Saturday, May 21, 2016

ಹಾಗೇ ಅಂಗಾಲ ಕಲೆಯಾದ ಒಂದಷ್ಟು ಹಠಮಾರಿ ಕೆಮ್ಮಣ್ಣು
ವೈಶಾಖದ ಕೊನೆಕೊನೆಯ ಕಡುಬಿಸಿಲಿಳಿಸಿಕೊಂಡ ಉರಿಗಣ್ಣು
ಗಾಳಿಯ ಬೀಸುಧರ್ಮಕೆ ಸ್ಪಂದಿಸಿ ಬಂಧ ಕಳಚಿಕೊಳುವೆಲೆ
"ನಾನೂ.." ಎನುತ ಮಕಾಡೆ ನೆಲಕಚ್ಚುವದೇ ವರವೆಂದುದುರುವ ಪಾರಿಜಾತ...
ಈಗೀಗ ಅತಿಸಹಜವೂ ನಿಜದಚ್ಚರಿಯೆನಿಸುವುದು;
ಹಗಲು ನಿದ್ದೆಗೆಳಸಿ, ರಾತ್ರಿಯೆಚ್ಚರಿಸುವುದು ಮಾಮೂಲೆನಿಸುವುದು..

ವನಮಾಲಿಯೇ ನಿಲ್ಲಿಸದಿರು ಕೊಳಲಗಾನವೆಂದರವರು,
"ನನ್ನ ಮಹಾಬಲಿಯೇ ನಿಲ್ಲಿಸಿಬಿಡೆಲ್ಲವ" ಇದು ನಾ ಹೇಳುವುದು!
ಸಾಕು, ಕನಸರೆಕ್ಕೆಯೇರಿಯಷ್ಟೇ ಬರುವ ನಗುವೂ,
ಮತ್ತು ನಿದ್ದೆ ಕಳುವಾದ ಕಣ್ಣುಗಳ ಬಿಕ್ಕು ಪ್ರವಾಹವೂ..
ಸಾಕು, ತೂರಿಬಂದ ಪರಿಮಳದಲೆಯಿಲ್ಲೇ ತೆಳುವಾಗಲಿ,
ಬೆಸೆವ ಸೇತು ಅಂತರದಳತೆಯ ಮಾಪನವಾಗಲಿ..

ಹೌದು,
"ಮಳೆ ಬೀಳದಿರಲಿ, ಹಸಿರುದಿಸದಿರಲಿ, ಹೂವರಳದಿರಲಿ,
ತೆನೆಬತ್ತಕಾಳಲಿ, ಹಟ್ಟಿಹಟ್ಟಿಯ ತಾಯ್ಕೆಚ್ಚಲಲಿ ಹಾಲ್ದುಂಬದಿರಲಿ.."
ಎಂದೆನುವುದಾದರೆ ಹೊಳೆಹೊಳೆದ ಆ ನಿನ್ನೆ ಮರುಕಳಿಸದಿರಲಿ..
ಅಯ್ಯೋ...
ಸುತ್ತುಬಳಸಿ ಹೇಳಿಕೇಳಲಿರುವುದಾದರೂ ಏನು,
ಮೌನ ತೂಗಿತೂಗಿ ಮಲಗಿಸಿದ ಹೊತ್ತನೆಬ್ಬಿಸಬಹುದಿತ್ತು,
ಬಂದುಬಿಡಬಹುದಿತ್ತು; ಬಿಲ್ಕುಲ್ ಇಲ್ಲಿಲ್ಲದಿರುವದ್ದು ಇಂದಿಲ್ಲಿರಬಹುದಿತ್ತು..

No comments:

Post a Comment