Thursday, December 20, 2012

ಉತ್ತರ.


---------------------------

ಬಿಡು ಬಿಡು ನಾ ಹೋಗಬೇಕೆಂದ

ಕಟ್ಟಿಟ್ಟ ಮನಸನೊಂದು ದಿನ ಬಿಟ್ಟುಬಿಟ್ಟೆ...



ಕೋಶಹರಿದು ಹುಳು, ಬಣ್ಣದ ಚಿತ್ರವಾದ

ಚಿಟ್ಟೆ ಕಂಡಿತು, ಹಿಂಬಾಲಿಸಿತು...

ಪುರ್ರನೇ ಹಾರಿ ಹೂವಿಂದ ಹೂವಿಗೆ,

ಅಲ್ಲೆಷ್ಟಿತ್ತೋ ಹೀರಿ, ತೇಗಿ...ಮುಂದಿನದು ಮುಂದೆ

ಯಾವ ಬಂಧವೂ ಇಲ್ಲ, ಬೆಸುಗೆಯೂ....

ಹೂವಿಗೂ, ಚಿಟ್ಟೆಗೂ....ಹಾರುತಲೇ, ಕುಡಿಯುತಲೇ..

ಬೆಳಗು ಬೈಗಾಗಿ ...ರಾತ್ರಿ ಬೆಳಗಾಗಿ....

ಚಿಟ್ಟೆ ಯಾನ ಮುಗಿಸಿತ್ತು, ಮನಸು ಹಿಂದಿರುಗಿತ್ತು...

ನೀನ್ಯಾಕೆ ಹೀಗಿಲ್ಲ ಅಂದಿತು, ನಾ ನಿನ್ನಿಂದಲೇ ಅಂದೆ.



ಬಿಡು ಬಿಡು ಮತ್ತೆ ನಾ ಹೋಗಬೇಕೆಂದ

ಕಟ್ಟಿಟ್ಟ ಮನಸ ಮತ್ತೆ ಬಿಟ್ಟುಬಿಟ್ಟೆ...



ನೇರವಲ್ಲದ ಗೆರೆಯಲಿ ಫಳಫಳ....

ಮಿಣುಕುಹುಳ ಕಂಡಿತು, ಹಿಂಬಾಲಿಸಿತು...

ಕತ್ತಲಲಿ ಬೆಳಗುತ್ತ, ಬೆಳಕಲಿ ಲೀನ..,

ಒಮ್ಮೆ ಕಾಣಿಸುತ್ತ, ಒಮ್ಮೆ ಮೌನ....

ತಾ ಕಾಣದ ಸೊಬಗ ಬೆನ್ನ ಹಿಂದಿಗುಣಿಸುತ್ತ...

ಯಾವ ಅಪೇಕ್ಷೆಯೂ ಇಲ್ಲ, ನಿರೀಕ್ಷೆಯೂ...

ಹುಚ್ಚೆದ್ದು ಹಿಡಿಯುವ ಆಸೆಯ ಕೈತಾಗಿ,

ಕತೆಮುಗಿದಿತ್ತು, ಮನಸು ಹಿಂದಿರುಗಿತ್ತು..

ನೀನ್ಯಾಕೆ ಹೀಗಿಲ್ಲ ಅಂದಿತು, ನಾ ನಿನ್ನಿಂದಲೇ ಅಂದೆ.



ಬಿಡು ಬಿಡು ಪುನಃ ಹೋಗಬೇಕೆಂದ

ಕಟ್ಟಿಟ್ಟ ಮನಸ ಪುನಃ ಬಿಟ್ಟುಬಿಟ್ಟೆ...



ಒಂದು ಗಾಳಿತೇರು, ಅಳುನಗುಗಳೇ ಚಕ್ರ...

ಮೆತ್ತೆಹಾಸಲಿ ಮುದ್ದು ರಾಜಕುಮಾರಿ, ಹೆಸರು ದೃಷ್ಟಿ.

ಮನ ತೇರನೇರಿತು.... ಗಾಳಿ ನಡೆದೆಡೆ ಪಯಣ,

ದಿಕ್ಕಿಲ್ಲ ಗುರಿಯಿಲ್ಲ,

ನಿಂತೆಡೆ ಬಂಧ-ಬೆಸುಗೆ, ವಿದಾಯದ ಗಾಯ,

ನಾಳಿನ ಆಣೆ, ಹಿಂದಿನ ದೂರು,

ಒಂದಷ್ಟು ಅಪೇಕ್ಷೆ-ನಿರೀಕ್ಷೆ, ಸೋಲು-ಗೆಲುವು,

ಮನಸ್ತಾಪ-ಪಶ್ಚಾತ್ತಾಪ...ಕ್ಷಣ ಯುಗವೆನಿಸೋ ತಾಪ

ಎಷ್ಟು ದೂರಕು ಮುಗಿಯದ ಯಾನ... ಮನಸು ಹಿಂದಿರುಗಿತು.



ಈ ಬಾರಿ ಪ್ರಶ್ನೆಯಲ್ಲ... ಉತ್ತರವ ತಂದಿತ್ತು...

ದೃಷ್ಟಿಯೊಡನಿರೆ ನಾನು, ಯಾನ ನಿನದರಂತೆ...

ಜೀವನೋತ್ಸಾಹದ ಹಿಂದಿರೆ,

ಚಿಟ್ಟೆಯದರಂತೆ, ಮಿಂಚುಹುಳದಂತೆ.







No comments:

Post a Comment