Thursday, May 9, 2013

ಕಲೆಯಿದು ಕಲೆಯಷ್ಟೇ ಅಲ್ಲ.

ಮಾತು ಸುತ್ತಿದೆ ದಿಕ್ಕೆಲ್ಲ, ಬರೀ ಲೇವಡಿ.
ಜಗವಾಗಿಬಿಟ್ಟಿದೆ ಪರೀಕ್ಷಕರ ಚಾವಡಿ.
ಶ್ರೋತೃ, ವೀಕ್ಷಕ, ಸಹೃದಯ ಓದುಗನಿಲ್ಲ,
ಸಿಗಿದು ವಿಮರ್ಶೆ ಮಾಡಬಂದವರೆ ಎಲ್ಲ.

ಇಷ್ಟು ದಪ್ಪದ ಭೂತಗಾಜು,
ಕಣ್ಮನವಾವರಿಸೊ ಚಾಳೀಸು.
ತಪ್ಪಿದ್ದರೆ ಸಾಸುವೆಯಷ್ಟು,
ಕಾಣಬೇಕದು ಸ್ಪಷ್ಟ ಬಂಡೆಯಷ್ಟು.

ತನದಲ್ಲದ ಗೆಲುವ,
ತನಗಿಲ್ಲದ ಚೆಲುವ,
ಗೆಲುವಲ್ಲ, ಚೆಲುವಲ್ಲ ಎನುವವ
ಕೈಲಾಗದವನಲ್ಲದೇ ಇನ್ನೇನಿರಬಲ್ಲ?!

ಕಲೆ ಜಗದಳಲ ಮರೆಸುವ,
ಮರೆಯಾಗಿಸುವ ಸಾಧನ,
ಎದೆಯಿಂದೆದೆಗೆ ಭಾವನದಿಯಾಳದ
ಸಿರಿಯ ಸಂವಹನ.
ತಾಯಿ ಶಾರದೆ ಸಂತೈಸೆ
ಕೈಗಿತ್ತ ಗೊಂಬೆಯಾಟಿಕೆ.
ಮಗುವಾಗಿ ಪಡೆದು ಸುಖಿಸದೆ
ವಾರೆ ನೋಟವೇಕೆ?

ಕೇಳು, ಕಲೆಗಿಲ್ಲ ಆದಿಅಂತ್ಯ,
ಉದ್ದಳತೆಯ ಹಂಗು,
ಹಗುರಾಗಿಸಬಲ್ಲುದೆಂಬುದೇ
ಕೃತಿಯ ಹಿರಿಮೆ ನಂಬು.
ನನ್ನಿಂದ ಕಲೆಗಲ್ಲ,
ಕಲೆಯೊಳಗೆನಗೆ ತಾವು.
ಕಟ್ಟೋಣ ಕಲೆಯಗೂಡು
ನಾ ಸ್ವಲ್ಪ ನೀ ಸ್ವಲ್ಪ
ದುಂಬಿಗಳಾಗಿ
ತಂದಲ್ಲಿಲ್ಲಿಂದ ಜೇನು.

  ಎಟುಕಿದವರು ಪಡೆದಾರು,
ಪಡೆದವರು ಸವಿದಾರು,
ಎಟುಕದವಗೆಂದೂ
ಜೇನಿರಲಿ, ದ್ರಾಕ್ಷಿಯಿರಲಿ
ಅದು ಬರೀ ಹುಳಿಹುಳಿ.

2 comments:

  1. "ಕಟ್ಟೋಣ ಕಲೆಯಗೂಡು
    ನಾ ಸ್ವಲ್ಪ ನೀ ಸ್ವಲ್ಪ
    ದುಂಬಿಗಳಾಗಿ
    ತಂದಲ್ಲಿಲ್ಲಿಂದ ಜೇನು." ವಾರೆವಾವ್ ಕವಿಯತ್ರೀ ಸಲಾಂ ಸಲಾಂ...

    ReplyDelete
  2. ಮಾತು ಸುತ್ತಿದೆ ದಿಕ್ಕೆಲ್ಲ, ಬರೀ ಲೇವಡಿ.
    ಜಗವಾಗಿಬಿಟ್ಟಿದೆ ಪರೀಕ್ಷಕರ ಚಾವಡಿ.

    ಮೊದಲೆರಡು ಸಾಲೇ ಸೂಪರ್......
    ಪ್ರತೀ ಕವನಕ್ಕೂ ಅದರದೇ ಆದ ಸ್ವಾರಸ್ಯ...

    ನಾನು ವಿಮರ್ಷೆ ಮಾಡೋದಿಲ್ಲ
    ಏಕೆಂದರೆ ಹೇಳಿಬಿಟ್ಟಿದ್ದೀರಾ...
    "ಸಿಗಿದು ವಿಮರ್ಶೆ ಮಾಡಬಂದವರೆ ಎಲ್ಲ."
    ಅಂತಾ....

    ಅದ್ಭುತ ಅಕ್ಕಯ್ಯ.....

    ReplyDelete