Monday, September 19, 2016

(ಯಕ್ಷಿಣಿ - ಗಂಟಲು- ಬೆದರಿಕೆ - ಚಿಂತಾಜನಕ)


ಬೆಳಕ ಕೂಸೊಂದು ಡೊಗ್ಗಾಲಲಿ
ದಾಟಲಿತ್ತು ಕತ್ತಲರಮನೆಯ ಹೊಸಿಲು.

ನಿದ್ದೆಗಣ್ಣಿಗೆ ಅದಾವುದೋ ಬಂದುಸುರಿ ಹೋಗಿತ್ತು
"ಅವರ ಸಮಾಗಮಕೆ ನಿಗದಿಯಾಗಿದೆ ಹೊತ್ತು!"

ಅಕಾಲ ನೆರೆಗೆ ಗಂಟಲುಬ್ಬಿ ಬಂದ ಗಳಿಗೆ,
ಕಣ್ಣಿಂದವನ ಹೆಸರ ಹೊಳಪಿಳಿದುಹೋದ ಗಳಿಗೆ..

ಪರಿಚಿತವೂ, ಅಸ್ಪಷ್ಟವೂ ಒಂದಾಕೃತಿ
ಬಿಟ್ಟ ಕಣ್ಣೆದುರೇ ಕೂಗಿ ಹೇಳಿದೆ; ಬಹುಶಃ ಇದವನ ಯಕ್ಷಿಣಿಯೇ...

"ಅಲ್ಲೊಂದು ಚಂದದ್ದು ಚಿಂತಾಜನಕವಿದೆಯಂತೆ
ಬಗಿದೆದೆಯ ನಗೆಯೊಳಗಿಂದ ಅಮೃತವುಣಿಸಬೇಕಂತೆ."

ನಂದಾದೀಪಕಷ್ಟು ತುಪ್ಪ ಸುರಿದು,
"ಸರ್ವೇ ಜನಾಃ ಸುಖಿನೋ ಭವಂತು..."
ಹೇಳುತಲೇ ಇದೆ ಬಾಯಿ; ಮನಸನೆಳತರುತಾ ಕೈ..
ತಾಳಮೇಳ ತಪ್ಪಿಸುವ ಪ್ರೀತಿಯೆಂಬ ವಿವಶತೆಗೊಂದು ಜೈ

ಅಲ್ಲಿ ನೋವಿನೊಂದು ಸಣ್ಣ ಬೆದರಿಕೆಗಿಲ್ಲಿ ಎದೆಗೂಡು ಬಿರುಕು..
"ಅಯ್ಯೋ ಪ್ರೀತಿಯೆಷ್ಟು ಚಂದ!"-ಮತ್ತೆ ಮತ್ತುಲಿವ ಮನಸು..

ಹೇಗೆ ಹೇಳಲಿ ಏನೊಂದನಾದರೂ ಈ ಪ್ರೇಮಿಗಳಿಗೆ?
ಅಲ್ಲಳುವಾಗ ಅವಳು, ಇಲ್ಲಿಂಚಿಂಚು ಸಾಯುವವಗೆ?

ಕರ್ಣನಲ್ಲ; ಎದೆಯಲಮೃತವಷ್ಟೇ ಇಲ್ಲ, ಬಗೆದೀವುದರಿತಿಲ್ಲ;
ಹಂಬಲಿಸುವುದಷ್ಟೇ ಗೊತ್ತು; ನಾನೂ ನಿಮ್ಮಿಂದ ಹೊರತಲ್ಲ...

3 comments:

  1. ಬೆಳಕ ಕೂಸೊಂದು ಡೊಗ್ಗಾಲಲಿ
    ದಾಟಲಿತ್ತು ಕತ್ತಲರಮನೆಯ ಹೊಸಿಲು.

    Super lines...

    ReplyDelete