Sunday, April 28, 2013

ನಿನಗೆನ್ನ ಮೇಲಾಣೆ.

------------------
ಮೋಡಸಖೀ, ತುಸು ನೋಡಿತ್ತ ದೃಢ ನಿಂತು
ಉದುರಿಸೊಂದಷ್ಟು ಮಾತಮುತ್ತು, ನಗೆಮುತ್ತು...
ಧರಿಸುವೆ ಧರೆ ಮಾಡಿ ಪದಕ, ಓಲೆ, ನತ್ತು.


ನಿರ್ವರ್ಣ ನಿನ್ನ ಮುತ್ತುದುರಿ ಪ್ರಕೃತಿಯುಡಿಯಲಿ, ಮಳೆಬಿಲ್ಲಿನೆಲ್ಲ ಬಣ್ಣವಾದಾವು, ವ್ಯರ್ಥವಾಗದಿರಲಿ.
ಹಸಿರಾದಾವು, ಉಸಿರಾದಾವು ನನ್ನ ಬಿಸಿ ಮೈಯ್ಯಲಿ.

ಗಾಳಿಯಿನಿಯನ ಸಂಗ ನೀ ಬಯಸುವುದೂ,
ಅವ ಕೈಹಿಡಿದು ನಿನ್ನ ಸೆಳೆದೊಯ್ಯುವುದೂ,
ಮಿಲನದಾತುರದಲೆಲ್ಲ ತರವೇ ಹೌದು.

ವಸಂತನಿರಬೇಕು ಕಿವಿಯೂದಿ ಕಳುಹಿದ್ದು.
ತಾಪಕೂ, ಶೀತಕೂ ನಲ್ಲೆ ಸಂಗವೆ ಮದ್ದು.
ಹಾಗವ ಬಂದದ್ದು ನೋಡು ರಥವೇರಿ ಖುದ್ದು.

ಬಲ್ಲೆ, ವಿರಹದೊತ್ತಡ ನಿನ್ನ ಕರಗಿಸುವಷ್ಟಿದೆ,
ಅವ ಬರಲು ನಿನ ಕಣ್ಣ ಕೋಲ್ಮಿಂಚು ಹೇಳಿದೆ,
"ಹೊರಡು" ಎಂದವಸರಿಸಿ ಅವ ಗುಡುಗಿದ್ದೂ ಕೇಳಿದೆ.

ಹೆಚ್ಚಲ್ಲ, ತುಸುಕಾಲ ನನದು- ನಿನದಿರಲಿ,
ಕಾದೆದೆ ನನದೂ ಹೌದು, ಬಿಸಿಯಷ್ಟು ತಣಿಯಲಿ,
ಸಿಹಿ ಹೆಚ್ಚು ಕಾದಷ್ಟು ಮಿಲನದಲ್ಲಿ, ಅವನೇ ಕಾಯಲಿ.

ನಿನಗಷ್ಟೇ ಸಖಿ ನಾ, ನನನೊಮ್ಮೆ ನೋಡು.
ಕೇಳು ನೀನಿರದಾಗ ಹೆಣೆದ ತಾಪದ ಹಾಡು.
ಸ್ನೇಹಸಿಂಚನ ನನ್ನ ಹಕ್ಕು, ಸಿಂಪಡಿಸಿ ಬಿಡು.

ಸುರಿಸದಿರೆ ನೀನೀಗ ಪ್ರೀತಿ, ನನ್ನೆದೆ ಬಿರಿವುದು.
ಬಿರುಕಲ್ಲಿ ನನ್ನೊಡಲ ಜೀವಸಂತತಿಯಳಿವುದು.
ಬರಡೆನಿಸಿ ಹೋಗದಿರು ಹಾಗೇ, ನಿನಗೆನ್ನ ಮೇಲಾಣೆ...



(ಈಗಷ್ಟೇ ಮೈಸೂರಿನಲ್ಲಿ ಸ್ವಲ್ಪ ಮಳೆಯಾಯಿತು, ಆದರೆ ಸಂಜೆಯೆಲ್ಲಾ ಸುರಿಯದೆ ಆಟವಾಡಿಸುತ್ತಾ ಇದ್ದ ಕಾರ್ಮೋಡ ಹೀಗೊಂದು ಬರಹಕ್ಕೆ ಕಾರಣವಾಯಿತು.)

4 comments:

  1. ಮೈಸೂರಿನವರೇ ಪುಣ್ಯಾತ್ಮರು, ಬೆಂಗಳೂರಿಗೆ ಬರೀ ಕಾರ್ಮೋಡ ಸಿದ್ದಿ ಮೇಲೆ ಉರಿ ಬಿಸಿಲು!
    ಮೊದಲ ಪದವೇ ಮೋಡಸಖೀ ಅಮೋಘ. ಇಡೀ ಕವನದ ಲಾಲಿತ್ಯ ನೆಚ್ಚಿಗೆಯಾಯಿತು.

    ReplyDelete
  2. ರವಿ ಕಾಣದ್ದನ್ನು ಕವಿ ಕಂಡ ಻ನ್ನೋದು ಸುಮ್ನೇನಾ?...
    ಕವಯಿತ್ರಿ ಗೆ ಭಾವಗಳು ಮೂಡಲು ಅಷ್ಟು ಸಾಕು.....
    ನಮಗೆ ಕೇವಲ ಗುಡುಗಿ ಸಸದ್ದಾಗಿ ಹೋಯಿತು ಅಷ್ಟೇ....
    ಆದರೆ ಅಕ್ಕಾ ನಿನ್ನಲ್ಲಿ ಕವನವಾಯಿತಲ್ಲೇ....

    ಚಂದವಾಗಿದೆ........

    ReplyDelete