Tuesday, March 12, 2013

ನಿದ್ರಾಮಾತೆಯ ಮಡಿಲ ಕೂಸು ಕನಸು.

ಮುದ್ದಿಸುವಾಸೆಯ ಮುಚ್ಚಿದ ಕಣ್ಣ ಪಾಲು.
ಹೊತ್ತು ಮನದೆಡೆಗೆ ಕಣ್ಣ ದಾಪುಗಾಲು
ನನಸಾಗಿಸುವ ಮನದಾತುರದ
ಯತ್ನದ ಸಿಕ್ಕಲಿ ಸಿಕ್ಕಿ ಹರಿದು ಚಿಂದಿಚೂರು...

ಜಗಕೆಲ್ಲಕೂ ಆತುರ,
ಬಿತ್ತಿದ್ದು ಮೊಳೆವ ಮೊದಲೇ ಕೆದಕಿ,
ಎಳೆ ಬೇರ ಚುಚ್ಚಿ ಚಿವುಟುವ ಪರಿ
ತಾನೇ ತಿಳಿಯದ ತನ್ನ ಧಾವಂತಕೆ
ತನದೇ ಯತ್ನದ ವ್ಯರ್ಥ ಬಲಿ...

ಮೂಲೆಯ ಕಸ, ಮಾಡಿನ ಬಲೆ,
ಬಾಡಿದ ತೋಟ ಅಣಕಿಸುತಾವೆ...
ಮುಗಿವ ಮುನ್ನವೇ ಮುಗಿಸಿದ,
ಫಲಿತವಲ್ಲದ ಕಾರ್ಯಗಳು,
ಕೊಂದ ಕ್ಷಣಗಳ ಲೆಕ್ಕ ಕೇಳುತಾವೆ.

ಇಂದಲಿದ್ದು ನಾಳೆಗೆ ಲಂಘಿಸಲಿಕೆ
ಮನವೇನು ಮರ್ಕಟನೇ?!
ಒಂದಿರಬೇಕು ಗುರಿ, ಗುರು...
ಕಂಡಕಂಡಲ್ಲಿ ತೊಡಗಿಸಿಕೊಳಲು,
ಮೈಮನವೇನು ಸಹಸ್ರಬಾಹುವೇ?!

ಕನಸು ಕನಸಾಗರಳಲಿ,
ತನ್ನಷ್ಟಕ್ಕೇ ಬೆಳೆಯಲಿ, ಮನವಾವರಿಸಲಿ.
ಹಂಬಲದ ಬೀಜ ಬಿತ್ತಲಿ, ಯತ್ನದ ಬಳ್ಳಿ
ವಿಶ್ವಾಸದ ಸುತ್ತ ಹಬ್ಬಲಿ, ಹೂವರಳಿ,
ಮನದಂಗಳ ಸಫಲತೆಯಲಿ ಕಂಗೊಳಿಸಲಿ...









4 comments:

  1. ಕೊನೆಯ ಪ್ಯಾರಾ ತುಂಬಾನೇ ಇಷ್ಟವಾಯಿತು...
    ಕಾಯಬಲ್ಲೆವೆ ನಾವು ಕನಸು ಪಕ್ವವಾಗುವವರೆಗೆ...????????

    ReplyDelete
  2. ತಿಳಿವು ತುಂಬಿದ ಭಾವವೊಂದು ಕವನವಾಗಿ ಹೊಮ್ಮಿದೆ.

    ReplyDelete