Thursday, August 22, 2013

ಕಾಲನಿಗೊಂದು ಶರತ್ತು

ಅಮ್ಮ ಹೇಳುತಾಳೆ
"ಇನ್ನಿರಬಾರದು ಕಂದಾ.."
ಅಪ್ಪ ಹೇಳುತಾರೆ
"ತಟ್ಟಂತ ಬಿದ್ ಹೋಗಬೇಕು ಕಣೋ.." 
"
ಸುಮ್ಮನಿರಮ್ಮಾ... " ಗದರುತ್ತಿದ್ದ ದನಿಯಿಂದೇಕೋ ಮೌನ..
 
ಕ್ಷಣಭಂಗುರದ ಜೀವನದ
ಏರುಹಾದಿಯಲಿ ಆ ಕರುಳಕುಡಿ
ಸಾವಿನರಮನೆಯ ಹೊಸ್ತಿಲ
ಕಾಲಿಗಂಟಿಸಿಕೊಂಡು ತಿರುಗುತ್ತಿದ್ದಾನೆ
ಗಳಿಗೆಕೂಡಿದ ಹೊತ್ತು
ಒಳಗಡಿಯಿಡಲು..
 
ಕಿತ್ತು ತಿನ್ನುವ ನೋವಲೂ ಅಮ್ಮಗನುತಾನೆ,
"
ಮೊಮ್ಮಗುವಿಗೆ ಎಣ್ಣೆಸ್ನಾನಕ್ಯಾರು ಗತಿಯೇ ಅಮ್ಮಾ?"ಸವೆಯುತಿರುವ ಜೀವನಪ್ರೀತಿಯಲೂ ಅಪ್ಪಗನುತಾನೆ
"ಅಕ್ಷರಾಭ್ಯಾಸಕ್ಯಾರ ಕರೆಯಲೋ ಅಪ್ಪಾ?" 
ಹೆಣ್ಣು ಹುಡುಕಿ ಸೋತ ಕಂಗಳು ಪ್ರಶ್ನೆಯಾಗುತ್ತವೆ..
"
ಹೆಣ್ಣೊಂದನೂ ಒಪ್ಪದೇ ಮೊಮ್ಮಗುವಿನ ಕನಸೇ?ಬರೀ ನಿರಾಕರಿಸುವ ಕೈಗಳಿಗೆ ತಾಳಿ ಕಟ್ಟುವ ಕನಸೇ?"
ಮತ್ತೆ ಭರದಿಂದ ಚಾಳೀಸುಟ್ಟುಕೊಂಡು
ಜಾತಕದ ಪಿಂಡಿಯೊಳಗಲೆಯುತ್ತವೆ..
 
ಕದ್ದುಮುಚ್ಚಿ ಉಣ್ಣುವ ಮಾತ್ರೆಯೂಟಕೆ
ಉಬ್ಬರಿಸಿದ ಹೊಟ್ಟೆಗಿಂದು ಅಮ್ಮ ಬಡಿಸಿದ್ದೆಲ್ಲ ತುರುಕುತಾನೆ..
ಕಣ್ಬಿಡಲಾಗದ ಸಂಕಟದಲೂ
ಅಪ್ಪಗೆ ನಗೆಬುಗ್ಗೆಯೋದಿ ನಗಿಸುತಾನೆ..
ನಾಳೆ ಖಚಿತವಿಲ್ಲ ಅವಗೆ..ಯಾರಿಗ್ಗೊತ್ತು,
ಅಸ್ತು ದೇವತೆ ಈ ಮನೆಯಲೇ ಇದ್ದರೆ!?
 
ಅಪ್ಪ ಸವೆದ ಮೆಟ್ಟುಟ್ಟು ಕಾಲೆಳೆದ ನಡಿಗೆಯಲಿ
ಮಗನ ಭುಜದಾಸರೆಯ ಭರವಸೆ,
ಅಮ್ಮನ ನಡುಗುಕೈ ತೆಗೆದ ಕಾಯಿಹಾಲಲಿ
ಮಗ ಒತ್ತುಶ್ಯಾವಿಗೆಯೊತ್ತಿಕೊಡುವ ಒತ್ತಾಸೆ,
ಕಂಡು, ಕಾಣಿಸದಂತೆ ಕಣ್ಣೀರಾಗುತಾನೆ
ನಗೆಯ ಧಿರಿಸುಡುತಾನೆ..
 
ಕಾಲನ ಬೇಡುತಾನೆ..
"
ಬಂದು ಬಿಡೋ ಈಗ ನನ್ನೆಡೆಗೆ..ನೋವು ತಯಾರಾಗಿಸಿದೆ,
ಪ್ರತಿಭಟಿಸದೆ, ಎದುರಾಡದೆ,
ಹೋರಾಡದೆ, ಲೋಕಕಂಟಿದೆಲ್ಲ
ನಂಟಿನಂಟು ಕಿತ್ತು ನಾನೇ
ನಗುತ ಕೊರಳೊಡ್ಡುವೆ ಕುಣಿಕೆಗೆ
ವರನೊಡ್ಡಿದಂತೆ ಕತ್ತವಳ ಹಾರಕೆ..
ಆದರೊಂದು ಶರತ್ತು..
ಒಂದೇ ಒಂದು ಕ್ಷಣ ಮೊದಲು
ಇವರನೊಯ್ಯಬೇಕು ನೋಡು ನೀನು.."

No comments:

Post a Comment