Monday, July 22, 2013

ನಮನ

ಅಡಕ ಸ್ವಂತಿಕೆಯ
ಗುರುತಿಸಿ, ಹೊರತರಿಸಿ
ಬೀಜದೊಳಡಕ ಮೊಳಕೆಯಂಥ
ಅರಿವಿಗೆ ಕಣ್ತೆರೆಸುವ,

ನೋಯದೆ, ನೋಯಿಸದೆ
ಸಾಗುವ ದಾರಿ, ನಡೆವ ಪರಿ
ಬೆಳೆವ ದಿಶೆ, ಮುಟ್ಟುವ ಗುರಿ
ಸ್ಪಷ್ಟಗೊಳಿಸುವ,

ತಮದ ತೊಡಕು ತರಿದು,
ಒಡಲಾಳದ ನಗೆಯ ಛವಿಯಲೇ
ನೇರ ಸಾಗುತಲಿರುವ
ಸರಿ ಉಪಾಯವರುಹುವ,

ಕಣ್ಕಟ್ಟಿದೆಡೆ ಪಟ್ಟಿ ಬಿಚ್ಚಿ,
ಕಣ್ಣು ತಿಕ್ಕಿ, ತನ್ನಂಗೈ ಶಾಖವಿತ್ತು,
ಮಂಜುಮಂಜಾಗಿದ್ದುದೆಲ್ಲ
ತಿಳಿಯಾಗಿಸುವ,

ತನ್ನೊಡಲ ಬಗೆದು ತೋರಿ,
ಒಡಲ ಜಾಲಾಡುವುದ ಕಲಿಸಿ
ಒಳಗುಟ್ಟು ಶೋಧಿಸಿಸಿ
ಸ್ವಪರಿಚಯವೀವ,

ಅಂತಃಸತ್ವ ಜತನದಲೆತ್ತಿ
ಮೇಲ್ಮೈಗೆ ತಂದಿಟ್ಟು
ಪ್ರಯತ್ನಪೂಜೆಯಲಿ ಔನ್ನತ್ಯಕ್ಕೇರಿಸಿ,
ಹೊಸದಾಗಿಸಿ ತೋರುವ,

ಕೀಳರಿಮೆ ಕಳೆ ಕಿತ್ತು,
ಒಲುಮೆಯಲ್ಲೆಲ್ಲ ಬಿತ್ತಿ,
ತನ್ನ ತಾನೆಂದಷ್ಟೇ ಪ್ರೀತಿಸುವ
ಬಗೆ ಕಲಿಸಿಕೊಟ್ಟ,

ಗುರುವಿಗೆನಮನಗಳು.

(ಇದುವರೆಗೆ ನಾವು ಅರಿತಿರದ ಹೊಸತೊಂದಕ್ಕೆ ನಮ್ಮನ್ನ ಪರಿಚಯಿಸಿ ನಮ್ಮನ್ನದಕ್ಕೆ ಒಗ್ಗಿಕೊಳ್ಳುವ ಹಾಗೆ ಮಾಡಿ, ಅದನ್ನು ಜೀವನಕ್ಕೆ ಅಳವಡಿಸಿಕೊಳ್ಳುವ ಜ್ಞಾನ ಪಡೆದುಕೊಳ್ಳುವಲ್ಲಿ ಸಹಾಯವಾಗುವ ವ್ಯಕ್ತಿತ್ವಗಳನ್ನು ಗುರುಗಳು ಅಂತ ಗುರುತಿಸುತ್ತೇವೆ. ಎದುರಾದ ವ್ಯಕ್ತಿತ್ವಗಳೆಲ್ಲ ಅನುಭವಗಳನ್ನು, ಆ ಮೂಲಕ ಹೊಸಪಾಠ, ಹೊಸಅರಿವು, ಹೊಸಗುರಿ, ಹೊಸದಾರಿ, ಹೊಸಸಂತಸ ಇವುಗಳಲ್ಲಿ ಒಂದಲ್ಲ ಒಂದನ್ನು ಪರಿಚಯಿಸಿದಂಥವುಗಳೇ ಹೌದು. ಹಾಗಾಗಿ ಆ ಹಂತದಲ್ಲಿ ಅವರೆಲ್ಲರೂ ಗುರುವಿನ ಚೈತನ್ಯವನ್ನು ಆವಾಹಿಸಿಕೊಂಡವರೇ ಆಗಿರುತ್ತಾರೆ. ಹಾಗಾಗಿ ನನ್ನ ಪರಿಚಯದ ಪರಿಧಿಯೊಳಗಿನ ಎಲ್ಲ ಚೈತನ್ಯಗಳಿಗೂ ಗುರುಪೂರ್ಣಿಮೆಯ ಸಂದರ್ಭದ ನಮನಗಳು.)
 
 
 
 

3 comments:

  1. ಮೇಡಮ್,
    ವ್ಯಾಕರಣದ ಮೇರೆಗೆ ‘ಗುರವೇ’ ಎನ್ನುವುದು ಸರಿ, ‘ಗುರುವೇ’ ಅಲ್ಲ. ದಯವಿಟ್ಟು ತಿದ್ದಿಕೊಳ್ಳಲು ವಿನಂತಿಸುತ್ತೇನೆ.

    ReplyDelete
    Replies
    1. ಸಂಸ್ಕೃತದಲ್ಲಿ ಹಾಗಂತ ಗೊತ್ತಿತ್ತು.. ಕನ್ನಡದಲ್ಲಿಯೂ ಹಾಗೆಯೇ ಅಂತ ಗೊತ್ತಿರಲಿಲ್ಲ. ಖಂಡಿತಾ ತಿದ್ಕೊಳ್ತೇನೆ.. ಧನ್ಯವಾದ...

      Delete
  2. ಕಾಣದ್ದನ್ನು "ಹೊಸದಾಗಿಸಿ ತೋರುವ"ವನೇ ನಿಜವಾದ ಗುರು. ಗುರುಭ್ಯೋ ನಮಃ

    ReplyDelete