Tuesday, May 7, 2013

ಅಲ್ಲೆಲ್ಲೋ ಅದೂ ಇದ್ದೀತು.

---------------------------
ಎಷ್ಟು ಅಬ್ಬರಿಸಿದರೂ ಅಷ್ಟೇ,
ಎಷ್ಟು ಗೋಗರೆದರೂ ಅಷ್ಟೇ..
ಇಂದು ನಿನ್ನೆಯಾಗಿ, ನಾಳೆ ಇಂದಾಗಿ
ನಿಲದೆ ಗಡಿಯಾರದ ಕೋಲು
ಗರಗರ ತಿರುಗಿಯೇ ಶುದ್ಧ.

ಒಂದು ಭಾಗದ ಬೆಲ್ಲ,
ಅಲ್ಲೇ ಪಕ್ಕದ ಮುಳ್ಳು
ಮೈಮನ ಸವರಲೇಬೇಕು.
ಕಾಲಚಕ್ರದ ವೇದಿಕೆಗೆ
ನಾವು ಕಾಲೂರಿದಾಗ.

ವಿಧಿ ಬರೆದ ನಾಟಕ,
ಕಾಲದ್ದೇ ನಿರ್ದೇಶನ.
ನೇಪಥ್ಯದಿ ಸೂತ್ರಧಾರ.
ತೃಣಕೂ ಪಾತ್ರವೊಂದುಂಟು,
ಪ್ರತಿ ಪಾತ್ರಕೂ ಹಣೆಬರಹವುಂಟು..

ನಾನೇನು, ನೀನೇನು?!
ಒಮ್ಮೆ ನಟ, ಒಮ್ಮೆ ವೀಕ್ಷಕ.
ಸರಸರ ವೇಷ ಬದಲಿಸಬೇಕು,
ಒಲ್ಲದ ಮನಸಲ್ಲಿಂದಿಲ್ಲೆಳತರಬೇಕು.
ಒಳಗಿದ್ದೂ ಹೊರಗುಳಿವ ಕಲೆ ತೋರಬೇಕು.

ಬಾಯ್ಮುಚ್ಚಿ ಹಾಡುವ ಕಂಠ,
ಕಣ್ಮುಚ್ಚಿ ಸಾಗುವ ನಡೆ,
ಮನಮೆಟ್ಟಿ ಏರುವ ಮೆಟ್ಟಿಲು,
ನೀನಿರದೆಯೂ ಉಳಿಸುವ ಉಸಿರು...
ಒಂದಂಕದಲಿದ್ದೀತು, ತಿರುಗುಚಕ್ರ ತಂದೀತು.

No comments:

Post a Comment