Monday, November 26, 2012


೪೨) ಹಸಿವಿನ ಕರೆ



ದ್ರೋಣರ ಪರೀಕ್ಷೆಯಲಂದು ಅರ್ಜುನನಿಗೆ

ಮರದ ತುದಿಯ ಹಕ್ಕಿಯ ಕಣ್ಣುಮಾತ್ರ ಕಂಡಂತೆ,

ನನ್ನ ಹೆಮ್ಮೆಯ ತೋಟದೊಳ ಬಂದು ನಿಂತ,

ಬೀದಿ ಗುಡಿ ಸುವ ವಳ ಮಗಳಿಗೆ

ಅಲ್ಲಿನ ಹ ಸಿರು, ಜಾಜಿ ಹೂವಿನ ಕಂಪು,

ಪಾರಿಜಾತದ ಗಿಡದ ಮೇಲಿನ ಗಿಣಿಸಾಲು

ಗುಲಾಬಿಯ ಮೇಲಿನ ಬಣ್ಣದಚಿಟ್ಟೆಗಳು

ಅಕಾಶಮಲ್ಲಿಗೆಯ ಹೂಗೊಂಚಲು ....

ಯಾವವೂ ಕಾಣದೆ, ಮನೆಯೊಳಗಿದ್ದ

ನನ್ನ ಮಗಳ ಕೈಯ್ಯಲ್ಲಿನ ತಿಂಡಿಪೊಟ್ಟಣ

ಮಾತ್ರ ಕಾಣುತ್ತಿತ್ತು.............



ಪಂಚೇಂದ್ರಿಯಗಳಿಗಿಂತ ಹೊಟ್ಟೆಯ ಕರೆ

ಮತ್ತು

ಎಲ್ಲ ಆಸೆಗಳಿಗಿಂತ ಹಸಿವಿನ ಮೊರೆ

ಬಲಶಾಲಿಗಳೆನಿಸಿದವು.



೪೩) ನಿನ್ನ ಹುಟ್ಟುಹಬ್ಬಕೆ



ನಿನ್ನ ಹುಟ್ಟುಹಬ್ಬ ಇಂದು,

ಏನು ಉಡುಗೊರೆ ಕೊಡಲಿ" ಎಂದರೆ,

"ನಿನ್ನ ನಗು" ಎಂದೆಯಲ್ಲಾ,

ಇದಕಿಂತ ಬೇರೆನಗೆ ಬೇಕೆ?

ಏನು ಸಿಹಿ ಮಾಡಲಿ ಎಂದರೆ,

"ನಿನ್ನ ಮುತ್ತು" ಎಂದೆಯಲ್ಲಾ,

ಇದಕಿಂತ

ರಸಿಕತೆಯೆನಗೆ ಬೇಕೆ?

ದೇವರ ಬಳಿಸಾರಿ ನಮಿಸುವಾ ಎಂದರೆ,

ನಮ್ಮೊಲವಲ್ಲೇ ಆತನಿರುವ ಎಂದೆಯಲ್ಲಾ,

ಇದಕಿಂತ ಧನ್ಯತೆಯೆನಗೆ ಬೇಕೆ?

ವಯಸು ಮುಂದೋಡುತಿದೆ ಎಂದರೆ,

ಹುಡುಗಿ ನೀನಾಗಿರೆ, ನಾನೆಂದೂ ಯುವಕನೇ ಎಂದೆಯಲ್ಲಾ

ಇದಕಿಂತ ಮಾತೆನಗೆ ಬೇಕೆ?

ಹೊಸದಿರಿಸು ಧ ರಿಸೆಂದಿತ್ತರೆ,

ನಿನ್ನ ಘಮ ಬೆರೆತಾಗ ಹಳತೂ ಹೊಸತೆಂದೆಯಲ್ಲಾ,

ಇದಕಿಂತ ಮೆಚ್ಚುಗೆಯೆನಗೆ ಬೇಕೆ?

ಹೀಗೇ.......

ನನ್ನದಕೂ ನೀನೇ ಕೊಟ್ಟು, ನಿನ್ನದರಂದೂ ನನಗೇ

ಸೊಗವೆರೆಯುತಿರುವ ನೀನು,

ನನ್ನ ದೊರೆಯಲ್ಲ, ಪ್ರೀತಿಯ ಧಾರೆ.

ನನ್ನ ದೇವರಲ್ಲ, ನೆಮ್ಮದಿಯ ತವರು.



೪೪) ಬಸುರಿಬೆಕ್ಕು

ಬಸುರಿ ಬೆಕ್ಕಿನದು ಬಾಗಿಲಲ್ಲಿ ನಿಂತು ಕೂಗಾಟ

ಒಳಗವಳಿಗೆ ಬಿಡದೆ ಹಳೆಯ ನೆನಪುಗಳ ಕಾಟ.

ಒಡಲಲೇನೋ ಮೊಳೆತದ್ದು ಮೊದಲು ತಿಳಿದಾಗಿನ ಪುಳಕ

ತನ್ನದರೊಡನೆ ಅದರದೂ ಸೇರಿದಾಗಿನ ಉಸಿರ ತಾಳಮೇಳ,

ಒಡಲೊಳಗಿನ ಇರುವನು, ತನ್ನರಿವಿಗು ಹರಿಸಿದ ಮಿಸುಕಾಟ.

ಸದ್ದಿಗೋ ಹಸಿವೆಗೋ, ಬೆಚ್ಚಿ ಒದ್ದ ಪುಟ್ಟಕಾಲ ಸಂದೇಶ.

ಹೀಗೆ..........

ನೂರುನೋವೊಳಗೂ ಮುದ ನೀಡಿದ್ದ ನಿರೀಕ್ಷೆ, ಕೊನೆಗೆ ತಂದ ನಿರಾಸೆ.

ಚೈತನ್ಯದ ಚಿಲುಮೆಯಂದು ಹೊರಬಂದಾಗ ನಿಶ್ಚೇತನವಾದ ಅಸಹ್ಯಗಳಿಗೆ.

"ಬೇಡಮ್ಮಾ, ಕದ ತೆರೆಯಬೇಡ, ಇಲ್ಲೆ ಮರಿ ಮಾಡಿ, ಅದರಾಸೆಗೆ

ಕಂಟಬೆಕ್ಕು ವಾಸಹೂಡಿ, ಮರಿಯ ಕಾಯ್ವ ಸಹವಾಸ ಬೇಡವೆಮಗೆ"

ಮನೆಯೊಳಗಿಂದ ಮನೆಯೊಡತಿಯ ನಕಾರದ ಆದೇಶ

ಮನದೊಳಗಿಂದ ಕದತೆರೆಯೆಂಬ ತುಂಬು ಭಾವಾವೇಶ.

ಕೊನೆಗೊಮ್ಮೆ.........

ತುಂಬುಕಂಗಳಿಂದ ಒಳಗೆ ಸ್ವಾಗತಿಸಿ ಹೇಳಿದಳು

"ಬಾರೆ ಗೆಳತಿ, ತಾಯ್ತನದ ನಿನ್ನ ಕನಸು ಚೂರಾಗದು,

ನಿಶ್ಚಿಂತಳಾಗಿರು ಇಂದಿನಿಂದ ನಿನ್ನ ಮರಿಯು ನನ್ನದು"



೪೫)

೧) ಬೀಜವೇ, ನೆಲವೇ?



ನಾ ನಿನ್ನೊಳಗೆ ಬಿತ್ತಿದ್ದು ಗೊಡ್ಡುಬೀಜವೇನೋ,

ಮೊಳಕೆಯೊಡೆಯಲೇ ಇಲ್ಲ ನೋಡು.

ಆದರೆ ನೀ ಬಿತ್ತಿದ್ದು ಮೊಳೆತು,

ನನ್ನೊಳಗಿಲ್ಲಿ ಹಚ್ಚಹಸುರಾಗಿದೆ.

ಬೀಜದ ಸತ್ವ ಪ್ರಶ್ನಿಸಿದ್ದು ನನ್ನ ಆತ್ಮವಿಮರ್ಶೆ.

ಆದರೆ ನನ್ನದೇ ಆತ್ಮವಿಶ್ವಾಸ ಹೇಳುತಿದೆ,

ಬೀಜ ಮೊಳೆಯುವುದಕ್ಕೆ ನೆಲವೂ ಹಸನಿರಬೇಕು.



೨) ಮೌನದ ಬಿಸಿ



ಭಾವ ಬಳ್ಳಿಯಲಿ ಅರಳಿಹ ಸ್ನೇಹಕುಸುಮವೊಂದು

ಕಂಪು ತಾರದೆ ನಿನಗೆ ವಾಸನೆಯೆನಿಸಿದ್ದು ಯಾಕೆ?

ನೀ ನನ್ನತ್ತ ತೋರಿದ ಬೆಟ್ಟು,

ಅದರತ್ತ ತಲುಪಿದೆ ಕುಡುಗೋಲಾಗಿ.

ಗುಬ್ಬಿಗೆ ಬ್ರಹ್ಮಾಸ್ತ್ರಬೇಕಿಲ್ಲ,

ಈ ಬಳ್ಳಿ ಕುಯ್ಯಲು ಅಷ್ಟೆಲ್ಲ ಬೇಕಿಲ್ಲ,

ನಿನ್ನ ಉದಾಸೀನವೇ ಸಾಕು,

ಈ ಹೂವ ಬಾಡಿಸುವುದಷ್ಟು ಕಷ್ಟವಲ್ಲ,

ನಿನ್ನ ಮೌನದ ಬಿಸಿಯೇ ಸಾಕು.





೪೬) ಹಸಿರು ನೆನಪಿಸಿದ ಕಪ್ಪು



ಹಸುರು ರತ್ನಗಂಧಿಯ ಗಿಡದ ಮೇಲೆ

ಹಸುರು ಗಿಣಿಗಳ ಸಾಲು.

ಎರಡರ ಆತ್ಮಮಿಲನವಾದಂತೆ

ಅಲ್ಲಿರಲಿಲ್ಲ ಪ್ರತ್ಯೇಕತೆಯ ನೆರಳು

ಅಲ್ಲಿನ ಒಟ್ಟು ಸಾರಾಂಶ ಹಸುರೇ ಆಗಿತ್ತು.

ಹಸುರ ನೋಟದಲೇಕೆ ಮನಸು ಕಪ್ಪು ಕಾಣುತಿದೆ?

ತಪ್ಪುಗಳ ರಾಶಿಯಿದ್ದಾಗಲೂ ಹೀಗೆಯೇ

ನಿನ್ನದು ನನ್ನದೆಂದು ವಿಂಗಡಿಸಲಾಗದು

ನನ್ನದು ನಿನ್ನದ್ದ, ನಿನ್ನದು ನನ್ನದ್ದ ಇಮ್ಮಡಿಸಿ

ಅಲ್ಲೂ ಸಾರಾಂಶವೊಂದೇ ಮೂಡುವುದು,

ಆದರದರ ಬಣ್ಣ ಕಪ್ಪು.

ಕಣ್ಣ ಕಣ್ಣೀರಲ್ಲಿ ಕೆಂಪಾಗಿಸುವ ಕಪ್ಪು

ಎದೆಯ ಹಸಿರ ರಕ್ತ ಬಗಿಯುವ ಕಪ್ಪು.



೪೭)

೧) ಮರೆಯದಿರು



ನನಗೆ ತಾಗಲೆಂದೇ ನೀ ಕಳಿಸಿದ್ದು

ಬಂದು ತಲುಪಿದೆ, ಧನ್ಯವಾದಗಳು.

ಅಲ್ಲಿ ಬಿಸಿಯಾಗಿಯೇ ಹುಟ್ಟಿದ್ದರೂ,

ನನ್ನ ತಲುಪಿದಾಗ ಬಿಸಿಯಿರಲಿಲ್ಲ.

ಅಲ್ಲಿ ಚುಚ್ಚಲೆಂದೇ ಹೊರಟ ಬಾಣವಾದರೂ,

ಇಲ್ಲಿ ತಲುಪಿದ್ದು ಹೂವ ಹಿತಸ್ಪರ್ಶವಾಗಿ.

ಅಲ್ಲಿ ಸಿಟ್ಟು ಅದಕವಳಿಯಾಗಿ ಹುಟ್ಟಿದ್ದರೂ,

ಇಲ್ಲಿಗದು ನನ್ನನೆಮ್ಮದಿಯ ಜೊತೆ ಬಂದಿತ್ತು.

ಕೋಪಿಸಿಕೊಂಡಾದರೂ ಸರಿ, ಜೀವವೆ

ನೆನೆಯುತಿರು, ತೊರೆಯದಿರು,

ತೊರೆದು, ಮರೆಯದಿರು.



೨) ನಡೆದೀತೆ?



ಬಾಯಾರಿದ ಧರೆಯ ತಣಿಸುವಾಸೆಯಲಿ

ಮೋಡ ಹನಿಯಾಗತೊಡಗಿದ್ದಾಗಲೇ

ಅಕಾಲಗಾಳಿ ಬೀಸಿ ಮೋಡವ ಹೊತ್ತೊಯ್ದಿತೆಂದು

ಹಿಂದೆಯೇ ಮಳೆತುಂಬಿ ತಂದ ಇನ್ನೊಂದಕ್ಕೆ

ಧರೆ ಒಡ್ಡಿದ್ದ ಸೆರಗ ಮುಚ್ಚಿ ನಿರಾಕರಿಸಿದರೆ

ಅದರದೂ, ಅದರ ಸಂತಾನದ್ದೂ ಬಾಳು ನಡೆದೀತೆ?



೪೮) ಚೌತಿಯ ಚಂದ್ರ



ಅಂದು ಚೌತಿ, ನನ್ನಮ್ಮ ನನ್ನ ಪುಟ್ಟಿಗಂದಳು

"ಬಾ ಒಳಗೆ, ಚಂದ್ರನ ನೋಡಬೇಡ."

"ಯಾಕಜ್ಜೀ..?"-

ಪುಟ್ಟಿಯ ಪ್ರಶ್ನಾಮಾಲಿಕೆಯ ಹೊಸಮುತ್ತು.

ಗಣಪತಿಯ ಕತೆಗೆ ತಣಿಯದ ಪ್ರಶ್ನೆ ನನ್ನತ್ತ.

"ಆಮೇಲೆ ಹೇಳ್ತೇನಮ್ಮಾ" ಅಂದ

ನಾನೀಗ ಯೋಚನೆಯ ಕೂಪದೊಳಗೆ.

ಅದೇ ಸೊಗವೆರೆಯುವ ಚಂದ್ರ, ಅದೇ ಆಗಸ,

ಅದೇ ರಾತ್ರಿ, ಅವೇ ಕಾಂಬ ಕಂಗಳು.

ನಿನ್ನೆ ನಾಳೆಗಳಲವನು ಕಂಗಳ ಸೊಬಗು.

ಚಿಂತನೆಯ ಬದಲಾದ ಹಿನ್ನೆಲೆಯಲ್ಲಿ

ಇಂದು ಮಾತ್ರ ನೋಟಕೂ ನಿಷಿಧ್ಧ.

ಪ್ರಶ್ನೆಯಲಿ ಕಳೆದು ಹೋಗಿದ್ದೆ,

ಅಂಗಳದಿ ನಿಂದು ಅವನನೇ ನೋಡುತಿದ್ದೆ

ಅಮ್ಮ ಅಪವಾದದ ಭಯವೆಬ್ಬಿಸಿದಳು

ನಾನಂದೆ, "ನಾಳೆ ಕಂಡವರಾರು?

ಅಪವಾದವೆದುರಿಸಲು ನಾ, ಎಸಗಲು ಅವರು

ಇಲ್ಲದೆಯೇ ಹೋಗಬಹುದು, ಆದರೆ

ಇಂದಿನ ಚಂದ್ರ, ಮತ್ತವನ ಚೆಲುವೇ ನಿಜ

ನೋಡು ಬಾ ನೀನೂನೂ.



೪೯) ಮಾತುಮುತ್ತುಗಳು



೧)

ನಾ ನಿಂತ ನಿಲುವಲ್ಲಿ

ನನ್ನ ಪಾದದಡಿಯ ನೆಲದರಿವು ನನಗಷ್ಟೇ ಗೊತ್ತು.

ಹೂವೆಂದೋ ಇಲ್ಲ ಮುಳ್ಳೆಂದೋ

ನೀವು ಊಹಿಸಬಹುದು, ನಿಜ ಕಾಣಲಾಗದು

೨)

ಹಗಲುರಾತ್ರಿಗಳಂತೆ ಮಾತುಮೌನಗಳಿಗೂ,

ಕಾಲನಿಗದಿಯುಂಟು, ಕಾರ್ಯಕಾರಣಗಳುಂಟು.

ಎಷ್ಟು ಬಯಸಿದರೂ ಅವು ಅದಲುಬದಲಾಗವು.

ಹಾಗೆಂದು....

ದಿನ ಅಥವಾ ಬಾಯಿ ನಮ್ಮದಲ್ಲವೆನ್ನಲಾಗದು.



೫೦) ಚುಟುಕುದನಿ

೧)

ಕಂದನೆಂದೊಡನೆ ಅವಳ ಕಣ್ಮನಗಳಾವರಿಸುವ ನೀನು

ಬೇರ್ಯಾರೂ ಅಲ್ಲಿರಬಾರದೆಂದು ಅವಳ ಬಂಜೆಯಾಗಿಸಿದೆಯಾ?

೨)

ಸುಲಭವಾಗಿ ಅಕ್ಷರಗಳಾಗುವ ಈ ಎಲ್ಲಾ ಭಾವನೆಗಳು

ಮಾತಾಗುವ ಎಷ್ಟೋ ದಿನದ ಕನಸು ಕನಸಾಗಿಯೇ ಉಳಿಯಿತು.

೩)

ನೀ ನನ್ನ ಪ್ರೇಮಿಸಿದೆ ಎಂದರಿತಂದೇ ನಾನಿಲ್ಲವಾದೆ

ನಿನ್ನೊಳಗೇ ಕಳೆದುಹೋದದ್ದು ನಿನಗೇ ಸಿಕ್ಕದ ನೋವೇ?

೪)

ಗಾಢಮೋಡದ ಜೊತೆ ಬಂದು, ಭ್ರಮನಿರಸನ ಮಾಡುವ ಇತ್ತೀಚಿನ ಮಳೆಯಂತೆ

ಹೇಳಲೇಬೇಕೆನಿಸಿದ್ದು ಧಾವಿಸಿ ಬಂದು ಗಂಟಲಲ್ಲೇ ಕೆಲ ಹನಿಸುರಿಸಿ ಮೌನವಾಯಿತು.

೫)

ದೇವರಿಲ್ಲ ಎನ್ನುವವರೇ, ನಾಳೆ ಬಯಸಿದಲ್ಲೆಲ್ಲೂ ಸಾಂತ್ವನವಿಲ್ಲವಾದಾಗ,

ಅವನ ಮೌನಭರವಸೆಗೇ ನೀವೂ ಕಿವಿಯಾಗುವುವಿರಿ, ಒಪ್ಪಲಾರಿರಿ ಅಷ್ಟೇ.

೬)

ಸಿಹಿ ತಿನ್ನಗೊಡದ ಕಾಯಿಲೆಗೆ ಅಳುತ್ತಾ ಆ ದೊಡ್ಡ ಮನೆಯೊಡತಿ

ಹಸಿವೆ ತಾಳದೆ ಸತ್ತ ಕಂದಮ್ಮನ ಮಣ್ಣುಮಾಡಲು ಚಿಲ್ಲರೆ ಕಾಸಿತ್ತಳು.



೫೧)

೧)ಆತ್ಮದ ಬಂಧ



ಇಲ್ಲವೆನಿಸಿದುದರ ಕೊರಗಲ್ಲಿ ನೀ ಸವೆಸಿದೆಲ್ಲ ಕ್ಷಣಗಳು

ಇಲ್ಲವಾಗದೆ ಮರೆಯಾದುದಕೆ ಮಣಭಾರದ ಹೊರೆಯೇ ಹೌದು

ಆತ್ಮಗಳೆರಡರ ಬಂಧ ಜನ್ಮದಿಂದ ಜನ್ಮದವರೆಗೆ.

ಅದೆಲ್ಲಿಗೂ ಹೋಗಲಾರದು,

ಅಲ್ಲೇ ನಿನ್ನೊಳಗಿಂದ ನಿನ್ನನೇ ವೀಕ್ಷಿಸುತಿಹುದು.

ನಿನ್ನ ಕಣ್ಣೀರಿಗೆ ಅತ್ತು, ನೀ ನಗುವಾಗ ನಗುತಿಹುದು.



೨) ನಾ ಒಳ್ಳೆಯವಳು



ಆಡದೆ, ಒಳ್ಳೆಯವಳೆನಿಸುವ ನಿಟ್ಟಿನಲ್ಲಿ

ಕಳಕೊಂಡ ನೆಮ್ಮದಿಯ ಕ್ಷಣಗಳ ಹೋಲಿಕೆಯಲ್ಲಿ

ಪಡಕೊಂಡ ಕೆಡುಕೆನಲಿಲ್ಲದ ಸಮಾಧಾನ

ಬರೇ ಸ್ವಲ್ಪ, ಒಪ್ಪುವ ಮಾತೇ.

ಆದರೂ..................

ನನ್ನವರಲಾಗಲಿ, ಅದಲ್ಲದವರಲಾಗಲಿ

ತಪ್ಪಿಲ್ಲದೆ ಅನುಭವಿಸುವಾಗಲೂ

ಆಡಿ ಕೆಟ್ಟವಳೆನಿಸಿಕೊಳುವ ಧೈರ್ಯವಿಲ್ಲ.



೫೨) ಹೀಗೆರಡು ಪ್ರಶ್ನೆಗಳು



ಹಗಲೆಲ್ಲ ಜೊತೆಗಿದ್ದು ಸಾಕಷ್ಟು ಸುಖಿಸಿ,

ಪ್ರತಿರಾತ್ರಿಯೂ ಇಲ್ಲಸಲ್ಲದ ಕಾರಣವೊಡ್ಡಿ

ದೂರಾಗುವ, ಜಗದ ಇನ್ನೊಂದೆಡೆಗೆ

ಅದೇ ಸುಖವರಸಿ ಹೋಗುವ ರವಿಗಾಗಿ

ಮತ್ತೆ ಪ್ರತಿದಿನ ಬೆಳಿಗ್ಗೆ ಕಾಯುವ ಈ ಕಮಲದ್ದು

ಪ್ರೀತಿಯೆಂಬ ತಾಳ್ಮೆಯೇ ಅಥವಾ

ಪ್ರೀತಿಯೆಂಬ ಪೆದ್ದುತನವೇ ?!



ತನ್ನಲೇ ಪ್ರಾಣವಿರಿಸಿಕೊಂಡ ಇಳೆಗೆ

ಭಾನು ಉರಿಯಿತ್ತು ನೋಡುವ,

ತನ್ನಲೇ ನಲಿವನಿರಿಸಿದ ಚಕೋರಕೆ ಚಂದ್ರ

ಮಾಸವೊಂದರ ಕಾಲ ಕಾಣದೆ ಸತಾಯಿಸುವ,

ಈ ಉಪೇಕ್ಷೆ ................

ಇಳೆಯ ಮೇಲೆ ಭಾನುವಿನ,

ಚಕೋರನ ಮೇಲೆ ಚಂದ್ರಮನ,

ನಂಬಿಕೆಯ ಫಲಿತಾಂಶವೇ?





೫೩) ಗಿಡದ ಮೋಸ



ಅಲ್ಲೊಂದು ತೋಟ, ಒಳಗೆ ಹೂವಿಲ್ಲದ ಒಂದು ಹೂಗಿಡ.

ಹೂಬಿಡುವಷ್ಟು ಬೆಳೆಸದೆ ಆಕಾರಕಾಗಿ ಕತ್ತರಿಸುವ ಮಾಲಿ

ಅಲ್ಲಿ ನೋವು ಎಂದಿನಂತೆ ಸೆಳೆಯಿತು,

ದಿನವೂ ನಾ ಮುಟ್ಟಿ ಸ್ಪಂದಿವುದು ಶುರುವಾಯಿತು

ಮೊದಲೆಲ್ಲ ನಕ್ಕು ಅಲುಗಾಡಿದ್ದು ಮುಂದೊಮ್ಮೆ ಮುಳ್ಳಲಿ ಚುಚ್ಚಿತು

ಹೂವಾಗದ ಜನ್ಮ ಮುಳ್ಳಾದಾಗ ಚುಚ್ಚುವುದೇ ಅದರ ಧರ್ಮ-

ನನ್ನ ವಿಶ್ಲೇಷಣೆ.

ಮರುದಿನವೂ ಚುಚ್ಚಿದಾಗ ಎಲ್ಲೋ ಸಣ್ಣ ನೋವು

ಹಲವು ಗಾಯಗಳ ನಂತರ ಮನಒಲ್ಲದಿದ್ದರೂ

ಪರೀಕ್ಷೆಗಾಗಿ ದೂರದಿಂದ ವೀಕ್ಷಿಸಿದೆ.

ನಾ ಬಾಗಿ ಮುಟ್ಟಿದಾಗ ಮಾತ್ರ ಮುಳ್ಳುಜಾಗೃತ

ನಾನಿರದಾಗ ಗಿಡದ ನೋವಿನದೇ ಪ್ರದರ್ಶನದಾಟ

ಪ್ರೀತಿಯ ತಾಳ್ಮೆ ಗುಲಾಮತನವೆಂದುಕೊಂಡು

ತಮಗೆ ಮಿಡಿವ ಜೀವಗಳ ಚುಚ್ಚಲಿಕೇ ಮುಳ್ಳನೇಳಿಸುವದ

ನಾನೊಪ್ಪುವುದಿಲ್ಲ, ಆ ವ್ಯಕ್ತಿತ್ವಕ್ಕಿನ್ನು ಮಿಡಿಯುವುದಿಲ್ಲ.

ಈಗ ನಾ ಆ ತೋಟಕೇ ಹೋಗುವುದಿಲ್ಲ.





೫೪)

೧) ಬರೆವವರ ತುರ್ತು



ಹೂವು ಹಕ್ಕಿ ಬಾನು ಚುಕ್ಕಿಗಳು

ನೋವುನಲಿವು ಮೋಸದ್ರೋಹಗಳು

ಮಿಡಿತ ತುಡಿತ ಸರಸವಿರಸಗಳು

ಪ್ರೀತಿಪ್ರೇಮ ನಾಡುನುಡಿಗಳು

ಇವಿಷ್ಟೇ ಕವನವಾಗುವವೆಂದುಕೊಂಡಿದ್ದೆ.

ಹಸಿವೆ ಸಾವು ದಾಸ್ಯ ವಿಷಾದಗಳೂ

ಮಹಾಕಾವ್ಯಗಳಾಗುವುದ ಕಂಡು

ಬರೆಯಹೊರಟವಗೆ ಆಳಕಿಳಿಯುವ

ಮತ್ತು

ತೇಲುದೃಷ್ಟಿಯಲಿ ನೋಡಲಾಗದ

ಅನಿವಾರ್ಯತೆಯ ಅರಿವಾಯಿತು.



೨)ನೋಟ ಮತ್ತು ದೃಷ್ಟಿ

ಕಾಂತಿ ಕಾಣಬೇಕಾದರೆ ಕಾಂತಿಯರಸೊ ದೃಷ್ಟಿ ಬೇಕು

ಹೂಗಿಡದಲ್ಲಿ ಹೂವೂ ಇದೆ, ಮುಳ್ಳೂ ಇದೆ

ಅಂದೆಂದೋ ಚುಚ್ಚಿದ ಮುಳ್ಳ ನೆನೆಯುತ್ತಾ

ಬಳಿಸಾರಿದರೆ, ಭಯವೇ ಆಗುವುದು,

ಕಣ್ಣು ಹೂವ ನೋಡಿದರೂ, ದೃಷ್ಟಿಯಲಿ ಮುಳ್ಳೇ ಇದ್ದು,

ಹೂವ ತಡವಲಾಗದು, ಕಣ್ಮುಚ್ಚಿ ಮೈಮರೆಯಲಾಗದು



೫೫) ಪ್ರೀತಿ ನಾಪಾಸಾಗದು



ಪ್ರೀತಿಯ ಪರೀಕ್ಷಿಸುವುದು ಸಲ್ಲ,

ಅದು ನಾಪಾಸಾಗದು, ಆದರೆ ನಾವಷ್ಟೇ.

ಸೋಲುವ ಭಯವದಕಿಲ್ಲ.

ಪ್ರೀತಿಯೇ ಆದರೆ ಅಲ್ಲಿ ಶರತ್ತಿರುವುದಿಲ್ಲ,

ನಿರೀಕ್ಷೆ ಹುಸಿಯಾದರೆ, ಆ ಗಳಿಗೆಗಷ್ಟೇ,

ಪ್ರೀತಿ ಹುಸಿಯಾಗುವುದಿಲ್ಲ.

ರಾಮನೇ ಪರೀಕ್ಷಿಸಿ ಸೋತನಲ್ಲ!?

ಋಣಾನುಬಂಧವಿದ್ದಲ್ಲದು ಇರುವುದಷ್ಟೇ,

ಅದಕೆ ದೇವ- ಮಾನವರ ವ್ಯತ್ಯಾಸ ಗೊತ್ತಿಲ್ಲ.

ದಿನಕೊಮ್ಮೆ ಮರೆಯಾಗುವ ಸೂರ್ಯಗೆ ಸಾವಿದೆಯೇ?

ಹೊರಗಣ್ಣ ಮುಚ್ಚಿ ಒಳಗಣ್ಣಲದ ಕಾಣುವಾ.

ನಮ್ಮೊಳಗೇ ಹುಟ್ಟಿದ್ದು, ನಮ್ಮದೇ ಎಂದು ನಂಬುವಾ





೫೬) ಪ್ರೀತಿ ಕಾಣಿಸದು



ಪ್ರೀತಿ ಗಾಳಿಯಂತೆ, ಕಾಣಿಸದು,

ಉಸಿರಾಡಿಸುವುದು.

ಪ್ರೀತಿ ಕಂಪಿನಂತೆ, ಕಾಣಿಸದು,

ಮೈಮನ ತುಂಬುವುದು.

ಪ್ರೀತಿ ಖುಶಿಯಂತೆ, ಕಾಣಿಸದು,

ಮೈನವಿರೇಳಿಸುವುದು.

ಪ್ರೀತಿ ದೈವದಂತೆ, ಕಾಣಿಸದು,

ಬೀಳದಂತೆತ್ತುವುದು.

ಅದು ಹರಕೆಗೆ, ಹೊಗಳಿಕೆಗೆ, ಕಾಣಿಕೆಗೆ, ಹಾಸಿಗೆಗೆ

ಇಂಥವ್ಯಾವುವಕ್ಕೂ ಒಲಿಯದು.

ಅದೊಲಿಯುವುದಾದರೆ ನಂಬಿಕೆಗೆ, ನಂಬಿಕೆಗೆ

ಮತ್ತು ನಂಬಿಕೆಗೆ ಮಾತ್ರ





೫೭) ಬಾಳೆಂಬ ಕನ್ನಡಿ



ಬಾಳು ಕನ್ನಡಿಯಂತೆ

ನಮ್ಮೊಳಗ ನೇರ ಬಿಚ್ಚಿಡುವುದು

ಸೊಗಸಲ್ಲಿದ್ದರೆ ಸೊಗವ ,ಕೆಡುಕಿದ್ದರೆ ಕೆಡುಕ

ಪ್ರೇಮವಿದ್ದರೆ ಪ್ರೇಮವ, ದ್ವೇಷವಿದ್ದರೆ ದ್ವೇಷವ

ತಂದು ಮುಂದಿಡುವುದು.

ನಿನ್ನ ಕಾಣಿಸಲೆಂದು ಅವನ ಮುಂದದನಿಟ್ಟರೆ,

ಅಲ್ಲಿ ತನ್ನೊಳಗ ಕಂಡು ನಿನ್ನದೆಂದೆಣಿಸುವ

ಅವರಿವರ ಮಾತು ಬಿಡು,

ಮುಂದಿರುವ ಕನ್ನಡಿಯ ಮಾತ್ರ ನಂಬು.

ಮೆಚ್ಚುವಂಥದ್ದಿದ್ದರೆ ಬೆಳೆಸು

ಇಲ್ಲದಿದ್ದರೆ ಕಾಯಕಲ್ಪದಿ ಮೂಡಿಸು

ಅದನೂ, ನಿನ್ನನೂ ತಿಕ್ಕಿ ಬೆಳಗಿಸು

ಆಗಲೊಮ್ಮೆ...........

ಸುಂದರ ಬಿಂಬ ಮೂಡದಿದ್ದರೆ ಕೇಳು



೫೮) ದಿಟ್ಟ ನಿಲುವು



ಊರ ದೇವರ ಜಾತ್ರೆ,

ಉತ್ಸವ ಮೂರ್ತಿಯ ಮೆರವಣಿಗೆ

ನನ್ನ ಗಿಡವಂದೇ ಅರಳಿಸಿದ ಅಚ್ಚಬಿಳಿ ಗುಲಾಬಿಯ

ಮೂರ್ತಿಗರ್ಪಿಸೊ ಆಸೆಯಲಿ ಹಿಡಿದು ಕಾದಿದ್ದೆ.

ಹೂವು ಕೊಸರಿದಂತೆ, ಒಲ್ಲೆ ನಾ ಎಂದಂತೆ....!

ಕೈ ಸಡಲಿಸಿದೆ, ಬಿತ್ತು ನನದೆ ಪಾದದ ಮೇಲೆ.

"ದೇವಸನ್ನಿಧಿಗಿಂತ ಈ ಪಾದ ಹಿತವೆನಿಸಿತೇ?!!!"

ಹೂವು ಮಾತಾಡಿತು.....

"ಆ ಮೂರ್ತಿಯೇ ಕಾಣಿಸದಷ್ಟು ಹೂವಲ್ಲಿದೆ.

ಈಗ ಮೂರ್ತಿ ನನ್ನ ಗಮನಿಸದು,

ಬರೇ ಸಹಿಸಿ ಹೊರುವುದು.

ನೀನೆರೆದ ನೀರು ನನ್ನ ನೆತ್ತರಾಗಿಹುದು

ನೀನೆರೆದ ಪ್ರೀತಿ ನನ್ನ ಚೆಲುವೆ ಆಗಿಹುದು

ನನ್ನಿರುವೇ ಇಂದು ನಿನ್ನ ಸಂಭ್ರಮವಾಗಿಹುದು

ನನ್ನ ಸಹಿಸಿಕೊಳುವ ಆ ಗದ್ದುಗೆಗಿಂತ,

ಸಂಭ್ರಮಿಸುವ ನಿನ್ನ ಪಾದುಕೆಯೇ ಮೇಲು"

ಪುಟ್ಟ ಹೂವ ನಿಲುವು ಬೆಟ್ಟದಷ್ಟು

ದಿಟ್ಟವೆನಿಸಿತು, ದಿಟವೂ ಹೌದನಿಸಿತು.



೫೯) ಕ್ಷಮಿಸು ಜೀವವೇ....



ನಾನಾಗಲೇ ಬಂದಾಯ್ತು,

ನನ್ನದೆಲ್ಲವ ನಿನ್ನದಾಗಿಸಿಯಾಯ್ತು

ನನ್ನ ನಡೆ ಸಪ್ಪಳ ಮೆತ್ತಗಿತ್ತೇನೋ,

ಇಂದಿನವರೆಗೂ ನೀ ಕೇಳದಾದೆ.

ಕ್ಷಮಿಸು ಜೀವವೇ........

ನೀನಾಗ ಕಾಯುತಿದ್ದುದು ಅದಕಲ್ಲವೇನೋ

ನಾ ಬಾಗಿಲದೂಡಿ ಒಳನಡೆದದ್ದೂ ಸರಿಯಲ್ಲವೇನೋ

ಈಗ ನೀನಿಲ್ಲಿಂದ ಅಲ್ಲಿಗೆ ಕರೆಯುತಿರುವೆ,

ಬರಲೇನೂ ಇಲ್ಲಿಂದು ಉಳಿದಿಲ್ಲ,

ಅಲ್ಲಿ ಹಳತಾಗಿರುವುದ ನೀ ಕಾಣುತಿಲ್ಲ.



೬೦)ಹೀಗೆರಡು ದಾರಿಗಳು



ತಿರುವಿರದ, ಕವಲಿರದ ದಾರಿಯ ಪಥಿಕ,

ನೇರ ನಡೆಯುತಿರಬೇಕು

ದಾರಿ ತನ್ನಷ್ಟಕ್ಕೆ ಕೊನೆಯಾಗುವ ಮೊದಲು

ಮನದಾಸೆಗೆ ದಿಕ್ಕು ಬದಲಿಸಿದರೆ

ದಾರಿಗಳೇ ಇರದ ಕಾಡುಪಾಲು,

ಇಲ್ಲ,

ಕೊನೆ ಕಾಣದ ಕಣಿವೆ ಪಾಲು.



ಮುನ್ನಡೆಯುವವರು-

ಪಾಲಿಗೆ ಬಂದದ್ದು ಹೇಗಿದ್ದರೂ ಸರಿ

ದಾರಿ ಹೋದಂತೆಯೇ ನಡೆಯುತಿರಬೇಕು.

ಅದ ಬಯಸದವರು

ಹಿಂತಿರುಗಬೇಕಾದರೆ ಅದೇ ದಾರಿಯಲ್ಲ,

ವಿಧಿತೋರಿದ್ದಲ್ಲದ ಆರಿಸುವ ಧೈರ್ಯವಿರಬೇಕು



೬೧) ಪಿಸು ಮಾತುಗಳು



೧)

ದೇಹವ ನಂಬುವದಕ್ಕೊಂದು, ಮನಸ ನಂಬುವುದಕ್ಕೊಂದು

ಹೀಗೆ ಪ್ರೇಮಕ್ಕೆರಡು ವ್ಯಾಖ್ಯೆಗಳಾದಾಗ ಹೃದಯ ಪೆಚ್ಚಾಯಿತು.

೨)

ನೀ ಮುಂದೆಯೇ ಸಾಗುತಿರು, ಗುರಿ ನಿನ್ನ ಸಮೀಪಿಸಲಿ

ಹಿಂದೆಯೇ ನಾನಿದ್ದೇನೆ, ಯಾಕೆಂದರೆ, ನೀ ಈಗ ನನ್ನ ಗುರಿ

೩)

ನೋಯಿಸಿದಕೆ ಕ್ಷಮಿಸು,

ನೋವಿಳಿಸಲೆಂದೇ ಬಂದೆ, ದಾರಿಯಲಿ ನಗು ಹೆಕ್ಕಿ ತಂದೆ

ಅದರ ಕಂಪಲ್ಲಿ ನಿನ್ನ ನಿರಾಸೆ ಇದ್ದುದು ಕಾಣಲೇ ಇಲ್ಲ.

೪)

ನಾನಂಥದ್ದೇನೂ ಮಾಡದಾದೆ, ನಿನ್ನ ದೂರೂ ಸರಿಯೆ.

ನನಗಾಗದ್ದ ನಿನ್ನಿಂದ ಬಯಸಲಾರೆ, ಆದರೆ

ಒಮ್ಮೆ ಯೋಚಿಸುವೆಯ, ನೀ ನಾನಾಗಿದ್ದರೆ.....?



೬೨) ಆಗ ನಾನಿರುವುದಿಲ್ಲ.....



ನನ್ನ ಅಳಿಸಬೇಕೆಂದ ನಿನ್ನ ಮಾತು ಕೇಳಿತು

ಯಾರೆಂದು ನೀ ಹೇಳಿದ್ದಿರಬಹುದು,

ನಾ ಕೇಳದಾದೆ.

ನನ್ನ ನಾ ಅಳಿಸಲಾರೆ- ಯಾಕೆಂದರೆ,

ನೀ ನನ್ನೊಳಗಿದ್ದೀಯಲ್ಲಾ....!

ಬಹುಶಃ ನಿನ್ನಿಂದಲೂ ಅದಾಗದು- ಯಾಕೆಂದರೆ,

ನಾನಿರುವುದು ನಿನ್ನ ಹಣೆಬರಹದಲ್ಲಿ (ನೀ ನನದರಲ್ಲಿ)

ಮತ್ತು ಬರೆದವನೂ ಹಣೆಬರಹವಳಿಸಲಾರ.

ನಿನಗೊಂದು ಹಿಡಿ ತೃಪ್ತಿಯ ನಗು ತರುವುದಾದರೆ,

ಎಂದಿನಂತೆ ನಿನ್ನ ಯತ್ನಕೆ ಶುಭ ಹಾರೈಸುವೆ.

ಪವಾಡನಡೆದು ಮುಂದೊಮ್ಮೆ ಅದು ಸಾಧ್ಯವಾಗುವುದಾದರೆ,

ಈಗಲೇ ಮನಸಾರೆ ಅಭಿನಂದಿಸಿಬಿಡುವೆ

ಯಾಕೆಂದರೆ....ಆಗ ನಾನಿರುವುದಿಲ್ಲವಲ್ಲಾ.......



೬೩) ಸಂಬಂಧ



ಸಂಬಂಧಕ್ಕೊಂದು ಹಣೆಪಟ್ಟಿ ಇರಕೂಡದು.

ಹೆಸರಿದ್ದರೆ ಕಾಯ್ದುಕೊಳುವ ಚಿಂತೆಯಿಹುದು

ಅಲ್ಲಿ ನಿಭಾಯಿಸುವ ಹಿಂಸೆಯಲ್ಲ, ತಾನಿಲ್ಲವಾಗುವ ಅರ್ಪಣೆಯಿರಬೇಕು

ಅಲ್ಲಿ ಕೊನೆಯ ಚಿತ್ರಣವಲ್ಲ, ನಿರಂತರ ಹರಿವಿನರಿವಿರಬೇಕು

ಉಳಿಸುವ, ಅಳಿಸುವ ಯೋಚನೆಯಲ್ಲ, ತಂತಾನೇ ಬೆಳೆವ ಸಲೀಸಿರಬೇಕು

ಪಲ್ಲವಿಸಿದಾಗ ಬಣ್ಣದ ಚೆಲುವಲ್ಲ, ಕಾಣದ ಕಂಪು ಎದ್ದು ತೋರಬೇಕು

ಅಲ್ಲಿ ನಿಬಂಧನೆಯಲ್ಲ, ನಿರ್ಬಂಧವಿಲ್ಲದ ಮುಕ್ತತೆಯಿರಬೇಕು

ಸಂಶಯ- ಭಯದ ಕೂಸು ಮತ್ತು ನಂಬಿಕೆಯ ಸಾವು.

ಅದಕಲ್ಲಿ ಎಡೆಯಿಲ್ಲದಿರಬೇಕು.................

ಇಂಥದ್ದೊಂದು ಅನುಬಂಧ ನನಗೀಗ ಬೇಕು



೬೪) ಪಾಚಿಗಟ್ಟದಂತೆ....



ಪಾಚಿಕಟ್ಟದಂತೆ ಮನಸ ಕಾಯುತಿರಬೇಬೇಕು

ಆರ್ದ್ರತೆ ಇದ್ದಲ್ಲದು ಕಷ್ಟವೇ..ಆದರೂ

ಪಾಚಿ ಹುಟ್ಟದಂತಿಡಲು ಪ್ರಯತ್ನಿಸಬೇಕು

ಒಮ್ಮೊಮ್ಮೆ ಮುಚ್ಚಳವ ತೆಗೆದಿಡಲುಬೇಕು

ಆಗಾಗ ನೇಸರನೂ ಒಳಗಿಣುಕಬೇಕು

ತೇವ ನಿಲ್ಲದೆ, ಮೆಲ್ಲ ಹರಿಯುತಿರಬೇಕು

ಭಾವ ತುಂಬಿದರೊಮ್ಮೆ ಖಾಲಿಯಾಗಿಸಬೇಕು

ಸಂಬಂಧ ಪಟ್ಟಭದ್ರವಾಗದಿರಬೇಕು

ಬಂದದ್ದು ಒಳಹೊರಗೆ ನಡೆಯುತಿರಬೇಕು

ಹಳತು ಹೊಸತಕೆ ಜಾಗಮಾಡಿಕೊಡಬೇಕು

ಇಷ್ಟೆಲ್ಲ ಮಾಡಿಯೂ..........

ಕಟ್ಟಿದರೆ ಪಾಚಿ ಗಾಢವಾಗಬಿಡಬಾರದು

ಹುಟ್ಟಿನಲೆ ಒರೆಸಬೇಕು, ನಿರ್ಲಕ್ಷ್ಯ ಸಲ್ಲದು

ಗಟ್ಟಿಪಾಚಿಯ ಕೆರೆಯದೇ ತೆಗೆಯಲಾಗದು

ಕೆರೆತ ಮಿದುಮನವ ಗಾಯಗೊಳಿಸದಿರದು

ಹಾಗಾಗಿ ..................

ಪಾಚಿಗಟ್ಟದಂತೆ ಮನಸ ಕಾಯುತಿರಬೇಕು



೬೫) ಇನ್ನೇನು ಕೇಳಲಿ?



ನಿನ್ನ ಹರಕೆಯ ಯಾದಿಯಲ್ಲಿ,

ನಿನ್ನ ಕೋರಿಕೆಯ ಪಟ್ಟಿಯಲ್ಲಿ

ನಿನ್ನದೇ ಹೆಸರಿಲ್ಲ

ಪರರ ಇಲ್ಲಗಳ "ಇಲ್ಲವಾಗಿಸು"

ಎಂದೆನಗೆನುವ ನಿನಗೆ ಬೇಕಾದ್ದಿಲ್ಲವೆ?

-ನನ್ನ ದೈವವೊಂದು ದಿನ ಕೇಳಿದಂತೆ.....



ನಾನುತ್ತರಿಸಿದೆ-

ಜಗದ ನೋವುಗಳ ನಡುವೆ ನನದೊಂದೆ ನಲಿವು,

ನಲಿವುಗಳ ನಡುವೆ ನನದೊಂದೆ ನೋವು

ಒಂಟಿತನ ಕಾಡಿ ಓಡಿ ಹೋದಾವು

ಅಲ್ಲದೆ,

ನನ್ನ ದನಿ ತಲುಪುವ ಸನಿಹದಲ್ಲಿ ನೀನಿರಲು

ನಾ ಕೇಳಲು ಇನ್ನೇನಿದ್ದೀತು?



೬೬) ಚುಟುಕಗಳು



೧)

ರಾಮ ರಾವಣರ ನಾವೇ ಅವರಾಗಿ ನೋಡಬಹುದು,

ಆವಾಹಿಸಿಕೊಳಬೇಕಿಲ್ಲ, ನಮ್ಮೊಳಗಿಬ್ಬರೂ ಇದ್ದಾರೆ

ಒಮ್ಮೆ ಅವ, ಇನ್ನೊಮ್ಮೆ ಇವ ಏಳುತಿರುತಾರೆ

ಸಾಧ್ಯವಾದರೆ, ಹನುಮನ ಅವನಾಗಿ ನೋಡುವ

ಅವಾಹಿಸಿಕೊಳ್ಳುವಾ,

ಹಾಗೆ ಶರಣಾಗುವುದ ಕಲಿಯುವಾ

೨)

ಊರ್ಮಿಳೆಯ ನೋವಿಗೆ ಮಹಾಕಾವ್ಯ ಕಿರಿದಾಯ್ತು

ಸೀತೆಯದಕೆ ಭೂಮಿಯೊಡಲೇ ಬಿರಿಯಿತು

ಆದರೆ,

ಕೈಕೇಯಿಯದಕೆ, ತಾರೆಯದಕೆ, ಮಂಡೋದರಿಯದಕೆ

ಒಂದಕ್ಷರವೂ ಇಲ್ಲವಾಯಿತೇ?



೬೭) ಬೆಟ್ಟದಡಿಯ ಗಿಡ



ಒಮ್ಮೆ ಹಸಿರಾಗೊ, ಒಮ್ಮೆ ಒಣಗೋ ಬೆಟ್ಟವೊಂದು ,

ಪಕ್ಕ ದೊಡ್ಡ ಮರ, ಸುತ್ತ ದೊಡ್ಡ ಬಯಲು,

ತುದಿಯಲೊಂದು ದೇಗುಲ, ಒಳಗೆ ಮೊಳಗೊ ಗಂಟೆ

ಬೇಸರ ನೀಗಲವಕೆ ಪರಸ್ಪರರ ಸ್ನೇಹವಂತೆ.



ಗಾಳಿಯೇರಿ ಬಂತಲ್ಲಿಗೊಂದು ಅಜ್ಜನಗಡ್ಡ

ಆ ಅಗಾಧತೆಯ ಬುಡದಿ ಬಯಸಿ ಸ್ನೇಹ

ನೆಲೆಯೂರಲು ನಿಲಿಸಿತು ಹಾರಾಟ



ಬೀಜಮೊಳೆತು ಗಿಡ ಹುಟ್ಟಿ

ಅಭಿಮಾನವೇ ಹಸುರಾಗಿ, ಆರಾಧನೆಯೇ ಹೂವಾಗಿ....

ಹೀಗೆ ಕಾಲ ಭೂತವಾಗುತಿತ್ತು.



ಬೀಜ ಬೆಟ್ಟವ ಕತ್ತೆತ್ತಿಯೇ ನೋಡುತಿತ್ತು

ತನ್ನಾಸೆಗದು ಕಣ್ಣಾಗುವುದ ಕಾಯುತಿತ್ತು

ಬೆಟ್ಟಕೆ ಬಾಗಿ ಬುಡ ಕಾಣಲಾಗಲೇ ಇಲ್ಲ,

ಗಿಡಕೆ ಬೆಟ್ಟದೆತ್ತರ ತಲುಪಲಾಗಲೇ ಇಲ್ಲ





೬೮) ಮೂರು ಜಿಜ್ಞಾಸೆಗಳು

೧)

ನಿನಗೆನಲಿ ಮಾತಿಲ್ಲ ಎಂದ ಮೌನದೊಳಗೇ ಮಾತ ಹುಡುಕುವ ಕಣ್ಣು

ಮರುಭೂಮಿಯಲಿ ಮೃಗತೃಷ್ಣೆಯ ಬೆನ್ನಟ್ಟುವ ಒಂಟೆಯಂತೆ.

ಯುಗಗಳೇ ಕಳೆದರೂ ಮರುಭೂಮಿ, ಒಂಟೆ, ಮೃಗತೃಷ್ಣೆ

ಎಲ್ಲ ಹಾಗೆಯೇ ಉಳಕೊಂಡಿರುವುದು ಸೋಜಿಗವಲ್ಲವೆ?!

೨)

ಗಾಯ ಮಾಡಿದ ಚೂರಿಗೆ ಗಾಯ ಮಾಡಿದವರುಂಟೇ?

ಹುಶಾರಾಗಿ ವ್ಯವಹರಿಸಬಹುದು ಇಲ್ಲ, ದೂರವಿಟ್ಟುಬಿಡಬಹುದು.

ಆದರೆ ಗಾಯ ಮಾಡುವ ಅನುಬಂಧಗಳಿಗೆ.....??

ವ್ಯವಹಾರವಿದೆಯೇ ಅಲ್ಲಿ, ಅಥವಾ ದೂರವಿಡಬಹುದೇ?

೩)

ಪ್ರೇಮ- ದ್ವೇಷಗಳ ನಡುವಿನದು, ಮುಸ್ಸಂಜೆಯಂತೆ

ಹಗಲಿನ ಮುಂದುವರಿಕೆ ಅಥವಾ ರಾತ್ರಿಯ ಹುಟ್ಟು

ಮುಸ್ಸಂಜೆ ಕಾಲದಧೀನ, ಮುನ್ನಡೆದು ರಾತ್ರಿಯಾಗಲೇಬೇಕು

ಆದರೆ...

ನಮ್ಮಾಧೀನದ್ದ ಹಿಂದೆಳೆದು ಅನುಭೂತಿಯಾಗಿಸಬಹುದೇ?!



೬೮) ಹನಿಹನಿ ಅನಿಸಿಕೆ



೧)

ಕಾಯುತಿದ್ದ ಕಾದ ಭೂಮಿಯ ಮೇಲೆ

ಹಲಕಾಲದ ನಂತರ ಬಿದ್ದ ಕೆಲವೇ

ತುಂತುರು ಮಳೆಹನಿ

ಮಣ್ಣಿನೊಳ ಹೊಕ್ಕು ಕೂತಿದ್ದ

ವಾಸನೆಯ ಹೆಕ್ಕಿ ತಂದು

ಹಿತವಾದ ಪರಿಮಳವಾಗಿಸಿದವು

೨)

ಅವಮಾನವ ಯಾರಾದರೂ ನುಂಗಬಹುದು

ಅನಿವಾರ್ಯತೆ ಗಂಟಲೊಳಗಿಳಿಸುವುದು

ಖಾಲಿಬಯಲಲೊಮ್ಮೆ ಅದ ಹೊರಕಕ್ಕಬಹುದು

ಆದರೆ ಅರಗಿಸಿ ಅದನೂ ದಕ್ಕಿಸಿಕೊಳುವ

ತಾಕತ್ತಿರುವುದು ಪ್ರೀತಿಗೆ ಮಾತ್ರ.

೩)

ಕಣ್ಮುಂದೆ ಕಣ್ತುಂಬುವಂತೆ ನಿಂತ ನಾನು

ಕಾಣಬಾರದೆಂದು ಕಣ್ಮುಚ್ಚಬೇಡ

ಭ್ರಮೆಯ ಕವಚ ಸುರಕ್ಷವೆಂದು

ನಾನಿಲ್ಲದ ಸುಳ್ಳಿನೊಳಹೊಕ್ಕಬೇಡ

ಕಾಲಲೊದ್ದಾದರೂ ಒಮ್ಮೆ ನೋಡು

ನಾನಿರುವ ಆ ಸ್ಪರ್ಶ ನಿನಗರಿವಾದರೆ ಸಾಕು



೬೯) ನಗುವಿನಾಸೆ



ನಾನೊಂದು ಖಾಲಿನಗು,

ಸಹಜತೆಯ ಚಪ್ಪಡಿಕಲ್ಲಿನಡಿ ಮುಚ್ಚಿ

ಸೊಗ ಮಾತ್ರ ಹೊರಸೂಸೊ ಪೊಳ್ಳುನಗು



ಸುಖಕೆ ನಕ್ಕು, ನೋವಿಗಳಬಲ್ಲವರೇ,

ನಿಮಗೆ ನಾನಾಗೊ ಆಸೆ, ನನಗೆ ನೀವಾಗುವದ್ದು



ಸಹಜವಾಗಿ, ಸರಳವಾಗಿರುವುದೆನಗೂ ಇಷ್ಟವೇ

ಸುಳ್ಳುಸುಳ್ಳೆ ಸಿಂಗರಿಸಿಕೊಳಬೇಕು, ನಗುವಾಗಿ ಹುಟ್ಟಿರುವೆ



ನನ್ನಲೂ ಇವೆ ಹಲವು ಹಣ್ಣಾದ ಹುಣ್ಣು,

ಕಾಲ್ಚೆಂಡಾಗಿಸಿ ಬಿಸುಟ ಹಸಿಗಾಯಗಳು

ಬೆನ್ನಲಿವೆ, ಒಡಲಾಳದಲಿವೆ, ತೋರಲಾರೆ



ಸುಳ್ಳುಮರೆವ ಮುಲಾಮ ಹಚ್ಚಿ ಮುಚ್ಚಿರುವೆನಲ್ಲಾ..,

ಗಾಳಿಯಾಡದೆ, ಅವು ಒಣಗುತಿಲ್ಲ, ಮಾಯುತಿಲ್ಲ.



ನಗುವಾಗುತ, ಒಳಗೊಳಗೇ ಅತ್ತದ್ದು ಸಾಕಾಗಿದೆ

ಕಣ್ಣೀರಾಗಿ ಧುಮ್ಮಿಕ್ಕುವ ರಭಸವೀಗ ಬೇಕಿದೆ.



ಪುಣ್ಯಕೋಟಿಯ ಹಾಗೆ ಸೆರಗೊಡ್ಡಿ ಕೇಳುವೆ

"ವಿಧಿಯೇ, ಆಣೆ ಮಾಡುವೆ, ಮತ್ತೆ ಹಿಂತಿರುಗುವೆ

ಒಂದೆ ಒಂದು ಕ್ಷಣದ ಮಟ್ಟಿಗೆ ಅಳುವಾಗುವೆ



ಗಾಳಿ ಒಳಗೂ ಬೀಸಿ ಗಾಯಗಳು ಮಾಯಲಿ

ಹಳತು ಖಾಲಿಯಾಗಿ ಹೊಸನೋವಿಗೆ ತೆರವಾಗಲಿ



ನಗುವಿನೊಳಗೂ ಇರುವ ಅಳು ಜಗಕೊಮ್ಮೆ ಕಾಣಲಿ

ನಗೆಯ ವರ ಕೇಳ್ವವರ ಭ್ರಮೆ ಹರಿದು ಬಿಡಲಿ"



೭೦)ಮಾತು ಮಳೆಯಲಿ ಮೀಯೋಣ



ಅವಮಾನದ ನೆರಳು ತಂಪಲ್ಲ, ಒಪ್ಪಿದೆ.

ಅದರ ಪರಿಧಿಯಿಂದಾಚೆ ಯಾಕೆ ಬರಲೊಲ್ಲೆ?



ಝಾಡಿಸಿ ಒದ್ದೆದ್ದು ಬರಬಲ್ಲೆಯ, ಇಲ್ಲ ತಾನೇ?

ಪ್ರೀತಿಮರದಡಿಯ ಆ ನೆರಳಲಿ,

ಅನಿವಾರ್ಯತೆಯ ಚಾಪೆಗೊರಗುವುದು ರೂಢಿಯಾಗಿದೆ ತಾನೇ...



ಉರಿಸುವುದಕೇ ಕೆಲವು, ಬೇಯುವುದಕೇ ಕೆಲವು.

ಪಾತ್ರ ಹಂಚಿಕೆಯಾಗಿಬಿಟ್ಟಿದೆ, ನಾಟಕವೂ ಸುರುವಾಗಿದೆ,

ಬದಲಾಗುವುದು, ಹಿಂತೆಗೆಯುವುದು- ಈಗಾಗದು.



ಈಗೇನು, ಉರಿ ತಣಿಸಬೇಕೇನೇ, ನಾನಿಲ್ಲವೇ ಗೆಳತಿ?

ಬಾ, ಮಾತು ಮಳೆಯಲಿ ತೋಯ್ದು ಮೀಯೋಣ,

ಯಾವ ಉರಿ ದಹಿಸುವುದು ನೋಡಿಯೇ ಬಿಡೋಣ.



೭೧) ಶಹಬ್ಬಾಸ್!



ನೀರಿನಾಳಕೆ ಇಳಿದ ಮಿಂಚುಳ್ಳಿ,

ಶಹಬ್ಬಾಸ್!

ಮೀನು ಹಿಡಿದೇ ಮೇಲೆ ಬಂತು

ಉಸಿರುಗಟ್ಟಿದರೂ ಗುರಿಯ ದಾರಿ ಬಿಡಲಿಲ್ಲ

ಗುರಿ ಸಿಕ್ಕಹೊರತು ಉಸಿರಾಡಲಿಲ್ಲ

ಮೇಲೇ ಹುಡುಕಿದರೆ ಕಾಣಿಸದ ನಿಧಿಗಳು

ಹಕ್ಕಿಗುಸಿರಾಗದ ಗಾಳಿಹೊತ್ತ ನೀರಲ್ಲಿಹ ಮೀನಂತೆ.

ಬೇಕಾದಷ್ಟು ಸತ್ವ ತುಂಬಿಕೊಂಡು, ಗುರಿಯ ದಿಟ್ಟಿಸಿಕೊಂಡೆ

ಉಸಿರುಕಟ್ಟಿ ತಳಕೆ ನುಗ್ಗಬೇಕು

ತಳಕಿಳಿವ ತಾಳ್ಮೆಯಿದ್ದರಷ್ಟೇ ಸಿಕ್ಕುವುದು

ಅದು ಪ್ರೀತಿಯಾದರು ಅಷ್ಟೆ, ಇನ್ನೇನಾದರು ಅಷ್ಟೆ.



೭೨)

ನಿನಗಾಗಿಯೇ

ತಂಗಾಳಿ ಮೊದಲಬಾರಿಗಿಂದು ಚುಚ್ಚುತ್ತಿದೆ

ಒಡಲೆಲ್ಲ ನಿನ್ನ ನೋವ ತುಂಬಿ ತಂದಿರುವುದಕೆ,

ಮಂದಾನಿಲವೂ ಉಸಿರುಗಟ್ಟಿಸುವಂತಿದೆ.

ದೀರ್ಘವಾಗಿ ಈಗ ಒಳಗೆಳೆದುಕೊಂಡಿರುವೆ.

ನನ್ನೆದೆಗೂಡಲ್ಲಿ ವೇದನೆಯ ಬೇರ್ಪಡಿಸಿ,

ನನ ಹೃದಯಕಿಳಿಸಿರುವೆ, ಅಲ್ಲಿದ್ದ

ಹಾರೈಕೆಯುಡುಗೊರೆಯ ಗಾಳಿರಥದಲ್ಲಿರಿಸಿ,

ಒಲವ ಕಾವಲಿರಿಸಿ, ವಿಶ್ವಾಸವ ದಾರಿದೀಪವಾಗಿಸಿ,

ನಿನ್ನತ್ತ ಕಳಿಸಿರುವೆ.

ನನ್ನದೆಲ್ಲವ ಮಾಡುವಂತೆ,

ಇದ ಅತ್ತ ಸರಿಸಬೇಡ.

ನೂರಕ್ಕೆ ನೂರೂ ನಿನಗಾಗಿಯೇ.

ಪ್ರತಿಯಾಗಿ ನನಗೇನೂ ಬೇಡ.





೭೩) ಪ್ರೇಮ ನಿಂತಿದೆ



ಪ್ರೇಮ ಹಾಗೆ ಹೀಗೆಂದು ವ್ಯಾಖ್ಯಾನಿಸುವವರಲೊಂದು ಮಾತು

ಪ್ರೇಮಕೆ ಪದಗಳಾಧಾರ ಬೇಕೆ... ? ಬೇಡ.



ನಾನದನು ಬರೆದು, ಆಡಿ, ಕರೆಯುತ್ತಲೇ ಇದ್ದೆ,

ಅಣಕಿಸುತ ಅದು ಮುಂದೋಡುತಿತ್ತು,

ನಾನು ಖಾಲಿ ಖಾಲಿ.



ಈಗ ನಾನು ಮೌನಿ,

ನಿಶ್ಯಬ್ಢವ ನೋಡೆ ತಿರುಗಿದ ಪ್ರೇಮ,

ಅಲ್ಲೇ ನಿಂತಿದೆ, ಓಡುತಿಲ್ಲ.



ಪರಸ್ಪರ ತಲುಪುವೆವೋ ಇಲ್ಲವೋ....

ಮುಖಾಮುಖಿಯಂತೂ ಆದೆವು.

ಮತ್ತು ಅದರ ಬೆನ್ನು ಕಾಣುತಿಲ್ಲ,

ಅಷ್ಟರ ಮಟ್ಟಿಗಿಂದು ನಾನು ನಿರಾಳ



೭೪) ತುಂತುರು

೧)

ನಾನು ಕೇಳಿದ್ದಕ್ಕೆಲ್ಲ ಉತ್ತರಿಸಿದ್ದೀರ, ಧನ್ಯವಾದಗಳು

ಆದರೆ ನನಗವು ಉತ್ತರಗಳಾಗದೆ ಪ್ರಶ್ನೆಗಳೇ ಆದದ್ದು ದುರಾದೃಷ್ಟ.

೨)

ನಾನೇನೋ ಮೈಮರೆತಿದ್ದೆ,

ನಾನಂದುಕೊಂಡವರೇ ನೀವಾಗಿದ್ದರೆ ಎಚ್ಚರಿಸಬಹುದಿತ್ತಲ್ಲ?

೩)

ಜಗತ್ತು ಭ್ರಮೆಯಲ್ಲ ಎಂದೇ ಸಾಧಿಸುತ್ತಿದ್ದೆ,

ಇಂದು ಹೌದೆನಿಸುತ್ತಿದೆ, ನಿನ್ನೆಮೊನ್ನೆಯಿಂದೀಚೆಗೆ ನಾನೂ ಮಾಯುತ್ತಿದ್ದೇನೆ.

೪)

ಎಲ್ಲ ಮುಗಿಯಿತು ಅನ್ನುವಲ್ಲಿನ್ನೇನು ನಿರೀಕ್ಷಿಸುವುದು?

ಮುಗಿಯುವ ಮುನ್ನವೇ ಹಿಂತಿರುಗಬೇಕಾದ ವಿಧಿ ನನ್ನದು

೫)

ಹುಟ್ಟು ಇನ್ನೊಂದು ಹುಟ್ಟಿಗಾಗಿ ಸಾವಿನಲ್ಲಿ ಕೊನೆಯಾಗಲೇಬೇಕು

ನಡುವೆ ಕ್ಷಣಕ್ಷಣವೂ ಜೀವ ಹೊಸ ಹುಟ್ಟು ಪಡೆದು ಜೀವನದ ಮುನ್ನಡೆ

ಎಂದೋ ಬರುವ ಸಾವ ಪ್ರತಿ ಹೆಜ್ಜೆಯಲ್ಲೂ ನಿರೀಕ್ಷಿಸಿದರೆ ವಿಶ್ವಾಸದ ಹಿನ್ನಡೆ.



೭೫) ನಾವ್ಯಾರಾಗೋಣ?



ಹಗಲ ನೆಚ್ಚುವವರು ರಾತ್ರಿಯನ್ನಾಗಲಿ,

ನೆರಳನ್ನಾಗಲಿ ಅಲ್ಲಗಳೆಯುವುದಿಲ್ಲ

ಹಗಲನ್ನು ನಂಬಿಕೆಯಲ್ಲೂ, ರಾತ್ರಿಯನ್ನು ನಿದ್ದೆಯಲ್ಲೂ

ಅನುಭವಿಸಿ ಕಳೆಯುತ್ತಾರೆ.

ನೆರಳು ಜೊತೆಗಿದ್ದಾಗ ಪ್ರಾಣಮಿತ್ರನೆನ್ನುತ್ತಾರೆ,

ಇಲ್ಲದಿದ್ದಾಗ ಮರೆತಂತಿರುತ್ತಾರೆ.

ರಾತ್ರಿಯ ನೆಚ್ಚುವವರು,

ಹಗಲ ಕತ್ತಲ ಗುಂಗಲ್ಲಿ ಕಳೆಯುತ್ತಾರೆ

ಮತ್ತು ರಾತ್ರಿ ನಿದ್ದೆ ಹೊರಗೇ ಬಿಟ್ಟು

ಕಾಡುವ ಕತ್ತಲ ಗವಿ ಹೊಕ್ಕಿಬಿಡುತಾರೆ.

ನೆರಳೇ ನಿತ್ಯವೆನುತ ಹಿಂಬಾಲಿಸುತ್ತಾರೆ

ಈಗ ನೀವೇ ಹೇಳಿ- ನಾವ್ಯಾರಾಗೋಣ?



೭೬) ಪ್ರೇಮಬೀಜ



ನಮ್ಮ ಸಹವಾಸಕೆ,

ನನ್ನೊಳಗೆ ಅನುಭೂತಿಯೊಂದರ ಜನನ

ಇನ್ನೂ ಹೆಸರಿಟ್ಟಿರಲಿಲ್ಲ, ಅದಿನ್ನೂ ಹಸುಗೂಸು.

ನಿನಗ್ಯಾಕೋ ಭೂತಕದ ತೆರಳಿಸುವ ಬಯಕೆ.

ಪದಗಳಲುಗಲಿ ತುಂಡು ತುಂಡಾಗಿಸತೊಡಗಿದ್ದೆ

ಮೊದಲ ಪೆಟ್ಟು ಬಿದ್ದಾಗ, ಏನಾಶ್ಚರ್ಯ!!!

ಅದರೊಳಗೆ ಪ್ರವಹಿಸುತಿದ್ದುದು ನನ್ನ ಕಣ್ಣೀರು

ಬೊಗಸೆಯಲಿ ಮೊಗೆಮೊಗೆದು ನಾನದನು ಕುಡಿದೆ

ನೀ ಕಡಿಯುತ್ತಲಿದ್ದೆ, ನಾ ಕುಡಿಯುತ್ತಲಿದ್ದೆ.

ಕೊನೆಗೊಮ್ಮೆ ನೀ ತಲೆ ತರಿದೆ ನೋಡು,

ಬುಳುಬುಳು ಹರಿದ ಕಣ್ಣೀರಧಾರೆ,

ಬಿತ್ತೊಂದು ಹನಿ ಕೈಜಾರಿ ಎದೆನೆಲದ ಮೇಲೆ

ಅರರೆ......... ನೋಡಿದೆಯಾ......?!.

ಹನಿಯೊಡಲಲರಳಿದೆ ಮತ್ತದೇ ಅನುಭೂತಿ!!!

ಈಗ ಹೆಸರಿಟ್ಟಿರುವೆ,

ಅವ ರಕ್ತಬೀಜನಾದರೆ ಇವ ಪ್ರೇಮಬೀಜ.

ಈಗ ನಾನೇನೂ ಕುಡಿಯುತಿಲ್ಲ,

ಕಡಿದಂತೆ ಕುಡಿಯೊಡೆಯುವುದು ನಿಂತಿಲ್ಲ.

ಅದ ತೆರಳಿಸಲು ನೀ ಕಡಿವುದಕೆ ನನದೊಂದು ಜೈ

ಪ್ರೇಮಬೀಜದಲೇ ತುಂಬುತಿದೆ ಈಗ ನನ್ನ ಮನಮೈ.



೭೭) ಹೂವು ಹಾವಾಗುವ ಮುನ್ನ



ಪುಷ್ಪಗುಚ್ಛದೊಳಗೇನೋ ಗಲಿಬಿಲಿ, ಅಲ್ಲಿ

ಹೂವಿನ ರೂಪದಲೊಂದು ಹಾವಿಹುದಂತೆ

ಹೇಗೆ ಬೇರ್ಪಡಿಸುವುದು?!!!

ತನ್ನನ್ನು ಹೂವೆಂದೇ ಭಾವಿಸಿದ್ದ ಪ್ರತಿಯೊಂದರ ಮುಖದಿ

ಸಣ್ಣ ಸಂಶಯ- "ನಾ ಹಾಗೆ ಕಂಡಿಲ್ಲ ತಾನೇ?"

ಹಾವಲ್ಲದ ಹೂವೊಂದು ದ್ವಂದ್ವದಿ ಸಿಲುಕಿ

ತಾನು ಹಾವೇ ಅಂದುಕೊಳುವ ಮುನ್ನ

ಹಾವ ನಿಜವಾಗಿ ಕಂಡವರೇ, ಅದ ಕಿತ್ತೆಸೆಯಿರಿ.



೭೮) ಜಿಟಿಜಿಟಿ ಮಳೆಹನಿ

೧)

ಕಣ್ಣೀರಾಗದಿರು ಮನಸೇ, ನಿನ್ನದೇನೂ ದೊಡ್ಡದಲ್ಲ,

ಇವರು ಕೊಲ್ಲದವರನ್ನು ಕೊಂದ ಆರೋಪ ನಿರೂಪಿಸಿಯೇ ಶಿಕ್ಷಿಸುವವರು..... .

೨)

ಈಗಷ್ಟೇ ಎಡವುತ್ತಾ ನಡೆಯತೊಡಗಿದ್ದೆ,

ಹಿಂದೆ ತಮ್ಮ ನಾಯಿಯ ಅಟ್ಟಿಬಿಟ್ಟರು.

೩)

ಮೊದಲ ಮೆಟ್ಟಿಲ ಹತ್ತಿ ಮೇಲ್ನೋಡುತಿದ್ದೆ, ನಡುವಿನವೆಲ್ಲ ಮಾಯವಾಗಿ ಬಿಟ್ಟವು

ಕೊನೆಯದು ಉಳಿದಿದ್ದರೂ, ನಾ ಕೆಳಗಿಳಿಯಲೇ ಬೇಕಾಯಿತು.

೪)

ಆ ಬಿಂಬ ಕಣ್ಣ ಹೇಗೆ ತುಂಬಿದೆಯೆಂದರೆ,

ನಿದ್ದೆಗಾಗಲಿ, ಕನಸಿಗಾಗಲಿ ಅಲ್ಲಿ ಜಾಗವುಳಿದಿಲ್ಲ

೫)

ಚೂರಿಯೆಂದರು, ಮಾರಿಯೆಂದರು.

ಹೆಸರ ಕೂಗಲಾಗದಿದ್ದರೆ ಸುಮ್ಮನಿದ್ದರೂ ಆಗುತ್ತಿತ್ತು.

೬)

ನಿನ್ನಲ್ಲಿ ನಾ ಕಾಣಲೆತ್ನಿಸಿದ್ದೇ ನನಗೆ ನಿನ್ನಲ್ಲಿ ಕಂಡಿತು.

ನೀನು ಮಾತ್ರ ನನ್ನಲ್ಲಿದ್ದದ್ದ ಬಿಟ್ಟು ಬೇರೆಲ್ಲವನ್ನೂ ನನ್ನೊಳಗೆ ಕಂಡೆ.

೭)

ನಾ ನಿನ್ನ ಸಂಭ್ರಮಿಸುತ್ತಿರುವೆನಾದರೆ ಅದು ನನ್ನ ಪ್ರಾಪ್ತಿ

ನೀ ನನ್ನ ಸಹಿಸಲಾರೆಯಾದರೆ ಅದು ನಿನ್ನದು.

















































































No comments:

Post a Comment