Wednesday, June 24, 2015

ನಗೆಯ ಸಾರಥಿಯೇ..

ಓಹ್! ಹಾಗಾದರೆ
ನೂರು ಮರುಭೂಮಿಯ
ನೂರಾರು ಬರಗಾಲಗಳ
ಶತಶತಮಾನದ ದಾಹಕ್ಕೆ
ಇದೋ ಈ ಇಂದಿನ ನಿರೀಕ್ಷೆಯಿತ್ತೆಂದಾಯಿತು..
ಥೇಟ್ ಹೀಗೇ ನೀನೊಮ್ಮೆ ಬರುವ,
ನಿಲುವ, ನುಡಿವ, ಮುಟ್ಟುವ ತುಣುಕು ಆಸೆ
ಬಿರುಗಾಳಿಯಬ್ಬರದಲೂ
ಮಿಣಮಿಣ ಬೆಳಕುಳಿಸಿಕೊಂಡಿತ್ತೆಂದಾಯಿತು.

ಒಣಗಿಲ್ಲದ ಗಂಟಲು ಪಸೆ ಬೇಡಿರಲಿಲ್ಲ
ಆರಿಲ್ಲದ ಕಂಠದಲಿ ಹಾಡು ನಿಂತಿರಲಿಲ್ಲ
ಒಪ್ಪುವ ರಾಗ
ಮತ್ತೆದೆ ಮಿಡಿವ ಲಯವೊಮ್ಮೆಯೂ ತಪ್ಪಿರಲಿಲ್ಲ
ಸಣ್ಣಪುಟ್ಟ ದೂರು-ದುಮ್ಮಾನ ಚಿಗುರಲೇ ಚಿವುಟಿ
ಕಳೆಯಿಲ್ಲದ ತೋಟ, ಹೂನಗೆಗೂ ಕಮ್ಮಿಯಿರಲಿಲ್ಲ
ಅರರೇ! ಎಲ್ಲಿತ್ತು ಇಷ್ಟೊಂದು ನಿರ್ವಾತ?!
ತುಂಬಿ ತುಳುಕುತ್ತಿದ್ದಲ್ಲೂ
ಒಳಗಿಷ್ಟು ಖಾಲಿ ಅಡಗಿದ್ದುದು
ಅದು ಭಣಭಣವೆನ್ನುತಿದ್ದದ್ದು
ನೀ ಬಂದು ತುಂಬುವವರೆಗೆ ಗೊತ್ತೇ ಇರಲಿಲ್ಲ.

ಹಾಗೆ ಬಂದೆ, ಹೀಗೆ ಉಲಿದೆ
ಮೊದಲ ಮಳೆಯದೂ, ಮೊದಲ ಮುತ್ತಿನದೂ
ಒಂದೇ ಘಮವೆಂದದ್ದು ನೀನೇ ತಾನೇ?
ಕಣ್ರೆಪ್ಪೆಯ ಹಾದಿಯಲಿ ನಗೆಯ ಸಾರಥಿಯೇ,
ಮುಚ್ಚಿದೆವೆಯಡಿ ಅಮಿತ ಸಾಮ್ರಾಜ್ಯ
ವಿಸ್ತರಿಸುವದೊಂದು ಯೋಚನೆಯಿದೆಯಂತೆ
ಅಲ್ಲಿಯವರೆಗೂ ಜತೆ ನೀಡುವೆಯಾ?

Tuesday, June 23, 2015

ಎಲ್ಲ ಮೀರಿ....

ಹಸಿರು, ನೀರು, ಅರಳು, ಕರಕಲು,
ಕಣಿವೆ, ಗುಡ್ಡ, ಗೂಡು, ಬಯಲು
ಒಂದನೂ ಬಿಡದೆ ಕೆಲವೇ ಹೊತ್ತಲಿ
ಒಳಗಿಳಿಯದೆಯೇ ಮೇಲುಮೇಲಲಿ
ತಾಕುವ ಚಳಿಮಳೆ ಒಗ್ಗೂಡಿದ
ನಿರ್ಗಂಧ ಆದರೂ ಬಲು ಹಿತ
ಗಾಳಿಯೊಂದು ತಣ್ಣನೆಯ ಉಗುರು
ಮುತ್ತಿಕ್ಕಿದ ಸಿಹಿಯಷ್ಟೇ ಇಲ್ಲುಳಿಯಲಿ.

ಅದರೆಲ್ಲ ಉದ್ವೇಗ, ಆವೇಗ, ವೇಗಗಳಿಗೆ
ಮಬ್ಬು ಕವಿದ ಪಾಪದ ಅಷಾಡವೊಂದು ನೆಪವಾಗಲಿ.
ಹೊಸಹೊಸತಿಗೆ ತುಡಿವ ಮಿಡಿವ
ನಿರಂತರತೆಗೆ ಪ್ರಾಣವೆಂಬ ಹೆಸರು ನೆಪವಾಗಲಿ
ಆಳ ಅಳೆಯದೆ, ಬರೀ ಸವರುತಲೇ ತಳ ತಾಕುವುದಕೆ
ವೇದಾಂತ-ವೈರಾಗ್ಯ ನೆಪವಾಗಲಿ.

ಬಂದು ಹೋದ ನೆನಪು ಮಾಯಲಿ.
ಬಂದೇ ಬರುವ ಕನಸು
ಕನಸಷ್ಟೇ ಎಂಬ ಜ್ಞಾನ ಹನಿಹನಿ ಜಿನುಗಲಿ.
ಹಸಿರು ಹಾಸಿ ಹಸಿರ ಹೊದ್ದ
ಮುಂಗಾರಿನ ಮಂಜು ಕವಿದ
ಒಂದು ಮುದ್ದು ಮುಂಜಾವಿನಂಥ,
ಸತ್ಯಕೆ ಹಿಡಿದ ಕನ್ನಡಿ ನಗುವೇ,
ಇವೆಲ್ಲಕ್ಕು ಮೀರಿ ಇವೆಲ್ಲವ ಮೀರಿ
ಪ್ರೀತಿಸುವ ನನ್ನ ಶಕ್ತಿ
ಪುಷ್ಟಿ ತುಷ್ಟಿಗಳ ಬೇಡದೆ
ಬರಿದೇ ಬೆಳೆಯುತಾ ಸಾಗಲಿ.