Sunday, November 25, 2012

ನೀನೆಂದು ಬರುವೆ?


---------------

ನೀ ಬಿಟ್ಟು ಹೋದ ಬಿಂದುವಿನಲೇ ರಾಧೆಯಾತ್ಮ ಸ್ತಬ್ಧ,

ಜೊತೆಗೆ ನನದೂ......


ಅಂದು ನೀನೆತ್ತಿಕೊಂಡಿದ್ದೆ, ತುಟಿಗಾನಿಸಿದ್ದೆ, ಉಸಿರೂದಿದ್ದೆ,

ನಿನ್ನ ಭಾವಶರಧಿಯಲೆಗಳು ನನ್ನ ಟೊಳ್ಳೊಳು ಮೊರೆದು

ನಾ ದನಿಯಾಗಿದ್ದೆ, ನೀ ಕೊರಡ ಕೊನರಿಸಿದ್ದೆ.


ಅಂದು ರಾಧೆಯೂ ಎದುರಿದ್ದಳು, ಆ ಗಾನದ ಜೀವವಾಗಿದ್ದಳು

ಜಗಕೆ ನಿನ್ನ ತೋರೋ ಕಣ್ಣಾಗಿದ್ದಳು, ಎಲ್ಲ ಮರೆತ ಹೆಣ್ಣು ಬರೀ

ನಾಟ್ಯವಾಗಿದ್ದಳು, ನೀ ಉಸಿರನಾತ್ಮದಿ ಲೀನವಾಗಿಸಿದ್ದೆ.


ಮರಳಲಾರದ ಭಾವತೀರಕೆ ನಮ್ಮನೊಯ್ದು ಅಲ್ಲೇ ಬಿಟ್ಟು

ನೀನಿನ್ನೊಂದು ತೀರ ಸೇರಿದೆ, ಬಯಸಿಯೂ ಬಹುಶಃ ಮರಳದಾದೆ.

ನೊಂದಿದ್ದೆಯಾದರೂ ನಿನ್ನ ನೀ ಮರೆತು ಕರ್ತವ್ಯಕೋಗೊಟ್ಟೆ.

ನನ್ನನೊಯ್ದವರು ಊದಬಯಸಿ ಗಾಳಿತುಂಬಿದರು, ನಾ ನುಡಿದೆ,

ರಾಧೆಯನೊಯ್ದು ಹೂವಂತೆ ಅಲಂಕರಿಸಿದರು, ಅವಳೂ ನಕ್ಕಳು

ಆದರೆನ್ನ ದನಿಯಲಿ ಗಾನವಿಲ್ಲ, ರಾಧೆಯೊಡಲಲಿ ಗಂಧವಿಲ್ಲ.

ದನಿಯೂ ನಿನ್ನನೇ ಹುಡುಕಿ ಹೊರಟಿದೆ, ಗಂಧವೂ.....


ನೀ ಬಿಟ್ಟು ಹೋದ ಬಿಂದುವಿನಲೇ ರಾಧೆಯಾತ್ಮ ಸ್ತಬ್ಧ,

ಜೊತೆಗೆ ನನದೂ......


ನೀ ಹೋದತ್ತ ಕಣ್ಹಾಯುವಷ್ಟು ದೂರಕವಳ ನೋಟ ಹಾಸಿ,

ಅತ್ತ ತಿರುಗಿದ ಹೆಜ್ಜೆ ಇತ್ತ ತಿರುಗುವ ಕನಸ ಹೂಗಳ ಹರಡಿ,

ಅದು ಬಾಡದಂತವಳ ಕಣ್ಣೀರ ಸಿಂಪಡಿಸಿ ರಾಧೆಯಾತ್ಮ ಕಾದಿಹುದು.

ಅವಳೊಳಗಿನ ಟೊಳ್ಳ ಪ್ರತಿನಿಧಿಯಾಗಿ ನನ್ನಾತ್ಮ ಜೊತೆಗಿಹುದು.


ಎಂದು ಬರಲಿರುವೆ 
 ನೀನು?.. ಮತ್ತೆ ನಾವು ಬದುಕಬೇಕು.

ಆತ್ಮ ದೇಹ ಸೇರಬೇಕು, ದೇಹ ದೇಗುಲವಾಗಬೇಕು.

ಜೀವಂತಿಕೆಯೆ ನೀನಾಗಿ ಪೂಜೆಯಲ್ಲಿ ನಡೆಯಬೇಕು.





No comments:

Post a Comment