Sunday, April 28, 2013

ಕೆಂಪಾಗದಿರಲಿ..


--------------------------

ಅಜ್ಜನ ಅಜ್ಜನೋ ಅವರಜ್ಜನೋ ಇರಬೇಕು,

ಹೊಂದಿದ್ದರಂತೆ ಅಷ್ಟಗಲ ನೆಲದ ನೆಲೆ.

ಗೋಡೆ, ಹೊಸಿಲು,ಬಾಗಿಲುಗಳದೊಂದು ಮನೆ,

ಅಂಗಳದಲೊಂದು ತುಳಸಿಕಟ್ಟೆ, ಬಾವಿಕಟ್ಟೆ...

ಒಂದಿತ್ತಂತೆ ಬಲು ಎತ್ತರದ ಇನ್ನೊಂದು ಕಟ್ಟೆ.

ಎಲ್ಲಿಲ್ಲದ ಮರ್ಯಾದೆ, ಭಯಭಕ್ತಿಯದರತ್ತ.

ಅರಿಸಿನಕುಂಕುಮವಲ್ಲ, ನಂಬಿಕೆಯ ಪೂಸಿ,

ಗಂಧದ ಕಡ್ಡಿಯಲ್ಲ, ಶ್ರಧ್ಧೆಯ ಕಂಪ ಹರಡಿ,

ಅಡಿಗೆ ನೀರಲ್ಲ, ನಿಷ್ಠೆಯ ಧಾರೆ ಹರಿಸಿ,

ದೀಪವಲ್ಲ, ಆಗದು-ಕೂಡದುಗಳನೇ ಬೆಳಗಿ,

ಪೂಜಿಸಿದ್ದು ಎಲೆಹಸಿರಿಲ್ಲದ ಹೂಬಿಡದ,

ಕಾಯಿ-ಬೀಜದ ಮುನ್ನಡೆಯಿಲ್ಲದ,

ಇದ್ದಷ್ಟೇ ಇದ್ದುಳಿದ ಒಣ ಕಾಷ್ಠವನ್ನು.

ಬೇರು ಮಾತ್ರ ಕಟ್ಟೆ, ಅಂಗಳಗಳ ಮೀರಿ,

ಮನೆಯ ಮನಕೂ ಆಳವಾಗಿಳಿದಿತ್ತು,

ಉಸಿರಾಡುತಿತ್ತು, ಮನೆಯುಸಿರೇ ಅಗಿತ್ತು..



 ಅಜ್ಜನಿಂದ ನನ್ನಜ್ಜನವರೆಗೆ

ಎಲ್ಲರೂ ಎರೆದೆರೆದು ಪೂಜಿಸಿದ್ದೇ ಪೂಜಿಸಿದ್ದು.

ಸುತ್ತ ಚುಚ್ಚುತಿತ್ತು, ಗೀರುತಿತ್ತು,

ಅದೃಶ್ಯ ಗಾಯ ಮೂಡಿಸುತಿತ್ತು,

ಹರಿದ ನೆತ್ತರು ಮಾತ್ರ ಗಾಢ ಕೆಂಪೇ ಇತ್ತು...

ನನ್ನಪ್ಪನಿಗೋ ಆ ಕೆಂಪು ಕಂಡೂ ಕಂಡೂ

ಬೇಸರವಾಗಿತ್ತು, ಬೇರೊಂದು ಬಣ್ಣ ಕಾಣುವಾಸೆ...

ಎರೆದುದನ್ನು, ಪೂಜಿಸಿದ ರೀತಿಯನ್ನು ಸ್ವಲ್ಪ

ಬದಲಾಯಿಸಿ ನೋಡಿದ್ದೂ ಹೌದು...



ಕೆಂಪು ನೆತ್ತರ ಕಂಡು ನನಗೆ ವಾಕರಿಕೆ-ಬವಳಿ,

ನಾ ಎರೆದದ್ದದೇ, ಹಚ್ಚಿದ್ದು ಮಾತ್ರ ಬೇರೆ ದೀಪ.

ಕಾಷ್ಠದ ನಿರ್ವರ್ಣವೀಗ ನನ್ನಂಗಳದಲಿಲ್ಲ,

ಬೇರೂ ಸ್ವಲ್ಪಸ್ವಲ್ಪ ಸಾಯುತಿದೆ.

ಅದೇ ಕಟ್ಟೆಯಿದೆ,

ನಂಬಿಕೆಯನೇ ಪೂಸಿ, ಶ್ರಧ್ಧೆ ಕಂಪಲಿ,

ನಿಷ್ಠೆಯೆರೆದು, ಪ್ರೇಮದ ದೀಪ ಹಚ್ಚಿಟ್ಟೆ.

ಇಂದು ಹಸಿರು ಚಿಗುರಿದೆ, ನಾಳೆ ಹೂವೂ ಹುಟ್ಟೀತು,

ಒಂದು ಪ್ರಾರ್ಥನೆ-

ಕೆಂಪು ಹೂ ಮಾತ್ರ ಹುಟ್ಟದಿರಲಿ..























No comments:

Post a Comment