Saturday, December 17, 2016

ಬರುವೆನೆಂದವನ
ಕಾಲಿಗಡ್ದಕಟ್ಟಿದ ಹಾಲಿನ ಋಣವ್ಯಾವುದೋ!
ಕೊಳಲೋ, ನವಿಲೋ, ಬೆಣ್ಣೆಯೋ, ಮಣ್ಣೋ
ಕಲ್ಪನೆಯಲೇ ಬಂಧಿಸಿಟ್ಟ ರಸಕ್ಷಣವ್ಯಾವುದೋ!
ಪಾತಾಳದ ಬಂಧಭೀತಿಯೋ,
ಮೀರಿದಾತನೂ ಒಳಗೊಂಡು ಕುಸಿದ ರಣಕಣವ್ಯಾವುದೋ!

ಗಾನದುದ್ದಕೂ ಧ್ಯಾನದುದ್ದಕೂ
ಜೊತೆಯಾಗುವ ವಾಗ್ದಾನವೊಂದಿತ್ತು;
ಭರದಿ ಶುರುವಾದ ಸ್ನಿಗ್ಧ ಯಾನವೂ..

ಸುರಿದಿತ್ತು, ಹರಿದು ಹಾಯ್ದಿತ್ತೊಮ್ಮೆ ಕೆಚ್ಚಲು
ಹೆಜ್ಜೆ ಸದ್ದಿಗೆ, ಅವನಧರದ ನೆನಕೆಗೇ.
ಬಿಗಿತ ಕಾದಿದೆ ಬಿರಿಯಲೀಗ ಕಣ್ಣೆಡೆಯಲೂ, ಹೆಣ್ಣೆದೆಯಲೂ
ನದಿಯಾಗಿ, ಝರಿಯಾಗಿ ಕೊನೆಗೊಮ್ಮೆ
ಕಡಲಂಥ ದಾಹದಲಿ ಸವಿಯಾಗಿ ಕರಗಲಿಕೆ.

ಕಾಲದಾಳದಲೆಲ್ಲೋ ಮೂಲವಿದೆ;
ಮೂಲದಾಳದಲಿ ಸಾಲದ ಮಾತಿದೆ.
ತೀರಿಯೇ ತೀರಬೇಕು!
ಏಳುಹೆಜ್ಜೆಯ ಹೆಸರು ಗಾವುದದಷ್ಟಾಗುತಲಾದರೂ,
ಕೆಲನೋಟ, ತುಸುಮಾತು, ಚಣಕಾಲದಲಾದರೂ..

ಬರುವೆನೆಂದಿದ್ದ, ಬಂದಾನು;
ಕೊನೆಯೆಂಬುದುಂಟೇ ನಿರೀಕ್ಷೆಗೆ?
ಹಾದಿ ಮೂರ್ತ-ಅಮೂರ್ತವೆರಡಕೂ,
ಸುಳ್ಳಿಗೂ ಸತ್ಯಕೂ
ಒಪ್ಪವಾಗುವುದಲ್ಲದ ಗಮ್ಯವುಂಟೇ?

ಬರುವೆಯಾದರೆ ಬಾ
ಕಣ್ಣೊರೆಸಲೆನ್ನ ಕಣ್ಣೆವೆ ಕಾದಿದೆ;
ನಗೆಗೆ ಬಣ್ಣ ಬಳಿಯಲು ಕೆನ್ನೆ ಕೆಂಪು!
ಬಾರೆಯಾದರೂ ಸರಿಯೇ ದೊರೆಯೇ,
ಇದೋ ಹೊತ್ತು ಹೊತ್ತಿದೆ ಭಾರ
ನಿನ್ನತ್ತ ಹೊರಡಿಸಲು,
ಕಳಚಿ ಒಂದಷ್ಟು, ಇನ್ನಷ್ಟು ತೊಡಿಸಿಕೊಡಲು!

Saturday, December 3, 2016

ದಾಖಲಾಗದ ಪಾದಗಳು ಮತ್ತು ದಾಖಲಿಸುವ ಪದಗಳು
------------------------------------------
ಅದೋ ಜರಿವ ಪರಿಧಿಯಿಂದಾಚೆ
ಸಿಡಿದು ಬಂದ ತುಣುಕೊಂದು
ಮೆತ್ತನೆ ಮುಟ್ಟಿ ಪಾದ ಮುತ್ತಿಕ್ಕುತಿದೆ;
ಪ್ರತಿಬಾರಿ ಕೊಡವುತಲೇ ಪಾದದ ಕುರುಡು ನೀಗುತದೆ!

ಮೀನು ಮನೆಯಲಿ ಈಜುಹೆಜ್ಜೆಯ
ಜಾಡನರಸಿ ಹೋಗುವ ಕಣ್ಣಲಿ
ಹಿಮ್ಮಡಿ ತೋರುವದದೇ ಪಾದದ,
ಮತ್ತದೇ ಅಚ್ಚುಮೆಚ್ಚೆನಿಸುವ ಹೆಬ್ಬೆರಳ ಬಿಂಬ!

ಅವಧೂತನುಳಿಸದೇ ಹೋದ ಹೆಜ್ಜೆಗುರುತಿನಡಿ
ವಿರಹ-ಪ್ರೀತಿ ಸಂಧಿಸುವಾಗ
ನೂರು ಕತೆ, ನೂರಾರು ಕಣ್ಣೀರ ಹನಿ;
ರಾತ್ರಿಯ ಬೀಳ್ಕೊಟ್ಟ ಇಬ್ಬನಿ, ಹಗಲ ಬೆನ್ನಿನ ಮಂಜುಹನಿ!

ಸದ್ದು-ಸುದ್ದಿಯಿಲ್ಲದ ಒಣಕಂಠದಲಿ
ಕೊರಡೊಂದು ಕೊಳಲಾಗುಲಿವುದಾದರೆ,
ಸದ್ದು-ಗದ್ದಲದ ದಿನದ ಮಿಡಿತದಲಿ
ಮೌನವೊಂದು ನಲಿವ ನವಿಲಾದುದಾದರೆ,
ಅದು ನೆನಪಿನಾಟವೇ ಇದ್ದೀತು!
ಹಣೆಯ ಪೂರ್ಣಚಂದ್ರನಲ್ಲೇನಾದರೂ
ಅಡಗಿದ್ದಾದರೆ ಅದು ಮುತ್ತೇ ಇದ್ದೀತು!

ಮೌನಕೂ, ಗಾನಕೂ ಒಂದೇಸಮ
ಹರಡಿದೆ ಬಟಾಬಯಲಂಥದೊಂದು ಗಮನ!
ಹುಣ್ಣಿಮೆಗೂ, ಆಮಾವಾಸ್ಯೆಗೂ
ಎದೆಯೊಡ್ಡಿದೆ ದಿಟ್ಟ ಇರುಳಂಥದೊಂದು ಮನ!

ಅಲ್ಲೆಲ್ಲೋ ಬಿತ್ತಿದ ಬೀಜ ಹಣ್ಣಾಗಿ ಕಳಿಯುವಾಗ
ಒದ್ದೆ ಅಂಗೈಯ್ಯಗಲ ನೆಲವೊಂದು ಇನ್ನೆಲ್ಲೋ
ಬರಲಿರುವ ಬೀಜಕಾಗಿ, ತೆರಳಿರುವ ಮಳೆಗಾಗಿ
ಅನಂತ ಕಾಯುವುದ ರೂಢಿಯಾಗಿಸಿಕೊಳುತಿದೆ..

ಜರಿವ ದಡ ಹಾದು ಚಿಮ್ಮುವ ನೀರಿನಲೆ
ನೇವರಿಸಿ ಅದೇ ಮಿದುಪಾದ ತೊಳೆಯುತಾ,
ಬೀರಿ ಬೆಳಕು, ಬರೆಯುತದೆ ದಾರಿ!
ಕಲ್ಪದುದ್ದದೊಂದು ಕರೆ-
"ಬಲಗಾಲಿಟ್ಟು ಒಳಬಾ.."
ಕದವಿಲ್ಲದೆದೆ, ಅಳಿಸದ ರಂಗೋಲಿ, ಬಾಡದ ತೋರಣ
ಬಿಡದೆ ಕಾತರಿಸುತವೆ...
ಮತ್ತಿನ್ನೊಂದು ದಿನ-ರಾತ್ರಿಯುರುಳುತವೆ!

Wednesday, November 9, 2016

ಬೆರಳ ತುದಿಯಲ್ಲಿ ಸಾಗರ ಅಡಗಿತ್ತೇನೋ ಹುಡುಗಾ?
ಮುಟ್ಟಿದ್ದಕೇ ಮುತ್ತುರಾಶಿ ಮುತ್ತಿದೆ!
ಕಣ್ಣಂಚಿನಲಿ ಸೂರ್ಯನೇ ಉದಯಿಸಿದ್ದೇನೋ ಹುಡುಗಾ?
ನೋಟವೊಂದಕೇ ಬಿಸಿಯೇರಿದೆ!

ನರನಾಡಿಯಲಿ ನಾಚಿಕೆ, ಬೆನ್ನಿಗೇ ಬಯಲಾಗುವ ಬಯಕೆ.
ಎದೆ ಹುಣಿಯಲಿ ಸಾಲುಸಾಲು ಚಿಗುರು ಆಸೆಗರಿಕೆ,
ಬೆಚ್ಚದೆ ಬೆದರದೆ ತೆನೆಯೊಡೆದ ಹಸಿ ಎದೆಗಾರಿಕೆ!

ಬೆಳಗು ಅಂಗಳಕೆ ಬಿತ್ತಿದ ಬಣ್ಣದ ನಡು ನೀನೆ ನಿಂತಿದ್ದೆ
ಬಿಸಿನೀರೊಲೆಯ ಹೊಗೆಸುರುಳಿ ಘಮವೊಯ್ದು ಊರಿಗೆಲ್ಲ ಸಾರಿತ್ತು.
ಕಂಡ ಕಣ್ಣಲೆಲ್ಲ ನೂರು ಪ್ರಶ್ನೆ; ಕೆನ್ನೆಕುಳಿ ಕೆಂಪು ಉತ್ತರಿಸಿತ್ತು!

ಬರಸೆಳೆದು ಮರೆಗೊಯ್ದ ಕಾಲದ ತುಣುಕು; ಗಂಟೆಯೊಂದೀಗ ಕ್ಷಣವಾಯ್ತು!
ಪುರುಷನೋ-ಪರುಷವೋ, ನನ್ನೊಳ-ಹೊರಗು ಬಂಗಾರವಾಯ್ತು!
ಎಳೆಬಿಸಿಲು ಹೊಳೆಹೊಳೆದೆ ನೀನು, ಇಬ್ಬನಿ ಕಣ್ಮುಚ್ಚಿ ಕರಗಿಯೇ ಕರಗಿತು!

ಸೋಪಾನವೊಂದೊಂದರಲೂ ಪ್ರೀತಿ ಮದರಂಗಿಯ ಜೋಡಿಹೆಜ್ಜೆಗುರುತು!
ತುರೀಯದಲಿ ಬಿಳಿಶಂಖದೊಡಲು  ಹೆಸರು ನಿನದೇ ಅನುರಣಿಸಿತ್ತು.
ನಾನೀಗ ಹೆಣ್ಣೆನಿಸಿದ ಗಳಿಗೆಯಿದು ನಿನ್ನ ಗಲ್ಲದಿಂದುದುರಿ ನನ್ನ ಹಣೆಗಿಳಿದಿತ್ತು!

ನಲ್ಲ, ನಾನಲ್ಲ; ಕೈಹಿಡಿದು ನೀನೇ ಮತ್ತೆ ಮತ್ತೆ ಮೇಲೆಮೇಲೇರಿಸಿದ್ದು!
ಮನಸು ಕಣ್ಬಿಟ್ಟಾಗೆಲ್ಲ ಘನಪರಿಮಳ ಒಳಹೊಕ್ಕಿತ್ತು; ಹೊಕ್ಕುಳ ಹೂವರಳಿತ್ತು!
ನೀ ನಡೆದಾಗ ನನ್ನಾಳದೊಳಗೆ, ಮಣ್ಣಿನ ಮನೆ, ಈ ಕಾಯ ದೇಗುಲವಾಯ್ತು!

Thursday, November 3, 2016


ಹೂವುದುರಿತೆಂದು
ಪಚ್ಚೆಯೆಂಬ ಪಚ್ಚೆ ಇಂಚಿಂಚು ಬಾಡುವಾಗ,
ಹೊಳಪೊಂದು ನೆಲಕಿಳಿಯಿತೆಂದು
ಆಗಸವೇ ಬೂದು ಇಳಿಜಾರಲಿ ಅಸ್ತಮಿಸಹೊರಟಾಗ,
ಹಾಡುತಾ ಅಳುತ್ತವೆ ಬಣ್ಣಗಳು, ಹಗಲು ಮತ್ತು ರಾತ್ರಿ..

ಅದೋ ಶಿಖರಾಗ್ರದಲೂ ಬಿಡದ ಆ ಗುಂಗು
ಮಂಜಿನಂತೆ ಮುಸುಕಿ ಧೊಪ್ಪನುರುಳಿಸಿದ ಹಾಗೆ!
ಇದೋ ಈ ಪಾತಾಳದಲೂ ನನದೊಂದು ಗುಂಗು
ಹಾಗೆ ಬಿದ್ದುದ ನೆನೆನೆನೆದು ಬಿಕ್ಕಿದ ಹಾಗೆ!

ಬಂದು ಹೋಗಿಯೂಬಿಟ್ಟೆ,
ನಾ ಗುರುತುಳಿಸಿಕೊಳಲಿಲ್ಲ..
ನಗುತಲೇ ಕಣ್ತುಂಬಿಕೊಳುವ ಸಂಜೆಗಳಲಿ
ಮುತ್ತಿಕ್ಕಿಸಿಕೊಂಡ ಹಣೆ ಹೇಳುವ ಕತೆ
ಖಾಲಿ ಕೆನ್ನೆ ಕಿವಿಗೊಟ್ಟು ಕೇಳುತದೆ!

ಭರತಮಹಾಬಲಿಗೆ ಅಳಿಸಿಹೋದ ಗುರುತುಗಳಲಿ
ವೈರಾಗ್ಯ ಕಾಣಿಸಿತಂತೆ!
ಅಲ್ಲೆಲ್ಲೋ ಗಾಳಿ ಮೈಯ್ಯಲಿ ಗುರುತುಳಿಸಲು ಹೆಣಗಾಡುತಿದೆ;
ನನದೊಂದು ಜೈ ಅಂಥ ಬದುಕಿಗೆ!

ಅವನಾಣತಿಯಂತೆ ಉರುಳುತಿರುವ
ಅವನದೇ ಗುಡಿಯುಳಿಸಲು
ಅವನದೇ ನಾಮಾರ್ಚನೆಯ ಮೊರೆ ಹೊಗುವ ಹಾಗೆ,
ಅತ್ತತ್ತಲೇ ಸಾಗುವ ಪಾದದಡಿ ಮೆತ್ತಿಕೊಳುವ
ಧೂಳಕಣವಾಗುವುದ ಕಲಿತಾಗಿದೆ!

ಸೋಲುವುದಿಲ್ಲ;
ಬಾಳುವುದಿಲ್ಲ ನೆನೆಯದೆ ಒಂದು ಕ್ಷಣವೂ..
ಒಪ್ಪಿಸಿಕೋ ಶೂನ್ಯವನೇ
ನಿನಗಿಷ್ಟವಾದ ಪಕ್ಷದಲಿ..
ಅಪೂರ್ಣವೊಂದು ಅಪೂರ್ಣವೇ ಉಳಿವ ನಿಟ್ಟಿನಲಿ
 ಇಲ್ಲವೇ ಆಗುವ ಹೊತ್ತಿನಲಿ.

ಇದೋ ಹೊರಟೆ
ಸಿಟ್ಟಿಗೆ ಬಣ್ಣದ ರೆಕ್ಕೆ ಹಚ್ಚಿ
ಚಿಟ್ಟೆಯಾಗಿಸುವ ದಿಶೆಗೆ ಬೆರಗಾಗಿ!
ಬೆರಳಿಗೆ ತಂತಿ ಚುಚ್ಚಿ
ಚಿಮ್ಮಿದ ರಕ್ತ ಸ್ವರವಾಗಿಸುವ ನಶೆಗೆ ಶಿರಬಾಗಿ.

ಇಲ್ಲ; ಬರಲಾರೆ ಕೈಹಿಡಿದೊಯ್ವೆನೆನುವ
ಅಣಕು ದೀಪದ ಜೊತೆಗೆ..
ಬೇನಾಮಿ ತೀರಕೊಂದು ಇರದ ಹೆಸರಿಟ್ಟು
ಬಾ ಎನುವ ಕರೆಯ ಜೊತೆಗೆ.

ಅಲ್ಲೊಂದು ಲೋಕವುಂಟಂತೆ
ಹಾದಿಯುದ್ದಕು ನಿನ್ನ ನಿನ್ನೆ ಮೊಹರೊತ್ತಿವೆಯಂತೆ..
ಅಲ್ಲಿ ನೋವು ಅಳಿಸದಂತೆ!
ತನ್ನೊಳಗದು ಮೈ ಮರೆಯುವುದಂತೆ..

ಇಲ್ಲ; ಬರಲಾರೆ ಕತ್ತಲ ಮುಖದೊಂದು
ಅನಪೇಕ್ಷಿತ ನಗೆಯ ಮಿನುಗಾಗಿ..
ತನ್ನಷ್ಟಕೇ ಬಲುತೃಪ್ತ ಮುಚ್ಚುಗಣ್ಣಿನ
ಕಣ್ರೆಪ್ಪೆ ಕುಣಿತದ ಕನಸಾಗಿ..

ತಿನುವ ತುತ್ತುತುತ್ತಲೂ
ನೆನಕೆ ಸಹಿಯೊತ್ತಿರುತಿದ್ದ ಅಂದುಗಳಿಂದ
ಇದೋ ಹೊರಟೆ..
ಕಣ್ಣಯಾನದುದ್ದಕೂ
ಪಸೆಗೆ ಜಲಸಂಸ್ಕೃತಿಯ ಮುಖವಾಡವಿತ್ತು
ನಗುವ ಕೈಗಳ ಪೂಜೆ,
ಅಳುವ ಕೈಗಳ ಮಂತ್ರ-ತಂತ್ರಕೆ
ಮಡಿಲಾಗುವ ಆ ತಾಯಂಥ ತೀರಕೆ..

ಮತ್ತಲ್ಲಿಂದಲೂ ಇದೋ ಹೊರಟೆನೆಂದುಕೊಂಡಿದ್ದೇನೆ,
ಮುತ್ತು-ಹವಳ, ರಾಡಿ-ಬಗ್ಗಡ ದಾಟಿ
ಕಲ್ಲೆಬ್ಬಿಸಿದ ಅಲೆಯುಂಗುರ,
ಕಾಲವೆಸೆದ ಸುನಾಮಿಗಳೂ ಕಂಡಿಲ್ಲದ
ಅಲುಗದ, ಕದಡದ
ಶಾಂತಿಯದಿನ್ನೊಂದು ಮುಖವಾಡವುಟ್ಟ
ತಳದ ಮೌನನೆಲೆಗೆ...

Thursday, October 20, 2016

(ನಾಚು - ಕಾಡಿಗೆ - ಅಂಚು - ಬೆಂಕಿಪೊಟ್ಟಣ)


ಕತ್ತಲಲಿ ಕನಸೇ ಕದಡಿದ್ದಿರಬೇಕು;
ಘನಗಾಂಭೀರ್ಯಕ್ಕೆ ಕಚಗುಳಿಯಿಟ್ಟಂತಾಗಿ
ನಕ್ಕೂನಗದ ಹಾಗದು ಬಿರಿವಾಗ
ನೆನಪೊಂದು ಒಳಗಿಂದಿಣುಕುತ್ತದೆ;
ಇಷ್ಟಗಲ ಕಣ್ಣರಳಿಸುವಾಗ ಅದು,
ಕರಗಿ ನೀರಾಗಿ ಹರಿದ ಕಾಡಿಗೆಯ ಅವಶೇಷ
ಅಲ್ಲಲ್ಲಿ ಬರೆದ ಗೀಟುಗೆರೆಗಳೊಂದಾಗಿ
ಕಣ್ಣಂಚಿನ ಹೊಸಿಲು ಬರೆಯುತಾವೆ!

ಕಡ್ಡಿಯೊಂದು ತನ್ನ ತಾನೇ ಕೀರಿ
ಕಿಡಿ ಹೊತ್ತಿಸುವಾಗ
ಬೆಂಕಿಪೊಟ್ಟಣ ಬೆಳಕ ಹೆರುತ್ತದೆ.
ಆ ಹುಟ್ಟಿನಡಿ ಎಲ್ಲ ಸ್ಪಷ್ಟವಾಗುವ ನಿಟ್ಟಿನತ್ತ...

ಹೊಸಿಲಲರಳಿದ ಬಳ್ಳಿಹೂ ನಡು ಬಿಡುಬೀಸಾಗಿ
ಬೇಡವೆಂದರೂ ಅಲ್ಲಲ್ಲಿ ಗೋಚರಿಸುವ ಹೆಸರು..
ಅಂಗೈಲರಳಿದ ಮದರಂಗಿಯ ನಡು ಅಡಗುವದೇ ಹೆಸರ
ಅಂದಿನಂತೆಯೇ ನಾಚುತಾ ಹುಡುಕಬಯಸುವ ಮನಸು..
ಮನಸು ಮರೆತದ್ದೋ ನಾಚುವುದನ್ನು;
ಹೆಸರು ಮರೆತದ್ದೋ ಪುಳಕ ಹುಟ್ಟಿಸುವುದನ್ನು!
ಎರಡೂ ನಿರತ ಹಿಡಿಹಿಡಿಯಾಟದಲಿರುವಾಗಲೇ
ನಗು ಖಾಲಿಯಾಗಿ, ಕಾಣೆಯಾಗಿ
ಘನಗಾಂಭೀರ್ಯ ಮತ್ತೆಚ್ಚೆತ್ತುಕೊಳುತದೆ!

Friday, October 14, 2016

(ಎಚ್ಚರ - ಮೊಣಕಾಲು - ಗುಡ್ಡ- ಗೊತ್ತಿದ್ದೇ)



ಗೊತ್ತಿದ್ದೂ ಮತ್ತಲ್ಲಿಗೇ
ರಾತ್ರಿಯಲೂ ಸ್ಪಷ್ಟ ಕಾಣುವ ಬಾವಿಯ ಬಳಿಗೇ,
ಹಚ್ಚಹಗಲಲಿ ಚಲಿಸುವ ಪಾದ ಎಡವಿದ್ದೋ
ಹಾದಿಯ ಸುಳ್ಳುಪಳ್ಳು ಮುಳ್ಳಾಗಿ ಕಾಲ್ತೊಡರಿದ್ದೋ,
ಮುಗ್ಗರಿಸಿದ ಶಬ್ದಕೆಲ್ಲವೂ ಬೆಚ್ಚಿಬಿದ್ದಿವೆ!
ಎಲೆ ಪ್ರೀತಿಸುವ ಮನಗಳೇ,
ಹತ್ತಿಸುತ್ತಾರೆ ಗುಡ್ಡ ಮಾತಿನೇಣೀಯಲೇ,
"ನೀನೇ ಇಂದ್ರ ನೀನೇ ಚಂದ್ರ!"
ತಿರುಕನ ಜೋಳಿಗೆಯಲೂ
ಚಿನ್ನದ ಗಣಿಯ ವಿಳಾಸ ತೋರಿಸುತಾರೆ!
ಎಚ್ಚರ ಮೈಮರೆಯುವ ಮನಸುಗಳೇ,
ಪಾಪಿ ಹೋದಲ್ಲಷ್ಟೇ ಅಲ್ಲ;
ತೀರಾ ನಂಬುವವರು ಹೋದಲ್ಲೂ
ಮೊಣಕಾಲುದ್ದ ನೀರೇ ಇರುವುದು...
ಗೊತ್ತಿದ್ದೇ ಮತ್ತೆಮತ್ತೆ ಬೀಳದಿರಿ
ನಂಬಿಸುವ ಮಾತಿನ ಹೊಂಡಕೆ.
ತಿಳಿದವರು ಹೇಳಿದ್ದಾರೆ,
ಪರಾಂಬರಿಸಿ ನೋಡಬೇಕು
ಕಂಡರೂ ಕಣ್ಣಾರೆ, ಕೇಳಿಯೂ ಕಿವಿಯಾರೆ..


(ಸಿಂಹಸ್ವಪ್ನ- ನಡುರಾತ್ರಿ-ದಳ-ಬಹುಮಾನ)

(ಸಿಂಹಸ್ವಪ್ನ- ನಡುರಾತ್ರಿ-ದಳ-ಬಹುಮಾನ)

ಚಂದ್ರನ ತೆಕ್ಕೆಯಲೆತ್ತಿ ತಂದು ಸಂಜೆ,
ಕತ್ತಲ ಕೈಗಿತ್ತು ಹೋಗಿತ್ತು.

ಹೆಗಲಲಿ ಚಂದ್ರನ ಹೊತ್ತು ಕತ್ತಲು
ಮೆಲ್ಲ ನಡುರಾತ್ರಿ ತಲುಪಿತ್ತು.

ಕಂದನ ಸಿಂಹಸ್ವಪ್ನವೇ ಇರಬೇಕು;
ಕನಸಲೇನೋ ಒಂದು ಮತ್ತೆಮತ್ತೆ ಬೆಚ್ಚಿಬೀಳಿಸುತಿತ್ತು.

ಕೊಳದೆದೆಯಲೊಂದು ಕಮಲವರಳುತಿತ್ತು
ದಳದಳಗಳ ನಡು ಬಣ್ಣ ಮೈದಾಳುತಿತ್ತು!
ಕಣ್ಣರಳಿತ್ತು; ಬಣ್ಣಭಾವ ಸೇರಿಯೊಂದು ಹಾಡು;
ಹಾಡ ಗುನುಗುತಾ ಕತ್ತಲು ಮೈಮರೆತಿತ್ತು.

ಕಳ್ಳಚಂದ್ರ ಜಾರಿ ಮೆಲ್ಲ ಕನಸೊಳನುಸುಳಿ
ಭಯದ ಬಳಿಹಾಯ್ದಿದ್ದ;
ತಂಪಾಯ್ತು ಸಿಂಹವೂ, ಸ್ವಪ್ನವೂ,
ಮತ್ತು ಕಂದನ ಕಣ್ಣೂ...

ಮುಚ್ಚಿದ ಕಣ್ಣಿಗೊಂದು ಮುತ್ತಿತ್ತು,
ನಗುವ ತುಟಿಗಿಷ್ಟು ಹೊಳಪಿತ್ತು
ಹೊರಹೊರಟಾಗ ಚಂದ್ರ,
ಕೊಳದೊಡಲಲಿ ಮತ್ತರಳತೊಡಗಿತ್ತು ಚಂದ್ರಬಿಂಬ!

ಗುಲಾಬಿಪಕಳೆ ಗುಂಗಿಂದಾಚೆ ಬಂದಾಗ ಕತ್ತಲು,
ಚಂದ್ರನಾಗಲೇ ಏರಿಯಾಗಿತ್ತು ಮತ್ತೆ ಕತ್ತಲ ಹೆಗಲು!

ಲೋಕ "ತಣಿಸುವ ತಂಗದಿರನವ" ಅಂದರೆ,
ಕಂದ ಕರೆಯಿತು ಚಂದಮಾಮನೆಂದವನ;
ಇದಕಿಂತ ಬೇಕೇ ಮಿಗಿಲೊಂದು ಬಹುಮಾನ?

Saturday, October 1, 2016

ಬಾ ಬಂದುಬಿಡು ಇಲ್ಲಿ
ಬಿಕ್ಕುವೊಂದು ಬಾನಿನಂಥ ಎತ್ತರವೇ,
ಹೊತ್ತು ತೊಟ್ಟಿಲಾಗಲು ಹವಣಿಸಿದೆ
ಮತ್ತು ಮೌನ ಲಾಲಿ ಹಾಡಲು.

ನೀರವ ಬೆಟ್ಟದ ತುದಿಯಲೊಂದು
ಪಚ್ಚೆರಾಶಿ ಹಾಗೇ ಸುಮ್ಮನೆ ಕೂತಿದೆ.
ಪಿಸುನುಡಿವ ಗಾಳಿ ಬಡಿಬಡಿದು ಪ್ರತಿಧ್ವನಿಸುತಿದೆ,
"ನಗುವಿನಷ್ಟೇ ಸಮೃದ್ಧ ನಗದ ನೀನು!"

ಭೋರ್ಗರೆವ ಮಳೆ
ಕಲ್ಲಾಗಿಯೇ ಉದುರಲಿಬಿಡು ಎದೆಯ ಮೇಲೆ.
ನಿನ್ನುಸಿರ ಬಿಸಿಯ ಸತ್ಯಕೆ
ಕರಗಿ ನದಿಯಾದಾವು!

ಬೆರಗೊಂದು ಕರಗದ ಬಣ್ಣರಾಶಿ
ನೀ ಮೂಡುವ ಮುಳುಗುವ ಎರಡೂ ದಿಕ್ಕಲಿ!
ಮಣಿಯಲಿದೆ ಕಾಲ ತಿರುಗುಚಕ್ರದ ಓಟವ
ನೀ ಹಾಡಾಗಿಸುವ ಬಗೆಗೆ!

ಇರಲಿಬಿಡು
ಸಿಡಿಲುಮಿಂಚಲೂ ಚೆಲುವುಂಟು
ಬೆಳಕುಂಟು ಬಣ್ಣಗಳುಂಟು
ಅಪೂರ್ಪದ ಕಣ್ಣು ನನ್ನವು
ಬಿಂಬ ನೀನೆಂದೇ ಭಯಕೆ ಕುರುಡಾಗಿಬಿಟ್ಟವು!

ಬಾ ವಿರಮಿಸು ಇಲ್ಲಿ
ಗೂಡುದೀಪದ ಬಿಸುಪು
ಹಕ್ಕಿಹಾಡಿನ ಇಂಪು
ಮತ್ತು ನನ್ನ ಪ್ರೀತಿಯ ಕಂಪು
ಆರಿಸಲಿವೆ ಸುಡುಬೆಂಕಿ,
ಮೆತ್ತಲಿವೆ ಕೆಂಪು ಕೆಂಡಕೆ ತಂಪು!

ಹೊಗೆಸುರುಳಿಯಿಂದ ಹೊರಬಂದ ದಿಟದ ಘಮವೇ,
ಗಂಧಕಡ್ಡಿಯಾದರೂ,  ಮಂದಧೂಪವಾದರೂ
ಲೋಕವೀಗೀಗ ಹೇಳುವುದಿಷ್ಟೇ-
"ಹೊಗೆ ಹೊಮ್ಮುವುದು ಸುಟ್ಟಾಗಲೇ ತಾನೇ?"

ದೂರದ ಇಳಿಜಾರಲೊಂದು ರಾಗದ ಅವರೋಹಣ,
ಮುರಿದಂತಿದೆ; ಕೊಳಲ ಕೊರಳ ಅಪಶ್ರುತಿಯ ರಿಂಗಣ..
ಇರಲಿಬಿಡು:
ರಾಗವೆಂದರೆ ಆರೋಹಣಾವರೋಹಣಗಳ ಮೊತ್ತ;
ಕೊರಳೆಂದರೆ ಸ್ವರಾಪಸ್ವರಗಳ ಸಂತೆ!
ಬಳುಕುವ ಬೂದು ಚಂದವೇ,
ಏರುಬೀಳು ತಿದ್ದಿ, ಬಣ್ಣ ಹೊದಿಸಹೊರಡದಿರು.
ಲೋಕಕೀಗೀಗ ಕಾಣುವುದಿಷ್ಟೇ-
"ಹೊಗೆಯೆಂದರೊಂದು ನಿರ್ವರ್ಣಮೌನ!"

ಸಾಗುತಿರು ನೀ ಊರ್ಧ್ವಮುಖಿಯಾಗಿ
ಎದೆಗೊತ್ತಿಕೊಳುವ ಅದೇ ಉನ್ಮಾದವಾಗಿ!
ಹೊಕ್ಕುಬಿಡು ನಿಲ್ಲದೆಯೇ
ದಿಗಂತದ ಹೊಕ್ಕುಳಲಿ
ಅದ್ಭುತವೊಂದು ಪುಳಕವಾಗಿ!
ಕಣ್ಣಿಲ್ಲದ ಬಯಲ ಕಿವಿಯಲಿ
ದಿಶೆ ಮೀರಿದ ನಶೆಯ ಗುಟ್ಟಾಗಿ!
ಖಾಲಿಯಾಗಸದ ನೀಲಿಯಲಿ
ಚಿತ್ತಾರವಾಗುವ ಹತ್ತಿಮೋಡವಾಗಿ!
ಬಿಡು, ಲೋಕಕೆ ಗೊತ್ತಿರುವುದಿಷ್ಟೇ-
"ತೂಕದ್ದಲ್ಲ; ಹೊಗೆಯೆಂದರೆ ಬಲುಹಗುರ"

Tuesday, September 27, 2016

ಸೊಗದ ಸುಗ್ಗಿಯ ಸುದ್ದಿ
ಹಾಗೇ ತೇಲಿ ಬಂದು ತಲುಪಿತು.
ನಗೆಯ ಹಾಳೆಯಗಲ "ಕುಶಲವೇ ಕ್ಷೇಮವೇ?"
ನಿಜಕ್ಕೂ ನಾ ಸುಳ್ಳಾಡಲಾರೆ...

ಕರೆಯುತ್ತಿರುವ ನೀನು,
ಮಾತು ಸತ್ತು ಮುಚ್ಚಿಯಾಗಿರುವ ಮೌನದ ಕೋಟೆಬಾಗಿಲು.
ಅದರ ಉದ್ದದಷ್ಟುದ್ದ ಬಯಕೆ, "ಇನ್ನೂ ಬೇಕು"
ಕ್ಷಿತಿಜದಂಥ ನೆಲೆಯ ಕನಸೇರ‍ಲಾರೆ.

ಪಾತಾಳಕೆ ಕಾಲೂರಿ ಮತ್ತೆ ಚಿಮ್ಮಿ ನೆಗೆದೆತ್ತರ
ಹಾರುವ ದೇವತೆಯ ಅಂಗಾಲಿಂದುದುರಿದ
ಚಿನ್ನದ ಪುಡಿಯೊಂದಿಷ್ಟು ನೆತ್ತಿ ಮುತ್ತಿಕ್ಕಿತು;
ನಗೆ-ನೋವುಗಳ ನಡುವೆ
ಇಲ್ಲೊಂದಿಷ್ಟು ಗುಟ್ಟಿನ ಜಾಗವಿದೆ;
ಅಲ್ಲಿಡಲಾಗಿದೆ ಬಲು ಜತನ;
ಯೋಚಿಸದಿರು, ಅದು ಹಾಗೇ ಹೊಳೆಹೊಳೆಯುತಿರುತದೆ!

ಪರಿಮಳ ಅಂಟಿಸಿ ಬೆಸೆಯಬಲ್ಲವನೊಬ್ಬ
ದೇವದೂತನ ವಿಮಾನ ಸಕಾಲ
ಬಂದಿಳಿವ, ಬರದಿರುವ ಮಾತು ಬಿಡು.
ಅಂಗಳದಲಿ ನಿನ್ನಿಷ್ಟದ ಕೆಂಪು ಕೇಪಳಗುಚ್ಛ
ಅಂದಿನಂತೇ ಮತ್ತೆ ಮತ್ತರಳಲಿದೆ!

Saturday, September 24, 2016

(ತುಳುಕು - ಅಂಗಾಲು - ಜಡೆ - ಮನೆಯ ದಾರಿ)

ಮತ್ತಿಂದೂ ಕಣ್ಣೆದುರು ಬಂದುಹೋಗುತಾನೆ
ಅದೋ ಬ್ರಹ್ಮಗಿರಿಯ ತುತ್ತತುದಿಯಲ್ಲಿ ಹಾಗೇ
ಸವರಿಹೋದ ಮೋಡದಲೆಯಲಿ ತುಳುಕಿಯುಕ್ಕಿದ್ದ ತಂಪುಹನಿಯ ಹಾಗೆ.

"ಸಾವೆಂದರೆ ಮನೆಯ ದಾರಿ ನೋಡಕ್ಕಾ" ಅನುತ್ತಲೇ
ಗುದ್ದಾಡುತಲೇ ಮತ್ತದನೇ ನೆನೆದು ಅತಿ ಮುದ್ದಿನದೋ ಎಂಬಂತೆ
ನರಳುವ ಹುಡುಗ; ಕಡೆಗೋಲಾಡಿಸಿ ಎದೆಯಲಕ್ಕರೆಯ ಬೆಣ್ಣೆಯೇಳುವ ಹಾಗೆ..

ಬಹಳಷ್ಟು ಹೇಳಿ ಇನ್ನೇನೋ ಹೇಳಿ ಬರೀ ಹೇಳಿ
ಸಂತೈಸಬೇಕನಿಸುತ್ತದೆ ಅವನಿಗೇನೂ ಅಲ್ಲದ ಒಬ್ಬಳಾಗಿ
ಅಜ್ಞಾತ ಉಳಿದುಹೋದವು ಶಬ್ದವೊಂದೊಂದೂ ಅಂಗಾಲ ಮಚ್ಚೆಯ ಹಾಗೆ..

ಬದುಕಿಗೊಂದು ಮೊಗ್ಗಿನ ಜಡೆ ಹಾಕಬೇಕಂತೆ
ಸಾವಿನ ಅರಳುಗಳನು ಹುಟ್ಟಿನ ಹಗ್ಗದಲಿ ಕೋದು
ಅಳುನಗುಗಳಿಟ್ಟು ನಡುನಡುವೆ ಕಾಲ ಹೆಣೆಯುವುದು ಹೂಮಾಲೆ ಹೀಗೆ..

Tuesday, September 20, 2016


ಮಧ್ಯಾಹ್ನದ ಗೆಜ್ಜೆಯುಲಿ
ವೈಯ್ಯಾರದಲಿ ಬರುವಾಗ
ಮಾಗಿ ನಡು ಬಾಗಿ
ಕಾಲ್ತೊಳೆದು ಬರಮಾಡಿಕೊಂಡಿದೆ..

ಹಸಿರ ನಡುನಡುವೆ
ಇಣುಕುವ ಚೆಲುನೀಲಿ,
ಆಚೆ ಅಗಲ ನೀಲಿಯ ನಡುವೆ
ಹಾರಿ ತೇಲುವ ಹತ್ತಿರಾಶಿ!

ಖುಶಿಯ ಲಹರಿಯೊಂದು ಹಾಗೇ ಬಂದ್ದು
ತಾಕುವಾಗ ಬಿಸಿಬಿಸಿಯಾದದ್ದು.
ಅವನ ಸಹಿಯೊಂದು ಹಾಗೇ ಬಂದು
ತಲುಪುವಾಗ ಕಹಿಕಹಿ ಅನಿಸಿದ್ದು!

ಹಿಂತಿರುಗಿದೆಯಂತೆ ಅವನೊಳಗೆ ಪಚ್ಚೆ
ಜಗಳಾಡಿ ಮಲಗಿತ್ತು ತುಸುಕಾಲ
ಎದ್ದು ತಳಮಳಿಸಿ ನಲುಗಿ ದೂರದೂರ..
ಅಲ್ಲೆಲ್ಲೋ ತಿರುವಲಿ ಅಳುತಿದ್ದ ಅವಳು ಮತ್ತೆ ಸಿಕ್ಕಿದ್ದಾಳಂತೆ!

ಕಣ್ಮುಚ್ಚಿ ತಮ್ಮ ತಮ್ಮೂರುಗಳಲ್ಲಿ
ಅದರಷ್ಟಕೇ ಒಂದು ಸಮ್ಮೇಳ; ಮಿಲನವಾಗುತ್ತಿದೆ ಅಲ್ಲಿ..
ಇಲ್ಲೆಲ್ಲೋ ಮಧ್ಯಾಹ್ನ ಮುಗಿಯುತ್ತಿದೆ
ಮರೆಗಿಳಿಯುತಾ ಏನೇನೋ ಎಲ್ಲ ಖಾಲಿಯಾಗುತಿದೆ..

"ಖಾಲಿಯಿಂದಲೇ ಒಂದು ಮೊದಲಾಗುವುದು"
ಮಾತೊಂದು, ಮರಳುವ ನೂರಾರು ಪದಚಿಹ್ನಗಳಲಿ
ಮತ್ತೆ ಆಕಾಶಕೆ ಬಣ್ಣ ತುಂಬುತಿದೆ..
ನಾಳೆಯ ಹೊತ್ತ ಬಸಿರು ಚಿಗುರೊಡೆಯುತಿದೆ!

Monday, September 19, 2016

(ಯಕ್ಷಿಣಿ - ಗಂಟಲು- ಬೆದರಿಕೆ - ಚಿಂತಾಜನಕ)


ಬೆಳಕ ಕೂಸೊಂದು ಡೊಗ್ಗಾಲಲಿ
ದಾಟಲಿತ್ತು ಕತ್ತಲರಮನೆಯ ಹೊಸಿಲು.

ನಿದ್ದೆಗಣ್ಣಿಗೆ ಅದಾವುದೋ ಬಂದುಸುರಿ ಹೋಗಿತ್ತು
"ಅವರ ಸಮಾಗಮಕೆ ನಿಗದಿಯಾಗಿದೆ ಹೊತ್ತು!"

ಅಕಾಲ ನೆರೆಗೆ ಗಂಟಲುಬ್ಬಿ ಬಂದ ಗಳಿಗೆ,
ಕಣ್ಣಿಂದವನ ಹೆಸರ ಹೊಳಪಿಳಿದುಹೋದ ಗಳಿಗೆ..

ಪರಿಚಿತವೂ, ಅಸ್ಪಷ್ಟವೂ ಒಂದಾಕೃತಿ
ಬಿಟ್ಟ ಕಣ್ಣೆದುರೇ ಕೂಗಿ ಹೇಳಿದೆ; ಬಹುಶಃ ಇದವನ ಯಕ್ಷಿಣಿಯೇ...

"ಅಲ್ಲೊಂದು ಚಂದದ್ದು ಚಿಂತಾಜನಕವಿದೆಯಂತೆ
ಬಗಿದೆದೆಯ ನಗೆಯೊಳಗಿಂದ ಅಮೃತವುಣಿಸಬೇಕಂತೆ."

ನಂದಾದೀಪಕಷ್ಟು ತುಪ್ಪ ಸುರಿದು,
"ಸರ್ವೇ ಜನಾಃ ಸುಖಿನೋ ಭವಂತು..."
ಹೇಳುತಲೇ ಇದೆ ಬಾಯಿ; ಮನಸನೆಳತರುತಾ ಕೈ..
ತಾಳಮೇಳ ತಪ್ಪಿಸುವ ಪ್ರೀತಿಯೆಂಬ ವಿವಶತೆಗೊಂದು ಜೈ

ಅಲ್ಲಿ ನೋವಿನೊಂದು ಸಣ್ಣ ಬೆದರಿಕೆಗಿಲ್ಲಿ ಎದೆಗೂಡು ಬಿರುಕು..
"ಅಯ್ಯೋ ಪ್ರೀತಿಯೆಷ್ಟು ಚಂದ!"-ಮತ್ತೆ ಮತ್ತುಲಿವ ಮನಸು..

ಹೇಗೆ ಹೇಳಲಿ ಏನೊಂದನಾದರೂ ಈ ಪ್ರೇಮಿಗಳಿಗೆ?
ಅಲ್ಲಳುವಾಗ ಅವಳು, ಇಲ್ಲಿಂಚಿಂಚು ಸಾಯುವವಗೆ?

ಕರ್ಣನಲ್ಲ; ಎದೆಯಲಮೃತವಷ್ಟೇ ಇಲ್ಲ, ಬಗೆದೀವುದರಿತಿಲ್ಲ;
ಹಂಬಲಿಸುವುದಷ್ಟೇ ಗೊತ್ತು; ನಾನೂ ನಿಮ್ಮಿಂದ ಹೊರತಲ್ಲ...

Thursday, September 15, 2016

ನೋಟದ ಎಳೆಯೆಳೆಯೂ ಸೇರಿ
ಚಂದದೊಂದು ಕೆಂಪು ಕೌದಿ ಹೊಸೆದು
ನೀಲಿಗುಡಿಸುತ್ತಿರುವಾಗ
 ಅಸ್ತಮಿಸ ಹೊರಡುವ ಪೂರ್ಣಸೂರ್ಯನೇ,
ಚದುರುತಲೇ ಸಾಗುವ ಮೋಡದಡಿ
ಇಡೀ ಕಾಣುತಾ, ತುಂಡುತುಂಡಾಗುತಾ,
ನೀನಿದ್ದೂ ಕಾಣದಾಗುತಾ,
ಕಳವಳಿಸಿ ಎಕ್ಕರಿಸುವವರಿಗೆಲ್ಲ
ಪಡುವಣದಲಿ ಕಣ್ಣಾಮುಚ್ಚಾಲೆಯಾಡುವ ಹೊಳಪು
ಮತ್ತೆ ನೀನುದಯಿಸುವ ಕತೆ ನಿತ್ಯ ಹೇಳುವುದು.

ಚಿಲಿಪಿಲಿ ಹಾರುಹಕ್ಕಿ ಗೂಡಿನತ್ತ,
ಕೊರಳಗಂಟೆಯುಲಿ ದನಕರು ಹಟ್ಟಿಯತ್ತ,
ಅಂಗಳದ ಕಂದಮ್ಮ ಅಮ್ಮನ ಸೆರಗಿಗೆ ಮರಳುತಾ,
ಅಷ್ಟರಲಿ ನಿತ್ಯ ರಾತ್ರಿಯಾಗುವುದು,
ನನ್ನಂತೆ ಜಗವಿಡೀ ಸಾಂತ್ವನಗೊಳ್ಳುವುದು.

ಇದೆಂಥ ಚೋದ್ಯ ನೋಡು
ನೀನಲ್ಲಿಗೆ ಹೊರಟಾಗಲೂ ಕಳವಳ;
ಕಾರ್ಮೋಡವಲ್ಲಿ ಮುಚ್ಚಿಟ್ಟಿತ್ತೆಂದಾಗಲೂ ಕಳವಳ!
ಬಂದಿಲ್ಲಿ ಧಗಧಗನೆ ನಗುವಾಗಲೂ ಸಮಾಧಾನ,
ಬರುಲಿರುವೆಯೆಂದು ಹೋಗುವಾಗಲೂ ಸಮಾಧಾನ!
ಕ್ಯಾನ್ವಾಸಿನ ಬಿಳಿಹಾಳೆ ಮೇಲೆ
ಕಾಮನಬಿಲ್ಲೊಂದು ಚಲ್ಲಾಪಿಲ್ಲಿಯಾಗುತಾ,
ಮತ್ತೆ ಕಪ್ಪುಮಸಿಯೊಂದು ನಿಧಾನ ಹರಡಿಕೊಳ್ಳುತಾ...
ಕಪ್ಪೋ, ಒಪ್ಪೋ, ಸೊಗವೋ, ಅಲ್ಲವೋ
ಎಳೆಗಳು ಸಿಕ್ಕಿ ಒಂದರೊಳಗೊಂದು ಗೋಜಲು;
ಈಗ ಎಚ್ಚರವೆಂದರೆನೇ ಒಂದು ಗೊಂದಲ!

ಸಾಕಾಗಿದೆ, ಒಪ್ಪಿಸುವ ರಮಣೀಯ ಕಾವಳವೂ
ಮತ್ತಿನ್ನೂ ಚಂದದ ಕಳವಳವೂ..
ಸಾಕಾಗಿದೆ ಈ ದಟ್ಟ ಭರವಸೆಯೂ
ಮತ್ತಿನ್ನೂ ಮುದ್ದು ಸುಳ್ಳುಗಳೂ....

ಇನ್ನು ಬರೀ ಪ್ರೀತಿಸಬೇಕೆಂದುಕೊಂಡಿದ್ದೇನೆ,
ನಿನ್ನನ್ನು, ಹಗಲನ್ನು, ಬೆಳಕನ್ನು, ಬಿಸಿಲನ್ನು,
ಸ್ಪಷ್ಟವಿರುವ, ಬೆಚ್ಚಗಿರುವ, ಶುಭ್ರವಿರುವ
ಸತ್ಯವೆನಿಸುವ ಮತ್ತಿನ್ನ್ಯಾವುದೇ ಒಂದು ಅಂಥದ್ದನ್ನೂ..
ಅವಳು ಬರುವವಳಿದ್ದಾಳಂತೆ!
ವೇಳೆ ಕಳೆಗಟ್ಟಿಸಲು ಕೇಳಿಕೊಂಡಿದ್ದಾನೆ..

ಹಾದಿಗಷ್ಟು ಜೀವಜಲ ಸಿಂಪಡಿಸಿ ಸಾರಿಸಲಾಗಿದೆ.
ಕಣ್ಣ ಹೊಳಪಿಂದೊಂದಷ್ಟು ಚುಕ್ಕಿ ಹೆಕ್ಕಿ ಬಳ್ಳಿ ರಂಗೋಲಿ ಮೂಡಿದೆ.
ಆಗಷ್ಟೇ ಬಂದ ವಸಂತದ ಗೊಡ್ಡು ಟೊಂಗೆಯ ನವಪಲ್ಲವ ಕಿತ್ತು ತೋರಣ ಕಟ್ಟಲಾಗಿದೆ..
ಘಮದ ಹಾದಿ ಹಿಡಿದು ಬಂದ ಕುಹೂ ಹಿಂತಿರುಗಲಿತ್ತು;
ಗೆಜ್ಜೆಬೇಡಿ ತೊಡಿಸಿ ಹಾಡಿಗೇರ್ಪಾಟಾಗಿದೆ..
ಅಮ್ಮನ ಒತ್ತಾಸೆಗೆ ಹೊಳೆವ ಹಿತ್ತಾಳೆ ಪಾತ್ರೆಯಲಿ
ಪಾಯಸ ಕುದಿವಾಗ ಹದ ಉರಿಗೂ ಪಾತ್ರೆ ಬುಡ ಕರಟುತಿದೆ.
ಜಾಜಿ ಬಳ್ಳಿ ಅಮಾವಾಸ್ಯೆಯ ಇರುಳಿನಂತೆ ಬೋಳುಬೋಳು;
ಹೂದಂಡೆಯೊಂದು ನಡುಹಜಾರದ ಹೊನ್ನಬೋಗುಣಿಯಲವಳ ಕಾಯುತಿದೆ..
ಎದೆಮೇಲಿನ ಭಾರಗಳನುಜ್ಜಿ, ಉಜ್ಜಿ, ಕಿಡಿ ಹೊಮ್ಮಿಸಿ
ಪರಿಮಳಯುಕ್ತ ಕಡ್ಡಿಗಳುರಿಸಲಾಗಿದೆ..
ಶಯನ ಮಂಚದಲಷ್ಟು ಗುಲಾಬಿ ಪಕಳೆಗೆ
ಕೆನ್ನೆಕುಳಿಯಿಂದೆತ್ತಿ ಇನ್ನಷ್ಟು ಕೆಂಪು ಬಳಿಯಲಾಗಿದೆ..
ನಗೆ ಬಗೆದು ಒಂದಷ್ಟು ಕಂಪು ಹರಡಲಾಗಿದೆ..
ಮೂಲೆಮಟ್ಟದ ಮೇಲಿನ ಫೊಟೊದೆದುರು
ಕೈ ತೊಳಕೊಂಡು ಬಂದು ಬೊಗಸೆಯೊಡ್ಡಿ ಪ್ರಾರ್ಥಿಸಲಾಗಿದೆ..
"ನನ್ನದಾಯಿತು; ಇನ್ನಿಲ್ಲಿ ಸೊಗದುಂಬುವ ಭಾರ ನಿನದು"

ತೃಪ್ತಿಯಿಂದೊಮ್ಮೆ ತಿರುತಿರುಗಿ ನೋಡುತಾ ಮಂಜುಗಣ್ಣೆರಡು
ತನ್ನೊಳಗಿಂದಾಚೆಗೆ ಹೊಸಿಲ ದಾಟುತಾ
ಎಡವಿಬಿದ್ದವೇನೋ, ನೋವಲಿ ತುಂಬಿಬಂದಿವೆ..
ಹಾದಿಯುದ್ದಕು "ಸ್ವರ್ಗಕಿದೋ ಹಾದಿ" ಎಂಬ ಫಲಕ ನೆಡುತ್ತಾ
ಸುಳ್ಳುಸುಳ್ಳೇ ಹುಮ್ಮಸ್ಸೊಂದು ವಿಮುಖ ನಡೆವಾಗ
ಗೆಜ್ಜೆಯ ಕಿಂಕಿಣಿ ಬರಬರನೆ ಉದುರುತಿವೆ...
(ನದಿ - ಕೆಂಪು- ಸ್ವಾರ್ಥ - ಹುಚ್ಚುಹೊಳೆ)


ಕೆಂಪು ಹಾದಿಯಲಿ ಸೊಂಪೊಂದು ನದಿ
ದಾಟಬೇಕಿದೆ, ಸೇತುವಿಲ್ಲ.
ಕುಡಿದಷ್ಟೇ ಗೊತ್ತು,
ನೀರ ಹೋರಾಡಿ ಗೆಲ್ಲುವುದು ಗೊತ್ತಿಲ್ಲ..

ಸ್ವಾರ್ಥ ಜಾಲದಲಿ ಪ್ರೀತಿ ಸಿಕ್ಕಿ ಬಲಿ
ಬಿಡಿಸಿಕೊಳಬೇಕಿದೆ, ಬಲವಿಲ್ಲ.
ಸಿಲುಕುವುದು ಗೊತ್ತು
ಪ್ರೀತಿಗೆ ಹೊರಬಂದು ಗೆಲ್ಲುವುದು ಗೊತ್ತಿಲ್ಲ..

ದ್ವೇಷವೂ ಉಕ್ಕುಕ್ಕಿ ಪ್ರೇಮವೂ ಉಕ್ಕುಕ್ಕಿ
ಭಾವ ಹುಚ್ಚುಹೊಳೆ, ಸೆಳೆದೊಯ್ದಿದೆ
ನಡೆದಷ್ಟೇ ಗೊತ್ತು
ಬದುಕಿಗೆ ಸೆಳೆತಕೆದುರಾಗಿ ಗೆಲ್ಲುವುದು ಗೊತ್ತಿಲ್ಲ.

Thursday, September 1, 2016

ಸುಖಾಸುಮ್ಮನೆ ಬಿಮ್ಮನೆ ಕವಿದ ಕರಿಮುಗಿಲು,
ಬಿನ್ನಾಣದಲಿ ನಾಚುತಿರುವಂತೆ ನವಿಲು.
ನಾಟ್ಯದೊಳದ್ದಿಯಾಡುವ ಮುದ್ದು ಕಾಲು,
ಸುತ್ತಸುತ್ತುತಾ, ನೆಲಕೆ ಕಚಗುಳಿಯಿಕ್ಕುತಾ
ಕಣ್ಮನದುಂಬುತಾ ಹೆಜ್ಜೆ ಬರೆದ ರಂಗವಲ್ಲಿ,
ಎದೆ ಮೇಲೆ ಚುಕ್ಕಿ ಸಾಲುಸಾಲು
ಹೆಣೆವ, ಬೆಸೆವ ಗೋಜಲೊಂದು ಉದ್ದುದ್ದ ಬಳ್ಳಿ.
ಮೆತ್ತನೆ ಕಿತ್ತುಕೊಂಡು ಗಾಳಿಗಾಡುತಾ ಸಾಗಿದ ಪಚ್ಚೆಗರಿ
ಅಯ್ಯಬ್ಬಾ! ಅಂದಿತೇ ಹಸಿರ ನಸೆಗಲ್ಲ ಸವರಿ?
ಕೊಡವಿ ನೂಕಿತೇನು ನೆಲ ಹುಸಿಮುನಿಸಲಿ?
ಎತ್ತಿಕೊಂಡಿದೆ ಗಾಳಿ..
ಮುಟ್ಟಿ, ತಾಕಿ, ಸವರಿ, ಸಾಗಿದೆ ಪಯಣ,
ಮೆತ್ತಿಕೊಂಡಿದೆ ವನಸುಮದ ಪರಾಗದಷ್ಟು ಹಸಿಕಣ.
ನಿನ್ನೆಗಳ ಗಜಗರ್ಭದಾಳದಿಂದ
ಎತ್ತಿ ತಂದಿದೆ ತುತ್ತು ಹೊಕ್ಕುಳಬಳ್ಳಿ.
ನೆನಪೆಂದರೆ ಬರೀ ಪುಳಕ ಎಳೆಯೆಳೆಯಲ್ಲಿ.
ಬಂದದ್ದು, ಕೂತದ್ದು, ಕಂಡದ್ದು, ಅಡಗಿಸಿದ್ದು,
ಹುಡುಕಿದ್ದು, ತಡಕಿದ್ದು, ಸಿಕ್ಕಿದ್ದು, ಕಳೆದುಹೋದದ್ದು...
ನೀನೆಂದರೆ ಉಕ್ಕುಕ್ಕುವ ಭೋರ್ಗಡಲು
ನಾ ಮಿಂದು, ಮಿಂದು ನಾಚಿನೀರಾಗುವ ತೀರ!
ಸುರಿಯದ ಮೋಡದೊಳಗೆಲ್ಲ ತೇವ ಹುಡುಕುತಾ
ವೃಂದಾವನವನೂ ಹೊಕ್ಕಿತ್ತಂತೆ; ಗರಿಯೀಗ ಹಾರಿ ಬಂದಿದೆ ..
ಸೀದಾ ಕಡಲತಡಿಯಲ್ಲಿ ವಿಧಿ ನಡೆಸಿದಂತಿದೆಯೇನೋ ಸಿಹಿಹುನ್ನಾರ!
ತೀರದಲಿ ಶ್ರಾವಣದ ಕೂಸಿನ ಕುಹೂಕುಹೂ ಚಿತ್ತಾರ
ಗರಿ ಬಣ್ಣ ತುಂಬುತಿದೆ;
ತಳೆಯಲಿದೆಯೇನೋ ಖಾಲಿಬಿಳಿಯೊಂದು ಮಳೆಬಿಲ್ಲಿನವತಾರ!

Friday, August 19, 2016

ನೀ ಬಂದಾಗೆಲ್ಲ ಬೆಳಕಿತ್ತು!
ಹೊತ್ತು ಎತ್ತಿಟ್ಟುಕೊಂಡಿತ್ತು
ಕೆಲಬಣ್ಣ ಅಲ್ಲಿ-ಇಲ್ಲಿಂದ ಮೆಲ್ಲ.
ಕಣ್ಣಿನಾಳದ ಆಸೆಯಿಂದಷ್ಟು,
ಬೆರಳ ತುದಿಯಾತುರದಿಂದಷ್ಟು,
ಕಿವಿಯ ಬಿಸಿ ಮೊರೆತದಿಂದಷ್ಟು,
ಉಸಿರಿನ ವೇಗದಿಂದಷ್ಟು,
ತುಟಿಗಳ ಆವೇಗದಿಂದಷ್ಟು,
ನಿನ್ನ ಪಾದಗಳಡಿಯಿಂದಷ್ಟು,
ಮತ್ತು ನೆತ್ತಿ ಸಿಂಗರಿಸುವ ನನ್ನ ಮುತ್ತಿನಿಂದಷ್ಟು..

ನೀನಲ್ಲಿ ತಲುಪಿರಬೇಕು
ಇಲ್ಲಿ ಪೂರ್ತ ಇರುಳಾಯ್ತು!
ಕತ್ತಲ ನಿರ್ವರ್ಣವ ಉಳುವುದಕೆ
ನೇಗಿಲ ಹೂಡಿದೆ ಹೊತ್ತು!
ಹಸನಾದ ಬಲುವಿಶಾಲ ಕಪ್ಪಿನಲಿ
ಊರಲು ನೂರು ಬಣ್ಣದ ಬಿತ್ತ ಬಿತ್ತು.
ಕಾಲುವೆ ತುಂಬಿಹರಿದು ಹನಿಸುತಿದೆ
ಎದೆ ನೆನಕೆ-ಕನವರಿಕೆಗಳನೂಡುತಿದೆ.

ಇನ್ನೇನು ಬಣ್ಣ ಮೊಳೆಯುವ ವೇಳೆ,
ಮೊಗ್ಗುಗಳೆದೆಯಲಿ ಘಮ ಹುಟ್ಟುವ ವೇಳೆ,
ಒಂದಷ್ಟು ಮಾತು-ಮೌನಗಳ ಗೋಡೆ
ಮುಚ್ಚಿಬಿಟ್ಟಿವೆ ಹಾದಿಯಿತ್ತಲಿಗೆ ಸದ್ದಿಲ್ಲದೆ!
ಕೈ ಮುಗಿದೀಗ ಬೇಡುವುದಿಷ್ಟೇ..
ಬರದೆಯೂ ಮಿಲನಚಿತ್ರದಾತ್ಮವಾಗಬೇಕು,
ಇಲ್ಲಿರದೆಯೂ ಉಸಿರಿಗೆ ಜೀವದುಂಬಬೇಕು,
ಮತ್ತದಕೆ ಇಲ್ಲಿ,
ನಿನ್ನ ಕುರುಹುಗಳ ಬಣ್ಣ ಚಿಗುರಿ ಚಿಮ್ಮಬೇಕು.

Wednesday, August 17, 2016

ತೂರಾಡುವ ಗಳಿಗೆ ಹೆಗಲೇರಿ
ಬಂದಿತ್ತವನ ಸೋತ ಕಣ್ಣ ಚಿತ್ರ!
"ನಿದ್ದೆ ಇರಲಿಲ್ಲವೇನು?" ಎಂದಿದ್ದಳು,
ಕದ್ದೊಯ್ದವಳ ನೆನೆದು ನಕ್ಕಿದ್ದ;
ಮೊದ್ದು; ಇವಳು ನಾಚಿ ಬೆವರಿದ್ದಳು!

ಜಾರಿಹೋದ ಹೆಜ್ಜೆಗುರುತು..
ಕಿವಿಯ ಹಾದಿಯಲಿ,
ಕೈಬೆರಳು ಕತ್ತಿನ ಸಪುರ ಕಣಿವೆಗಳ ತಿಕ್ಕಿ ನೋಡುತ್ತವೆ.
ವಯಸು ಬರೆದ ಗೆರೆಕುಳಿಯಲಿ ಮಣ್ಣು ಕೂತಿದ್ದೀತೇ?
ಮುತ್ತಿನ ನಡೆಗೆ ಸಂಶಯದ ತಡೆ!

"ಕಳಕೊಂಡೆಯೇನು ಏನಾದರೂ?" ಅಂದ.
ಬೋಳೊಂದು ಕಿವಿ ಸವರಿಕೊಂಡಿದ್ದಳು;
ಓಲೆಯಲ್ಲೇ ಬಿದ್ದಿತ್ತು; ತಿರುಗಣೆ ಸಿಕ್ಕಿರಲಿಲ್ಲ.
"ಅಯ್ಯೋ.. ಅದಿಲ್ಲಿ ನನ್ನ ಕಿಸೆಯಲ್ಲಿ; ಎಷ್ಟು ಚಂದ!" ಅಂದ.
ನಕ್ಕನವ; ಅವಳಿಗಾಗಲಿಲ್ಲ..

ತೊರೆಯೆದೆಯಲಿ ಹಾಲಿತ್ತು
ತೀರ ಒಣಗಿತ್ತೋ, ನನಗೆ ಹಾಗನಿಸಿದ್ದೋ!!
ತೊರೆಯುಣಿಸಿತ್ತು; ತೀರವೂ ತಣಿದಿರಬೇಕು..
ಗಿಡಗಂಟಿ, ಅಕ್ಕ ಪಕ್ಕದ ಗದ್ದೆಹುಣಿ ಪಿಸುನುಡಿಯುತಾವೆ,
"ಗದ್ದೆಗುಣಿಸುವುದುಂಟು; ತೀರಕುಣಿಸುವುದುಂಟೇ?
ಬೆಸೆದೂ ಬೆಸೆಯದುಳಿವ ತೀರವೇನಾದರೂ
ಮರುಳು ತೊರೆಯ ಹೀರಿಯೇನಾದರೂ ಮೊಳೆಸಿದ್ದುಂಟೇ?"

ಮತ್ತೆ ರಾಗಸಂಜೆಯ ರಂಗಿನಾಲಾಪ ನಿಲುಗಡೆಯ ತಾರಕದಲಿ.
ರಾತ್ರಿಯಿದು ಮೋಡತುಂಬಿದಾಗಸ.
ತಾರೆಯಿಲ್ಲ; ಹುಣ್ಣಿಮೆಗೂ ಚಂದ್ರನ ತೋರುವುದಾಗಿಲ್ಲ.
ಎಲ್ಲೆಂದರೆಲ್ಲೆಡೆ ಬರೀ ಚಂದ ಕಾಣುವ ಆ ಕಣ್ಣು
ಮಿಂಚುಹುಳಕೂ ತಾರೆ ಮಿನುಗು ಬಳಿಯಬಲ್ಲವು;
ಅವು ಸದಾ ನಗಬಲ್ಲುವು.

ಕಳಕೊಂಡದ್ದ ಎಲ್ಲೆಂದರಲ್ಲಿ
ಹುಡುಹುಡುಕುವ ಅವಳ ಅಂಗೈಲವನ ಹೆಸರು.
ನಿಟ್ಟಿಸುತಾ, ನಿರುಕಿಸುತಾ,
ಗಲ್ಲಕೆ ಕೈ ಹಚ್ಚಿ ಕೇಳುತಾಳೆ,
ಅವ ಕತೆ ಹೇಳುತಾನೆ.
ದಿಬ್ಬಗಳೆರಡು, ನಡು ಕ್ಷೀರತೊರೆ,
ದುಂಬಿ; ಹೂವಿಗೇ ಮೋಹಗೊಳುವ ಹೂವು,
ದಂತ ಕೆತ್ತಿದಂಥ ಪಾದ, ಚಿಗುರು ಬೆರಳು,
ಹೇಳಹೇಳುತಾ ಉಕ್ಕೇರುತಾನೆ.

ನಗುತಾಳವಳು ಬಗೆಬಗೆಯ ನಗು!
ಅವನವಳ ನೋಡುತಿಲ್ಲ.
ಮುಖಮುಚ್ಚಿಕೊಂಡ ಬೊಗಸೆ ತುಂಬ
ಕಣ್ಣಲದ್ದಿದ ನಗೆ
ಮೆತ್ತನೆ ಅವನ ಹೆಸರ ನೇವರಿಸುತಾವೆ! 

Monday, August 15, 2016

(ಚಿಲಕ- ಮುಳ್ಳು - ಅಜರಾಮರ- ಪೊರೆ)

ಎದೆತೋಟಕೆ ಬೇಲಿಬಾಗಿಲಿಲ್ಲ ಅನುವರಿದ್ದಾರು,
ನಾನೊಬ್ಬಳಿದ್ದೇನೆ ಚಿಲಕ ಕಂಡಿಲ್ಲದ ಕದ-ಕಿಂಡಿಗಳೊಡತಿ!
ಹೂದೋಟಕೆ ಬರುವುದಾದರೆ, ಹೂವಂಥ ನಗೆಯೇ ಬರಬೇಕು.
ಮುಳ್ಳ ನೆನೆಯುತಾ ಭಯ ಬಂದಾಗ ನಡುಗುವ ಕೈಗೆ ಮುಳ್ಳೇ ತಾಕೀತು..
ನಿನ್ನೆ ರಾತ್ರಿ ಹಾವು ಬಂದಿರಬೇಕು; ಹಿತ್ತಲಲಿ ಕಳಚಿದ ಪೊರೆ!
ನಮ್ಮದಾಗಿಸಿಕೊಂಡ ಕುರುಹಷ್ಟೇ ಅಜರಾಮರ;
ಗಳಿಸಿ, ಉಳಿಸಿ, ಉಂಡುಟ್ಟು ಹಾಸಿಹೊದ್ದದ್ದೆಲ್ಲವೂ ನಶ್ವರ!
ಸುಮ್ಮನೇ ಹೇಗೆಹೇಗೋ ಹೆಸರುಳಿಸಿಹೋದೇನಬೇಡ ಮನಸೇ,
ಋಣವುಳಿಸಿಹೋಗು ಜನ್ಮಗಳಿಗಾಗುವಷ್ಟು; ಮತ್ತೆ ಮತ್ತವರೇ ಎಲ್ಲ ಸಿಕ್ಕಿಯಾರು.

(ಹಲ್ಲುನೋವು-ಗಾಜು-ಪಂಚರ್- ಬೆನ್ನು)

ನಡೆದಾಡುವ ವಿಶ್ವಕೋಶ ಆತ
ಬಿಳಿಜುಬ್ಬಾ ಜೇಬಲ್ಲಿ ಕೈಯ್ಯಡಗಿಸಿ
ಬಾಯ್ತುಂಬ ಮಾತರಳಿಸುತ್ತಾ,
ಕಣ್ಣಗಾಜಿನಡಿ ನಗೆಯುದುರಿಸುತ್ತಾ
ನಡೆದಾಡುತಿದ್ದರೆ
ಅಜ್ಜರ ಕಾಡಲೊಂದು ಜೀವಸಂಚಲನ!

ಬೊಚ್ಚುಬಾಯಲ್ಲೆಲ್ಲಿದ್ದವೋ ಹಲ್ಲು!
ಮೊನ್ನೆಯಿಂದ ಹಲ್ಲುನೋವಂತೆ;
ಆತ ಹಾಜರಿಲ್ಲದೆ ಮಾತಿಲ್ಲ, ಕತೆಯಿಲ್ಲ;
ಮೌನ ತಬ್ಬಿದ ಸಂಜೆಗಳಲಿ
ಅಜ್ಜರ ಕಾಡಿಗೆ ಕಾಡೇ ಬಾಯಾಕಳಿಸುತ್ತಾ ಬೇಜಾರೆಂದಿತು!

"ಗಾಡಿ ಪಂಚರ್ ಅಪ್ಪಯ್ಯ,
ನಾಳೆ ಹೋಗೋಣ, ಡಾಕ್ಟರೆಲ್ಲಿ ಓಡಿಹೋಗ್ತಾರೆ?"
ಸಿಡ ಸಿಡ ಮಗನ ಮುಖದಲ್ಲಿ
ಕಣ್ಣುಮೂಗುಬಾಯಿಗಳಷ್ಟೇ ತನ್ನದೆನಿಸಿದವು..

ಲವಂಗದೆಣ್ಣೆ ಹತ್ತಿಯಲದ್ದಿಟ್ಟುಕೊಂಡು ಊಟ ಬಿಟ್ಟು ಮಲಗಿದ ಕಣ್ತುಂಬ
ಅಜ್ಜರ ಕಾಡಿನ ಸ್ತಬ್ಧ ಲಾಫಿಂಗ್ ಕ್ಲಬ್ ಮತ್ತು ಹಾಡುವ ರೇಡಿಯೋ ಧ್ವನಿ,
"ಅಲ್ಲಿದೆ ನಮ್ಮ ಮನೆ, ಇಲ್ಲಿ ಬಂದೆ ಸುಮ್ಮನೇ..."
ಮರುಸಂಜೆ ಕಾಲೆಳೆಯುತ್ತಾ ಬಂದು "ಹೊರಡು ಅಪ್ಪಯ್ಯ" ಅಂದವಗೆ
ಕಾಣಿಸಿದ್ದು, "ಬಾಗಿಲು ಹಾಕ್ಕೊಳಮ್ಮಾ" ಅನುವ ಧ್ವನಿಯ ಬೆನ್ನು..




(ಪದಕ-ಎದೆಭಾರ-ಕವಿತೆ-ಮಲ್ಲಿಗೆ)

ಏಳುಸುತ್ತಿನ ದುಂಡುಮಲ್ಲಿಗೆಯಂಥವಳು, ಹೆಸರು ಮಲ್ಲಿಗೆ;
ಏಳು ಹಾಸಿಗೆಯಡಿ ನಿದ್ದೆ ಮಾರಿಕೊಂಡವಳು ಸಾಸುವೆಗೆ !

ಎದೆಪದಕವಾಗುತಾ ಬಲುಗಟ್ಟಿಗ ಹುಡುಗ;
ಕವಿತೆಯಾಗಿ ಹುಡುಗಿಯೀಗ ಸಾಲುಪದ ತೂಕ!

ಮೂಡಣದ ಚಂದ ಪಡುವಣಕೆ ಸಾಗುತಾ,
ಅವನೋದಿದ: ಒಡ್ಡಿಕೊಂಡವಳು ಖಾಲಿಯಾದದ್ದು; ಪರಿಮಳವಲ್ಲ!

ಮಲ್ಲಿಗೆ ಪದವಾದಾಗ ರಾಗ ಘಮಗುಟ್ಟುತ್ತಿತ್ತು;
ಆಗ, ಆಗಲೇ ಕತ್ತಲ ತಾರೆ ಕಿತ್ತು ತರುವೆನೆಂದು ಹೋದವ ಬಂದಿಲ್ಲ!

ಈ ಮುಂಜಾವೂ ನಿನ್ನೆಯಷ್ಟೇ ಚಂದ, ನಿನ್ನೆಯಷ್ಟೇ ತಾಜಾ!
ಆದರೆ ಎದೆತೂಕದ ಭಾರಕೆ ಮಲ್ಲಿಗೆ ಕುಸಿದಲ್ಲಿ ಭೂಮಿ ಬಾಯ್ಬಿಟ್ಟಿದೆ..


Thursday, August 4, 2016

ಇಲ್ಲ ನೆನೆಯುವುದಿಲ್ಲ ನಿನ್ನ; ಅಲ್ಲೆಲ್ಲೋ ಅಮೃತಪಾನದ ಮಧ್ಯೆ
ಬಿಕ್ಕಳಿಕೆಯೊಂದು ನಿನ್ನ ಕಾಡದಿರಲಿ.

ಇಲ್ಲ ಕಾಯುವುದಿಲ್ಲ ನಿನ್ನ; ಅಲ್ಲೆಲ್ಲೋ ಸ್ವಪ್ನಯಾನದ ಮಧ್ಯೆ
ಅಡ್ಡ ಬೆಳೆದ ಬಿಳಲು ಕಾಲಿಗೆಡವದಿರಲಿ.

ಇಲ್ಲ ಕರೆಯುವುದಿಲ್ಲ ನಿನ್ನ; ಅಲ್ಲೆಲ್ಲೋ ಮುರಳಿಗಾನದ ಮಧ್ಯೆ
ಅನ್ಯಸ್ವರಲಯ ರಾಗಭಾವ ಕೆಡಿಸದಿರಲಿ.

ಇಲ್ಲ ದೂರುವುದಿಲ್ಲ ನಿನ್ನ; ಅಲ್ಲೆಲ್ಲೋ ಕರತಾಡನದ ಮಧ್ಯೆ
ಬಿಸಿಯುಸಿರೊಂದು ನಿನ್ನೆಡೆ ಸುಳಿಯದಿರಲಿ.

ಇಲ್ಲ ಕನವರಿಸುವುದಿಲ್ಲ ನಿನ್ನ; ಅಲ್ಲೆಲ್ಲೋ ಉನ್ಮತ್ತಮೌನದ ಮಧ್ಯೆ
ಊಳಿಟ್ಟು ಕತ್ತಲು, ನಿದ್ದೆಯ ಬೆಚ್ಚಿಸದಿರಲಿ.

ಇಲ್ಲ ಬರೆಯುವುದಿಲ್ಲ ನಿನ್ನ; ಅಲ್ಲೆಲ್ಲೋ ಭಾವಕಾನನದ ಮಧ್ಯೆ
ಜಾಣಕುರುಡು-ಕಿವುಡು ನಿನ್ನೊಳಹೊಗದಿರಲಿ.

ಇಲ್ಲ ಬದುಕುವುದಿಲ್ಲ ನಿನ್ನ; ಅಲ್ಲೆಲ್ಲೋ ಸಹಜಗಮನದ ಮಧ್ಯೆ
ಬಾಣ-ಈಟಿ ನಿನ್ನ ಬತ್ತಳಿಕೆಗಿಳಿಯದಿರಲಿ.

ಸಾಲುಗಳಲಿ ನಿನ್ನ ಸಿಂಗರಿಸಿ ತೇರೆಳೆಯುತಿದ್ದೆ,
ನಿನ್ನುತ್ಸವಕೆ ನಿನನೇ "ಮುದಗೊಳ್ಳು ಬಾ" ಎನುತಿದ್ದೆ.
ಇದೀಗ ಹೊತ್ತಾಯ್ತು; ಕರೆವ, ಓಗೊಡುವದೆಲ್ಲ ಹಳತಾಯ್ತು!
ಆದರೂ ಕ್ಷಮಿಸು,
ಮರೆಯಾಗಬಲ್ಲೆ, ಮರೆಯಲಾರೆ.
ನೀ ಬಾರದುಳಿದೆಯೆಂದು ತೇರ ನಿಲಿಸಲಾರೆ.
ಕಣ್ಣ ಮೆಲುಕುಗಳ ಪೀಠದಿಂದಿಳಿಸಲಾರೆ.
ನಿನ್ನೆ ಸತ್ತದ್ದೂ ಅಲ್ಲ, ಇಂದು ಹುಟ್ಟಿದ್ದೂ ಅಲ್ಲ.
ನಿನ್ನೆಯೊಡಲಲಿ ಇಂದು ಹೊತ್ತಾಗಿ ಕಂಡಿದೆಯಷ್ಟೇ!
ಇಷ್ಟವಿದ್ದರೆ ಕಣ್ಣಬಯಲಲೊಮ್ಮೆ ಇಣುಕಿನೋಡು.
ನನ್ನ ಶಬ್ದಗಳ ಸುಟ್ಟ ಮಸಣವಿದೆ, ಬೂದಿರಾಶಿಯಿದೆ.
ಬಳಿದುಕೋ ನೆನಕೆಗಳ ತಿಕ್ಕಿ ತೊಳೆದು ಪರಿಶುದ್ಧನಾಗಿ.
ಸುಳಿಗುರುಳ ಚೆಲುಭೈರವನಾಗು ಮತ್ತೆ ಅಂದಿನಂತೆಯೇ.
ಸಾಕ್ಷಿಯಾಗಲಾರೆ ನಾ ಮಾತ್ರ, ಕ್ಷಮಿಸಿಬಿಡು ನನ್ನನ್ನು,
ನಿನ್ನ ಭೇರಿ ಢಮರು ತಾಂಡವದ ಮೂರ್ತಸದ್ದಿಗಿನ್ನು.  
(ವೈಶಾಖ, ಸಂಸ್ಕಾರ, ಪರಸಂಗ, ಮುಕ್ತಿ)

"ಹರಿಯೇ ನಿನ್ನನು ಮೆಚ್ಚಿಸಲುಬಹುದು,
ನರರನೊಲಿಸುವುದು ಬಲುಕಷ್ಟ!"
ಒದ್ದೆ ಸೆರಗೊರೆಸುತ್ತಾ ಕೆಲಸ ಮುಗಿಸಿ ಬರುವ ಅಮ್ಮನ ಹಾಡು.
"ಎಷ್ಟುದ್ದ ವೈಶಾಖ, ಎಷ್ಟೊಂದು ಬೆವರು!
ಛೇ...ಇದೊಳ್ಳೆ ಪರದಾಟ!"
ಕೂತವರದು ಋತುವಿನ ಹಂಗಿಲ್ಲದೆ ಸದಾ ನಿಡುಸುಯ್ವ ಪಾಡು!

"ಮುಕ್ತಿ ಎಂದಾಗೆಲ್ಲ ಸಾವು ನೆನಪಾಗುವುದೇಕೆ?
ಋತು ಬದಲಾಗುವುದು ಬಿಡಿ;
ನೋವ ತಿಳಿಯಾಗಿಸಿ, ಹುರುಪು ಗಾಢವಾಗಿಸುವ,
ಅಮ್ಮನಂಥ ರಾತ್ರಿ ಕೈಬೀಸಿ ಮತ್ತೆ ಬರುವೆನೆಂದು ಹೊರಟಾಗ,
ನಿದ್ದೆಗೊಮ್ಮೆ ನಿತ್ಯ ಮರಣ ಎದ್ದಸಲ ನವೀನ ಜನನ ಅನಿಸುವುದಿಲ್ಲವೇ?
ನಿದ್ದೆ-ಜಾಗೃತಿ ಸಂಧಿಸುವಂಥ ಗಳಿಗೆಯಲೇ ಅಲ್ಲವೇ ಮುಕ್ತಿ?"
ಅವನೊಂದಿಗಿನೊಂದು ಪರಸಂಗಕೂ ಮುನ್ನ
ಇಷ್ಟೇ ಅಲ್ಲ; ಇನ್ನೂ ಎಷ್ಟೆಷ್ಟೋ ಉದ್ದ ಮಾತಾಡುತ್ತಿದ್ದೆ!
"ಆಹಾ ಎಂಥ ಸಂಸ್ಕಾರ!" ಅನುತ್ತಿದ್ದರು ಆ ಉಳಿದವರೆಲ್ಲರೂ..
ಈಗ ಅವನಿದ್ದಾನೆ, ನಾನಿದ್ದೇನೆ, ಒಂದಿಷ್ಟು ಮುನಿಸು, ಮತ್ತಷ್ಟೇ ಮುದ್ದು...
ಮುಕ್ತಿ, ಸಂಸ್ಕಾರ ನೆನಪಾಗುವುದೇ ಇಲ್ಲ;
ವಸಂತ-ಶಿಶಿರ ಬೇರೆಬೇರೆ ಅನಿಸುವುದೇ ಇಲ್ಲ.
ಬರೀ ಹಾಡುವ ಮೌನ, ಮಾತು ಹುಟ್ಟುವುದೇ ಇಲ್ಲ.
"ನಿನಗಾಗೇ ಈ ಹಾಡುಗಳು ಬಿಸಿಲು ಮಳೆಯ ಜಾಡುಗಳು
ನೀನೇ ಇದರ ಮೂಲ ಸ್ಥೂಲ ಒಳಗಿವೇ ನನ್ನ ಪಾಡುಗಳು..."
ನಾನೊಳಗೊಳಗೇ ಹಾಡುವಾಗೆಲ್ಲ ಅಮ್ಮ ಗಟ್ಟಿ ಹಾಡುತ್ತಾಳೆ,
"ಬಂದದ್ದೆಲ್ಲಾ ಬರಲಿ
ಗೋವಿಂದನ ದಯೆಯೊಂದಿರಲಿ..."

Wednesday, August 3, 2016

(ಹಾಳೆ- ಸೇತುವೆ - ಬಟಾಣಿ - ಡೋರೆಮಾನ್)

ಕಣ್ಮುಂದಿನ ಹಾಳೆ ಬಿಳಿಯೇ ಉಳಿಯುತಿವೆ ಈಗೀಗ.
ಪೆನ್ನು ತುಂಬಿ ತುಂಬಿಟ್ಟರೂ ಕಾಲ ಶಾಯಿಯೊಣಗಿಸುವಾಗ.

ನನದೊಂದೇ ದಿಗಿಲು ಮಗಳದೀಗ ಹದಿಹರಯ,
ಎದೆಗಣ್ಣವಳದು ಸದಾ ಇಲ್ಲಿಂದಾಚೆಗೇ ನೆಟ್ಟಿದೆಯಾ?

ಅವಳ ಭಾವ, ಕತೆಯ ಕೌದಿ ಹೊಸೆವಾಗ ಆಗೆಲ್ಲ
ಮಾತು ಮಾತು ಬೆಸೆಯುತಿದ್ದ ಪದಸೇತುವೆ "ಅಮ್ಮ ಅಮ್ಮ"
ಕತೆಯಾಖಿರಿಗೆ ತೂಕಡಿಸುವ ದುಂಡು ಮುಖ ಎದೆಗೊತ್ತಿಕೊಂಡು
ಎಷ್ಟೆಲ್ಲ ಲಾಲಿ ಹಾಡಿದರೂ ತೆರೆದ ಬೊಗಸೆಗಂಗಳ ಕರೆ ಮತ್ತೆ,
"ಅಮ್ಮ, ಅಮ್ಮ ನಾನೂ ಹಾಡಬೇಕಮ್ಮ"
"ಹಾಡೇ ಚಿನ್ನಾರಿ ಕಂದಮ್ಮಾ"ಅಂದರೆ,
ಹಾಡೂ ಹೊಸೆಯುತಾಳೆ ಕಿಲಕಿಲ ನಗೆಯೊಡತಿ,
"ಮುದ್ದು ಪುಟಾಣೀ ತಗೋ ಬಟಾಣೀ..."

ಆ ಬೆಡಗು ನಗು, ಸುಳ್ಳು ಕತೆ, ಮುದ್ದು ಕವಿತೆ
ಎಲ್ಲ ಕಾಲ ಕದ್ದು ಬಚ್ಚಿಟ್ಟಿದೆಯೇನು?
ಅಲ್ಲಿಂದಿಲ್ಲಿಗೆ ಅವಳಿಷ್ಟ ಬದಲಾಗದ್ದೊಂದಿದ್ದರೆ,

ಕೇಳಿದ್ದು, ಕೇಳದ್ದು ಎಲ್ಲ ತಂದೀವ ಅದೇ ಡೊರೆಮಾನು!

Tuesday, August 2, 2016

(ಕನ್ನಡಿ -ಹಾವು - ತಂತಿ - ಕೊಟ್ಟಿಗೆ)

"ಕನ್ನಡಿಯೊಳಗಿನ ಗಂಟು ಪ್ರೇಮ" ಅವಳನ್ನುವಾಗ
ಅವನ ಮೌನಕ್ಕೊಳಗೊಳಗೇ ವ್ಯಂಗ್ಯದ ನಗು!

"ಹಾವಿನ ವಿಷವೂ ಉಳಿಸೀತು, ಹೆಣ್ಣಿನದಲ್ಲ" ಅವನನುವಾಗ
ಅವಳೊಳಗೆ ರೋಷದ ನಗು ಟಿಸಿಲೊಡೆಯುತ್ತದೆ.

ತಂತಿ ಗಟ್ಟಿಯಿತ್ತು, ಪೋಣಿಸಿದ್ದೂ ಭದ್ರವಿತ್ತು
ಮುತ್ತೇ ಒಡೆದಾಗ ಒಲವು ಕೊರಳ ಬಳಸೀತು ಹೇಗೆ?

ನಿನ್ನೆ ಕಪಿಲೆ ಕರು ಹಾಕಿದೆ.
ಗಬ್ಬ ಧರಿಸಿದ ಹೊತ್ತು ನೆನಪಿದ್ದೀತೇ?
ಬಿತ್ತಿದವನ ಮುಖ-ವರಸೆ ನೆನಪಿದ್ದೀತೇ?
ಈ ಕ್ಷಣ ಕಪಿಲೆಯ ಲೋಕವೆಂದರೆ,
ಎದೆದುಂಬಿದ ಪ್ರೀತಿಯೆಳೆದೆಳೆದು ಕುಡಿವ ಕರು,
ಕೊಟ್ಟಿಗೆಯ ನಡುವೊಂದು ಬೆಚ್ಚನ್ನ ಜಾಗ
ಕೆಲ ಸೂಡಿ ಹುಲ್ಲು, ಪಾತ್ರೆ ತುಂಬ ಅಕ್ಕಚ್ಚು!
ಹಗಲಿಗೆ ಬಿಳಿ ಬಣ್ಣ ಹಚ್ಚುತಾ ಬರುವವನು
ಇರುಳಿಗೆ ಹಗಲ ಸೀಳಿ ಏಳು ಬಣ್ಣ ಬಳಿವಾಗ
ಚಂದ್ರ ತೊಟ್ಟಿಲಾಗುತ್ತಾನೆ.
ನಿದ್ರೆ ತಾಯಾಗುತಾ ಮಡಿಲಲಿ ತಲೆಯಿಟ್ಟವಳಿಗೆ
ಕತೆ ಹೇಳುತದೆ ಸ್ವಪ್ನ!
ತಲೆಗೂದಲಲಾಡುತವೆ ನೆನಪ ಬೆರಳು;
ಬದುಕು ಸಾಂತ್ವನ!

ಮಧ್ಯದಲೊಂದು ಬ್ರಹ್ಮಕಮಲ
ನಿಧಾನ ಅರಳುತಾ ಗುನುಗುವಾಗ,
ರಾತ್ರಿರಾಣಿ ಬಳುಕುತ್ತಾ ನಗುವಾಗ,
ಪರಿಮಳದಲೆ ಎದ್ದುಕೂತು ನರ್ತಿಸುವಾಗ
ರೆಪ್ಪೆ ಮೇಲಿನ ಹಾದಿಯಲವನ ಜಾತ್ರೆ!
ತೇರ ಮುನ್ನಡೆಸುವುದು ಭರವಸೆಯ ದೊಂದಿ;
ಬದುಕು ಅಚ್ಚ ನಂಬಿಕೆ!

ಸುರುಳಿ ಸುರುಳಿ ಸಿಹಿ ಸುತ್ತಿ
ಕೈ ಬೆರಳಿಗೆ ಉಂಗುರವಾಗಿಸುತಾ
ಅವನ ನಗು ಅಲೆಯಲೆ ಭರತವುಕ್ಕುವಾಗ
ತೀರವೊಮ್ಮೊಮ್ಮೆ ಜರಿದರೂ ಗುಳಿಗಾಯಗಳಲಿ
ಹುಟ್ಟಿ ಕತ್ತೆತ್ತುತ್ತದೆ ಪುಟಾಣಿ ಜೀವಂತಿಕೆ!
ಏರಿಳಿತವೆರಡರಲೂ ಭೋರ್ಗರೆವ ಪುಳಕ;
ಬದುಕು ಮಧುಪಾತ್ರೆ!



Monday, August 1, 2016

"ಮರ್ಲೆ, ಮಲ್ಲಿಗೆ, ಕಾಕಡ, ಸೇವಂತಿಗೇ,,"
ಕೂಗುತ್ತಾ ಬರುತಾಳೆ ಹೂವಾಡಗಿತ್ತಿ.
ರಾತ್ರಿಯ ಹಳವಂಡಗಳಿಗೆ ಪರಿಮಳ ಬಳಿಯುತ್ತಾ,
ಬುಟ್ಟಿಯಲಷ್ಟು ಬೆಳಕಚೂರಿನ ಮಾಲೆ ಮಾಡಿ ತಂದು
ನಿತ್ಯ ನಸುಕು ಹಂಚುತಾಳೆ.
ಮಾಸಲು ಅವಳ ಸೀರೆನೆರಿಗೆಯಡಿ ಮಾತ್ರ
ಬಣ್ಣ ವಾಸನೆಯಿಲ್ಲದೊಂದು ಅತೃಪ್ತ ಕತ್ತಲು!

"ಕಲ್ಲಂಗಡಿ, ಬಾಳೆ, ಪರಂಗಿ, ಕಿತ್ತಳೇ..."
ಹಣ್ಣುಗಾಡಿಯವ ಕೂಗುತ್ತಾ ಗಾಡಿ ತುಂಬ
ಆರೋಗ್ಯದ, ಹೊಟ್ಟೆ ಕರಗಿಸುವ, ಕನಸು ಹಂಚುತ್ತಾನೆ.
"ಬಾಯಿ ಮತ್ತೆಮತ್ತೆ ಕೇಳುವಾಗ ಕರಿದದ್ದಲ್ಲ, ಹಣ್ಣು ತಿನ್ನಬೇಕಂತೆ"
ಹೊಟ್ಟೆ ತುಂಬಿದವರಷ್ಟು ಮಂದಿ
ಹೊಟ್ಟೆ ಕರಗಿಸುವ ಹಾದಿಯ ಕನವರಿಸುತ್ತಾರೆ.
ಗಾಡಿ ದೂಕುವ ಬೊಗಸೆದುಂಬ ನಿತ್ಯ ಸೇಬಿನದೇ ಕನಸು!

"ಪ್ರೀತಿ, ಪ್ರೇಮ, ಭಕ್ತಿ, ಆರಾಧನೇ.."
ಕಣ್ಣಿಂದ ಎದೆಗಳವರೆಗಿನ ಮೌನ ತುಳಿಯುತಾ ನಾನೂ ಕೂಗುತ್ತೇನೆ.
ಹಸಿರುಹುಣಿಯುದ್ದಕೂ ನಡೆವಾಗ ಎದುರಾಗುತ್ತವೆ,
ಚಾಚಿದ ಕೆಲ ಖಾಲಿ ಕೈ, ಚಾಚಿಲ್ಲದ ಇನ್ನು ಕೆಲವು,
ಜೊತೆಗೊಂದಷ್ಟು ಪಾರದರ್ಶಕ ತೆಳುಗೋಡೆಗಳೂ..
ಕೊಡಲು ಚಾಚಿದ್ದು ಕೊಳ್ಳಲು ಚಾಚಿದವುಗಳ ಮುಟ್ಟಲಾಗದೇ
ಉಚ್ವಾಸ-ನಿಶ್ವಾಸ ಗುರಿಮುಟ್ಟಿದೆವೆನುವಲ್ಲಿ ಉಸಿರುಗಟ್ಟಿಸುವ ನಿರ್ವಾತ!



Thursday, July 21, 2016

ಅಪ್ಪನ ಕೊಂದ ಸರ್ಪಕುಲದಾಹುತಿ ಜನಮೇಜಯನ ಚಿಂತೆ.
ಆಮೇಲೆ "ಅಯ್ಯೋ...." ದಟ್ಟ ಪಶ್ಚಾತ್ತಾಪದೊರತೆ!
ಅಪ್ಪ ನೆಟ್ಟಾಲದ ಮರ, ಭಾಗವತ ಸಪ್ತಾಹ ಮರುಕಳಿಸಿತೇ?!
ಸುಳ್ಳು ಉಪಾಯವ ಸುಳ್ಳುಸುಳ್ಳೇ ಮೊರೆ ಹೋಗುವುದು ನಿಲ್ಲಲ್ಲವಂತೆ..

ಗಜಿಬಿಜಿ ಸರಸ್ವತಿಪುರಂ ಹದಿನಾಲ್ಕನೇ ಮೇನು.
ಕೆಫೆ ಮಲ್ಲಿಗೆಯೆಂದರೆ ಅಸಹಜವೊಂದು ಮೌನಧೇನು!
ಸುಮ್ಮಸುಮ್ಮನೆ ಹೆಡೆಯೆತ್ತುವ ಸಣ್ಣದೊಂದು ಕೀಳರಿಮೆ ತೆವಳಿ
ತಂಪು ಚಚ್ಚೌಕ ಕೋಣೆಯೊಳಗೆ; ಬೆಪ್ಪು ಮಂಜುಗಣ್ಣೆದುರು ದುಬಾರಿ ಮೆನು!

ಹಸಿದು, ಬಾಯಾರಿರುತ್ತಿರಲಿಲ್ಲ ಆಗೆಲ್ಲ!
ಬಾರಿಬಾರಿ ಹೊಕ್ಕದ್ದು ಉಗುರುಕಚ್ಚುವೊಂದು ಅಭ್ಯಾಸ ಹೋಗಲಾಡಿಸಲಿಕ್ಕೆ.
ಅದ್ಯಾರೋ ಬಿತ್ತಿ, ಯಾವ್ಯಾವುದೋ ಪೆಟ್ಟಿನಾರೈಕೆಗೆ ಬೆಳೆದಿತ್ತಲ್ಲಾ,
ನಿರ್ವರ್ಣ ಘಮದ ನೋವಹೂವರಳಿಸುವ ಬಾಲ್ಯದ ಆ ಕೊಡುಗೆ ಹರಿದು ಚೂರಾಗಿಸಲಿಕ್ಕೆ!

ಅಪ್ಪನ ಖಾಲಿಜೇಬೊಳಗಣ ನಮ್ಮ ಬಟ್ಟೆ, ಮಾತು, ತಿಂಡಿಗಳ ಹೆಸರಿನವಜ್ಞೆ;
ತುಂಬಿದ ಹೊಟ್ಟೆಗಳ ಮುಸುಮುಸು ನಗು; ಇಲ್ಲಿ ಅಳುಕು ಹುಟ್ಟುತಾ ಅಲ್ಲೊಂದು ತಾಜಾ ಜೋಕು!
ತಲೆತಗ್ಗಿಸಿ ಅಪ್ಪ ಸೈಕಲ್ ಸ್ಟ್ಯಾಂಡ್ ಹಾಕಿ ಹೋಟೆಲ್ ಹೊರಗೊಂದು ಮೂಲೆಯಲಿಡುವಾಗ
ಬಲು ಅಪೂರ್ಪ ಒಳನಡೆವ ನನ್ನೆದೆಗೆ ನಗೆಸುತ್ತಿಗೆ ಬಡಿಬಡಿದು ಮೆದುವಾಗಿಸಹೊರಟರೆ, ನಾ ಪೆಡಸಾಗುತಿದ್ದೆ.

ಯಾವ ಮಾಯೆಯೋ ಬಾಲ್ಯ ಓಡಿದ್ದು! ಯೌವ್ವನವೂ ಓಡಿದ್ದೇ; ನಡುಪ್ರಾಯವಷ್ಟೆ ಕುಂಟುವುದು.
ಅದೆಂತೋ ಸಂಸಾರ ದೂಡುತಾ ಹೈರಾಣಾಗುತಾ ಸಾಲ ಮಾಡಿ ಬೈಕ್ ಕೊಳುವಾಗ,
ಹೀಗೆ ಕೆಫೆ ಮಲ್ಲಿಗೆಗೆ ಬಂದು ಬಂದು ಸಪ್ರಯತ್ನ ನಗೆಗಷ್ಟು ಬಣ್ಣ ಹಚ್ಚುತಾ ಕೂರುವಾಗ
ಮತ್ತೆ ಮತ್ತೆ ಅಪ್ಪನ ಪೆಚ್ಚುಮುಖ, ಮತ್ತದರಲಿ ಜನಮೇಜಯನೂ, ಅವನಪ್ಪ ಪರೀಕ್ಷಿತನೂ..

Monday, July 4, 2016

ನಾಳೆ ಬರುವೆ ಅಂದಿದ್ದಾನವ.

ಹಕ್ಕಿಗೂಡಿಟ್ಟಿದ್ದ ಪಾರಿಜಾತದ ಗೆಲ್ಲು
ಗಾಳಿಗೂ ಅಲ್ಲ, ಕೊಡಲಿಗೂ ಅಲ್ಲ;
ನೆಟ್ಟ ಕೈಗಳೇ ಮುಟ್ಟಿದಷ್ಟಕ್ಕೇ ಪಟ್ಟನೆ ಮುರಿದುಬಿತ್ತು.

ಸೊಪ್ಪು ಹಾಸಿನ ಮೇಲೆ ಬೆಚ್ಚನೆ
ಕುಪ್ಪಳಿಸಿ ಕೆಚ್ಚಲು ಚೀಪುತ್ತಿದ್ದ ಕರು ಕಪಿಲೆ
ಮನೆಮಗಳ ಬಳುವಳಿ ಪಟ್ಟಿ ಸೇರಿ, ಸೋರದೆಯೂ ಹಟ್ಟಿ ನೆಲ ಒದ್ದೆಒದ್ದೆ!

ಏನೋ ಎಲ್ಲ ಮುರಿದು
ಇನ್ನೇನೇನೋ ಜರಿದು ಒಳಗೆಂಬ ಒಳಗೆಲ್ಲ ಕಕ್ಕಾಬಿಕ್ಕಿ
ಗುಪ್ತಗಾಮಿನಿ ಉಪ್ಪು ಕಡಲು ಹರಿದಿದೆ ಸೊಕ್ಕಿ ಉಕ್ಕಿಉಕ್ಕಿ.

ಬೆಳಗು, ನಡು, ಕಳೆದು ಸಂಜೆಯೂ ಬಂತು,
ಯಾವ ರಾಗ-ರಂಗಿನ ಹಂಗಿಲ್ಲದೆ ಸರಿದುಹೋಗಿ
ರಾತ್ರಿಯೂ ನಿದ್ದೆಯೂರಲಿ ಬಹಿಷ್ಕೃತ, ಭಣಭಣ ಕವಿದಿದೆ.

ಹಾರ ಕಡಿದು ಮಣಿ ಚಲ್ಲಾಪಿಲ್ಲಿ
ಕೊಂಡಿ ಕಳೆದುಹೋಗಿದೆ, ದೃಷ್ಟಿಯಿಲ್ಲ ಕಣ್ಣಲ್ಲಿ.
ಪೋಣಿಸುವ ಬೆರಳೂ ಸ್ತಬ್ಧ; ಇಂದೊಂದು ಸಾವಕಾಶ ಸಾಯುತ್ತಲಿದೆ.

ಅಂದೊಮ್ಮೆ ಹೀಗೇ ಸಾಯುತಿತ್ತು; ಬರೀ ಮುಟ್ಟಿ ಉಸಿರಿತ್ತಿದ್ದ,
ಮತ್ತೆ ನಾಳೆ ಬರುವೆ ಅಂದಿದ್ದಾನವ!
ಬೇಡ ಬರಬೇಡೆಂದ ಇಂದಿನ ಕ್ಷೀಣ ರೋಧನಕೆ ಬೆಚ್ಚಿಬಿದ್ದಿದೆ ಸಾವು.

Sunday, June 26, 2016

ಮೆಲ್ಲ ಆವರಿಸುತಾ
ಅರ್ಪಣೆಯ ಪೂರ್ಣಾಹುತಿಗೊಳುವ ಬೆಂಕಿಯಂಥ ಸತ್ಯವೇ,
ಮುಷ್ಟಿಯಷ್ಟು ನಿನದಮೂಲ್ಯ ಸಂಗ ಕೊಟ್ಟುಬಿಡು;
ದಹಿಸಿಕೊಳಬೇಕು
ಬೂದಿಯೇ ಪರಿಚಯಿಸುವಂತೆನ್ನ ನಾಳೆ

ಕುಳಿಗಾಳಿಯಲುಗ ನೇವರಿಕೆ,
ಅಳಕಿರಿದಷ್ಟಿನ್ನೂ ಬೇಕೆನಿಸುವೊಂದು ನೋವೇ,
ಚಿಟಿಕೆಯಷ್ಟು ನಿನದಮೂಲ್ಯ ಸಹಜತೆ ಕೊಟ್ಟುಬಿಡು;
ಬೆತ್ತಲಾಗಬೇಕು
ಹುದುಗಿಹೋಗುವೆನೆಂಬಂತೆ ಮರೆವಿನಡಿ ನಾಳೆ..

ನಾಭಿಮೂಲದ ಪುಳಕವೇ,
ಭ್ರೂಮಧ್ಯದ ಚಕ್ರಚಳಕವೇ,
ಆ ತುದಿಯಿಂದೀತುದಿವರೆಗಿನ ರೋಮಾಂಚನವೇ,
ರವಷ್ಟು ನಿನದಮೂಲ್ಯ  ಹೊತ್ತು ಕೊಟ್ಟುಬಿಡು;
ಒಳಗೊಳಬೇಕು
ಕ್ಷಣವೊಂದೂ ನನ್ನ ಹೊರಗುಳಿಯದಂತೆ ನಾಳೆ..

ಸಾಲುಮರಹಾಡಿಯ ಗಾಳಿಗುಂಜನ,
ಮಿಂಚು-ಗುಡುಗುಗಳಂತರದ ಕಂಪನ,
ಅಮ್ಮನ ಸೆರಗು ಕೆನ್ನೆ ತೀಡಿದ,
ಅಪ್ಪನುಸಿರು ನೆತ್ತಿ ಮೂಸಿದ....
ಸೇತುವಿನಂಥ ಓ ಮೌನಗಮನವೇ,
ತೃಣದಷ್ಟು ನಿನದಮೂಲ್ಯ ಸ್ಪಂದನೆ ಕೊಟ್ಟುಬಿಡು,
ಮಿಳಿತವಾಗಬೇಕು
ಇನ್ನು ಬಾಕಿಯಿಲ್ಲವೆಂಬಂತೆ ಎನಗೆ ನಾಳೆ..

ಕಾಣಬೇಕು ಅಂದ.
ಮುಚ್ಚಿದ ಕಣ್ಣಡಿಯೀಗ
ಎಂದೂ ಮರೆಯಾಗದಾಗಸವಾಗುವ ಕನಸು..

ಮುಟ್ಟಬೇಕು ಅಂದ.
ಕಣ್ಣರಳಿವೆ ಇಷ್ಟಗಲ;
ಅವನೆಲ್ಲ ಹಾದಿಯೂ ಹೊದೆವ ನೆಲವಾಗುವ ಕನಸು..

ತಟ್ಟಬೇಕು ಅಂದ.
ಹರಳುಗಟ್ಟಿದೆ ಕಣ್ಣ ದಾಹ;
ಬಾಳಹರಿವಿನಡಿ ತೋಯ್ದು ನಸೆಗಲ್ಲಾಗುವ ಕನಸು...

ಆವರಿಸಬೇಕು ಅಂದ.
ಕಣ್ರೆಪ್ಪೆ ಗಾಳಿಗಾಡುತಿವೆ;
ಉಸಿರ ತೆಕ್ಕೆಯ ಹುಚ್ಚು ಜೋಕಾಲಿಯಾಗುವ ಕನಸು..

ಒಳಗಿಳಿಯಬೇಕು ಅಂದ.
ಕಣ್ಣಸುಳಿಯೀಗ ಧ್ಯಾನಸ್ಥ;
ಅವಗವನ ತೋರುವ ಏಕಾಂತಕ್ಷಣಪುಂಜವಾಗುವ ಕನಸು..

ಅಂಟಿಕೊಳಬೇಕು ಅಂದ.
ಕಣ್ಣೊಳಗೊಂದು ಕ್ಷಿತಿಜ;
ಅಂಗೈ ನಟ್ಟನಡುವೊಂದು ಹುಟ್ಟುಮಚ್ಚೆಯಾಗುವ ಕನಸು..

ಮರೆತುಬಿಡಬೇಕು ಅಂದ;
ಸುಳ್ಳುಸುಳ್ಳೇ ನಕ್ಕಿವೆ ಕಣ್ಣು;
ಕಾಣುವಾಸೆಗಷ್ಟೇ ಪ್ರಕಟ, ಬೆನ್ನಿಗಂಟುವ ನೆರಳಾಗುವ ಕನಸು..

ಕಳಚಿಕೊಳಬೇಕು ಅಂದ.
ಖಾಲಿಯಾಗುತಿವೆ ಕಣ್ಣಬಣ್ಣ;
ಮಿಸುಕಾಡಿದಾಗ ಅಲ್ಲೊಳಗೇನೋ, ಬೆರಳಡಿ ಹಾಳೆಯಾಗುವ ಕನಸು..

ಬಿಟ್ಟುಹೋಗಬೇಕು ಅಂದ.
ಆಗದೆಯೂ ತೆರೆಕೊಂಡ ಕಣ್ಣಕದ;
ನೂರೊಂದರಲಿ ಅವನದೊಂದಾದರೂ ಹಾಡ ಹೊಗುವ ಕನಸು..

ಬಿಡದೆ ಸಾಗಿವೆ ಕನಸು
ನಿದ್ದೆ ಹಾದಿಯ ತುದಿಗೆ ಉರಿದೊಂದಿ ಬೆಳಕು!
ದೀಪದಡಿಯ ಬೂದಿಯಿಂದೆದ್ದ
ಅಮೃತಹಕ್ಕಿ ರೆಕ್ಕೆ ಕಾವಿಗೆ
ಕೋಶ ಕಳಚಿ, ಕನಸ ಪತಂಗ ರೆಕ್ಕೆಬಿಚ್ಚಿ,
ಮತ್ತೆ ಹಾರಿವೆ ದೀಪದೆಡೆಗೆ!



Friday, June 3, 2016


ಬರಲೇನು ಅನುತಾ
ಬರುವ ಆರಡಿಯೆತ್ತರದ ನನಸಲ್ಲ;
ಅಲ್ಲೆಲ್ಲಿಂದಲೋ ನಿದ್ದೆಗೆ ಕನಸ ಕಚಗುಳಿಯಿಟ್ಟು
ಝುಮ್ಮೆನಿಸುವ ತುದಿಬೆರಳ ಸ್ಪರ್ಶ ಅವನು!

ತುಂಬಿ ಸಿಹಿ ತರುತಾ
ಕಹಿಯೆಲ್ಲ ಮರೆ ಮಾಡುವ ತುತ್ತಲ್ಲ;
ಅಲ್ಲೆಲ್ಲೋ ನಗೆ ಮೊಗ್ಗಿನಡಿಯಿಂದ ಸಾರ ಹಾರಿಸಿತಂದು
ಒದ್ದೆ ಒಡಲಿಗೆ ಬೇರಿಳಿಸುವ ಸತ್ವ ಅವನು!

ಅಬ್ಬರದ ಕಡಲಡಿಯಿರುವ
ಬಲು ಅಪೂರ್ಪ ರತ್ನಹವಳವಲ್ಲ;
ಈ ಕತ್ತಿನಿಳಿಜಾರಲಿ ಹರಿವ ಕಣ್ಣಹನಿ ಕುಡಿದು
ಸ್ವಾತಿಮುತ್ತಾಗಿಸುವ ಸಿಂಪಿಯ ಮೌನ ಅವನು!

ಹೋಗುಹೋಗೋ ಕಾಲವೇ,
ಮುಳ್ಳು ನಡೆಸುವ ನಡೆ ನೀನು;
ಹೆಚ್ಚೇನು ಬಯಸಲಾದೀತು?
ಬಾಯ್ದೆರೆದಲ್ಲೆಲ್ಲ ತೊಟ್ಟಿಕ್ಕೀತೆ ಜೇನು?

ಅವನೆಂಬುದ ಭಟ್ಟಿಯಿಳಿಸಿಕೊಂಡು
ಮುಚ್ಚಿಟ್ಟ ಅಟ್ಟದ ಮೇಲಿನೊಂದು ಪಾತ್ರೆಯಲಿ
ಕೆನೆಹಾಲು ದಿನವೂ ಮೊಸರಾಗುತದೆ..
ಹೆಪ್ಪಿಟ್ಟ ನೆನಪು ಸದಾ ಸವಿ ಮೆತ್ತುತವೆ.

ಕಾಯುವರಮನೆಗಾಗಲೇ ಕೆಸರುಕಲ್ಲಿಟ್ಟಾಗಿದೆ,
ಪ್ರತಿ ನಾಳೆಯೂ ಶುಭವೆ ನನ್ನ ಮನೆಯೊಕ್ಕಲಿಗೆ..
ಕಿಂಡಿಯೆದುರಿಡುವೆ ಅವನ ಹೆಸರಿನೊಂದು ಗಾಳಿಗಂಟೆ
ಅಲೆ ಸಣ್ಣದೊಂದೂ ಸಾಕು ಪುಳಕವೆಬ್ಬಿಸಿ ಹರಡಲಿಕೆ!

Thursday, June 2, 2016

ನೀರ ನೈದಿಲೆ ಆಕಾಶಮಲ್ಲಿಗೆಗನುತಾಳೆ...

ತೋಳ್ಚಾಚಿ ಕರೆದೊಂದು ದಿನ ಆಗಸ
ಕಾರ್ಮೋಡಕೆ ಆತ್ಮಸಾಕ್ಷಾತ್ಕಾರ!
ಸೋನೆ ಹನಿ ಮೀಸಿದೊಂದು ದಿನ ಎಳೆಬಿಸಿಲ
ಹಸಿರಕಣ್ಣಲಿ ಮಳೆಬಿಲ್ಲ ವಯ್ಯಾರ!
ಉಕ್ಕೇರಿದಾಗೊಮ್ಮೆ ಮುಚ್ಚಿಟ್ಟ ಉದ್ವೇಗ
ಮೈಮುರಿದು ನಸುನಕ್ಕೀತು ಬರ!
ಬಿಚ್ಚಿ ಸುರಿದಾಗಲೊಮ್ಮೆ ಎದೆಯಾವೇಗ
ಮಣ್ಣಿನೆದೆ ಪರಿಮಳಕಾಗ ಎಚ್ಚರ!
ಜಾಜಿಚಪ್ಪರದಲಿ ಎಳೆಬಸಿರ ಪುಳಕ
ಕಂಪಿನಲೆಯಲಿ ಗಾಳಿಗೆ ಸ್ವಯಂಸಾಕಾರ!
ಅಚ್ಚರಿಯೇಕೇ?!
ಇರುಳನೂ ಹಾದಿಯಾಗಿಸುವ ಅದ್ಭುತವೇ,
ಕೇಳು ಕತ್ತಲಿನೊಂದು ಹೊಳೆಹೊಳೆವ ಕಣ್ಣೇ,
ಪ್ರೀತಿಯೂರಿನೊಂದು ಅದ್ಭುತ, ಓ ಹೆಣ್ಣೇ,
ವಸಂತನ ಹಿಂದೆ ತಾನೇ ಚಿಗುರು ತುತ್ತೂರಿಯೊಂದು
ಕೋಗಿಲೆಯೆದೆಗೆ ಜೀವ ತುಂಬುವುದು?
ಪಕ್ಕಾ ಸ್ವಯಂಭುವೊಂದು ಮೋಹಕೆ ತಾನೇ
ಸುಮ್ಮಸುಮ್ಮನೆ ನರನಾಡಿಯವನನೇ ಮಿಡಿವುದು?
ಎಲೆ ನಭದ ಮಡಿಲ ಮುದ್ದು ತಾರೆಯೇ,
ಸಿಕ್ಕಿದಾಗ ಹೇಗೋ ಬೆಳಕತುಣುಕೊಂದು
ಫಳ್ಳನೆ ನಗದೆ ಇದೇನು ವರಸೆಯೇ?
ಯಾರಂದವರು ಚಂದ್ರನೆಂದರೆ
ಲೋಕಕೊಬ್ಬನೇ ಎಂದು?!
ನೋಡು,
ನಿನ್ನೂರಿನಾಗಸದ ಬೆಳ್ಳಿತುಂಡೇ ಬೇರೆ,
ನನ್ನೂರ ಸೂರ ಬೆಳಕಿಂಡಿಯೇ ಬೇರೆ..
ಅಲ್ಲವ ನಿನ್ನ ಕಣ್ಮಣಿ, ಇಲ್ಲಿ ನಾನಿವನದು!


Saturday, May 28, 2016

ಕಳೆದುಹೋಗದಂತೆ
ಕೆಲ ನಿನ್ನೆ ಇಂದುಗಳ ನಡುವೆ
ತನ್ನ ಕಾಯ್ದುಕೊಳುವುದೆ
ನೋಡು ಈ ಕ್ಷಣದ ಗೊಡವೆ,
ಬೆಂಗಾಡ ಕನಸ ಹನಿಗಳಲಿ ಮುಳುಗಿಹೋಗಿರುವೆ..

ಎರಡು ಕೊಳದೆರಡು ಹಂಸಗಳ ನಡೆಗೆ
ಒಂದೇ ಹೆಸರ ಜಾಡು.
ಹುಡುಕಹೊರಟಿವೆ ಮುಕ್ತಿ;
ಮುಕ್ತಿ ಕ್ಷಣವೊಂದರ ಸೊತ್ತು,
ಮತ್ತದೇ ಹೊತ್ತ ಹೊರೆಯಿಳಿವ ಹಾಡು!

ಕಣ್ಣಜೋಳಿಗೆ ತುಂಬ
ತುಂಬಿಕೊಳಲಿ ಭರತದ ಕಡಲು.
ಉಕ್ಕುಕ್ಕಿ ಬೋಳು ಪಡುವಣಕೆ
ಮುಳುಗುವದಾದರೂ ಬಣ್ಣ ಬಳಿಯಲಿ ಒಂದು
ತೃಷೆ ಕಡಲೆದುರು ಗಹಗಹಿಸಿ ನಗದಿರಲಿ ಇನ್ನೆಂದೂ..

ಸುಳ್ಳು-ಸತ್ಯ ಸರಿ-ತಪ್ಪು ಕೂಡು-ಕಳೆಗಳಲಿ
ಸಿಂಗರಗೊಳಲೇ ಇಲ್ಲ ನೋಡು;
ದೂರು ದುಗುಡ ದುಮ್ಮಾನದೆದುರು
ಅದೋ ಅದೊಂದು ಸಶಬ್ದ ನಗು
ನನ್ನ ಮುಕ್ತಿ ಕನ್ಯೆಯ ಸೊಂಟದ ಡಾಬು.

ಬಯಲಿಗೊಯ್ಯುವ ಬಾಗಿಲೇ,
ಸಂಕ್ರಮಣದೊಂದು ಸುಮುಹೂರ್ತ
ಎಲ್ಲ ಮೀರಿ ಹಾರಾಟ ಮುಕ್ತಮುಕ್ತ!
ಎದೆಯೊಡ್ಡಿ ನಿಂತ ಅವಕಾಶದಾಕಾಶ ನೀನು
ತಬ್ಬಿ ಬಳ್ಳಿಯಂತರಾಳ ಹಾಡುವ ಗುಬ್ಬಿ ನಾನು.

ಹೋಗು ಅಡಗು ಬೇಕಾದರೆ,
ಹೂವಾಡಗಿತ್ತಿಯ ಹೂಬುಟ್ಟಿಯೊಳಗೆ,
ಹಾವಾಡಿಗನ ಪುಂಗಿ ನಳ್ಳಿಯೊಳಗೆ
ನೋವು-ಖುಶಿಯೆರಡನೂ ಕಣ್ಕಟ್ಟು ಬಿಚ್ಚಿಬಿಟ್ಟಿರುವೆ
ಒಂದಾದರೂ ಹುಡುಕೀತು; ಆ ಹೊತ್ತು ಮುಕ್ತವಾದೀತು!











Sunday, May 22, 2016

ಪತ್ತಲುಟ್ಟು ಬರುತಿದ್ದ ಕಚಗುಳಿಯ
ಬೆತ್ತಲಾಗಿಸಿ, ತಾಗಿಸಿ ನಿಜಗುರುತಾಗಿಸಿದವನೇ,
ಮೈಮುರಿದು ಹೊರಟ ನೆಟಿಕೆ ಸಾರಿವೆ,
ಜೀವಕಣಕಣಕೀಗ ಋಣಭಾರ!

ಆಳದ ಬೊಗಸೆ ಅಂತರ್ಜಲವ
ಕೆದಕೆದಕಿ ಅಡಗಿದೊರತೆ ಝಿಲ್ಲನೆ ಚಿಮ್ಮಿಸಿದವನೇ,
ಜುಳುಜುಳು ಗುಪ್ತಗಾಮಿನಿ ಸಾರಿದೆ,
ಹನಿಹನಿಗೂ ಈಗ ಋಣಭಾರ!

ಸಹಸ್ರಾಕ್ಷ-ಸಹಸ್ರಬಾಹುಗಳಾಗಿ
ಮೇಲಿಂದ ನಕ್ಷತ್ರ, ತಳದಿಂದ ಮುತ್ತು,
ಮತ್ತದೋ ಆ ಕ್ಷಿತಿಜದಕ್ಷಯ ರಂಗು
ತರಲು ಸಾಗಿವೆ ದೂರದೂರ ಭರದಿಂದ..

ಗಂಧರ್ವಗಾಯನ ತರಬಹುದೇ?
ಧ್ವನಿಯ ನೆಲೆಯ ಕಣ್ಮುಚ್ಚಿ ಕೂತು ಕೇಳುವುದಾದೀತೇ?
ನೀನೋ ಜಂಗಮ ಜೋಗಿ!

ಗಾಳಿಯಂತಾಡಿಸುವ ನಶೆ ತಂದರಾದೀತೇ?
ತುಟಿ ಸೋಕುವುದಿರಲಿ, ಪಿಸುನುಡಿಗೇ ನಾ ತೂರಾಡಿದ್ದಿದೆ;
ನಿನ್ನ ನೋಟಕಿಂತ ನಶೆಯುಂಟೆ?

ಬಿಡು, ಋಣವೇ ಬೆಸೆಯಲಿ ಸಾವಿನಾಚೆಗೂ.
ಈ ಯುಗದಾದಿ ಬೆಸೆದಂತೆ ನಾಳಿನವು ಮತ್ತೆಮತ್ತೆ.
ರಾಶಿ ಪೇರಿಸುತಿರು ಋಣದ ಕ್ಷಣಗಳ ಹಾಗೇ,
ಹುಟ್ಟಿ, ಹುಡುಕಿ ಬರಲಿರುವೆ ನಾನಂತೂ ಹೀಗೇ ಮತ್ತೆಮತ್ತೆ!

Saturday, May 21, 2016

ಹಾಗೇ ಅಂಗಾಲ ಕಲೆಯಾದ ಒಂದಷ್ಟು ಹಠಮಾರಿ ಕೆಮ್ಮಣ್ಣು
ವೈಶಾಖದ ಕೊನೆಕೊನೆಯ ಕಡುಬಿಸಿಲಿಳಿಸಿಕೊಂಡ ಉರಿಗಣ್ಣು
ಗಾಳಿಯ ಬೀಸುಧರ್ಮಕೆ ಸ್ಪಂದಿಸಿ ಬಂಧ ಕಳಚಿಕೊಳುವೆಲೆ
"ನಾನೂ.." ಎನುತ ಮಕಾಡೆ ನೆಲಕಚ್ಚುವದೇ ವರವೆಂದುದುರುವ ಪಾರಿಜಾತ...
ಈಗೀಗ ಅತಿಸಹಜವೂ ನಿಜದಚ್ಚರಿಯೆನಿಸುವುದು;
ಹಗಲು ನಿದ್ದೆಗೆಳಸಿ, ರಾತ್ರಿಯೆಚ್ಚರಿಸುವುದು ಮಾಮೂಲೆನಿಸುವುದು..

ವನಮಾಲಿಯೇ ನಿಲ್ಲಿಸದಿರು ಕೊಳಲಗಾನವೆಂದರವರು,
"ನನ್ನ ಮಹಾಬಲಿಯೇ ನಿಲ್ಲಿಸಿಬಿಡೆಲ್ಲವ" ಇದು ನಾ ಹೇಳುವುದು!
ಸಾಕು, ಕನಸರೆಕ್ಕೆಯೇರಿಯಷ್ಟೇ ಬರುವ ನಗುವೂ,
ಮತ್ತು ನಿದ್ದೆ ಕಳುವಾದ ಕಣ್ಣುಗಳ ಬಿಕ್ಕು ಪ್ರವಾಹವೂ..
ಸಾಕು, ತೂರಿಬಂದ ಪರಿಮಳದಲೆಯಿಲ್ಲೇ ತೆಳುವಾಗಲಿ,
ಬೆಸೆವ ಸೇತು ಅಂತರದಳತೆಯ ಮಾಪನವಾಗಲಿ..

ಹೌದು,
"ಮಳೆ ಬೀಳದಿರಲಿ, ಹಸಿರುದಿಸದಿರಲಿ, ಹೂವರಳದಿರಲಿ,
ತೆನೆಬತ್ತಕಾಳಲಿ, ಹಟ್ಟಿಹಟ್ಟಿಯ ತಾಯ್ಕೆಚ್ಚಲಲಿ ಹಾಲ್ದುಂಬದಿರಲಿ.."
ಎಂದೆನುವುದಾದರೆ ಹೊಳೆಹೊಳೆದ ಆ ನಿನ್ನೆ ಮರುಕಳಿಸದಿರಲಿ..
ಅಯ್ಯೋ...
ಸುತ್ತುಬಳಸಿ ಹೇಳಿಕೇಳಲಿರುವುದಾದರೂ ಏನು,
ಮೌನ ತೂಗಿತೂಗಿ ಮಲಗಿಸಿದ ಹೊತ್ತನೆಬ್ಬಿಸಬಹುದಿತ್ತು,
ಬಂದುಬಿಡಬಹುದಿತ್ತು; ಬಿಲ್ಕುಲ್ ಇಲ್ಲಿಲ್ಲದಿರುವದ್ದು ಇಂದಿಲ್ಲಿರಬಹುದಿತ್ತು..

Saturday, March 5, 2016

ನೀ ಬಂದ ರಭಸಕ್ಕೆ ಹರಡಿ ರಾಡಿ ರಂಗೋಲಿ,
ದಿಕ್ಕಾಪಾಲಾದ ಹೆಬ್ಬಾಗಿಲ ತರಗಲೆ ರಾಶಿ,
ಜಾಗ ತಪ್ಪಿ ಮಖಾಡೆ ಬಿದ್ದುಕೊಂಡ ಕಾಲೊರೆಸು,
ತಳ್ಳಿಸಿಕೊಂಡ ಬಾಗಿಲದುರಿ ಉದುರಿದ ತೋರಣದೆಲೆ..
ಒಳಬಂದು ಪೊಟ್ಟಣ ಬಿಚ್ಚಿ ಹಂಚಿದ ಮತ್ತಿಗೆ
ಘಮ್ಮೆಂದು ಸುತ್ತಿಸುಳಿದೊಮ್ಮೆ
ಮರುಘಳಿಗೆಗೇ ಮಂದ, ಸ್ತಬ್ಧ ಗಾಳಿ!
ಕೆದರಿ ತಲೆ, ಕರಗಿ ಹಣೆಬೊಟ್ಟು,
ಜಾರಿ ಮುದುರಿ ವಸ್ತ್ರ, ಕೂತಲ್ಲೆ ಕಲ್ಲಾದ ನಾನು!

ಎಲ್ಲೆಡೆ ನಿಶ್ಶಬ್ದಗದ್ದಲವೆಬ್ಬಿಸಿ
ಸರ್ರನೆ ತೆರಳಿದ್ದಿನ್ನೂ ಅರಗಿಲ್ಲವೆಂಬಂತೆ
ಬಿಡದೆ ಗಾಳಿಗಾಡುತಿರುವ
ಮುಚ್ಚಿಕೊಳಲಾಗದೆ, ಪೂರ ತೆರಕೊಳಲಾಗದೆ
ಒಂದೆಡೆಗೂ ಮುಟ್ಟಲಾಗದೆ
ತ್ರಿಶಂಕು ಮೌನಹುಯ್ದಾಟದಲಿ
ಮೇಲಿನಗುಳಿ ಸಿಗಿಸಿರದ
ಎರಡರಲೊಂದು ಬಾಗಿಲು!

ಇದೋ ಈ ಗುಂಗಿನೊಳಗೆ
ಮುಂಚಲಿಸುತಲೇ ಮತ್ತೆ ಮತ್ತೆ ಸುತ್ತುತಿವೆ
ತುಂಬುಕಣ್ಣಕೊಳದೆರಡು ಮೀನು!
ಒಂದರ ಹಿಂದೊಂದು,
ನಲಿವಿನೆಲ್ಲ ಬಣ್ಣ ಹೊತ್ತೊಂದು,
ನೋವಿನ ನಿರ್ವರ್ಣದ್ದೊಂದು...


ಸುಮ್ಮನೆ ಉರುವಲಿಲ್ಲದೆ ಉರಿವ ಮಿದುಹೃದಯ,
ಸುಮ್ಮನೆ ಹರಿವ ಕಣ್ಣೀರುಗಳಿಗೆ ತವರು-ಗಮ್ಯಗಳಿರುವುದಿಲ್ಲ
ಸುಮ್ಮನೆ ಹಾಗೇ ಗಾಳಿಯಂತೆ ಮುಟ್ಟಿಹೋದ ಅನುಭೂತಿಗೆ
ಒಂದಷ್ಟು ಗರಿಗಳನೋ, ಅಷ್ಟೆಷ್ಟೊ ನಿಟ್ಟುಸಿರನೋ ಹಚ್ಚಿದ್ದಾದರೆ
ಆಗಲೂ ಅದು ಕಣ್ಣಿನ ಲೆಕ್ಕಕ್ಕೆಟುಕುವುದಿಲ್ಲ!
ಏನಾಗುತಿತ್ತು ಅಂದು ಬಂದಿರದಿದ್ದರೆ?
ನೂರು ಬಾರಿ ಬೊಬ್ಬಿಟ್ಟು ವ್ಯರ್ಥ ಕಾಲಪ್ರವಾಹದಲರಗಿದ
ಪ್ರಶ್ನೆಯಿಂದು ತನ್ನಷ್ಟಕ್ಕೇ ಗುನುಗಿಕೊಳುತಿದೆ,
"ಅಂದು ಬರದಿದ್ದರೆ ಇನ್ನೇನಿಲ್ಲ, ಇಂದು ಬರುತಿರಲಿಲ್ಲ, ಅಷ್ಟೇ !"

Wednesday, January 20, 2016

ಕೇಳಿಲ್ಲಿ...


ಗುಳಿ ಇಳಿಜಾರುಗಳಲೊಂದು ಉರುಳುವ ಬಿಂದು
ಉಬ್ಬು ಏರುಗಳಲೇರುವ ಏದುಸಿರ ಹಾಡೊಂದು
ದಾಹದ ಪಾದ ಸ್ಪರ್ಶಿಸಿ, ಪೂರ್ತ ಆವರಿಸಿ, ರಮಿಸಿ, ಮುದ್ದಿಸಿ
ಏರುಜಾಗೃತದಿಂದ ನಿದ್ರೆಯಮಲಿಗೊಯ್ಯುವ ಹಾದಿಯುದ್ದಕು
ಒಮ್ಮೆ ತೆವಳಿ, ಒಮ್ಮೆ ನುಸುಳಿ, ಒಮ್ಮೆ ಬಗ್ಗಿ, ಒಮ್ಮೆ ನುಗ್ಗಿ...
ದೇಹಕೂ, ದಾಹಕೂ ಈಗ ಪೂರ ತಣಿದ ಸೊಗದ ಸುಗ್ಗಿ!

ಮಾತುಸುರಲಿದ್ದ ಭಾವಬಾವಿಯ ಹಾದಿಯ ನಕಾಶೆ
ಹೆಜ್ಜೆಗೂಡಿಸಿ ಹೆಗಲಿಗೊರಗಿ ಸಾಗುವ ಆಶೆ
ಕಾಲಡಿ ಕವಚ, ಗುಡಿಶಿಖರ ಕಲಶ ಒತ್ತಟ್ಟಿಗಾಗುವ ಭಾಷೆ
ಸುಗ್ಗಿಹಾಡಿನ ಗದ್ದಲದಲೆಲ್ಲೋ ಕಳೆದೇಹೋದವು!

ಥೇಟ್ ಅಂಥವೇ ಅದೆಷ್ಟೋ ಹನಿಗೂಡಿದ ಹಳ್ಳವೊಂದಕೆ
ದಾಹವ ಸಮೃದ್ಧಿಯಲಿ ಮೀಯಿಸುವಾಸೆ!
ಮುಗಿಲನೂ ನೆಲವನೂ ಒಂದೇ ಏಟಿಗೆ ಮುಟ್ಟಿಬರುವ
ಪ್ರಾಣವಾಯುವಿನ ಚೈತನ್ಯದಲಿ ತೋಯಿಸುವಾಸೆ!

ಇಕ್ಕೆಲ ಉಸಿರ ತೋರಣದ ಘಮ
ಊಹೆ ಬರೆದ ಹಸೆ, ಕಲಿಕೆ ತುಂಬಿದ ಬಣ್ಣ,
ಎಡವಿ ಹೊಸಿಲಿಗಂಟಿದ ಬೆಟ್ಟಿನುಗುರ ಚೂರು
ಅಳುಕುತಲೇ ಪಿಸುನುಡಿವ ಕಣ್ಬೊಂಬೆ ಮಾತು
ಮುಳ್ಳು ಚುಚ್ಚಿದ್ದೊಂದು, ಉಂಗುರ ಕಚ್ಚಿದ್ದೊಂದು ಕೈಬೆರಳು
ಹೀಗೆ ಹಂಚಿಕೊಳುತಾ ಎಲ್ಲವೆಂದರೆಲ್ಲ
ನಿಧಾನ ಸುಗ್ಗಿಯ ಒಳಗೊಯ್ಯುವಾಸೆ!
ಸುಗ್ಗಿ ಕಟಾವಿನ, ಕಣಜದ ಗುಂಗಿನಲೇ ಮುಳುಗಿತ್ತು!

ಹೆಣ್ಣಷ್ಟೇ ಅಲ್ಲದ ಹೆಣ್ತನದೊಂದು ಮೂಲಬಿಂಬಕೆ
ತಂತಾನೇ ಬೆತ್ತಲಾಗುವಾಸೆ
ಗುಟ್ಟುಪಟ್ಟುಗಳ ಕತೆ ಬಿತ್ತರಿಸುತಾ
ಅಷ್ಟೇ, ಇನ್ನೇನಿಲ್ಲ ಎಲೆ ಸಖ್ಯವೇ,
ಆಕಾರವಲ್ಲದ, ಆಕರ್ಷಣೆಯಲ್ಲದ, ತನ್ನೊಳಹೊರಗ
ತನ್ನಷ್ಟಕೇ ನಿರೂಪಿಸುವಾಸೆ..

Saturday, January 16, 2016

ಸೀದಾ ಸ್ವರ್ಗದ ಮುಚ್ಚಿದ ಬಾಗಿಲೆದುರಿಗೇ ಒಯ್ದು ನಿಲಿಸಿ
ಪುಣ್ಯವಂತ ಅತಂತ್ರನೆನಿಸುವ ಗಳಿಗೆಯಿದನು
ಕ್ಷಮಿಸು, ಈ ಸಾಲಿಗೆಳತರದೆ ಇರಲಾಗುತ್ತಿಲ್ಲ.

ಸಾದಾ ನಗುವೊಂದು ಹಿಂದುಮುಂದಿನ ಚಿಂತಿಲ್ಲದ ಮಗು,
ಪುಟುಪುಟು ಹೊರಟುದುದ ಅಲ್ಲೆಲ್ಲೋ ಗೋರಿಯೆದುರು
ನಕ್ಕಳುವ ಅರೆಹುಚ್ಚನ ಮುಖದೆಡೆ ಹಾದಿ ತಪ್ಪಿಸಿದ ಗಳಿಗೆಯನೂ..

ಅತಿಪ್ರಿಯ ಲೌಕಿಕವ ಹುಗಿದು ಅತಿಕ್ಷುಲ್ಲಕದ ಕಾಲ್ಕೆಳಗೆ;
ದ್ವೇಷಿಸದೆಯೂ ದೂರವಿಟ್ಟಿದ್ದ ಅಲೌಕಿಕಕ್ಕೆ
ಬದುಕು ದಾಕ್ಷಿಣ್ಯಕ್ಕೆ ಬಸಿರಾದ ಗಳಿಗೆಯನೂ...

ಅಲ್ಲದೋ ಬಲುವಿಶಾಲವೊಂದು ನೀಲಿ
ನಡು ತೂಗುವ ಬಿಳಿಬೆಳಕ ತುಂಡು ಆಸೆ
ತಿಕ್ಕಿ ತೊಳೆದು ಹೊಳೆಸಿದ ಲೆಕ್ಕವಿರದಷ್ಟು ಮಿನುಗುನೋವುಗಳು
ಅರೆ! ವರ್ಷಋತುವಿನೇರು ಯೌವ್ವನದ ಒಂದು ಬರಡು ಗಳಿಗೆ,
ಒಣಒಣವೆಂಬಂತೆ ಉರಿವ ಆರ್ದ್ರ ಎದೆಯೂ
ನೀರಾಗದೆ ಅಳುವಾಗಸವೂ ಎಷ್ಟೊಂದು ಹೋಲುತ್ತವೆ!

ಕ್ಷಮಿಸು, ನಿನ್ನಂಥವೇ ಈ ಗಳಿಗೆಗಳನು
ಆಸ್ಥೆಯೊಂದು ಬಂಜೆಪಟ್ಟಕೇರುವ ಸಾಲುಗಳಿಗೆಳೆತರದೆ ಇರಲಾಗಲಿಲ್ಲ!

Thursday, January 14, 2016

ಕಣ್ತೆರೆಸುವ ಗಳಿಗೆಗಳು

ಅದೆಂಥ ಗಾರುಡಿಗನೋ ನೀನು!
ತೆರೆದ ಬಾಗಿಲಿಗೂ
ತಿಕ್ಕಿ ತೊಳೆದ ಬೊಗಸೆಗಣ್ಣ ಬರೆಯಬಲ್ಲವನು!
ಕಣ್ಬೊಂಬೆಗೂ ಬಿಡಿಸಿಯೊಂದು ಕಣ್ಣು,
ಕಣ್ತೆರೆಸಬಲ್ಲವನು!

ನನ್ನದಿದೋ ಮುಚ್ಚಿದ ಕದವೂ
ಜೀವಂತವೀಗ!
ಗಾಳಿಗಾಡುತಾ ಒಂದೇಸಮ ಸದ್ದು
ಮೌನಸಾಮ್ರಾಜ್ಯದ ತುಂಬೆಲ್ಲ!

ಅದೆಂಥ ಶಕ್ತಿಯೋ, ಭಕ್ತಿಯೋ ನಿನದು!
ಬಿಡದೆ ಕಿಂಚಿತ್ತೂ
ಕಲ್ಲಕಂಭವ ಬಗೆದು
ನರನನೂ, ಸಿಂಹವನೂ ನೀನು,
ಕಡೆಗೆ ನರಸಿಂಹನನೂ ಪ್ರಕಟಿಸುವವನು!

ನಿನ್ನೆದುರು ಮೈಮರೆಯುತಾ ಬೆತ್ತಲಾಗುವಾಗ
ಅಥವಾ ಬೆತ್ತಲಾಗುತಾ ಮೈಮರೆವಾಗ
ನಾ ನಾನಾಗತೊಡಗುತ್ತೇನೆ ನಿಧಾನ!
ಒಂದೆರಡೇ ಹೆಜ್ಜೆ ಅಷ್ಟೇ...
ಹಿಂದಿನಷ್ಟೂ ಹೆಜ್ಜೆಗಳ ಪಾಠ ಎದುರಾಗುತ್ತದೆ;
ಚಿಟ್ಟೆಯೊಂದು ಮಡಚಿಟ್ಟು ರೆಕ್ಕೆ,
ಕಳಚಿಟ್ಟು ಬಣ್ಣ-ಕಣ್ಣುಗಳ
ಕೋಶದೊಳಹೊಗುತ್ತದೆ;
ಎಡತಾಕುತಾ ಗೋಡೆ ಸುತ್ತ
ತೆವಳತೊಡಗುತ್ತದೆ.

ಮಂಜುಗಣ್ಣಿಗೆ
ಕೈಲಿ ಬೆತ್ತ ಹಿಡಿದ ಗುರುವಿನಂತೆ
ಕಿಡಿಕಾರುವ ಅಮ್ಮನ ಕಣ್ಣಿನಂತನಿಸುವ
ಆ ಗಳಿಗೆ,
ಗಾರುಡಿಗನೂ ಅಲ್ಲ, ಶಕ್ತಿ-ಭಕ್ತಿಗಳೂ ಅಲ್ಲ,
ನೀನು ಥೇಟ್ ನನ್ನಂತೆಯೇ ಮನುಷ್ಯನೆಂದರಿವಾಗುವ
ಆ ಗಳಿಗೆ,
ಆಪ್ತವೂ ಹೌದು; ಅನಪೇಕ್ಷಿತವೂ ಹೌದು!

Monday, January 4, 2016

ಸಾಗುತಲೇ ಇತ್ತು ಮುನ್ನೆಲೆ ಕತೆ;
ಹರಿದುಹೋಗಿದ್ದು ಹಿಂದಣ ಪರದೆ.

ಕಲರವದ ನಡು ಕಡುಸ್ಮಶಾನ ಮೌನ,
ಕಾಮನಬಿಲ್ಲ ನಡು ಬರಡು ಬೂದಿಬಣ್ಣ,
ಚಿನ್ನದಂಥ ಏಕಾಂತಕೂ ಹಿಡಿದ ತುಕ್ಕು,
ನತ್ತು-ಮುತ್ತೆಲ್ಲ ಕಾಗೆಬಂಗಾರವಾದದ್ದು!

ಮರೀಚಿಕೆಯೆಂದರಿತೂ ಬೆನ್ನಟ್ಟಿದ ರಾಮ,
ಅರ್ಥದ ಬೆನ್ನಟ್ಟಿ ಹೈರಾಣಾದ ಶಬ್ದ
ನನ್ನೊಳಗೆ ಸೋತು ಕುಸಿವಾಗ
ಉಮೆಶಿವರ ಜೋಡಿಯೊಂದು ಮುರಿದುಬಿದ್ದದ್ದು!

ಧ್ಯಾನಸ್ಥ ಬೊಗಸೆಗೆ
ಇಷ್ಟೇ ಅಥವಾ
ಇಷ್ಟೊಂದೆಲ್ಲ
ದಕ್ಕಿದ ಪರಿ ಚಿಂತಿಸುತಿದ್ದೆ.

ಮಹಾನ್ ಚೇತನವೊಂದು
ತನ್ನಷ್ಟಕ್ಕೆ ಉಲಿಯುತಿತ್ತು..
"ಪ್ರೀತಿ ಇಲ್ಲದ ಮೇಲೆ
ಹೂವು ಅರಳೀತು ಹೇಗೆ?
ಮಾತು ಹೊರಳೀತು ಹೇಗೆ?
ಮತ್ತರ್ಥ ಹುಟ್ಟೀತು ಹೇಗೆ?"