Saturday, August 15, 2015

ನೋಡು ಕಲಿಸಲೆಂದೇ ಇದೆ ಬರೆದು ಮತ್ತೆ ಮತ್ತಳಿಸಿದ ಕರಿಹಲಗೆ.
ಬಲು ಅಂತರವಿರಲಿದೆ ಈ ಬಾರಿ ಹುಣ್ಣಿಮೆಯೆರಡರ ನಡುವೆ.

ಬೆಳ್ದಿಂಗಳಿದ್ದರೂ ಅಂದು ಈ ಹಿಂದಿನ ಅಂದಿನಂತನಿಸದು.
ಸತ್ಯ ಹುಣ್ಣಿಮೆಯೆಂದರೆ ಚಂದ್ರನಿರುವಷ್ಟೇ ಅಲ್ಲವೆಂಬುದು.

ಕಾಯುವುದೂ ಸಾಯುವುದೂ ಒಮ್ಮೊಮ್ಮೆ ಒಂದೇ ಅನಿಸುವುದು,
ಕಣ್ಣಲಿ ಸಂದೇಶ ನಿನದು; ಕೈಯ್ಯಲಿ ಕಾಲ ನನದು ಸೋರಿದಂತನಿಸುವುದು.

ಹೌದು ಅಲ್ಲಗಳ ಲೆಕ್ಕವೂ, ಹೂ ಪಕಳೆ ಲೆಕ್ಕವೂ ಒಂದೇ ಅಂತೆ.
ಬೇಡ, ಮುರಿದು ಲೆಕ್ಕಿಸಲಾರೆ, ಎಚ್ಚರಾಗುವುದಾಗದಿದ್ದರೇನಂತೆ!

ಬೆರೆತು ಕೂತಾಗ ಬೆರೆತಂತೆಯೇ ಅನಿಸುವ ಎಲ್ಲವೂ ನಮ್ಮವೇ.
ಕೂಗಿ ಕರೆಯಬೇಕಾದಾಗ ಚದುರಿಹೋದೆವೆನಿಸುವುದೂ ನಾವೇ.

ಮೊದಲಲೆಲ್ಲು ನಿಲಲಾಗಲಿಲ್ಲ ಸರಿಯೇ.. ಕೊನೆಯದಾಗಿಸುವುದಾದೀತೇ?
ಸರದಿ ಬಂದಿರುವುದೇ ಆದರೆ ದೊರೆಯೇ, ಅಲ್ಲೇ ನನ್ನುಳಿಸುವುದಾದೀತೇ?

ನೀನರ್ಥೈಸಿದ ಪರಿ ಇನ್ಯಾರೂ ಕಥಿಸಿರಲಿಲ್ಲ; ನನ್ನ ಮಥಿಸಿರಲಿಲ್ಲ.
ಹೊಸಹೊಸತು ಶಬ್ದದೊಳ ಅರ್ಥದಂತೆ ಹೊಸಹೊಸತಾಗಿ ನಿನ್ನೊಳ ಹುದುಗುವಾಸೆ.

ಸ್ವಂತವನಡಗಿಸಿ ಈ ಪರಿ ಯಾರೂ ಕಣ್ಣಾಮುಚ್ಚಾಲೆ ಉಲಿದದ್ದಿರಲಿಕ್ಕಿಲ್ಲ.
ಸಿಕ್ಕಿಬೀಳುವಾಸೆ, ಆಟ ಮುಗಿಸುವ ಹೊತ್ತು ನನ್ನನೇ ಮುಟ್ಟಿ ನೋಡುವಾಸೆ.

ನೀ ಹೇಳಿದ್ದೇ ಆಗಲಿ ನಿನ್ನ ಬಂಡವಾಳದ ಚೀಲದ ಮೂಲೆಯಲ್ಲೇ ಸರಿ
ಖಾಲಿ ಡಬ್ಬವಾಗುಳಿದುಬಿಡುವೆ, ನಿನ್ನುಸಿರು ಬಡಿದಾಗೆಲ್ಲ ಸದ್ದಾದರೂ ನೆನಪಿಸೀತು.

ಲೋಕಕೇನು? ನೂರು ದೀಪ ನೆಲದಲ್ಲಿ, ಅದಕು ಹೆಚ್ಚು ಮಿನುಗುತಾರೆ ಆಗಸದಲ್ಲಿ.
ನಾ ಮಿಂಚುಹುಳ; ಹೇಗೆಹೇಗೋ ನಿನ್ನ ಕಣ್ಣಚ್ಚರಿಯ ನೆಚ್ಚಿ ಹೊಳೆದುಬಿಟ್ಟಿದ್ದೇನೆ..

ಮುನ್ನಡೆಸಲೂಬೇಡ, ಹಿಂದುಳಿಯಲೂ ಬಿಡಬೇಡ; ನೀನೀಗ ಅಭ್ಯಾಸವಾಗಿದ್ದೀಯ.
ಬಿಟ್ಟರೆ ಕಣ್ಬಿಡುವುದಾಗದು; ಮತ್ತಾಗ ಹುಣ್ಣಿಮೆಯೇ ಹುಡುಕಿ ಬಂದರೂ ವ್ಯರ್ಥವಾದೀತು..

No comments:

Post a Comment