Sunday, April 28, 2013

ಕಂದಗೊಂದು ಮಾತು.

------------------------------
ನಾ ನಡೆದು ನಿನಗೆ ದಾರಿ ಮಾಡುವಾಸೆ,
ಸೆರಗ ಹಿಡಿದೇ ನಡೆದು ನೀನು
ತಳ್ಳಿ ಎದುರಾದ ತಡೆ ಸಾಗುವುದ ಕಾಂಬಾಸೆ.....

ನಾನಿರದ ಕ್ಷಣ ಎಚ್ಚರಿಸುವವರಾರೇ?
ಕಾದು ಕುಳಿತಿಹರೆಲ್ಲ,
ತಂಗಾಳಿ, ಚಂದ್ರನಂಥವರೂ ಚುಚ್ಚುವವರೇ...

ಕಣ್ಮುಂದೆ ಬಾಳೊಂದು ಬಟಾಬಯಲು
ತುದಿ ನೀನು ಹೊರಟಲ್ಲಿ,
ಕೊನೆ ಕಾಣದಷ್ಟು ವಿಶಾಲ ಸವಾಲು...

ಇದ್ದೀತು ಹಚ್ಚಹಸುರಿನ ಹಾಸಿನಚೆಲುವೇ.
ತಿಳಿ- ನೆಲಕಂಟಿದ ಹುಲ್ಲಲೂ,
ಅಂಟುವ, ಚುಚ್ಚುವ, ಕೀವಾಗಿಸುವ ಮುಳ್ಳಿರುತಾವೆ...

ಇದ್ದೀತು ಮುಕ್ತತೆಯ ತಂಪು ಮೆಲುಗಾಳಿ.
ಸುಳಿಗಾಳಿ ಬರುವಾಗ ಸದ್ದಿರುವುದಿಲ್ಲ,
ಸಿಲುಕಿದಾಗ ಮುಂದೆ ದಿಕ್ಕು ತಿಳಿಯದ ದಾರಿ.

ಇದ್ದೀತು ಹಲಬಗೆಯ ಹೂವುಹಣ್ಣು.
ರುಚಿ ನೋಡುವುದು ತಪ್ಪಿರದು,
ನಂಬಿ ಕೆಟ್ಟ ನೋವು ಮಾತ್ರ ಗುಣವಾಗದ ಹುಣ್ಣು...

ತೋರಿಸಿಯೇನು ಬದುಕಿನ ಅಂದಚಂದವನೂ.
ತಿಳಿ ಕಂದ, ಚಂದಕ್ಕೆ ಪರಿಚಯದ ಹಂಗಿಲ್ಲ.
ಎದೆಯಲ್ಲಿ ಹಾಲು ಸುರಿದೀತು,
ನಿರ್ಭಯರಾಗದ ಪಲ್ಲವಿಯೊಂದು ಹುಟ್ಟೀತು,
ಕಣ್ಣು ತಂತಾನೇ ಅರಳೀತು,
ಮನಸು, ಮತ್ತೊಮ್ಮೆ ಕೇಳು, ಮಿದುಳಲ್ಲ,
ಮನಸು ನಿಸ್ಸಂಶಯ ಅದರೆಡೆಗೆ ನಡೆಸೀತು...

ಬಯಲಲ್ಲಿ ಮುಳ್ಳು ಹೊತ್ತ ಹುಲ್ಲಿರದ
ಪಥವೆನ್ನ ಹೆಜ್ಜೆ ಮೂಡಿಸಿವೆ,
ಉದ್ದಕೂ ನಾ ತಳೆದ ಎಚ್ಚರಿಕೆಯ
ನಿಲುವು ಮಿದು ಹಾಸಾಗಿದೆ.
ಹಳ್ಳದಿಣ್ಣೆಗಳಿವೆ, ಪ್ರಕೃತಿ ಸಹಜ ಘಟ್ಟಗಳು.
ಕಾಲಿಗೆ ಕಣ್ಣು ಹಚ್ಚು, ಬಿದ್ದರೂ ಏಳೆನೆನದಿರು.
ತಪ್ಪನೊಪ್ಪು ಮತ್ತಪ್ಪದಿರು, ಪೆಟ್ಟಾಗದೇ ಸಾಗುವೆ.

ಸವಿ ನುಡಿದು ಅದಷ್ಟೇ ಉಣಿಸಲಾರೆ
ಕಹಿಯುಣ್ಣುವುದೂ ಅನಿವಾರ್ಯ ಜೀವಕೆ.
ಸ್ವಸ್ಥ ನೀ ಬೆಳೆವುದೆನ್ನ ಕನಸು.
ಮಗಳೇ, ಸಾವರಿಸಿ ನಡೆದ ಹೆಜ್ಜೆಗೇ
ಆತ್ಮತೃಪ್ತಿಯ ನಾಳೆಗಳಿವೆ.
ಸಂಭಾಳಿಸಿಕೊಳುವ, ಕೆಡುಕ ಗುರುತಿಸಿ,
ತಡೆ ದಾಟಿ ಮುನ್ನಡೆವ ಧೃತಿಯಾಗು.
ನಡೆಯಬೇಕಾದು ನೀನು, ನಡೆದು ನಾ ತೋರಬಲ್ಲೆ
ಕಿತ್ತೆಲ್ಲ ಸರಳವಾಗಿಸಲಾರೆ, ನೀಡಬಲ್ಲೆ-
ಹೆಚ್ಚೆಂದರೆ ಮೋಸದ ಛದ್ಮವೇಷ,
ಮತ್ತದರ ನಾಟಕದ ಪರಿಚಯ.







No comments:

Post a Comment