Sunday, May 22, 2016

ಪತ್ತಲುಟ್ಟು ಬರುತಿದ್ದ ಕಚಗುಳಿಯ
ಬೆತ್ತಲಾಗಿಸಿ, ತಾಗಿಸಿ ನಿಜಗುರುತಾಗಿಸಿದವನೇ,
ಮೈಮುರಿದು ಹೊರಟ ನೆಟಿಕೆ ಸಾರಿವೆ,
ಜೀವಕಣಕಣಕೀಗ ಋಣಭಾರ!

ಆಳದ ಬೊಗಸೆ ಅಂತರ್ಜಲವ
ಕೆದಕೆದಕಿ ಅಡಗಿದೊರತೆ ಝಿಲ್ಲನೆ ಚಿಮ್ಮಿಸಿದವನೇ,
ಜುಳುಜುಳು ಗುಪ್ತಗಾಮಿನಿ ಸಾರಿದೆ,
ಹನಿಹನಿಗೂ ಈಗ ಋಣಭಾರ!

ಸಹಸ್ರಾಕ್ಷ-ಸಹಸ್ರಬಾಹುಗಳಾಗಿ
ಮೇಲಿಂದ ನಕ್ಷತ್ರ, ತಳದಿಂದ ಮುತ್ತು,
ಮತ್ತದೋ ಆ ಕ್ಷಿತಿಜದಕ್ಷಯ ರಂಗು
ತರಲು ಸಾಗಿವೆ ದೂರದೂರ ಭರದಿಂದ..

ಗಂಧರ್ವಗಾಯನ ತರಬಹುದೇ?
ಧ್ವನಿಯ ನೆಲೆಯ ಕಣ್ಮುಚ್ಚಿ ಕೂತು ಕೇಳುವುದಾದೀತೇ?
ನೀನೋ ಜಂಗಮ ಜೋಗಿ!

ಗಾಳಿಯಂತಾಡಿಸುವ ನಶೆ ತಂದರಾದೀತೇ?
ತುಟಿ ಸೋಕುವುದಿರಲಿ, ಪಿಸುನುಡಿಗೇ ನಾ ತೂರಾಡಿದ್ದಿದೆ;
ನಿನ್ನ ನೋಟಕಿಂತ ನಶೆಯುಂಟೆ?

ಬಿಡು, ಋಣವೇ ಬೆಸೆಯಲಿ ಸಾವಿನಾಚೆಗೂ.
ಈ ಯುಗದಾದಿ ಬೆಸೆದಂತೆ ನಾಳಿನವು ಮತ್ತೆಮತ್ತೆ.
ರಾಶಿ ಪೇರಿಸುತಿರು ಋಣದ ಕ್ಷಣಗಳ ಹಾಗೇ,
ಹುಟ್ಟಿ, ಹುಡುಕಿ ಬರಲಿರುವೆ ನಾನಂತೂ ಹೀಗೇ ಮತ್ತೆಮತ್ತೆ!

No comments:

Post a Comment