Wednesday, June 24, 2015

ನಗೆಯ ಸಾರಥಿಯೇ..

ಓಹ್! ಹಾಗಾದರೆ
ನೂರು ಮರುಭೂಮಿಯ
ನೂರಾರು ಬರಗಾಲಗಳ
ಶತಶತಮಾನದ ದಾಹಕ್ಕೆ
ಇದೋ ಈ ಇಂದಿನ ನಿರೀಕ್ಷೆಯಿತ್ತೆಂದಾಯಿತು..
ಥೇಟ್ ಹೀಗೇ ನೀನೊಮ್ಮೆ ಬರುವ,
ನಿಲುವ, ನುಡಿವ, ಮುಟ್ಟುವ ತುಣುಕು ಆಸೆ
ಬಿರುಗಾಳಿಯಬ್ಬರದಲೂ
ಮಿಣಮಿಣ ಬೆಳಕುಳಿಸಿಕೊಂಡಿತ್ತೆಂದಾಯಿತು.

ಒಣಗಿಲ್ಲದ ಗಂಟಲು ಪಸೆ ಬೇಡಿರಲಿಲ್ಲ
ಆರಿಲ್ಲದ ಕಂಠದಲಿ ಹಾಡು ನಿಂತಿರಲಿಲ್ಲ
ಒಪ್ಪುವ ರಾಗ
ಮತ್ತೆದೆ ಮಿಡಿವ ಲಯವೊಮ್ಮೆಯೂ ತಪ್ಪಿರಲಿಲ್ಲ
ಸಣ್ಣಪುಟ್ಟ ದೂರು-ದುಮ್ಮಾನ ಚಿಗುರಲೇ ಚಿವುಟಿ
ಕಳೆಯಿಲ್ಲದ ತೋಟ, ಹೂನಗೆಗೂ ಕಮ್ಮಿಯಿರಲಿಲ್ಲ
ಅರರೇ! ಎಲ್ಲಿತ್ತು ಇಷ್ಟೊಂದು ನಿರ್ವಾತ?!
ತುಂಬಿ ತುಳುಕುತ್ತಿದ್ದಲ್ಲೂ
ಒಳಗಿಷ್ಟು ಖಾಲಿ ಅಡಗಿದ್ದುದು
ಅದು ಭಣಭಣವೆನ್ನುತಿದ್ದದ್ದು
ನೀ ಬಂದು ತುಂಬುವವರೆಗೆ ಗೊತ್ತೇ ಇರಲಿಲ್ಲ.

ಹಾಗೆ ಬಂದೆ, ಹೀಗೆ ಉಲಿದೆ
ಮೊದಲ ಮಳೆಯದೂ, ಮೊದಲ ಮುತ್ತಿನದೂ
ಒಂದೇ ಘಮವೆಂದದ್ದು ನೀನೇ ತಾನೇ?
ಕಣ್ರೆಪ್ಪೆಯ ಹಾದಿಯಲಿ ನಗೆಯ ಸಾರಥಿಯೇ,
ಮುಚ್ಚಿದೆವೆಯಡಿ ಅಮಿತ ಸಾಮ್ರಾಜ್ಯ
ವಿಸ್ತರಿಸುವದೊಂದು ಯೋಚನೆಯಿದೆಯಂತೆ
ಅಲ್ಲಿಯವರೆಗೂ ಜತೆ ನೀಡುವೆಯಾ?

2 comments:

  1. ಅರರೇ! ಎಲ್ಲಿತ್ತು ಇಷ್ಟೊಂದು ನಿರ್ವಾತ?!
    ತುಂಬಿ ತುಳುಕುತ್ತಿದ್ದಲ್ಲೂ
    ಒಳಗಿಷ್ಟು ಖಾಲಿ ಅಡಗಿದ್ದುದು
    ಅದು ಭಣಭಣವೆನ್ನುತಿದ್ದದ್ದು
    ನೀ ಬಂದು ತುಂಬುವವರೆಗೆ ಗೊತ್ತೇ ಇರಲಿಲ್ಲ.

    ಮೊದಲ ಮಳೆಯದೂ, ಮೊದಲ ಮುತ್ತಿನದೂ
    ಒಂದೇ ಘಮವೆಂದದ್ದು ನೀನೇ ತಾನೇ?

    ಎಂಥಾ ಸಾಲುಹಳು ಅಕ್ಕಾ... ಚಂದ.....

    ReplyDelete