Sunday, December 16, 2012

ಕಂದಗೊಂದು ಮಾತು


--------------

ಮೇಲೇರು ಸೂರ್ಯನಂತೆ,

ಏರಿದಂತೆ ಕಿರಿದಾಗುತ ಸಾಗುವಂತೆ.....

ಕಿರಿದಾಗು ಚಂದ್ರನಂತೆ,

ಪ್ರತಿಹೆಜ್ಜೆ ಮರುಕಳಿಸೊ ಪೂರ್ಣತೆಯೆಡೆಗಿದ್ದಂತೆ..



ಕಾಡದಿರಲಿ ದೊಡ್ಡತನದ ಹಂಬಲ,

ದೊಡ್ಡದರಲ್ಲಷ್ಟೇ ಇಲ್ಲ ಹಿರಿತನ.....

ಬಾಡದಿರಲಿ ನಿನ್ನತನದ ತಾಜಾತನ,

ಗೆಲುವಲಷ್ಟೇ ಅಡಗಿಲ್ಲ ನಿಜಬಲ..



ಕಂದ ನೀನೆನ್ನ ಕನಸು,

ನಾನಾಗದ್ದನಾಗಿ ತೋರಿಸು...

ಹೆಚ್ಚೇನಿಲ್ಲ, ನೀನಾಗುಳಿ ಸಾಕು,

ಇಂದು ನಾಳೆಯಲಿ ಸಮರೂಪ ಸಾಧಿಸು...



ಕೊರತೆ ನೆರಳಿನ ವಿನಯ

ಸಮೃದ್ಧಿಯಲೂ ಜೊತೆಗಿರಲಿ...

ನಾಳೆ ತರುವ ಗರ್ವವಿದ್ದರೆ...

ಇಂದು ತನ್ನ ದಾರಿ ಬದಲಿಸಲಿ...



ಹರಿಶ್ಚಂದ್ರನಲ್ಲ, ಸಾಂತ್ವನವಾಗಿ,

ಕೃಷ್ಣನಲ್ಲ, ಅಳಿಯದ ಸ್ನೇಹವಾಗಿ,

ಬುದ್ಧನಲ್ಲ, ಕೊನೆತನಕ ನಿಷ್ಠನಾಗಿ,

ರಾಮನಲ್ಲ, ಜಾರದ ನಂಬಿಕೆಯಾಗಿ

ಹೀಗೆ... ಅರ್ಥವಾಗುವುದಾದರೆ, ತಿಳಿ...

ದೇವರಾಗಲ್ಲ, ಮನುಜನಾಗಿ ಬದುಕು...















No comments:

Post a Comment