Friday, September 20, 2013

ಕೊನೆಯಪಕ್ಷ...

ಅಲ್ಲಿಂದ ಇಲ್ಲಿಯವರೆಗೆ
ಎಲ್ಲ ಕೇಳಿದ ಮೇಲುಳಿದದ್ದು
ಪ್ರೀತಿಸುವ ಮತ್ತು ಪ್ರೀತಿಸುತಲೇ
ತೃಪ್ತನಾಗುವ ಶಕ್ತಿಯ ಕೋರಿಕೆ.
 
ಅದನಿತ್ತುಬಿಟ್ಟೆ ನೋಡು,
ಹೆಚ್ಚುಕಾಲ ಸಂಭ್ರಮಿಸಲಾಗಲೇ ಇಲ್ಲ.
ಈಗ ಬೇಕಿದೆ ತುರ್ತು ,
ಅದ ಮಣಿಸುವ ದ್ವೇಷಿಸುವ ಆನೆಬಲ.
 
ತಪಕಂತೂ ಕೂರಲಾರೆ,
ಜಪ ನಾನರಿತಿಲ್ಲ,
ಹೆಚ್ಚೆಂದರೆ ಕಾಯಬಲ್ಲೆ,
ಕಾಯುತಲೇ ಸಾಯಬಲ್ಲೆ.
 
ಕೊನೆ ಗಳಿಗೆಯಲಾದರೂ ಪ್ರಭುವೇ,
ಉಸಿರುಸಿರನೂ ಕಂಬನಿಯಾಗಿಸಿದ
ಒತ್ತಡದಾಗರಗಳು ಕೆಲವಿವೆ,
ಬಲು ಪ್ರೀತಿಪಾತ್ರವವು ನನಗೆ.
 
ನನ್ನ ದ್ವೇಷಕವು ಸಡಿಲಾಗಲಿ
ನನ್ನ ತಂಪೆದೆ ಕೋಪದ ಕುಲುಮೆಯಾಗಿ
ಕಂಬನಿ ಕುದಿದು ಆವಿಯಾಗಲಿ
ಆ ಆವಿ ನನ್ನ ಕೊನೆಯುಸಿರಿಗೊದಗಲಿ.
 
ಪ್ರೀತಿಯುಂಡು ಜೀರ್ಣಿಸಲಾಗದೆ
ಕಕ್ಕಿದ ಸುಸ್ತಿಗೆ ದ್ವೇಷ ಬೆನ್ನು ಸವರಲಿ.
ಪ್ರೀತಿಯದಾರಿ ಇಷ್ಟು ದುರ್ಗಮವೇ?
ಗೊತ್ತಿರದೆ ಆಯ್ದುಬಿಟ್ಟೆ, ಕೇಳಿಬಿಟ್ಟೆ ಕ್ಷಮೆಯಿರಲಿ.
 
ಪ್ರೀತಿಯ ಸುಳಿವಿರದ ಸುಲಭಮಾರ್ಗದಲಿ
ಜೀವಂತ ಒಂದು ಹೆಜ್ಜೆಯನಾದರೂ ಊರಿಸು.

Thursday, September 19, 2013

ಕ್ಷಮಿಸು.

ದೈವಸಾನ್ನಿಧ್ಯದಲಿ
ಶರಣಾಗತಿಯಡಿ
ಕೈಗುದುರಿದ ಹೂ
ಬಾಡಿದ್ದರೆ, ನಿರ್ಗಂಧವಿದ್ದರೆ
ಹೂವಲ್ಲವೆನಿಸಿದರೂ
ಕಣ್ಣಿಗೊತ್ತಿಕೊಳುವಾಗ
ಪ್ರಶ್ನೆಯಿರುವುದಿಲ್ಲ,
ಕಲ್ಲ ಮೈಮೇಲಿದ್ದುದು
ಅದು, ಪ್ರಸಾದ.
 
ನಿನ್ನ ಸಾನ್ನಿಧ್ಯದಲಿ
ಅದೇ ಶರಣಾಗತಿಯಡಿ
ಎದೆಗುದುರಿದ ಹೂಭಾವ
ಗಡುಸಿದ್ದರೆ, ನಿರ್ಗಂಧವಿದ್ದರೆ,
ಹೂವಲ್ಲವೆನಿಸಿದರೆ,
ಕಣ್ಣಿಗೊತ್ತಿಕೊಳುವ ಯತ್ನಕೆ
ಎದುರಿವೆ ಬರೀ ಪ್ರಶ್ನೆ..
ನಿನ್ನೊಳಗಿಂದ ಬಂದಿದೆ
ಇದು, ಸಂಬಂಧ.

,ಓ ಹಗಲ ದೀಪವೇ..

ದಾರಿದೀಪಕೊಂದು ಜಿಜ್ಞಾಸೆ.
ತಣ್ಣನೆಯ ಬಿಳಿಚಂದ್ರನನಲ್ಲ,
ತನ್ನಂತೆ ಹೊತ್ತಿಉರಿವ
ಕೆಂಪುಸೂರ್ಯನ ಕೇಳುವಾಸೆ.
 
ರಾತ್ರಿಪೂರ್ತಿ ಆ ಕಡೆ, ಈ ಕಡೆ
ಒಂದೇಸಮ ದಾರಿತೋರುವ ದೀಪಕೆ,
ರಾತ್ರಿಯ ಕೊನೆಯಹೆಜ್ಜೆ
ತಾ ಬರೀ ನೆನಪಾಗುಳಿವ ಕಥೆ.
ಹಗಲವ ಬರುವ ಹೊತ್ತು
ಮತ್ತೆಮತ್ತೆ ಕೊಲೆಯಾಗಿ
ತಾ ಪ್ರಶ್ನೆಯಾಗಿಯೇ ಉಳಿದ ವ್ಯಥೆ.
 
ಸುತ್ತ ಸುತ್ತುವ ದೀಪದಹುಳು
ನಗುತಾವೆ, ಇದರಂತರಾಳವ
ರಾಗ ಮಾಡಿ ಗುಯ್ ಗುಡುತಾವೆ...
ದೀಪ ಮುನಿಸಿಕೊಳುವುದಿಲ್ಲ,
ಮತ್ತದೇ ಗೆದ್ದಲುತಿಂದುಳಿದ
ಅರ್ಧಜೀವದ ಕಂಬದಾಸರೆ,
ಬಣ್ಣ ಮಾಸಿದ ಹಿಂದಿನ ತಟ್ಟೆ
ಸಹವಾಸದಲೇ ಹೊತ್ತಿಕೊಳುತದೆ
ಕತ್ತಲಾಗುತ್ತಿದ್ದಂತೆ ಕೆಂಪಗೆ,
ಇದೇ ಮೊದಲಬಾರಿಯೆಂಬಂತೆ.
 
ನಡೆದು ಬರುತಾವಷ್ಟು
ಬಾಯಾರಿದ ದೇಹ
ಹಿಂತಿರುಗುವಾಗ
ಭಾರವಿಳಿಸಿ ತಣಿಸಿ ದಾಹ.
ಬರುವವಕೆ ಮನೆ ಬೇರೆ ಇದೆ,
ಮನಸಲ್ಲಿಟ್ಟು ಬಂದಿದ್ದಾವು..
ತನ್ನಡಿಯವು ಇವೆಲ್ಲಿ ಕಿತ್ತಿಟ್ಟಾವು,
ಎಲ್ಲಿ ಬಚ್ಚಿಟ್ಟಾವು?
ಅವಕಿದೇ ಮನೆ, ಮಂತ್ರಾಲಯವೂ...
 
ಮನಸಿಲ್ಲದ ತಮ್ಮ ದೇಹದ
ತೃಷೆಗೊದಗಿದ ಆ ದೇಹ,
ಮತ್ತದರೊಳಗಿನ ಮನಸುಗಳ
ಕೊನೆಪಕ್ಷ ನೆನಪೂ ಅಲ್ಲ,
ಮರೆವು ಮಾಡಿ ಹೊರನಡೆವ
ನಿರ್ಜೀವ ಕಾಲುಹಾದಿಯ
ಕತ್ತಲೆ ತಾ ತೊಡೆಯಲಾಗದು, ಏಕೆ?
 
ಮನಸನಲ್ಲೇ ಬಿಚ್ಚಿದ ಬಟ್ಟೆಯ
ಮಡಿಕೆಯೊಳಗೆತ್ತಿ ಮರೆಸಿ
ಜತನವಾಗಿಡಲಿನ್ನೂ ಕಲಿಯದ,
ಪ್ರತಿಬಾರಿ ದೇಹವ್ಯಾಪಾರಕೆ
ಮನಸ ಬಲಿಕೊಡುವ
ಆ ಕೋಣೆಯೊಳಗಿನ
ಕತ್ತಲೆ ತಾ ತೊಡೆಯಲಾಗದು, ಏಕೆ?
 
ಒಂದೇ ಒಂದು ಬೀದಿಯ ದೀಪ,
ನನಗೇ ಇಂಥ ಭಾವತಿಕ್ಕಾಟ..
ಜಗದೆಲ್ಲ ಹಾದಿಬೀದಿಗಳ
ಆಗುಹೋಗು, ಒಳಿತುಕೆಡುಕುಗಳ
ಸಾಕ್ಷಿ ನೀನು,
ಓ ಹಗಲ ದೀಪವೇ
ನಿನಲಿಲ್ಲವೇ ಇಂಥವೆಷ್ಟೋ ಸಂಕಟ?

Monday, September 16, 2013

ಅದಲುಬದಲು

ನನ್ನಲೇ ಅದುಳಿದುದು ಗೊತ್ತಿಲ್ಲ, ಸೋಲೋ ಗೆಲುವೋ!
ತಣ್ಣನೆ ಛಳುಕೊಂದು ಅಡಿಯಿಂದ ಮುಡಿಗೆ, ನೋವೋ ನಲಿವೋ!
 
ದಾಟಲಾಗದೆ ಹೊಸಿಲು, ಎತ್ತಿದ ಹೂಹೆಜ್ಜೆ ಹಿಂದಿಡುವಾಗ ಮಣಭಾರ
ಮೀಟದುಳಿದ ತಂಬೂರಿಯೆದುರಿನ ಶ್ರುತಿತಪ್ಪಿದ ರಾಗ ರಾಜ್ಯಭಾರ
 ಸಪ್ತವರ್ಣ ಕಾಲ್ಮುರಿದುಕೊಂಡು ಬಿದ್ದ ಕುಳಿಯೊಡಲು ಬರೀಬಿಳಿ
ಸತ್ತುದಕೆ ಹೊದಿಸುವ, ವಿಧವೆಬಾಳಿಗುಡಿಸುವ ಖಾಲಿಖಾಲಿ ಬಿಳಿ.
 
ತೂಕಕಿಡಲಾಗದ ವಿಷಯ, ಇಲ್ಲೊಳಗಿನ ತಕ್ಕಡಿಯಾಕೋ ಕಣ್ಮರೆ
ಮೂಕವಾಗಿದೆ ಬಹುಶಃ ಇದಿಷ್ಟೇ ಎಂದು ಹೇಳಲಾಗದ ಅಳುಕಿಗೆ.
 
ಅಷ್ಟು ತುಂಬಿಕೊಂಡೂ ಅದು ಹಗುರವೆಂದು ಕೈಲೆತ್ತಿಕೊಡಬಯಸಿದ್ದೆ
ಆಗದೆ ಮತ್ತೊಳ ಬಂದುದು ಎಲ್ಲ ಕಳಕೊಂಡ ಖಾಲಿಯೆಂದುಕೊಂಡೆ..
 
ಆದರೆ ನೋಡು, ನಿನ್ನೆ-ಮೊನ್ನೆಗಿಂತ ಇಂದು ಭರಪೂರ ನನ್ನೊಳಗು
ಅಚ್ಚರಿಯಿಲ್ಲ, ಸಾಲದೇ ಅಷ್ಟಡಿ ಎತ್ತರದ ನೀನು ಒಳಹೊಕ್ಕದ್ದು?
 
ಹುಚ್ಚಿ ನಾನು, ನಿನನಲ್ಲೇ ಹೊರಗಿಟ್ಟು ನಿನ್ನೊಳಹೊಗಬಯಸಿದ್ದೆ,
ಶತಾಯಗತಾಯ ಮುಚ್ಚಿದ್ದ ಕದದೂಡುವ ಒತ್ತಾಯದತಿಥಿಯಂತೆ.
 
ನನ್ನ ಸ್ವಾಗತದಾಲಾಪ ನೈವೇದ್ಯವಾಗಿತ್ತು ಅವಗೆ, ನಿನಗೆ ಪ್ರಸಾದ
ನನನಲ್ಲೇ ಇಟ್ಟು, ನನ್ನೊಳಹೊಗಿಸಿದ್ದು ನಿನ್ನ, ಅವನದೇ ಆಶೀರ್ವಾದ.

ನಾನು ಬರೀ ನಾನಲ್ಲ..

ನಿನ್ನೆದೆಯನೇ ಜಗ ಮಾಡಿ
ಮೂಲೆಯ ಆ ಜಾಗ ಕೇಳಲಾರೆ
ತ್ರಿವಿಕ್ರಮ ನಾನು, ಜಗವನೇ ಹೆಜ್ಜೆಗಳಲಳೆಯಬಲ್ಲೆ.
 
ನಿನ್ನಿರುವನೇ ಅರಿವು ಮಾಡಿ
ಮೊನೆಯಷ್ಟು ಗಮನ ಬೇಡಲಾರೆ
ಕಾಮನಬಿಲ್ಲು ನಾನು, ಲೋಕವನೇ ಸೆಳೆಯಬಲ್ಲೆ.
 
ಕಾಲಗರ್ಭದ ತುಂಬ ನಿನ್ನ ತುಂಬಿ
ಕ್ಷಣವೊಂದರ ದಯಕೆ ಕಣ್ಣೊಡ್ಡಲಾರೆ
ಜೀವಂತಿಕೆ ನಾನು, ಅನಂತಕೇ ಕಣ್ಣ ಹಾಯಿಸಬಲ್ಲೆ.
 
ಗಡಿಯಾರ ತೂಗುಹಾಕಿದ ಮೊಳೆಯಾಗಿ
ಹೊತ್ತು ನೂಕುವ ಕೃತ್ಯ ಹೊರಲಾರೆ
ಗಂಟೆಯ ಮುಳ್ಳು ನಾನು, ಸಮಯ ಮುನ್ನಡೆಸಬಲ್ಲೆ.
 
ಕಣ್ಣ ಸುತ್ತಳತೆಯುದ್ದಗಲ ನಿನ್ನ ಹರಡಿ
ನೀನೆಸೆದ ನೋಟದೊಳಹೊಕ್ಕಲಾರೆ
ದೃಷ್ಟಿ ನಾನು, ನಿನ್ನೆತ್ತರಕೂ ಮೀರಿ ಬೆಳೆಯಬಲ್ಲೆ.
 
ನಿನ್ನ ಪ್ರೇಮಸಾಮ್ರಾಜ್ಯದ ದೊರೆ ಮಾಡಿ
ನೀನೆಸೆದ ಭಿಕ್ಷೆಯಲಿ ತಣಿಯಲಾರೆ,
ಪ್ರೇಮಬಿತ್ತ ನಾನು, ತುತ್ತಿಲ್ಲದೆಯೇ ಮೊಳೆಯಬಲ್ಲೆ.
 
ನನ್ನೆಲ್ಲವನೂ ನಿನ್ನ ಪಾಲುಮಾಡಿ
ಖಾಲಿಯಾಗಿಯೂ ಖಾಲಿ ಉಳಿಯಲಾರೆ
ಒಲವು ನಾನು, ಮತ್ತೆಮತ್ತೆ ಚಿಗುರಬಲ್ಲೆ, ಇರಬಲ್ಲೆ.

ಹಿಂತಿರುಗಿದೆ ಕನಸು

ಖುದ್ದು ಬಂದಿತ್ತಂತೆ ಕನಸಲ್ಲಿಗೆ
ಬರಿಗೈಲಿ ಕಳಿಸಿದ್ದೀಯಂತೆ..
 
ನಿನ್ನನೊಳಗೊಂಡು ತರಲು
ಶ್ರೀಗಂಧದ ಚೌಕಟ್ಟು ತಂದಿತ್ತಂತೆ..
ಖಾಲಿ ಹಿಂತಿರುಗುವಾಗ ಎಂದೂ ಬರದ
ಗೆದ್ದಲುಹುಳು ಬಂದು ತಿಂದವಂತೆ..
ಈಗ ನನ್ನ ಬೋಳುಕನಸಲಿ
ಒಂದಷ್ಟು ಅಳು, ಜೊತೆಗೆ ಗೆದ್ದಲುಹುಳು..
 
ನಿನ್ನ ಹೊತ್ತು ತರಲು
ಗಟ್ಟಿಪಲ್ಲಕ್ಕಿ ತಂದಿತ್ತಂತೆ..
ಖಾಲಿ ಬರುವಾಗ ಕಂಬನಿಹನಿ ಬಿದ್ದು
ತುಕ್ಕುಹಿಡಿದು ಚೂರುಚೂರಾಯ್ತಂತೆ..
ಈಗ ನನ್ನ ಜೊಳ್ಳುಕನಸಲಿ
ಒಂದಷ್ಟು ಕುದಿ, ಜೊತೆಗೆ ತುಕ್ಕಿನಪುಡಿ.
 
ನಿನ್ನ ಸ್ಪರ್ಶಸುಖ ತರಲು
ಮದರಂಗಿ ಬೆರಳು ಬಂದಿದ್ದವಂತೆ..
ಖಾಲಿ ಬರುವ ದಾರಿಯ ನಿರಾಸೆ ಚುಚ್ಚಿ
ರಕ್ತದ ಕೆಂಪು ಮದರಂಗಿಯ ನುಂಗಿತಂತೆ..
ಕುಸಿದುಕೂತ ಕನಸಲೀಗ
ಒಂದಷ್ಟು ಸುಳ್ಳು ಮತ್ತಷ್ಟು ಟೊಳ್ಳು...

**

ಮನಸು ನನ್ನ ಕೈಯ್ಯೊಳಗಿತ್ತು.
ನೀ ಒಂದೇ ಹೆಜ್ಜೆಯಳತೆ ದೂರ.
ನಿರ್ವಾತ ತುಂಬಿದಂತರ
ಗಾಳಿಬೆನ್ನೇರಿದ ವೇಗದಾಸೆ ಕ್ರಮಿಸಲಾಗಲಿಲ್ಲ.
 
ಒಂದೇ ಗಳಿಗೆ, ಯಥಾಸ್ಥಾನ ಹೊಕ್ಕಿದೆ ಮನಸು.
ನೀ ಪಡೆವುದಾಗಲಿಲ್ಲ ಎಂದರೂ
ನಾನೀವುದಾಗಲಿಲ್ಲ ಎಂದರೂ
ಅಂಥ ವ್ಯೆತ್ಯಾಸವೇನಿಲ್ಲ..
 
ಹಠಾತ್ತನೆ ದಿಕ್ಕುಬದಲಿಸಿವೆ
ಗಾಳಿ ಬೀಸಿದೆಡೆ ತೂರಿಕೊಳುವ ಹೆಜ್ಜೆ
ಮೈಮನಸು ಹಿಂಬಾಲಿಸಿ ಕಾಲ ದೂರ ಸಾಗಿದೆ..
ನಿರ್ವಾತ ನಿಧಾನ ಒಳಹೊಕ್ಕಿದೆ.
 
ನೆನಕೆಯಿಲ್ಲ, ಕನವರಿಕೆಯಿಲ್ಲ.
ಪ್ರಾಣವಿಲ್ಲ, ಪ್ರಮಾಣವೂ ಇಲ್ಲ.
ಪ್ರೀತಿಪ್ರೇಮ ಬಿಡು, ಉಸಿರಾಟವೇ ಇಲ್ಲ.
ಈಗ ಕೊಡುವುದೇನು, ಪಡೆವುದೇನು?
 
ಎಲ್ಲೋ ಕೆಲವು ಉಸಿರು ಕಡ ಸಿಕ್ಕರೆ,
ಒಳಹೊಕ್ಕಿ ಹೋರಾಡಿ ಅವು ಉಳಿದು ದಕ್ಕಿದರೆ,
ನಿರ್ವಾತದಾಳ್ವಿಕೆ ಹೇಗೋ ಪತನವಾದರೆ....
ನಿರ್ಜೀವ ಬಾಳಿಗಿಂದು ರೆ ಸಾಮ್ರಾಜ್ಯದ್ದೇ ಆಸರೆ..

Thursday, September 12, 2013

ನಾಳೆ ಬರುತಿದೆಯಂತೆ

ನಿನ್ನೆಯ ಬಸಿರ ಸೀಳಿದ
ಯಾತನೆಯಬ್ಬರ ಇಂದಿನುದ್ದಗಲಕಿತ್ತು.
ಸಂಜೆಯಾಗಿದೆ, ಇಂದಿನ ರಾತ್ರಿಯೂ ಒಂದು ಭರವಸೆ,
ಇದು ಅದಾಗಲಿದೆಯಂತೆ, ನಾಳೆ ಬರುತಿದೆಯಂತೆ..
 
ನೂರು ಕನಸಲಿ
ಬಿತ್ತಿದ ನೂರಾರು ಬೀಜಗಳಲಿ
ಅಂಗೈ ಪಾತಿಯಲೊಂದೇ ಒಂದು
ಮೊಳೆತಿದೆಯಂತೆ, ನಾಳೆ ಹೂ ಬಿಡಲಿದೆಯಂತೆ..
 
ಹಕ್ಕಿ ಹಾರಿ ಹುಡುಕಿ ಹೆಕ್ಕಿ
ಜತನದಿ ಜೀವ ಮುಡಿಪಿಟ್ಟು
ಒಟ್ಟು ಮಾಡಿದ್ದೆಲ್ಲ ಹೊಲಿದು, ಬೆಸೆದು
ಗೂಡು ಮಾಡಿದೆಯಂತೆ, ನಾಳೆ ತತ್ತಿಯಿಡಲಿದೆಯಂತೆ..
 
ಕೋಶದ ಭಿತ್ತಿಯಲಿ ಬಿರುಕು
ಅಂಟಿನಸಹ್ಯ ಯಾತನೆ ಮುಗಿದು
ತೆವಳುವ ಹುಳಕೆ ರೆಕ್ಕೆ ಮೂಡಲಿದೆ,
ಬಣ್ಣದ ಚಿತ್ರವಾಗುವುದಂತೆ, ನಾಳೆ ಚಿಟ್ಟೆಯಾಗಲಿದೆಯಂತೆ..
 
ನಡುಗುತಾ ನಿಲ್ಲಬಯಸುವ ಕಾಲು
ಬರೆಯಬಯಸುವ ಕೈ, ಹಾಡಬಯಸುವ ಬಾಯಿ
ಒಟ್ಟಾರೆ ಕುಣಿದುಕುಪ್ಪಳಿಸುವಾಸೆಯ ಮೈಮನ
ಚೈತನ್ಯ ಕುಡಿಯಲಿವೆ, ನಾಳೆ ಅದನವ ತರಲಿರುವನಂತೆ..

Tuesday, September 10, 2013

ಅವಳ ಕರೆತಾರೇ ಗೌರಮ್ಮಾ....

ಧಗೆಯಮ್ಮಾ.....
ಹೊತ್ತಿ ಉರಿಯುತಿವೆ ಮನಸುಗಳು.
 
ನಗೆಯ ವರ ತಾರಮ್ಮಾ..
ಬೇರೆಲ್ಲ ಸೌಭಾಗ್ಯ ಬಿಟ್ಟುಬಿಡು.
 
ಕೈ ಹಂಚಿವೆ ಕೆಂಡ,
ಬಾಳೊಂದು ಯುದ್ಧಕಾಂಡ.
 
ಎದೆ ತುಂಬಿದೆ ಬರೀ ಹೊಗೆ,
ಒಳಗೆಲ್ಲ ಚೆಲುವು ಸುಟ್ಟಿದ್ದಕೆ.
 
ಉಸಿರುಗಟ್ಟಿ ಕೆಮ್ಮಿ ಬಯ್ಗುಳು,
ಬಾಯ್ಬಿಟ್ಟರೆ ಬರೀ ರಕ್ತದುಗುಳು.
 
ರಾಗದ್ವೇಷಗಳ ಸಾಮ್ರಾಜ್ಯ
ಪ್ರೀತಿಪ್ರೇಮ ನಿಸ್ತೇಜ..
 
ಹತಭಾಗ್ಯ ಮುಖಕೆ ಸೆಟ್ಟಿಸಿಂಗಾರ
ಒಳಗೆ ಹಗೆಕೋಪದ ಬಗೆಭಂಡಾರ..
 
ನಿನ್ನನೂ ಬಿಟ್ಟಿಲ್ಲ, ಹಿತವಾದುದೇನನೂ...
ಹೆಸರೆಳೆದೆಳೆದು ತಂದಿಲ್ಲಿ
ಜಿಜ್ಞಾಸೆಯಾಗಿಸುತಾರೆ.
ಪ್ರಶ್ನೆಯ ಕಿಡಿ, ಉತ್ತರವೂ ಕಿಡಿಯೇ.
 
ಭಕ್ತಿ-ನಂಬಿಕೆ ಉರಿಸಿ
ಬೂದಿಯಾಗಿಸಲಾಗಿದೆ.
ಆ ಬೂದಿ ಹಣೆಗಿಟ್ಟು
ಉರಿವ ಶಕ್ತಿಯದೆನಲಾಗಿದೆ.
 
ಸ್ಥಿರ ತಾವಿರದೆ ಶ್ರದ್ಧೆ,
ಇರಿಸಿದಲ್ಲಿರಲಾಗದೆ ತ್ರಿಶಂಕು.
 
ನಗು ಮೃದುಮುಗುದೆ
ಹತಾಶೆ-ನಿರಾಶೆಯ ಕೈಲಿ
ಅತ್ಯಾಚಾರಕೊಳಗಾಗಿ
ಚಿಂದಿಚಿಂದಿ, ಮುಖ ಮುಚ್ಚಿ
ನಿನ್ನೆಡೆಗೋಡಿ ಬಂದಾಗಿದೆ.
 
ಕರೆದುತಾರೇ ತಾಯಿ..
ಕಳಚಲಾಗದೊಂದು
ಧೈರ್ಯಸ್ಥೈರ್ಯದ ಸೀರೆಯುಡಿಸಿ.
ಉರಿಸಲಾಗದೊಂದು
ವಜ್ರದಂಥ ನಿಲುವು ಮುಡಿಸಿ.
ದ್ವೇಷ-ಸಿಟ್ಟು ಕರಗಿಸುವ
ಪ್ರೀತಿಯ ಶಕ್ತಿಯಾಯುಧವಿತ್ತು.
 
ದೂಡುವ ಕೈಗಳ ಮುದ್ದಿಸಿ
ಕೊರಳಹಾರ ಮಾಡುವ ಚೆಲುವು,
ಮೂಡಿದೆಲ್ಲ ಅಡೆತಡೆ ತರಿದು
ಮನನುಗ್ಗಿ ಮನೆ ಮಾಡುವ ಒಲವು,
ಹೊಸದಾಗಿ ಹೀಗೆ ಸಿಂಗರಿಸಿ
ಮತ್ತವಳ ಧರೆಗಿಳಿಸಿ ತಾರೇ...
 
ಹಿಂದೆ ನಾ ಕೇಳಿದ್ದೆಲ್ಲ,
ನೀನಿತ್ತದ್ದೆಲ್ಲ ಇಂದು ತೃಣವೆನ್ನಬಲ್ಲೆ.
ಮಾನವತೆಯ ಗಿಡದಲೀಗ
ನೀನರಳಿಸಬೇಕು ತುರ್ತು ನಗುಮೊಲ್ಲೆ...
 
 
 

Saturday, September 7, 2013

ಒಳಗು ಬದಲಿಸುವ ಬಿಳಿಮೋಡಗಳು

ಗೊಂಬೆಗಾಗಿ ಕಿತ್ತಾಡುತ್ತಾ
ನಾನೂ ನನ್ನ ಕಂದಮ್ಮಳೂ
ಹಳತು ಹರಿದು ಕ್ಷಣಕಾಲದ ವಿಭ್ರಮೆ..
ಹಿಂದೆಯೇ ಹೊಸಗೊಂಬೆಯ
ಭರವಸೆ ಮೂಡಿಸಿದ ಮುಕ್ತ
ನಗೆಯಲೆ ಮೇಲೆ ಹಳೆಗೊಂಬೆಯೊಡಲ
ಅಂದಿನ ಹತ್ತಿತುಂಡುಗಳ ಹಾರಾಟ,
ಅವಳ ಹದಿನೆಂಟನೆಯ ಹುಟ್ಟುಹಬ್ಬ,
ಮೊನ್ನೆ ನಡುಹಗಲ
ನೀಲಾಕಾಶದ ಬಿಳಿಮೋಡಗಳಲ್ಲಿತ್ತು.
 
ಅತ್ತೆ ಸಾಯುತಾ ಹೆತ್ತ ಎರಡನೆಯ ಹೆರಿಗೆ
ಮೊದಲಕೂಸಿನ ಮೂರುವಯಸಿನ
ಮನದಲೇನಿತ್ತೋ, ಕಣ್ಣೀರೊರೆಸುತಲೇ ಇದ್ದ
ಬೆರಳು ಮಾಯಾಚಾಪೆಯೇರಿಸಿ
ಅಮ್ಮನ ಕಿತ್ತುಕೊಳುತಿರುವ
ಮೃತ್ಯುವಿಗೊಡ್ಡಿದ ಸವಾಲೆಂಬಂತೆ
ಅಂದು ದಿಂಬಿನರಿವೆ ಕಿತ್ತೆಸೆದ ಭರಕೆ
ಚೆಲ್ಲಾಡಿದ ಹತ್ತಿಚೂರುಗಳ ಹಾರಾಟ,
ಅತ್ತೆಯ ತಿಥಿಯ ದಿನ,
ನಿನ್ನೆ ಮಧ್ಯಾಹ್ನದ ನೀಲಾಕಾಶದ
ಬಿಳಿಮೋಡಗಳೊಳಗಿತ್ತು..
 
ಸರಣಿಮರಣದ ನಕ್ಷತ್ರಕಡ್ಡಿ ಕಿಡಿಗಳಂತೆ
ಸಾಲುಸಾಲು ಅದೆಷ್ಟೋ ಚಟ್ಟ.
ಆತ್ಮ ಉಡುಪು ಬದಲಿಸಲಿಕೆ
ಜಡವು ಸಾವಿನ ಪರದೆ ಅಡ್ಡಹಿಡಿದ ಕತೆ
ಮೌನ ಮುನ್ನಡೆಸಿದ ಶವಗಳ ಮೆರವಣಿಗೆ
ಮೇಲೆ ಹಾಸಿದ ಬಿಳಿಬಟ್ಟೆಯ ಹಾರಾಟ
ನೀ ಬರದೆ ಉಳಿದ
ಇಂದಿನ ಉರಿಬಿಸಿಲ ನೀಲಾಕಾಶದ
ಬಿಳಿಮೋಡಗಳೊಳಗಿದೆ..
 
 
 

Friday, September 6, 2013

ಇನ್ನೇನಲ್ಲ, ಅದು ನೀನೇ..

ನೀನಿತ್ತಿಲ್ಲವೆಂದು ಅಳುತಿರಲಿಲ್ಲ ಲೋಕವೇ,
ಈಗಿತ್ತಿರುವೆ, ಪ್ರೀತಿ ಮನಸ್ಪೂರ್ತಿ ಸ್ವೀಕರಿಸಿದೆ.
ತೇರ್ಗಡೆಪತ್ರವಿಲ್ಲದೆಯೂ ಮುನ್ನಡೆಯಬಲ್ಲುದು;
ನೀನಷ್ಟೇ ತೀರ್ಪೀಯದೆ ಕ್ಷಣವೂ ಇರಲಾರೆ.
 
ನೀ ಹಿಂಬಾಲಿಸಿದ್ದು ಪ್ರೀತಿಯನಲ್ಲ;
ದೂರ ಸಾಗುತಿದ್ದ ನಿನ್ನತನವನ್ನೇ.
ಸಮೀಪಿಸಿದ್ದೂ ಪ್ರೀತಿಯನಲ್ಲ;
ಸಾಗುವುದ ತಡೆಯಬಯಸಿದ ನಿನ್ನೊಳಗನ್ನೇ.
 
ನೀ ಮೆಚ್ಚಿದ್ದು ಪ್ರೀತಿಸಿದ್ದಕ್ಕಲ್ಲ;
ಅಲ್ಲಿದ್ದುದು ನಿನ್ನ ಅನಿಸಿಕೆಯದೇ ನೆರಳೆಂದು.
ನೀನೊಲಿದದ್ದೂ ಪ್ರೀತಿಸಿದ್ದಕ್ಕಲ್ಲ;
ಆ ನೆರಳು ಹಗಲಿರುಳೂ ನಿನಗೆ ಸ್ಥಿರವಿತ್ತೆಂದು.
 
ನೀ ಮಣಿದದ್ದು ಪ್ರೀತಿಗಲ್ಲ;
ನಿನಪಾದವೇ ಕುಣಿದಲ್ಲಿ ನೀ ಮೆತ್ತಗಾದುದಕೆ.
ಶರಣಾದದ್ದೂ ಪ್ರೀತಿಗಲ್ಲ;
ಸೆಟೆದೆದುರಿಸಿ ನಿಲುವ ಶಕ್ತಿಯಿಲ್ಲದ್ದಕೆ.
 
ನೀ ತಣಿದುದು ಪ್ರೀತಿಯಿಂದಲ್ಲ;
ತುಟಿ ಸವರಿದ ಜಿಹ್ವೆ ನಿನದೇ ಅಲ್ಲಿದ್ದುದಕೆ.
ತಂಪಾದುದೂ ಪ್ರೀತಿಯಿಂದಲ್ಲ;
ತಣಿಸುವೊರತೆ ನಿನದೇ ಅಲ್ಲಿ ಚಿಮ್ಮಿದ್ದಕೆ.
 
ನೀ ಉತ್ತೀರ್ಣವೆನುವುದಾದರೆ
ಅದು ಪ್ರೀತಿಯನ್ನಲ್ಲ;
ನಿನನೇ ಎದುರಿಸಿ, ಮಣಿಸಿ, ಒಲಿಸಿ, ಮೆಚ್ಚಿಸಿ,
ಒಪ್ಪಿಸಿ ನಿನ್ನೊಳಗೇ ಪ್ರೀತಿ ಕಂಡುಕೊಂಡ ನಿನ್ನನ್ನೇ...
 
ಜರೆಯುತಿರುವುದಾದರೂ ಪ್ರೀತಿಯನಲ್ಲ;
ತಲುಪಲಾಗದ ನಿನದೇ ಅಸಹಾಯಕತೆಯನ್ನ.
ತೊರೆಯುತಿರುವುದಾದರೂ ಪ್ರೀತಿಯನಲ್ಲ;
ನಿನ್ನೊಳಗಿನ ಜೀವಂತಿಕೆಯನ್ನ.
 
ಲೋಕವೇ,
ಪ್ರೀತಿಸಿ ಉದ್ಧರಿಸುವುದಲ್ಲ;
ಉದ್ಧಾರವಾಗುವುದು.
ನಿನ್ನ ನಂಬಿ ಏನೂ ಕಾದು ಕೂತಿಲ್ಲ;
ನೀನೆ ನಿನ್ನ ನಂಬಲು ಕಾದಿರುವುದು.
ಅಲ್ಲೆದುರಿರುವುದು, ನೀ ನಿಟ್ಟಿಸುತಿರುವುದು
ಇನ್ನೇನಲ್ಲ; ನೀನೇ, ಬರೀ ನೀನೇ..
 
ಪ್ರೀತಿ ನಿಸ್ವಾರ್ಥವಿರಬಹುದು; ನೀನಲ್ಲ.
ಪ್ರೀತಿ ನಿಷ್ಕಾಮವಿರಬಹುದು; ನೀನಲ್ಲ.
ಪ್ರೀತಿ ನಿರ್ಗುಣವಿರಬಹುದು; ನೀನಲ್ಲ.
ಸ್ವಾರ್ಥ, ಕಾಮ, ಗುಣಗಳ ಮಾಪಕದಲಿ
ಸ್ವಯಂಭು, ಸ್ವಯಂಪೂರ್ಣ, ಸ್ವತಂತ್ರ
ಪ್ರೀತಿಯನಳೆವುದು ಮೌಢ್ಯವೆನಿಸೀತು.
ಪ್ರೀತಿ ಬೆಳೆವದ್ದಲ್ಲ, ಅಳಿವದ್ದೂ ಅಲ್ಲ.
ನೀನುಳಿಯಲು ಬಿಡದೆ ಬಿಗಿಯಾಗಪ್ಪಬೇಕು,
ಕರಗಿ ನೆಲೆ ನಿಂತು ಪ್ರತ್ಯಕ್ಷವಾದೀತು.
ಸಡಿಲಬಿಟ್ಟರೆ ಕಾಣಿಸಿಕೊಳುವ ತುರ್ತಿಲ್ಲವದಕೆ,
ಇದ್ದೂ ಇರದಂತೆ ಅದೃಶ್ಯವಾಗುಳಿದೀತು.

ಲೋಕ ಕಸಿಯಲಾಗದ ಹಾಡು

ಮಾತು ಮನಸು ಭಾವ
ನೇರ ಸರಳರೇಖೆಯಲಿವೆಯೆಂದು
ಶುರುವಾದ ಬಿಂದುವಿನಿಂದ ಹೊರಡುತ್ತೇನೆ.
ಪ್ರತಿಬಾರಿ ಉತ್ಸಾಹದಿಂದ
ಧ್ವನಿಗೆ ದುಪ್ಪಟ್ಟು ತೀವ್ರತೆಯ ಪ್ರತಿಧ್ವನಿಯಾಗಿ.
"
ನೇರ ಚಲಿಸುವುದು ಬೆಳಕಷ್ಟೇ, ನೋಟವಲ್ಲ,ನೋಟದ ಅರಿವಲ್ಲ, ಅರಿವಿನ ತಿರುಳಲ್ಲ.".
ನೂರೊಂದನೆಯ ಬಾರಿಯೂ
ಬಯಸದೆಯೇ ಎಲ್ಲಾ ತಿರುವುಗಳ
ಎಲ್ಲಾ ಮೈಲುಗಲ್ಲುಗಳಲೂ
ಇದೇ ವಿವರ ಎದುರಾಗುವುದು,
ನಾನೋದುತ್ತೇನೆ ಹೊಸದರಂತೆ..
ಸೊಟ್ಟಪಟ್ಟ ಗೀಚುಗೀರುಗಳು
ಕಣ್ಣು ಮೈಕೈಯೆಲ್ಲಾ ಅರಚಿ ಗಾಯ.
ನೂರುಕಲೆಗಳನೂ ನಂಬಿಕೆಯ ಧಿರಿಸಿನಡಿ
ಮುಚ್ಚಿಡುತ್ತೇನೆ, ಮರೆಸುತ್ತೇನೆ;
ಅಲ್ಲ, ಲೋಕದಿಂದಲ್ಲ, ನನ್ನಿಂದಲೇ..
ಲೋಕವದನೇ ಸಾರಿ ಹೇಳಿದ್ದು, ನೋಡಿದ್ದು,
ಮತ್ತು ನೋಡಬಯಸುತ್ತದೆ ಕೂಡಾ..
ಅದಕೆ ನಂಬುವುದು ಗೊತ್ತಿಲ್ಲ,
ಸಂಶಯಿಸುತಲೇ ಎದುರುಗೊಳುವುದು
ಪರೀಕ್ಷಿಸುವುದು, ಗೆದ್ದುದನೂ ಸೋತುದನೂ
ತನಗೆ ಸಲ್ಲದೆಂದು ಎತ್ತಿ ಬದಿಗಿಡುವುದು..
ನಾನು ಇದೇ ಈ ಲೋಕದೊಳಗೇ
ಸಾವಿರದೊಂದನೆಯ ಬಾರಿಯೂ
ಮನತೊಡರಿದ್ದು ಅದೇ ಎನಿಸಿದಾಗ
ನಂಬುತ್ತೇನೆ.
ಮುಂದೊಮ್ಮೆ ಅದಲ್ಲವೆನಿಸಿದಾಗ
ನಂಬದುಳಿಯುತ್ತೇನೆ.
ದುರ್ಬೀನನೇ ಮತ್ತೆ ತಿಕ್ಕಿ
ಒರೆಸಿ ಪುನಃಪುನಃ ದಿಟ್ಟಿಸುತ್ತೇನೆ,
ಸ್ಪಷ್ಟ ಕಂಡದ್ದು ಒಪ್ಪಲೊಪ್ಪದ
ದಯನೀಯ ಕಣ್ಣುಗಳಿಂದ
ನಂಬಿಕೆಯ ಪ್ರತಿಬಿಂಬ
ಎದುರಿನವುಗಳಲಿ ಕಾಣಲು,
ಅಲ್ಲೊಂದು ಶುದ್ಧಸ್ಫಟಿಕ ಎದೆಗೊಳ
ಮತ್ತಲ್ಲಿ ಇಲ್ಲಿನದರ ಪ್ರತಿಫಲನ ನೋಡಲು.
ಯಾಕೆಂದರೆ ಲೋಕವೇ,
ನಾನು ಬರೀ ಪ್ರೀತಿಸುತ್ತೇನೆ,
ಅದಕಾಗಿ ನಂಬುತ್ತೇನೆ..
ಮೊದಲ ಹಾರುಹೆಜ್ಜೆ
ಮುಂದೆಲ್ಲೋ ಮುರಿದ ರೆಕ್ಕೆಯಾದರೂ
ನಂಬಿಕೆ ಕಿತ್ತೆನೆಂದು
ಗೆದ್ದೆನೆಂದು ನೀ ಬೀಗುವುದಾದರೆ
ನಿನಗೆ ಜಯವಾಗಲಿ ಲೋಕವೇ..
ನಾ ಮಾತ್ರ ಸೋತಿಲ್ಲ, ಸೋಲುವುದಿಲ್ಲ.
ಹಾರದೆಯೂ ನೆಲಕೊರಗಿಯೂ
ಮತ್ತೂ ಹೊಸತೆಂಬಂತೆ ಹಾಡಬಲ್ಲೆ,
ನಂಬುವ ಹಾಡು, ಪ್ರೀತಿಸುವ ಹಾಡು
ಒಮ್ಮೊಮ್ಮೆ ಮುದ ನೀಡುವಂತೆ,
ಒಮ್ಮೊಮ್ಮೆ ಎದೆ ಬಗಿಯುವಂತೆ..

Wednesday, September 4, 2013

**

ಅಯ್ಯೋ ಬಿಡು!
ಪಟ್ಟುಹಿಡಿದು ನಾನೂ ಕೂತಿರಲಿಲ್ಲ,
ದುಪ್ಪಟ್ಟು ಕೊಟ್ಟು ಕೊಳುವರಿಲ್ಲದಿರಲಿಲ್ಲ.
ಮನಸು ಅದೇ ಸಂತೆಯ ಅದೇ ಸೂರಿನಡಿ
ಅದೇ ಸರಪಳಿಯೊಳಗೆ ಪಾದವೂರಿದ್ದು
ನಿನ್ನೆದೆಯಲಿದ್ದು ಬಂದದ್ದು, ಅದೇ ಬಂಡವಾಳದ
ಇನ್ಯಾರೂ ಖರೀದಿಸಲಾಗದ ಬೆಲೆ ಕೂಗಿದ್ದು
ನಿನ್ನ ಪಾಕೀಟು ತೆತ್ತು ಖಾಲಿಯಾದದ್ದು
ಹಾಗೆ ನಿನ್ನ ಕೈಯ್ಯೊಳಗೆ ಸರಕು ಹೊಕ್ಕದ್ದು
ಸರಕ ಹೊತ್ತು ಹೊರಟ ನಿನ್ನ ಸರಪಳಿ,
ಪಾದ, ಸೂರು ಇನ್ನೆಲ್ಲ...
ಕೊನೆಗೆ ಸಂತೆಗೆ ಸಂತೆಯೇ ಹಿಂಬಾಲಿಸಿದ್ದು
ಎದೆಯುಬ್ಬಿಸಿ ತಲೆಯೆತ್ತಿ ನೀ ಮುಂದೆ ಮುಂದೆ
ಇನ್ನೆಲ್ಲ ಹಿಂದೆ ಹಿಂದೆ ಬಂದದ್ದು ಬೇರ‍ೆ ಮಾತು..

Tuesday, September 3, 2013

ನೀಲಿ ಪಡೆದು ಭಾನು ಕೊಟ್ಟ ಬಾನು

ಮೇಲೆ ಹರವಿಕೊಂಡ ಅವ
ಕೆಳಗೆ ಹರಡಿಕೊಂಡ ಅವಳು
ಅವಗೆ ಬಗಿಯುವಾತುರ
ಅವಳಿಗೆ ಚೂರುಚೂರಾಗುವದ್ದು.
 
ಅವಳು ಬಿತ್ತರಿಸಿದ ರಹಸ್ಯ.
ಮೈಯ್ಯೆಲ್ಲಾ ಕಣ್ಣಾಗಿ ಕಿವಿಯಾಗಿ
ಅವ ಕಂಡ ಅಸಂಖ್ಯ ದೃಶ್ಯ..
ಎಲ್ಲೋ ಒಂದಷ್ಟು ಕಡಲು
ನೀಲಿನೀಲಿ ಅದರೊಡಲು
ದೃಷ್ಟಿಯಲ್ಲೇ ನಿಂತ ಕ್ಷಣ
ಅವಳೊಡಲ ನೀಲಿದನಿ
ಪ್ರತಿಧ್ವನಿಸಿದೆ ಅವನೊಳು..
 
ಅದೆಲ್ಲೋ ಕರಾವಳಿಯ ಕಡಲು
ಬಯಲುಸೀಮೆಯಲಿ ನಾನು
ಅಲ್ಲಿ ಪ್ರತಿಫಲಿಸಿದ ನೀಲಿ
ಇಲ್ಲೂ ಕಂಡು ದಂಗು ನಾನು..
ಅವಳು ಅವನೊಳಗೆ
ಇಷ್ಟು ಆವರಿಸುವುದು ಸಾಧ್ಯವೇ?!
 
ದೂರ ಬಹಳಷ್ಟು ನಡುವೆ
ನೂರು ಮತ್ತೆಷ್ಟೋ ಅಡೆತಡೆ
ತಲುಪಿಯಾನೇ, ಆತುರ ಕಾತುರ
ತಡೆದಾನೇ ಅವನೆಂಬ ಅವನೇ
ಪೂರ್ತಿ ನೀಲಿಯಾದ ಮೇಲೆ?!
 
ಶಿವನ ವೀರಭದ್ರನಂತೆ
ತಾನಲ್ಲದ ತಾನಾಗಿ
ಬಾನು ಭಾನುವ ಸೃಜಿಸುತಾನೆ.
ವಿರಹದುರಿಯೇ ಮೈವೆತ್ತು
ಕುದಿಯುವ ಬೆಂಕಿಚೆಂಡು.
ಅವನೆಲ್ಲ ದಾಹ ಹೊತ್ತ
ಇವನ ಕಣ್ಣ ಬಿಸಿಲಿಗೆ, ಬೆಳಕಿಗೆ
ಹೋ! ಅವಳ ಮೈಮನವೆಲ್ಲಾ ಬೆಳಗು!
 
"ನಾ ಕದಲಿಯೂ ಚಲಿಸಲಾರೆ
ಅದೃಶ್ಯ ಬಂಧನವೆನದು.
ಇಲ್ಲೇ ಇದ್ದು ನಾನಲ್ಲಿಗಿಳಿವಂತೆ
ನೀನವಳ ಬಳಿಸಾರು" ಎಂದಪ್ಪಣೆಗೆ
ಭಾನು ಸಾಗುತಾನೆ ಹುಟ್ಟಿನಿಂದ
ಮುಳುಗುವೆಡೆಗೆ, ಪೂರ್ವದಿಂದ ಪಶ್ಚಿಮಕೆ..
 
ಲೋಕ ಬಾನು-ಭುವಿಯ ಸಂಗಮವೆನುವಲ್ಲಿ
ಅದೇ ಆ ನೀಲಿ ಮೊಗೆಮೊಗೆದು ಕೊಟ್ಟ
ಅವಳ ಕಡಲಿನೊಳಗಿಳಿಯುತಾನೆ ಭಾನು.
ಒಂದಾಗುತಾನೆ,
ಮುಳುಗಿ ತಾನಿಲ್ಲವಾಗುವ ಹೊತ್ತು
ತಾ ತಾನಲ್ಲದೇ ಬಾನುವೇ ಆಗುತಾನೆ.
ಬಾನೀಗ ಶಾಂತ, ತೃಪ್ತ..
 
ಅವಳಿಗೋ ಪಡೆದ ಕ್ಷಣವೇ
ಎಲ್ಲ ಮುಗಿದ ಚಿಂತೆ..
ಬೆಳ್ಳನೆ ಬೆಳಕು ಕತ್ತಲಾದ ಚಿಂತೆ
ಬಣ್ಣದೋಕುಳಿಯೆರಚಿದ ಕ್ಷಿತಿಜವೀಗ
ಕಪ್ಪುಕಪ್ಪು, ಭಾನು ಮುಳುಗಿಯಾಯ್ತು..
ಅವ ನಿಶ್ಚಿಂತ, ನಿರ್ವಿಕಾರ, ನಿರ್ಲಿಪ್ತ..

ಕಡಲು ಮೊರೆಯುತ್ತದೆ..
ಇಷ್ಟು ಕಾದು ಕಾದು
ಒಂದೇ ಕ್ಷಣದ ಮಿಲನವೇ?!
ಬಾನು ನಗುತಾನೆ,
ಮತ್ತೆ ನಾಳೆ ಬರಲಿದೆ,
ಅದೇ ಭಾನು, ಅದೇ ಬೆಳಕು,
ಅದೇ ಬಿಸಿಲು, ಮತ್ತದೇ ಮಿಲನದ
ಇನ್ನೊಂದು ಕ್ಷಣ ಹೊತ್ತು..
 
ಪುನಃ ಅವ ಮೇಲೆ ಹರವಿಕೊಳುತಾ
ಅವಳು ಕೆಳಗೆ ಹರಡಿಕೊಳುತಾ
ಕಾಯುತಾರೆ ಆ ಕ್ಷಣದ ನಾಳೆಗೆ..

**

ಎರಡು ಭೂಖಂಡ
ಪ್ರತ್ಯೇಕ ಹೆಸರು
ಎರಡು ಪರಿಮಿತಿ
ಹವೆ, ಭೂಸ್ಥಿತಿ
ಎರಡು ಆಚಾರವಿಚಾರ
ಎರಡು ಪ್ರತ್ಯೇಕ ಆಕಾರ.
ಈ ಎಲ್ಲ ಎರಡುಗಳ ನಡು
ಒಂದು ಸೀಮೆ, ಒಂದು ಗಡಿ.
ಅಲ್ಲೊಂದು ಇಲ್ಲೊಂದು
ಗಡಿತಾಕಿ ನಿಂತ ಶಿಖರವೆರಡು.
ನಡುವೊಂದು ತೂಗುಯ್ಯಾಲೆ.
ಭೋರೆಂದು ಬೀಸಿದೊಂದು
ಗಾಳಿಯ ರಭಸಕೋ ಲಹರಿಗೋ
ಶಿಖರಾಗ್ರ ಬಾಗಿವೆ ಪರಸ್ಪರರತ್ತ.
ಮಿತಿ ದಾಟುವ ಮುಟ್ಟುವ
ದೂರ ಕ್ಷತಿ ಮಾಡುವಾಸೆ
ಹುಟ್ಟಿದ್ದು ರಭಸಕ್ಕೋ ಲಹರಿಗೋ
ಮತ್ತೆ ಗೊತ್ತಿಲ್ಲ..
ಅದೇ ಗಾಳಿಗೆ ಹುಯ್ದಾಡಿದೆ ಸೇತುವೂ..
ಎರಡು ಉದ್ದ ಹಗ್ಗ, ದೃಢತೆ ಗೊತ್ತಿಲ್ಲ
ಅತ್ತಿತ್ತ ಬೆಸೆದ ಬಿಗುವೂ ಗೊತ್ತಿಲ್ಲ.
ನಡುನಡುವೆ ಮರದ ಪಟ್ಟಿ
ಎಷ್ಟು ಹಳೆಯದೋ ಗೊತ್ತಿಲ್ಲ.
ಶಿಖರವೊಂದು ಹೆಜ್ಜೆ ಬಾಗಿ
ಮತ್ತೆ ನೆಟ್ಟಗಾಗಿದೆ, ಕಣ್ಮುಚ್ಚಿ.
ಇದೀಗ ಸರದಿ ಇನ್ನೊಂದರದು
ಮುಂದಿಟ್ಟು ಹಿಂದಡಿಯಿಡುವದ್ದು..
ಸ್ಪರ್ಶಿಸದೇ, ಕಾಲೂರದೇ
ಗೊತ್ತಿಲ್ಲದ್ದೆಲ್ಲ ಗೊತ್ತುಮಾಡಿಕೊಳಲಾದೀತೇ?
ಹುಯ್ದಾಡೀ, ಆಡೀ ಯತ್ನಿಸಿ
ಸಾಧಿಸಿ ದೄಢವಾಗಿ
ಸಾಗುವುದು ಬಿಟ್ಟು
ಪರಸ್ಪರ ಬಳಿಸಾರುವ ದಾರಿಯಲಿ,
ನಿಂತಲ್ಲೇ ನಿಂತು
ಆರಿದ ಬಾಯಿಗೆ ಭಯವುಣಿಸಿ
ಹಸಿದಾಗ ಸಂಶಯವುಂಡು
ವಕ್ರದೃಷ್ಟಿಗೆ ಕಾಮಾಲೆ ಹಚ್ಚಿದ್ದಕೆ
ಗಾಳಿಕಣಕೊಂದರಂತೆ
ಪ್ರಶ್ನೆಗಳುತ್ಪತ್ತಿಯಾಗಿವೆ..
ಇಷ್ಟೆಲ್ಲ ಮಾಡಿದ್ದು ಶಿಖರಗಳೇ,
ಗಾಳಿಯೇ, ತೂಗುಯ್ಯಾಲೆಯೇ,
ಅಥವಾ ಆ ಬಾಗುವಿಕೆಯೇ?
ಶಿಖರಗಳಿಗೂ ಮನಸಿದೆಯೇ,
ಮನಗಳೊಳಗೆ ಶಿಖರಗಳೇ?
ಶಿಖರ ನಮ್ಮೊಳಗಿದೆಯೇ,
ಶಿಖರದೊಳಗೆ ನಾವೇ?

Monday, September 2, 2013

**

ನೀ ಬಳಿಯಿರದಾಗಿನ ಪ್ರತೀಕ್ಷೆ
ಚಿನ್ನ ಪುಟಕಿಡುವ ಪರೀಕ್ಷೆ.
ಕಾದು, ಕುದಿದು ಗಳಗಳ
ಕಾಲಪಾತ್ರೆ ತುಂಬ ಜೀವಜಲ
ಪ್ರೀತಿ ಮರಳುತಿದೆಯಲ್ಲಿ
ಭಕ್ತಿ ಬೇಯುವ ಕುಲುಮೆಯಲಿ..
ನೂರು ರೂಪ ನೂರು ಜನ್ಮದಲೆಲ್ಲೋ
ಒಮ್ಮೊಮ್ಮೆ ಆಗೋ ಸಾಕ್ಷಾತ್ಕಾರದಲಿ
ಕರಗಿ ಕನಸಾಗಿ ನಿನ್ನಿರುಳಲಿ,
ಹೊಳೆದುಂಗುರವಾಗಿ ಬೆರಳಲಿ
ಕಣ್ಣಲಿ ಗುರ್ತಿಸಿ ಬೆಟ್ಟಲಿ ಧರಿಸಿದ್ದಕೆ
ಬೆಂಬಿಡದೆ ಅದಿನ್ನು ಕಾಡಲಿದೆ ಜೋಕೆ..
ನಾನಿರುವಾಗ ಬರಹದ ನೆಪವಾಗಿ,
ಬರೀ ನೆನಪಾಗುಳಿವಾಗ ವಿರಹವಾಗಿ

**

ಹೊರಗಣ್ಣ ಬೆಂಬತ್ತಿದ ನಡಿಗೆ
ಸೋತು ಕೂತ ಮನಸು
ಎಲ್ಲೂ ಏನೂ ತಾಳೆಯಾಗದೆ
ಮನಸು ತುಂಬಾ ಮುನಿಸು.
ಒಳಗವೆಷ್ಟೋ ಬಿಚ್ಚುಕಂಗಳಿವೆ
ಕಾಲ ಸರಿದಷ್ಟೂ ಚುರುಕಾಗುತಿವೆ
ತೋರಿ, ಕಾಣಿಸುವ ಆಮಿಷವೊಡ್ಡಿವೆ.
ಅಲ್ಲಿ ಮನಸಿನ ಕಾಲ್ಮುರಿದ ಬವಣೆ
ಕ್ಷಣಕೊಂದು ಹೊಸ ನೆಪನಮೂನೆ
ಮೈಮನಸು ಕನಸೆಲ್ಲ ಇಲ್ಲೇ ಬಿಟ್ಟು
ಕೈಗೂಡದ ನಮ್ಮ ಮಿಲನದಾಸೆಯುಟ್ಟು
ಹೋಗಿಬರೋಣವೇ ಒಲವೇ
ಒಂದೇ ಒಂದುಸಲ ಆ ನೆಲಕೆ?
ನನ್ನ ನಾನೆನಿಸಿದ ನಿನ್ನ ನೀನೆನಿಸಿದ
ಆ ಅವೆಲ್ಲವೂ ಕಾಣೆಯಾಗುವ ತಾಣಕೆ?
ನಾ ನೀನೇ ನೀ ನಾನೇ
ಅನಿಸುವ ದರ್ಪಣವಿದೆಯಂತೆ.
ಮೆಚ್ಚಿದ್ದು ಮೆಚ್ಚದ್ದೆಲ್ಲ ಅಪ್ರಯತ್ನ
ಸವಿಯೆನಿಸುವ ದರ್ಶನವಿದೆಯಂತೆ.

Saturday, August 31, 2013

ಭಿನ್ನವಾದೀತೇ ಈ ರಾತ್ರಿ?!

ಭಿನ್ನವಾದೀತೇ ಈ ರಾತ್ರಿ?!
----------------------
ಮತ್ತದೇ ರಾತ್ರಿ, ಮತ್ತದೇ ಕತ್ತಲು
ಮತ್ತದೇ ಮೌನ, ಮತ್ತದೇ ಒಗಟು
ಎಲ್ಲಾ ನಿನ್ನೆಯಂತೆಯೇ..
ಅದರಿಂದೊಂದು ಕರಿಮೋಡದಂಚಿನ
ಮಿಂಚಿನೆಳೆಯಂತೆ ಆಸೆ..
ಅಂದಿನಂತೆ ಇಂದೂ ಎಲ್ಲೋ
ಮತ್ತೊಂದು ಜನನವಾದೀತೇ?!
ಒಂದೇ ಆಗಿ ಹರಿಯುತಿರುವ
ಕಾಲಪ್ರವಾಹವಿಂದು
ಮತ್ತೆ ಚಮತ್ಕಾರದಂತೆ
ಸರಿತಪ್ಪುಗಳೆರಡಾಗಿ ಸೀಳಿ
ನಡುವೊಂದು ಪಥ ನಿರ್ಮಿಸಿ
ಪ್ರೇಮದೊಂದು ಹೊಸವ್ಯಾಖ್ಯಾನವ
ಲೋಕನಂದನಕೆ ಒಯ್ದು ಕೊಟ್ಟೀತೇ?!
ತಾಯ್ತನದ ಅಪೇಕ್ಷೆಯೊಂದಕೆ ಅನಿರೀಕ್ಷಿತ
ತೃಪ್ತಿಯೊಂದು ಮಗ್ಗುಲಲಿ
ರಾತ್ರಿಯುಡುಗೊರೆಯಾಗಿ ಬಂದೀತೇ?!
ಬಂಧಸಂಬಂಧ, ಮೋಹಸ್ನೇಹಗಳು,
ಭಕ್ತಿಪ್ರೀತಿ, ಪ್ರೇಮ, ನಿಷ್ಕಾಮಕರ್ಮಗಳು
ಮೂಲರೂಪದಿ ನೈಜತೆಯುಟ್ಟು
ಆ ಜನನೋತ್ಸವಕೆ ಧರೆಗಿಳಿದು ಬಂದಾವೇ?!
ಮನಸೋತಿಲ್ಲಿ ಮನೆಮಾಡಿಯಾವೇ?!
ಅವ.. ಅವನೇ ಆವತಾರನಾದಾನೇ ಮತ್ತೆ?!
ಕೈಕಟ್ಟಿ ಬಾಯ್ಮುಚ್ಚಿ ಅವ ಕೂತ ಭೂತಕಾಲ
ಮಿತಿಮೀರಿದ ಕೆಡುಕು ಹೆತ್ತ ವರ್ತಮಾನ ದಾಟಿ
ಮತ್ತದೇ ಅವನ ಲೀಲೆಗಳ ನಾಳೆಗಡಿಯಿಟ್ಟೀತೇ?!

**

ಸುಳ್ಳೆಂದರೆ ಸುಳ್ಳಾಗಿಯೇ
ನಿಜವೆಂದರೆ ನಿಜವಾಗಿಯೇ
ಒಲ್ಲೆನೆನುವವರಿಗೂ ಒಪ್ಪುವವರಿಗೂ
ಒಂದೇ ಸಮ ಒದಗಬಲ್ಲ
ಬಯ್ಗುಳದಲೋ ಕೀರ್ತನೆಯಲೋ
ಸದಾ ತಾನಡಗಿ ಕೂರುತಾ
ಇಲ್ಲವೆಂದರೆ ಇಲ್ಲವಾಗುತಾ
ಇದ್ದೀಯೆಂದರೆ ಅರಿವಿಗಿಳಿಯುತಾ
ನೆನೆವ ಮನದಲಿ ನಗುತಾ
ನೆನೆಯದವಗೆ ಬೆಂಗಾವಲಾಗಿರುತಾ
ಕಳ್ಳತನ ಸುಳ್ಳುಗಳ ತಾ ಹೊಕ್ಕು
ಅಲ್ಲದ್ದ ಮಾಡಲೆಳಸುವರ ಇತ್ತ ಎಳೆಯುತಾ
ತನ್ನ ದಾಸರದೂ ದಾಸರಲ್ಲದವರದೂ
ದಾಸನಾಗಿ ಒಡೆಯನಾಗಿ
ಕಂದನಾಗಿ ಅಪ್ಪನಾಗಿ
ಅಣ್ಣನಾಗಿ ಸಖನಾಗಿ
ಸರ್ವಸಮರ್ಪಣೆಯೊಂದು ಆದರ್ಶವಾಗುತಾ
ಇಲ್ಲ ಅನಿಸಿದ ಕ್ಷಣ ವ್ಯಕ್ತವಾಗುತಾ
ಮರೆವಿಗೆಂದೂ ವಶವಾಗದ
ಸದಾ ಹಸಿರು ವ್ಯಕ್ತಿತ್ವವೊಂದರ
ಘನತೆಗೆ ಆಪ್ತತೆಗೆ ಆತ್ಮೀಯತೆಗೆ
ದಿನದಿಂದ ದಿನಕೆ ಆಕರ್ಷಿಸುತಲೇ ಸಾಗುವ
ಚಂದಕೆ ಹುಟ್ಟುಹಬ್ಬದ ಸಂಭ್ರಮವಂತೆ
ನೆರಳಿಗೂ ಮೀರಿ ಜೊತೆಯಿತ್ತ
ಋಣವವನದು, ನಾವೇನು ಕೊಡಬಹುದು?
ಹಣೆಗೂ ಪಾದಕೂ ಒಂದೊಂದು ಮುತ್ತು
ಹೆಜ್ಜೆಹೆಜ್ಜೆಗೂ ನೆನೆದು ಸುಖದ ಭಾಷ್ಪಬಿಂದು
ಒಂದಿಷ್ಟು ಚಕ್ಕುಲಿ, ಒಂದಿಷ್ಟು ಉಂಡೆ,
ಪಂಚಕಜ್ಜಾಯದವಲಕ್ಕಿ, ಒಂದಿಷ್ಟು ಬೆಣ್ಣೆ..
ಕರ್ಷತೇತಿ ಇತಿ ಕೃಷ್ಣಃ
ಕೃಷ್ಣಾಯತುಭ್ಯಂ ನಮಃ

Tuesday, August 27, 2013

**

ಕಣ್ಣು ವಿಹಂಗಮಕೆ ನೆಟ್ಟದ್ದೇ
ತಪ್ಪೆನುವಂತೆ ರೆಕ್ಕೆ ಮುರಿದೊಂದು ಹಕ್ಕಿ.
ಊರಲ್ಲದೊಂದೂರಿಗೆ ವಲಸೆಯ ಸ್ವಪ್ನಜಾಲ
ನಡೆವ ಕಾಲ್ಬೆರಳು ಸಿಕ್ಕಿಬಿದ್ದು
ರೆಕ್ಕೆಗೆ ಚಾಲನೆ ಜಾಲ ಸಮೇತ.
ಇದ್ದ ಶಕ್ತಿಯೆಲ್ಲಾ ಹೊರದಬ್ಬಿ
ನೆಲದ ಕಾಳ ಸೆಳೆತ ಮೀರಿ
ಇತ್ತೋ ಇಲ್ಲವೋ ಇದ್ದಂತನಿಸಿದ
ನೆಲಬಿಟ್ಟ ನೆಲೆಯ ಸೆಳೆತಕೆ ಶರಣಾಗಿ..
ಕಂಡ ಕ್ಷಣ, ಸೆಳೆದ ಕ್ಷಣ
ಅದು ನಂಬಿಸಿ ಇದು ನಂಬಿದ ಕ್ಷಣ,
ಮತ್ತದು ನಿಲುಕಿತೆನಿಸಿದ ಕ್ಷಣವಷ್ಟೇ ದಕ್ಕಿದ್ದು,
ತನ್ನದೆನುವದೇನೋ ಹರಿದು ಚಿಂದಿ..
ನೆಲವಲ್ಲದ ನೆಲೆ ಗಾಳಿಗುದುರೆಯ ಬೆನ್ನೇರಿ
ದೂರ ದೂರ ವಿಹಂಗಮ, ಕ್ಷಿತಿಜದತ್ತ..
ಕಾಲ್ಬೆರಳು ನಡೆಯಗೊಡದೀಗ,
ಹರಿದ ರೆಕ್ಕೆ ಹಾರಗೊಡದು..
ಹಕ್ಕಿ ಕಾದೇ ಕಾದಿದೆ ಹಾರಲಿಕಾದರೂ ಹೌದು,
ಮತ್ತೆ ಹಾರುಹಕ್ಕಿಯಲ್ಲ, ಅದಲ್ಲಿಲ್ಲವೆನಿಸಲಿಕೆ
ಇನ್ನಿಲ್ಲವೆನಿಸಲಿಕಾದರೂ ಹೌದು...
ಇನ್ನೊಮ್ಮೊಮ್ಮೆ ಅದು ಹೀಗಂದಂತಿದೆ..
ರೆಕ್ಕೆ ಮುರಿದರೇನು, ಇನ್ನೊಂದಿದೆ ಹರಿಯಲಿಕೆ,
ಅದೂ ಮುರಿದ ಕ್ಷಣ ಇನ್ನೂ
ಹಕ್ಕಿಯದೆಂಬ ಹೃದಯವೊಂದಿದೆ
ಮತ್ತೆ ನೆಟ್ಟಿವೆ ಕಣ್ಣು ವಿಹಂಗಮಕೆ
ಇನ್ಯಾವುದೋ ಒಂದೆಡೆಯ ವಲಸೆ,
ಮತ್ತದರ ಸ್ವಪ್ನಜಾಲಕೆ...
ಬಂಧಿಸುವ ಜಾಲವೇ ಹೌದು,
ಆದರೆ ಕನಸಿಲ್ಲದೇ ಬದುಕಿಲ್ಲ,
ಕನಸಲ್ಲದ ಬದುಕಿಲ್ಲ...

Monday, August 26, 2013

ಮಡಿ ಮಾಡುವುದು

ಮಡಿ ಮಾಡಲೆತ್ತಿರಿಸಿದ ಬಟ್ಟೆರಾಶಿ
ಕೊಳೆಯಾದದ್ದು, ಕಲೆಯಾದದ್ದು,
ಬೆವರು ಹತ್ತಿಸಿಕೊಂಡದ್ದು,
ಮಡಿಚಿಡದೆ ಮುದ್ದೆಯಾದದ್ದು,
ಶುದ್ಧವಾಗಬೇಕಾದದ್ದೆಲ್ಲ
ಕೋಣೆಯ ಮೂಲೆಯಲೊಂದು
ತುಂಬಿತುಳುಕುವ ಚೀಲದಲ್ಲಿ..
ನಾನದರ ಗುಂಗಲ್ಲಿ..
ತೊಳೆಯಬೇಕಿದೆ ನಾನೇ,
ಆಳು ಮಾಡುವ ಕೆಲಸ ಹಾಳು.
ತಿಕ್ಕಿ ಒಗೆದೂ ಕಲೆಬಿಡದವನೆಲ್ಲ
ಉಡಲಿಕ್ಕಲ್ಲ, ನೆಲ ಒರೆಸಲಿಡಬೇಕು,
ಶುಭ್ರವಾದವ ಮಡಿಚಿ
ಒಳಗೆತ್ತಿ ಇಡಬೇಕು..
 ಒಳಗೆಲ್ಲೋ ದೊಡ್ಡ ಮನೆಯಂಥ ಮನ
ಹಲವು ಕೋಣೆ, ಉದ್ದಗಲವಲ್ಲ ಸಮಾನ
ಅಗತ್ಯದ್ದು, ಅಗತ್ಯವಿಲ್ಲದ್ದು
ಗಾಳಿಬೆಳಕಾಡುವವು, ಕಡುಕತ್ತಲೆಯವು
ಸದಾ ಗಿಜಿಗಿಜಿ ಕೆಲವು, ಸತ್ತಂತೆ ನೀರವ ಕೆಲವು
ಜಡಿದ ಬೀಗದವು, ಗುಡಿಸಿ ಒರೆಸದೆ ರಾಡಿ..
ಹಜಾರ ಪಡಸಾಲೆಗಳಿವೆ, ಗ್ರಾಸಕೇರ್ಪಾಟಿದೆ..
ತೊಳೆವ ಜಾಗವೊಂದಂಗುಲವೂ ಇಲ್ಲ..
ಪ್ರತೀ ಕೋಣೆಯೊಂದು ಮೂಲೆಯಲೊಂದು
ಚೀಲ, ತುಂಬಿ ತುಳುಕುವದ್ದು
ಈಗಿದು ನೋಡು ಕ್ಲುಪ್ತ ಸಮಯ,
ನಾಕು ಗೋಡೆ ಒಂದು ಬಾಗಿಲ
ಮಡಿಕೋಣೆಗಿಡಬೇಕು ಅಡಿಪಾಯ..
ಕೊಳೆಯಾದ, ಕಲೆಯಾದ,
ಶುದ್ಧಿ ಬೇಡುವ ಭಾವವನಲ್ಲಿ
ತೊಳೆದು, ಜಾಲಾಡಿ, ಹರವಿ ನೋಡಿ
ಕಲೆ-ಕೊಳೆ ಬಿಟ್ಟವನಷ್ಟೇ ಒಯ್ದೆತ್ತಿರಿಸಿ ಜೋಪಾನ
ತಿಳಿಯಾಗದ್ದ ತೊರೆದು, ಬಿಟ್ಟು ಅನುಮಾನ..
 
 
 
 
 
 

Sunday, August 25, 2013

ಮುತ್ತು ಮಾತಾಡಿದ್ದು

"ಅದೇ ಅದೇ" ಅನ್ನುತ್ತಾ ಕಣ್ಣಲಿ
ನೂರು ಮಿಂಚರಳಿಸಿ ನಕ್ಕವನ
ಸುಮ್ಮನೇ ಕೇಳಿದೆ
, "ಅದಲ್ಲದಿದ್ದರೆ?!"
ಮಿಂಚು ಸಣ್ಣಗೆ ಗುಡುಗಾಯ್ತು
ಗುಡುಗು ಸೋನೆ ಮಳೆಯಾಯ್ತು
ತಾಕಿ ನೀರಾಗಿಸುವ ಗುಡ್ಡ ಅವನೆಂದಿದ್ದೆ
ನೀರಾಗುವ ಮೋಡವೆಂದರಿವಾದದ್ದೇ
ಮನವೀಗ ನವಿಲು
, ರೆಕ್ಕೆಬಿಚ್ಚಿ
ಒಂದೊಂದು ಕಣ್ಣಲೂ ಒಂದೊಂದು ನೋಟ
ಅಷ್ಟೇ ಭಾವ, ಅಷ್ಟೇ ಪುಳಕ...
ಗುಡುಗಿ ಸುರಿದುದಕೆ ಅವನು
ಅಡಗಿ ನೆನೆದುದಕೆ ನಾನು
ನವಿಲ ಹೆಜ್ಜೆ ತೊಟ್ಟಿದೆ ಗೆಜ್ಜೆ
..
ಕೊರಳೆತ್ತಿ ಬಿಂಕದಿ ಹಾಡಿ
ನಲಿವ ಹೆಜ್ಜೆಗುರುತೆಲ್ಲಾ
ಹಿತವಾದ ಸವಿಮಾತು
.
ಮಾತು ಹುಟ್ಟಿಸಿವೆ ಮುತ್ತು.
ಹಣೆ ಕತ್ತು ಕಿವಿ ಕೈಯ್ಯಲಂಕರಿಸಿ
ಮುತ್ತು ಮಾತಾಡಿದೆ
, ಕೂಗಿ ಹೇಳಿದೆ
"ಅವ ಹೇಳಿದ್ದು ಸರಿ
ಅದು ಅದೇ, ಈಗಿಬ್ಬರೂ ಸುಮ್ಮನಿರಿ..."  
 
 
 
 
 
 

Saturday, August 24, 2013

**

ಅವ ಕೇಳುತಾನೆ, ಅವಳನ್ನುತಾಳೆ..
--------------------------
"
ನೀನೇಕೆ ಸುರಿಯಲೊಲ್ಲೆ? "
ಅವ ಕೇಳುತಾನೆ, ಅವಳನ್ನುತಾಳೆ..
"
ಮೋಡವಲ್ಲ ನಾನು, ಹೊತ್ತಿಲ್ಲ ಬಾನು,
ಕಾದು ಕೆಳಗೆ ಹರಡಿಕೊಂಡಿಲ್ಲ ನೀನು"

"
ನೀನೇಕೆ ಹರಿಯಲೊಲ್ಲೆ?"
ಅವ ಕೇಳುತಾನೆ, ಅವಳನ್ನುತಾಳೆ..
"
ನದಿಯಲ್ಲ , ಹರಿವು ಹುಟ್ಟಿಸುವ ದಂಡೆಗಳಿಲ್ಲ ...
ಕೈಯ್ಯಗಲಿಸಿ ಕರೆಯುವ ಸಾಗರವಲ್ಲ ನೀನು"

"
ನೀನೇಕೆ ಕರೆಯಲೊಲ್ಲೆ?"
ಅವ ಕೇಳುತಾನೆ, ಅವಳನ್ನುತಾಳೆ..
"
ನಾ ಕೋಗಿಲೆಯೇನು? ಮೂಕ ಕಂಠವೆನದು
ವಸಂತನಲ್ಲ, ಮಾವು ಚಿಗುರಿಸಿಟ್ಟಿಲ್ಲ ನೀನು"

"
ನೀನೇಕೆ ಅರ್ಥೈಸಲೊಲ್ಲೆ?"
ಅವ ಕೇಳುತಾನೆ; ಅವಳನ್ನುತಾಳೆ..
"
ನಾ ಶಂಖವಲ್ಲ, ಒಳಗೆ ತೀರ್ಥವಿಲ್ಲ
ರಕ್ತದ ಭಾಷೆ, ಧಾಟಿಗಳನರಿತಿಲ್ಲ ನೀನು"

"
ನೀನೇಕೆ ಮರೆಯಲೊಲ್ಲೆ?"
ಅವ ಕೇಳುತಾನೆ; ಅವಳನ್ನುತಾಳೆ..
"
ನಾನಲ್ಲ, ಉಸಿರು ನೆನಪ ಜತನ ಮಾಡಿಟ್ಟಿರುವುದು
ಅದೇ ಉಸಿರ ಆಧರಿಸಿ ಜೀವಂತ ನಾನು"

**

ಉತ್ತರ ಗೊತ್ತಿದ್ದ ಪ್ರಶ್ನೆಗಳವು,
ಉತ್ತರ ಮರೆತ ಪ್ರಶ್ನೆಗಳವು,
ಉತ್ತರ ಗೊತ್ತಿರದ ಪ್ರಶ್ನೆಗಳವು..
ಹೀಗೇ ಪ್ರಶ್ನೆಗುತ್ತರ ಬಯಸುವವು
ಬಂದು, ಬಂದಂತೆ ಹೋದವೆಷ್ಟೋ ಪರೀಕ್ಷೆಗಳು..
ಕೆಲವು ಮುನ್ನಡೆಸುವ,
ಕೆಲವು ನಿಂತಲ್ಲೇ ಹುದುಗಿಸುವ,
ಇನ್ನೂ ಕೆಲವು ಸಾಗಿಬಂದ ಹಾದಿಯ
ಮೊದಲ ಬಿಂದುಗೊಯ್ದುಬಿಟ್ಟವುಗಳು...
ಇದೆಂಥಹುದೋ
ಜೀವವೇ?!
ಪ್ರಶ್ನೆಗಳೇ ಇಲ್ಲದ ಬರೀ ಉತ್ತರಗಳ ಸಾಮ್ರಾಜ್ಯ.
ಕಾರಣ, ಸಮಜಾಯಿಷಿ,
ತಪ್ಪೊಪ್ಪಿಗೆ, ಸಾಕ್ಷಿಪುರಾವೆ,
ಅರೋಪ-ಪ್ರತ್ಯಾರೋಪಗಳೆಂಬ
ಉತ್ತರಗಳೆಲ್ಲಾ ಭೂತಗನ್ನಡಿ ಹಿಡಿದು..
ಭರದಿ ಹುಡುಕಾಡುವಾಗ
ಪ್ರಶ್ನೆ ಹೆದರಿ ಭೂಗತ.
ಸುತ್ತಿ ಸವೆದು ಕುಸಿದುಕೂತಿವೆ ಉತ್ತರಗಳು.
ಗೊಂದಲ; ಪ್ರಶ್ನೆಯಂತನಿಸಿದಾಗ ತಮದೇ ನೆರಳು
ಅದಲುಬದಲಾದ ಪಾತ್ರಗಳಲಿ
ಒಂದಕೆ ಮುಖತಪ್ಪಿಸುವ ಗೋಳು..
ಉಳಿದುದಕೆ ಮುಗಿಯದ ಪರೀಕ್ಷೆ ಬಾಳು..

Friday, August 23, 2013

ಮುಂದುವರಿಸುವುದೂ, ನಿಲಿಸುವುದೂ..

ಎಷ್ಟೆಲ್ಲ ಮಾಡಬೇಕು ಹಾಗೇ
ಮಾಡುತಿರುವದನು ಮುಂದುವರಿಸುವುದಕೆ!
ನೋಡಿ ನೂರುನೋಟ ಒಂದು ಸೆಳೆದಾಗ
ಅರಿವ ನೆಲದಾಳಕೊಂದು ಕುಳಿ ತೋಡಿ,
ಬಿತ್ತ ಮಾಡಿ ಬಿತ್ತಬೇಕು, ಕಾಯಬೇಕು.
ಅನುಭವವೆರೆದು, ಜ್ಞಾನಸೂರ್ಯಗೊಡ್ಡಿ
ಭಾವಫಲಕೆ ಮತ್ತೆ ಕಾಯಬೇಕು
ಫಲ ಕುಯ್ದು ಅಕ್ಕರಗಳೊಳಗಿಟ್ಟು
ಮತ್ತೆ ಕಾಯಬೇಕು ಕಾವಿಗೆ ಮಾಗಲು.
ಫಲ ತಾನುಂಡು ಮೆಲುಕು ಹಾಕುತಿರಬೇಕು..
ರುಚಿ ಪಸರಿಸಿ ಅಕ್ಕರದೆದೆಯೊಳಗದು
ಸಂಸ್ಕರಿತ, ಮಧುಭರಿತ ಮತ್ತಾಕರ್ಷಕ...
ಸುಪುಷ್ಟವಾದವನೆತ್ತಿ ಶಬ್ಧ ಪೋಣಿಸಬೇಕು
ಶಬ್ಧ ಬರೀ ಚಂದದವನಲ್ಲ; ಸಬಲವಾದವನೆತ್ತಿ
ಅಕ್ಕಪಕ್ಕ ಹೊಂದಿಕೊಂಡು ತಾಳಿಕೊಂಡು
ಜಯಿಸಬಲ್ಲುವ ಸಾಲು ನಿಲ್ಲಿಸಬೇಕು
ಪ್ರಶ್ನೆ, ಅಲ್ಪವಿರಾಮ, ಆಶ್ಚರ್ಯಸೂಚನೆ
ವಿರಾಮಗಳೊಳಗೆ ನಿವೇದನೆಯಿಡಬೇಕು
ಒಂದು ಹೆಚ್ಚಾದರಜೀರ್ಣ,
ಕಮ್ಮಿಯಾದರದು ಅಪೂರ್ಣ...
ಅಕ್ಕರ ಶಬ್ಧ ಸಾಲುಗಳ ನಡುವೆ
ತನ್ನತನ ಮೊಗೆಮೊಗೆದು ತುಂಬಬೇಕು
ಅದಕಲ್ಲಿಗೆ ತನ್ನನೇ ಒಡ್ಡಿಕೊಳಬೇಕು...
ಇಷ್ಟೆಲ್ಲಾ ಆದಾಗ ಮುಂದುವರಿವುದಾದೀತು..
ಆದರೆ ನೋಡು ಜೀವವೇ,
ನಿಲ್ಲಿಸಲಿಕಿನ್ನೇನೂ ಬೇಡ; ಸಾಕೆನಿಸಿದಲ್ಲಿ
ಬಿಂದುವೊಂದಿಕ್ಕಿ ಸುಮ್ಮನಿದ್ದುಬಿಟ್ಟರಾಯಿತು.

Thursday, August 22, 2013

ಸ್ವಲ್ಪ ಅವನಳಲೂ ಕೇಳಿ...

ದಾಟಿ ಬಾರೆಯಾ ರಾಧೆ ಎಲ್ಲ ಎಲ್ಲೆ
ಅರಳಿಸಲು ನನ್ನೆದೆಯ ಮೊಗ್ಗುಮಲ್ಲೆ
 
ಕಾಯುತಿರುವುದು ನೀನು
ಕಾಣುವ ದೇಹವಂಟಿಸಿ
ನಾ ನಡೆದ ಹಾದಿಗೆ
ಲೋಕವೆಂದಿಗೂ ವಿರಹಿ ನಿನ್ನ ಪರವೇ
 
ಬೇಯುತಿರುವುದು ನಾನು
ಕಾಣದೆನ್ನ ಮನವ ಕಾಯಿಸಿ
ನೀನಿರದ ಉರಿಗೆ..
ಲೋಕದರಿವಿಗೆ ನಿನ್ನ ಕಾಯಿಸುವ ಪಾಪಿ ನಾನೇ..
 
ನೂರು ಕಾರ್ಯಕಾರಣ
ಗಮನಿಸಲಾಗಿಲ್ಲ;
ನನಗಪರಿಚಿತ ಇತ್ತೀಚೆಗೆ
ನನ್ನದೇ ಮನ.
 
ಮುಚ್ಚಿರುವೆ ಮೇಲೊಂದು
ಉಪೇಕ್ಷೆಯ ಕಲ್ಲುಚಪ್ಪಡಿ;
ಕಾಣುತಿಲ್ಲವಾದರೂ ಗೋರಿಯಂತೆ
ಮಲಗಿರಬಹುದಲ್ಲಿ ಸಾವೇ, ಸದ್ದಿಲ್ಲದಂತೆ.
 
ಅತ್ತೆ ಮಕ್ಕಳ, ಅವರ ಮಡದಿಯ
ಸಂಧಾನದ, ಯುದ್ಧವಿಧಾನದ
ವಿದುರನಾತಿಥ್ಯದ
ಅಳಿಯನಳಿವಿನ
ಕರ್ಣನನೊಲಿಸುವ
ಪಾಪ ತೊಲಗಿಸುವ
ಹೀಗೇ ಕರೆವ ನೂರುಕರೆಗಳಬ್ಬರದಲಿ
ನುಡಿಸಿದರೂ ಕೊಳಲು ನುಡಿಯುತಿಲ್ಲ..
ಭಯವೆನಗೆ, ಮರೆತೇ ಬಿಟ್ಟೇನು...
 
ಅಭಯ, ಆಶ್ವಾಸನೆ,
ಆಣೆ, ಅಪ್ಪಣೆ,
ಭರವಸೆ, ಒತ್ತಾಸೆ,
ಒತ್ತಾಯ, ಉಪಾಯ
ಗುಟ್ಟುಬಯಲು, ಮತ್ತೆ ಕೆಲಸುಳ್ಳು
ಹೀಗೇ ನೂರುಮಾತಿನ ಭರಾಟೆಗೆ
ಸವಿ ಗುರುತಿಸುತಿಲ್ಲ ನಾಲಿಗೆ
ಬೆಣ್ಣೆ ಬೆಣ್ಣೆಯೆನಿಸುತಿಲ್ಲ ಅದಕೆ
ಭಯವೆನಗೆ ಮರೆತಿರುವೆನೇ ನಾನು?
 
ಬಿತ್ತಲ್ಲಿ ಬಂದಿರುವೆ ಆಸೆಬೀಜ
ಮತ್ತೆ ಕೊಳಲೂದುವುದಕೆ
ಕದ್ದುಮುಚ್ಚಿ ಬೆಣ್ಣೆ ಸವಿಯುಣುವುದಕೆ
ಕಣ್ಮುಚ್ಚಿ ಅಂದ ಸವಿವುದಕೆ
ಮುಟ್ಟದೆಯೇ ಅನುಭವಿಸಲಿಕೆ
ಆಡದೆಯೇ ವರ್ಣಿಸಲಿಕೆ
ಮಾತಿರದ ಅನುಭೂತಿಯಲೆಲ್ಲ
ಕ್ಷಣ ತುಂಬಲಿಕೆ..
 
ನೀರುಣಿಸುತಿರು ನೀನು
ಅದು ಮೊಳೆತು ಬೆಳೆಯಲಿ
ನಾ ಮರೆತರೂ ಆಗೊಮ್ಮೆ
ಕೊಳಲೂದುವುದು, ಬೆಣ್ಣೆಯುಣುವುದು
ಮತ್ತಿನ್ನೇನೋ ಎಲ್ಲ,
ಕಲಿಸಬೇಕು ನೋಡು ನೀ ಮತ್ತೆ
 
ಖಾಲಿ ಕಾಯುತಲೇ ಕೂರದಿರು
ಮೆಲುಕು ಹಾಕುತಿರು
ಜಾರದಿರಲಿ ನಮ್ಮ ಆ ಹೊತ್ತು
ನಿನ್ನ ಈ ಹೊತ್ತಿನ ಮರೆವಿನಾಳಕೆ..
ಕರ್ತವ್ಯದೊಳಗಿದ್ದರೂ ನಾನು
ಕಾಯುತಿರುವುದು ಬರೀ ಆ ಮಿಲನಕೆ...
 
 

ಕಾಲನಿಗೊಂದು ಶರತ್ತು

ಅಮ್ಮ ಹೇಳುತಾಳೆ
"ಇನ್ನಿರಬಾರದು ಕಂದಾ.."
ಅಪ್ಪ ಹೇಳುತಾರೆ
"ತಟ್ಟಂತ ಬಿದ್ ಹೋಗಬೇಕು ಕಣೋ.." 
"
ಸುಮ್ಮನಿರಮ್ಮಾ... " ಗದರುತ್ತಿದ್ದ ದನಿಯಿಂದೇಕೋ ಮೌನ..
 
ಕ್ಷಣಭಂಗುರದ ಜೀವನದ
ಏರುಹಾದಿಯಲಿ ಆ ಕರುಳಕುಡಿ
ಸಾವಿನರಮನೆಯ ಹೊಸ್ತಿಲ
ಕಾಲಿಗಂಟಿಸಿಕೊಂಡು ತಿರುಗುತ್ತಿದ್ದಾನೆ
ಗಳಿಗೆಕೂಡಿದ ಹೊತ್ತು
ಒಳಗಡಿಯಿಡಲು..
 
ಕಿತ್ತು ತಿನ್ನುವ ನೋವಲೂ ಅಮ್ಮಗನುತಾನೆ,
"
ಮೊಮ್ಮಗುವಿಗೆ ಎಣ್ಣೆಸ್ನಾನಕ್ಯಾರು ಗತಿಯೇ ಅಮ್ಮಾ?"ಸವೆಯುತಿರುವ ಜೀವನಪ್ರೀತಿಯಲೂ ಅಪ್ಪಗನುತಾನೆ
"ಅಕ್ಷರಾಭ್ಯಾಸಕ್ಯಾರ ಕರೆಯಲೋ ಅಪ್ಪಾ?" 
ಹೆಣ್ಣು ಹುಡುಕಿ ಸೋತ ಕಂಗಳು ಪ್ರಶ್ನೆಯಾಗುತ್ತವೆ..
"
ಹೆಣ್ಣೊಂದನೂ ಒಪ್ಪದೇ ಮೊಮ್ಮಗುವಿನ ಕನಸೇ?ಬರೀ ನಿರಾಕರಿಸುವ ಕೈಗಳಿಗೆ ತಾಳಿ ಕಟ್ಟುವ ಕನಸೇ?"
ಮತ್ತೆ ಭರದಿಂದ ಚಾಳೀಸುಟ್ಟುಕೊಂಡು
ಜಾತಕದ ಪಿಂಡಿಯೊಳಗಲೆಯುತ್ತವೆ..
 
ಕದ್ದುಮುಚ್ಚಿ ಉಣ್ಣುವ ಮಾತ್ರೆಯೂಟಕೆ
ಉಬ್ಬರಿಸಿದ ಹೊಟ್ಟೆಗಿಂದು ಅಮ್ಮ ಬಡಿಸಿದ್ದೆಲ್ಲ ತುರುಕುತಾನೆ..
ಕಣ್ಬಿಡಲಾಗದ ಸಂಕಟದಲೂ
ಅಪ್ಪಗೆ ನಗೆಬುಗ್ಗೆಯೋದಿ ನಗಿಸುತಾನೆ..
ನಾಳೆ ಖಚಿತವಿಲ್ಲ ಅವಗೆ..ಯಾರಿಗ್ಗೊತ್ತು,
ಅಸ್ತು ದೇವತೆ ಈ ಮನೆಯಲೇ ಇದ್ದರೆ!?
 
ಅಪ್ಪ ಸವೆದ ಮೆಟ್ಟುಟ್ಟು ಕಾಲೆಳೆದ ನಡಿಗೆಯಲಿ
ಮಗನ ಭುಜದಾಸರೆಯ ಭರವಸೆ,
ಅಮ್ಮನ ನಡುಗುಕೈ ತೆಗೆದ ಕಾಯಿಹಾಲಲಿ
ಮಗ ಒತ್ತುಶ್ಯಾವಿಗೆಯೊತ್ತಿಕೊಡುವ ಒತ್ತಾಸೆ,
ಕಂಡು, ಕಾಣಿಸದಂತೆ ಕಣ್ಣೀರಾಗುತಾನೆ
ನಗೆಯ ಧಿರಿಸುಡುತಾನೆ..
 
ಕಾಲನ ಬೇಡುತಾನೆ..
"
ಬಂದು ಬಿಡೋ ಈಗ ನನ್ನೆಡೆಗೆ..ನೋವು ತಯಾರಾಗಿಸಿದೆ,
ಪ್ರತಿಭಟಿಸದೆ, ಎದುರಾಡದೆ,
ಹೋರಾಡದೆ, ಲೋಕಕಂಟಿದೆಲ್ಲ
ನಂಟಿನಂಟು ಕಿತ್ತು ನಾನೇ
ನಗುತ ಕೊರಳೊಡ್ಡುವೆ ಕುಣಿಕೆಗೆ
ವರನೊಡ್ಡಿದಂತೆ ಕತ್ತವಳ ಹಾರಕೆ..
ಆದರೊಂದು ಶರತ್ತು..
ಒಂದೇ ಒಂದು ಕ್ಷಣ ಮೊದಲು
ಇವರನೊಯ್ಯಬೇಕು ನೋಡು ನೀನು.."

**

ಅಲ್ಲಿಲ್ಲಿನ ಶಬ್ಧಕೆ ಹೆದರಿ ಮುದುರುವುದೇಕೆ?
ನಿನ್ನೊಳಗೆ ಸ್ಥೈರ್ಯ ಶಂಖವೂದಿರುವಾಗ!
 
ತೆವಳುವಂತೆಯೇ ಕಾಣಿಸಲಿ ಜಗಕೆ
ಸಾಗುವುದು, ಸಾಗುತಿರುವುದು ಮುಖ್ಯ ನಿನಗೆ..
 
ಅಡಗಿದಂತೆಯೇ ಕಾಣಿಸಲಿ ಜಗಕೆ
ವ್ಯಕ್ತವಾಗುವುದು, ಅರ್ಥವಾಗುವುದು ಮುಖ್ಯ ನಿನಗೆ..
 
ಗುರಿ ಹಾಸ್ಯಾಸ್ಪದವೆನಿಸಲಿ ಜಗಕೆ
ತಲುಪುವುದು, ಸ್ಪರ್ಶಿಸುವುದು ಮುಖ್ಯ ನಿನಗೆ
 ಸತ್ವಹೀನ ಒಳಗೆನಿಸಲಿ ಜಗಕೆ
ಒಡೆಯದುಳಿವುದು ಗಟ್ಟಿಯುಳಿವುದು ಮುಖ್ಯ ನಿನಗೆ
 ಅಭಿವ್ಯಕ್ತಿ ಪೊಳ್ಳೇ ಅನಿಸಲಿ ಜಗಕೆ
ತೆರೆದುಕೊಳುವುದು, ಒಳಗೊಳುವುದು ಮುಖ್ಯ ನಿನಗೆ
 ನೀ ಸುಳ್ಳೇ ಅನಿಸಲಿ ಜಗಕೆ,
ಟೊಳ್ಳಾಗದಿರುವುದು ಜೊಳ್ಳಾಗದಿರುವುದು ಮುಖ್ಯ ನಿನಗೆ

ನಿನ್ನೆ ಇಂದಾದಾಗ

ತುಂಬುಚಂದ್ರಗೂ ನನಗೂ
ನಡುವೊಂದು ತಾಳೆಗರಿ
ಅವ ತುಂಡುತುಂಡಾದಂತೆ...
 
ಕಪ್ಪುಆಗಸದಲ್ಲಿ ಬೆಳ್ಳಿಚುಕ್ಕಿ
ಒಂಟಿತನದ ಹತಾಶೆಯಲಿ
ಮಿನುಗು ಮಂಕಾದಂತೆ...
 
ನಿದ್ದೆ ಕದ್ದೊಯ್ದು ಜಗದ ಮಾತು
ಎದೆತುಂಬಾ ಮಾತಾಗದ ಮೌನ
ಉಬ್ಬೇರಿ ನೋವುಲ್ಬಣಿಸಿದಂತೆ...
 
ದುಖಃದಲೇ ತೋಯ್ದು
ಮುಂಜಾವು ಕೆಂಪಾಗಿಸಿ ಕಣ್ಣುಕೆನ್ನೆ
ಕರ್ತವ್ಯಕಷ್ಟೇ ಹಾಜರಾದಂತೆ...
 
ನಿನ್ನೆ ಇಂದಿಗಡಿಯಿಡುವಾಗ
ಮುದ ನೀಡಿದ್ದವೆಲ್ಲ
ಬದಲಾದವೇಕೆ?!
 
ನಿನ್ನೆ ನನ್ನೊಳಗಿದ್ದೆ; ಉಡಿಸಿ
ಕಣ್ಣಿಗೆ ಬಣ್ಣದ ಪಾರದರ್ಶಕ ಪರದೆ
ಹೊಸಿಲ ದಾಟಿದೆಯೇನು?

Wednesday, August 21, 2013

ಅಳುವವರಿರದ ಕೊನೆಯುಸಿರು.

ಅಂಗಡಿಯಿನ್ನೂ ತೆರೆದೇ ಇದೆ,
ಕದ ಮುಚ್ಚಿ, ತೆರೆಯೆಳೆಯಹೊರಟಿದ್ದ,
ಬಟ್ಟು ತಕ್ಕಡಿಗಳನೊರೆಸಿ ಬದಿಗಿರಿಸಿದ್ದ,
ಲೆಕ್ಕಪತ್ರ ಪೂರ್ಣವಿರಾಮವಿಟ್ಟು ಮುಚ್ಚಿದ್ದ,
ಗಲ್ಲಾದ ಬಾಗಿಲೆಳೆದು ಬೀಗವೂ ಜಡಿದಿದ್ದ,
ಅಂಗಡಿಯಾತ, ಕೊಂಡುಕೊಂಡು ಕೊಡುವಾತ...
ಆಗಲೇ... ಸುಳಿದು ಬಂದಿತ್ತು ರಭಸದಲಿ
ಒಂದು ಕಂತೆ ಗಾಳಿ, ಹೊತ್ತೊಂದು ಕತೆ..
ಕೊಟ್ಟುಕೊಳ್ಳಬಂದಿತ್ತು ಬೆಲೆ ನಿಗದಿಪಡಿಸಿ.
ಏನಿರಲಿಲ್ಲವಲ್ಲಿ!! ಎಲ್ಲವೆಂದರೆ ಎಲ್ಲ...
ಪೀಠಿಕೆಯಿಂದ ಉಪಸಂಹಾರದವರೆಗೆ..
ಬೇಕಿದ್ದೂ ಬೇಡದ್ದೂ ಮತ್ತಿನ್ನೇನೋ...
ಒಳದೃಷ್ಟಿ ಹೇಳಿದ್ದೇನೋ, ಅವ ಕಂಡದ್ದೇನೋ
ಕೊಳ್ಳುವುದವನ ವೃತ್ತಿ, ಬಳಕೆ ಪ್ರವೃತ್ತಿ.
ಜತನದಿಂದೆತ್ತಿರಿಸಿ, ಬೆಲೆಯೀಗ ಕೇಳಿದ್ದ
ಎಷ್ಟಿದ್ದರೂ ಭರಿಸಬಲ್ಲ ಹುಚ್ಚು ಅಭಿಮಾನ..
ಬೀಗತೆಗೆದೆತ್ತಿ ಎಲ್ಲಾ ಗಳಿಕೆ
ಅಂದಿನದು ನಿನ್ನೆಯದು ಮತ್ತೆಲ್ಲಾ ನಿನ್ನೆಗಳದು..
ಮೊತ್ತ ಹೊಂದಲಿಲ್ಲ ಗಾಳಿಯೊಂದು ಮುಷ್ಟಿಯಾಸ್ತಿಗೆ..
ಗಾಳಿ ತುಂಬಿತಂದ ಮುಷ್ಟಿಯೊಡ್ಡಿಕೊಂಡಿತ್ತು,
ಬಿಚ್ಚಿಕೊಂಡಿತ್ತು
, ಒಪ್ಪಿಸಿಕೊಂಡಿತ್ತು..ಖಾಲಿಯದನೆದುರು ಇಟ್ಟಿತ್ತು..
ಆದರೂ ಕಾಲೊಂದು ಹೊರಗೇ ನೆಟ್ಟಿತ್ತು..
ಸೋರಿಕೆಗೆ ಖಾಲಿ ಮುಷ್ಟಿಯ ಸಂಶಯಿಸಿದ್ದಾಯ್ತು
ಬಲುಜಾಸ್ತಿ ಬೆಲೆಗೆ ಮೂಗುಮುರಿದುದೂ ಆಯ್ತು.
ಆ ಕಣ್ಣು ಹೊರಗಿನ ಕಾಲ ಮೇಲಿತ್ತು,
ಕಳಿಸಿಕೊಡಲೊಪ್ಪದೆ ಚೌಕಾಸಿಗಿಳಿದಿತ್ತು
ಕೊನೆಗೊಮ್ಮೆ ಬೆಲೆ ನಿಗದಿಸಿದ ಗಳಿಗೆ,
ಗಾಳಿ ಮೊಗ ತಿರುಗಿಸಿತ್ತು ಜೊತೆಗೆ
ಕಣ್ಣೂ ಕಾಲನು ಮುಕ್ತಗೊಳಿಸಿತ್ತು.
ಕೊಳ್ಳುವ, ಕೊಟ್ಟುಕೊಳ್ಳುವ ಉಮೇದು ಮುಗಿದು
ಬೆಲೆಕಟ್ಟುವ ಮಾತುಕತೆಯ ಭರಾಟೆಯಳಿದು
ಅಲ್ಲೊಂದು ವಿಚಿತ್ರ ಮೌನ, ಛಿದ್ರ ಕ್ಷುದ್ರ ಶಾಂತಿ..
ಕೊಡುಕೊಳ್ಳುವಿಕೆ ಬರೀ ವ್ಯಾಪಾರವಾಗಿ,
ಕೊನೆಯುಸಿರೆಳೆಯುತಾ ನರಳಲಿಲ್ಲ,
ಅಲ್ಲ್ಯಾರೂ ಅಳಲಿಲ್ಲ..
ಗಾಳಿ ಮತ್ತೆ ಹೊತ್ತೊಯ್ದಿತು ಕತೆಯ
ಮುಚ್ಚಲಣಿಯಾದ ಇನ್ನೊಂದು ಅಂಗಡಿಯ,
ಅಂಗಡಿಯಾತನ ಹುಡುಕಿ...
 
 
  
 
 

Monday, August 19, 2013

ಬದುಕು

ಬದುಕು ಭರವಸೆಯಲ್ಲ;
ಹೇಳದೆಕೇಳದೆ ಕೈತುಂಬ ಕೊಡುವುದು
ಕಳೆದರೆ ಮತ್ತೀವೆನೆನುವುದಿಲ್ಲ.
 
ಬದುಕು ಆಣೆಯಲ್ಲ;
ವಿಶ್ವಾಸಾರ್ಹವಾಗಿ ನಡಕೊಳ್ಳುವುದು,
ಸಂಶಯಿಸಿದರೆ ಸಮರ್ಥಿಸಿಕೊಳುವುದಿಲ್ಲ.
 
ಬದುಕು ನಂಬಿಕೆಯಲ್ಲ;
ಸತ್ಯವಾಗಿಯೇ ಒದಗುವುದು
ಸುಳ್ಳೆಂದರೆ ನಂಬಿಸಲೆತ್ನಿಸುವುದಿಲ್ಲ.
 
ಬದುಕು ದ್ರೋಹಿಯಲ್ಲ;
ಕೊನೆವರೆಗೂ ಕೈಹಿಡಿದೊಯ್ಯುವುದು
ಮೊದಲೇ ಬಿಡಿಸಿಕೊಂಡರೆ ಮತ್ತೆ ಹಿಡಿವುದಿಲ್ಲ.
 
ಬದುಕು ಕನಸಲ್ಲ;
ನಡುಗಿಸುವ ಬವಣೆಚಳಿಗೆ ಕನಸ ಚಾದರ ಹೊದಿಸುವುದು
ಕಿತ್ತೊಗೆದು ಚಳಿಯೆಂದರೆ ಮತ್ತೆ ಹೊಚ್ಚಿಸುವುದಿಲ್ಲ..
 
ಬದುಕು ಕಣ್ಣ ನೋಟವಲ್ಲ;
ಮೀರಿಯೂ ಇರುವದ್ದು ತೋರಿಸುವುದು
ಕಣ್ಮುಚ್ಚಿಕೊಂಡರೆ ಒತ್ತಾಯಿಸುವುದಿಲ್ಲ.
 
ಬದುಕು ಅಂತಿಮವಲ್ಲ;
ಕ್ಷಣಕ್ಷಣವೂ ಸತ್ತು ಮತ್ತೆ ಹುಟ್ಟುವುದು
ಮನಸು ಜಡ್ಡಾದರೆ ಸ್ಪರ್ಶಕೊದಗುವುದಿಲ್ಲ.
 
ಬದುಕು ಬರೀ ಪ್ರೇಮವೂ ಅಲ್ಲ;
ಪ್ರೀತಿಯನೇ ಮೊಗೆಮೊಗೆದೆದುರು ತರುವುದು
ದ್ವೇಷವನೇ ಬಯಸಿದರೆ ಇಲ್ಲವೆನುವುದೂ ಇಲ್ಲ...

Saturday, August 10, 2013

ಕಣ್ಣಿರುವ ಕನ್ನಡಿ.

ಕನ್ನಡಿಗೂ ಬಂತೇ ಕಣ್ಣು?!
ಇಷ್ಟಗಲ ಅರಳಿಸಿ ನೋಡಿ
ಕರಗಿದ ಕುಂಕುಮ ಒಪ್ಪಮಾಡಿ
ಮುಂಗುರುಳು ತೀಡಿ
ಕದಡಿದ ಕಣ್ಣು ತಿಳಿಮಾಡಿ
ಓರೆಕೋರೆಗಷ್ಟು ತಿದ್ದುಪಡಿ
ತಾ ಮೆಚ್ಚುವ ರೂಪ ನೀಡಿ
ಬಿಂಬವಿಳಿಸಿಕೊಂಡಿತೇ?!
 
ಬಿಂಬ ಮನಮೆಚ್ಚಿತು
ಕನ್ನಡಿಯುತ್ತರಿಸಿತು..
"
ಇಂದಿನಾಸ್ತಿ ನಾನು, ಇಂದಿಗೊದಗಬೇಕು
ನಿನ್ನೆಮೊನ್ನೆಯಂತೆ
ಎದುರಿದ್ದುದ ಪ್ರತಿಫಲಿಸೆ
ಬೇಡಿಕೆಯಿಂದಿರದು ಖರೆ..
 
ನೆಲಕಂಟಿದ ಇಂದಲಿ ನಿಂತಾಗ
ಎಲ್ಲ ಮಾರ್ಪಡಿಸಬೇಕು,
ಪ್ರಸ್ತುತಾರ್ಹವೆನಿಸಬೇಕು,
ಸ್ತುತಿಯ ಜಾಡಲಿಡಬೇಕು,
ಪ್ರಸಿದ್ಧಿ ಕುದುರೆ ಹತ್ತಬೇಕು
ಕುದುರೆ ಎಡವಿದರೂ ಕಾಲ್ತೊಡರಿದರೂ
ಬಿದ್ದರೂ ಒಮ್ಮೆ, ಮೀಸೆಮಣ್ಣು
ಒರೆಸಬೇಕು, ಮರೆಮಾಡಬೇಕು
ಹೆಸರ ಮಾನದಂಡದೂರುಗೋಲು
ಊರಿ ಮೆಟ್ಟಿ ಒತ್ತಿ ತುಳಿದೇರಬೇಕು..

ಏರಿದಾಗ ಮೇಲಲ್ಲಿ
ಮೊಂಡುಮೂಗು, ಕೆಂಡಕಣ್ಣು
ದಪ್ಪತುಟಿ, ಉಬ್ಬುಹಲ್ಲು
ಎಲ್ಲವೂ ಚಂದವೇ..
ಅಲ್ಲಿ ಬೇಡ ನಾನು,
ನನ್ನ ಮಾರ್ಪಾಟು.
ಅಪ್ಪಿ ಒಪ್ಪುವ ಕಂಗಳೇ
ನಿನ್ನ ಚಂದ ತೋರಿಯಾವು
ಮೆಚ್ಚಿ ಸತ್ಕರಿಸಿಯಾವು..
 
 
ಕಣ್ಣು, ಕೈ, ಬಾಯಿರದ
ಬರೀ ಕನ್ನಡಿಯಂಥ ಕನ್ನಡಿ
ನಿನ್ನ ಇಂದಿನಲಿ ಹುಡುಕದಿರು
ಇಲ್ಲ, ಕನ್ನಡಿ ಮುಂದೆ ನಿಲ್ಲದಿರು
ನಿಂತರೂ ಒಮ್ಮೆ ಕೆಂಗಣ್ಣಾಗದಿರು
"ಕನ್ನಡಿಗೂ ಬಂತೇ ಕಣ್ಣು?!"ಕನ್ನಡಿಗೂ ಕಣ್ಣು ಬೇಕಿಂದು
ತಿದ್ದಿತೀಡಿ ನೀ ಮೆಚ್ಚಿ
ಕಾಣುವಂತಾಗಿಸಲು ನಿನ್ನ,
ಮತ್ತೆ ಕನ್ನಡಿಯನ್ನ..
"

Thursday, August 8, 2013

ಕಣ್ಣ ಕೊಳ ನಕ್ಕಿದ್ದು

ಕಣ್ಣಕೊಳಕೆಸೆದು ಬಲೆ
ಕಾದು ಕೂತ ಅವನ ಕಿರಣ
ಹಲಕಾಲದ ಮೇಲೊಮ್ಮೆ
ಹೊತ್ತು ತಂದಿತ್ತು ಸೊಗಸು
ಮೂಕವಾಗಿತ್ತು ಮನಸು
ರೆಕ್ಕೆ ಬಿಚ್ಚಿತ್ತು ಕನಸು.
 
ಅಂದೊಮ್ಮೆ
ಖಾಲಿಖಾಲಿ ಸಮೃದ್ಧಿ
ಜಲರಾಶಿಗೆ ಪಸೆಯಿಲ್ಲದ
ನಿರಂತರತೆಗೆ ನಡೆಯಿಲ್ಲದ
ಕೊಳದ ನೀರಿನ ನಿಶ್ಚಲತೆ
 ಉಕ್ಕೇರುವ ಭರತದಲೂ
ರಭಸವಿಲ್ಲದ ಹರಿವಲಿ
ಸದಾ ಮೊಳಗುತಿತ್ತಲ್ಲಿ
ಅದು ನದಿಯಲ್ಲದ ಕತೆ..
 
ಆ ದಡದ ಕೊರತೆ
ಈ ದಡದ ಒರತೆಗಳ
ಎರಡಕಂಟಿಕೊಂಡು ಸಾಗಿಯೂ
ಒಂದುಗೂಡಿಸಿ
ಒದಗಿಸಿಕೊಡಲಾಗದ ವಿವಶತೆಯೂ...
 
ಹರಿಹರಿದೂ ತಲುಪಲಾಗದ
ಹೊಳೆಹೊಳೆದೂ ನಗಲಾಗದ
ಉಳಿದುಳಿದೂ ಉಳಿಸಲಾಗದ
ಬಯಸಿಯೂ ಬೆರೆಸಲಾಗದ
ಅಸಹಾಯಕತೆಯೂ...
 
ಆಗಲೇ.. ಆಗಲೇ ಬೆಳಗಾಗಿದ್ದು
ಅವನೇರಿ ಬಂದದ್ದು
ಮೂಕ ಮನಸಲಿದ್ದದ್ದು
ನಿಶ್ಯಬ್ಧ ರಾಗ
ರೆಕ್ಕೆ ಬಿಚ್ಚಿದ ಕನಸದನೇ
ಹಾಡಿದ್ದು ಅವಗಾಗಿ,
ಅವನ ಕಿರಣಕಾಗಿ
 ಬೀಸಿದ ಬಲೆ ಯಾವುದಕಿತ್ತೋ
ಕಣ್ಣಲದೇ ಇತ್ತೋ
ಬಲೆಯೊಳಗಿಳಿಯಿತೋ
ಕಣ್ಣಿಗೂ ಅರಿವಿಲ್ಲ; ಬಹುಶಃ
ಅವಗೂ ಗೊತ್ತಿಲ್ಲ.
 
ಅವ ಗುನುಗಿದ್ದಷ್ಟೇ
ಕೊಳದರಿವಿಗಿಳಿದದ್ದು
ಕೊಳ ಬರೀ ಕೊಳವಲ್ಲವೆಂದದ್ದು
ಭರತಕೊಮ್ಮೆ,
ಅಲ್ಲದೆಯೂ ಒಮ್ಮೊಮ್ಮೆ
ಉಕ್ಕಿ ಹರಿವುದ ಕಲಿಸಿದ್ದು.
 
ಅವನೊಡಲಾಳದಿಂದ
ಒಂದೇಒಂದು ಬೆಳಕಿನೆಳೆ
ಆ ದಡದ ಕೊರತೆಯ
ಕೊಳದೊಂದು ಕೈಗಿತ್ತು
ಒರತೆಯಿನ್ನೊಂದಕಿತ್ತು
ಚಪ್ಪಾಳೆ ತಟ್ಟಿಸಿತು..
ದಡಗಳಲ್ಲೇ ಇದ್ದು
ಕೊರತೆಗೊದಗಿ ಒರತೆ
ಅಳುವ ಕೊಳ ನಕ್ಕಿತು...

Wednesday, August 7, 2013

ಮತ್ತೆ ಎದುರಾಗದಿರು

ಮರೆವ ಯತ್ನಕೆ ಮತ್ತೆ
ತೊರೆವ ನಡಿಗೆಗೆ ಮತ್ತೆ
ಎದುರಾಗದಿರು ನೀನು
ಮುನ್ನಡೆಯಲಾರೆ....
 
ಮತ್ತದನೇ ನೆನಪಿಸಿ
ನಿನ್ನ ನೆರಳಾಗಿಸಿ
ಒಂಟಿಹಾಡ ಯಾನವ
ಧಾಟಿ ತಪ್ಪಿಸದಿರು
 ನನಗಿಲ್ಲೆ ಉಳಿವಾಸೆ
ಬೇಡ ನಿನ ನೋವಿನೊತ್ತಾಸೆ
ತಂದು ಮುಂದಿಡದಿರು
ಒತ್ತಾಯಿಸಿ ಉಳಿಸೀತು ಅದು
 
ಗೆಲುವ ದಾರಿಯಲಿರುವೆ
ಅಳುತಲೇ ಗೆಲುತಿರುವೆ
ಕೊಳೆತು ನಾನೇ ಬೆಳೆದ
ಬೆಳೆಯ ಅಳಿಸುತಲಿರುವೆ...
 
ತಪ್ಪು-ಒಪ್ಪಿನ ತೂಕ
ಬಟ್ಟು ಮರೆಯಾಗಿದೆ
ನಿಟ್ಟುಸಿರ ಭಾರಕೆವೆ
ಮುಚ್ಚಿ ಕಣ್ಕುರುಡೀಗ...
 
ಕಪ್ಪು ಸಾಗರದಲ್ಲಿ
ತೆಪ್ಪ ಬರಿದೇ ತಿರುಗಿ
ದಿಕ್ಕುದಿಶೆ ಮರೆತರೂ
ತೀರ ಬಯಸದ ಹಾಗೆ..
 
ಗೆಲುವೆಂದರೆ ಸಾವೇ.
ಗೊತ್ತಿದ್ದೂ ನಡೆದತ್ತಲೇ
ಅದಕೆ ಸವೆಯುತ್ತಿರುವೆ
ಒಲವಿರದೆ ಜಪಿಸುವ ಹಾಗೆ..
 
ಕುರುಡು-ಕಿವುಡಲಿ
ಬಾಳುವ ಬವಣೆಗೆ
ನಗುವುಡಿಸಿ ಸಾಗುವೆ
ನಿನ್ನಳಲು ಕರೆಯದಿರೆ..
 
ಎದುರಾಗದಿರು ಮತ್ತೆ
ಮುನ್ನಡೆಯಲಾರೆ....

Tuesday, August 6, 2013

ಪ್ರೀತಿಯವಳದು, ಸೆಳೆತ ನಿನಗೇ..

ನೆಲದ ಮೇಲಿನ ಮನಸೇ,
ಎಷ್ಟೆತ್ತರ ಹಾರಿದರೂ ಮತ್ತಲ್ಲಿಗೇ
ಹೊರ‍ಳಿ ಮುಟ್ಟುವ ಪಾದ ನಿನ್ನವೇ
ನಿನಗಷ್ಟೊಂದು ಸೋಜಿಗವೇ?!
 
ಚಿಂತಿಸಿ, ಯೋಚಿಸಿ ನಿಂತವಳ ಮೇಲೇ
ಗುರುತ್ವಾಕರ್ಷಣೆ ಅದವಳದೇ ಎಂದೆ
ಎದೆಯ ಕೇಂದ್ರ ಸೆಳೆತದ ಮೂಲವೆಂದೆ
ನಿನ್ನ ಹೊಂದುವ ದಾಹ ಅವಳದೆಂದೆ...
 
ತುಸು ನೆಲೆ ಬದಲಿಸಿ ನೋಡು,
ಅವಳ ತೂಕವೈಶಾಲ್ಯದೆದುರು
ನಿನ್ನ ಕಿರುಗಾತ್ರ;
ಆ ಪರಿಧಿ ಬಿಟ್ಟು ಹೊರನಡೆಯದ
ನಿನ್ನ ಸೀಮಿತ ಪಾತ್ರ;
ಇದಲ್ಲವೇ ಸತ್ಯ; ಮತ್ತದೇ ಕಾರಣಕೆ
ನೀ ಸೆಳೆತಕೊಳಪಡುವುದು ತಾನೇ ?!
 
ನೀರು-ಹಸಿರು ಮಣ್ಣು-ಕಲ್ಲಂತೇ
ಪ್ರೀತಿ ಸೆಳೆತವವಳಿಗೆ ಜನ್ಮದತ್ತ.
ಒಮ್ಮೆ ಸ್ಪರ್ಶಿಸಲವಳ ನಿನ್ನದಾಗುವುದೆಲ್ಲ ..
ಅಡಿಯಿಟ್ಟು ನೋಡೊಮ್ಮೆ ಅವಳ ಬಿಟ್ಟತ್ತ
ಆಕರ್ಷಣೆಯೂ ಇಲ್ಲ, ನೀ ಮರಳಬೇಕಿಲ್ಲ...
ಮರಳಿದರೆ ಪ್ರೀತಿಯಿಲ್ಲಿಲ್ಲದೆಯೂ ಇಲ್ಲ..
ಪ್ರೀತಿ ಶಾಶ್ವತ, ನಿಯಮಕೆ ನಿಲುಕದೆ, ಶುದ್ಧ.
ಸೆಳೆತ ನಿಯಮಿತ, ನಿಯಮಬದ್ಧ ...
 
ಅವಳು ನಿನ್ನ ಹಿಂದಿಲ್ಲ, ನೀನವಳಿಗೆ ಬದ್ಧ
ತೊರೆದುದೆಲ್ಲ ಸೆಳೆತಮುಕ್ತ ಮಾಡಲವಳು ಸಿದ್ಧ
ದೂರದಿರು, ದೂರಿ,ದೊಡ್ಡವನಾಗಲಾರೆ
ಪ್ರೀತಿಯವಳದು, ಸಂಶಯಿಸಿ ಗೆಲ್ಲಲಾರೆ
ಸೆಳೆತ ನಿನದು, ಅವಳೊಳಗಿದ್ದು ಎದುರಿಸಲಾರೆ...

Monday, August 5, 2013

**

ಒಂದೂರು
ಊರಿಗೊಬ್ಬ ನಾಯಕ,
ಚಪ್ಪಾಳೆ ಪರಾಕುಗಳೊಡೆಯ
ಜೊತೆಗೊಬ್ಬ ಖಳನಾಯಕ
ಕೆಂಗಣ್ಣುರಿ, ಬಯ್ಗುಳದ ಹಕ್ಕುದಾರ
ನಡುವೊಬ್ಬ ಸಾಮಾನ್ಯ ಯುವಕ
ಅವನ ಎಕ್ಕರಿಸಿ ಕಾಣುತಲೇ
ಇವನ ಕೆಕ್ಕರಿಸಿ ಉಗಿಯುತಲೇ
ಆರಕೇರದೆ ಮೂರಕಿಳಿಯದೆ ಬಾಳುವ
 ಗುಬ್ಬಚ್ಚಿಯೊಂದೇಟಾಗಿ
ರೆಕ್ಕೆ ಮುರಿದು ಬಿದ್ದ ಕ್ಷಣ
ನರಮುಟ್ಟಿದ ಹಕ್ಕಿ ಗೂಡೊಳ
ಸೇರದೆಂದು ನಡೆದನವ ಸುಮ್ಮನೇ....
ಇವನೆತ್ತಿ ಪಟ್ಟಿಕಟ್ಟಿ
ಸಾಕಿಸಲಹಿ ಹಾರಿಬಿಟ್ಟ ಸುಮ್ಮನೇ ...
 
ಯುವಕ ಬಯ್ಯುತಲೇ ನಡೆದಿದ್ದ
ಹಾರಿಹೋದುದೆಲ್ಲಿಗೆ ಹೋದೀತು
ಗೂಡಿಲ್ಲದೇ ಹೇಗುಳಿದೀತು?!
ನಾಯಕನ ಹೊಗಳುತಲೇ ನಡೆದಿದ್ದ
ಗೂಡಿಗಾಗಿ ಗುಬ್ಬಿ ಮುಟ್ಟದುಳಿದ ಹಿರಿತನಕೆ..
 
ಹಾರಿಹೋದ ಗುಬ್ಬಚ್ಚಿ ಹೊಸಗೂಡಿಗೆ
ಕಸಕಡ್ಡಿ ಆರಿಸುತಿತ್ತು,
ಪಟ್ಟಿಕಟ್ಟಿ ಮುರಿದುದ ಜೋಡಿಸಿದವನ
ಬಿಡದೆ ನೆನೆಯುತಿತ್ತು..

Sunday, August 4, 2013

ಹೊಸದಿಗಂತದಲ್ಲಿ ಕವನವೊಂದು ಪ್ರಕಟವಾದ ಶುಭದಿನ ಇಂದು ..

**

ನೀ ಬದುಕ ಕ್ಷಣಕ್ಷಣ ಸವಿಯುವ ಸಾಧನ
ಆದರೆ ನೋವುಣಿಸುತಲೇ ಬಂದಿರುವುದು
,
ನೀ ಬದುಕಿನ ಅದಮ್ಯ ಧೈರ್ಯದ ಸೆಲೆ
ಆದರೆ ಅಧೀರಗೊಳಿಸುತಲೇ ಬಂದಿರುವುದು
,
ನೀ ಬದುಕಿನ ಚೈತನ್ಯದ ಚಿಲುಮೆ
ಆದರೆ ಕುಗ್ಗಿಸುತಲೇ ನಡೆದಿರುವುದು,

ನೀ ಬದುಕಿನ ಅವಿಭಾಜ್ಯ ಅಂಗ
ಆದರೆ ಕಳಚಿಕೊಳುತಲೇ ಸಾಗಿರುವುದು
,
ನೀ ಉಸಿರಿನ ಹೆಮ್ಮೆಯ ಹೆಸರು
ಅದ ತಲೆಯೆತ್ತದಷ್ಟು ಭಾರ ಮಾಡಿರುವುದು
,
ನೀ ಬಂಧಗಳ ಗಳಿಕೆಯ ಗರಿಮೆ,
ಆದರೆ ಬರಿಗೈಯ್ಯಲುಳಿಸಿರುವುದು..
ವರವಾಗಿದ್ದೂ ಪ್ರಸಾದವಾಗಿ
ಈ ಬೊಗಸೆಗೆ ದಕ್ಕದಿರುವ ಪರಿ
ಜಗ ನಿನ್ನ ಸಂಭ್ರಮಿಸುವ ದಿನವೇ
ನಾ ನೆನೆಯುತಿರುವುದು
ವಿಪರ್ಯಾಸವೇ ಹೌದು.

Friday, August 2, 2013

ಉಳಿವ ದೀಪ ಬಯಸುವ ಮೊದಲು...

ಅಂದೂ ಅನ್ನದಂತೆ
ಪಡೆದೂ ಪಡೆಯದಂತೆ
ಹೊಂದಿಯೂ ಹೊಂದದಂತೆ
ಇಲ್ಲಿನದೆಲ್ಲವ ಸಂಬೋಧಿಸಿ ಮತ್ತೆಮತ್ತೆ
ನೀನಾಡಿದ್ದೆಲ್ಲ ಅಡ್ಡಗೋಡೆಯ ಮೇಲಿನ ದೀಪ.
ನನಗೆ ಕೇಳಿದ್ದು ಅದು ಹರಡಿದ ಬೆಳಕಿನಾಲಾಪ..
 
ಇರಲಿಬಿಡು ಯಾವುದಿದೆ ಶಾಶ್ವತ ನಾವಿರುವಲ್ಲಿ?!
ನಾನೇ, ನೀನೇ, ಸತ್ಯವೇ, ಸುಳ್ಳೇ, ಒಲವೇ, ದ್ವೇಷವೇ..?
ತೂಗುತಕ್ಕಡಿ ಸಮಭಾರವೆರಡೂ ಕಡೆ ಹೊತ್ತಾಡಿದಂತೆ...
ಒಮ್ಮೆ ಅದು ಕೊಂಚ ಮೇಲೆ, ಒಮ್ಮೆ ಇದು.
ಅವರವರ ಪಾಲು ಬೇರೆಬೇರೆಯಾದ ಮೇಲೆ
ಮತ್ತೊಮ್ಮೊಮ್ಮೆ ಎರಡೂ ತಟ್ಟೆ ಖಾಲಿಯುಳಿವ ಹಾಗೆ.
 
ಉರಿವಷ್ಟು ಕಾಲ ಅನಿಶ್ಚಿತತೆಯನಾದರೂ ಬೆಳಗಲಿಬಿಡು
ದೀಪವದು, ಬೆಳಗುವಾಸೆಯದಕೆ ಪಾಪ!!
ಮಿಣುಕುಮಿಣುಕೆನುತಲೇ ಆಗಲಿ,
ಎಣ್ಣೆ ಚೆಲ್ಲುತಲೇ ಆಗಲಿ,
ಅನಿರ್ದಿಷ್ಟತೆಯ ಪರಮಾವಧಿಯಲೇ ಆಗಲಿ,
ತುಸುಹೊತ್ತಾದರೂ ಬೆಳಗಿದ ಗರಿಮೆ ಹೊತ್ತಾರಲಿ.
 
ಇಲ್ಲ, ನಾ ಅಂಜಲಿಕೋಟೆ ಕಟ್ಟಲಾರೆ,
ಏನಿದ್ದರೂ ಅದಿದ್ದಷ್ಟು ಹೊತ್ತು ಕಣ್ಣೊಡ್ಡಬಲ್ಲೆ,
ಎದೆ ತುಂಬಿಸಿಕೊಂಡಿಟ್ಟುಕೊಳಬಲ್ಲೆ,
ಅರಸುವುದ ಬೇಗಬೇಗ ಅರಸಿ
ಹೊಂದಬಲ್ಲೆ, ಮುದಗೊಂಡದರ
ಕುಣಿದಾಟವನೂ ಮನದುಂಬಿ ಮೆಚ್ಚಿ,
ನಾನಳಿವವರೆಗೆ ಮಾಸದಿರುವ ಭಾವಚಿತ್ರ
ಮನಕಿಳಿಸಬಲ್ಲೆ, ಮತ್ತಾ ಸಾನ್ನಿಧ್ಯವಿತ್ತವಗೆ
ಮನಸಾರೆ ನಮಿಸಬಲ್ಲೆ...ಅಷ್ಟೇ;
ಆರುವುದ ಮುಂದೂಡಲಾರೆ...
 
ಅಡ್ಡಗೋಡೆಯ ಮೇಲಿಟ್ಟು ದೀಪ
ಉಳಿಸುವ ಮಾತಾಡುವುದುಂಟೇ?
ಉರಿದುಳಿವುದು ಅದರ ಜಾಯಮಾನವಲ್ಲ,
ನಾ, ನೀ ಬಯಸಿದರದು
ತನ್ನತನ ಬಿಟ್ಟುಕೊಡುವುದೂ ಇಲ್ಲ.
ನಿಗದಿಯಾಗಿದೆ ಉರಿವ ಮತ್ತಾರುವ ಗಳಿಗೆ
ಒಂದು ಕ್ಷಣವೂ ಹೆಚ್ಚುಕಮ್ಮಿ ಉಳಿವುದಿಲ್ಲ.
 
ಉಳಿವ ದೀಪ ಬಯಸುವುದಾದರಿಲ್ಲಿ ಬಾ.
ತೆರೆದಿದೆ ಕದ, ಎದೆಹಣತೆ ಕಾದಿದೆ ಸದಾ.
ನಂಬಿಕೆಯೆಣ್ಣೆ ಸುರಿದು, ಸ್ನೇಹದೀಪ ಹಚ್ಚಿನೋಡು..
ಬೆಳಗುತಿರುವುದ ನೋಡಬಯಸುವ
ಕಣ್ಮುಚ್ಚಿದ ಮೇಲೂ ಉರಿಯುತಿರಬಲ್ಲದ್ದು.
ಇದು ಇದರ ಜಾಯಮಾನ,
ನಾ, ನೀನೆಷ್ಟೇ ಬಯಸಿದರೂ
ಇದೂ ತನ್ನತನ ಬಿಟ್ಟುಕೊಡದೆ
ಉರಿಯುತಲೇ ಉಳಿದು ತೋರುವುದು...

Thursday, August 1, 2013

ಸ್ವಪ್ನದೂಟದ ಮೆಲುಕು


ಅಂಕೆಯಿರದೆ ಚಾಚಿದೆ
ಆಗಸ ಕರಿಹಂದರ,
ಅದರುದ್ದಕು ಹಬ್ಬಿದೆ
ದೃಷ್ಟಿಬಳ್ಳಿ ಸುಂದರ.
 
ಹಗಲ ಮಡಿಲಿಂದ ಜಾರಿ
ಜಗವಿರುಳ ಜೋಲಿಗೆ,
ತೂಕಡಿಸಿದೆ ಜೀವರಾಶಿ
ತಂಪುತಂಪು ಲಾಲಿಗೆ..
 
ತಡವಿಲ್ಲ, ನೂರು ತಾರೆ
ಹೂವರಳಿ ಹೊಳೆದಿವೆ.
ನಡುವೆ ದುಂಡುಹಣ್ಣು
ಚಂದ್ರ ಬಿಡದೆ ಸೆಳೆದಿದೆ..
 
ಕನಸದುಂಬಿ ತಾರೆಸುತ್ತ
ಸುತ್ತಿಸುಳಿದು ಹಾರಿದೆ.
ಸೊಗದ ಮಧುವ ಕಣ್ಗೆ ಸುರಿದು
ಮೈ-ಮನದಿ ಹರಡಿದೆ...
 
ಮುಚ್ಚಿದೆವೆಯ ಒಳಗೆ ಹುಟ್ಟಿ
ಮಿನುಗು-ಹೊಳಪ ಸಾಮ್ರಾಜ್ಯ
ಕಣ್ಣ ಕಪ್ಪುಬೊಂಬೆಗಂತು
ನಗೆ; ಜೊತೆಗೆ ಆಶ್ಚರ್ಯ!
 
ನೋವಿಲ್ಲ, ಕಾವಿಲ್ಲ,
ವಿರಹದುರಿ ಮೊದಲಿಲ್ಲ;
ಸಿಟ್ಟು-ಕಟ್ಟುಪಾಡಿಲ್ಲ,
ದೂರು-ದುಮ್ಮಾನವಿಲ್ಲ...
 
ಬೆಳಕು ಹರವಿಟ್ಟಿದೆ
ಸ್ಫಟಿಕಸದೃಶ ನಗು,
ಸೇತುವಾಗಿ ಒಳ-ಹೊರಗಿಗೆ
ಕಪಟವಿರದ ಸೊಬಗು.
 
ತನ್ನದೊಂದೂ ಅಲ್ಲಿಲ್ಲ,
ಅಲ್ಲವೆನಿಸಿದ್ದೂ ಇಲ್ಲ.
ಹೊತ್ತು ನಡೆವವರಿಲ್ಲ,
ಧೊಪ್ಪನೆಸೆವವರಿಲ್ಲ...
 
ಆತ್ಮಸಖ್ಯದ ನಡೆ
ಸ್ನೇಹ-ಪ್ರೀತಿ ದಿಕ್ಸೂಚಿ.
ಮಿಲನ ದೂರದ ಗುರಿ
ಅಲ್ಲಿವರೆಗಿರದ ತಡೆ..
 
ದ್ವೇಷ ದಮನಕೆ
ಪ್ರೇಮ ಸಾಧನ.
ಗೆರೆಯ ಗಾಯಕೆ
ಹಣೆಗೆ ಚುಂಬನ..
 
ಕಾಲ ಬಡಿಸಿದೆ
ಸಿಹಿ ಸ್ವಪ್ನದೂಟ
ಚಪ್ಪರಿಸಿ ಮೆಲುಕಿನಲಿ
ಹಾರೈಸಿದೆ ಒಳಗಣ್ಣು..
 
ಹಗಲಿಗೂ ಹರಡಲಿ
ಈ ಇರುಳ ಕನಸು
ಅಲ್ಲಾಗಿ ಅದು ನಿಚ್ಚಳ,
ನಿರಾಳವೊಂದು ನನಸು...

Wednesday, July 24, 2013

**

ಹಸಿದಿದ್ದಾಗ ಜೊಲ್ಲು ಸುರಿಸುವ ಬಾಯಿ
ತುಂಬಿದ ಹೊಟ್ಟೆ ಕೈ ಸವರುತ್ತಿದ್ದಾಗ,
ಕಂಡು ತಲೆಕೆಳಗಾಗಿ ನೇತಾಡುವ ಕೋಳಿ,
ಹೇಳುತಿತ್ತು- "ಛೇ...ಅಯ್ಯೋ ಪಾಪ!"
-------------------------------
ತನ್ನಂಗಳದ ಹೂ ಪಕಳೆಯುದುರುವವರೆಗೂ
ಗಿಡದಲೇ ಕಾಣಬಯಸುವ ಕಣ್ಣು
ಇನ್ನೊಂದರ ಹೂವರಳುವ ಮುನ್ನವೇ
ಕೊಯ್ಯುವಂತೆ ಕೈಯ್ಯ ಪ್ರೇರೇಪಿಸುವುದೇಕೆ?!

ಹೆಳವ ಸುಳ್ಳು

ಕಣ್ಣೆಷ್ಟು ಕಂಡರೂ ತಿವಿತ, ಇರಿತ
ಮತ್ತವು ಹರಿಸುವ ರಾಮಾರಕ್ತ,

ಕಿವಿಯೆಷ್ಟು ಕೇಳಿದರೂ ಮೋಸ, ದ್ವೇಷ

ಮತ್ತವು ರೂಪಿಸುವ ವ್ಯಥಾನಕ,

ಬಾಯೆಷ್ಟು ಹಾಡಿದರೂ ನೋವು, ಕಾವು
ಮತ್ತವು ಸುರಿಸುವ ಕಣ್ಣೀರು,

ಉಸಿರೆಷ್ಟು ಹೊತ್ತರೂ ಭಾರಗಾಳಿ
ಮತ್ತದರೊಳಗಿನ ಕಲ್ಮಶ,

ಎಲ್ಲ ನೆಲೆಸಿದ ಮೈ ತನ್ನ ತಾನೊಡ್ಡಿಕೊಳದೇ
ಸತ್ಯವಲ್ಲಿ ಅಭಿವ್ಯಕ್ತವಾಗದು..

ಸುಳ್ಳು ಕುಣಿದು-ಕುಪ್ಪಳಿಸಬಹುದು ನಿಂತಲ್ಲೇ.
ಹೆಚ್ಚೆಂದರೆ ತೆವಳಬಹುದು..

ಹೆಜ್ಜೆಯೊಂದಿಡಲಿಕೂ ಮುಂದೆ ಬೇಕದಕೆ
ಆಸರೆ ಸತ್ಯದೂರುಗೋಲಿನದು...
 
 

Tuesday, July 23, 2013

**

ಕಾಡಿ ಕರೆವ ಭಾವ
ಹೊತ್ತಿರದಿದ್ದರಷ್ಟು ನೋವ
ನಿನಗೆಲ್ಲಿ ಮುಟ್ಟುವುದೋ ದೇವ?!
ನೋವು ತಲುಪುವ ವೇಗ
ಬೆಳಕಿಗಿಂತಲೂ ಹೆಚ್ಚು...
ಅದಕೇ ಇರಬೇಕು
ಒಟ್ಟಿಗೇ ನಿನ್ನಲ್ಲಿಂದ ಹೊರಟವು,
ಇದು ನೋಡು ನನ್ನ ತಾಗಿ
ಪ್ರತಿಫಲಿಸಿ ನಿನ್ನ ಮುಟ್ಟಿದ್ದಾಗಿದೆ,
ನಿನ್ನುತ್ತರವೆನ್ನ ನೇವರಿಸಿದ್ದೂ ಆಗಿದೆ...

ಅದಿನ್ನೂ ಬಹುಶಃ ದಾರಿಯಲಿದೆ...
-------------------------------
ದಯವಿಟ್ಟು ಮರೆಯದಿರು..
ಕಹಿಯಲೊಮ್ಮೆ
ಸಿಹಿಯಲೊಮ್ಮೆ
ಬಾರಿಬಾರಿ ಅದ್ದಿ
ನಿನ್ನ ರಚನೆ ಮಾಡಿದವನೇ
ನನ್ನದೂ ಮಾಡಿದ್ದು....
------------------------
ಕಣ್ಣು ಸಾಗರ ತುಂಬಿಕೊಳುತಿತ್ತು,
"ಅಬ್ಬಾ ಸುಂದರ.." ಮನ ಗುನುಗುತಿತ್ತು.
ಕಣ್ಣು ಸೋಲುವ ದೂರದಲೆಲ್ಲೋ ಮಿಣುಮಿಣುಕೆನುತಿತ್ತು,
ಬಳಿಬಂದ ಹಡಗು ತುಂಬಿ ದೃಷ್ಟಿ ಮೀರಿ ಹಬ್ಬುವಷ್ಟಿತ್ತು.
ಅದೆಷ್ಟೋ ಬಾರಿ ಕೇಳಿದ್ದರೂ ದೂರದ ಬೆಟ್ಟದ ಗಾದೆ
ನೂರೊಂದನೆಯ ಬಾರಿ ಸಾಪೇಕ್ಷತೆ ಬೆರಗು ಹುಟ್ಟಿಸಿದೆ.

Monday, July 22, 2013

ನಮನ

ಅಡಕ ಸ್ವಂತಿಕೆಯ
ಗುರುತಿಸಿ, ಹೊರತರಿಸಿ
ಬೀಜದೊಳಡಕ ಮೊಳಕೆಯಂಥ
ಅರಿವಿಗೆ ಕಣ್ತೆರೆಸುವ,

ನೋಯದೆ, ನೋಯಿಸದೆ
ಸಾಗುವ ದಾರಿ, ನಡೆವ ಪರಿ
ಬೆಳೆವ ದಿಶೆ, ಮುಟ್ಟುವ ಗುರಿ
ಸ್ಪಷ್ಟಗೊಳಿಸುವ,

ತಮದ ತೊಡಕು ತರಿದು,
ಒಡಲಾಳದ ನಗೆಯ ಛವಿಯಲೇ
ನೇರ ಸಾಗುತಲಿರುವ
ಸರಿ ಉಪಾಯವರುಹುವ,

ಕಣ್ಕಟ್ಟಿದೆಡೆ ಪಟ್ಟಿ ಬಿಚ್ಚಿ,
ಕಣ್ಣು ತಿಕ್ಕಿ, ತನ್ನಂಗೈ ಶಾಖವಿತ್ತು,
ಮಂಜುಮಂಜಾಗಿದ್ದುದೆಲ್ಲ
ತಿಳಿಯಾಗಿಸುವ,

ತನ್ನೊಡಲ ಬಗೆದು ತೋರಿ,
ಒಡಲ ಜಾಲಾಡುವುದ ಕಲಿಸಿ
ಒಳಗುಟ್ಟು ಶೋಧಿಸಿಸಿ
ಸ್ವಪರಿಚಯವೀವ,

ಅಂತಃಸತ್ವ ಜತನದಲೆತ್ತಿ
ಮೇಲ್ಮೈಗೆ ತಂದಿಟ್ಟು
ಪ್ರಯತ್ನಪೂಜೆಯಲಿ ಔನ್ನತ್ಯಕ್ಕೇರಿಸಿ,
ಹೊಸದಾಗಿಸಿ ತೋರುವ,

ಕೀಳರಿಮೆ ಕಳೆ ಕಿತ್ತು,
ಒಲುಮೆಯಲ್ಲೆಲ್ಲ ಬಿತ್ತಿ,
ತನ್ನ ತಾನೆಂದಷ್ಟೇ ಪ್ರೀತಿಸುವ
ಬಗೆ ಕಲಿಸಿಕೊಟ್ಟ,

ಗುರುವಿಗೆನಮನಗಳು.

(ಇದುವರೆಗೆ ನಾವು ಅರಿತಿರದ ಹೊಸತೊಂದಕ್ಕೆ ನಮ್ಮನ್ನ ಪರಿಚಯಿಸಿ ನಮ್ಮನ್ನದಕ್ಕೆ ಒಗ್ಗಿಕೊಳ್ಳುವ ಹಾಗೆ ಮಾಡಿ, ಅದನ್ನು ಜೀವನಕ್ಕೆ ಅಳವಡಿಸಿಕೊಳ್ಳುವ ಜ್ಞಾನ ಪಡೆದುಕೊಳ್ಳುವಲ್ಲಿ ಸಹಾಯವಾಗುವ ವ್ಯಕ್ತಿತ್ವಗಳನ್ನು ಗುರುಗಳು ಅಂತ ಗುರುತಿಸುತ್ತೇವೆ. ಎದುರಾದ ವ್ಯಕ್ತಿತ್ವಗಳೆಲ್ಲ ಅನುಭವಗಳನ್ನು, ಆ ಮೂಲಕ ಹೊಸಪಾಠ, ಹೊಸಅರಿವು, ಹೊಸಗುರಿ, ಹೊಸದಾರಿ, ಹೊಸಸಂತಸ ಇವುಗಳಲ್ಲಿ ಒಂದಲ್ಲ ಒಂದನ್ನು ಪರಿಚಯಿಸಿದಂಥವುಗಳೇ ಹೌದು. ಹಾಗಾಗಿ ಆ ಹಂತದಲ್ಲಿ ಅವರೆಲ್ಲರೂ ಗುರುವಿನ ಚೈತನ್ಯವನ್ನು ಆವಾಹಿಸಿಕೊಂಡವರೇ ಆಗಿರುತ್ತಾರೆ. ಹಾಗಾಗಿ ನನ್ನ ಪರಿಚಯದ ಪರಿಧಿಯೊಳಗಿನ ಎಲ್ಲ ಚೈತನ್ಯಗಳಿಗೂ ಗುರುಪೂರ್ಣಿಮೆಯ ಸಂದರ್ಭದ ನಮನಗಳು.)
 
 
 
 

Saturday, July 20, 2013

ಧ್ಯಾನದ ನಡುವೊಮ್ಮೆ

ಶಬ್ಧಗಳೊಡಲೊಳಗೆ
ವಿರುದ್ಧಾತ್ಮಕತೆಗಳ
ಪೂರಕ ತತ್ವದಡಿ
ನಿಶ್ಯಬ್ಧ ಹುಡುಕಿ
ತಲೆಗೇರಿಸಿಕೊಂಡೆ...

ಅರೆ ಪದ್ಮಾಸದ
ಧ್ಯಾನಮುದ್ರೆಯಲಿ
ದೀರ್ಘ ಶ್ವಾಸದ
ನಿರಾಳತೆಯಲಿ
ಮುಚ್ಚಿದ ಕಣ್ಣಡಿಯೇನೋ
ಮಹತ್ತು ಕಾಣುವ
ಭರವಸೆಯಲಿದ್ದೆ..

ನಿಶ್ಯಬ್ಧ ಮೌನವಾಗಿ
ಎದೆಗಿಳಿದು.....
ಎಡ, ಬಲ, ಮೇಲೆಕೆಳಗೆಲ್ಲಾ
ಆವರಿಸಿ ಎತ್ತಲೋ ಹೊತ್ತೊಯ್ದು
ನಾ ಕಳೆದು ಹೋದ ಗಳಿಗೆ..
ಬೇಕಾದ್ದೇನೋ ಸಮೀಪಿಸಿದ ಹಾಗೆ,
ಮೆಲ್ಲ ಮುಟ್ಟಿ ಛೇಡಿಸುವ ಮಗು
ಮತ್ತೆ ದೂರಕೋಡಿದ ಹಾಗೆ..
 
ಇನ್ನೇನು ನಸುನಗು ಆ ಮಗುವ
ಹಿಡಿದು ಬಿಡುತಿತ್ತು, ಅಷ್ಟರಲಿ..
ಮುರಿದು ಚಂದ ದೃಶ್ಯಾವಳಿ
ಸರಪಳಿ, ಎಲ್ಲಾ ಚಲ್ಲಾಪಿಲ್ಲಿ...
ಹಸಿದ ಹೊಟ್ಟೆಯ ಎಲುಬು,
ಕಜ್ಜಿನಾಯಿಯ ಕೂಗು,
ತೆರಳಿದ ಬಂಧಗಳ ನೋವು,
ಮುರಿದ ಬಂಧಗಳ ಅಳು,
ತುಳಿತದಡಿಯ ಕಣ್ಣೀರು..

ಹೀಗೇ...
ಇಲ್ಲಗಳ ಸರದಿಸಾಲಿನ ಮುಂದೆ
ಬೇಕುಗಳೆಲ್ಲಾ ನಿಲುಕದೆತ್ತರದ
ಕಪಾಟಿನ ಹಲಬೀಗದೊಳಗೆ
ಭದ್ರವಾಗಿರುವೆಡೆ ಸಾಗುತಾ ಆಸೆ,
ಬೆಳೆಬೆಳೆದು ನಿರಾಸೆಯಾಗಿ ಬಿಟ್ಟ ಗೋಳು..
ಕಣ್ಬಿಡಿಸಿತು, ತಲೆ ತಿರುಗಿತು..

ಭ್ರೂ ಮಧ್ಯವೇ ಇರಲಿ
ನೆತ್ತಿ ಮಧ್ಯವೇ ಇರಲಿ
ಇದ್ದುದೆಲ್ಲ ಹಾಗೇ ಇರಲಿ.
ತುಂಬಿದ ಹೊಟ್ಟೆಯ
ಮೇಲಿನವು ಬೆಳಕಾಗುವ ಬದಲು
ಹಸಿದುದು ತಣಿವುದಾಗಲಿ...
ಬಿಚ್ಚಿದೆವೆ ಮತ್ತೆ ಮುಚ್ಚಿದವು
ಆಗ ಬೇಕೆನಿಸಿದುದ
ಕೈ ದೂರ ಸರಿಸಿತು,
ಇಲ್ಲಗಳ ಆಸೆ ನಿರಾಸೆಯಾಗುವಷ್ಟು
ಬೆಳೆಯದಿರುವ ಆಶಯ
ಧ್ಯಾನದ ಕೇಂದ್ರವಾಯಿತು.

**

ಮೋಡ ಸರಿಯುತಿದೆ
ಚಂದ್ರ ತೆರೆಮರೆಯಿಂದೀಚೆ
ಬರಲಾರಂಬಿಸಿದ ಸುದ್ಧಿ...
ಮಾತಾಡಿಯಾನೇ, ನಕ್ಕಾನೇ,
ಸುರಿದೀತೇ ಚಂದ್ರಿಕೆ?!
ತುಸು ದೂರವಿದ್ದರೂ ಹುಣ್ಣಿಮೆ
ಎದುರು ನೋಡುತಿದೆ ಈ ರಾತ್ರಿ....
ಕ್ಷಣ ಯುಗವಾಗುತಿದೆ,
ಪಕ್ಷವಲ್ಲ, ವರ್ಷದಿಂದ ಕಾದಿರುವ ಇರುಳು...
ಕಾದಿದೆ ಗಾಢ ಕಪ್ಪಾಗಿ.
ಕಂಗಳ ದಾಹ ಹಿಂಗೀತೇ?
ಗಂಟಲಷ್ಟು ತಣಿದೀತೇ?
ಮನಸಷ್ಟು ತುಂಬೀತೇ?

ಕತ್ತಲಿತ್ತಿತ್ತು ಬೆಳಕೀಯದ್ದು.

ರಾತ್ರಿ ಕರೆದಿತ್ತು ಹೊರಗೆ..
"ಅನುಭವಿಸು ನನ್ನನೂ,
ಸ್ವಲ್ಪ ನಿನ್ನನೂ ಜೊತೆಗೆ...

ಬೆಚ್ಚನೆ ಗೂಡು
ಅಚ್ಚಬಿಳಿ ಸ್ಪಷ್ಟಬೆಳಕು
ಹಚ್ಚಹಸಿರ ಒಳಮೆತ್ತೆ
ಮೆಚ್ಚುವೆಲ್ಲ ನಿನ್ನವುಗಳ
ಬಿಟ್ಟು ಬರೀ
ನಿನನಷ್ಟೇ ಹೊರತಾ,
ನೀನಷ್ಟೇ ಆಗಿ ಬಾ.
ಕಾದಿದೆ ಕತ್ತಲಲಿ ನೀ ಕಾದದ್ದು."

ಹಿಂಜರಿವವಳು ಇಂದು
ಮುನ್ನಡೆಯಿಟ್ಟೆ..
ನಸುಕಪ್ಪು ಜಗತ್ತಲಿ
ಎಲ್ಲ ಅಸ್ಪಷ್ಟ
ಅಪೂರ್ಣ ಚಂದ್ರ
ಗೂಬೆ ಪಾರಿವಾಳಗಳ
ಕೊರಳಲಿ ಮೌನವೂ ಚಿಂದಿ.
ಅಪರಿಪೂರ್ಣತೆ ಆಪ್ತವೆನಿಸಿ...

ಬಿರುಬೆಳಕಿಗಲ್ಲ,
ಕತ್ತಲಿಗೇ ಕಣ್ಮುಚ್ಚಿದವು.
ನೆರಳೊಂದು ದೃಷ್ಟಿಯಲ್ಲದ
ಕಾಣ್ಕೆಯೊಳಗೆ...ಥೇಟ್
ಈ ಗರ್ಭಗುಡಿಯ ಅಭಿನ್ನ
ಮೂಲಬಿಂಬದ ಕಲ್ಪನೆಯ ಹಾಗೇ..

ನಗದ್ದು ಎಂದೂ ನಗುತ್ತಾ,
ನುಡಿಯದ್ದು ನುಡಿಯುತ್ತಾ,
ಭಾವತೀವ್ರತೆಗೇರದ್ದು ಕರಗುತಾ
ನನ್ನೊಳಗಿಳಿಯಿತು,
ಬಿಂಬವಲ್ಲವೀಗ,
ನೆರಳಲ್ಲವೀಗ,
ಅದು ಒಂದು ಸತ್ಯ.

ಕತ್ತಲಿತ್ತಿತ್ತು ಬೆಳಕೀಯದ್ದು.
ಅಭಿವಂದಿಸಿ ವಾಪಾಸಾದೆ,
ಬೆಳಕು ಕಾಯುತಿತ್ತು..
ಕತ್ತಲ ಸತ್ಯವೊಳಗಿತ್ತು.
ಬೆಳಕು ಎಚ್ಚರವಾಗಿತ್ತು...
ಬಾಳು, ಇರುಳ ಜೊತೆಗೆ
ಹಗಲು; ಪಾಠ ಮನನವಾಗಿತ್ತು...

Friday, July 19, 2013

ಮೋಡವಿರದಾಗಸದ ಮಳೆ ಸುರಿದಾಗ..

ಮೋಡ ದಟ್ಟವಾಗುತಲೇ ಸಾಗಿತು
ಸುರಿಯದೇ ಕಣ್ಮರೆಯಾಯಿತು
ಕಣ್ಬಿಟ್ಟು ತೋಳ್ಚಾಚಿ ಕಾದವಳ
ನಿಟ್ಟುಸಿರುಸುರಿದ್ದು ಹೀಗೆ
"ಇಂದು, ಇದು ಎರಡೂ ನನವಲ್ಲ."

ನಕ್ಕು ಕಣ್ಮುಚ್ಚಿದಳು, ಕೈ ಮಡಚಿಟ್ಟು
ಭಾರವಾದೆದೆಯ ಮೇಲೆ...
ಮುಗಿಯಿತೆನಿಸಿದಾಗೊಮ್ಮೆ
ಪರಪರನೆ ಸುರಿಯಿತು
ಹೌದೋ ಅಲ್ಲವೋ ಎಂಬಂತೆ
ಮೋಡ ಸಾಗಿದಾಗಿನ
ಅಳಿದುಳಿದ ಮಳೆ....

ತಡವಿರಲಿಲ್ಲ, ಅಡಿಯಲಿದ್ದ
ಸತ್ವ ಮೊಳೆತು ಮೇಲೆದ್ದವು,
ಮೇಲಿದ್ದವು ದಟ್ಟವಾದವು.
ಸೂರ್ಯ ಅಚ್ಚರಿಯಲಿ
ಕಣ್ಣಗಲಿಸುತಾನೆ..

ಮುಚ್ಚಿದೆವೆಯಡಿಯಿಂದಲೇ
ಇವಳಲ್ಲಿನ ಪ್ರಶ್ನೆಯೋದುತಾಳೆ.
ಉತ್ತರಿಸುತಾಳೆ...
"ಹೂವರಳಲು ನೆಲದಮೇಲೆ..
ಈ ಕಣ್ಬಿಟ್ಟಿರಲೇಬೇಕಿಲ್ಲ,
ತೋಳ್ಚಾಚಿರಲೇಬೇಕಿಲ್ಲ.
ದೊರೆಯೇ, ನೀರಿರದೆ ಹುಟ್ಟಿದ
ಕಳ್ಳಿಯಲೂ ಹೂವರಳಿಸುವ
ಮನಸೆನ್ನಲೊಂದಿದೆ..
ಸದಾ ಎದ್ದಿರುತದೆ, ಕಾದಿರುತದೆ.
ದೊರೆತಾಗ ಎಡೆ, ಒದಗುತದೆ,
ಹೂವಾಗಿ, ಕಾಯಾಗಿ, ಮತ್ತಾಗಿ ಹಣ್ಣು,
ಒಂದೆನೆರಡಾಗಿಸಿ ನೂರ್ಮಡಿಸುತದೆ.

ನನ್ನ ಬರಿದಾಗಿಸುವುದು,
ನಾ ಬರಿದೆನುವುದು
ಅಷ್ಟು ಸುಲಭವಲ್ಲ,
ನಾನೊಂದು ಹೆಣ್ಣು..."

ಹೀಗಿರಲಿ ಕೊನೆ...

ಗರಗರ ತಿರುಗುತಿದೆ ಕಾಲಚಕ್ರ
ತ್ರಿಜ್ಯವಸಂಖ್ಯ ಸುತ್ತಿವೆ ಬಿಡುವಿಲ್ಲದಂತೆ.
ಕಣ್ಣು ಮಯಮಯ,
ಗತಿ-ಸ್ಥಿತಿ ಅಯೋಮಯ..


ಒಲವೇ,
ಅಲ್ಲೆಲ್ಲೋ ನಾನೂ ನೀನೂ
ಎಲ್ಲೆಲ್ಲೋ ಸಾಗಿ ಮತ್ತದೇ
ಕೇಂದ್ರವನೇ ಸುತ್ತುತಿರುವ
ತ್ರಿಜ್ಯಗಳೇ ಆಗಿ ಕಂಡಿಲ್ಲವೇ ನಿನಗೆ?!


ಹೊರಟ ಬಿಂದುವದೇ, ಅದೊಂದೇ..
ದೇಹಗಳ ಜಗಕೂ ,ಮನಸುಗಳ ಜಗಕೂ
ಸಾಮಾನ್ಯ ಕೇಂದ್ರ.
ಜೀವಂತ ಕೇಂದ್ರ.
ಒಲವೇ ನಿಲುವಾದ
ಮೆಲುಗಾನವದಕೆ,
ಸಾಹಿತ್ಯ-ಪ್ರೇಮ,
ರಾಗ-ಪ್ರೇಮ,
ತಾಳ-ಪ್ರೇಮ.
ಸ್ಥಾಯಿಯದೇ.. ಬಲು ಮಂದ್ರ.


ದಿಕ್ಕೆಂಟರಿಂದಲೂ ಒಂದೇ ತರ,
ತಿರುಗುಮುರುಗಿಲ್ಲ, ಅಡಿಮೇಲಿಲ್ಲ.
ಕೊನೆ-ಮೊದಲಿಲ್ಲದ

ಇದೆಯೆಂಬುವಷ್ಟೇ ಇರುವು.
ಇರುವ ಮೀರಿದ ಅಸ್ತಿತ್ವದರಿವು..


ಯಾನದಾರಂಭ ಒಂದೇ ಬಿಂದು,
ಕೊನೆಯೂ ಒಂದು ಬಿಂದು; ಆದರೆ
ನಿನಗೇ ಒಂದು, ನನಗೇ ಒಂದು...


ಇಲ್ಲೆಲ್ಲೋ ಭ್ರಮಣದ ಮಧ್ಯ
ಆಶಯವೊಂದೇ, ಪ್ರಾರ್ಥನೆಯೊಂದೇ..
ನಿಲುವೆಡೆ ಚಲನೆ,
ಹೊರಟ ಬಿಂದುವಿನ
ಪ್ರತಿಬಿಂಬವೇ ಇರಲಿ.
ಎಡಬಲವಾಗದ,

ಬಲಎಡವಾಗದ
ಕನ್ನಡಿಯದ್ದಲ್ಲದ
ಶುಭ್ರ ತಿಳಿಮನಗೊಳದಲಿ
ಪ್ರತಿರೂಪವೇ ಆಗಿ ಬಂದ
ಅಚ್ಚಂಥ ಪ್ರತಿಬಿಂಬ....

Thursday, July 18, 2013

ತಂತಿ ಮೇಲಿನ ಕೋಗಿಲೆ
ಕೂಗಿದೆ ಎಂದಿನಂತೆ.
ಒಡಕುದನಿ ಸೆಳೆದಿಲ್ಲ

ನಿನ್ನೆ-ಮೊನ್ನೆಯಂತೆ.
ಮೆಚ್ಚಿ ಅರಳುವ ಕಣ್ಣು-ಕಿವಿ,
ಕೂತು ಹಾಡುವ ನೆಲೆ,

ದನಿಯಂದದ ಸೆಲೆ
ಅದಕ್ಯಾವುದೂ ಅರಿವಿಲ್ಲ....
ಕೂಗುವುದಷ್ಟೇ ಗೊತ್ತದಕೆ.
ಹಸಿರಿದ್ದಾಗ ಸ್ವಲ್ಪ ಹೆಚ್ಚು
ಒಣಗಿದ್ದಾಗ ಸ್ವಲ್ಪ ಕಮ್ಮಿ

---------------------
ಜಡಿಮಳೆಯಲಿ ಛತ್ರಿಯಿಲ್ಲದೆ ನಡೆದ ಹಾದಿ
ನುಡಿಸಿದ್ದೊಂದೇ ಮಾತು
"ಮಳೆಯಲಿ ನೆನೆಯುವುದರಷ್ಟು

ಮುದ ಇನ್ನೊಂದಿಲ್ಲ..."
ನಿನವಷ್ಟೂ ನುಡಿ ಹೊರಡಿಸಿದ ಧ್ವನಿ
ಹುಟ್ಟಿಸಿದ್ದೊಂದೇ ಮಾತು
"ಪ್ರೀತಿ ನನ್ನಲಿ ಬಲಿಯುತಲೇ ಸಾಗಿರುವಷ್ಟು
ಖಾತ್ರಿ ಇನ್ನೊಂದಿಲ್ಲ..." 

Wednesday, July 17, 2013

ಬೇನಾಮಿನೆಲೆಯಲೊಂದು ಗುನುಗು...

ಬೇನಾಮಿನೆಲೆಯಲೊಂದು ಗುನುಗು...
--------------------------
ಮೌನರಾಗದ ವಿಹ್ವಲ ಆಲಾಪ
ಶತಶತಮಾನಗಳ ಹೊಸಿಲು ದಾಟಿ
ತಲುಪಿದಾಗ ಆ ಬೇನಾಮಿ ನೆಲೆ,
ಅಲ್ಲಿತ್ತು ಎಂದಿಗೂ ಕುಂದದ ಚಂದ್ರಬಿಂಬ.
ತಪ್ತಕಣ್ಣ ಕೊಳದಲದರ ಪ್ರತಿಬಿಂಬ.
ಭಾವದೆಸೆತಕೆ ಏಳುವಲೆಗಳು
ಬಾಗಿಬಳುಕಿದಂತೆ ಆಕಾರವಷ್ಟೇ
ಬದಲಾಗಿ ಗಾತ್ರ ಅಳಿಯದುಳಿವ
ಶುದ್ಧ ಸಾಂತ್ವನದ ಪ್ರತೀಕ
ಮುದ್ದು ಮಿದುಮೊಲದ ಶಶಾಂಕ.
ಸಿಡಿವೆಲ್ಲ ಕಿಡಿ ತಣಿಸೋ ತಂಪು
ಒಡೆದೆಲ್ಲ ಗಡಿ, ಮಣಿಸೋ ಸೊಂಪು
ತಲ್ಲಣ-ಹಲ್ಲಣ ಶಾಂತವಾಗಿಸಿ
ಸ್ವರವೆಲ್ಲ ಶ್ರುತಿಸೇರಿಸುವ ಇಂಪು.

ಬಿಡು,
ಕಾಣಲಾರೆ ಕೇಳಲಾರೆ
ನಿನದದಕೆ ವಿಮುಖತೆ.
ಬೆಳ್ಳಂಬೆಳಕು, ಬಿರುಬಿಸಿಲ
ಬರಿಶಾಖದ ದಾಹ ನಿನಗೆ
ನೀ ಸೂರ್ಯನಭಿಮಾನಿ.
ತಂಪನರಿತಿಲ್ಲ ನೀನದ ಕುಡಿದಿಲ್ಲ...
ಉರಿಯೇ ಸೆಳೆದರೆ ಬಳಿಸಾರುತಿರು
ತಣಿಸುವುದನೆಂದೂ ಜರೆಯದಿರು.
ತಂಪು ನೀರಸವಲ್ಲ,
ಉರಿವುದಷ್ಟೇ ಹಿರಿದಲ್ಲ.

ಓ ಮನಸೇ,
ಒಮ್ಮೊಮ್ಮೆ ಉರಿಗೆ
ಶಮನೋಪಾಯವೂ
ಬೇಕೆನಿಸೀತು, ಆಗ ಬಂದೀಯ
ನೀನೀ ಕಡೆಗೆ, ಈ ಮಡಿಲ ತಂಪಿಗೆ.
ಹರಡಿಹುದು ಪ್ರೇಮಚಂದ್ರಿಕೆಯ
ಈ ಒಡಲ ತುಂಬ ಕಣ್ಣ ತುಂಬಿಹ
ಪೂರ್ಣ ಚಂದ್ರಬಿಂಬ
ಕಾಯಬಲ್ಲುದದು, ಕಾಯುವುರಿಯಲೇ
ಜನ್ಮಾಂತರಕೂ ತಂಪುಳಿಸಿಕೊಳುವುದು.
ಇದು ಚಂದ್ರನಭಿಮಾನಿ.

Monday, July 15, 2013

ಬರಹದೊಳಗಿನ ಓಟ...

ಪೆನ್ನೇನು ಬರೆದೀತು
ತನ್ನೊಳಗಿನ ಶಾಯಿಯ ಕತೆ?!
ಬರೆವ ಸಾಧನವಷ್ಟೇ,
ಒಳಗನೆಲ್ಲೂ ಬಿಚ್ಚಿಡಲಾಗದು..
 
ಶಾಯಿ ಹಾಳೆಯ ತಾಗಲು,
ಹಾಳೆ ಅಕ್ಷರವನುಡಲು
ಅಕ್ಷರ ಕತೆಯ ತಲುಪಲು
ಬಯಸುತಲೋಡುತಲೇ ಇವೆ...
 
ಬರೆವವನ ಖಾಲಿಯಾಗುವಾಸೆಯ
ಓದುವವನ ತುಂಬಿಕೊಳುವಾಸೆ
ಬೆಂಬತ್ತಿದೆ...ಒಂದೂ ಸ್ಥಿರ ನಿಂತಿಲ್ಲ...
 
ಬರೆವಾಗ ಒಳಗಿದ್ದುದನು
ಅಲ್ಲಿಲ್ಲದ್ದರ ಹಿಂದಟ್ಟಿ,
ಓದುವಾಗ ಮುಂದಿದ್ದುದ
ಅಲ್ಲಿಲ್ಲದ್ದರ ಹಿಂದಟ್ಟಿ
ಮನಸೂ ಅಷ್ಟೇ
ಓಡುವೆಲ್ಲವುಗಳನೂ
ಬಿಡದೆ ಹಿಂಬಾಲಿಸುತಿದೆ....
 
 
 
 

**

ಹಿರಿಯಕ್ಕ ಹಗಲು ಬೆಳಕ ಹೆತ್ತ ಬಾಣಂತಿ, ಎರೆದವಳ ಮಲಗಿಸಿ
ಇರುಳ ಹೊತ್ತ ಕಿರಿಯವಳ ಹೆರಿಗೆಗಣಿ ಮಾಡುತಿರುವ
ತವರು ಸಂಜೆ...
ಕಣ್ತುಂಬಿದಂತಿರುವ
ಕಣ್ತಪ್ಪಿಸಿದ್ದಲ್ಲದ
ಕೆಲ ಸತ್ಯಗಳು
ನಾವಿದ್ದಲ್ಲಿಗೆ
ಬರಲಾರವಾದಾಗ
ನಾವೇ ದಾಟಿ
ಅವಿದ್ದ ಜಾಗ
ಹೊಕ್ಕಬಾರದೇಕೆ?
ಹೊಂದಬಾರದೇಕೆ?
ಸತ್ಯ ತಾನಿದ್ದ ನೆಲೆಯಲಷ್ಟೇ
ಅತಿ ಶಕ್ತಿಶಾಲಿ.
ಸಾಗಿ ತಲುಪಬೇಕಾದಲ್ಲಿ
ಹಲಬಾರಿ ನಿತ್ರಾಣಿ..

ಬೆಳಕು ಕತ್ತಲ ಕಸವೆನಿಸಿದಾಗ

ಕತ್ತಲ ಮೂಲೆಯೊಂದ ಗುಡಿಸುತ್ತಿದ್ದೆ
ಬೆಳಕೆಂದೂ ಇರದೆಡೆಯೆಂದು ಕಣ್ಣಗಲಿಸಿದ್ದೆ.
ಕಿಂಚಿತ್ ಕಸವಾದರೂ ಬಿಡದ ಹಠದಲಿದ್ದೆ.
 
ಪೊರಕೆಯೊತ್ತಿ ಅಡ್ಡಡ್ದ ಹಾಕಿ ಗುಡಿಸಿದರೂ,
ನೆಲೆ ಬಿಟ್ಟೇಳದೊಂದು ಬಿಳಿ ತುಣುಕು.
ಕಪ್ಪಷ್ಟೇ ಕತ್ತಲ ಪತ್ತಲಲಿರಬೇಕು,
ಬಿಳಿಯಲ್ಲಿ ಕಸಿವಿಸಿಯೇ ಕಿರಿದಾದರೂ...
 
ಬಾಗಿದ ಬೆನ್ನು, ಅರಳುಗಣ್ಣೆರಡೂ
ನೋಯುತಿವೆ, ನೆಟ್ಟಗಾದೆ.
ಕಸದಿಂದ ಕಣ್ಕಿತ್ತು,
ತಲೆಯೆತ್ತಿ ಊರ್ಧ್ವದೃಷ್ಟಿ ನೆಟ್ಟು
 
ಅರೇ.. ಇಲ್ಲೊಂದು ಬೆಳಕಿಂಡಿಯೂ ಇದೆ
ಈಗೇನು ಇದೆಯೆನುವುದು?
ಮುಂಚಿಂದಲೂ ಇದ್ದದ್ದೇ ಇರಬೇಕು,
ಕಪ್ಪು ಗಳಿಸಿದ ಗಮನ ಸೆಳೆಯದುಳಿದಿದೆ..
 
ನಸುಕಿನ ಶುಭ್ರಬಿಳಿಕಿರಣ ತೂರಿ
ಇಳಿದು ಕರಿನೆಲಕೆ ಕಿರುಗಾಲೂರಿ
ಪುಟ್ಟ ಬೆಳಕ ತುಣುಕಾಗಿದೆ.
ಗುಟ್ಟು ಬಯಲು, ಮನ ಹಗುರಾಗಿದೆ.
 
ಕಗ್ಗತ್ತಲ ಮೂಲೆಗಳಲೆಲ್ಲ
ಮರೆಮಾಡಿ ಬೆಳಕಡಗಿಸುವ
ಗೋಡೆ-ಮಾಡುಗಳ ಕರ್ತೃ
ಬೆಳಕಿಂಡಿಯನೂ ಇಟ್ಟಿರುತಾನೆ.
 
ಕಸಕು ರಸಕು ಅಂತರವರಿಯೆ,
ತಲೆಯೆತ್ತಿ ನೋಡಬೇಕು.
ಅದು ಬೆಳಕಿಂಡಿಯೆನಿಸಬೇಕು.
ತೂರಿಬಂದುದು ಬೆಳಕೆನಿಸಬೇಕು ಅಷ್ಟೇ.

Sunday, July 14, 2013

ಹಗಲೆಲ್ಲ ನಿದ್ರಿಸುವ ಕನಸು ಏಳುವ ಹೊತ್ತು
ಚಂದ್ರನ ದಿಂಬಿನಡಿ ಹುದುಗಿ ಕೂತಾಗ
ಕಚಗುಳಿಯಿಟ್ಟೆಚ್ಚರಿಸಿ ನಿದ್ರಾದೇವಿಯ
ನಿಶಾಯಾನಕೆ ಜೊತೆಯಾಗೆ
ಕಳಿಸಿದ ಚುರುಕುಸಂಜೆ

Saturday, July 13, 2013

ಎಲ್ಲ ಮುಗಿಯಿತೆನಿಸಿದ ಹಗಲ ಕೊನೆ
ಮತ್ತೆ ಕತ್ತಲ ಅಸ್ಪಷ್ಟ ಆರಂಭ
ದಿಗಿಲು ಹುಟ್ಟಿಸುವಾಗ
ಅದರ ಚಂದ ಇದರಲಿ ಪ್ರತಿಫಲಿಸಿ
ಎರಡರ ಸ್ವಾರಸ್ಯ ಸಾಮರಸ್ಯ
ತೋರಿದ ಕನ್ನಡಿ ಸಂಜೆ...

ನಡುನಡುವೆ..

ಹಾದಿಯ ಹದವರಿತು
ಜೊತೆಜೊತೆಗೆ ಹೆಜ್ಜೆ ಹಾಕಿದ
ಪಾದವೆರಡು ಜೊತೆ.
 
ಹೆಜ್ಜೆಗನುಗುಣವಾಗಿ
ತಾಕುತಾ ಮತ್ತೆ ತಾಕದುಳಿಯುತಾ
ಹಸ್ತಗಳೂ ಎರಡು ಜೊತೆ.
 
ನಡುವೇನೇನೋ ಬಂದು ಹೋದವು
ಕೆಲವು ತಾಕಲೆಳಸಿದವು
ಕೆಲವು ದೂರ ನೂಕಿದವು...
 
ಆ ಸಾವು ಮತ್ತು ತಾಜಮಹಲು
ಸಾವಿತ್ರಿಯೆದುರಿನ ಯಮನ ಸೋಲು
ಕುಂತಿಯೊಳಗಿನ ಅನಂತ ದಿಗಿಲು
ಸೀತೆಯ ಮಹಾನತೆಯ ಅಮಲು
ದ್ರೌಪದಿಯ ದ್ವೇಷದ ಘಮಲು
ಅಮ್ಮನ ಮುಸುಕಿನ ಮೂಕಅಳು
ಅಕ್ಕನ ಮುರುಟಿದ ಕವನ-ಗೀತೆಗಳು
ಹೀಗೇ ಅವಳ ಕೈ ಸೋಕಿದವುಗಳು...
 
ಹಂಚಿಕೊಂಡ ಅರ್ಜುನನ ಪಾಡು
ಹಂಚಿಹೋದ ಕೃಷ್ಣನ ಕೊಳಲ ಹಾಡು
ಬಿಟ್ಟು ನಡೆದ ಸಿದ್ಧಾರ್ಥನ ಜಾಡು
ಚೂರಾದ ರಾಮನೊಲವ ಗೂಡು
ಗೆಳೆಯಗೆರೆದ ಕರ್ಣನೆದೆಯ ಗುಟ್ಟು
ಹೂತುಹೋದ ಅಪ್ಪನೆದೆಯ ಮಾತು
ಮುರಿದ ನೆರೆಯ ವಿವಾಹದ ಚೌಕಟ್ಟು
ಹೀಗೇ ಅವನದನೂ ನೂಕಿದವುಗಳು..
 
ತಾಕಿದವನೂ ತಾಕದಂತಿಟ್ಟು
ಮತ್ತೆ ಬೆಸೆವ ಮಹದಾಸೆ ಕೊಟ್ಟು
ಮುನ್ನಡೆಸುವ ಚಿಂತನೆಗಳು
ಬಹುಕ್ರೂರವೆನಿಸಿದ ಗಳಿಗೆ
ಬುದ್ಧಿ ಬೇಕಿರಲಿಲ್ಲ,
ಮನಸಷ್ಟೇ ಸಾಕಿತ್ತನಿಸಿ
ಸುಮ್ಮನೇ ಅದರ ಹಿಂದಿದು
ಅಲೆವ ನಾಯಿಜೋಡಿ, ಬೆಕ್ಕುಜೋಡಿ
ಮನಃಪಟಲ ತುಂಬಿದವು..

**

ಶ್ರೀ ಬಸವರಾಜ ಸೂಳಿಭಾವಿಯವರ ದೀಪದ ಗಿಡ ದ್ವಿಪದಿಗಳ ಪುಸ್ತಕ ಓದಿದೆ, ಒಂದು ಬಾರಿಯಲ್ಲ ತುಂಬಾ ಸಲ ಓದಿದೆ. ಅಂತರ್ಜಾಲದಲ್ಲಿ ಅವರ ದ್ವಿಪದಿಗಳ ಪ್ರಕಟಣೆಗಳ ಮೂಲಕವಷ್ಟೇ ಪರಿಚಯವಿದ್ದ ಆ ದಿನಗಳಲ್ಲೂ ಸೀದಾ ಮನದ ಕೇಂದ್ರಕ್ಕೇ ತಲುಪುವ ಅವರ ಅಭಿವ್ಯಕ್ತಿಯ ಶೈಲಿಯಿಂದಾಗಿ ಆತ್ಮೀಯರೆನಿಸುತಿದ್ದವರು ಅವರು.
ಅಷ್ಟರವರೆಗೆ ಅದೆಷ್ಟೋ ದ್ವಿಪದಿಗಳು ತುಂಬಾ ಪ್ರಭಾವಶಾಲಿಗಳೆನಿಸಿ "ಆಹಾ!" ಎಂಬ ಮಾತು ಅಪ್ರಯತ್ನ ಮನಸಿಂದ ಹೊರಟಿದ್ದವಾದರೂ ಈ ಕೆಳಗಿನ ದ್ವಿಪದಿ ಪ್ರತಿಕ್ರಿಯೆಯೊಂದನ್ನು ಮೊದಲ ಬಾರಿಗೆ ನನ್ನಿಂದ ಬರೆಸಿತು.
"ನಿನ್ನ ಬಳಿ ಬರುವುದೆಂದರೆ ನಾನೇ ಇಲ್ಲವಾಗುವುದು
ನಾನಿದ್ದರೆ ಬೆಟ್ಟ ಮಳೆ ಮಂಜು ಮುಳ್ಳಕಂಟಿ ಮತ್ತು ಆ ಸುಡುವ ಸಮಾಜ ಎದುರಾಗುವುದು"
ಇದಕ್ಕೆ ನಾನು
" ಸರ್, ದೇವರ ದರ್ಶನಕ್ಕೆಂದು ಹೋಗುವಾಗ ಅಡೆತಡೆಗಳನ್ನು ದಾಟಿ, ಮುಳ್ಳುಕಂಟಿಗಳನ್ನು ಹಾದು ಹೋದರೆನೇ, ಆ ನಂತರ ಅವನ ದರ್ಶನವಾದರೆನೇ ಸಾರ್ಥಕ ಅಂತ ಹೇಳ್ತಾರೆ ಹಿರಿಯರು" ಅಂತ ಬರೆದಿದ್ದೆ. ಅದಕ್ಕವರು "ನನ್ನ ಮನಸಲ್ಲಿ ಇದನ್ನು ಬರೆಯುವಾಗ ದೇವರ ಪರಿಕಲ್ಪನೆಯಂತೂ ಖಂಡಿತಾ ಇರಲಿಲ್ಲ, ನಿಮ್ಮ ಸ್ಪಂದನೆಗೆ ನಮನ" ಅಂತ ಪ್ರತಿಕ್ರಿಯಿಸಿದ್ದು ನಮ್ಮ ನಡುವಿನ ಸಂಪರ್ಕವನ್ನು ಒಂದು ಪರಿಚಯವನ್ನಾಗಿಸಿತು.
ಆ ನಂತರದಲ್ಲಿ ಹಲವು ಬರಹಗಳು ಎದೆಯನ್ನೇ ತಾಕುತ್ತಾ ನಡೆದಿದ್ದವು. ಅದರಲ್ಲೂ
"ಈ ಬರಿ ಯಾತನೆಯ ಬದುಕನ್ನಲ್ಲ ಬರೆದದ್ದು ನಗುವಿನ ಬಗೆಗೆ
ದೋಷ ಎಲ್ಲಾಗಿತ್ತೋ ಅದನೋದಿಯೂ ಅವಳ ಕಣ್ಣಲಿ ನೀರಾಡಿತು" ಆಳವಾದೊಂದು ಸತ್ಯದ ಅನಾವರಣವನ್ನು ಸಹಜವಾಗಿ ನಮಗೆ ತಲುಪಿಸುವ ಅವರ ಬರವಣಿಗೆಯ ಶೈಲಿ ಮೋಡಿ ಮಾಡಿದ ಬರಹಗಳಲ್ಲಿ ಇದೂ ಒಂದು. ನೋವು ಅವರೊಳಗೆ ಚಿಗುರಿದ್ದರೆ ಅದು ಬರವಣಿಗೆಯ ಮೂಲಕ ನನ್ನೊಳಗೆ ಇಷ್ಟಗಲದ ಗಿಡವಾಗಿ ಹರಡಿಕೊಳ್ಳುತ್ತಿದ್ದದ್ದಂತೂ ನಿಜ.
"ಈ ಸಾಲುಗಳು ಯಾರಾದರೂ ಬರೆಯಬಹುದೆಂಬ ಮಾತಿಗೆ ಎದುರಾಡಲಾರೆ
ನನ್ನದೆಂಬ ಬದುಕೊಂದಿದ್ದರೆ ನನ್ನಲೂ ಈ ಸಾಲುಗಳು ಹುಟ್ಟುತಿರಲಿಲ್ಲ. "
ಈ ತಣ್ಣನೆಯ ಆದರೆ ಚುಚ್ಚುವ ಪ್ರತಿಕ್ರಿಯೆ,
"ಪ್ರೀತಿಯಕ್ಷರಗಳನು ತಿರುತಿರುಗಿ ರೂಪ ಬದಲಿಸಿ ಬರೆದೆ
ದ್ವೇಷದ ರೋಗಕ್ಕೆ ನನಗೆ ಗೊತ್ತಿರುವ ಮದ್ದು ಇದೊಂದೇ.."
ತನ್ನ ಬರಹದ ತಿರುಳಿನ ಆಯ್ಕೆಗೆ ಕಾರಣ ಕಂಡುಕೊಂಡ ಈ ಪರಿ,
"ಈಗಷ್ಟೇ ಅಲ್ಲ ಪ್ರತಿಸಾರಿಯೂ ಮನೆ ಬದಲಿಸುವಾಗ
ಏನು ಮಾಡಿದರೂ ಅಳಿಸಲಾಗಲಿಲ್ಲ ಗೋಡೆ ಮೇಲಿನ ಮೊಳೆಗಳ ಗುರುತು್"
ಈ ಹತಾಶೆ,
"ನನ್ನ ಆಸೆಯ ಸೂರ್ಯನನ್ನು ಚರಿತ್ರೆ ಚಿನ್ನದ ಕಾಗದದಲ್ಲಿ ಚಿತ್ರಿಸಿತು
ನನ್ನ ಬಯಕೆಯ ಬಟ್ಟಲು ಒಂದು ಚಮಚ ಸಕ್ಕರೆ ಉಪ್ಪು ಖಾರ ಕಣ್ಣೀರಿಂದ ತುಂಬಿತ್ತು"
ಈ ನೋವು,
"ನಿನ್ನೂರ ಬೆಲ್ಲವೇ ಸವಿಯೆಂದು ನಾಡು ನೀಡಿದ ಸರ್ಟಿಫಿಕೇಟು
ನಿನ್ನ ಗಲ್ಲದೆದುರು ಎಷ್ಟೊಂದು ಖೊಟ್ಟಿಯಾಗಿ ಕಂಡಿತು"
ಈ ರಸಿಕತೆ,
"ಎಲ್ಲ ದಿನಗಳಲ್ಲಿ ನಸುಕು ಮನೆಯೊಳಗೆ ಬರುವ ಪೇಪರ್ ತಣ್ಣಗಿರುವುದು
ಆ ಕರುಣಾಳು ಪೇಪರ್ ಹಂಚುವ ಹುಡುಗನ ಕಣ್ಣೀರ ಹಂಚಿಕೊಂಡಿರಬೇಕು"
ಈ ಸೂಕ್ಷ್ಮ ಸಂವೇದನೆ,
"ಮೌನದ ತುಟಿಗಳಿಗೆ ದುಃಖದ ಕಂದೀಲು ತೂಗಿಬಿದ್ದಿದೆ
ಗಾಯದ ತೈಲ ತುಂಬಿದ ಕಂದೀಲು ಗಾಳಿ ತಾಗಿತಾಗಿ ಉರಿದಿದೆ."
ತನದೋ ಅಥವಾ ಇನ್ಯಾರದೋ ಆದ ನೋವಿನ ಬೆಳವಣಿಗೆಯನ್ನು ನೋಡುವ ಈ ನಿರ್ಲಿಪ್ತದಂತೆ ಕಾಣುವ ಆದರೆ ನೊಂದ ದೃಷ್ಟಿ
"ಮನ್ನಿಸು ಹೂಗಳನ್ನಲ್ಲ ನಿನ್ನ ಸಮಾಧಿಯ ಮೇಲೆ ಅಕ್ಷರಗಳನ್ನಿಟ್ಟೆ
ಓದಿದವರ ಎದೆಯಲ್ಲಿ ಅಕ್ಷರಗಳು ನಿನಗೆ ಮರುಹುಟ್ಟು ಕೊಟ್ಟವು"
ಈ ಸತ್ಯಪೂರ್ಣ ನಿವೇದನೆ ಮತ್ತದರ ಪ್ರಾಮಾಣಿಕತೆ
"ನೀ ಹರ್ಷದಿಂದ ಹೂಮಾಲೆ ತಂದಾಗ ತಲೆಬಾಗದೆ ಇರಲಾರೆ
ಹೂಗೋಣು ಮುರಿದು ಮಾಲೆ ಮಾಡಿರುವಾಗ ತಲೆಯೆತ್ತುವುದಾದರೂ ಹೇಗೆ?"
ಮೂಕ ಹೂವಿನ ಗೋಣು ಮುರಿದುದಕೆ ಸ್ಪಂದಿಸಿದ ಈ ರೀತಿ
"ಲೋಕವ ಮಲಗಸಿ ತಾನಷ್ಟೇ ಎಚ್ಚರಿರುವ
ಇರುಳ ನಿದ್ದೆ ಕದ್ದವರಾರು?"
ಇಲ್ಲಿ ಮೂರ್ತ ಹಾಗೂ ಅಮೂರ್ತ ನೋವುಗಳೆರಡನ್ನು ಸಮೀಕರಿಸಿದ ರೀತಿ
"ಹಣತೆ ಹಚ್ಚಿಟ್ಟ ಮೇಲೂ ಎದುರಿನ ಮುಖ ಕಾಣಲಿಲ್ಲವೆಂದಾದರೆ
ದೋಷ ಎಲ್ಲಿದೆಯೆಂದು ಈಗಲಾದರೂ ಹುಡುಕು"
ಇಲ್ಲಿನ ದಾರ್ಶನಿಕ ಸಾರ್ವಕಾಲಿಕಸತ್ಯ.
"ಬರಿಬರಿ ಎನುವ ನಿನ ಸೊಲ್ಲು ಕೇಳಿಸಿಕೊಂಡಾಗಿದೆ ಜೀವವೇ
ಒಮ್ಮೆ ಎದೆಗೊರಗು, ಮಣ್ಣ್ಣಿಗೆ ಬೀಜ ಬೀಳದೆ ಹೋದರೆ ಮೊಳಕೆ ಏಳದು"
ಈ ಸರಳ ಸ್ಪಷ್ಟೀಕರಣ
"ಬೇರು ಕಾಮದ ಕೂಂಡದಲ್ಲಿತ್ತು ನಾನು ಪ್ರೇಮದ ದೇಟಿಗೆ ನೀರುಣಿಸಿದೆ
ಹೌದು ಬೆಳಕಿಗಾಗಿ ಕತ್ತಲೆಯ ಕೌದಿ ಹೊದ್ದು ಮಲಗಲೇಬೇಕು"
ಅರಿವಾದ ಸತ್ಯವೊಂದನ್ನು ಹೋಲಿಕೆಯೊಂದರ ಮೂಲಕ ಹೇಳಿದ ಈ ಸುಂದರ ರೀತಿ
"ಲೋಕವೇ ನೀ ಏನೇ ಮುಂದಿಟ್ಟರೂ ಈ ಕಾಲು ಜಾರದು
ಅವಳು ಭೂಮಿ ಮೇಲಿದ್ದೇ ನಕ್ಷತ್ರ ನೋಡುವುದ ಕಲಿಸಿದಳು"
ಇಲ್ಲಿನ ದೃಢತೆ
"ಈ ಹೊತ್ತು ಹೃದಯಕ್ಕೇನೋ ಆಗಿದೆಯೆಂದು ಮುಟ್ಟಿಕೊಂಡೆ
ನಿನ್ನ ಹೃದಯ ತಾಕಿ ಮುಟ್ಟಿಕೊಂಡ ಬೆರಳು ಒದ್ದೆಯಾದವು"
ಒಂದಾದ ಪರಿಯನ್ನು ಹೇಳಿದ ಚಂದದ ರೀತಿ
"ಅವಳೆಡೆಗೆ ಕೈ ಚಾಚಿದಾಗ ರಾಧೆಯಾಗಿದ್ದಳು, ತಲೆ ಚಾಚಿದಾಗ ಯಶೋದೆಯಾದಳು"
ಈ ಕಾಣ್ಕೆ,
"ಕಣ್ಣೆ ಮಂಜಾಗಿರುವಾಗ ಕನ್ನಡಿಯದೇನು ತಪ್ಪು?"
"ನೀ ಕೇಳಿದೆ ಕಲ್ಲಿನ ಕತೆಯೇನು, ಹೇಗೆ ಹೇಳುವುದ ಕಲ್ಲಾದ ಮೇಲೆ ಕತೆ"
ಇಲ್ಲಿನ ಅಸಹಾಯಕತೆ
"ಕತ್ತಲಲಿ ದೀಪ ಹಚ್ಚಿಡುವ ದಡ್ಡತನವಷ್ಟೇ ಜತೆಯಲಿತ್ತು
ಬೆಳಕಿನ ಬಗ್ಗೆ ಉದ್ದುದ್ದ ವ್ಯಾಖ್ಯಾನ ಮಾಡುವುದು ನನಗೊಲಿಯಲಿಲ್ಲ"
ಇಲ್ಲಿ ಬಿಚ್ಚಿಟ್ಟ ತನ್ನ ಚಿಂತನೆಗಳ ವಾಸ್ತವಿಕ ತಳಹದಿ
"ನಿನ್ನ ಕಾಲುನೋವಿನ ಸುದ್ದಿ ಈಗಷ್ಟೇ ತಲುಪಿತು
ರಾತ್ರಿ ನನ್ನ ಕನಸಲ್ಲಿ ನೀ ಅಷ್ಟು ಓಡಾಡಬಾರದಿತ್ತು"
ಇಲ್ಲಿನ ಚಿತ್ರಣ ಮತ್ತೆ ಕಲ್ಪನೆ
"ಸುಮ್ಮನೆ ದೀಪ ಹಚ್ಚಿಟ್ಟೆ
ಕಾಣುವುದು ನಿಚ್ಚಳವಾದಂತೆ ಹುಡುಕುವ ಉತ್ಸಾಹವೇ ತಣ್ಣಗಾಯಿತು"
ಇಲ್ಲಿನ ಭ್ರಮನಿರಸನ
ಹೀಗೆ ಬರೆಯುತ್ತಾ ಹೋದರೆ ಅಲ್ಲಿರುವ ಐದುನೂರಕ್ಕೆ ಮಿಕ್ಕಿದವೆಲ್ಲವನ್ನೂ ನೆನೆಸುವಾ ಅನಿಸುತ್ತದೆ. ಆ ಎಲ್ಲಾ ಬರಹಗಳೂ ಒಂದಲ್ಲ ಒಂದು ರೀತಿಯಲ್ಲಿ ಮುದಗೊಳಿಸಿದವು, ಅಚ್ಚರಿಗೊಳಿಸಿದವು, ಕಣ್ತೆರೆಸಿದವು, ಕಣ್ತುಂಬಿಸಿದವು, ಎದೆ ಭಾರ ಮಾಡಿದವು, ಭ್ರಮೆಯ ಪೊರೆ ಕಳಚಿದವು, ಚುಚ್ಚಿದವು, ಆತ್ಮವಿಮರ್ಶೆಗೆ ಹಚ್ಚಿದವು, ವಿಧಿ ಎನುವದ್ದರ ಮೇಲೆ ಮುನಿಸಾಗುವಂತೆ ಮಾಡಿದವು, ಅವರ ಮನಸು ತುಂಬಿದ ಆ ಪ್ರೇಮಕ್ಕೆ ಅರ್ಹವಾಗಿ ಈಗಿಲ್ಲವಾದ ವ್ಯಕ್ತಿತ್ವದ ಬಗ್ಗೆ ಅತೀವ ಗೌರವ ಹುಟ್ಟಿಸುವವು ಮತ್ತೆಲ್ಲಕ್ಕಿಂತ ಹೆಚ್ಚಾಗಿ ಅವರನ್ನು ನಮಗೆ ತುಂಬಾ ಬೇಕಾದವರು ಅನಿಸುವಂತೆ ಮಾಡಿ ಅವರ ಎಲ್ಲಾ ಬರಹಗಳಲ್ಲೂ ಒಂದಲ್ಲ ಒಂದು ರೀತಿಯಲ್ಲಿ ಇಣುಕುವ ಅವರೊಳಗನ್ನೆಲ್ಲ ಗಾಢವಾಗಿ ಆವರಿಸಿಕೊಂಡಿರುವ ದುಃಖವನ್ನು ಹೇಗಾದರೂ ಪರಿಹರಿಸಪ್ಪಾ ಅಂತ ಈ ಜಗನ್ನಿಯಾಮಕ ಶಕ್ತಿಯಲ್ಲಿ ಅರಕೆ ಮಾಡಿಕೊಳ್ಳುವಂತೆ ನನ್ನನ್ನು ಪ್ರಭಾವಿಸಿದವುಗಳು. ಇನ್ನೂ ಒಂದಿದೆ, ಗಗನಕುಸುಮಕ್ಕೆ ಕೈಚಾಚುವುದು ಅನಿಸಿದರೂ ಸರಿ, ನಾನೂ ಇದೇ ರೀತಿ ಇಷ್ಟೇ ಪ್ರಭಾವಶಾಲಿಯಾಗಿ ಬರೆಯಬೇಕೆಂಬ ಆಸೆಗೆ ಕಾರಣವಾದವು ಮತ್ತೆ ಸೀಮಿತ ಓದಿನ ನನ್ನ ಅತಿಸಣ್ಣ ಸಾಹಿತ್ಯ ಪ್ರಪಂಚದಲ್ಲಿನ ಪುಟ್ಟಪುಟ್ಟ ಪ್ರಯತ್ನಗಳಿಗೆ ಸ್ಫೂರ್ತಿಯಾದವುಗಳು.
"ಬರೆವ ಎರಡು ಸಾಲು ಕವಿತೆಯಾಗಿಸದೆ ಹೋದರೆ
ಕವಿಯೇ, ನೂರುಸಾಲು ಬರೆದರೂ ಕವಿತೆ ಹುಟ್ಟದು"
ಈ ಸಾಲುಗಳು ಅವರ ಈ ದ್ವಿಪದಿಗಳ ಬರವಣಿಗೆಯ ಸತ್ವದ ಗುಟ್ಟನ್ನು ಮತ್ತದರ ಸತ್ಯವನ್ನು ಸಾರಿ ಹೇಳುತ್ತವೆ.
ನೋವು ತನ್ನನ್ನು ತಾನು ಅಭಿವ್ಯಕ್ತಿಸಿಕೊಂಡಷ್ಟು ಪ್ರಭಾವಶಾಲಿಯಾಗಿ ಇನ್ನು ಯಾವ ಸಂವೇದನೆಯೂ ಮಾಡಿಕೊಳ್ಳಲಾಗದು- ಇದು ಈ ಬರಹಗಳನ್ನು ನೋಡಿದಾಗಲೆಲ್ಲಾ ನನಗನಿಸುವುದು. ಅವರ ನೋವು ನಮ್ಮನ್ನು ಆಕರ್ಷಿಸಿ, ಪ್ರಭಾವಿಸಿ, ಅವರ ಬರಹಗಳನ್ನು, ಅಲ್ಲಿನ ಸರಳಸಹಜ ಸತ್ಯವನ್ನು ನಾವು ಸಂಭ್ರಮಿಸುವಂತೆ ಮಾಡಿದೆ ಎಂಬುವುದು ನಿಜ. ಅವರಿನ್ನೂ ತುಂಬಾ ಬರೆಯಬೇಕೆಂಬುವ, ಅದನ್ನೋದಿ ನಾವು ಸಂಭ್ರಮಿಸುತ್ತಲೇ ಇರಬೇಕು ಅನ್ನುವ ಆಶಯವಿರುವುದೂ ನಿಜ. ಆದರೆ ಕಾಲ ಅವರ ನೋವಿಗೆ ತಕ್ಕ ಲೇಪ ಹಚ್ಚಲಿ, ಅವರ ಮನಸು, ಬದುಕು ತಂಪಾಗಿರಲಿ ಅನ್ನುವ ಹಾರೈಕೆ ಅದಕ್ಕಿಂತಲೂ ಹೆಚ್ಚು ಪ್ರಾಮಾಣಿಕವಾದದ್ದು ಎನ್ನುವುದೂ ಅಷ್ಟೇ ನಿಜ.
(ಬಸವರಾಜ ಸೂಳಿಭಾವಿಯವರ ಸಂಪರ್ಕವಿಲ್ಲದವರಿಗಾಗಿ: ಅವರ ಬ್ಲಾಗ್ ನ ಹೆಸರು ಲಡಾಯಿ ಪ್ರಕಾಶನ
ladaiprakashanabasu.blogspot.com
, ಅವರ ಈ ಮೂರು ಕವನ ಸಂಕಲನಗಳು ಕವಿ ಪ್ರಕಾಶನ ಕವಲಕ್ಕಿ- ಹೊನ್ನಾವರ ಇವರಿಂದ ಪ್ರಕಟಣೆಯಾಗಿವೆ- ೧) ದೀಪದ ಗಿಡ ೨) ಬಟ್ಟೆಯೆಂಬುದು ಬೆಂಕಿಯ ಹಾಗೆ ೩) ತೇವಕಾಯುವ ಬೀಜ .ಅಲ್ಲಿನ ವಿಳಾಸ: ಕವಿ ಪ್ರಕಾಶನ, ಜಲಜ ಜನರಲ್ ಅಂಡ್ ಮೆಟರ್ನಿಟಿ ಕ್ಲಿನಿಕ್, ಕವಲಕ್ಕಿ, ಹೊನ್ನಾವರ, ಉತ್ತರಕನ್ನಡ.
ಫೋನ್: ೯೪೮೦೨೧೧೩೨೦)