Tuesday, May 14, 2013

ಹೀಗೊಂದು ಭೇಟಿ..

ಬಿರುಬಿಸಿಲಲಾತ ಓಡೋಡುತ ಬಂದ,
ಬೆವರೊರೆಸುತ ನಿಂದ,
ತಡವಾಯಿತು ಮನ್ನಿಸೆನ್ನನೆಂದ,
ಮಂಡಿಯೂರಿ ಕೂತ.

ಅಷ್ಟರಲ್ಲಾಗಲೇ ಆ ತಾವು ತಂಪಾಗಿತ್ತು
ಅವಳೆದೆ ಪ್ರೀತಿಯುಕ್ಕಿಸಿತ್ತು,
ಪ್ರೀತಿ ತಂಗಾಳಿಗೆ ಬೆವರೊಣಗುವ ತಂಪು
ಮತ್ತವಳ ನಗೆಯ ಕಂಪು.

ಬೆವರಲಿ ನೆನೆದು ಪಸೆಯುಟ್ಟ ನೆರಳೆರಡರ
ಮಿಲನಕೆ ಸುಡುವ ಸೂರ್ಯ ಸಾಕ್ಷಿಯಾದ.
ಒಳತಾಪದ ಜೊತೆ ತನ್ನುರಿಯೂ ದಹಿಸದ
ಪ್ರೀತಿಯ ತಂಪಿಗೆ ಬೆರಗಾದ, ಮರೆಯಾದ.

"ನಡೆ ಹೋಗೋಣ" ಅವನೆಂದ,
"ತಲುಪಿಯಾಯಿತಲ್ಲಾ, ಇನ್ನೆಲ್ಲಿಗೆ" ಅವಳ ನಗೆ.
"ಪರಸ್ಪರರಿಗಲ್ಲ, ಯಾರೂ ತಲುಪದೆತ್ತರಕೆ
ಕೈ ಚಾಚುವುದೀಗ ನಮ್ಮ ಗುರಿ"- ಅವನಂದ.

"ಸರಿ ಕೊಡಿಲ್ಲಿ ನಿನ್ನ ಪ್ರಾಣ, ಹಕ್ಕಿಯ ಈ ರೆಕ್ಕೆಗದ,
ಆ ರೆಕ್ಕೆಗೆ ನನದ ಕಟ್ಟಿಬಿಟ್ಟು ಹಾರಿಬಿಡುವ.
ಹಾರುವುದದು ದಿಗಂತಕೆ, ಅಕ್ಷಿಯಳತೆಯ ಮೀರಿ
ಗುರಿಯೆಂಬುದನೂ ದಾಟಿ, ಇಹದೊಳಗಿಂದ ಜಾರಿ."

ಮತ್ತದೇ ನಗೆ ಸಾರಿದ ಮಾತು ಅವಗರಿವಾಯಿತು.
ಕೈಕಾಲಿಲ್ಲೇ ಇರಲಿ, ಕರ್ತವ್ಯ ನಿರ್ವಹಿಸಲಿ.
ಮನವಷ್ಟೇ ಹಾರಲಿ, ಮನ್ವಂತರಕು ಹಬ್ಬಲಿ
ಲೋಕದೊಳಗಿದ್ದೂ ದಾಟುವ ಪ್ರೀತಿಯುಳಿಯಲಿ.

ಅಂಗದ್ದಲ್ಲದ ಮಿಲನದಿ ಅರಿವ ಕೂಸಿನ ಜನನ
ನೆರಳು ಸೇರಿ ಮತ್ತಗಲಿದ ಮುಕ್ತಮುಕ್ತ ಕ್ಷಣ
ಮತ್ತವನದೇ ಆ ದಿಕ್ಕು, ಅವಳದೇ ಈ ದಿಕ್ಕು
ಅನಿವಾರ್ಯತೆಯಪ್ಪಿ ನಿರೀಕ್ಷೆಯ ಮುತ್ತಿಕ್ಕಿದ ಹೊತ್ತು.
ಸಂಜೆಯಾಗಿತ್ತು, ಕನಸಮೂಟೆ ಎರಡೂ ಹೆಗಲೇರಿತ್ತು.
ಇರುಳಲೂ ನಾಳಿನಾಗಮನದ ಸಂದೇಶದ ಬೀಜವಿತ್ತು.







1 comment:

  1. ಪರಿಪೂರ್ಣತೆಗೆ ಒಂದು ಉತ್ತಮ ವ್ಯಾಖ್ಯಾನ.....

    ಒಳ್ಳೆಯ ಶೈಲಿ...ಉತ್ತಮ ಭಾವ....
    ಶುಕ್ರಿಯಾ....

    ReplyDelete