Saturday, May 18, 2013

ನಿನ್ನೆಯ ತಟಪಟ ಮಳೆ..

ಬಾನಿನೊಡತಿ ನಿಶೆಯಿಂದು ಕಪ್ಪಿಲ್ಲ,
ಮೇಘರಾಜ ತಂದಿತ್ತ ಕೊಡುಗೆ
ಕೆಂಪುಟ್ಟು ನಾಚಿಯೋ;
ಭಾನು ತೆರಳಿದ ಈ ಅವೇಳೆ
ಬಂದಾತನಪ್ಪಿದ ಬಿಗಿತಕೆ ಬೆವರಿಯೋ;
ನೀರಾಗಿಹಳು, ನೀರಿಳಿಸಿಹಳು...
ಚಂದ್ರ-ತಾರೆಗಳೂ ಮರೆ,
ಏಕಾಂತಕಿರದಿರಲಿ ಭಂಗವೆಂಬಂತೆ..

ಹನಿ ನೋಡಿದೋ ಕೆಳಗುದುರಿವೆ,
ಉಕ್ಕುವ ತೀವ್ರತೆಯೇರುವ ಉತ್ಸಾಹದ
ಉತ್ಪನ್ನವೂ ಬಾಗಬೇಕು ಗುರುತ್ವಾಕರ್ಷಣೆಗೆ.
ಕೆಳಗೊಂದು ಮೈಚಾಚಿದ ನೆರಳು
ಧರೆ ಕಾದು ಕಾದಿಹಳು, ಬಾಯ್ದೆರೆದಿಹಳು..
ನಡುವೆಷ್ಟೋ ಅಡೆತಡೆಗಳು,
ನಿಲ್ದಾಣಗಳು, ವಿರಾಮಧಾಮಗಳ
ದಾಟಿ ಬಂದಿವೆ ಋಣಿ ಹನಿಗಳು.

ಒಂದೊಂದೆಡೆ ಒಂದೊಂದು ಪರಿಣಾಮ-
ವಜನಿಲ್ಲದೆಲೆಯ ಮೇಲಿಂದ ಮೆಲ್ಲ ಜಾರಿವೆ
ಬಿದ್ದೂ ನೋವಾಗದಂತೆ, ಬದಲಾಗದಂತೆ..
ಹಕ್ಕಿರೆಕ್ಕೆ ಪುಕ್ಕದ ನಡು ಸಿಲುಕಿ
ಕಾವಿಗೆ ಬೆಚ್ಚನೆ ಮಲಗಿ ನಿದ್ದೆ ಹೋದಂತೆ..
ಕಲ್ಲ ಮೇಲೆ ಬಿದ್ದೊಳ ನಡೆಯಲಾಗದ
ನಿರಾಸೆಗೆ ಪುಡಿಪುಡಿಯಾದಂತೆ..
ಕಣ್ಣಿಗಿಳಿದು ಕಂಬನಿಯಡಗು ತಾಣಗಳಂತೆ.
ಬಡಿದು ಮಾಡಿನಿಳಿಜಾರಲಿಳಿದು
ಅಡಿಯ ಜೀವನಕೆ ತಟಪಟ ಸಂದೇಶವಿತ್ತಂತೆ..
ಕೊನೆಗೆಲ್ಲ ಮೀರಿ ನೆಲಕಿಳಿದವು.. ಕೆಲವೆಡೆ
ತಾಕಿದೊಡನೆ ಬಿಸಿಗಾವಿಯಾದಂತೆ.
ಕೆಲವೆಡೆ ಕಾದ ಮನದಾತ್ಮೀಯತೆಯ
ಅಪ್ಪುಗೆಯಲಿ ಸಿಕ್ಕಿ ಕರಗಿದಂತೆ...
ಕಾದು ತಾಳ್ಮೆಗೆಟ್ಟ ಒರಟುಮೈಗೆ
ಬಡಿದು ಚೂರಾಗಿ ಚದುರಿದಂತೆ..

ಮಳೆಹನಿಗಳ ಈ ನಡಿಗೆ
ಎದೆಯಾಳಕಿಳಿವಾಗ
ಹಲಭಾವಗಳ ಉಡುಗೆ
ತೊಡಿಸಿ ನೋಡಿ ನಲಿದ ಸುಖ ಮನಕೆ...







No comments:

Post a Comment