Saturday, December 22, 2012

ಇದಕಿಂತ ಬೇಕೇ ಪ್ರಳಯ...?


--------------------------------

ಈ ಮೂಡಣದ ಕೆಂಪು ನಿನ್ನೆಗಿಂತ ಸುಂದರ,

ನಾಚಿದ ಕೆಂಗುಲಾಬಿ ಕೆನ್ನೆಯಂತೆ ಮಧುರ

ಕೆಂಪಿದ್ದ ಕಳೆದ ಪಡುವಣದ ಕಳೆ ನೆತ್ತರಂತೆ,

ಕಂಡಿತ್ತು.. ಸುಡುಜ್ವಾಲೆಯ ಕೆನ್ನಾಲಿಗೆಯಂತೆ.



ಭಯ ದಾಟಿಸಿದ ಕೆಂಪು ಭರವಸೆಯ ಹರಿಕಾರ

ಮುಳುಗಿಸುವ ದಿಶೆಯಲದೇ ಕೆಂಪು ಭಯಂಕರ....



ಈ ತೇದಿ ದಾಟಿದ ನೆಮ್ಮದಿ,

ಹೇಗೋ ಏನೋ ಮುಂದೆ...ಒಳಗುದಿ

ಅನ್ನನೀರಿಲ್ಲದ ನಾಳೆಯಲು ಬದುಕುವಾಸೆ...

ಕನ್ನ ಹಾಕುತ ತಾಯೊಡಲಿಗೇ ಉಳಿಯುವಾಸೆ..



ದಾಟಿದ ಕಂಟಕ ಗೆಲುವೆನಿಸದ ಆ ಒಂದು ಕ್ಷಣ,

ಮನ ಹಾಡಿದ್ದು ಜೈಕಾರವಲ್ಲ, ಕಾಡಿದ್ದು ಬುದ್ಧಿವಿನಾಶ.

ಬುದ್ಧಿ ನಶಿಸಿದ ದೇಹರಾಶಿ, ನಾಳೆ ತುಂಬೆಲ್ಲ..

ಭವಿಷ್ಯ ಕಂಡ ಕಣ್ಣು ತತ್ತರಿಸಿದ್ದು, ನಿನ್ನೆಯಂತಲ್ಲ......



ಪ್ರಕೃತಿವಿಕೋಪವಿರದಿರದು, ಮಾಡಿದ್ದಕ್ಕುಣ್ಣಲೇಬೇಕು,

ಅಭೂತಪೂರ್ವ ಅತಿರೇಕ, ಅಂಥಹುದೇ ಫಲ.. ಬಹುಶಃ

ದೇಹದಳಿವಲ್ಲ, ಬುದ್ಧಿಚೇತನವಿರದ, ಗುರಿ-ಅರಿವಿರದ,

ಸತ್ಯನಿಷ್ಠೆಯಿರದ ತಳಿ ಮೊಳೆವುದಕಿಂತ ಬೇಕೇ ವಿನಾಶ....???

No comments:

Post a Comment