Tuesday, September 10, 2013

ಅವಳ ಕರೆತಾರೇ ಗೌರಮ್ಮಾ....

ಧಗೆಯಮ್ಮಾ.....
ಹೊತ್ತಿ ಉರಿಯುತಿವೆ ಮನಸುಗಳು.
 
ನಗೆಯ ವರ ತಾರಮ್ಮಾ..
ಬೇರೆಲ್ಲ ಸೌಭಾಗ್ಯ ಬಿಟ್ಟುಬಿಡು.
 
ಕೈ ಹಂಚಿವೆ ಕೆಂಡ,
ಬಾಳೊಂದು ಯುದ್ಧಕಾಂಡ.
 
ಎದೆ ತುಂಬಿದೆ ಬರೀ ಹೊಗೆ,
ಒಳಗೆಲ್ಲ ಚೆಲುವು ಸುಟ್ಟಿದ್ದಕೆ.
 
ಉಸಿರುಗಟ್ಟಿ ಕೆಮ್ಮಿ ಬಯ್ಗುಳು,
ಬಾಯ್ಬಿಟ್ಟರೆ ಬರೀ ರಕ್ತದುಗುಳು.
 
ರಾಗದ್ವೇಷಗಳ ಸಾಮ್ರಾಜ್ಯ
ಪ್ರೀತಿಪ್ರೇಮ ನಿಸ್ತೇಜ..
 
ಹತಭಾಗ್ಯ ಮುಖಕೆ ಸೆಟ್ಟಿಸಿಂಗಾರ
ಒಳಗೆ ಹಗೆಕೋಪದ ಬಗೆಭಂಡಾರ..
 
ನಿನ್ನನೂ ಬಿಟ್ಟಿಲ್ಲ, ಹಿತವಾದುದೇನನೂ...
ಹೆಸರೆಳೆದೆಳೆದು ತಂದಿಲ್ಲಿ
ಜಿಜ್ಞಾಸೆಯಾಗಿಸುತಾರೆ.
ಪ್ರಶ್ನೆಯ ಕಿಡಿ, ಉತ್ತರವೂ ಕಿಡಿಯೇ.
 
ಭಕ್ತಿ-ನಂಬಿಕೆ ಉರಿಸಿ
ಬೂದಿಯಾಗಿಸಲಾಗಿದೆ.
ಆ ಬೂದಿ ಹಣೆಗಿಟ್ಟು
ಉರಿವ ಶಕ್ತಿಯದೆನಲಾಗಿದೆ.
 
ಸ್ಥಿರ ತಾವಿರದೆ ಶ್ರದ್ಧೆ,
ಇರಿಸಿದಲ್ಲಿರಲಾಗದೆ ತ್ರಿಶಂಕು.
 
ನಗು ಮೃದುಮುಗುದೆ
ಹತಾಶೆ-ನಿರಾಶೆಯ ಕೈಲಿ
ಅತ್ಯಾಚಾರಕೊಳಗಾಗಿ
ಚಿಂದಿಚಿಂದಿ, ಮುಖ ಮುಚ್ಚಿ
ನಿನ್ನೆಡೆಗೋಡಿ ಬಂದಾಗಿದೆ.
 
ಕರೆದುತಾರೇ ತಾಯಿ..
ಕಳಚಲಾಗದೊಂದು
ಧೈರ್ಯಸ್ಥೈರ್ಯದ ಸೀರೆಯುಡಿಸಿ.
ಉರಿಸಲಾಗದೊಂದು
ವಜ್ರದಂಥ ನಿಲುವು ಮುಡಿಸಿ.
ದ್ವೇಷ-ಸಿಟ್ಟು ಕರಗಿಸುವ
ಪ್ರೀತಿಯ ಶಕ್ತಿಯಾಯುಧವಿತ್ತು.
 
ದೂಡುವ ಕೈಗಳ ಮುದ್ದಿಸಿ
ಕೊರಳಹಾರ ಮಾಡುವ ಚೆಲುವು,
ಮೂಡಿದೆಲ್ಲ ಅಡೆತಡೆ ತರಿದು
ಮನನುಗ್ಗಿ ಮನೆ ಮಾಡುವ ಒಲವು,
ಹೊಸದಾಗಿ ಹೀಗೆ ಸಿಂಗರಿಸಿ
ಮತ್ತವಳ ಧರೆಗಿಳಿಸಿ ತಾರೇ...
 
ಹಿಂದೆ ನಾ ಕೇಳಿದ್ದೆಲ್ಲ,
ನೀನಿತ್ತದ್ದೆಲ್ಲ ಇಂದು ತೃಣವೆನ್ನಬಲ್ಲೆ.
ಮಾನವತೆಯ ಗಿಡದಲೀಗ
ನೀನರಳಿಸಬೇಕು ತುರ್ತು ನಗುಮೊಲ್ಲೆ...
 
 
 

No comments:

Post a Comment