Thursday, August 4, 2016

(ವೈಶಾಖ, ಸಂಸ್ಕಾರ, ಪರಸಂಗ, ಮುಕ್ತಿ)

"ಹರಿಯೇ ನಿನ್ನನು ಮೆಚ್ಚಿಸಲುಬಹುದು,
ನರರನೊಲಿಸುವುದು ಬಲುಕಷ್ಟ!"
ಒದ್ದೆ ಸೆರಗೊರೆಸುತ್ತಾ ಕೆಲಸ ಮುಗಿಸಿ ಬರುವ ಅಮ್ಮನ ಹಾಡು.
"ಎಷ್ಟುದ್ದ ವೈಶಾಖ, ಎಷ್ಟೊಂದು ಬೆವರು!
ಛೇ...ಇದೊಳ್ಳೆ ಪರದಾಟ!"
ಕೂತವರದು ಋತುವಿನ ಹಂಗಿಲ್ಲದೆ ಸದಾ ನಿಡುಸುಯ್ವ ಪಾಡು!

"ಮುಕ್ತಿ ಎಂದಾಗೆಲ್ಲ ಸಾವು ನೆನಪಾಗುವುದೇಕೆ?
ಋತು ಬದಲಾಗುವುದು ಬಿಡಿ;
ನೋವ ತಿಳಿಯಾಗಿಸಿ, ಹುರುಪು ಗಾಢವಾಗಿಸುವ,
ಅಮ್ಮನಂಥ ರಾತ್ರಿ ಕೈಬೀಸಿ ಮತ್ತೆ ಬರುವೆನೆಂದು ಹೊರಟಾಗ,
ನಿದ್ದೆಗೊಮ್ಮೆ ನಿತ್ಯ ಮರಣ ಎದ್ದಸಲ ನವೀನ ಜನನ ಅನಿಸುವುದಿಲ್ಲವೇ?
ನಿದ್ದೆ-ಜಾಗೃತಿ ಸಂಧಿಸುವಂಥ ಗಳಿಗೆಯಲೇ ಅಲ್ಲವೇ ಮುಕ್ತಿ?"
ಅವನೊಂದಿಗಿನೊಂದು ಪರಸಂಗಕೂ ಮುನ್ನ
ಇಷ್ಟೇ ಅಲ್ಲ; ಇನ್ನೂ ಎಷ್ಟೆಷ್ಟೋ ಉದ್ದ ಮಾತಾಡುತ್ತಿದ್ದೆ!
"ಆಹಾ ಎಂಥ ಸಂಸ್ಕಾರ!" ಅನುತ್ತಿದ್ದರು ಆ ಉಳಿದವರೆಲ್ಲರೂ..
ಈಗ ಅವನಿದ್ದಾನೆ, ನಾನಿದ್ದೇನೆ, ಒಂದಿಷ್ಟು ಮುನಿಸು, ಮತ್ತಷ್ಟೇ ಮುದ್ದು...
ಮುಕ್ತಿ, ಸಂಸ್ಕಾರ ನೆನಪಾಗುವುದೇ ಇಲ್ಲ;
ವಸಂತ-ಶಿಶಿರ ಬೇರೆಬೇರೆ ಅನಿಸುವುದೇ ಇಲ್ಲ.
ಬರೀ ಹಾಡುವ ಮೌನ, ಮಾತು ಹುಟ್ಟುವುದೇ ಇಲ್ಲ.
"ನಿನಗಾಗೇ ಈ ಹಾಡುಗಳು ಬಿಸಿಲು ಮಳೆಯ ಜಾಡುಗಳು
ನೀನೇ ಇದರ ಮೂಲ ಸ್ಥೂಲ ಒಳಗಿವೇ ನನ್ನ ಪಾಡುಗಳು..."
ನಾನೊಳಗೊಳಗೇ ಹಾಡುವಾಗೆಲ್ಲ ಅಮ್ಮ ಗಟ್ಟಿ ಹಾಡುತ್ತಾಳೆ,
"ಬಂದದ್ದೆಲ್ಲಾ ಬರಲಿ
ಗೋವಿಂದನ ದಯೆಯೊಂದಿರಲಿ..."

No comments:

Post a Comment