Monday, July 4, 2016

ನಾಳೆ ಬರುವೆ ಅಂದಿದ್ದಾನವ.

ಹಕ್ಕಿಗೂಡಿಟ್ಟಿದ್ದ ಪಾರಿಜಾತದ ಗೆಲ್ಲು
ಗಾಳಿಗೂ ಅಲ್ಲ, ಕೊಡಲಿಗೂ ಅಲ್ಲ;
ನೆಟ್ಟ ಕೈಗಳೇ ಮುಟ್ಟಿದಷ್ಟಕ್ಕೇ ಪಟ್ಟನೆ ಮುರಿದುಬಿತ್ತು.

ಸೊಪ್ಪು ಹಾಸಿನ ಮೇಲೆ ಬೆಚ್ಚನೆ
ಕುಪ್ಪಳಿಸಿ ಕೆಚ್ಚಲು ಚೀಪುತ್ತಿದ್ದ ಕರು ಕಪಿಲೆ
ಮನೆಮಗಳ ಬಳುವಳಿ ಪಟ್ಟಿ ಸೇರಿ, ಸೋರದೆಯೂ ಹಟ್ಟಿ ನೆಲ ಒದ್ದೆಒದ್ದೆ!

ಏನೋ ಎಲ್ಲ ಮುರಿದು
ಇನ್ನೇನೇನೋ ಜರಿದು ಒಳಗೆಂಬ ಒಳಗೆಲ್ಲ ಕಕ್ಕಾಬಿಕ್ಕಿ
ಗುಪ್ತಗಾಮಿನಿ ಉಪ್ಪು ಕಡಲು ಹರಿದಿದೆ ಸೊಕ್ಕಿ ಉಕ್ಕಿಉಕ್ಕಿ.

ಬೆಳಗು, ನಡು, ಕಳೆದು ಸಂಜೆಯೂ ಬಂತು,
ಯಾವ ರಾಗ-ರಂಗಿನ ಹಂಗಿಲ್ಲದೆ ಸರಿದುಹೋಗಿ
ರಾತ್ರಿಯೂ ನಿದ್ದೆಯೂರಲಿ ಬಹಿಷ್ಕೃತ, ಭಣಭಣ ಕವಿದಿದೆ.

ಹಾರ ಕಡಿದು ಮಣಿ ಚಲ್ಲಾಪಿಲ್ಲಿ
ಕೊಂಡಿ ಕಳೆದುಹೋಗಿದೆ, ದೃಷ್ಟಿಯಿಲ್ಲ ಕಣ್ಣಲ್ಲಿ.
ಪೋಣಿಸುವ ಬೆರಳೂ ಸ್ತಬ್ಧ; ಇಂದೊಂದು ಸಾವಕಾಶ ಸಾಯುತ್ತಲಿದೆ.

ಅಂದೊಮ್ಮೆ ಹೀಗೇ ಸಾಯುತಿತ್ತು; ಬರೀ ಮುಟ್ಟಿ ಉಸಿರಿತ್ತಿದ್ದ,
ಮತ್ತೆ ನಾಳೆ ಬರುವೆ ಅಂದಿದ್ದಾನವ!
ಬೇಡ ಬರಬೇಡೆಂದ ಇಂದಿನ ಕ್ಷೀಣ ರೋಧನಕೆ ಬೆಚ್ಚಿಬಿದ್ದಿದೆ ಸಾವು.

2 comments:

  1. Replies
    1. ಹಾಗಂದ್ರೇನು ರಾಘವ್, ಗೊತ್ತಾಗ್ಲಿಲ್ಲ?

      Delete