆಬರಹದಲ್ಲಿ (ನೀ ನನದರಲ್ಲಿ)

ಮತ್ತು ಬರೆದವನೂ ಹಣೆಬರಹವಳಿಸಲಾರ.

ನಿನಗೊಂದು ಹಿಡಿ ತೃಪ್ತಿಯ ನಗು ತರುವುದಾದರೆ,

ಎಂದಿನಂತೆ ನಿನ್ನ ಯತ್ನಕೆ ಶುಭ ಹಾರೈಸುವೆ.

ಪವಾಡನಡೆದು ಮುಂದೊಮ್ಮೆ ಅದು ಸಾಧ್ಯವಾಗುವುದಾದರೆ,

ಈಗಲೇ ಮನಸಾರೆ ಅಭಿನಂದಿಸಿಬಿಡುವೆ

ಯಾಕೆಂದರೆ....ಆಗ ನಾನಿರುವುದಿಲ್ಲವಲ್ಲಾ.......



೬೩) ಸಂಬಂಧ



ಸಂಬಂಧಕ್ಕೊಂದು ಹಣೆಪಟ್ಟಿ ಇರಕೂಡದು.

ಹೆಸರಿದ್ದರೆ ಕಾಯ್ದುಕೊಳುವ ಚಿಂತೆಯಿಹುದು

ಅಲ್ಲಿ ನಿಭಾಯಿಸುವ ಹಿಂಸೆಯಲ್ಲ, ತಾನಿಲ್ಲವಾಗುವ ಅರ್ಪಣೆಯಿರಬೇಕು

ಅಲ್ಲಿ ಕೊನೆಯ ಚಿತ್ರಣವಲ್ಲ, ನಿರಂತರ ಹರಿವಿನರಿವಿರಬೇಕು

ಉಳಿಸುವ, ಅಳಿಸುವ ಯೋಚನೆಯಲ್ಲ, ತಂತಾನೇ ಬೆಳೆವ ಸಲೀಸಿರಬೇಕು

ಪಲ್ಲವಿಸಿದಾಗ ಬಣ್ಣದ ಚೆಲುವಲ್ಲ, ಕಾಣದ ಕಂಪು ಎದ್ದು ತೋರಬೇಕು

ಅಲ್ಲಿ ನಿಬಂಧನೆಯಲ್ಲ, ನಿರ್ಬಂಧವಿಲ್ಲದ ಮುಕ್ತತೆಯಿರಬೇಕು

ಸಂಶಯ- ಭಯದ ಕೂಸು ಮತ್ತು ನಂಬಿಕೆಯ ಸಾವು.

ಅದಕಲ್ಲಿ ಎಡೆಯಿಲ್ಲದಿರಬೇಕು.................

ಇಂಥದ್ದೊಂದು ಅನುಬಂಧ ನನಗೀಗ ಬೇಕು



೬೪) ಪಾಚಿಗಟ್ಟದಂತೆ....



ಪಾಚಿಕಟ್ಟದಂತೆ ಮನಸ ಕಾಯುತಿರಬೇಬೇಕು

ಆರ್ದ್ರತೆ ಇದ್ದಲ್ಲದು ಕಷ್ಟವೇ..ಆದರೂ

ಪಾಚಿ ಹುಟ್ಟದಂತಿಡಲು ಪ್ರಯತ್ನಿಸಬೇಕು

ಒಮ್ಮೊಮ್ಮೆ ಮುಚ್ಚಳವ ತೆಗೆದಿಡಲುಬೇಕು

ಆಗಾಗ ನೇಸರನೂ ಒಳಗಿಣುಕಬೇಕು

ತೇವ ನಿಲ್ಲದೆ, ಮೆಲ್ಲ ಹರಿಯುತಿರಬೇಕು

ಭಾವ ತುಂಬಿದರೊಮ್ಮೆ ಖಾಲಿಯಾಗಿಸಬೇಕು

ಸಂಬಂಧ ಪಟ್ಟಭದ್ರವಾಗದಿರಬೇಕು

ಬಂದದ್ದು ಒಳಹೊರಗೆ ನಡೆಯುತಿರಬೇಕು

ಹಳತು ಹೊಸತಕೆ ಜಾಗಮಾಡಿಕೊಡಬೇಕು

ಇಷ್ಟೆಲ್ಲ ಮಾಡಿಯೂ..........

ಕಟ್ಟಿದರೆ ಪಾಚಿ ಗಾಢವಾಗಬಿಡಬಾರದು

ಹುಟ್ಟಿನಲೆ ಒರೆಸಬೇಕು, ನಿರ್ಲಕ್ಷ್ಯ ಸಲ್ಲದು

ಗಟ್ಟಿಪಾಚಿಯ ಕೆರೆಯದೇ ತೆಗೆಯಲಾಗದು

ಕೆರೆತ ಮಿದುಮನವ ಗಾಯಗೊಳಿಸದಿರದು

ಹಾಗಾಗಿ ..................

ಪಾಚಿಗಟ್ಟದಂತೆ ಮನಸ ಕಾಯುತಿರಬೇಕು



೬೫) ಇನ್ನೇನು ಕೇಳಲಿ?



ನಿನ್ನ ಹರಕೆಯ ಯಾದಿಯಲ್ಲಿ,

ನಿನ್ನ ಕೋರಿಕೆಯ ಪಟ್ಟಿಯಲ್ಲಿ

ನಿನ್ನದೇ ಹೆಸರಿಲ್ಲ

ಪರರ ಇಲ್ಲಗಳ "ಇಲ್ಲವಾಗಿಸು"

ಎಂದೆನಗೆನುವ ನಿನಗೆ ಬೇಕಾದ್ದಿಲ್ಲವೆ?

-ನನ್ನ ದೈವವೊಂದು ದಿನ ಕೇಳಿದಂತೆ.....



ನಾನುತ್ತರಿಸಿದೆ-

ಜಗದ ನೋವುಗಳ ನಡುವೆ ನನದೊಂದೆ ನಲಿವು,

ನಲಿವುಗಳ ನಡುವೆ ನನದೊಂದೆ ನೋವು

ಒಂಟಿತನ ಕಾಡಿ ಓಡಿ ಹೋದಾವು

ಅಲ್ಲದೆ,

ನನ್ನ ದನಿ ತಲುಪುವ ಸನಿಹದಲ್ಲಿ ನೀನಿರಲು

ನಾ ಕೇಳಲು ಇನ್ನೇನಿದ್ದೀತು?



೬೬) ಚುಟುಕಗಳು



೧)

ರಾಮ ರಾವಣರ ನಾವೇ ಅವರಾಗಿ ನೋಡಬಹುದು,

ಆವಾಹಿಸಿಕೊಳಬೇಕಿಲ್ಲ, ನಮ್ಮೊಳಗಿಬ್ಬರೂ ಇದ್ದಾರೆ

ಒಮ್ಮೆ ಅವ, ಇನ್ನೊಮ್ಮೆ ಇವ ಏಳುತಿರುತಾರೆ

ಸಾಧ್ಯವಾದರೆ, ಹನುಮನ ಅವನಾಗಿ ನೋಡುವ

ಅವಾಹಿಸಿಕೊಳ್ಳುವಾ,

ಹಾಗೆ ಶರಣಾಗುವುದ ಕಲಿಯುವಾ

೨)

ಊರ್ಮಿಳೆಯ ನೋವಿಗೆ ಮಹಾಕಾವ್ಯ ಕಿರಿದಾಯ್ತು

ಸೀತೆಯದಕೆ ಭೂಮಿಯೊಡಲೇ ಬಿರಿಯಿತು

ಆದರೆ,

ಕೈಕೇಯಿಯದಕೆ, ತಾರೆಯದಕೆ, ಮಂಡೋದರಿಯದಕೆ

ಒಂದಕ್ಷರವೂ ಇಲ್ಲವಾಯಿತೇ?



೬೭) ಬೆಟ್ಟದಡಿಯ ಗಿಡ



ಒಮ್ಮೆ ಹಸಿರಾಗೊ, ಒಮ್ಮೆ ಒಣಗೋ ಬೆಟ್ಟವೊಂದು ,

ಪಕ್ಕ ದೊಡ್ಡ ಮರ, ಸುತ್ತ ದೊಡ್ಡ ಬಯಲು,

ತುದಿಯಲೊಂದು ದೇಗುಲ, ಒಳಗೆ ಮೊಳಗೊ ಗಂಟೆ

ಬೇಸರ ನೀಗಲವಕೆ ಪರಸ್ಪರರ ಸ್ನೇಹವಂತೆ.



ಗಾಳಿಯೇರಿ ಬಂತಲ್ಲಿಗೊಂದು ಅಜ್ಜನಗಡ್ಡ

ಆ ಅಗಾಧತೆಯ ಬುಡದಿ ಬಯಸಿ ಸ್ನೇಹ

ನೆಲೆಯೂರಲು ನಿಲಿಸಿತು ಹಾರಾಟ



ಬೀಜಮೊಳೆತು ಗಿಡ ಹುಟ್ಟಿ

ಅಭಿಮಾನವೇ ಹಸುರಾಗಿ, ಆರಾಧನೆಯೇ ಹೂವಾಗಿ....

ಹೀಗೆ ಕಾಲ ಭೂತವಾಗುತಿತ್ತು.



ಬೀಜ ಬೆಟ್ಟವ ಕತ್ತೆತ್ತಿಯೇ ನೋಡುತಿತ್ತು

ತನ್ನಾಸೆಗದು ಕಣ್ಣಾಗುವುದ ಕಾಯುತಿತ್ತು

ಬೆಟ್ಟಕೆ ಬಾಗಿ ಬುಡ ಕಾಣಲಾಗಲೇ ಇಲ್ಲ,

ಗಿಡಕೆ ಬೆಟ್ಟದೆತ್ತರ ತಲುಪಲಾಗಲೇ ಇಲ್ಲ





೬೮) ಮೂರು ಜಿಜ್ಞಾಸೆಗಳು

೧)

ನಿನಗೆನಲಿ ಮಾತಿಲ್ಲ ಎಂದ ಮೌನದೊಳಗೇ ಮಾತ ಹುಡುಕುವ ಕಣ್ಣು

ಮರುಭೂಮಿಯಲಿ ಮೃಗತೃಷ್ಣೆಯ ಬೆನ್ನಟ್ಟುವ ಒಂಟೆಯಂತೆ.

ಯುಗಗಳೇ ಕಳೆದರೂ ಮರುಭೂಮಿ, ಒಂಟೆ, ಮೃಗತೃಷ್ಣೆ

ಎಲ್ಲ ಹಾಗೆಯೇ ಉಳಕೊಂಡಿರುವುದು ಸೋಜಿಗವಲ್ಲವೆ?!

೨)

ಗಾಯ ಮಾಡಿದ ಚೂರಿಗೆ ಗಾಯ ಮಾಡಿದವರುಂಟೇ?

ಹುಶಾರಾಗಿ ವ್ಯವಹರಿಸಬಹುದು ಇಲ್ಲ, ದೂರವಿಟ್ಟುಬಿಡಬಹುದು.

ಆದರೆ ಗಾಯ ಮಾಡುವ ಅನುಬಂಧಗಳಿಗೆ.....??

ವ್ಯವಹಾರವಿದೆಯೇ ಅಲ್ಲಿ, ಅಥವಾ ದೂರವಿಡಬಹುದೇ?

೩)

ಪ್ರೇಮ- ದ್ವೇಷಗಳ ನಡುವಿನದು, ಮುಸ್ಸಂಜೆಯಂತೆ

ಹಗಲಿನ ಮುಂದುವರಿಕೆ ಅಥವಾ ರಾತ್ರಿಯ ಹುಟ್ಟು

ಮುಸ್ಸಂಜೆ ಕಾಲದಧೀನ, ಮುನ್ನಡೆದು ರಾತ್ರಿಯಾಗಲೇಬೇಕು

ಆದರೆ...

ನಮ್ಮಾಧೀನದ್ದ ಹಿಂದೆಳೆದು ಅನುಭೂತಿಯಾಗಿಸಬಹುದೇ?!



೬೮) ಹನಿಹನಿ ಅನಿಸಿಕೆ



೧)

ಕಾಯುತಿದ್ದ ಕಾದ ಭೂಮಿಯ ಮೇಲೆ

ಹಲಕಾಲದ ನಂತರ ಬಿದ್ದ ಕೆಲವೇ

ತುಂತುರು ಮಳೆಹನಿ

ಮಣ್ಣಿನೊಳ ಹೊಕ್ಕು ಕೂತಿದ್ದ

ವಾಸನೆಯ ಹೆಕ್ಕಿ ತಂದು

ಹಿತವಾದ ಪರಿಮಳವಾಗಿಸಿದವು

೨)

ಅವಮಾನವ ಯಾರಾದರೂ ನುಂಗಬಹುದು

ಅನಿವಾರ್ಯತೆ ಗಂಟಲೊಳಗಿಳಿಸುವುದು

ಖಾಲಿಬಯಲಲೊಮ್ಮೆ ಅದ ಹೊರಕಕ್ಕಬಹುದು

ಆದರೆ ಅರಗಿಸಿ ಅದನೂ ದಕ್ಕಿಸಿಕೊಳುವ

ತಾಕತ್ತಿರುವುದು ಪ್ರೀತಿಗೆ ಮಾತ್ರ.

೩)

ಕಣ್ಮುಂದೆ ಕಣ್ತುಂಬುವಂತೆ ನಿಂತ ನಾನು

ಕಾಣಬಾರದೆಂದು ಕಣ್ಮುಚ್ಚಬೇಡ

ಭ್ರಮೆಯ ಕವಚ ಸುರಕ್ಷವೆಂದು

ನಾನಿಲ್ಲದ ಸುಳ್ಳಿನೊಳಹೊಕ್ಕಬೇಡ

ಕಾಲಲೊದ್ದಾದರೂ ಒಮ್ಮೆ ನೋಡು

ನಾನಿರುವ ಆ ಸ್ಪರ್ಶ ನಿನಗರಿವಾದರೆ ಸಾಕು



೬೯) ನಗುವಿನಾಸೆ



ನಾನೊಂದು ಖಾಲಿನಗು,

ಸಹಜತೆಯ ಚಪ್ಪಡಿಕಲ್ಲಿನಡಿ ಮುಚ್ಚಿ

ಸೊಗ ಮಾತ್ರ ಹೊರಸೂಸೊ ಪೊಳ್ಳುನಗು



ಸುಖಕೆ ನಕ್ಕು, ನೋವಿಗಳಬಲ್ಲವರೇ,

ನಿಮಗೆ ನಾನಾಗೊ ಆಸೆ, ನನಗೆ ನೀವಾಗುವದ್ದು



ಸಹಜವಾಗಿ, ಸರಳವಾಗಿರುವುದೆನಗೂ ಇಷ್ಟವೇ

ಸುಳ್ಳುಸುಳ್ಳೆ ಸಿಂಗರಿಸಿಕೊಳಬೇಕು, ನಗುವಾಗಿ ಹುಟ್ಟಿರುವೆ



ನನ್ನಲೂ ಇವೆ ಹಲವು ಹಣ್ಣಾದ ಹುಣ್ಣು,

ಕಾಲ್ಚೆಂಡಾಗಿಸಿ ಬಿಸುಟ ಹಸಿಗಾಯಗಳು

ಬೆನ್ನಲಿವೆ, ಒಡಲಾಳದಲಿವೆ, ತೋರಲಾರೆ



ಸುಳ್ಳುಮರೆವ ಮುಲಾಮ ಹಚ್ಚಿ ಮುಚ್ಚಿರುವೆನಲ್ಲಾ..,

ಗಾಳಿಯಾಡದೆ, ಅವು ಒಣಗುತಿಲ್ಲ, ಮಾಯುತಿಲ್ಲ.



ನಗುವಾಗುತ, ಒಳಗೊಳಗೇ ಅತ್ತದ್ದು ಸಾಕಾಗಿದೆ

ಕಣ್ಣೀರಾಗಿ ಧುಮ್ಮಿಕ್ಕುವ ರಭಸವೀಗ ಬೇಕಿದೆ.



ಪುಣ್ಯಕೋಟಿಯ ಹಾಗೆ ಸೆರಗೊಡ್ಡಿ ಕೇಳುವೆ

"ವಿಧಿಯೇ, ಆಣೆ ಮಾಡುವೆ, ಮತ್ತೆ ಹಿಂತಿರುಗುವೆ

ಒಂದೆ ಒಂದು ಕ್ಷಣದ ಮಟ್ಟಿಗೆ ಅಳುವಾಗುವೆ



ಗಾಳಿ ಒಳಗೂ ಬೀಸಿ ಗಾಯಗಳು ಮಾಯಲಿ

ಹಳತು ಖಾಲಿಯಾಗಿ ಹೊಸನೋವಿಗೆ ತೆರವಾಗಲಿ



ನಗುವಿನೊಳಗೂ ಇರುವ ಅಳು ಜಗಕೊಮ್ಮೆ ಕಾಣಲಿ

ನಗೆಯ ವರ ಕೇಳ್ವವರ ಭ್ರಮೆ ಹರಿದು ಬಿಡಲಿ"



೭೦)ಮಾತು ಮಳೆಯಲಿ ಮೀಯೋಣ



ಅವಮಾನದ ನೆರಳು ತಂಪಲ್ಲ, ಒಪ್ಪಿದೆ.

ಅದರ ಪರಿಧಿಯಿಂದಾಚೆ ಯಾಕೆ ಬರಲೊಲ್ಲೆ?



ಝಾಡಿಸಿ ಒದ್ದೆದ್ದು ಬರಬಲ್ಲೆಯ, ಇಲ್ಲ ತಾನೇ?

ಪ್ರೀತಿಮರದಡಿಯ ಆ ನೆರಳಲಿ,

ಅನಿವಾರ್ಯತೆಯ ಚಾಪೆಗೊರಗುವುದು ರೂಢಿಯಾಗಿದೆ ತಾನೇ...



ಉರಿಸುವುದಕೇ ಕೆಲವು, ಬೇಯುವುದಕೇ ಕೆಲವು.

ಪಾತ್ರ ಹಂಚಿಕೆಯಾಗಿಬಿಟ್ಟಿದೆ, ನಾಟಕವೂ ಸುರುವಾಗಿದೆ,

ಬದಲಾಗುವುದು, ಹಿಂತೆಗೆಯುವುದು- ಈಗಾಗದು.



ಈಗೇನು, ಉರಿ ತಣಿಸಬೇಕೇನೇ, ನಾನಿಲ್ಲವೇ ಗೆಳತಿ?

ಬಾ, ಮಾತು ಮಳೆಯಲಿ ತೋಯ್ದು ಮೀಯೋಣ,

ಯಾವ ಉರಿ ದಹಿಸುವುದು ನೋಡಿಯೇ ಬಿಡೋಣ.



೭೧) ಶಹಬ್ಬಾಸ್!



ನೀರಿನಾಳಕೆ ಇಳಿದ ಮಿಂಚುಳ್ಳಿ,

ಶಹಬ್ಬಾಸ್!

ಮೀನು ಹಿಡಿದೇ ಮೇಲೆ ಬಂತು

ಉಸಿರುಗಟ್ಟಿದರೂ ಗುರಿಯ ದಾರಿ ಬಿಡಲಿಲ್ಲ

ಗುರಿ ಸಿಕ್ಕಹೊರತು ಉಸಿರಾಡಲಿಲ್ಲ

ಮೇಲೇ ಹುಡುಕಿದರೆ ಕಾಣಿಸದ ನಿಧಿಗಳು

ಹಕ್ಕಿಗುಸಿರಾಗದ ಗಾಳಿಹೊತ್ತ ನೀರಲ್ಲಿಹ ಮೀನಂತೆ.

ಬೇಕಾದಷ್ಟು ಸತ್ವ ತುಂಬಿಕೊಂಡು, ಗುರಿಯ ದಿಟ್ಟಿಸಿಕೊಂಡೆ

ಉಸಿರುಕಟ್ಟಿ ತಳಕೆ ನುಗ್ಗಬೇಕು

ತಳಕಿಳಿವ ತಾಳ್ಮೆಯಿದ್ದರಷ್ಟೇ ಸಿಕ್ಕುವುದು

ಅದು ಪ್ರೀತಿಯಾದರು ಅಷ್ಟೆ, ಇನ್ನೇನಾದರು ಅಷ್ಟೆ.



೭೨)

ನಿನಗಾಗಿಯೇ

ತಂಗಾಳಿ ಮೊದಲಬಾರಿಗಿಂದು ಚುಚ್ಚುತ್ತಿದೆ

ಒಡಲೆಲ್ಲ ನಿನ್ನ ನೋವ ತುಂಬಿ ತಂದಿರುವುದಕೆ,

ಮಂದಾನಿಲವೂ ಉಸಿರುಗಟ್ಟಿಸುವಂತಿದೆ.

ದೀರ್ಘವಾಗಿ ಈಗ ಒಳಗೆಳೆದುಕೊಂಡಿರುವೆ.

ನನ್ನೆದೆಗೂಡಲ್ಲಿ ವೇದನೆಯ ಬೇರ್ಪಡಿಸಿ,

ನನ ಹೃದಯಕಿಳಿಸಿರುವೆ, ಅಲ್ಲಿದ್ದ

ಹಾರೈಕೆಯುಡುಗೊರೆಯ ಗಾಳಿರಥದಲ್ಲಿರಿಸಿ,

ಒಲವ ಕಾವಲಿರಿಸಿ, ವಿಶ್ವಾಸವ ದಾರಿದೀಪವಾಗಿಸಿ,

ನಿನ್ನತ್ತ ಕಳಿಸಿರುವೆ.

ನನ್ನದೆಲ್ಲವ ಮಾಡುವಂತೆ,

ಇದ ಅತ್ತ ಸರಿಸಬೇಡ.

ನೂರಕ್ಕೆ ನೂರೂ ನಿನಗಾಗಿಯೇ.

ಪ್ರತಿಯಾಗಿ ನನಗೇನೂ ಬೇಡ.





೭೩) ಪ್ರೇಮ ನಿಂತಿದೆ



ಪ್ರೇಮ ಹಾಗೆ ಹೀಗೆಂದು ವ್ಯಾಖ್ಯಾನಿಸುವವರಲೊಂದು ಮಾತು

ಪ್ರೇಮಕೆ ಪದಗಳಾಧಾರ ಬೇಕೆ... ? ಬೇಡ.



ನಾನದನು ಬರೆದು, ಆಡಿ, ಕರೆಯುತ್ತಲೇ ಇದ್ದೆ,

ಅಣಕಿಸುತ ಅದು ಮುಂದೋಡುತಿತ್ತು,

ನಾನು ಖಾಲಿ ಖಾಲಿ.



ಈಗ ನಾನು ಮೌನಿ,

ನಿಶ್ಯಬ್ಢವ ನೋಡೆ ತಿರುಗಿದ ಪ್ರೇಮ,

ಅಲ್ಲೇ ನಿಂತಿದೆ, ಓಡುತಿಲ್ಲ.



ಪರಸ್ಪರ ತಲುಪುವೆವೋ ಇಲ್ಲವೋ....

ಮುಖಾಮುಖಿಯಂತೂ ಆದೆವು.

ಮತ್ತು ಅದರ ಬೆನ್ನು ಕಾಣುತಿಲ್ಲ,

ಅಷ್ಟರ ಮಟ್ಟಿಗಿಂದು ನಾನು ನಿರಾಳ



೭೪) ತುಂತುರು

೧)

ನಾನು ಕೇಳಿದ್ದಕ್ಕೆಲ್ಲ ಉತ್ತರಿಸಿದ್ದೀರ, ಧನ್ಯವಾದಗಳು

ಆದರೆ ನನಗವು ಉತ್ತರಗಳಾಗದೆ ಪ್ರಶ್ನೆಗಳೇ ಆದದ್ದು ದುರಾದೃಷ್ಟ.

೨)

ನಾನೇನೋ ಮೈಮರೆತಿದ್ದೆ,

ನಾನಂದುಕೊಂಡವರೇ ನೀವಾಗಿದ್ದರೆ ಎಚ್ಚರಿಸಬಹುದಿತ್ತಲ್ಲ?

೩)

ಜಗತ್ತು ಭ್ರಮೆಯಲ್ಲ ಎಂದೇ ಸಾಧಿಸುತ್ತಿದ್ದೆ,

ಇಂದು ಹೌದೆನಿಸುತ್ತಿದೆ, ನಿನ್ನೆಮೊನ್ನೆಯಿಂದೀಚೆಗೆ ನಾನೂ ಮಾಯುತ್ತಿದ್ದೇನೆ.

೪)

ಎಲ್ಲ ಮುಗಿಯಿತು ಅನ್ನುವಲ್ಲಿನ್ನೇನು ನಿರೀಕ್ಷಿಸುವುದು?

ಮುಗಿಯುವ ಮುನ್ನವೇ ಹಿಂತಿರುಗಬೇಕಾದ ವಿಧಿ ನನ್ನದು

೫)

ಹುಟ್ಟು ಇನ್ನೊಂದು ಹುಟ್ಟಿಗಾಗಿ ಸಾವಿನಲ್ಲಿ ಕೊನೆಯಾಗಲೇಬೇಕು

ನಡುವೆ ಕ್ಷಣಕ್ಷಣವೂ ಜೀವ ಹೊಸ ಹುಟ್ಟು ಪಡೆದು ಜೀವನದ ಮುನ್ನಡೆ

ಎಂದೋ ಬರುವ ಸಾವ ಪ್ರತಿ ಹೆಜ್ಜೆಯಲ್ಲೂ ನಿರೀಕ್ಷಿಸಿದರೆ ವಿಶ್ವಾಸದ ಹಿನ್ನಡೆ.



೭೫) ನಾವ್ಯಾರಾಗೋಣ?



ಹಗಲ ನೆಚ್ಚುವವರು ರಾತ್ರಿಯನ್ನಾಗಲಿ,

ನೆರಳನ್ನಾಗಲಿ ಅಲ್ಲಗಳೆಯುವುದಿಲ್ಲ

ಹಗಲನ್ನು ನಂಬಿಕೆಯಲ್ಲೂ, ರಾತ್ರಿಯನ್ನು ನಿದ್ದೆಯಲ್ಲೂ

ಅನುಭವಿಸಿ ಕಳೆಯುತ್ತಾರೆ.

ನೆರಳು ಜೊತೆಗಿದ್ದಾಗ ಪ್ರಾಣಮಿತ್ರನೆನ್ನುತ್ತಾರೆ,

ಇಲ್ಲದಿದ್ದಾಗ ಮರೆತಂತಿರುತ್ತಾರೆ.

ರಾತ್ರಿಯ ನೆಚ್ಚುವವರು,

ಹಗಲ ಕತ್ತಲ ಗುಂಗಲ್ಲಿ ಕಳೆಯುತ್ತಾರೆ

ಮತ್ತು ರಾತ್ರಿ ನಿದ್ದೆ ಹೊರಗೇ ಬಿಟ್ಟು

ಕಾಡುವ ಕತ್ತಲ ಗವಿ ಹೊಕ್ಕಿಬಿಡುತಾರೆ.

ನೆರಳೇ ನಿತ್ಯವೆನುತ ಹಿಂಬಾಲಿಸುತ್ತಾರೆ

ಈಗ ನೀವೇ ಹೇಳಿ- ನಾವ್ಯಾರಾಗೋಣ?



೭೬) ಪ್ರೇಮಬೀಜ



ನಮ್ಮ ಸಹವಾಸಕೆ,

ನನ್ನೊಳಗೆ ಅನುಭೂತಿಯೊಂದರ ಜನನ

ಇನ್ನೂ ಹೆಸರಿಟ್ಟಿರಲಿಲ್ಲ, ಅದಿನ್ನೂ ಹಸುಗೂಸು.

ನಿನಗ್ಯಾಕೋ ಭೂತಕದ ತೆರಳಿಸುವ ಬಯಕೆ.

ಪದಗಳಲುಗಲಿ ತುಂಡು ತುಂಡಾಗಿಸತೊಡಗಿದ್ದೆ

ಮೊದಲ ಪೆಟ್ಟು ಬಿದ್ದಾಗ, ಏನಾಶ್ಚರ್ಯ!!!

ಅದರೊಳಗೆ ಪ್ರವಹಿಸುತಿದ್ದುದು ನನ್ನ ಕಣ್ಣೀರು

ಬೊಗಸೆಯಲಿ ಮೊಗೆಮೊಗೆದು ನಾನದನು ಕುಡಿದೆ

ನೀ ಕಡಿಯುತ್ತಲಿದ್ದೆ, ನಾ ಕುಡಿಯುತ್ತಲಿದ್ದೆ.

ಕೊನೆಗೊಮ್ಮೆ ನೀ ತಲೆ ತರಿದೆ ನೋಡು,

ಬುಳುಬುಳು ಹರಿದ ಕಣ್ಣೀರಧಾರೆ,

ಬಿತ್ತೊಂದು ಹನಿ ಕೈಜಾರಿ ಎದೆನೆಲದ ಮೇಲೆ

ಅರರೆ......... ನೋಡಿದೆಯಾ......?!.

ಹನಿಯೊಡಲಲರಳಿದೆ ಮತ್ತದೇ ಅನುಭೂತಿ!!!

ಈಗ ಹೆಸರಿಟ್ಟಿರುವೆ,

ಅವ ರಕ್ತಬೀಜನಾದರೆ ಇವ ಪ್ರೇಮಬೀಜ.

ಈಗ ನಾನೇನೂ ಕುಡಿಯುತಿಲ್ಲ,

ಕಡಿದಂತೆ ಕುಡಿಯೊಡೆಯುವುದು ನಿಂತಿಲ್ಲ.

ಅದ ತೆರಳಿಸಲು ನೀ ಕಡಿವುದಕೆ ನನದೊಂದು ಜೈ

ಪ್ರೇಮಬೀಜದಲೇ ತುಂಬುತಿದೆ ಈಗ ನನ್ನ ಮನಮೈ.



೭೭) ಹೂವು ಹಾವಾಗುವ ಮುನ್ನ



ಪುಷ್ಪಗುಚ್ಛದೊಳಗೇನೋ ಗಲಿಬಿಲಿ, ಅಲ್ಲಿ

ಹೂವಿನ ರೂಪದಲೊಂದು ಹಾವಿಹುದಂತೆ

ಹೇಗೆ ಬೇರ್ಪಡಿಸುವುದು?!!!

ತನ್ನನ್ನು ಹೂವೆಂದೇ ಭಾವಿಸಿದ್ದ ಪ್ರತಿಯೊಂದರ ಮುಖದಿ

ಸಣ್ಣ ಸಂಶಯ- "ನಾ ಹಾಗೆ ಕಂಡಿಲ್ಲ ತಾನೇ?"

ಹಾವಲ್ಲದ ಹೂವೊಂದು ದ್ವಂದ್ವದಿ ಸಿಲುಕಿ

ತಾನು ಹಾವೇ ಅಂದುಕೊಳುವ ಮುನ್ನ

ಹಾವ ನಿಜವಾಗಿ ಕಂಡವರೇ, ಅದ ಕಿತ್ತೆಸೆಯಿರಿ.



೭೮) ಜಿಟಿಜಿಟಿ ಮಳೆಹನಿ

೧)

ಕಣ್ಣೀರಾಗದಿರು ಮನಸೇ, ನಿನ್ನದೇನೂ ದೊಡ್ಡದಲ್ಲ,

ಇವರು ಕೊಲ್ಲದವರನ್ನು ಕೊಂದ ಆರೋಪ ನಿರೂಪಿಸಿಯೇ ಶಿಕ್ಷಿಸುವವರು..... .

೨)

ಈಗಷ್ಟೇ ಎಡವುತ್ತಾ ನಡೆಯತೊಡಗಿದ್ದೆ,

ಹಿಂದೆ ತಮ್ಮ ನಾಯಿಯ ಅಟ್ಟಿಬಿಟ್ಟರು.

೩)

ಮೊದಲ ಮೆಟ್ಟಿಲ ಹತ್ತಿ ಮೇಲ್ನೋಡುತಿದ್ದೆ, ನಡುವಿನವೆಲ್ಲ ಮಾಯವಾಗಿ ಬಿಟ್ಟವು

ಕೊನೆಯದು ಉಳಿದಿದ್ದರೂ, ನಾ ಕೆಳಗಿಳಿಯಲೇ ಬೇಕಾಯಿತು.

೪)

ಆ ಬಿಂಬ ಕಣ್ಣ ಹೇಗೆ ತುಂಬಿದೆಯೆಂದರೆ,

ನಿದ್ದೆಗಾಗಲಿ, ಕನಸಿಗಾಗಲಿ ಅಲ್ಲಿ ಜಾಗವುಳಿದಿಲ್ಲ

೫)

ಚೂರಿಯೆಂದರು, ಮಾರಿಯೆಂದರು.

ಹೆಸರ ಕೂಗಲಾಗದಿದ್ದರೆ ಸುಮ್ಮನಿದ್ದರೂ ಆಗುತ್ತಿತ್ತು.

೬)

ನಿನ್ನಲ್ಲಿ ನಾ ಕಾಣಲೆತ್ನಿಸಿದ್ದೇ ನನಗೆ ನಿನ್ನಲ್ಲಿ ಕಂಡಿತು.

ನೀನು ಮಾತ್ರ ನನ್ನಲ್ಲಿದ್ದದ್ದ ಬಿಟ್ಟು ಬೇರೆಲ್ಲವನ್ನೂ ನನ್ನೊಳಗೆ ಕಂಡೆ.

೭)

ನಾ ನಿನ್ನ ಸಂಭ್ರಮಿಸುತ್ತಿರುವೆನಾದರೆ ಅದು ನನ್ನ ಪ್ರಾಪ್ತಿ

ನೀ ನನ್ನ ಸಹಿಸಲಾರೆಯಾದರೆ ಅದು ನಿನ್ನದು.

















































































೪೨) ಹಸಿವಿನ ಕರೆ




ದ್ರೋಣರ ಪರೀಕ್ಷೆಯಲಂದು ಅರ್ಜುನನಿಗೆ

ಮರದ ತುದಿಯ ಹಕ್ಕಿಯ ಕಣ್ಣುಮಾತ್ರ ಕಂಡಂತೆ,

ನನ್ನ ಹೆಮ್ಮೆಯ ತೋಟದೊಳ ಬಂದು ನಿಂತ,

ಬೀದಿ ಗುಡಿ ಸುವ ವಳ ಮಗಳಿಗೆ

ಅಲ್ಲಿನ ಹ ಸಿರು, ಜಾಜಿ ಹೂವಿನ ಕಂಪು,

ಪಾರಿಜಾತದ ಗಿಡದ ಮೇಲಿನ ಗಿಣಿಸಾಲು

ಗುಲಾಬಿಯ ಮೇಲಿನ ಬಣ್ಣದಚಿಟ್ಟೆಗಳು

ಅಕಾಶಮಲ್ಲಿಗೆಯ ಹೂಗೊಂಚಲು ....

ಯಾವವೂ ಕಾಣದೆ, ಮನೆಯೊಳಗಿದ್ದ

ನನ್ನ ಮಗಳ ಕೈಯ್ಯಲ್ಲಿನ ತಿಂಡಿಪೊಟ್ಟಣ

ಮಾತ್ರ ಕಾಣುತ್ತಿತ್ತು.............



ಪಂಚೇಂದ್ರಿಯಗಳಿಗಿಂತ ಹೊಟ್ಟೆಯ ಕರೆ

ಮತ್ತು

ಎಲ್ಲ ಆಸೆಗಳಿಗಿಂತ ಹಸಿವಿನ ಮೊರೆ

ಬಲಶಾಲಿಗಳೆನಿಸಿದವು.



೪೩) ನಿನ್ನ ಹುಟ್ಟುಹಬ್ಬಕೆ



ನಿನ್ನ ಹುಟ್ಟುಹಬ್ಬ ಇಂದು,

ಏನು ಉಡುಗೊರೆ ಕೊಡಲಿ" ಎಂದರೆ,

"ನಿನ್ನ ನಗು" ಎಂದೆಯಲ್ಲಾ,

ಇದಕಿಂತ ಬೇರೆನಗೆ ಬೇಕೆ?

ಏನು ಸಿಹಿ ಮಾಡಲಿ ಎಂದರೆ,

"ನಿನ್ನ ಮುತ್ತು" ಎಂದೆಯಲ್ಲಾ,

ಇದಕಿಂತ

ರಸಿಕತೆಯೆನಗೆ ಬೇಕೆ?

ದೇವರ ಬಳಿಸಾರಿ ನಮಿಸುವಾ ಎಂದರೆ,

ನಮ್ಮೊಲವಲ್ಲೇ ಆತನಿರುವ ಎಂದೆಯಲ್ಲಾ,

ಇದಕಿಂತ ಧನ್ಯತೆಯೆನಗೆ ಬೇಕೆ?

ವಯಸು ಮುಂದೋಡುತಿದೆ ಎಂದರೆ,

ಹುಡುಗಿ ನೀನಾಗಿರೆ, ನಾನೆಂದೂ ಯುವಕನೇ ಎಂದೆಯಲ್ಲಾ

ಇದಕಿಂತ ಮಾತೆನಗೆ ಬೇಕೆ?

ಹೊಸದಿರಿಸು ಧ ರಿಸೆಂದಿತ್ತರೆ,

ನಿನ್ನ ಘಮ ಬೆರೆತಾಗ ಹಳತೂ ಹೊಸತೆಂದೆಯಲ್ಲಾ,

ಇದಕಿಂತ ಮೆಚ್ಚುಗೆಯೆನಗೆ ಬೇಕೆ?

ಹೀಗೇ.......

ನನ್ನದಕೂ ನೀನೇ ಕೊಟ್ಟು, ನಿನ್ನದರಂದೂ ನನಗೇ

ಸೊಗವೆರೆಯುತಿರುವ ನೀನು,

ನನ್ನ ದೊರೆಯಲ್ಲ, ಪ್ರೀತಿಯ ಧಾರೆ.

ನನ್ನ ದೇವರಲ್ಲ, ನೆಮ್ಮದಿಯ ತವರು.



೪೪) ಬಸುರಿಬೆಕ್ಕು

ಬಸುರಿ ಬೆಕ್ಕಿನದು ಬಾಗಿಲಲ್ಲಿ ನಿಂತು ಕೂಗಾಟ

ಒಳಗವಳಿಗೆ ಬಿಡದೆ ಹಳೆಯ ನೆನಪುಗಳ ಕಾಟ.

ಒಡಲಲೇನೋ ಮೊಳೆತದ್ದು ಮೊದಲು ತಿಳಿದಾಗಿನ ಪುಳಕ

ತನ್ನದರೊಡನೆ ಅದರದೂ ಸೇರಿದಾಗಿನ ಉಸಿರ ತಾಳಮೇಳ,

ಒಡಲೊಳಗಿನ ಇರುವನು, ತನ್ನರಿವಿಗು ಹರಿಸಿದ ಮಿಸುಕಾಟ.

ಸದ್ದಿಗೋ ಹಸಿವೆಗೋ, ಬೆಚ್ಚಿ ಒದ್ದ ಪುಟ್ಟಕಾಲ ಸಂದೇಶ.

ಹೀಗೆ..........

ನೂರುನೋವೊಳಗೂ ಮುದ ನೀಡಿದ್ದ ನಿರೀಕ್ಷೆ, ಕೊನೆಗೆ ತಂದ ನಿರಾಸೆ.

ಚೈತನ್ಯದ ಚಿಲುಮೆಯಂದು ಹೊರಬಂದಾಗ ನಿಶ್ಚೇತನವಾದ ಅಸಹ್ಯಗಳಿಗೆ.

"ಬೇಡಮ್ಮಾ, ಕದ ತೆರೆಯಬೇಡ, ಇಲ್ಲೆ ಮರಿ ಮಾಡಿ, ಅದರಾಸೆಗೆ

ಕಂಟಬೆಕ್ಕು ವಾಸಹೂಡಿ, ಮರಿಯ ಕಾಯ್ವ ಸಹವಾಸ ಬೇಡವೆಮಗೆ"

ಮನೆಯೊಳಗಿಂದ ಮನೆಯೊಡತಿಯ ನಕಾರದ ಆದೇಶ

ಮನದೊಳಗಿಂದ ಕದತೆರೆಯೆಂಬ ತುಂಬು ಭಾವಾವೇಶ.

ಕೊನೆಗೊಮ್ಮೆ.........

ತುಂಬುಕಂಗಳಿಂದ ಒಳಗೆ ಸ್ವಾಗತಿಸಿ ಹೇಳಿದಳು

"ಬಾರೆ ಗೆಳತಿ, ತಾಯ್ತನದ ನಿನ್ನ ಕನಸು ಚೂರಾಗದು,

ನಿಶ್ಚಿಂತಳಾಗಿರು ಇಂದಿನಿಂದ ನಿನ್ನ ಮರಿಯು ನನ್ನದು"



೪೫)

೧) ಬೀಜವೇ, ನೆಲವೇ?



ನಾ ನಿನ್ನೊಳಗೆ ಬಿತ್ತಿದ್ದು ಗೊಡ್ಡುಬೀಜವೇನೋ,

ಮೊಳಕೆಯೊಡೆಯಲೇ ಇಲ್ಲ ನೋಡು.

ಆದರೆ ನೀ ಬಿತ್ತಿದ್ದು ಮೊಳೆತು,

ನನ್ನೊಳಗಿಲ್ಲಿ ಹಚ್ಚಹಸುರಾಗಿದೆ.

ಬೀಜದ ಸತ್ವ ಪ್ರಶ್ನಿಸಿದ್ದು ನನ್ನ ಆತ್ಮವಿಮರ್ಶೆ.

ಆದರೆ ನನ್ನದೇ ಆತ್ಮವಿಶ್ವಾಸ ಹೇಳುತಿದೆ,

ಬೀಜ ಮೊಳೆಯುವುದಕ್ಕೆ ನೆಲವೂ ಹಸನಿರಬೇಕು.



೨) ಮೌನದ ಬಿಸಿ



ಭಾವ ಬಳ್ಳಿಯಲಿ ಅರಳಿಹ ಸ್ನೇಹಕುಸುಮವೊಂದು

ಕಂಪು ತಾರದೆ ನಿನಗೆ ವಾಸನೆಯೆನಿಸಿದ್ದು ಯಾಕೆ?

ನೀ ನನ್ನತ್ತ ತೋರಿದ ಬೆಟ್ಟು,

ಅದರತ್ತ ತಲುಪಿದೆ ಕುಡುಗೋಲಾಗಿ.

ಗುಬ್ಬಿಗೆ ಬ್ರಹ್ಮಾಸ್ತ್ರಬೇಕಿಲ್ಲ,

ಈ ಬಳ್ಳಿ ಕುಯ್ಯಲು ಅಷ್ಟೆಲ್ಲ ಬೇಕಿಲ್ಲ,

ನಿನ್ನ ಉದಾಸೀನವೇ ಸಾಕು,

ಈ ಹೂವ ಬಾಡಿಸುವುದಷ್ಟು ಕಷ್ಟವಲ್ಲ,

ನಿನ್ನ ಮೌನದ ಬಿಸಿಯೇ ಸಾಕು.





೪೬) ಹಸಿರು ನೆನಪಿಸಿದ ಕಪ್ಪು



ಹಸುರು ರತ್ನಗಂಧಿಯ ಗಿಡದ ಮೇಲೆ

ಹಸುರು ಗಿಣಿಗಳ ಸಾಲು.

ಎರಡರ ಆತ್ಮಮಿಲನವಾದಂತೆ

ಅಲ್ಲಿರಲಿಲ್ಲ ಪ್ರತ್ಯೇಕತೆಯ ನೆರಳು

ಅಲ್ಲಿನ ಒಟ್ಟು ಸಾರಾಂಶ ಹಸುರೇ ಆಗಿತ್ತು.

ಹಸುರ ನೋಟದಲೇಕೆ ಮನಸು ಕಪ್ಪು ಕಾಣುತಿದೆ?

ತಪ್ಪುಗಳ ರಾಶಿಯಿದ್ದಾಗಲೂ ಹೀಗೆಯೇ

ನಿನ್ನದು ನನ್ನದೆಂದು ವಿಂಗಡಿಸಲಾಗದು

ನನ್ನದು ನಿನ್ನದ್ದ, ನಿನ್ನದು ನನ್ನದ್ದ ಇಮ್ಮಡಿಸಿ

ಅಲ್ಲೂ ಸಾರಾಂಶವೊಂದೇ ಮೂಡುವುದು,

ಆದರದರ ಬಣ್ಣ ಕಪ್ಪು.

ಕಣ್ಣ ಕಣ್ಣೀರಲ್ಲಿ ಕೆಂಪಾಗಿಸುವ ಕಪ್ಪು

ಎದೆಯ ಹಸಿರ ರಕ್ತ ಬಗಿಯುವ ಕಪ್ಪು.



೪೭)

೧) ಮರೆಯದಿರು



ನನಗೆ ತಾಗಲೆಂದೇ ನೀ ಕಳಿಸಿದ್ದು

ಬಂದು ತಲುಪಿದೆ, ಧನ್ಯವಾದಗಳು.

ಅಲ್ಲಿ ಬಿಸಿಯಾಗಿಯೇ ಹುಟ್ಟಿದ್ದರೂ,

ನನ್ನ ತಲುಪಿದಾಗ ಬಿಸಿಯಿರಲಿಲ್ಲ.

ಅಲ್ಲಿ ಚುಚ್ಚಲೆಂದೇ ಹೊರಟ ಬಾಣವಾದರೂ,

ಇಲ್ಲಿ ತಲುಪಿದ್ದು ಹೂವ ಹಿತಸ್ಪರ್ಶವಾಗಿ.

ಅಲ್ಲಿ ಸಿಟ್ಟು ಅದಕವಳಿಯಾಗಿ ಹುಟ್ಟಿದ್ದರೂ,

ಇಲ್ಲಿಗದು ನನ್ನನೆಮ್ಮದಿಯ ಜೊತೆ ಬಂದಿತ್ತು.

ಕೋಪಿಸಿಕೊಂಡಾದರೂ ಸರಿ, ಜೀವವೆ

ನೆನೆಯುತಿರು, ತೊರೆಯದಿರು,

ತೊರೆದು, ಮರೆಯದಿರು.



೨) ನಡೆದೀತೆ?



ಬಾಯಾರಿದ ಧರೆಯ ತಣಿಸುವಾಸೆಯಲಿ

ಮೋಡ ಹನಿಯಾಗತೊಡಗಿದ್ದಾಗಲೇ

ಅಕಾಲಗಾಳಿ ಬೀಸಿ ಮೋಡವ ಹೊತ್ತೊಯ್ದಿತೆಂದು

ಹಿಂದೆಯೇ ಮಳೆತುಂಬಿ ತಂದ ಇನ್ನೊಂದಕ್ಕೆ

ಧರೆ ಒಡ್ಡಿದ್ದ ಸೆರಗ ಮುಚ್ಚಿ ನಿರಾಕರಿಸಿದರೆ

ಅದರದೂ, ಅದರ ಸಂತಾನದ್ದೂ ಬಾಳು ನಡೆದೀತೆ?



೪೮) ಚೌತಿಯ ಚಂದ್ರ



ಅಂದು ಚೌತಿ, ನನ್ನಮ್ಮ ನನ್ನ ಪುಟ್ಟಿಗಂದಳು

"ಬಾ ಒಳಗೆ, ಚಂದ್ರನ ನೋಡಬೇಡ."

"ಯಾಕಜ್ಜೀ..?"-

ಪುಟ್ಟಿಯ ಪ್ರಶ್ನಾಮಾಲಿಕೆಯ ಹೊಸಮುತ್ತು.

ಗಣಪತಿಯ ಕತೆಗೆ ತಣಿಯದ ಪ್ರಶ್ನೆ ನನ್ನತ್ತ.

"ಆಮೇಲೆ ಹೇಳ್ತೇನಮ್ಮಾ" ಅಂದ

ನಾನೀಗ ಯೋಚನೆಯ ಕೂಪದೊಳಗೆ.

ಅದೇ ಸೊಗವೆರೆಯುವ ಚಂದ್ರ, ಅದೇ ಆಗಸ,

ಅದೇ ರಾತ್ರಿ, ಅವೇ ಕಾಂಬ ಕಂಗಳು.

ನಿನ್ನೆ ನಾಳೆಗಳಲವನು ಕಂಗಳ ಸೊಬಗು.

ಚಿಂತನೆಯ ಬದಲಾದ ಹಿನ್ನೆಲೆಯಲ್ಲಿ

ಇಂದು ಮಾತ್ರ ನೋಟಕೂ ನಿಷಿಧ್ಧ.

ಪ್ರಶ್ನೆಯಲಿ ಕಳೆದು ಹೋಗಿದ್ದೆ,

ಅಂಗಳದಿ ನಿಂದು ಅವನನೇ ನೋಡುತಿದ್ದೆ

ಅಮ್ಮ ಅಪವಾದದ ಭಯವೆಬ್ಬಿಸಿದಳು

ನಾನಂದೆ, "ನಾಳೆ ಕಂಡವರಾರು?

ಅಪವಾದವೆದುರಿಸಲು ನಾ, ಎಸಗಲು ಅವರು

ಇಲ್ಲದೆಯೇ ಹೋಗಬಹುದು, ಆದರೆ

ಇಂದಿನ ಚಂದ್ರ, ಮತ್ತವನ ಚೆಲುವೇ ನಿಜ

ನೋಡು ಬಾ ನೀನೂನೂ.



೪೯) ಮಾತುಮುತ್ತುಗಳು



೧)

ನಾ ನಿಂತ ನಿಲುವಲ್ಲಿ

ನನ್ನ ಪಾದದಡಿಯ ನೆಲದರಿವು ನನಗಷ್ಟೇ ಗೊತ್ತು.

ಹೂವೆಂದೋ ಇಲ್ಲ ಮುಳ್ಳೆಂದೋ

ನೀವು ಊಹಿಸಬಹುದು, ನಿಜ ಕಾಣಲಾಗದು

೨)

ಹಗಲುರಾತ್ರಿಗಳಂತೆ ಮಾತುಮೌನಗಳಿಗೂ,

ಕಾಲನಿಗದಿಯುಂಟು, ಕಾರ್ಯಕಾರಣಗಳುಂಟು.

ಎಷ್ಟು ಬಯಸಿದರೂ ಅವು ಅದಲುಬದಲಾಗವು.

ಹಾಗೆಂದು....

ದಿನ ಅಥವಾ ಬಾಯಿ ನಮ್ಮದಲ್ಲವೆನ್ನಲಾಗದು.



೫೦) ಚುಟುಕುದನಿ

೧)

ಕಂದನೆಂದೊಡನೆ ಅವಳ ಕಣ್ಮನಗಳಾವರಿಸುವ ನೀನು

ಬೇರ್ಯಾರೂ ಅಲ್ಲಿರಬಾರದೆಂದು ಅವಳ ಬಂಜೆಯಾಗಿಸಿದೆಯಾ?

೨)

ಸುಲಭವಾಗಿ ಅಕ್ಷರಗಳಾಗುವ ಈ ಎಲ್ಲಾ ಭಾವನೆಗಳು

ಮಾತಾಗುವ ಎಷ್ಟೋ ದಿನದ ಕನಸು ಕನಸಾಗಿಯೇ ಉಳಿಯಿತು.

೩)

ನೀ ನನ್ನ ಪ್ರೇಮಿಸಿದೆ ಎಂದರಿತಂದೇ ನಾನಿಲ್ಲವಾದೆ

ನಿನ್ನೊಳಗೇ ಕಳೆದುಹೋದದ್ದು ನಿನಗೇ ಸಿಕ್ಕದ ನೋವೇ?

೪)

ಗಾಢಮೋಡದ ಜೊತೆ ಬಂದು, ಭ್ರಮನಿರಸನ ಮಾಡುವ ಇತ್ತೀಚಿನ ಮಳೆಯಂತೆ

ಹೇಳಲೇಬೇಕೆನಿಸಿದ್ದು ಧಾವಿಸಿ ಬಂದು ಗಂಟಲಲ್ಲೇ ಕೆಲ ಹನಿಸುರಿಸಿ ಮೌನವಾಯಿತು.

೫)

ದೇವರಿಲ್ಲ ಎನ್ನುವವರೇ, ನಾಳೆ ಬಯಸಿದಲ್ಲೆಲ್ಲೂ ಸಾಂತ್ವನವಿಲ್ಲವಾದಾಗ,

ಅವನ ಮೌನಭರವಸೆಗೇ ನೀವೂ ಕಿವಿಯಾಗುವುವಿರಿ, ಒಪ್ಪಲಾರಿರಿ ಅಷ್ಟೇ.

೬)

ಸಿಹಿ ತಿನ್ನಗೊಡದ ಕಾಯಿಲೆಗೆ ಅಳುತ್ತಾ ಆ ದೊಡ್ಡ ಮನೆಯೊಡತಿ

ಹಸಿವೆ ತಾಳದೆ ಸತ್ತ ಕಂದಮ್ಮನ ಮಣ್ಣುಮಾಡಲು ಚಿಲ್ಲರೆ ಕಾಸಿತ್ತಳು.



೫೧)

೧)ಆತ್ಮದ ಬಂಧ



ಇಲ್ಲವೆನಿಸಿದುದರ ಕೊರಗಲ್ಲಿ ನೀ ಸವೆಸಿದೆಲ್ಲ ಕ್ಷಣಗಳು

ಇಲ್ಲವಾಗದೆ ಮರೆಯಾದುದಕೆ ಮಣಭಾರದ ಹೊರೆಯೇ ಹೌದು

ಆತ್ಮಗಳೆರಡರ ಬಂಧ ಜನ್ಮದಿಂದ ಜನ್ಮದವರೆಗೆ.

ಅದೆಲ್ಲಿಗೂ ಹೋಗಲಾರದು,

ಅಲ್ಲೇ ನಿನ್ನೊಳಗಿಂದ ನಿನ್ನನೇ ವೀಕ್ಷಿಸುತಿಹುದು.

ನಿನ್ನ ಕಣ್ಣೀರಿಗೆ ಅತ್ತು, ನೀ ನಗುವಾಗ ನಗುತಿಹುದು.



೨) ನಾ ಒಳ್ಳೆಯವಳು



ಆಡದೆ, ಒಳ್ಳೆಯವಳೆನಿಸುವ ನಿಟ್ಟಿನಲ್ಲಿ

ಕಳಕೊಂಡ ನೆಮ್ಮದಿಯ ಕ್ಷಣಗಳ ಹೋಲಿಕೆಯಲ್ಲಿ

ಪಡಕೊಂಡ ಕೆಡುಕೆನಲಿಲ್ಲದ ಸಮಾಧಾನ

ಬರೇ ಸ್ವಲ್ಪ, ಒಪ್ಪುವ ಮಾತೇ.

ಆದರೂ..................

ನನ್ನವರಲಾಗಲಿ, ಅದಲ್ಲದವರಲಾಗಲಿ

ತಪ್ಪಿಲ್ಲದೆ ಅನುಭವಿಸುವಾಗಲೂ

ಆಡಿ ಕೆಟ್ಟವಳೆನಿಸಿಕೊಳುವ ಧೈರ್ಯವಿಲ್ಲ.



೫೨) ಹೀಗೆರಡು ಪ್ರಶ್ನೆಗಳು



ಹಗಲೆಲ್ಲ ಜೊತೆಗಿದ್ದು ಸಾಕಷ್ಟು ಸುಖಿಸಿ,

ಪ್ರತಿರಾತ್ರಿಯೂ ಇಲ್ಲಸಲ್ಲದ ಕಾರಣವೊಡ್ಡಿ

ದೂರಾಗುವ, ಜಗದ ಇನ್ನೊಂದೆಡೆಗೆ

ಅದೇ ಸುಖವರಸಿ ಹೋಗುವ ರವಿಗಾಗಿ

ಮತ್ತೆ ಪ್ರತಿದಿನ ಬೆಳಿಗ್ಗೆ ಕಾಯುವ ಈ ಕಮಲದ್ದು

ಪ್ರೀತಿಯೆಂಬ ತಾಳ್ಮೆಯೇ ಅಥವಾ

ಪ್ರೀತಿಯೆಂಬ ಪೆದ್ದುತನವೇ ?!



ತನ್ನಲೇ ಪ್ರಾಣವಿರಿಸಿಕೊಂಡ ಇಳೆಗೆ

ಭಾನು ಉರಿಯಿತ್ತು ನೋಡುವ,

ತನ್ನಲೇ ನಲಿವನಿರಿಸಿದ ಚಕೋರಕೆ ಚಂದ್ರ

ಮಾಸವೊಂದರ ಕಾಲ ಕಾಣದೆ ಸತಾಯಿಸುವ,

ಈ ಉಪೇಕ್ಷೆ ................

ಇಳೆಯ ಮೇಲೆ ಭಾನುವಿನ,

ಚಕೋರನ ಮೇಲೆ ಚಂದ್ರಮನ,

ನಂಬಿಕೆಯ ಫಲಿತಾಂಶವೇ?





೫೩) ಗಿಡದ ಮೋಸ



ಅಲ್ಲೊಂದು ತೋಟ, ಒಳಗೆ ಹೂವಿಲ್ಲದ ಒಂದು ಹೂಗಿಡ.

ಹೂಬಿಡುವಷ್ಟು ಬೆಳೆಸದೆ ಆಕಾರಕಾಗಿ ಕತ್ತರಿಸುವ ಮಾಲಿ

ಅಲ್ಲಿ ನೋವು ಎಂದಿನಂತೆ ಸೆಳೆಯಿತು,

ದಿನವೂ ನಾ ಮುಟ್ಟಿ ಸ್ಪಂದಿವುದು ಶುರುವಾಯಿತು

ಮೊದಲೆಲ್ಲ ನಕ್ಕು ಅಲುಗಾಡಿದ್ದು ಮುಂದೊಮ್ಮೆ ಮುಳ್ಳಲಿ ಚುಚ್ಚಿತು

ಹೂವಾಗದ ಜನ್ಮ ಮುಳ್ಳಾದಾಗ ಚುಚ್ಚುವುದೇ ಅದರ ಧರ್ಮ-

ನನ್ನ ವಿಶ್ಲೇಷಣೆ.

ಮರುದಿನವೂ ಚುಚ್ಚಿದಾಗ ಎಲ್ಲೋ ಸಣ್ಣ ನೋವು

ಹಲವು ಗಾಯಗಳ ನಂತರ ಮನಒಲ್ಲದಿದ್ದರೂ

ಪರೀಕ್ಷೆಗಾಗಿ ದೂರದಿಂದ ವೀಕ್ಷಿಸಿದೆ.

ನಾ ಬಾಗಿ ಮುಟ್ಟಿದಾಗ ಮಾತ್ರ ಮುಳ್ಳುಜಾಗೃತ

ನಾನಿರದಾಗ ಗಿಡದ ನೋವಿನದೇ ಪ್ರದರ್ಶನದಾಟ

ಪ್ರೀತಿಯ ತಾಳ್ಮೆ ಗುಲಾಮತನವೆಂದುಕೊಂಡು

ತಮಗೆ ಮಿಡಿವ ಜೀವಗಳ ಚುಚ್ಚಲಿಕೇ ಮುಳ್ಳನೇಳಿಸುವದ

ನಾನೊಪ್ಪುವುದಿಲ್ಲ, ಆ ವ್ಯಕ್ತಿತ್ವಕ್ಕಿನ್ನು ಮಿಡಿಯುವುದಿಲ್ಲ.

ಈಗ ನಾ ಆ ತೋಟಕೇ ಹೋಗುವುದಿಲ್ಲ.





೫೪)

೧) ಬರೆವವರ ತುರ್ತು



ಹೂವು ಹಕ್ಕಿ ಬಾನು ಚುಕ್ಕಿಗಳು

ನೋವುನಲಿವು ಮೋಸದ್ರೋಹಗಳು

ಮಿಡಿತ ತುಡಿತ ಸರಸವಿರಸಗಳು

ಪ್ರೀತಿಪ್ರೇಮ ನಾಡುನುಡಿಗಳು

ಇವಿಷ್ಟೇ ಕವನವಾಗುವವೆಂದುಕೊಂಡಿದ್ದೆ.

ಹಸಿವೆ ಸಾವು ದಾಸ್ಯ ವಿಷಾದಗಳೂ

ಮಹಾಕಾವ್ಯಗಳಾಗುವುದ ಕಂಡು

ಬರೆಯಹೊರಟವಗೆ ಆಳಕಿಳಿಯುವ

ಮತ್ತು

ತೇಲುದೃಷ್ಟಿಯಲಿ ನೋಡಲಾಗದ

ಅನಿವಾರ್ಯತೆಯ ಅರಿವಾಯಿತು.



೨)ನೋಟ ಮತ್ತು ದೃಷ್ಟಿ

ಕಾಂತಿ ಕಾಣಬೇಕಾದರೆ ಕಾಂತಿಯರಸೊ ದೃಷ್ಟಿ ಬೇಕು

ಹೂಗಿಡದಲ್ಲಿ ಹೂವೂ ಇದೆ, ಮುಳ್ಳೂ ಇದೆ

ಅಂದೆಂದೋ ಚುಚ್ಚಿದ ಮುಳ್ಳ ನೆನೆಯುತ್ತಾ

ಬಳಿಸಾರಿದರೆ, ಭಯವೇ ಆಗುವುದು,

ಕಣ್ಣು ಹೂವ ನೋಡಿದರೂ, ದೃಷ್ಟಿಯಲಿ ಮುಳ್ಳೇ ಇದ್ದು,

ಹೂವ ತಡವಲಾಗದು, ಕಣ್ಮುಚ್ಚಿ ಮೈಮರೆಯಲಾಗದು



೫೫) ಪ್ರೀತಿ ನಾಪಾಸಾಗದು



ಪ್ರೀತಿಯ ಪರೀಕ್ಷಿಸುವುದು ಸಲ್ಲ,

ಅದು ನಾಪಾಸಾಗದು, ಆದರೆ ನಾವಷ್ಟೇ.

ಸೋಲುವ ಭಯವದಕಿಲ್ಲ.

ಪ್ರೀತಿಯೇ ಆದರೆ ಅಲ್ಲಿ ಶರತ್ತಿರುವುದಿಲ್ಲ,

ನಿರೀಕ್ಷೆ ಹುಸಿಯಾದರೆ, ಆ ಗಳಿಗೆಗಷ್ಟೇ,

ಪ್ರೀತಿ ಹುಸಿಯಾಗುವುದಿಲ್ಲ.

ರಾಮನೇ ಪರೀಕ್ಷಿಸಿ ಸೋತನಲ್ಲ!?

ಋಣಾನುಬಂಧವಿದ್ದಲ್ಲದು ಇರುವುದಷ್ಟೇ,

ಅದಕೆ ದೇವ- ಮಾನವರ ವ್ಯತ್ಯಾಸ ಗೊತ್ತಿಲ್ಲ.

ದಿನಕೊಮ್ಮೆ ಮರೆಯಾಗುವ ಸೂರ್ಯಗೆ ಸಾವಿದೆಯೇ?

ಹೊರಗಣ್ಣ ಮುಚ್ಚಿ ಒಳಗಣ್ಣಲದ ಕಾಣುವಾ.

ನಮ್ಮೊಳಗೇ ಹುಟ್ಟಿದ್ದು, ನಮ್ಮದೇ ಎಂದು ನಂಬುವಾ





೫೬) ಪ್ರೀತಿ ಕಾಣಿಸದು



ಪ್ರೀತಿ ಗಾಳಿಯಂತೆ, ಕಾಣಿಸದು,

ಉಸಿರಾಡಿಸುವುದು.

ಪ್ರೀತಿ ಕಂಪಿನಂತೆ, ಕಾಣಿಸದು,

ಮೈಮನ ತುಂಬುವುದು.

ಪ್ರೀತಿ ಖುಶಿಯಂತೆ, ಕಾಣಿಸದು,

ಮೈನವಿರೇಳಿಸುವುದು.

ಪ್ರೀತಿ ದೈವದಂತೆ, ಕಾಣಿಸದು,

ಬೀಳದಂತೆತ್ತುವುದು.

ಅದು ಹರಕೆಗೆ, ಹೊಗಳಿಕೆಗೆ, ಕಾಣಿಕೆಗೆ, ಹಾಸಿಗೆಗೆ

ಇಂಥವ್ಯಾವುವಕ್ಕೂ ಒಲಿಯದು.

ಅದೊಲಿಯುವುದಾದರೆ ನಂಬಿಕೆಗೆ, ನಂಬಿಕೆಗೆ

ಮತ್ತು ನಂಬಿಕೆಗೆ ಮಾತ್ರ





೫೭) ಬಾಳೆಂಬ ಕನ್ನಡಿ



ಬಾಳು ಕನ್ನಡಿಯಂತೆ

ನಮ್ಮೊಳಗ ನೇರ ಬಿಚ್ಚಿಡುವುದು

ಸೊಗಸಲ್ಲಿದ್ದರೆ ಸೊಗವ ,ಕೆಡುಕಿದ್ದರೆ ಕೆಡುಕ

ಪ್ರೇಮವಿದ್ದರೆ ಪ್ರೇಮವ, ದ್ವೇಷವಿದ್ದರೆ ದ್ವೇಷವ

ತಂದು ಮುಂದಿಡುವುದು.

ನಿನ್ನ ಕಾಣಿಸಲೆಂದು ಅವನ ಮುಂದದನಿಟ್ಟರೆ,

ಅಲ್ಲಿ ತನ್ನೊಳಗ ಕಂಡು ನಿನ್ನದೆಂದೆಣಿಸುವ

ಅವರಿವರ ಮಾತು ಬಿಡು,

ಮುಂದಿರುವ ಕನ್ನಡಿಯ ಮಾತ್ರ ನಂಬು.

ಮೆಚ್ಚುವಂಥದ್ದಿದ್ದರೆ ಬೆಳೆಸು

ಇಲ್ಲದಿದ್ದರೆ ಕಾಯಕಲ್ಪದಿ ಮೂಡಿಸು

ಅದನೂ, ನಿನ್ನನೂ ತಿಕ್ಕಿ ಬೆಳಗಿಸು

ಆಗಲೊಮ್ಮೆ...........

ಸುಂದರ ಬಿಂಬ ಮೂಡದಿದ್ದರೆ ಕೇಳು



೫೮) ದಿಟ್ಟ ನಿಲುವು



ಊರ ದೇವರ ಜಾತ್ರೆ,

ಉತ್ಸವ ಮೂರ್ತಿಯ ಮೆರವಣಿಗೆ

ನನ್ನ ಗಿಡವಂದೇ ಅರಳಿಸಿದ ಅಚ್ಚಬಿಳಿ ಗುಲಾಬಿಯ

ಮೂರ್ತಿಗರ್ಪಿಸೊ ಆಸೆಯಲಿ ಹಿಡಿದು ಕಾದಿದ್ದೆ.

ಹೂವು ಕೊಸರಿದಂತೆ, ಒಲ್ಲೆ ನಾ ಎಂದಂತೆ....!

ಕೈ ಸಡಲಿಸಿದೆ, ಬಿತ್ತು ನನದೆ ಪಾದದ ಮೇಲೆ.

"ದೇವಸನ್ನಿಧಿಗಿಂತ ಈ ಪಾದ ಹಿತವೆನಿಸಿತೇ?!!!"

ಹೂವು ಮಾತಾಡಿತು.....

"ಆ ಮೂರ್ತಿಯೇ ಕಾಣಿಸದಷ್ಟು ಹೂವಲ್ಲಿದೆ.

ಈಗ ಮೂರ್ತಿ ನನ್ನ ಗಮನಿಸದು,

ಬರೇ ಸಹಿಸಿ ಹೊರುವುದು.

ನೀನೆರೆದ ನೀರು ನನ್ನ ನೆತ್ತರಾಗಿಹುದು

ನೀನೆರೆದ ಪ್ರೀತಿ ನನ್ನ ಚೆಲುವೆ ಆಗಿಹುದು

ನನ್ನಿರುವೇ ಇಂದು ನಿನ್ನ ಸಂಭ್ರಮವಾಗಿಹುದು

ನನ್ನ ಸಹಿಸಿಕೊಳುವ ಆ ಗದ್ದುಗೆಗಿಂತ,

ಸಂಭ್ರಮಿಸುವ ನಿನ್ನ ಪಾದುಕೆಯೇ ಮೇಲು"

ಪುಟ್ಟ ಹೂವ ನಿಲುವು ಬೆಟ್ಟದಷ್ಟು

ದಿಟ್ಟವೆನಿಸಿತು, ದಿಟವೂ ಹೌದನಿಸಿತು.



೫೯) ಕ್ಷಮಿಸು ಜೀವವೇ....



ನಾನಾಗಲೇ ಬಂದಾಯ್ತು,

ನನ್ನದೆಲ್ಲವ ನಿನ್ನದಾಗಿಸಿಯಾಯ್ತು

ನನ್ನ ನಡೆ ಸಪ್ಪಳ ಮೆತ್ತಗಿತ್ತೇನೋ,

ಇಂದಿನವರೆಗೂ ನೀ ಕೇಳದಾದೆ.

ಕ್ಷಮಿಸು ಜೀವವೇ........

ನೀನಾಗ ಕಾಯುತಿದ್ದುದು ಅದಕಲ್ಲವೇನೋ

ನಾ ಬಾಗಿಲದೂಡಿ ಒಳನಡೆದದ್ದೂ ಸರಿಯಲ್ಲವೇನೋ

ಈಗ ನೀನಿಲ್ಲಿಂದ ಅಲ್ಲಿಗೆ ಕರೆಯುತಿರುವೆ,

ಬರಲೇನೂ ಇಲ್ಲಿಂದು ಉಳಿದಿಲ್ಲ,

ಅಲ್ಲಿ ಹಳತಾಗಿರುವುದ ನೀ ಕಾಣುತಿಲ್ಲ.



೬೦)ಹೀಗೆರಡು ದಾರಿಗಳು



ತಿರುವಿರದ, ಕವಲಿರದ ದಾರಿಯ ಪಥಿಕ,

ನೇರ ನಡೆಯುತಿರಬೇಕು

ದಾರಿ ತನ್ನಷ್ಟಕ್ಕೆ ಕೊನೆಯಾಗುವ ಮೊದಲು

ಮನದಾಸೆಗೆ ದಿಕ್ಕು ಬದಲಿಸಿದರೆ

ದಾರಿಗಳೇ ಇರದ ಕಾಡುಪಾಲು,

ಇಲ್ಲ,

ಕೊನೆ ಕಾಣದ ಕಣಿವೆ ಪಾಲು.



ಮುನ್ನಡೆಯುವವರು-

ಪಾಲಿಗೆ ಬಂದದ್ದು ಹೇಗಿದ್ದರೂ ಸರಿ

ದಾರಿ ಹೋದಂತೆಯೇ ನಡೆಯುತಿರಬೇಕು.

ಅದ ಬಯಸದವರು

ಹಿಂತಿರುಗಬೇಕಾದರೆ ಅದೇ ದಾರಿಯಲ್ಲ,

ವಿಧಿತೋರಿದ್ದಲ್ಲದ ಆರಿಸುವ ಧೈರ್ಯವಿರಬೇಕು



೬೧) ಪಿಸು ಮಾತುಗಳು



೧)

ದೇಹವ ನಂಬುವದಕ್ಕೊಂದು, ಮನಸ ನಂಬುವುದಕ್ಕೊಂದು

ಹೀಗೆ ಪ್ರೇಮಕ್ಕೆರಡು ವ್ಯಾಖ್ಯೆಗಳಾದಾಗ ಹೃದಯ ಪೆಚ್ಚಾಯಿತು.

೨)

ನೀ ಮುಂದೆಯೇ ಸಾಗುತಿರು, ಗುರಿ ನಿನ್ನ ಸಮೀಪಿಸಲಿ

ಹಿಂದೆಯೇ ನಾನಿದ್ದೇನೆ, ಯಾಕೆಂದರೆ, ನೀ ಈಗ ನನ್ನ ಗುರಿ

೩)

ನೋಯಿಸಿದಕೆ ಕ್ಷಮಿಸು,

ನೋವಿಳಿಸಲೆಂದೇ ಬಂದೆ, ದಾರಿಯಲಿ ನಗು ಹೆಕ್ಕಿ ತಂದೆ

ಅದರ ಕಂಪಲ್ಲಿ ನಿನ್ನ ನಿರಾಸೆ ಇದ್ದುದು ಕಾಣಲೇ ಇಲ್ಲ.

೪)

ನಾನಂಥದ್ದೇನೂ ಮಾಡದಾದೆ, ನಿನ್ನ ದೂರೂ ಸರಿಯೆ.

ನನಗಾಗದ್ದ ನಿನ್ನಿಂದ ಬಯಸಲಾರೆ, ಆದರೆ

ಒಮ್ಮೆ ಯೋಚಿಸುವೆಯ, ನೀ ನಾನಾಗಿದ್ದರೆ.....?



೬೨) ಆಗ ನಾನಿರುವುದಿಲ್ಲ.....



ನನ್ನ ಅಳಿಸಬೇಕೆಂದ ನಿನ್ನ ಮಾತು ಕೇಳಿತು

ಯಾರೆಂದು ನೀ ಹೇಳಿದ್ದಿರಬಹುದು,

ನಾ ಕೇಳದಾದೆ.

ನನ್ನ ನಾ ಅಳಿಸಲಾರೆ- ಯಾಕೆಂದರೆ,

ನೀ ನನ್ನೊಳಗಿದ್ದೀಯಲ್ಲಾ....!

ಬಹುಶಃ ನಿನ್ನಿಂದಲೂ ಅದಾಗದು- ಯಾಕೆಂದರೆ,

ನಾನಿರುವುದು ನಿನ್ನ ಹಣೆಬರಹದಲ್ಲಿ (ನೀ ನನದರಲ್ಲಿ)

ಮತ್ತು ಬರೆದವನೂ ಹಣೆಬರಹವಳಿಸಲಾರ.

ನಿನಗೊಂದು ಹಿಡಿ ತೃಪ್ತಿಯ ನಗು ತರುವುದಾದರೆ,

ಎಂದಿನಂತೆ ನಿನ್ನ ಯತ್ನಕೆ ಶುಭ ಹಾರೈಸುವೆ.

ಪವಾಡನಡೆದು ಮುಂದೊಮ್ಮೆ ಅದು ಸಾಧ್ಯವಾಗುವುದಾದರೆ,

ಈಗಲೇ ಮನಸಾರೆ ಅಭಿನಂದಿಸಿಬಿಡುವೆ

ಯಾಕೆಂದರೆ....ಆಗ ನಾನಿರುವುದಿಲ್ಲವಲ್ಲಾ.......



೬೩) ಸಂಬಂಧ



ಸಂಬಂಧಕ್ಕೊಂದು ಹಣೆಪಟ್ಟಿ ಇರಕೂಡದು.

ಹೆಸರಿದ್ದರೆ ಕಾಯ್ದುಕೊಳುವ ಚಿಂತೆಯಿಹುದು

ಅಲ್ಲಿ ನಿಭಾಯಿಸುವ ಹಿಂಸೆಯಲ್ಲ, ತಾನಿಲ್ಲವಾಗುವ ಅರ್ಪಣೆಯಿರಬೇಕು

ಅಲ್ಲಿ ಕೊನೆಯ ಚಿತ್ರಣವಲ್ಲ, ನಿರಂತರ ಹರಿವಿನರಿವಿರಬೇಕು

ಉಳಿಸುವ, ಅಳಿಸುವ ಯೋಚನೆಯಲ್ಲ, ತಂತಾನೇ ಬೆಳೆವ ಸಲೀಸಿರಬೇಕು

ಪಲ್ಲವಿಸಿದಾಗ ಬಣ್ಣದ ಚೆಲುವಲ್ಲ, ಕಾಣದ ಕಂಪು ಎದ್ದು ತೋರಬೇಕು

ಅಲ್ಲಿ ನಿಬಂಧನೆಯಲ್ಲ, ನಿರ್ಬಂಧವಿಲ್ಲದ ಮುಕ್ತತೆಯಿರಬೇಕು

ಸಂಶಯ- ಭಯದ ಕೂಸು ಮತ್ತು ನಂಬಿಕೆಯ ಸಾವು.

ಅದಕಲ್ಲಿ ಎಡೆಯಿಲ್ಲದಿರಬೇಕು.................

ಇಂಥದ್ದೊಂದು ಅನುಬಂಧ ನನಗೀಗ ಬೇಕು



೬೪) ಪಾಚಿಗಟ್ಟದಂತೆ....



ಪಾಚಿಕಟ್ಟದಂತೆ ಮನಸ ಕಾಯುತಿರಬೇಬೇಕು

ಆರ್ದ್ರತೆ ಇದ್ದಲ್ಲದು ಕಷ್ಟವೇ..ಆದರೂ

ಪಾಚಿ ಹುಟ್ಟದಂತಿಡಲು ಪ್ರಯತ್ನಿಸಬೇಕು

ಒಮ್ಮೊಮ್ಮೆ ಮುಚ್ಚಳವ ತೆಗೆದಿಡಲುಬೇಕು

ಆಗಾಗ ನೇಸರನೂ ಒಳಗಿಣುಕಬೇಕು

ತೇವ ನಿಲ್ಲದೆ, ಮೆಲ್ಲ ಹರಿಯುತಿರಬೇಕು

ಭಾವ ತುಂಬಿದರೊಮ್ಮೆ ಖಾಲಿಯಾಗಿಸಬೇಕು

ಸಂಬಂಧ ಪಟ್ಟಭದ್ರವಾಗದಿರಬೇಕು

ಬಂದದ್ದು ಒಳಹೊರಗೆ ನಡೆಯುತಿರಬೇಕು

ಹಳತು ಹೊಸತಕೆ ಜಾಗಮಾಡಿಕೊಡಬೇಕು

ಇಷ್ಟೆಲ್ಲ ಮಾಡಿಯೂ..........

ಕಟ್ಟಿದರೆ ಪಾಚಿ ಗಾಢವಾಗಬಿಡಬಾರದು

ಹುಟ್ಟಿನಲೆ ಒರೆಸಬೇಕು, ನಿರ್ಲಕ್ಷ್ಯ ಸಲ್ಲದು

ಗಟ್ಟಿಪಾಚಿಯ ಕೆರೆಯದೇ ತೆಗೆಯಲಾಗದು

ಕೆರೆತ ಮಿದುಮನವ ಗಾಯಗೊಳಿಸದಿರದು

ಹಾಗಾಗಿ ..................

ಪಾಚಿಗಟ್ಟದಂತೆ ಮನಸ ಕಾಯುತಿರಬೇಕು



೬೫) ಇನ್ನೇನು ಕೇಳಲಿ?



ನಿನ್ನ ಹರಕೆಯ ಯಾದಿಯಲ್ಲಿ,

ನಿನ್ನ ಕೋರಿಕೆಯ ಪಟ್ಟಿಯಲ್ಲಿ

ನಿನ್ನದೇ ಹೆಸರಿಲ್ಲ

ಪರರ ಇಲ್ಲಗಳ "ಇಲ್ಲವಾಗಿಸು"

ಎಂದೆನಗೆನುವ ನಿನಗೆ ಬೇಕಾದ್ದಿಲ್ಲವೆ?

-ನನ್ನ ದೈವವೊಂದು ದಿನ ಕೇಳಿದಂತೆ.....



ನಾನುತ್ತರಿಸಿದೆ-

ಜಗದ ನೋವುಗಳ ನಡುವೆ ನನದೊಂದೆ ನಲಿವು,

ನಲಿವುಗಳ ನಡುವೆ ನನದೊಂದೆ ನೋವು

ಒಂಟಿತನ ಕಾಡಿ ಓಡಿ ಹೋದಾವು

ಅಲ್ಲದೆ,

ನನ್ನ ದನಿ ತಲುಪುವ ಸನಿಹದಲ್ಲಿ ನೀನಿರಲು

ನಾ ಕೇಳಲು ಇನ್ನೇನಿದ್ದೀತು?



೬೬) ಚುಟುಕಗಳು



೧)

ರಾಮ ರಾವಣರ ನಾವೇ ಅವರಾಗಿ ನೋಡಬಹುದು,

ಆವಾಹಿಸಿಕೊಳಬೇಕಿಲ್ಲ, ನಮ್ಮೊಳಗಿಬ್ಬರೂ ಇದ್ದಾರೆ

ಒಮ್ಮೆ ಅವ, ಇನ್ನೊಮ್ಮೆ ಇವ ಏಳುತಿರುತಾರೆ

ಸಾಧ್ಯವಾದರೆ, ಹನುಮನ ಅವನಾಗಿ ನೋಡುವ

ಅವಾಹಿಸಿಕೊಳ್ಳುವಾ,

ಹಾಗೆ ಶರಣಾಗುವುದ ಕಲಿಯುವಾ

೨)

ಊರ್ಮಿಳೆಯ ನೋವಿಗೆ ಮಹಾಕಾವ್ಯ ಕಿರಿದಾಯ್ತು

ಸೀತೆಯದಕೆ ಭೂಮಿಯೊಡಲೇ ಬಿರಿಯಿತು

ಆದರೆ,

ಕೈಕೇಯಿಯದಕೆ, ತಾರೆಯದಕೆ, ಮಂಡೋದರಿಯದಕೆ

ಒಂದಕ್ಷರವೂ ಇಲ್ಲವಾಯಿತೇ?



೬೭) ಬೆಟ್ಟದಡಿಯ ಗಿಡ



ಒಮ್ಮೆ ಹಸಿರಾಗೊ, ಒಮ್ಮೆ ಒಣಗೋ ಬೆಟ್ಟವೊಂದು ,

ಪಕ್ಕ ದೊಡ್ಡ ಮರ, ಸುತ್ತ ದೊಡ್ಡ ಬಯಲು,

ತುದಿಯಲೊಂದು ದೇಗುಲ, ಒಳಗೆ ಮೊಳಗೊ ಗಂಟೆ

ಬೇಸರ ನೀಗಲವಕೆ ಪರಸ್ಪರರ ಸ್ನೇಹವಂತೆ.



ಗಾಳಿಯೇರಿ ಬಂತಲ್ಲಿಗೊಂದು ಅಜ್ಜನಗಡ್ಡ

ಆ ಅಗಾಧತೆಯ ಬುಡದಿ ಬಯಸಿ ಸ್ನೇಹ

ನೆಲೆಯೂರಲು ನಿಲಿಸಿತು ಹಾರಾಟ



ಬೀಜಮೊಳೆತು ಗಿಡ ಹುಟ್ಟಿ

ಅಭಿಮಾನವೇ ಹಸುರಾಗಿ, ಆರಾಧನೆಯೇ ಹೂವಾಗಿ....

ಹೀಗೆ ಕಾಲ ಭೂತವಾಗುತಿತ್ತು.



ಬೀಜ ಬೆಟ್ಟವ ಕತ್ತೆತ್ತಿಯೇ ನೋಡುತಿತ್ತು

ತನ್ನಾಸೆಗದು ಕಣ್ಣಾಗುವುದ ಕಾಯುತಿತ್ತು

ಬೆಟ್ಟಕೆ ಬಾಗಿ ಬುಡ ಕಾಣಲಾಗಲೇ ಇಲ್ಲ,

ಗಿಡಕೆ ಬೆಟ್ಟದೆತ್ತರ ತಲುಪಲಾಗಲೇ ಇಲ್ಲ





೬೮) ಮೂರು ಜಿಜ್ಞಾಸೆಗಳು

೧)

ನಿನಗೆನಲಿ ಮಾತಿಲ್ಲ ಎಂದ ಮೌನದೊಳಗೇ ಮಾತ ಹುಡುಕುವ ಕಣ್ಣು

ಮರುಭೂಮಿಯಲಿ ಮೃಗತೃಷ್ಣೆಯ ಬೆನ್ನಟ್ಟುವ ಒಂಟೆಯಂತೆ.

ಯುಗಗಳೇ ಕಳೆದರೂ ಮರುಭೂಮಿ, ಒಂಟೆ, ಮೃಗತೃಷ್ಣೆ

ಎಲ್ಲ ಹಾಗೆಯೇ ಉಳಕೊಂಡಿರುವುದು ಸೋಜಿಗವಲ್ಲವೆ?!

೨)

ಗಾಯ ಮಾಡಿದ ಚೂರಿಗೆ ಗಾಯ ಮಾಡಿದವರುಂಟೇ?

ಹುಶಾರಾಗಿ ವ್ಯವಹರಿಸಬಹುದು ಇಲ್ಲ, ದೂರವಿಟ್ಟುಬಿಡಬಹುದು.

ಆದರೆ ಗಾಯ ಮಾಡುವ ಅನುಬಂಧಗಳಿಗೆ.....??

ವ್ಯವಹಾರವಿದೆಯೇ ಅಲ್ಲಿ, ಅಥವಾ ದೂರವಿಡಬಹುದೇ?

೩)

ಪ್ರೇಮ- ದ್ವೇಷಗಳ ನಡುವಿನದು, ಮುಸ್ಸಂಜೆಯಂತೆ

ಹಗಲಿನ ಮುಂದುವರಿಕೆ ಅಥವಾ ರಾತ್ರಿಯ ಹುಟ್ಟು

ಮುಸ್ಸಂಜೆ ಕಾಲದಧೀನ, ಮುನ್ನಡೆದು ರಾತ್ರಿಯಾಗಲೇಬೇಕು

ಆದರೆ...

ನಮ್ಮಾಧೀನದ್ದ ಹಿಂದೆಳೆದು ಅನುಭೂತಿಯಾಗಿಸಬಹುದೇ?!



೬೮) ಹನಿಹನಿ ಅನಿಸಿಕೆ



೧)

ಕಾಯುತಿದ್ದ ಕಾದ ಭೂಮಿಯ ಮೇಲೆ

ಹಲಕಾಲದ ನಂತರ ಬಿದ್ದ ಕೆಲವೇ

ತುಂತುರು ಮಳೆಹನಿ

ಮಣ್ಣಿನೊಳ ಹೊಕ್ಕು ಕೂತಿದ್ದ

ವಾಸನೆಯ ಹೆಕ್ಕಿ ತಂದು

ಹಿತವಾದ ಪರಿಮಳವಾಗಿಸಿದವು

೨)

ಅವಮಾನವ ಯಾರಾದರೂ ನುಂಗಬಹುದು

ಅನಿವಾರ್ಯತೆ ಗಂಟಲೊಳಗಿಳಿಸುವುದು

ಖಾಲಿಬಯಲಲೊಮ್ಮೆ ಅದ ಹೊರಕಕ್ಕಬಹುದು

ಆದರೆ ಅರಗಿಸಿ ಅದನೂ ದಕ್ಕಿಸಿಕೊಳುವ

ತಾಕತ್ತಿರುವುದು ಪ್ರೀತಿಗೆ ಮಾತ್ರ.

೩)

ಕಣ್ಮುಂದೆ ಕಣ್ತುಂಬುವಂತೆ ನಿಂತ ನಾನು

ಕಾಣಬಾರದೆಂದು ಕಣ್ಮುಚ್ಚಬೇಡ

ಭ್ರಮೆಯ ಕವಚ ಸುರಕ್ಷವೆಂದು

ನಾನಿಲ್ಲದ ಸುಳ್ಳಿನೊಳಹೊಕ್ಕಬೇಡ

ಕಾಲಲೊದ್ದಾದರೂ ಒಮ್ಮೆ ನೋಡು

ನಾನಿರುವ ಆ ಸ್ಪರ್ಶ ನಿನಗರಿವಾದರೆ ಸಾಕು



೬೯) ನಗುವಿನಾಸೆ



ನಾನೊಂದು ಖಾಲಿನಗು,

ಸಹಜತೆಯ ಚಪ್ಪಡಿಕಲ್ಲಿನಡಿ ಮುಚ್ಚಿ

ಸೊಗ ಮಾತ್ರ ಹೊರಸೂಸೊ ಪೊಳ್ಳುನಗು



ಸುಖಕೆ ನಕ್ಕು, ನೋವಿಗಳಬಲ್ಲವರೇ,

ನಿಮಗೆ ನಾನಾಗೊ ಆಸೆ, ನನಗೆ ನೀವಾಗುವದ್ದು



ಸಹಜವಾಗಿ, ಸರಳವಾಗಿರುವುದೆನಗೂ ಇಷ್ಟವೇ

ಸುಳ್ಳುಸುಳ್ಳೆ ಸಿಂಗರಿಸಿಕೊಳಬೇಕು, ನಗುವಾಗಿ ಹುಟ್ಟಿರುವೆ



ನನ್ನಲೂ ಇವೆ ಹಲವು ಹಣ್ಣಾದ ಹುಣ್ಣು,

ಕಾಲ್ಚೆಂಡಾಗಿಸಿ ಬಿಸುಟ ಹಸಿಗಾಯಗಳು

ಬೆನ್ನಲಿವೆ, ಒಡಲಾಳದಲಿವೆ, ತೋರಲಾರೆ



ಸುಳ್ಳುಮರೆವ ಮುಲಾಮ ಹಚ್ಚಿ ಮುಚ್ಚಿರುವೆನಲ್ಲಾ..,

ಗಾಳಿಯಾಡದೆ, ಅವು ಒಣಗುತಿಲ್ಲ, ಮಾಯುತಿಲ್ಲ.



ನಗುವಾಗುತ, ಒಳಗೊಳಗೇ ಅತ್ತದ್ದು ಸಾಕಾಗಿದೆ

ಕಣ್ಣೀರಾಗಿ ಧುಮ್ಮಿಕ್ಕುವ ರಭಸವೀಗ ಬೇಕಿದೆ.



ಪುಣ್ಯಕೋಟಿಯ ಹಾಗೆ ಸೆರಗೊಡ್ಡಿ ಕೇಳುವೆ

"ವಿಧಿಯೇ, ಆಣೆ ಮಾಡುವೆ, ಮತ್ತೆ ಹಿಂತಿರುಗುವೆ

ಒಂದೆ ಒಂದು ಕ್ಷಣದ ಮಟ್ಟಿಗೆ ಅಳುವಾಗುವೆ



ಗಾಳಿ ಒಳಗೂ ಬೀಸಿ ಗಾಯಗಳು ಮಾಯಲಿ

ಹಳತು ಖಾಲಿಯಾಗಿ ಹೊಸನೋವಿಗೆ ತೆರವಾಗಲಿ



ನಗುವಿನೊಳಗೂ ಇರುವ ಅಳು ಜಗಕೊಮ್ಮೆ ಕಾಣಲಿ

ನಗೆಯ ವರ ಕೇಳ್ವವರ ಭ್ರಮೆ ಹರಿದು ಬಿಡಲಿ"



೭೦)ಮಾತು ಮಳೆಯಲಿ ಮೀಯೋಣ



ಅವಮಾನದ ನೆರಳು ತಂಪಲ್ಲ, ಒಪ್ಪಿದೆ.

ಅದರ ಪರಿಧಿಯಿಂದಾಚೆ ಯಾಕೆ ಬರಲೊಲ್ಲೆ?



ಝಾಡಿಸಿ ಒದ್ದೆದ್ದು ಬರಬಲ್ಲೆಯ, ಇಲ್ಲ ತಾನೇ?

ಪ್ರೀತಿಮರದಡಿಯ ಆ ನೆರಳಲಿ,

ಅನಿವಾರ್ಯತೆಯ ಚಾಪೆಗೊರಗುವುದು ರೂಢಿಯಾಗಿದೆ ತಾನೇ...



ಉರಿಸುವುದಕೇ ಕೆಲವು, ಬೇಯುವುದಕೇ ಕೆಲವು.

ಪಾತ್ರ ಹಂಚಿಕೆಯಾಗಿಬಿಟ್ಟಿದೆ, ನಾಟಕವೂ ಸುರುವಾಗಿದೆ,

ಬದಲಾಗುವುದು, ಹಿಂತೆಗೆಯುವುದು- ಈಗಾಗದು.



ಈಗೇನು, ಉರಿ ತಣಿಸಬೇಕೇನೇ, ನಾನಿಲ್ಲವೇ ಗೆಳತಿ?

ಬಾ, ಮಾತು ಮಳೆಯಲಿ ತೋಯ್ದು ಮೀಯೋಣ,

ಯಾವ ಉರಿ ದಹಿಸುವುದು ನೋಡಿಯೇ ಬಿಡೋಣ.



೭೧) ಶಹಬ್ಬಾಸ್!



ನೀರಿನಾಳಕೆ ಇಳಿದ ಮಿಂಚುಳ್ಳಿ,

ಶಹಬ್ಬಾಸ್!

ಮೀನು ಹಿಡಿದೇ ಮೇಲೆ ಬಂತು

ಉಸಿರುಗಟ್ಟಿದರೂ ಗುರಿಯ ದಾರಿ ಬಿಡಲಿಲ್ಲ

ಗುರಿ ಸಿಕ್ಕಹೊರತು ಉಸಿರಾಡಲಿಲ್ಲ

ಮೇಲೇ ಹುಡುಕಿದರೆ ಕಾಣಿಸದ ನಿಧಿಗಳು

ಹಕ್ಕಿಗುಸಿರಾಗದ ಗಾಳಿಹೊತ್ತ ನೀರಲ್ಲಿಹ ಮೀನಂತೆ.

ಬೇಕಾದಷ್ಟು ಸತ್ವ ತುಂಬಿಕೊಂಡು, ಗುರಿಯ ದಿಟ್ಟಿಸಿಕೊಂಡೆ

ಉಸಿರುಕಟ್ಟಿ ತಳಕೆ ನುಗ್ಗಬೇಕು

ತಳಕಿಳಿವ ತಾಳ್ಮೆಯಿದ್ದರಷ್ಟೇ ಸಿಕ್ಕುವುದು

ಅದು ಪ್ರೀತಿಯಾದರು ಅಷ್ಟೆ, ಇನ್ನೇನಾದರು ಅಷ್ಟೆ.



೭೨)

ನಿನಗಾಗಿಯೇ

ತಂಗಾಳಿ ಮೊದಲಬಾರಿಗಿಂದು ಚುಚ್ಚುತ್ತಿದೆ

ಒಡಲೆಲ್ಲ ನಿನ್ನ ನೋವ ತುಂಬಿ ತಂದಿರುವುದಕೆ,

ಮಂದಾನಿಲವೂ ಉಸಿರುಗಟ್ಟಿಸುವಂತಿದೆ.

ದೀರ್ಘವಾಗಿ ಈಗ ಒಳಗೆಳೆದುಕೊಂಡಿರುವೆ.

ನನ್ನೆದೆಗೂಡಲ್ಲಿ ವೇದನೆಯ ಬೇರ್ಪಡಿಸಿ,

ನನ ಹೃದಯಕಿಳಿಸಿರುವೆ, ಅಲ್ಲಿದ್ದ

ಹಾರೈಕೆಯುಡುಗೊರೆಯ ಗಾಳಿರಥದಲ್ಲಿರಿಸಿ,

ಒಲವ ಕಾವಲಿರಿಸಿ, ವಿಶ್ವಾಸವ ದಾರಿದೀಪವಾಗಿಸಿ,

ನಿನ್ನತ್ತ ಕಳಿಸಿರುವೆ.

ನನ್ನದೆಲ್ಲವ ಮಾಡುವಂತೆ,

ಇದ ಅತ್ತ ಸರಿಸಬೇಡ.

ನೂರಕ್ಕೆ ನೂರೂ ನಿನಗಾಗಿಯೇ.

ಪ್ರತಿಯಾಗಿ ನನಗೇನೂ ಬೇಡ.





೭೩) ಪ್ರೇಮ ನಿಂತಿದೆ



ಪ್ರೇಮ ಹಾಗೆ ಹೀಗೆಂದು ವ್ಯಾಖ್ಯಾನಿಸುವವರಲೊಂದು ಮಾತು

ಪ್ರೇಮಕೆ ಪದಗಳಾಧಾರ ಬೇಕೆ... ? ಬೇಡ.



ನಾನದನು ಬರೆದು, ಆಡಿ, ಕರೆಯುತ್ತಲೇ ಇದ್ದೆ,

ಅಣಕಿಸುತ ಅದು ಮುಂದೋಡುತಿತ್ತು,

ನಾನು ಖಾಲಿ ಖಾಲಿ.



ಈಗ ನಾನು ಮೌನಿ,

ನಿಶ್ಯಬ್ಢವ ನೋಡೆ ತಿರುಗಿದ ಪ್ರೇಮ,

ಅಲ್ಲೇ ನಿಂತಿದೆ, ಓಡುತಿಲ್ಲ.



ಪರಸ್ಪರ ತಲುಪುವೆವೋ ಇಲ್ಲವೋ....

ಮುಖಾಮುಖಿಯಂತೂ ಆದೆವು.

ಮತ್ತು ಅದರ ಬೆನ್ನು ಕಾಣುತಿಲ್ಲ,

ಅಷ್ಟರ ಮಟ್ಟಿಗಿಂದು ನಾನು ನಿರಾಳ



೭೪) ತುಂತುರು

೧)

ನಾನು ಕೇಳಿದ್ದಕ್ಕೆಲ್ಲ ಉತ್ತರಿಸಿದ್ದೀರ, ಧನ್ಯವಾದಗಳು

ಆದರೆ ನನಗವು ಉತ್ತರಗಳಾಗದೆ ಪ್ರಶ್ನೆಗಳೇ ಆದದ್ದು ದುರಾದೃಷ್ಟ.

೨)

ನಾನೇನೋ ಮೈಮರೆತಿದ್ದೆ,

ನಾನಂದುಕೊಂಡವರೇ ನೀವಾಗಿದ್ದರೆ ಎಚ್ಚರಿಸಬಹುದಿತ್ತಲ್ಲ?

೩)

ಜಗತ್ತು ಭ್ರಮೆಯಲ್ಲ ಎಂದೇ ಸಾಧಿಸುತ್ತಿದ್ದೆ,

ಇಂದು ಹೌದೆನಿಸುತ್ತಿದೆ, ನಿನ್ನೆಮೊನ್ನೆಯಿಂದೀಚೆಗೆ ನಾನೂ ಮಾಯುತ್ತಿದ್ದೇನೆ.

೪)

ಎಲ್ಲ ಮುಗಿಯಿತು ಅನ್ನುವಲ್ಲಿನ್ನೇನು ನಿರೀಕ್ಷಿಸುವುದು?

ಮುಗಿಯುವ ಮುನ್ನವೇ ಹಿಂತಿರುಗಬೇಕಾದ ವಿಧಿ ನನ್ನದು

೫)

ಹುಟ್ಟು ಇನ್ನೊಂದು ಹುಟ್ಟಿಗಾಗಿ ಸಾವಿನಲ್ಲಿ ಕೊನೆಯಾಗಲೇಬೇಕು

ನಡುವೆ ಕ್ಷಣಕ್ಷಣವೂ ಜೀವ ಹೊಸ ಹುಟ್ಟು ಪಡೆದು ಜೀವನದ ಮುನ್ನಡೆ

ಎಂದೋ ಬರುವ ಸಾವ ಪ್ರತಿ ಹೆಜ್ಜೆಯಲ್ಲೂ ನಿರೀಕ್ಷಿಸಿದರೆ ವಿಶ್ವಾಸದ ಹಿನ್ನಡೆ.



೭೫) ನಾವ್ಯಾರಾಗೋಣ?



ಹಗಲ ನೆಚ್ಚುವವರು ರಾತ್ರಿಯನ್ನಾಗಲಿ,

ನೆರಳನ್ನಾಗಲಿ ಅಲ್ಲಗಳೆಯುವುದಿಲ್ಲ

ಹಗಲನ್ನು ನಂಬಿಕೆಯಲ್ಲೂ, ರಾತ್ರಿಯನ್ನು ನಿದ್ದೆಯಲ್ಲೂ

ಅನುಭವಿಸಿ ಕಳೆಯುತ್ತಾರೆ.

ನೆರಳು ಜೊತೆಗಿದ್ದಾಗ ಪ್ರಾಣಮಿತ್ರನೆನ್ನುತ್ತಾರೆ,

ಇಲ್ಲದಿದ್ದಾಗ ಮರೆತಂತಿರುತ್ತಾರೆ.

ರಾತ್ರಿಯ ನೆಚ್ಚುವವರು,

ಹಗಲ ಕತ್ತಲ ಗುಂಗಲ್ಲಿ ಕಳೆಯುತ್ತಾರೆ

ಮತ್ತು ರಾತ್ರಿ ನಿದ್ದೆ ಹೊರಗೇ ಬಿಟ್ಟು

ಕಾಡುವ ಕತ್ತಲ ಗವಿ ಹೊಕ್ಕಿಬಿಡುತಾರೆ.

ನೆರಳೇ ನಿತ್ಯವೆನುತ ಹಿಂಬಾಲಿಸುತ್ತಾರೆ

ಈಗ ನೀವೇ ಹೇಳಿ- ನಾವ್ಯಾರಾಗೋಣ?



೭೬) ಪ್ರೇಮಬೀಜ



ನಮ್ಮ ಸಹವಾಸಕೆ,

ನನ್ನೊಳಗೆ ಅನುಭೂತಿಯೊಂದರ ಜನನ

ಇನ್ನೂ ಹೆಸರಿಟ್ಟಿರಲಿಲ್ಲ, ಅದಿನ್ನೂ ಹಸುಗೂಸು.

ನಿನಗ್ಯಾಕೋ ಭೂತಕದ ತೆರಳಿಸುವ ಬಯಕೆ.

ಪದಗಳಲುಗಲಿ ತುಂಡು ತುಂಡಾಗಿಸತೊಡಗಿದ್ದೆ

ಮೊದಲ ಪೆಟ್ಟು ಬಿದ್ದಾಗ, ಏನಾಶ್ಚರ್ಯ!!!

ಅದರೊಳಗೆ ಪ್ರವಹಿಸುತಿದ್ದುದು ನನ್ನ ಕಣ್ಣೀರು

ಬೊಗಸೆಯಲಿ ಮೊಗೆಮೊಗೆದು ನಾನದನು ಕುಡಿದೆ

ನೀ ಕಡಿಯುತ್ತಲಿದ್ದೆ, ನಾ ಕುಡಿಯುತ್ತಲಿದ್ದೆ.

ಕೊನೆಗೊಮ್ಮೆ ನೀ ತಲೆ ತರಿದೆ ನೋಡು,

ಬುಳುಬುಳು ಹರಿದ ಕಣ್ಣೀರಧಾರೆ,

ಬಿತ್ತೊಂದು ಹನಿ ಕೈಜಾರಿ ಎದೆನೆಲದ ಮೇಲೆ

ಅರರೆ......... ನೋಡಿದೆಯಾ......?!.

ಹನಿಯೊಡಲಲರಳಿದೆ ಮತ್ತದೇ ಅನುಭೂತಿ!!!

ಈಗ ಹೆಸರಿಟ್ಟಿರುವೆ,

ಅವ ರಕ್ತಬೀಜನಾದರೆ ಇವ ಪ್ರೇಮಬೀಜ.

ಈಗ ನಾನೇನೂ ಕುಡಿಯುತಿಲ್ಲ,

ಕಡಿದಂತೆ ಕುಡಿಯೊಡೆಯುವುದು ನಿಂತಿಲ್ಲ.

ಅದ ತೆರಳಿಸಲು ನೀ ಕಡಿವುದಕೆ ನನದೊಂದು ಜೈ

ಪ್ರೇಮಬೀಜದಲೇ ತುಂಬುತಿದೆ ಈಗ ನನ್ನ ಮನಮೈ.



೭೭) ಹೂವು ಹಾವಾಗುವ ಮುನ್ನ



ಪುಷ್ಪಗುಚ್ಛದೊಳಗೇನೋ ಗಲಿಬಿಲಿ, ಅಲ್ಲಿ

ಹೂವಿನ ರೂಪದಲೊಂದು ಹಾವಿಹುದಂತೆ

ಹೇಗೆ ಬೇರ್ಪಡಿಸುವುದು?!!!

ತನ್ನನ್ನು ಹೂವೆಂದೇ ಭಾವಿಸಿದ್ದ ಪ್ರತಿಯೊಂದರ ಮುಖದಿ

ಸಣ್ಣ ಸಂಶಯ- "ನಾ ಹಾಗೆ ಕಂಡಿಲ್ಲ ತಾನೇ?"

ಹಾವಲ್ಲದ ಹೂವೊಂದು ದ್ವಂದ್ವದಿ ಸಿಲುಕಿ

ತಾನು ಹಾವೇ ಅಂದುಕೊಳುವ ಮುನ್ನ

ಹಾವ ನಿಜವಾಗಿ ಕಂಡವರೇ, ಅದ ಕಿತ್ತೆಸೆಯಿರಿ.



೭೮) ಜಿಟಿಜಿಟಿ ಮಳೆಹನಿ

೧)

ಕಣ್ಣೀರಾಗದಿರು ಮನಸೇ, ನಿನ್ನದೇನೂ ದೊಡ್ಡದಲ್ಲ,

ಇವರು ಕೊಲ್ಲದವರನ್ನು ಕೊಂದ ಆರೋಪ ನಿರೂಪಿಸಿಯೇ ಶಿಕ್ಷಿಸುವವರು..... .

೨)

ಈಗಷ್ಟೇ ಎಡವುತ್ತಾ ನಡೆಯತೊಡಗಿದ್ದೆ,

ಹಿಂದೆ ತಮ್ಮ ನಾಯಿಯ ಅಟ್ಟಿಬಿಟ್ಟರು.

೩)

ಮೊದಲ ಮೆಟ್ಟಿಲ ಹತ್ತಿ ಮೇಲ್ನೋಡುತಿದ್ದೆ, ನಡುವಿನವೆಲ್ಲ ಮಾಯವಾಗಿ ಬಿಟ್ಟವು

ಕೊನೆಯದು ಉಳಿದಿದ್ದರೂ, ನಾ ಕೆಳಗಿಳಿಯಲೇ ಬೇಕಾಯಿತು.

೪)

ಆ ಬಿಂಬ ಕಣ್ಣ ಹೇಗೆ ತುಂಬಿದೆಯೆಂದರೆ,

ನಿದ್ದೆಗಾಗಲಿ, ಕನಸಿಗಾಗಲಿ ಅಲ್ಲಿ ಜಾಗವುಳಿದಿಲ್ಲ

೫)

ಚೂರಿಯೆಂದರು, ಮಾರಿಯೆಂದರು.

ಹೆಸರ ಕೂಗಲಾಗದಿದ್ದರೆ ಸುಮ್ಮನಿದ್ದರೂ ಆಗುತ್ತಿತ್ತು.

೬)

ನಿನ್ನಲ್ಲಿ ನಾ ಕಾಣಲೆತ್ನಿಸಿದ್ದೇ ನನಗೆ ನಿನ್ನಲ್ಲಿ ಕಂಡಿತು.

ನೀನು ಮಾತ್ರ ನನ್ನಲ್ಲಿದ್ದದ್ದ ಬಿಟ್ಟು ಬೇರೆಲ್ಲವನ್ನೂ ನನ್ನೊಳಗೆ ಕಂಡೆ.

೭)

ನಾ ನಿನ್ನ ಸಂಭ್ರಮಿಸುತ್ತಿರುವೆನಾದರೆ ಅದು ನನ್ನ ಪ್ರಾಪ್ತಿ

ನೀ ನನ್ನ ಸಹಿಸಲಾರೆಯಾದರೆ ಅದು ನಿನ್ನದು.













































ಇರುವುದೆಲ್ಲವ ಬಿಟ್ಟು.


----------------------

ಸಸಿಯಲರಳದ, ಮರದಿ ಗೊಂಚಲಾಗಿ ಬಾಗಿತೂಗುವ

ಮುಗಿಲಮಲ್ಲಿಗೆಯ ಗೊಂಚಲಲಿ ಸೆರಗು ತುಂಬುವಾಸೆ....

ಉದುರಿದವ ನೆಯ್ದಾಯ್ತು, ಬಿಡುಕಟ್ಟಿ ಗೊಂಚಲಾಗಿಸಿದ್ದಾಯ್ತು,

ಮನಸೊಪ್ಪುತಿಲ್ಲ...



ಅಂಕೆಗೆ ಸಿಗದೆ, ನಿಲುಕದೆತ್ತರದಾಕಾಶದಿ ಚೆಲ್ಲಿ ಮಿನುಗುವ,

ನಕ್ಷತ್ರಗಳ ರೆಂಜೆಹೂ ಆಯ್ದಂತಾಯ್ದು ಸೂರನಲಂಕರಿಸುವಾಸೆ..

ಚಿತ್ರ ಬರೆಸಿದ್ದಾಯ್ತು, ಬಣ್ಣ ತುಂಬಿದ್ದೂ ಆಯ್ತು...

ಮನಸೊಪ್ಪುತಿಲ್ಲ.....



ತುಳಸಿಪೂಜೆ.. ನಕ್ಷತ್ರಕಡ್ಡಿ ಉರಿಸುತಿದ್ದ ಮಗಳು...

ಜೊತೆ ನಾನು.. ಕಣ್ಣು ಮುಗಿಲಮಲ್ಲಿಗೆ ಮರದತ್ತ, ಮತ್ತಾಕಾಶದತ್ತ.

"ಇಲ್ಲಿ ಚಂದ ನೋಡಮ್ಮಾ....:"ಅಂದವಳೊಡನಿರದಾದೆ, ದೃಷ್ಟಿ ಅತ್ತತ್ತ..

ಇರುವುದೆಲ್ಲವ ಬಿಟ್ಟು.......



ಅಮ್ಮಾನಾಸೆಗೆ ಮಗಳಿಗೋ ನಗು... "ಪುಟ್ಟ ಮಗು ನನ್ನಮ್ಮ...".

ಆ ನಗು ಹೀಗಂದಂತಾಯ್ತು........



"ನೋಡಿಲ್ಲಿ ರಾತ್ರಿರಾಣಿಯ..,

ಮುಗಿಲಮಲ್ಲಿಗೆಯಂತೆಯೇ ಅಧೋಮುಖಿಗೊಂಚಲು,

ಅವಳದು ಸೆಳೆವಘಮವಾದರೆ, ಇದು ಸಂತೈಸುವ ಮೆಲುಕಂಪು

ಅವಳಲ್ಲಿ ಎತ್ತರದಲ್ಲಿ, ಇವಳಿಲ್ಲೇ ನಿನ್ನ ಪಕ್ಕದಲ್ಲಿ..

ಅವಳೆಲ್ಲರಂತೆ ಹಗಲ ಪ್ರೇಮಿ, ಇವಳೆಲ್ಲರಂತಲ್ಲ....

ನೋಡಿಲ್ಲಿ ನಕ್ಷತ್ರ ಕಡ್ಡಿಯ.......

ತಾರೆಗಳಂತೆಯೇ ಫಳ ಫಳ ಹೊಳಪು,

ಒಂದೇ ಕಿಡಿಯಿಂದುದುರೊ ನೂರಾರು ಮಿನುಗ ತಾಣ

ಅವಲ್ಲಿ ನಿಲುಕದೆತ್ತರದಲ್ಲಿ, ಇವಿಲ್ಲೇ ನೀ ಬಯಸಿದಲ್ಲಿ...

ಅವಕೆಲ್ಲರಂತೆ ತಮ್ಮಳತೆಯದೇ ನಡೆ, ಇವು ನಿನ್ನಾಣತಿಯಡಿಯವು.."



ಹೌದಲ್ಲಾ....ಅವಳಂತೆ ಈ ಕ್ಷಣದ ಬಾಳು ಯಾಕೊದಗುತಿಲ್ಲ?!

ಮನೆಯೊಳ ನಡೆದೆ,

ಲಗುಬಗೆಯಲಿ ನಾ ಮಗುವಾಗಿದ್ದಾಗಿನ ಭಾವಚಿತ್ರ ತೆಗೆದೆ...

ನಾನೂ ಮಗುವಾಗಿದ್ದೆ,

ಅದೆ ಕಣ್ಣು, ಅದೆ ಮೂಗು, ಅದೆ ಬಾಯಿ-ಹಾಗೇ ಇವೆ

ಮನಸು ಮಾತ್ರ ಯಾಕಂತೇ ಉಳಿದಿಲ್ಲ...?

ದೇಹ ಬೆಳೆದಂತೆ ಮನ ಕಿರಿದಾಗಿ ಸಾಗಿದೆ..

ಇರುವುದೆಲ್ಲವ ಬಿಟ್ಟು ಸಿಗದುದಕೆ ಕೈ ಚಾಚಿದೆ..



Sunday, November 25, 2012

ನೀನೆಂದು ಬರುವೆ?


---------------

ನೀ ಬಿಟ್ಟು ಹೋದ ಬಿಂದುವಿನಲೇ ರಾಧೆಯಾತ್ಮ ಸ್ತಬ್ಧ,

ಜೊತೆಗೆ ನನದೂ......


ಅಂದು ನೀನೆತ್ತಿಕೊಂಡಿದ್ದೆ, ತುಟಿಗಾನಿಸಿದ್ದೆ, ಉಸಿರೂದಿದ್ದೆ,

ನಿನ್ನ ಭಾವಶರಧಿಯಲೆಗಳು ನನ್ನ ಟೊಳ್ಳೊಳು ಮೊರೆದು

ನಾ ದನಿಯಾಗಿದ್ದೆ, ನೀ ಕೊರಡ ಕೊನರಿಸಿದ್ದೆ.


ಅಂದು ರಾಧೆಯೂ ಎದುರಿದ್ದಳು, ಆ ಗಾನದ ಜೀವವಾಗಿದ್ದಳು

ಜಗಕೆ ನಿನ್ನ ತೋರೋ ಕಣ್ಣಾಗಿದ್ದಳು, ಎಲ್ಲ ಮರೆತ ಹೆಣ್ಣು ಬರೀ

ನಾಟ್ಯವಾಗಿದ್ದಳು, ನೀ ಉಸಿರನಾತ್ಮದಿ ಲೀನವಾಗಿಸಿದ್ದೆ.


ಮರಳಲಾರದ ಭಾವತೀರಕೆ ನಮ್ಮನೊಯ್ದು ಅಲ್ಲೇ ಬಿಟ್ಟು

ನೀನಿನ್ನೊಂದು ತೀರ ಸೇರಿದೆ, ಬಯಸಿಯೂ ಬಹುಶಃ ಮರಳದಾದೆ.

ನೊಂದಿದ್ದೆಯಾದರೂ ನಿನ್ನ ನೀ ಮರೆತು ಕರ್ತವ್ಯಕೋಗೊಟ್ಟೆ.

ನನ್ನನೊಯ್ದವರು ಊದಬಯಸಿ ಗಾಳಿತುಂಬಿದರು, ನಾ ನುಡಿದೆ,

ರಾಧೆಯನೊಯ್ದು ಹೂವಂತೆ ಅಲಂಕರಿಸಿದರು, ಅವಳೂ ನಕ್ಕಳು

ಆದರೆನ್ನ ದನಿಯಲಿ ಗಾನವಿಲ್ಲ, ರಾಧೆಯೊಡಲಲಿ ಗಂಧವಿಲ್ಲ.

ದನಿಯೂ ನಿನ್ನನೇ ಹುಡುಕಿ ಹೊರಟಿದೆ, ಗಂಧವೂ.....


ನೀ ಬಿಟ್ಟು ಹೋದ ಬಿಂದುವಿನಲೇ ರಾಧೆಯಾತ್ಮ ಸ್ತಬ್ಧ,

ಜೊತೆಗೆ ನನದೂ......


ನೀ ಹೋದತ್ತ ಕಣ್ಹಾಯುವಷ್ಟು ದೂರಕವಳ ನೋಟ ಹಾಸಿ,

ಅತ್ತ ತಿರುಗಿದ ಹೆಜ್ಜೆ ಇತ್ತ ತಿರುಗುವ ಕನಸ ಹೂಗಳ ಹರಡಿ,

ಅದು ಬಾಡದಂತವಳ ಕಣ್ಣೀರ ಸಿಂಪಡಿಸಿ ರಾಧೆಯಾತ್ಮ ಕಾದಿಹುದು.

ಅವಳೊಳಗಿನ ಟೊಳ್ಳ ಪ್ರತಿನಿಧಿಯಾಗಿ ನನ್ನಾತ್ಮ ಜೊತೆಗಿಹುದು.


ಎಂದು ಬರಲಿರುವೆ 
 ನೀನು?.. ಮತ್ತೆ ನಾವು ಬದುಕಬೇಕು.

ಆತ್ಮ ದೇಹ ಸೇರಬೇಕು, ದೇಹ ದೇಗುಲವಾಗಬೇಕು.

ಜೀವಂತಿಕೆಯೆ ನೀನಾಗಿ ಪೂಜೆಯಲ್ಲಿ ನಡೆಯಬೇಕು.





ನೀನೆಂದು ಬರುವೆ?



ನೀ ಬಿಟ್ಟು ಹೋದ ಬಿಂದುವಿನಲೇ ರಾಧೆಯಾತ್ಮ ಸ್ತಬ್ಧ,

ಜೊತೆಗೆ ನನದೂ......


ಅಂದು ನೀನೆತ್ತಿಕೊಂಡಿದ್ದೆ, ತುಟಿಗಾನಿಸಿದ್ದೆ, ಉಸಿರೂದಿದ್ದೆ,

ನಿನ್ನ ಭಾವಶರಧಿಯಲೆಗಳು ನನ್ನ ಟೊಳ್ಳೊಳು ಮೊರೆದು

ನಾ ದನಿಯಾಗಿದ್ದೆ, ನೀ ಕೊರಡ ಕೊನರಿಸಿದ್ದೆ.


ಅಂದು ರಾಧೆಯೂ ಎದುರಿದ್ದಳು, ಆ ಗಾನದ ಜೀವವಾಗಿದ್ದಳು

ಜಗಕೆ ನಿನ್ನ ತೋರೋ ಕಣ್ಣಾಗಿದ್ದಳು, ಎಲ್ಲ ಮರೆತ ಹೆಣ್ಣು ಬರೀ

ನಾಟ್ಯವಾಗಿದ್ದಳು, ನೀ ಉಸಿರನಾತ್ಮದಿ ಲೀನವಾಗಿಸಿದ್ದೆ.


ಮರಳಲಾರದ ಭಾವತೀರಕೆ ನಮ್ಮನೊಯ್ದು ಅಲ್ಲೇ ಬಿಟ್ಟು

ನೀನಿನ್ನೊಂದು ತೀರ ಸೇರಿದೆ, ಬಯಸಿಯೂ ಬಹುಶಃ ಮರಳದಾದೆ.

ನೊಂದಿದ್ದೆಯಾದರೂ ನಿನ್ನ ನೀ ಮರೆತು ಕರ್ತವ್ಯಕೋಗೊಟ್ಟೆ.


ನನ್ನನೊಯ್ದವರು ಊದಬಯಸಿ ಗಾಳಿತುಂಬಿದರು, ನಾ ನುಡಿದೆ,

ರಾಧೆಯನೊಯ್ದು ಹೂವಂತೆ ಅಲಂಕರಿಸಿದರು, ಅವಳೂ ನಕ್ಕಳು

ಆದರೆನ್ನ ದನಿಯಲಿ ಗಾನವಿಲ್ಲ, ರಾಧೆಯೊಡಲಲಿ ಗಂಧವಿಲ್ಲ.

ದನಿಯೂ ನಿನ್ನನೇ ಹುಡುಕಿ ಹೊರಟಿದೆ, ಗಂಧವೂ.....


ನೀ ಬಿಟ್ಟು ಹೋದ ಬಿಂದುವಿನಲೇ ರಾಧೆಯಾತ್ಮ ಸ್ತಬ್ಧ,

ಜೊತೆಗೆ ನನದೂ......


ನೀ ಹೋದತ್ತ ಕಣ್ಹಾಯುವಷ್ಟು ದೂರಕವಳ ನೋಟ ಹಾಸಿ,

ಅತ್ತ ತಿರುಗಿದ ಹೆಜ್ಜೆ ಇತ್ತ ತಿರುಗುವ ಕನಸ ಹೂಗಳ ಹರಡಿ,

ಅದು ಬಾಡದಂತವಳ ಕಣ್ಣೀರ ಸಿಂಪಡಿಸಿ ರಾಧೆಯಾತ್ಮ ಕಾದಿಹುದು.

ಅವಳೊಳಗಿನ ಟೊಳ್ಳ ಪ್ರತಿನಿಧಿಯಾಗಿ ನನ್ನಾತ್ಮ ಜೊತೆಗಿಹುದು.


ಎಂದು ಬರಲಿರುವೆ ನೀನು?.. ಮತ್ತೆ ನಾವು ಬದುಕಬೇಕು.

ಆತ್ಮ ದೇಹ ಸೇರಬೇಕು, ದೇಹ ದೇಗುಲವಾಗಬೇಕು.

ಜೀವಂತಿಕೆಯೆ ನೀನಾಗಿ ಪೂಜೆಯಲ್ಲಿ ನಡೆಯಬೇಕು.





Saturday, November 24, 2012


1)ಮರದಳಲು


------------------------------------

ಮೊಳೆತು, ಚಿಗುರಿ, ಹರಡಿ, ಉದ್ದ ಬೆಳೆದ ಮರಕೆ

ಹಸಿರಿನ ಸಂಭ್ರಮ, ಅಷ್ಟಗಲಕು ಚಾಚಿದ ಗರಿಮೆ,

ಹೂ-ಹಣ್ಣು ನೆರಳಲ್ಲದೆ, ಜಗಕುಸಿರ ತಾನಿತ್ತ ಹೆಮ್ಮೆ.



ಹಕ್ಕಿಗಳುಲಿ, ಅಳಿಲ ಓಡಾಟದ ಕಚಗುಳಿ,

ಬಳಸಿ ಬೆಳೆದ ಅವಲಂಬಿ ಬಳ್ಳಿ, ನೇತಾಡುವ ಬಾವಲಿ,

ಇಂಥ ಹಲ ಬಂಧುತ್ವಗಳ ನಡುವೆ ಸಮೃಧ್ಧ ಬಾಳ್ವೆ.



ಹೀಗಿರಲೊಮ್ಮೆ ಮರವ ಬೇರು ಕಾಡಿತು,

ಮೊಳೆತ ಕ್ಷಣದೊಡನಾಟದೊಳು ಮರ ಮುಳುಗೆದ್ದಿತು

ಬೀಜ ಫಲಿಸಿದ ಕಾಲ ಹಸಿರೂ ಬೇರೂ ಜೊತೆಗೇ ಮೂಡಿದ್ದು.



ಹಸಿರ ಮೇಲೇರಿಸಲೆಂದೆ ಬೇರು ಕೆಳಗಿಳಿದದ್ದು

ನೆಲದೊಳಗೆ ಅದೃಶ್ಯ ಬಾಳನೊಪ್ಪಿ ಅಪ್ಪಿಕೊಂಡದ್ದು.

ಬೆಳೆದು ಹರಡಿದ್ದರೂ ಅಗಲಗಲಕೆ, ಪ್ರಸಿಧ್ಧಿಯಾಗದುಳಿದದ್ದು.



ಮರ ಮೇಲೇರುತ್ತಾ ಬೇರಿಂದ ತನ್ನಷ್ಟಕ್ಕೆ ದೂರಾಯಿತು

ಸಂಪರ್ಕವೀಗ ಒಣಕಾಂಡದ್ದು, ಹಸಿರಿನದಲ್ಲ, ಪಸೆಯಲ್ಲಿಲ್ಲ.

ಬಗ್ಗಲೆಣಿಸಿದೆ ಮರ, ಬೇಕೆನಿಸಿ ಆ ಸಹಚರ್ಯದ ಮುಚ್ಚಟೆ.



ಗಿಡವಿರಲು ಬಗ್ಗದಿದ್ದುದು ಮರವಾಗಿ ಬಗ್ಗಲಾದೀತೆ?

ಮರೆತಾಗ ಕೆಲ ಬಂಧಗಳು ಮೆಲ್ಲ ಕಳಚಿಕೊಳುತಾವೆ.

ಹಳತೆನಿಸಿ ತಾವೇ ಹೊಸತಿಗೆ ಜಾಗ ಮಾಡಿಕೊಡುತ್ತವೆ.



---------------------------------------------------------------------


2)ಹೂವಿನುತ್ತರ


--------------------------



ಅರಳಿದ ಹೂವೊಂದರೊಡಲಿಂದ

ದುಂಬಿ ಹೀರಿ, ತೇಗಿ ಹೋಗುತಿತ್ತು,

ಅಷ್ಟರಲ್ಲೆ ಚಿಟ್ಟೆ ಹಾರಿಬಂದು ಕೂತಿತು.

ಹೂಮುಖದ ಅದೇ ನಗು ನನಗರಗದಾಯಿತು



"ನೋವಲ್ಲವೇನೇ ಗೆಳತಿ?" -ನನ್ನ ಪ್ರಶ್ನೆಗೆ ಹೀಗಂದಿತು-

"ಈ ಬಾಳು, ಮಧು, ನಗು ಎಲ್ಲ ದೇವನಿತ್ತ ವರಗಳು

ಜೊತೆಯಲಿತ್ತ ಹೀರಲ್ಪಡುವ ವಿಧಿಯನೆಂತು ಜರೆಯಲಿ?



ಕೆಲಹನಿ ಮಧು ದುಂಬಿಗೆ, ಕೆಲವು ಚಿಟ್ಟೆಗೆಂದೆ ಇತ್ತನು

ಹಸಿದ ಗಳಿಗೆ ನನ್ನೆಡೆಗೆ ಸಾಗೊ ದಾರಿಯನೂ ಇತ್ತನು

ಕುಡಿಯಲಿ, ತಣಿಯಲಿ ಅವನಿತ್ತುದ ಅವನಿಚ್ಛೆಯಂತೆ ಮುಗಿಸಲಿ



ನಾಕು ದಿನದ ಬಾಳು ಮತ್ತೆ ಉದುರಿಯೇ ಹೋಗುವುದು

ಇಲ್ಲ, ಬೆಡಗಿಮುಡಿ, ಒಡೆಯನಡಿ ಸೇರಿ ಬಾಡಿಯಳಿವುದು

ತೃಪ್ತಿ ನೀಡೊ ಸುಖದ ನೋವ, ನೋವು ಎನ್ನಬಾರದು"



ಪುಟ್ಟಜೀವಕೆ ದೊಡ್ಡದು, ನಮ್ಮದೆಷ್ಟು ಸಣ್ಣ ಚಿಂತನೆಯಲ್ಲವೆ?

"ನಾನು, ನಾನೇ" ಎಂಬ ಬಾಳು ಚಿಕ್ಕ ಜಗದಲಿರಿಸಿದರೆ,

"ನಿನದು, ನಿನಗಾಗಿಯೇ" ಎಂಬುದು ಅವನಡಿಗೂ ಒಯ್ಯಬಹುದು

----------------------------------------------

3)ಬೆಲೆ ತೆರಲೇ ಬೇಕು


---------------------------------------

ಅಲ್ಲೊಂದು ಹೃದಯ- ಎಲ್ಲರದರಂತೆ

ದೇಹಕೂ ಮನಸಿಗೂ ಜೀವನದಿಯ ಸೆಲೆ



ಗೋಡೆ ಮಾತ್ರ ಬಹಳ ಮೆದು, ತೇವ ಸ್ವಲ್ಪ ಜಾಸ್ತಿ

ಆರ್ದೃತೆಯುಳಿಸಿಕೊಂಡುದಕೆ ಇತ್ತ ಸೆಳೆತ ಜಾಸ್ತಿ

ಮೊದಲ ಮಳೆಯುಂಡ ಹಸಿಮಣ್ಣ ಘಮಲಂತೆ

ತನ್ನತನ ಎಲ್ಲರಂತಿಲ್ಲೆಂಬ ಗರ್ವವಂತೆ



ದಾರಿಹೋಕರೆಲ್ಲ ಒಣಗದ್ದು ವಿಶೇಷವೆಂದರು

ಬಳಿಸಾರಿ ಮುಟ್ಟಿದರು, ಉಗುರಿಂದ ಕೆರೆದರು

ಬೆರಳಲಿ ಬರೆದರು, ದೂರ ಸಾಗಿ ಜೋರು ಕಲ್ಲೆಸೆದರು

ಅಳಿಯದ ಛಾಪು ಮೂಡಿಸಿ ಅಮರರೆನಿಸಬಯಸಿದರು



ಗುರುತು ಮೂಡಿಸಲೀಗ ಸೂಜಿಮೊನೆ ಜಾಗವಲ್ಲಿಲ್ಲ

ಹಸಿಗೋಡೆ ಜೊತೆಗಾರೂ ಇಲ್ಲ, ಇವೆ ಗುರುತು ಮಾತ್ರ

ಗಟ್ಟಿಯಾಗಬೇಕದಕೀಗ, ಆಗಲೊಲ್ಲದು,

ಹುಟ್ಟುಗುಣ ಸುಟ್ಟರೂ ಬಿಟ್ಟು ಮಾತ್ರ ಹೋಗದು



ಗಟ್ಟಿಯಾದರೂ ಮುಂದೊಮ್ಮೆ ಗುಳಿಗಳು,ಗೀಚುಗಳು

ಗೀರುಗಳು, ಗಾಯಗಳು ಕಲೆಯಾಗುಳಿಯುವವು

ಸುಲಭವಲ್ಲವಲ್ಲಾ... ಎಲ್ಲರಂತಿಲ್ಲದಿರುವುದು?!

ಬೇರೆ ಎನಿಸಿಕೊಳಲಿಕೆ ಬೆಲೆಯ ತೆರಲೇಬೇಕು

------------------------------------

4)ದೇವರಿಲ್ಲ ಎಂದವರೇ


------------------------------------



ದೇವರಿಲ್ಲ ಎಂದವರೇ,

ಜಗಕೆ ಹೇಳಲಾಗದ್ದು, ತೋಡಿಕೊಳಬೇಕೆನಿಸಿದಾಗ

ಕಣ್ಮುಚ್ಚಿ ನಿವೇದಿಸಿ ನೋಡಿ, ಹಗುರಾಗುವಿರಿ.

ಕೇಳಿಸಿಕೊಂಡದ್ದು ಮೂಕ ಕಿವಿಯೊಂದು

ಅದೇ ದೇವರು



ದೇವರ್ಯಾಕೆ ಎಂದವರೇ,

ಸಂತೈಸುವರಿಲ್ಲದಿದ್ದಾಗ, ಮಿದುಮಾತೆರಡು ಬೇಕೆನಿಸಿದಾಗ

ಕಣ್ಣೀರಿಟ್ಟು ನೋಡಿ, ಕಿವಿಯಾಗುವಿರಿ.

ಸಂತೈಸಿದ್ದು ಮಾತಿಲ್ಲದ ಬಾಯಿಯೊಂದು.

ಅದೇ ದೇವರು



ದೇವರೆಲ್ಲಿ ಅಂದವರೇ,

ಸುಖದಿ ಎದೆಯ ಅರಳಿಸಿ, ನೋವಿಗೆ ಹಿಂಡುವ

ಭಾವನೆಯ ಹುಡುಕಿನೋಡಿ, ಕಾಣಲಾರಿರಿ.

ಭಾವದೊಳಗಿನ ಅದೃಶ್ಯಶಕ್ತಿ ಜಗವನಾಡಿಸುತಿಹುದು

ಅದೇ ದೇವರು



ಗಾಳಿಯಿರುವು ಕಾಣುವುದು ತೂಕವಿಲ್ಲದ್ದು ಒಡ್ಡಿಕೊಂಡಾಗ

ಆತ್ಮನಿರುವು ತಿಳಿವುದು ಆಳವಾಗಿ ತೊಡಗಿಕೊಂಡಾಗ

ಕಣ್ಣಿಗೆ ಕಾಣದ್ದೆಲ್ಲ ಇಲ್ಲ ಎನ್ನುವವರೇ,

ನಾನೆಂಬ ಭಾರ ಕಳೆದು, ಆಳಕಿಳಿಯುತ ನೋಡಿ

ಕೊನೆಗೊಮ್ಮೆ ಸಿಗುವ ದೇವಕಣವೇ ದೇವರು.

------------------------------------------------------

5)ಮಗು ತೋರಿದ ಸಾವು


--------------------------------------

ರಕ್ಕಸ ಗಾತ್ರದೆರಡು ಮನೆಯ ನಡುವೆ ಪುಟ್ಟ ಇಸ್ತ್ರಿಯಂಗಡಿ

ನಾಳೆ ಕೇಳಿದ ಬಟ್ಟೆ ಸಂಜೆಗೇ ತಲುಪಿಸುವ ಇಸ್ತ್ರಿಯವ

ಇಸ್ತ್ರಿ ಮಾಡುವುದ ಕಲಿತಿದ್ದ, ದುಡ್ಡು ಪಡೆವುದನಲ್ಲ

"ಚಿಲ್ಲರಿಲ್ಲ ನಾಳೆ" ಎಂದು ಮರೆತವರೆ ಬಹುಪಾಲು ಎಲ್ಲ



ಆ ನಸುಕಲಿ ತಗಡಗೋಡೆಯ ನೀಲಿಯಂಗಡಿ ಇರಲಿಲ್ಲ

ಮರದಹಲಗೆಯ ಮೇಲಿನ ಇಸ್ತ್ರಿ ಪೆಟ್ಟಿಗೆ ಕಾಣಿಸಲೆ ಇಲ್ಲ

ರಕ್ಷೆಯಿಲ್ಲದಿದ್ದು ಸದಾ ಕಾಡಿದ ನಾಲ್ಕು ಪುಟ್ಟಪಾದಗಳು ಇಲ್ಲ

ಇಜ್ಜಿಲಲಿ ಬರೆದ ಪಾಗಾರದೊಳಗೆ ಅವರಾಟದ ಮನೆಯು ಇಲ್ಲ



ಕೆಲಸದಾಕೆಯ ಮಾತು-" ಆಲದ ಮರಕಲ್ಲ,

ಗಸಗಸೆಯದಕೆ ನೇಣು ಹಾಕ್ಕೊಂಡನಂತಮ್ಮಾ".

ನಾನಂದೆ-"ದೇಹವೆಲ್ಲಿತ್ತು ಭಾರ, ಇದ್ದರೂ ಮನಸಿದ್ದಿರಬಹುದು"

"ಭೀತಿ ಹಿಡಕೊಂಡಿತ್ತಂತೆ"- ಅಂತೆಕಂತೆಗಳದೆ ಸಂತೆ



ವಾರಗಳೆರಡರಲ್ಲಿ ಮತ್ತೆ ಬಂದಿತ್ತಲ್ಲಿಗೆ ಹಸುರ ಪೆಟ್ಟಿಗೆ

ಒಳಗೆ ಬೋಳುಹಣೆ, ಕುತ್ತಿಗೆಯ ಚೆಲುವೆ ವಿಧವೆ

ಅತ್ತು ಊದಿದ ಕಂಗಳಂತೇ ಕಂಡ ಪುಟ್ಟ ಕಂದಗಳೆರಡು

ಎಂದಿನಂತೆ ಆ ಬರಿಗಾಲಿಗೆನ್ನ ಆಕ್ಷೇಪಕೆ ಉತ್ತರವಿಲ್ಲದಾಕೆಯ ಅಳು



ನಾ ಕೇಳದ ಪ್ರಶ್ನೆಗೆ ಕಂಬನಿಯೇ ಕತೆಯ ಶುರುವಿಟ್ಟಿತು

ಬಾಯ್ಮುಚ್ಚಿಡಲೆತ್ನಿಸಿದರೂ ಕಂದನ ಮುಗ್ಧತೆ ದನಿಯಾಯಿತು

"ಆ ಮನೆಯವರ ಸೀರೆ ಹರಿದುದಕೆ, ಅಪ್ಪನ ಪೋಲೀಸ್ ಒಯ್ದಿತು

ಅಲ್ಲಿಂದ ಬಂದವ, ತಬ್ಬಿ ಅತ್ತು ಹೋದವ ಮತ್ತೆ ಬರಲೇ ಇಲ್ಲ."

------------------------------------------

6ಗರವೂ ಅಳುತ್ತದೆ


--------------------------------

ಅಗಾಧ ಜಲರಾಶಿ ನಡುವೆಯೊಂದು ದೋಣಿ,

ಹಿಂದೂ ಮುಂದೂ ಚಲಿಸದೆ ಅಲ್ಲೆ ಹೊಯ್ದಾಡುತಿದೆ

ಪಯಣಿಗ ಹೆಣವಾದಾಗಲೇ ಹುಟ್ಟು ಬಿದ್ದು ಹೋಗಿದೆ

ದಾರಿತಪ್ಪಿದ ಅಲೆದಾಟ ಕಾಲದ ಮೇರೆ ಮೀರಿದಾಗ

ದಾರಿಪಾಡಿಗಿದ್ದ ಉಣಿಸು-ನೀರು ಮುಗಿದಾಗ

ಹಸಿವೆಗವನ ಅಂಗಾಂಗಳೊದಗಿದರೂ

ನೀರಡಿಕೆ ಆತಗೆ ಸಾವಾಗಿ ಬಂದಿತ್ತು.

ನೀರೊಳಗೇ ನೀರಡಿಕೆಗೆ ಬಲಿಯಾದ ಜೀವಕೆ

ಆ ಸಾಗರ ಕಣ್ಣೀರ ನದಿ ಹರಿಸಿತು

ಜೀವಸೆಲೆಯೆನಿಸುವ ಹೆಸರು ಹಾಗಾಗದ

ಅಸಹಾಯಕತೆಗೆ ಬಿಕ್ಕಿಬಿಕ್ಕಿ ದುಃಖಿಸಿತು

ಅದರೊಡಲೂ ಉಪ್ಪು, ಕಣ್ಣೀರೂ ಉಪ್ಪು

ಒಂದರೊಳಗೊಂದು ಲೀನವಾಗಿ,

ಬಿಕ್ಕುವಿಕೆಯದರ ಸಹಜಮೊರೆತದೊಳು ಹುದುಗಿ

ಸಾಗರದ ಅಳು ಲೆಕ್ಕಕ್ಕೇ ಸಿಗದೆಹೊಯಿತು.

----------------------------------------------------------------------------

7)ಕೊರತೆ ನೆರೆಯ ಸಂತಸ


-----------------------------------------------

ದಸರೆಗೆ ಸಜ್ಜಾದ ನಗರಿ, ಹಾದಿಬೀದಿಲಿ ಬಣ್ಣದ ದೀಪಗಳರಳಿ,

ಊರವರ ಉತ್ಸಾಹದೋಡಾಟ, ಮದುವೆ ಮನೆಯಂತಿತ್ತು



ವೃತ್ತದಲಲ್ಲಿ ನಾಲ್ಕಾಳೆತ್ತರದ ದೇವರ ಚಿತ್ರ

ಜರಿ ಸೀರೆ, ಆಭರಣ ಚಿತ್ರದ್ದಾದರೂ ಬಲು ಜೋರು

ಬಣ್ಣಬಣ್ಣದ ದೀಪ ಸಂಜೆಗತ್ತಲಲಿ ಝಗಮಗಿಸಿ

ಹೋಗಿಬರುವರ ಕಣ್ಮನ ಸೆಳೆಯುತ್ತಿತ್ತು



ನಖಶಿಖಾಂತ ಹರಿದ ಕಣ್ಣ ಪಟದ ಹೊಳಪು ಸೆಳೆಯದೆ

ಊರುಗಂಬದಡಿಯ ಚಿತ್ರವೊಂದು ಮನವ ಸೆಳೆಯಿತು



ಎರಡಡಿ ಎತ್ತರದ ಸಜೀವ ಉತ್ಸವಮೂರ್ತಿಯೊಂದು

ಚಿಂದಿಬಟ್ಟೆ, ಮಣ್ಣು ಮೈ, ಕೆದರು ತಲೆ, ಮೇಲೆ ದೃಷ್ಟಿ ನೆಟ್ಟಿದೆ

ಉಗುರು ಕಚ್ಚುತ್ತಿದ್ದ ಭಂಗಿ ಬೆರಗೆ ಮೂರ್ತಿವೆತ್ತಂತಿದೆ

ಹಸಿವು ಕಣ್ಣ ತುಂಬಿದ್ದರು ದೀಪದಬಣ್ಣ ಆವರಿಸಿದಂತಿದೆ



ಪಕ್ಕದಲಲ್ಲೆ ಕಲ್ಲ ಒಲೆ, ಸುತ್ತ ನಾಲ್ಕಾಳು ಜೋಡಿಗಳು

ಉರಿವ ಬೆಂಕಿ ಬೇಯಿಸುತಿತ್ತು ಸಂಜೆಯೂಟದ ಕೂಳು

ಮಾತು ನೂರು, ನಗೆಯು ಜೋರು, ಇಹದ ಪರಿವೆ ಇಲ್ಲದೆ

ಕರೆದರಾಗ ಕೂಸ "ಕಂದ ಬಂದು ಉಣ್ಣ ಬಾರದೆ?"



ಪಟದ ದೀಪವವರ ಗೋಡೆಯಿರದ ಮನೆಯ ಬೆಳಗಿರೆ

ಅನಿಸುತಿತ್ತು ನಲಿವ ಪಾಠ ಕಲಿಯಬೇಕು ಇಲ್ಲಿಯೆ

ಸುಖದಿ ಬಾಳೋ ಸೂತ್ರ ಹೇಳೊ ಶಾಲೆ ಎಲ್ಲು ಕಾಣದು

ಕೊರತೆ ನೆರೆಯ ತಾವಲಿ ನೋಡದು ವ್ಯಕ್ತವಾಗುವುದು

-------------------------------------------------------------

8)ನೋಡು - ಇಂದು ಹೀಗಿದೆ


--------------------------------------------

ಕಾಲಲಿ ಮುಟ್ಟಿ ಮುನ್ನಡೆದವರು ಮೆಟ್ಟಿಲಾಗಿಸಿದವರು

ನಿನ್ನ ಸ್ಪರ್ಶಿಸ ಬಂದವರಲ್ಲ

ನೀ ಅಹಲ್ಯೆಯೂ ಅಲ್ಲ, ಇದು ಆ ಕಾಲವೂ ಅಲ್ಲ



ಊದಿ ತುಂಬಿ, ಖಾಲಿಯಾಗಿಸಿ ಶಬ್ಧ ಹೊರಡಿಸುವವರು

ಆ ಅಳುವಿನೇರಿಳಿತ ಅಭ್ಯಸಿಸುವವರು

ನೀ ಕೊಳಲೂ ಅಲ್ಲ, ನುಡಿಸುವುದೂ ಅವರರಿತಿಲ್ಲ



ಕಡಿವಷ್ಟು ಎಳೆದು ತಂತಿಯ ಸರಿಗಮ ಎನಿಸುವವರು

ಆ ವಿದ್ಯೆಯ ಕಲಿಯಬಂದವರು

ನೀ ವೀಣೆಯೂ ಅಲ್ಲ, ಅವರಿಗೆ ಹಾಡೂ ಬೇಕಿಲ್ಲ



ಕಣ್ಣೊಳಗಿಣುಕುವವರು ಪೆಟ್ಟು ಗಾಯ ರಕ್ತ ರೆಸಿಗೆ ಹುಡುಕುವವರು

ತಕ್ಕಡಿಯಲಿಟ್ಟು ತಮ್ಮವೆಷ್ಟಿವೆ ಎಂದು ತೂಗುವವರು

ಅಲ್ಲ, ಸ್ಪಂದಿಸಿ ಶಮನಗೊಳಿಸುವರಲ್ಲ



ದೂರದೂರಕು ದೃಷ್ಟಿ ಹಾಯಿಸು- ಇತರರಿಗೆ ಮಿಡಿವವರಿಲ್ಲ

ಇದ್ದರೂ ಅವರು ಇನ್ನೇನೂ ಸಾಧಿಸಿರುವುದಿಲ್ಲ.

ನೀ ನೀನಾಗಿರದಿರೆ ಮಾತ್ರ ಮೇಲೇರುವೆ, ಪ್ರಸಿದ್ಧಿಯಾಗುವೆ

ನೀ ನೀನೇ ಆಗಿದ್ದರೆ ಕಳಕೊಳದೆ ನಿನನಷ್ಟೆ ಪಡೆಯುವೆ

-------------------------------------------------------------------------------------



9)ಸಾಗರಕ್ಕೆ ನಗುವುದೂ ಗೊತ್ತು


-------------------------------------------

ಎಲ್ಲಿಂದಲೋ ಬಂದ ಸಿಹಿನೀರ ನದಿಯೊಂದು

ಆತುರಾತುರದಿ ಸಾಗರದ ಬಳಿಸಾರಿತು



ತನ್ನ ಮಂಜುಳ ಹರಿವೆಲ್ಲಿ, ಈ ಭೋರ್ಗರೆತವೆಲ್ಲಿ!

ತನ್ನ ಸೀಮಿತವಿಸ್ತಾರವೆಲ್ಲಿ, ಈ ಅಗಾಧತೆಯೆಲ್ಲಿ!

ತನ್ನೊಡಲ ಕುಡಿಗಳೆಲ್ಲಿ, ಇಲ್ಲಿಹ ಜೀವರಾಶಿಯೆಲ್ಲಿ!

ಓರೆಕೋರೆಯಲೂ ಸಾಗುವ ತನ್ನ ಚಾಂಚಲ್ಯವೆಲ್ಲಿ,

ಈ ಸ್ಥಾವರವೆನಿಸುವ ನಿಲುವಿನ ಗಾಂಭೀರ್ಯವೆಲ್ಲಿ!

ಒಂದೂರ ಜೀವಾಳ ತಾನಾದರೆ ಅನೇಕ ನದಿಗಳಾಗರ ಈ ಸಾಗರ!



ಬಾಗಿ ಬಳುಕಿ ಮನಸಾರೆ ನಮಿಸಿತಾ ನದಿ

ಈ ಮಹತ್ತೆನಿಸುವ ಸೃಷ್ಟಿವಿಸ್ಮಯದೊಳ ಸೇರುವ

ತನ್ನ ವಿಧಿ ಬರಹಕೊಮ್ಮೆ, ಆ ಧನ್ಯತೆಗೊಮ್ಮೆ.



ಉಪ್ಪಾದ ತನ್ನೊಡಲ ನಿರರ್ಥಕತೆ ಕಾಣದ

ನದಿಯ ಅಚ್ಚರಿಯ ಸ್ವಗತ, ಆ ಮಿಲನದ ಉತ್ಸಾಹ

ಕಂಡ ಸಾಗರಕೆ ನಗುವೋ ನಗು- ವ್ಯಂಗ್ಯನಗು.



ಕಿರಿಯದಾದರೂ ಸ್ವತಂತ್ರವಾದ ಅಸ್ತಿತ್ವವೊಂದು

ಹಿರಿತನದ ಭಾಗವಾಗಲು ತನ್ನನೇ ಮರೆಯಹೊರಟುದಕೆ

ಮತ್ತು ಅಲ್ಲಿ ತನ್ನ ಸವಿಯನೇ ಬಲಿ ತೆರುತಿರುವುದಕೆ.

-----------------------------------------------------------------------



10)ಅವರಿಗೆ ಪುರುಸೊತ್ತಿಲ್ಲ....


-----------------------------------------------

ಮರುಳೇ ನಿನ್ನಂಗಳಕೆ ಬಂದರೆಂದು ಸಂಭ್ರಮಿಸದಿರು

ಹೂ ಆಯ ಬಂದವರು, ಆಯ್ದು ಹೊರಡುವರು



ರೆಂಜೆ, ಪಾರಿಜಾತಗಳು ಪೂಜೆಗೆ ಶ್ರೇಷ್ಠ, ಆದರೆ

ಅರಳಿ ಕೆಲಕಾಲಕೇ ಉರುಳಿ ಹೋಗುವವು

ಬಿದ್ದ ಕೆಲಗಳಿಗೆಯಲೆ ಆಯಬೇಕವನವರು

ಪೂಜೆಗಿಡುವರು, ನಡೆವ ಕಾಲು ಸೋಂಕಬಾರದು



ತೊಟ್ಟು ಕಳಚಿದ ಕಂಬನಿ ಆವಿಯಾಗುವ ಮುನ್ನವೇ

ಹೂಬುಟ್ಟಿಯೊಳು ತುರುಕುವರು, ಧನ್ಯ ಹೂ ಎನ್ನುವರು



ಮೇಲೆತ್ತಿ ಕಣ್ಣ ಆ ತೋಟ ಗಮನಿಸರವರು

ನೀನೆರೆದ ಪ್ರೀತಿ ಅಕ್ಕರೆಗಳ ಗುರುತಿಸಲಾರರು



ಗಿಡದೆಲೆ ಹಸಿರೇ, ಹಣ್ಣಾಗಿದೆಯೇ

ಹುಳ ಬಂದಿದೆಯೇ, ಬುಡ ಒಣಗಿದೆಯೇ,

ಕಾಂಡ ಬಾಗಿದೆಯೆ, ಊರುಗೋಲು ಬೇಕೆ

ಯೋಚಿಸರವರು, ವ್ಯರ್ಥ ನಿರೀಕ್ಷಿಸದಿರು.



ಎಲ್ಲ ಬಿಡು............,

ನಿನ್ನ ಹೂಗಳನೊಯ್ಯುವರನೂ ಸ್ವಾಗತಿಸುವ

ನಿನ್ನನೂ ನೋಡರು, ಅವರಿಗೆ ಪುರೊಸೊತ್ತಿಲ್ಲ.

-------------------------


11)ಚಂದ್ರಿಕೆಯ ಪಯಣ


--------------------------------------------

ಗ್ರಹಗತಿಗಳ ಫಲವಂತೆ, ಚಂದ್ರಗೆ ಬೆಳಕೆಂಬುದಿಲ್ಲವಂತೆ

ಭೂಮಿಗೆ ತಲುಪಿದ ಸುದ್ದಿ, ಒಡಲಲಿ ತಡೆಯದ ತಳಮಳ

ಉಸಿರಾಗಿದ್ದ ತನ್ನ ಹಸಿರು ಅಸಹನೀಯವೆನಿಸಿದಂತೆ,

ಹಿತವಾಗಿದ್ದ ಸೂರ್ಯನ ಬಿಳಿಬಿಸಿಲು ಉರಿಯೆನಿಸಿದಂತೆ



ರವಿಯಿತ್ತ ತನ್ನದರೊಳಷ್ಟು ತೆಗೆದು ಚಂದ್ರಗೆ ಕಳಿಸಲೇ?

ಮನಸು ಒಪ್ಪಿತು, ಅಳುಕಿದ ತನ್ನ ಪ್ರಭೆಯನೊಪ್ಪಿಸಿ

ಚಂದ್ರಿಕೆಯೆಂದವಳ ಹೊಸರೂಪವ ಹೆಸರಿಸಿ

ಊರ್ಧ್ವಮುಖಿಯಾಗಿಸಿ ಕಳಿಸಿದಳು



ಬಿದಿಗೆಯ ಚಂದ್ರನ ಓರೆನೋಟದಲಿ ಆಹ್ವಾನವಿತ್ತು

ಮರುಗಳಿಗೆಯೇ ಕಿರುಗಣ್ಣ ಭಾವ ಬದಲಾಯ್ತು

"ಹಿಂತಿರುಗು" ಎಂದ, ಬಂದರೆ ಪೂರ್ತಿಯಾಗಿ ಬಾ

ಮೊದಲೇ ಎರವಲದು, ಕಿರುಪಾಲೆನಗೆ ಬೇಡವೆಂದ



ಅಧೋಮುಖಿಯಾಗ ಹೊರಟವಳ ಇಳೆ ಸಂತೈಸಿದಳು

"ಬೆಂದ ಮನದಿ ಹುಟ್ಟುವುದು ಹಲಬಾರಿ ಕರಕಲು ಮಾತು

ಅಲ್ಲಿ ಭಾವ ಹಸಿಯೇ ಇರುವುದು, ಆವರಣವಷ್ಟೆ ಕಪ್ಪು

ಹಿಂತಿರುಗದಿರು, ಅವಗೆ ಬೇಡ, ನೀ ಸ್ವೀಕರಿಸು" ಎಂದಳು



ಇಂದಿಗೂ ಪಕ್ಷಕಾಲ ಪಯಣಿಸಿ ಬಂದ ಚಂದ್ರಿಕೆಯ

ಅವ ನಿರ್ದಾಕ್ಷಿಣ್ಯವಾಗಿ ಧರೆಗೆ ಮರ‍ಳಿಸುತ್ತಾನೆ

ಮತ್ತೆ ಖಾಲಿಯಾದ ಅವನ ನೋಡಲಾಗದೆ ಧರೆ

ಚಂದ್ರಿಕೆಯ ಪುಸಲಾಯಿಸಿ ಅತ್ತ ಕಳುಹಿಸುತ್ತಾಳೆ.

-------------------

12)ಹೂಗವನ.


----------------------------

ಮನದಂಗಳದಿ ಅರಳುತಿತ್ತೊಂದು ಹೂಗವನ.

ಭಾವಾರ್ಥವದರ ಕಂಪು, ಶಬ್ಧಾರ್ಥ ಬಣ್ಣ

ಮನದಂಗಳದ್ದದು ಮನೆಯಂಗಳದ್ದಲ್ಲವಲ್ಲಾ,

ಅರಳಿದರೆ ಸಾಲದು, ಹೊರಗುರಳಲೇಬೇಕು

ಚೆಲುವಷ್ಟೇ ಸಾಲದು, ಒಳಗು ಬಿಚ್ಚಿಡಬೇಕು

ಕಣ್ಸೆಳೆದರೆ ಸಾಲದು, ಮನಕೆ ಮುದ ಕೊಡಬೇಕು

ಸೋಂಕಿದ ಗಾಳಿ ಬೀಸಿದಂತಾಡಿದರೆ ಸಾಲದು,

ಅದು ಹೊತ್ತು ತರುವ ಪ್ರಶ್ನೆಗುತ್ತರವಾಗಬೇಕು

ಪರೀಕ್ಷಿಸಲೆಂದೇ ಇವೆ ಅಕ್ಷಿಗಳೊಂದಷ್ಟು,

ಒಂದೊಂದೂ ಪಕಳೆ ಬಿಡಿಸಿ ನೋಡುವವು.

ನೊಂದರೂ ನಗುತ ಅಂತರಾಳ ಬಿಂಬಿಸಬೇಕು.

ಮೃದುಮಧುರ ಹೂವದು, ತಡೆದುಕೊಂಡೀತೆ?

ತನ್ನ ಸತ್ವ ನಿರೂಪಣೆಗೆ ತಾನೇ ಸಾಕ್ಷಿಯಾಗಬೇಕೆ?

ಒಡ್ಡಿಕೊಳಬೇಕೆ? ಒಳಗಲ್ಲೇ ಬೆಚ್ಚಗಿದ್ದರಾಗದೇ?



ಆದರೆ...........

ಅದರ ಜೀವನೋತ್ಸಾಹಕೆ ಹೊರಹೊಮ್ಮುವಾಸೆ

ಚಳಿ-ಗಾಳಿ-ಮಳೆಗಳಿಗೆ ತೆರಕೊಳ್ಳುವಾಸೆ

ತಡೆಯಲಾರೆ, ಹೂ ತೆರೆದುಕೊಳಲಿ

ಕಾಯಾಗಿ, ಹಣ್ಣಾಗಿ, ಉದುರಿಬಿದ್ದೊಡೆದು,

ಬೀಜ ಹರಡಿ, ಮೊಳೆತು ಮತ್ತಷ್ಟು ಹೂ ಬಿರಿಯಲಿ



---------------------------------------------------------------------

13)ಬಯ್ದುಕೊಳುವುದು ಯಾಕೋ

---------------------

ಬೆಳಕೆಂಬುದೇ ಹಾಗೆ ನೋಡು

ಇರುತ್ತದೆ ಕತ್ತಲ ಬೆನ್ನಲ್ಲೇ.



ರಾತ್ರಿಯ ಅಸ್ಪಷ್ಟತೆಯ ಕಳವಳ ಕಳೆಯೆ ಎಲ್ಲ ಕಾಯುತ್ತಿರಲು

ಮೆಲ್ಲ ಉಷೆಯ ಕಂಕುಳೇರಿದ ನಸುಕಂದನ ಮುಗ್ಧ ನಗುವಂತೆ



ರಾತ್ರಿಯ ನೀರವತೆ ಅಸಹನೀಯವೆನಿಸೆ ಉದಯರಾಗದಾಲಾಪಕೆ

ಶ್ರುತಿ ಸೇರಿಸೊ ಮಂದ್ರ ಷಡ್ಜದ ತಂಬೂರಿ ದನಿಯಂತೆ



ರಾತ್ರಿಯ ಸ್ತಬ್ಧತೆ ನಿದ್ರೆಮಡಿಲಿಂದ ಜಾರಿ ವಿರಾಮದ ಗಡಿಮೀರೆ,

ಎಚ್ಚರಿಸಿ ಲವಲವಿಕೆ ಸೂಸೊ ಹಕ್ಕಿಕೊರಲಿನ ಚಿಲಿಪಿಲಿಯಂತೆ



ಇಂತಿಪ್ಪ ಚುರುಕು ಬೆಳಕೂ ಒಮ್ಮೊಮ್ಮೆ

ತುಂಟಾಟದಾಸೆಗೆ ಕಣ್ಣುಮುಚ್ಚಾಲೆಯಾಡಲು

ಬಯ್ದುಕೊಳುವದೇಕೋ?

ಹರಿದ ಕಂಬಳಿಯ ತೂತಿನೊಳಗಣದಾಟ

ಹರಿದಾಡೊ ಮೋಡದ ಹಿಂದೆ ಅಡಗುವಾಟ

ಕತ್ತಲಲಿ ಸಾಗೊ ಮಿಂಚುಹುಳದ ಮಿಂಚಾಟ

ಆಗಸದ ತಾರೆಯ ಫಳಫಳ ಮಿನುಗುವಾಟ.......

ಹೀಗೇ ಅದೂ ಆಡಲಿಬಿಡು

ಬಾಳಲಿ ಬೆಳಕು ಕಾಣೆಯಾಗುತಿರಬೇಕು

ಮತ್ತೆ ಮೂಡುತಿರಬೇಕು

ಅದ ಬೆನ್ನಟ್ಟುತಿರಬೇಕು, ಕಾಯುತಿರಬೇಕು

ಕಾದು, ಬೆನ್ನಟ್ಟಿ ಅದು ಹೊಳೆದಾಗಲೇ

ಝಲ್ಲೆನಿಸಿ, ಮುದವೆನಿಸುವುದು

------------------

14)ನಾ ಕುದ್ದು ಆವಿಯಾದೆ...


-----------------



ನಿರೀಕ್ಷೆಯೇ ಆಗಿದ್ದ ನನ್ನತನ

ಕುದಿವ ನೀರಿನ ಆವಿಯಂತೆ ಹೇಳಹೆಸರಿಲ್ಲದೇ ಬಿಟ್ಟುಹೋಯಿತು

ಈಗ ಕ್ರಿಯೆಯಷ್ಟೇ ನನ್ನದು,

ಪ್ರತಿಕ್ರಿಯೆಗೂ ನನಗೂ ನಿರೀಕ್ಷೆಯ ಬೆಸುಗೆಯಿಲ್ಲ

ಕುದಿಯುವ ಬಿಂದು ತಲುಪಬೇಕಾಯಿತು ನೋಡು

ಹೌದು, ನೀನೇ ಅಲ್ಲಿ ಕುದಿಸುವ ಅಗ್ನಿಯಾಗಿದ್ದದ್ದು

ಬೆಂಕಿಯೆನಲಾರೆ, ನೀ ಉರಿಸಿ ಬೂದಿ ಮಾಡಲಿಲ್ಲ

ಕುದಿಸಿದೆ, ನಿನ್ನ ದೈವತ್ವದಿಂದ ನನ್ನತನ ಬೆಂದರೂ,

ಮುನ್ನಡೆಸಿದೆ, ಚರಮತೆಯ ಸನಿಹಕೊಯ್ದೆ, ಮತ್ತು ಆವಿಯಾಗಿಸಿದೆ.

ಈಗ ನಾ ಹಗುರ,ಇಹದ ಗುರುತ್ವಾಕರ್ಷಣೆಯ ಸೆಳೆತ ಮೀರಿ

ಅವಲಂಬನೆಗಳ ತೊರೆದು, ಮೇಲೇರುವೆಡೆ ಸಾಗುತಿರುವೆ

ನೀ ಮೇಲೇ ಇರುವುದು ನಿಜವಾದರೆ ನಿನ್ನೆಡೆಗೇ ಬರುತಿರುವೆ

ನಿನ್ನನೇ ಸರ್ವಸ್ವವಾಗಿಸಿರುವ ನಾ ನಿನ್ನಲೇ ಲೀನವಾಗುವುದಕೆ

ಸಾಕ್ಷಿಯಾಗಲಿರುವೆ

---------------------------------------------------------------------



15)ನಾನೆಲ್ಲಿ ಹೋದೆ....?!


----------------------------

ಬೆಳ್ದಿಂಗಳ ಆ ರಾತ್ರಿ

ಭೂಮ್ಯಾಕಾಶದ ನಡುವೊಂದು

ಸುಂದರ ಕಪ್ಪು ಬಿಳುಪು ಚಿತ್ರ

ನದಿಯೂ ನಿದಿರೆಗೆ ಜಾರುತಿರುವಂತೆ

ಮಂದಗಮನದ ಅಲೆಗಳಗುಂಟ

ಹುಟ್ಟಿಲ್ಲದ, ನಾವಿಕನಿಲ್ಲದ, ವೇಗವಿಲ್ಲದೊಂದು ದೋಣಿ.



ನಾ ತೀರದೊಂದು ಗುಂಡುಗಲ್ಲಿನ ಮೇಲೆ

ಜಾರುತಿದ್ದರೂ ಬೀಳದಂತೆ ಸಾವರಿಸಿಕೊಳ್ಳುತ್ತಾ

ರಾತ್ರಿರಾಣಿಯ ಗಂಧ ತಂದ ಮತ್ತನೇ ಉಸಿರಾಡುತ್ತಾ

ನಿದ್ದೆ-ಜಾಗೃತಿಯ ನಡುವೆ ಮೈಮರೆತಂತೆ....



ಅಷ್ಟರಲ್ಲಿ ದೋಣಿಯಲೊಂದು ಅಸ್ಪಷ್ಟ ಆಕೃತಿ...

ಅರೇ....ನಾ ಕಂಡ ಕನಸಿನವನೇ ಈತ?!

ನೋಡನೋಡುತ್ತಿದ್ದಂತೆ ಪಕ್ಕದಲ್ಲೊಂದು ಸ್ತ್ರೀ

ಆಕೆಯ ಮುಖಭಾವ ಬಹುಸ್ಪಷ್ಟ , ಬಹು ಪರಿಚಿತ

ಬಾಳಿಡೀ ಆ ಕ್ಷಣಕೆ ಪರಿತಪಿಸಿ ತನ್ನ ಹಾಡಲೇ

ಕೃಷ್ಣನನೊಮ್ಮೆ ಕಂಡಾಗಿನ ಮೀರಾಳದಿದ್ದಂತೆ,

ತೊರೆದು ತನ್ನ ಗುರುತು, ಹುಡುಕಾಟವೇ ತಾನಾಗಿ

ಮಲ್ಲಿಕಾರ್ಜುನನ ಬಳಿಸಾರಿದಾಗಿನ ಅಕ್ಕಳದರಂತೆ,

ಶ್ಯಾಮ ಬಿಟ್ಟು ಹೋದ ಗಳಿಗೆಯಲೇ ಉಳಿದು,

ಕೊಳಲುಲಿಯಲವನ ಸಾಕ್ಷಾತ್ಕರಿಸಿದಾಗಿನ ರಾಧೆಯದರಂತೆ.



ಆ ಧನ್ಯತೆಯ ಭಾವದೊಳ ಹುದುಗಿಹೂಗಿದ್ದ

ನನ್ನ ಮನ ಕೊನೆಗೊಮ್ಮೆ ಹಿಂತಿರುಗಿದಾಗ

ಒಳಹೊಕ್ಕಲು ಗುಂಡುಕಲ್ಲ ಮೇಲೆ ನಾನೇ ಇರಲಿಲ್ಲ.

----------------------------------

16)ಈಗರ್ಥವಾಗುತ್ತಿದೆ.....


--------------------------

ನೀ ಹೇಳಿದ್ದೂ ಅದೇ, ನಾ ಹೇಳಿದ್ದೂ ಅದೇ

ನೀನೇನೋ ಅರ್ಥೈಸಿದೆ, ನಾನೇನೋ....

ಸುತ್ತ ಸಂಶಯದ ಮಂಜು ಕರಗಿದಂತೆ

ನನಗೀಗ ಅರ್ಥವಾಗುತ್ತಿದೆ.....



ಸಾಧ್ಯಾಸಾಧ್ಯತೆಯ ನಾ ಪ್ರಶ್ನಿಸಿದೆ, ಅಲ್ಲೇ ಉಳಿದೆ,

ಆಗದ್ದಿದೆಂದು ನೀ ಉತ್ತರ ಪಡೆದೆ, ಮುಂದೆ ನಡೆದೆ

ನೀನತ್ತತ್ತ, ನಾನಿತಿತ್ತ ಸರಿದರೂ ಬಹುಶಃ

ಅನುಭಾವಿ ಆತ್ಮಗಳೆರಡು ಪರಸ್ಪರರತ್ತ.



ಭಿನ್ನ ಶಬ್ಧಗಳಲಿ ಒಂದೇ ತಾತ್ಪರ್ಯವಾಡಿದ

ಆ ಗಳಿಗೆಯಾದರೂ ನಾವೊಂದಾಗಿದ್ದೆವಲ್ಲವೇ?!

ಸಾಕು ಬಿಡು, ಇನ್ನದನ್ನೇ ತಿರುತಿರುಗಿ ನೋಡುತ್ತ

ಪುನರಾವರ್ತಿಸಿದಂತೆ ಅನುಭವಿಸಬಲ್ಲೆ.....



------------------------------

17)ಒಂದೇ ಹೆಸರೇಕೆ


--------------------------

ಬೆನ್ನಿಗಂಟಿದ ಹೊಟ್ಟೆಯಲೇ ಒಂದು,

ಉಂಡು ಕರಗಿಸಿಯಾಗಿದ್ದರಲೇ ಒಂದು

ಹೀಗೆರಡು ಸ್ವರೂಪದ್ದಿದ್ದಾಗ ಹಸಿವೆಯೆಂಬ ಒಂದೇ ಹೆಸರೇಕೆ?



ನೀರಿದ್ದು ಮರೆಯಾಗಿ ಬರ ಬಂದಲ್ಲೇ ಒಂದು

ತುಂಬು ಸಾಗರ ಎದುರಿದ್ದಾಗಲೇ ಒಂದು

ಹೀಗೆರಡು ತರಹದ್ದಿದ್ದಾಗ ದಾಹವೆಂಬ ಒಂದೇ ಹೆಸರೇಕೆ?



ಇಲ್ಲದ ಜೊತೆ ಕಾಡಿದ ನೋವಲ್ಲೇ ಒಂದು,

ಒಡನಾಟಗಳಲಿ ಹೂತುಹೋಗಿದ್ದಾಗಲೇ ಒಂದು

ಹೀಗೆರಡು ರೂಪದ್ದಿದ್ದಾಗ ಒಂಟಿತನವೆಂಬ ಒಂದೇ ಹೆಸರೇಕೆ?



ಕರೆದದ್ದು ಬಂದುದು ಅರಿವಾಗದಿದ್ದಾಗಲೇ ಒಂದು

ಹಂಬಲಿಸಿಯೂ ಒದಗದಿದ್ದಾಗಲೇ ಒಂದು

ಹೀಗೆರಡು ರೀತಿಯದಿದ್ದಾಗ ನಿರೀಕ್ಷೆಯೆಂಬ ಒಂದೇ ಹೆಸರೇಕೆ?

---------------------------------------------------------------------------------------------


18)ಆ ಸಂಜೆಯ ಮಳೆ


-------------------------

ಗುಡುಗಿನಾರ್ಭಟ, ಗಾಳಿಯಬ್ಬರ

ಮಿಂಚೂ ಕೋರೈಸಿ, ಕಾದ ಹಗಲಿನ ತೃಷೆ

ತಣಿವ ಸಾಧ್ಯತೆಯಾಗುತ್ತಿತ್ತು ದೂರದೂರ...



"ಮೋಡ ಮಳೆಯ ತಂದೀತೆ?"- ಅವಳಾಸೆಯ ಪ್ರಶ್ನೆ

ಆತ ಹೇಳಿದ- "ಗುಡುಗೊ ಮೋಡವೆಲ್ಲಿ ತಂದೀತು ಮಳೆ?"

"ನಿನ್ನಂತೆ..." ಸೇರಿಸಿದ ಕೊನೆಗೆ ಮೆತ್ತಗೆ.

ಮೆಲುಹಾಸ್ಯ ತಪ್ಪಿತಸ್ಥ ಮನಕೊಂದು ಪೆಟ್ಟಾಯಿತು.



ತಿಳಿಯಾಗಿದ್ದ ಒಳಗಿನ ವಾತಾವರಣ

ಹೊರಗಿನಂತೆ ಅಸ್ತವ್ಯಸ್ತವಾಯಿತು.

ಹೌದಲ್ಲವೇ.......?

ತಾನೆಂದಾದರೂ ತಣಿಸಿದೆನೇ?

ಒದಗಬಯಸುವ ಭಾವ ಗುಡುಗಿನಷ್ಟೇ ಸ್ಪಷ್ಟ

ಮನಸಿನಾರ್ದೃತೆ ಮಿಂಚಿನಷ್ಟೇ ಶುಭ್ರ

ಕಾವ ತಣಿಸುವಾಸೆಗೆ ಗಾಳಿಯದೇ ವೇಗ

ಆದರೆಂದೂ ಸುರಿಯಲಾರದೇ ಹೋದೆ.

ಒತ್ತಡವೆಷ್ಟೇ ಹೆಚ್ಚಾದರೂ ಮಳೆಯಾಗದ

ಮೋಡವೆಷ್ಟು ಗಾಢವಾಗಿದ್ದರೇನು ಫಲ?



ಪ್ರಕೃತಿಯೂ ಅವಳಂತೆ ಬಯಸಿಯೂ

ತಣಿಸಲಾರದ ಅಸಹಾಯಕತೆಯ

ಪೂರ್ತಿ ತೋರ್ಪಡಿಸಲೂ ಆಗದೇ,

ಒಳಗೆ ತಡೆದಿಟ್ಟುಕೊಳಲೂ ಆಗದೆ

ನಾಕುಹನಿ ಕಣ್ಣೀರು ಸುರಿಸಿದಂತೆ

ಪರಪರಮಳೆ ಬಂತು ನಿಂತೇ ಬಿಟ್ಟಿತು.

-----------

19)ಸಾವಲ್ಲೇ ಗೆಲುವೆ?!


--------------

ವಾತ್ಸಲ್ಯದಡಿಯಲ್ಲಿ ಮಗುವಾಗಿ ಬೆಳೆಯುತಿದ್ದವಳಲಿ

ಪ್ರೇಮ ಮೂಡಿಸಿ ಮಗುವಾಗುಳಿದಿಲ್ಲ ಎನಿಸಿದವ

ಎಲ್ಲಿಂದಲೋ ಬಂದು ಅವನಿಲ್ಲದೇನಿಲ್ಲ ಅನಿಸಿದವ

ಹೆಸರಿಗೆ ಅಪ್ಪನದರ ಜೊತೆ ತೆಗೆದು ತನ್ನದನ್ನಿತ್ತವ

ಅಸ್ತಿತ್ವವೊಂದಾಗಿದ್ದುದು ಅಚ್ಚರಿಯೆಂಬಂತೆ

ಜೊತೆ ಪಡೆದೂ ಒಂದಾಗುಳಿವುದ ತೋರಿಸಿದವ

ಮಡಿಲಲ್ಲಿ ತಾಯ್ತನದ ಸೊಬಗ ಅರಳಿಸಿ

ಉಡಿ ತುಂಬಿ ತವರಿಗೆ ಕಣ್ತುಂಬಿ ಕಳಿಸಿದವ

ಕೂಸ ಕಣ್ಣಲಿ ತಮ್ಮ ಪ್ರೇಮ ಬಿಂಬಿಸಿದಾಗ

ಹೊಸತು ಕಂಡವನಂತೆ ಸಂಭ್ರಮಿಸಿ ನಕ್ಕವ

ಬೇರೇನಿಲ್ಲವೆಂಬಂತೆ ಇಬ್ಬರ ಸುತ್ತಲೇ ಗಿರಕಿಯಾಡಿ

ಪ್ರಪಂಚ ಕೈಯ್ಯೊಳಗಿದ್ದಂತೆ ಮೆರೆಯುತ್ತಿದ್ದವ..



ಹಠಾತ್ತಾಗಿ ಹೀಗೆ ಬಿಟ್ಟು ನಡೆದರೆ.....?!

ಕಣ್ಣೀರು ಹಸುಗಂದಗೆ, ತಾಯ್ತಂದೆಗೆ ಅರಗದು

ಮುಚ್ಚಿಟ್ಟ ಒಣದುಃಖ ಹಸಿಒಡಲು ಭರಿಸದು

ತಿಂಗಳಕಾಲ ಅಗಲದೆ ಬಂದುಬಂದು ಕಾಡಿದವನ

ಹಿಂಬಾಲಿಸಿ ಹೋಗುವ ದಾರಿಯೂ ಕಾಣದು

ಕಂಗಾಲಾಗಿ ಕೂತವಳ ಕಂಡನಿಸಿತು-

"ಸಾವಿಗಂಜಲೇಬೇಕೆ........?

ಸಾವಪ್ಪಿದಲ್ಲೇ ಗೆಲುವೇ..? ಅದು ಬಳಿಸಾರಿಯೂ

ಬಿಟ್ಟುಳಿಸಿದವರ ಪಾಲಿಗೆ ಬರೀ ಸೋಲೇ ಇರುವುದೇ?!"

------------------------------------

ಒಂದಷ್ಟು ಚುಟುಕಗಳು
-------------------------------
ಹಕ್ಕಿ ಇಲ್ಲದ ಆಗಸ ಚುಕ್ಕಿತಾರೆ ತುಂಬಿತು

 ಕ್ಕಿಹಾರಾಟದ ಚಿತ್ರ ಸಂಜೆ ಅಳಿಸಿತು, ಚುಕ್ಕೆಚಿತ್ತಾರ ರಾತ್ರಿ ಬರೆಯಿತು
ಮುಕ್ತವಾಗಿ ತೆರಕೊಂಡ ಆಕಾಶ ಬರುವರ, ಬರೆವರ ತಡೆಯಲಿಲ್ಲ
 ಹಾಗೆ ಬಹುಕಾಲ ಅದು ಖಾಲಿಯಾಗುಳಿಯಲಿಲ್ಲ
--------------------------------------------------
ಸ್ವರ್ಗವಿಲ್ಲಿ ನೆಲದಲಿಲ್ಲವೆಂದವರು ಯಾರು?!
ಮುಖದ ಕಣ್ಣು ಕಂಡದ್ದಲ್ಲ ಅದು, ಮನದ ಕಣ್ಣ ಕಲ್ಪನೆ
ಇಲ್ಲೇ ಸುತ್ತ ಇದೆ ಅಂದುಕೊಂಡವನದರ ಒಳಗೆ
ಎಲ್ಲೋ ಅತ್ತ ಅಂದವಗದು ನಿಲುಕದ ಆಗಸದೊಳಗೆ

------------------
ನಸ ನಿರ್ದೇಶಿಸಬಾರದು, ಅದರಷ್ಟಕ್ಕೆ ಬೆಳೆಯಬಿಡಬೇಕು ಕಣ್ಣಪಾಪೆಯ ದೃಷ್ಟಿ ಸೀಮಿತ, ನೀರಿಲ್ಲದ ದಾರಿಯಿಲ್ಲದ,
ಹೂವಿಲ್ಲದ, ಮೇವಿಲ್ಲದ ನಾಳೆಗೊಯ್ಯಬಹುದು.
ಸ್ವಪ್ನದ್ದು ಕಣ್ಣ ಮೀರಿದ ನೋಟ, ನಾವರಿಯದ ತಾವಲ್ಲಿ
ಕ್ಕದ ಸತ್ಯ ಸುಳ್ಳಾಗಿಸುವ ಪವಾಡಕೊಯ್ಯಬಹುದು.

-------------------------------------

ನಾನೇನೋ ಚೆನ್ನಾಗೇ ಇದ್ದೇನೆಂದುಕೊಂಡಿದ್ದೆ

ನೀ "ಹೇಗಿರುವೆ" ಎಂದೆ ನೋಡು,
ಅಮ್ಮನ ಕಂಡು ನಿದ್ದೆಯಿಂದೇಳುವ ನೋವುಗಳಂತೆ

 ಮೇಲೆದ್ದು ಕುಣಿಯತೊಡಗಿದವು

--------------------------------------------------
ರುವುದೆರಡೇ ಕಣ್ಣು, ದೃಷ್ಟಿ ಸಾಗುವ ಪಾಪೆಯಿನ್ನೂ ಸಣ್ಣ ಜಗವೊಮ್ಮೆಗೇ ಒಳಬರುವುದೆಂತು?!
ಕಂಡದ್ದೊಂದು ಮುಷ್ಟಿ, ಅರಿತದ್ದೊಂದು ಚಿಟಿಕೆ,
ಕಣ್ಣಳತೆಗೆ ಸಿಗದ್ದೆಲ್ಲ ಸುಳ್ಳೆಂಬ ಭ್ರಮೆಯೆಂತು?!

----------------------------------------
ಹೆಸರಲ್ಲೇನಿದೆ ಜೀವವೇ, ಆತ್ಮಗಳೆರಡರ ನಡುವೆ ಋಣಾನುಬಂಧವೇ ಮುಂದಾಗಿ

ಸೇತುವೆಯೊಂದ ಕಟ್ಟಿದ ಮೇಲೆ ಹೆಸರಿಲ್ಲದ ಬಂಧಕ್ಕೊಯ್ಯುವದೆಂಬ ಅಳುಕೇಕೆ?
--------------------------------------------------------------------------------------

ನನಲಿಲ್ಲದ ಆದರೆ ನನದೆನಿಸುವ ನೋವು ನಿದ್ದೆಗೊಡದೆ ಕಾಡುವುದೆಂದರೇನು?!
ಅಲ್ಲೇ ಎಲ್ಲೊ ಇದ್ದುದು, ನಾ ಗಮನಿಸೆ ನಾನಿರಲೇ ಇಲ್ಲವೆನುವುದೇನು?!
ಗಾಯ ಕಾಣದ ನೋವಿಗೆಲ್ಲಿ ಮುಲಾಮು ಹಚ್ಚಿ ಸಮಾಧಾನಿಸಲಿ?ಕ್ತ ಕಣ್ಣೀರಾಗಿ ಹರಿದಾಗ ಹೇಗದ ಹೆಪ್ಪುಗಟ್ಟಿಸಿ ನಿಲ್ಲಿಸಲಿ?ಮೂಲದರಿವಿದ್ದರೂ, ಕೈಗಳಿದ್ದರೂ, ತಡವಿ ಸಂತೈಸಲಾಗುತ್ತಿಲ್ಲ. ಕ್ಷಮಿಸು ನೋವೇ, ಧಾವಿಸಿ ಬರುತಿದ್ದರೂ ನಿನ್ನ ಮುಟ್ಟಲಾಗುತ್ತಿಲ್ಲ.

--------------------------------------------------------------------------
ಶ್ರೇಷ್ಠ ಮುತ್ತಿನ ಹಾರದೊಂದು ಮುತ್ತೊಡೆದರೆ ಒಂದೇ ತಾನೇ ಎನ್ನಲಾಗದು

ಮುತ್ತೊಡೆದದ್ದು ಜೋಡಿಸಿ ಪೋಣಿಸಲಾಗದು, ದುರ್ಲಭವದು ಇನ್ನೊಂದು ಸಿಗದು
ಧರಿಸಿದಾಗಲೆಲ್ಲ ಖಾಲಿಜಾಗ ಕಾಡುವುದು, ಹೊಂದಿದ ಮೇಲೆ ಒಡೆಯದಂತಿಡಬೇಕು ----------------------------------------------------

ಸಮೃದ್ಧಿ ಮಣಭಾರದ ಜಂಭ ಕೊಟ್ಟರೆ, ಕೊರತೆ ಖಾಲಿಯೆನಿಸುವ ವಿನಯ ಲಾಭ ಕ್ಷಣಕಾಲದ ಸುಖ ಕೊಟ್ಟರೆ, ನಷ್ಟ ಮೈಲುದ್ದದ ತಾಳ್ಮೆ
ಗಳಿಸುವಿಕೆ ಉಳಿಸುವ ಚಿಂತೆ ಇತ್ತರೆ, ಕಳಕೊಳ್ಳುವಿಕೆ ಮತ್ತೆ ಗಳಿಸುವ ಛಲ
ಈಗ ಹೇಳಿ- ಅದು ಬೇಕೋ ಇದು ಬೇಕೋ?
----------------------------

ಸೋಲು ಕಣ್ಮುಂದಿದ್ದಾಗ ಬೇಕಾದದ್ದಿಷ್ಟೆ-
ಹಿಂತೆಗೆಯುವ ಮುನ್ನ ಒಂದು ಭಿನ್ನಯತ್ನ
-----------------------------------