Monday, December 24, 2012

ಇಂದು ಮಧ್ಯಾಹ್ನ...


------------------

ಚಳಿಗಾಲದ ಚುಚ್ಚುವ ಬಿಸಿಲ ಮಧ್ಯಾಹ್ನ ಮಗಳನ್ನ ಡಾನ್ಸ ಕ್ಲಾಸಿಗೆ ಕರ್ಕೊಂಡು ಹೋಗ್ತಾ ಇದ್ದೆ. ಸೂರ್ಯನ ಜೊತೆ ಅರ್ಧ ಚಂದ್ರನೂ ಕಾಣಿಸ್ತಿದ್ದದ್ದು ಅವಳ ಕಣ್ಣಿಗೆ ಬಿತ್ತು. ನಾನು ಸ್ಕೂಟರ್ ಓಡಿಸುತ್ತಾ ಅದರ ಮೇಲಿನ ನಿಗಾದಿಂದ ಗಮನಿಸಿರಲಿಲ್ಲ. "ಅಮ್ಮ, ಚಂದಮಾಮ ರಾತ್ರಿನೇ ಕಾಣಿಸ್ಕೊಳ್ಳೊದಲ್ಲ್ವಾ?" ಅಂದ್ಲು, ಹೌದಮ್ಮಾ ಅಂದೆ. "ಅಂದ್ರೆ ತಂಪಾಗಿರುವ ಹೊತ್ತಲ್ಲಿ ಮಾತ್ರ ಹೊರಬಂದು ಅಭ್ಯಾಸ ಅಲ್ಲ್ವಾ ಅವನಿಗೆ?" ಅಂದ್ಲು, ಹೂಂ ಅಂದೆ, "ಮತ್ತೆ ನೋಡು ಈಗ ಹೇಳಿದ ಮಾತು ಕೇಳದೆ ಹೊರಗೆ ಬಂದುಬಿಟ್ಟಿರಬೇಕು, ಎಷ್ಟು ಸುಸ್ತಾದಂತೆ ಕಾಣ್ತಿದಾನೆ, ಪಾಪ... ಆವತ್ತು ಊರಲ್ಲಿ ಚಂಡಿಕಾಹೋಮಕ್ಕೆ ಮಲ್ಲಿಗೆಮಾಲೆ ಹಾಕಿದಾಗ ನಿಧಾನಕ್ಕೆ ಬೆಂಕಿ ಸುಡ್ತಾ ಇದ್ದಾಗ ಕಾಣ್ತಿತ್ತಲ್ಲಾ ಹಾಗೆ ಕಾಣ್ತಾ ಇದ್ದಾನೆ ಅಲ್ಲ್ವಾಮ್ಮಾ...".ತಲೆಯೆತ್ತಿ ನೋಡಿದರೆ.. ಹೌದು... ನೀಲಾಕಾಶದ ಶುಭ್ರತೆಯಲ್ಲಿ ತುಂಡುಚಂದ್ರನ ಬಿಳುಪು ಮಸುಕಾಗಿ ಕಾಣುತ್ತಿತ್ತು...ಅವಳ ಮಾತಿನ ಪ್ರಾಮಾಣಿಕತೆಗೋ ಏನೋ ನನಗೂ ಆತ ಸುಸ್ತಾದವನಂತೆ ಕಂಡ. ಮಗಳ ಮಿಡಿದ ಮನದ ಚಂದಮಾಮನೊಡನಿನ ಆತ್ಮೀಯತೆಯ ಪರಿ ತುಂಬಾ ಆಪ್ತವೆನಿಸಿತು... ಎಷ್ಟು ಸರಳ ಮತ್ತು ನೇರ ಆಲೋಚನೆಯಲ್ಲ್ವಾ ಮಕ್ಕಳದ್ದು?!

ಜೊತೆಗೆ ಇನ್ನೊಂದು ವಿಷಯ ಮಗ್ಗುಲು ಬದಲಾಯಿಸಿತು. ದಸರಾರಜೆಗೆ ಊರಿಗೆ ಹೋಗಿದ್ದಾಗ ದೇವಸ್ಥಾನವೊಂದರಲ್ಲಿ ಚಂಡಿಕಾಹೋಮ ನಡೆಯುತ್ತಿತ್ತು. ಅಲ್ಲಿ ಹೋಮಕುಂಡಕ್ಕೆ ಆಹುತಿಯೆಂದು ಹಾಕುತ್ತಿದ್ದ ರಾಶಿ ಹೂವು, ಹಣ್ಣು, ತುಪ್ಪ, ಹಾಲು, ಬಟ್ಟೆ....ಇವೇ ಮುಂತಾದ ಜೀವನಾವಶ್ಯಕ ವಸ್ತುಗಳು ಉರಿದುಹೋಗುತ್ತಿದ್ದುದು ಮುಂಚೆಯೂ ಹಲ ಬಾರಿ ನೋಡಿದ್ದೆನಾದರೂ ಆವತ್ತು ಮೊದಲಬಾರಿಗೆ ನನ್ನ ಮನಸನ್ನ ಕಳವಳಗೊಳಿಸಿತ್ತು. ಕಣ್ಣು ಅಪ್ರಯತ್ನವಾಗಿ ಅಲ್ಲೇ ನಿಂತು ನೋಡುತ್ತಿದ್ದ ನಮ್ಮೊಂದಿಗೆ ದೇವಸ್ಥಾನಕ್ಕೆ ಬಂದಿದ್ದ ನಮ್ಮ ಕೆಲಸದವಳ ಮಗಳ ಮೇಲೆ ಹರಿಯಿತು. ಏನು ನಡೆಯುತ್ತಿರಬಹುದು ಆ ಮನದಲ್ಲಿ...?! ಅನ್ನುವ ಪ್ರಶ್ನೆ ಕಾಡಿತ್ತು...ನನ್ನ ಮಗಳ ಮನಸ್ಸಿನಲ್ಲಿ ಆ ಹೂವಿಗೆ ನೋವಾಗಿರಬಹುದು ಎಂಬ ಚಿಂತನೆಯ ಹಿನ್ನೆಲೆಯಲ್ಲಿ ಮೂಡಿದ ಆ ಚಿತ್ರ ಇವತ್ತಿನವರೆಗೂ ಅಚ್ಚಳಿಯದೇ ನಿಂತಿದೆ ಎಂದರೆ, ಇನ್ನು ಬಡತನದಲ್ಲಿ ಬೆಳೆಯುತ್ತಿರುವ ಮಗುವಿನ ಮನಸ್ಸಿನಲ್ಲಿ ತಮ್ಮನ್ನು ಕಾಡುವ ಕೊರತೆಯ ಹಿನ್ನೆಲೆಯಲ್ಲಿ ಮೂಡಿದ ಜೀವನಾವಶ್ಯಕ ವಸ್ತುಗಳನ್ನು ಸುಡುವ ಆ ಚಿತ್ರ ಇನ್ನೆಷ್ಟು ಢಾಳಾಗಿ ಪರಿಣಾಮ ಬೀರಿರಬಹುದು! ಯಾಕೋ ಕೆಟ್ಟದೆನಿಸಿತು... ಎಷ್ಟರ ಮಟ್ಟಿಗೆ ಸರಿಯೋ ಗೊತ್ತಿಲ್ಲ... ಆದರೆ ಬದಲಾಗಿರುವ ಇಂದಿನ ಪ್ರಸ್ತುತ ಪ್ರಾಕೃತಿಕ, ಸಾಮಾಜಿಕ ಸಂದರ್ಭಗಳಲ್ಲಿ ನಮ್ಮ ಆಚರಣೆಗಳೂ ಜೀವನ್ಮರಣದ ತುರ್ತಿಗೆ ಸ್ಪಂದಿಸುವತ್ತ ಹೆಚ್ಚು ಜಾಗೃತವಾಗಬೇಕು ಅನಿಸುತ್ತಿದೆ.....





No comments:

Post a Comment