Monday, December 31, 2012

ಅಳಿಯದುಳಿಯುವ ಪರಿ


------------------------

ಎದೆನೆಲದ ಕಣ್ಣೀರ ಸಾಗರಕೆ

ಭಾವ ಮರಳಿನ ತಟದಾವರಣ.

ಧಾವಿಸಿ ಬರುವಲೆಗಳು,

ಮರಳಿನಕ್ಷರವೆಲ್ಲ ನುಂಗುವವು.

ಅಂತಃಶಕ್ತಿ ಬೆರಳದೂಡಿ ಬರೆಸುತಿದೆ..

ಮೊದಲೊಂದಕ್ಷರ.. ನಾ,

ಕಣ್ಣೀರಲೆ ಬಂದಳಿಸಿತು.

ಮುಂದಿನದೂ ಒಂದಕ್ಷರವೇ.. ನೀ,

ಮತ್ತದೇ ಬಂದಳಿಸಿತು.

ಎರಡಕ್ಷರ, ಮೂರು ಮತ್ತೆ ನಾಲ್ಕು..

ಅಳುವಿನಲೆಯದದೇ ಮರ್ಜಿ ಅಳಿಸುವುದು..



ಬೆಚ್ಚಿಬೀಳುತಲೊಮ್ಮೆ, ಹೆಚ್ಚಿದಾಸೆಯಲೊಮ್ಮೆ..

ಕನಸಗೋಪುರ ಕಟ್ಟಿ ಮರುಳುಮನ..

ಭವ್ಯವಾಗಿತ್ತು, ತುದಿಗೊಂದು ಮಿಂಚುತಡೆ,

ಪ್ರೀತಿ ಬಾವುಟವಿಟ್ಟು, ಬಾಗಿಲತೋರಣ,

ಮುಂದೊಂದು ರಂಗೋಲಿ...

ಅಲೆಗಳದು ಮತ್ತದೇ ಹುಚ್ಚಾಟ,

ಶಾಂತವಾದಂತೊಮ್ಮೆ,

ರೊಚ್ಚಿಗೆದ್ದಂತೊಮ್ಮೆ.

ಮರಳಗೋಪುರ ನಿಂತೀತೆ,

ಕನಸು ಫಲಿಸೀತೆ?



ಸಾಗರತಟವೇನೋ ಸರಿ,

ಬರೆದುದಳಿಸುವಲೆ ತಡೆವ,

ತಡೆಗೋಡೆಯಿರಬೇಕು..

ಬೆರಳೊಂದೇ ಅಲ್ಲ,

ಅಳಿಯದಕ್ಷರ ಮೂಡಿಸಲು ಬೇಕು,

ಮೆತ್ತಗಿದ್ದು ಮತ್ತೆ ಗಟ್ಟಿಯಾಗೋ ತಳ.

ಮರಳೊಂದೇ ಅಲ್ಲ,

ಜೊತೆಗಷ್ಟು ಗಟ್ಟಿಕಲ್ಲೂ ಬೇಕು,

ಬಂಧಿಸುವ ಒಲವ ಪದಾರ್ಥವೂ...

ಗೋಡೆ ಮೆತ್ತಗಿದ್ದು ಗಟ್ಟಿಯಾಗುವಲ್ಲಿ

ಆತ್ಮದೊಳಗಿಂದ ಹೊತ್ತು ತಂದು

ಅಂತಿಂಥದಲ್ಲ, ಸಿಹಿನೀರುಣಿಸಬೇಕು.

ಹಿನ್ನೆಲೆಯರಿತು, ನೆಲೆಯ ನಿರ್ಮಿಸಿ,

ಒಳಗಡಿಯಿಟ್ಟು, ಭಾವವಾವರಿಸಿದ ಕಣ್ಣೀರ

ಜೊತೆಗಿದ್ದೂ ಇಲ್ಲದಂತಿರಬೇಕು..

















No comments:

Post a Comment