Thursday, November 29, 2012

೨೨)


೧) ಹರಡಿಬಿಡೆ



ಹಸಿರನುಟ್ಟು, ಹಸಿರ ಹಾಸಿ, ಹಸಿರ ಹೊದೆದ ಸುಂದರಿ,

ಒಪ್ಪಿದೆ ಕಣೆ, ನೀನು ವಿಧಿ ಮೆಚ್ಚಿ ಹರಸಿದ ಕಿನ್ನರಿ

ತೃಪ್ತಿಯಿಂದ ನೀ ಮುಚ್ಚಿದ ಕಂಗಳೆರಡ ತೆರೆದು ಬಿಡೆ,

ಹೆಚ್ಚಿದ್ದರೆ, ಹಸಿರ ಸ್ವಲ್ಪ ಅತ್ತ ಇತ್ತ ಹರಡಿಬಿಡೆ

ಒಣಗಿ ಕರಕಲಾದವರು ನಿನ್ನ ಸುತ್ತ ತುಂಬಿಹರು

ಹಸಿರ ಉಸಿರಿಗಾಗಿ ಬಹಳ ಆಸೆಯಿಂದ ಕಾದಿಹರು



೨) ಬೆಳಗು ಸುಂದರವೇ



ಕೋಳಿ ಕೂಗದಿದ್ದರೂ ಬೆಳಗಾಗುವುದು ಗೊತ್ತಿತ್ತು

ಆದರೆ ನಿನ್ನೆಯವರೆಗೆ ಕೋಳಿಕೂಗಿನಿಂದ

ಬೆಳಗು ಇನ್ನೂ ಸುಂದರವೆನಿಸುತಿತ್ತು

ನಿನ್ನೆ ಕೋಳಿ ಮಂಕಾಗಿಬಿಟ್ಟಿತ್ತು, ಕೂಗಲಿಲ್ಲ

ಬೆಳಗು ಸುಂದರವಲ್ಲವೆಂದೇನೂ ಅನಿಸಲಿಲ್ಲ



೨೩) ಕಳಕೊಳ್ಳುವ ಕಳವಳ



ಒಮ್ಮೊಮ್ಮೆ ಅನಿಸುವುದು

ಕಳೆದುಕೊಳ್ಳುವುದೇ ಜೀವನವೇ?

ಹುಟ್ಟಿದೆ, ಸ್ವಾತಂತ್ರ್ಯ ಕಳೆದುಕೊಂಡೆ,

ಬೆಳೆಯುತ್ತಾ ಬಾಲ್ಯ, ಕಲಿಯುತ್ತಾ ಮುಗ್ಧತೆ

ಬೆರೆಯುತ್ತಾ ನಂಬಿಕೆ, ತೆರೆದುಕೊಳ್ಳುತ್ತಾ ಸ್ವಂತಿಕೆ

ಹೀಗೆ..............

ಎಲ್ಲೆಲ್ಲೊ ಕೂಡುವುದಿಲ್ಲದೇ,ಕಳೆಯುವುದನ್ನೇ ಕಂಡೆ.

ವಿಧಿಯಾಟಗಳಾಡುತ್ತಾ, ಆಟದೊಲವ ಕಳೆದುಕೊಂಡೆ

ಬಂಧಗಳಲಿ ಮುಳುಗುತ್ತಾ ಈಜುವಾಸೆ ಕಳೆದುಕೊಂಡೆ

ಕಳೆದುಕೊಳ್ಳುತ್ತಾ ಸಾಗುತ್ತಿದ್ದಾಗಲೊಮ್ಮೆನೀನು ಸಿಕ್ಕಿದೆ.

ಕೊನೆಗೂ ಪಡೆದುಕೊಂಡೆ ಅನ್ನಿಸಿತು, ಆದರೆ

ನಿನ್ನ ಬಗೆಯ ಯೋಚಿಸುತ್ತಾ ನನ್ನ ಚಿಂತನೆಗಳನ್ನು

ನಿನ್ನ ಅರ್ಥೈಸುವ ಯತ್ನಗಳಲಿ ನನ್ನ ಕನಸುಗಳನ್ನು

ನಿನ್ನೊಲವ ಗಳಿಸುವ ದಾರಿಯಲಿ ನನ್ನ ಬಾಳ ಗುರಿಯನ್ನು

ಕೊನೆಗೆ ನಿನ್ನ ಹೊಂದುವ ಹವಣಿಕೆಯಲಿ ನಿನ್ನನೇ

ಹೀಗೆ......ಕಳೆದುಕೊಳ್ಳುತ್ತಲೇ ಸಾಗಿದ್ದೆ.

ನೀನಿಲ್ಲದೇ ನಾನಿಲ್ಲವೆಂದರಿವಾಗಿ

ಈಗ ನನ್ನನೂ ಕಳಕೊಂಡಿರುವೆ.

ಇಂದು ಕಳೆದುಕೊಳ್ಳಲೇನೂ ಉಳಿದಿಲ್ಲ

ನಾನೂ ಸಹ.



೨೩) ಶ್ರೀ ರಕ್ಷೆ



ನಾ ನೋಯಬಾರದೆಂಬ ನಿನ್ನ ಹಾರೈಕೆಯೇ

ಶ್ರೀರಕ್ಷೆಯಲ್ಲವೇನೇ?

ನನಗೆಸೆದ ಬಾಣಗಳು ನಿನಗೆದುರಾಗುವುದು

ನನ್ನನಳಿಸ ಹೊರಟವರ ನೀ ಶಪಿಸುವುದು

"ಹೆಚ್ಚು ತೆರೆದುಕೊಳ್ಳದಿರು ಮಂದಾನಿಲಮಾತ್ರವಲ್ಲ

ಬಿರುಗಾಳಿಯೂ ಇಲ್ಲಿದೆ" ಎಂದೆಚ್ಚರಿಸುವುದು

ಮೊಳೆಯದ ನನ್ನೇಳಿಗೆಗಾಗಿ ತಳಮಳಿಸುವುದು

ನಾ ಜಾರುವಾಗ ಅಲ್ಲಿಂದಲೇ ಹಿಡಿದೆತ್ತುವುದು

ಹೀಗೇ..

ನಾನು ನೀನೇ ಎಂಬಂತೆ ನನ್ನ ಒಳಗೊಳ್ಳುವುದು

ಇವೆಲ್ಲಕ್ಕಿಂತ ಬೇರೆ ಆಸ್ತಿ ಬೇಕೇನೇ?

ನಿನ್ನನ್ನ ಸಖಿ ಎಂದು ಸೀಮಿತಗೊಳಿಸಲಾರೆ

ಬಹುಶಃ ನಾನಿದುವರೆಗೆ

ಕೆಟ್ಟವಳಾಗದಿದ್ದುದ್ದಕ್ಕೆ ಬಹುಮಾನ ನೀನು.

ನೀನೆಂದಿದ್ದರೂ ನನ್ನ ಒಲವು,

ನಾ ಗೆದ್ದಾಗ ನನ್ನ ಗೆಲುವು,

ನಾ ಬಿದ್ದಾಗ ಎದ್ದೇಳಿಸುವ ಬಲವು

ಹಿನ್ನಡೆ ಕಾಡಲು ಮುನ್ನುಗ್ಗಿಸುವ ಛಲವು

ಸದಾ ಅಲ್ಲೇ ಇದ್ದು ಆಧರಿಸುವ ನೆಲವು

ಇಷ್ಟೆಲ್ಲಾ ಪಡೆದು ನಾ ಏನು ನೀಡಲಿ?

ನಾನು ಸುಧಾಮ, ಒಳಗಿರುವುದು

ಒಂದು ಹಿಡಿ ಪ್ರೀತಿಯಷ್ಟೇ.

ಬೇಕಾದಷ್ಟು ಮೊಗೆದುಕೋ.

ಖಾಲಿಯಾದೀತೆಂದು ಹೆದರಬೇಡ,

ಅದಕಿದೆ ಅಕ್ಷಯದಗುಣ, ಅಮರತ್ವ,

ತೆಗೆದಷ್ಟೂ ಹಾಗೇ ಉಳಿಯುವ ಜೀವಸತ್ವ.



೨೪) ಮನದ್ದು ಪುಲ್ಲಿಂಗವೆ, ಸ್ತ್ರೀಲಿಂಗವೆ?

"ನನ್ನ ರಾತ್ರಿಗಳು ಕರಾಳ" ನೊಂದು ನುಡಿದರೊಬ್ಬಾತ.

ಅದಕೆ ನಿತ್ಯ ಶುಭರಾತ್ರಿ ಎಂದು ಹಾರೈಸಿದಳೊಬ್ಬಾಕೆ

ಅಲ್ಲಿದ್ದದು ಕರಾಳತೆಯ ನಿರಾಳವಾಗಿಸುವ ಆಶಯವಷ್ಟೆ.

ಹಚ್ಚಿದ್ದು ನಡುವಿನ ಸಮಾಜ ಅದಕೆ ಸುಳ್ಳುರೆಕ್ಕೆ.

ಸಮಾಜಕಿದು ಅರ್ಥವಾಗದ ಮಾತು

ರಾತ್ರಿ ಹತ್ತಕ್ಕೆ ಆಕೆಗೇಕೆ ಆತನ ಯೋಚನೆ ಬಂತು?!

ಗಂಡು ಗಂಡಿಗಾಗಿ ಹೆಣ್ಣು ಹೆಣ್ಣಿಗಾಗಿ ಮಿಡಿದರೆ,

ಅದು ಹೃದಯವಂತಿಕೆ.

ಗಂಡು ಹೆಣ್ಣಿಗಾಗಿ, ಹೆಣ್ಣು ಗಂಡಿಗಾಗಿ ತುಡಿದರೆ

ಅದು ಚರಿತ್ರಹೀನತೆಯೇ?

ಮನದ್ದು ಪುಲ್ಲಿಂಗವೇ, ಸ್ತ್ರೀಲಿಂಗವೇ?

ಸಮಾಜಕ್ಕಿದು ಗೊತ್ತಿದೆಯೇ?

ಈ ಸಲ್ಲದುಗಳ ಒತ್ತಡಕೆ

ಮಿದುಹೃದಯ ಕಳೆದುಕೊಂಡಿದೆ ಆಕಾ ರ

ಅಸ್ತವ್ಯಸ್ತ ನೆಲೆಯಿಂದ ಹುಟ್ಟಿದರೆ

ನಡೆನುಡಿನಗುಗಳು ಹೇಗಾದಾವು ನೇರ?

"ಹಾರೈಕೆ ಇದ್ದರೆ ಮನದಲ್ಲಿರಲಿ"

ಎಂದವರೇ, ನಿಮಗಿದು ಗೊತ್ತಿರಲಿ-

ಸುಪ್ತವಾಗಿದ್ದರೆ ಅದು ಭಾವನೆ, ಮಿಂಚುಹುಳದಂತೆ.

ಬೆಳಕಿದ್ದರೂ, ಕ್ಷಣಿಕ ಹೊಳಪು

ಅದೇ ವ್ಯಕ್ತವಾದಾಗ ಸ್ಪಂದನೆ, ಹುಣ್ಣಿಮೆ ಬೆಳ್ದಿಂಗಳಂತೆ.

ಕತ್ತಲನೂ ಬಿಳಿಯಾಗಿಸಬಲ್ಲುದು.

ಕಣ್ಮನಗಳ ನಡುವೆ ಪಾರದರ್ಶಕತೆಯಿರಲಿ

ಪ್ರಾಮಾಣಿಕತೆಯನೂ ಗುರ್ತಿಸುವ ದೃಷ್ಟಿ ಇರಲಿ

ಇದ್ದುದ ಇಲ್ಲವಾಗಿಸಿ, ಇಲ್ಲದ್ದ ಹುಟ್ಟಿಸಿ ನೋಡುವ

ಅತಿ ಮಡಿವಂತಿಕೆ ಇಂದೇ ಸಾಯಲಿ.



೨೫) ಮನಸ ನಡೆ



ಮನಸು ಅರ್ಥಮಾಡಿಕೊಳ್ಳಬೇಕಂತೆ

ಮಂಗನ ನಡೆ ಅಂದಾಜು ಮಾಡಿದವರುಂಟೇ?

ಈಗ ಬೋಳು ಬಯಲಂತಿತ್ತು,

ಬಿತ್ತಲು ಹಸಿರಬೀಜ ಹುಡುಕುತ್ತಿದ್ದೆ.

ಅಷ್ಟರಲ್ಲೇ ಕಡುಹಸುರುಟ್ಟು ಶೋಭಿಸತೊಡಗಿತು

ಮುಡಿಗೇರಿಸಲು ಕೆಂಗುಲಾಬಿಗಾಗಿ ಹುಡುಕುತ್ತಿದ್ದೆ,

ತಟ್ಟನೇ ಕೆಂಗುಲಾಬಿಯಾಗಿ ಅರಳಿಬಿಟ್ಟಿತ್ತು

ಕೆಂಬಣ್ಣ ಮನಮೋಹಿಸುತ್ತಿತ್ತು,

ಅಷ್ಟರಲ್ಲೇ ಬೆಂಕಿಯಾಗಿ ಉರಿಯತೊಡಗಿತು

ಆರಿಸಲು ನೀರಿಗಾಗಿ ಹುಡುಕುತ್ತಿದ್ದೆ,

ತಾನೇ ನೀರಾಗಿ ಕರಗತೊಡಗಿತ್ತು.

ನೀರತುಂಬಲೊಂದು ಪಾತ್ರೆ ಹುಡುಕುತ್ತಿದ್ದೆ,

ನನ್ನ ಕಣ್ಣೊಳಗೇ ಹರಿದು ಬಂದಿತ್ತು.

ಮಂಜಾದ ಕಂಗಳಿಗೆ ಎಲ್ಲವೂ ಅಸ್ಪಷ್ಟ

ಮನವನರಿಯುವುದು ಬಲು ಕಷ್ಟ

ಅದು ನನ್ನದಾದರೂ ಅಷ್ಟೆ,

ನಿಮ್ಮದಾದರೂ ಅಷ್ಟೆ.



೨೬) ಆಲಯವಾಗಲಾರೆ



ನೀನಂದೆ, "ಆಲಯವಾಗು ,

ಚೌಕಟ್ಟುಗಳ ಗೋಡೆಗಳುಳ್ಳದ್ದು,

ಸೂರು ಆಧರಿಸುವ ಕಂಬಗಳು,

ಆ ಕಂಬಗಳ ನದುವೆ ಅಂತರವುಳ್ಳದ್ದು,

ಪ್ರವೇಶವಿಲ್ಲದ ಗರ್ಭಗುಡಿಯುಳ್ಳದ್ದು,

ಒಳಗೆ ಮುಟ್ಟಲಾಗದ ದೇವನಿರುವದ್ದು,

ಆಗ ನಿನ್ನೊಳಗೆ ಪೂಜೆ ನಡೆಯುವುದು."

ನಿನ್ನ ಸಲಹೆಗೊಂದು ನಮನವಿದೆ

ಆದರೆ,

ಹುಟ್ಟಿನಿಂದಲೇ ನಾನೊಂದು ಬಯಲು ಕಣೇ.

ಸೀಮೆಗಳು ಬೇಕಿಲ್ಲ, ಗೋಡೆಗಳಿಲ್ಲ,

ಸೂರೇ ಇಲ್ಲ, ಕಂಬಗಳೂ ಬೇಕಿಲ್ಲ

ಇಲ್ಲಿ ಪ್ರವೇಶವಿಲ್ಲದ ತಾಣವಿಲ್ಲ

ಮುಟ್ಟಬಾರದ ದೈವತ್ವವೂ ಇಲ್ಲ.

ಯಾರಾದರೂ ಬರಲಿ,

ಹೂ ಬೆಳೆಯಲಿ, ಫಲ ಪಡೆಯಲಿ,

ಬಾವಿ ತೋಡಲಿ, ದಾರಿ ಹೂಡಲಿ,

ಯೋಗ್ಯವೆನಿಸಿದರೆ ಮನೆ ಕಟ್ಟಲಿ

ಊರು ಮಾಡಲಿ, ನೆಲೆ ನಿಲ್ಲಲಿ.

ಬೇಡವೆನಿಸಿದರೆ ದಾಟಿಹೋಗಲಿ

ದಾಟಿಹೋದವರು ಎದೆಯ ಮೆಟ್ಟಿ,

ಅಳಿಯದ ಗಾಯಮಾಡುವರು ಎಂದೆಯ?

ಅದು ಇದ್ದದ್ದೇ, ಮೆಟ್ಟದೆ ಒಳಬರುವುದು ಹೇಗೆ?

ಮುಂದೆ ಬರುವರಲಿ ಒಬ್ಬರಿದ್ದಾರು

ಗಾಯವನೂ ವಾಸಿಮಾಡುವವರು.

ಕ್ಷಮಿಸು, ಆಲಯವಾಗಲಾರೆ

ಯಾಕೆಂದರೆ.............

ನನ್ನೊಳಗೆ ಪೂಜೆ ನಡೆಯಬೇಕಿಲ್ಲ

ಬದುಕು ನಡೆದರೆ ಸಾಕು,

ದೇಗುಲದ ಶಿಸ್ತಿನ ಮೌನಬೇಕಿಲ್ಲ,

ಜೀವಂತಿಕೆಯ ಸದ್ದಿರಬೇಕು.

ನಾ ಪವಾಡದ ನೆಲೆಯಾಗಬೇಕಿಲ್ಲ,

ನಿಜಪ್ರೀತಿಯ ಸೆಲೆಯಾಗಬೇಕು.



೨೭) ನಮೋನಮಃ

ಚಂದ್ರ ಕಣ್ಮರೆಯಾದ ರಾತ್ರಿ, ನಿದ್ದೆ ಮುರಿದಿತ್ತು.

ಕತ್ತಲು ಹೊರಕರೆದಿತ್ತು, ಹೊರನಡೆದೆ,

ನಿರ್ಜನಬೀದಿಗಳು, ನಿಶ್ಯಬ್ಧ ಮನೆಗಳು.

ಕತ್ತೆತ್ತಿದರೆ, ಆಹಾ!

ಕಪ್ಪು ಆಗಸದ ತುಂಬ ಚುಕ್ಕೆತಾರೆಗಳು.

ಇರುಳು ಕಾಡಲಿಲ್ಲ,

ಕಪ್ಪುಪರದೆಯಮೇಲೆ ಹೊಳಪು ಹೆಚ್ಚೆನಿಸಿತ್ತು

ನಾಯಿ ಊಳಿಡುತಿತ್ತು, ಗೂಬೆಯೂ ಕೂಗುತಿತ್ತು

ಭಯವಾಗಲೇ ಇಲ್ಲ,

ಅದರ ಹಿಂದಿನಮೌನ ಪ್ರಶಾಂತವೆನಿಸುತಿತ್ತು

ಹೊರಗಿನ ಪ್ರಕೃತಿಗೆ ನಮೋನಮಃ

ಕಪ್ಪುಹಿನ್ನೆಲೆಯಲ್ಲೂ ನಕ್ಷತ್ರವಿರಿಸಿದಕ್ಕಾಗಿ

ಬೆಚ್ಚಿಸುವ ಸದ್ದ ಜೊತೆ ಮೌನವನೂ ಇರಿಸಿದಕ್ಕಾಗಿ

ಒಳಗಿನ ಚೈತನ್ಯಕೂ ನಮೋನಮಃ

ಕತ್ತಲಲಿ ಮಿನುಗಿನ, ಶಬ್ಧದಲಿ ಶಾಂತಿಯ ಪಾತ್ರಗಳ

ನೇಪಥ್ಯದಿಂದ ಅರಿವಿನ ರಂಗಕೆ ತಂದುದಕಾಗಿ.



೨೮) ಗೋಕುಲಾಷ್ಟಮಿಯಂದು



ಕೃಷ್ಣಾ, ಆಗ ನಾನಿನ್ನೂ ಮಗು.

ಅಪ್ಪ ಹೇಳುತ್ತಿದ್ದರು,

ನೀನು ಭಕ್ತವತ್ಸಲನಂತೆ, ಅನಾಥರಕ್ಷಕನಂತೆ.

ಕತ್ತಲಿಗೆ ಹೆದರಿದಾಗ, ನೋವಿನಿಂದ ಅತ್ತಾಗ,

ಬೇಕಾದ್ದು ಸಿಕ್ಕದಾಗ, ಹೊಂದಿದ್ದು ಕಳೆದಾಗ

ಹೀಗೇ......ಕಾಡುವ ಗಳಿಗೆಗಳಲ್ಲೆಲ್ಲ

ನಿನ್ನ ಮೊರೆಹೋಗಲು ಕಲಿಸಿದ್ದರು

ಆಗೆಲ್ಲ ನಾನು ನಿನ್ನ ಕರೆದೆನೋ, ನೀನು ಒದಗಿದ್ದೆಯೋ

ನೆನಪಿಲ್ಲ.

ಈಗ ನಾನು ಮಗುವಲ್ಲ.

ನೀನೆನಗೆ ಎಂದೂ ಪವಾಡಪುರುಷನಾಗಿ,

ದೇವರಾಗಿ, ರಕ್ಷಕನಾಗಿ ದೊರೆಯಾಗಿ

ಕೊನೆಗೆ ಹಿರಿಯನಾಗಿಯೂ ಕಾಣುತ್ತಿಲ್ಲ.

ನೀನೆಂದಿದ್ದರೂ,

ನಿನ್ನರಿವಿನ ಸೀಮೆಯೊಳಗಿಹರೆಲ್ಲರ

ಮನೆಮನ ಲೂಟಿ ಮಾಡುತ್ತಾ,

ಅವರ ಬಯ್ಗುಳಕ್ಕೂ, ಪ್ರೀತಿಗೂ

ಅತ್ತಂತಾಡಿದರೂ, ಆನಂದವನೆ ಹಂಚುತ್ತಾ,

ಮಕರಂದಾದಿಗಳೊಡನೆ ಲೀಲೆಯೆಲ್ಲ ಆಡಿ,

ಕೊನೆಗೆ ಅವರನ್ನೇ ದೂರುತ್ತಾ,

ಅಮ್ಮನ ಗಮನ ಸೆಳೆಯಲು ಕಪಟವಾಡುವ

ನನ್ನ ಕಂದನ ಪ್ರತಿರೂಪವೆನಿಸುತ್ತೀಯ.

ಇದಕೆ...

ನನ್ನ ಮನೆತುಂಬ ನಾನಿಂದು ಬರೆದಿರುವ

ನಿನ್ನ ಪುಟ್ಟಹೆಜ್ಜೆಗಳೇ ಸಾಕ್ಷಿ.

ಹುಟ್ಟುಹಬ್ಬದ ಶುಭಾಶಯಗಳು ಮುದ್ದೂ......



೨೯) ಬರಡೂ ಹಸಿರಾಗುತ್ತದೆ



ಅಲ್ಲೊಂದಿತ್ತು ಬಟ್ಟಬೋಳು ಬಯಲು

ನಿರ್ಜನತೆಯ, ನಿಶ್ಯಬ್ಧದ್ದೆ ಕಾವಲು.

ಮೇಲೆ ಸುಡುವ ಬಿಸಿಲು,

ಭೂಮಿ ಒಣಗಿ ಬಿರುಕುಗಳು

ಪ್ರಕೃತಿ ಕಣ್ಣೀರು ಖಾಲಿಯಾದಂತೆ,

ಬರದಿ ಗರಬಡಿದು ಸ್ತಬ್ಧವಾದಂತಿತ್ತು.

ಒಂದುಮರವಿತ್ತು ಜೊತೆಗೆ ಒಂಟಿಯೆಂಬ ಅಳಲು

ಖಾಲಿಖಾಲಿ ಒಣಕೊಂಬೆಗಳು

ಲಟಲಟ ಮುರಿವ ರೆಂಬೆಗಳು

ಹಸಿರ ಕಳಕೊಂಡು ಬರಡಾಗಿದ್ದಕ್ಕೆ

ಅದು ಮೌನವಾಗಿ ಅಳುವಂತಿತ್ತು.

ಎಲ್ಲಿಂದಲೋ ಹಾರಿ ಬಂದವೆರಡು ಮೈನಾಗಳು

ಮೈಗೆ ಮೈತಾಗಿಸಿ, ಕೊಕ್ಕುಗಳ ಬೆಸೆದವು

ಚಿಲಿಪಿಲಿಯ ಲವಲವಿಕೆಯಿಂದ

ಪ್ರಕೃತಿಗೆ ಗೆಜ್ಜೆ ಕಟ್ಟಿದವು

ತಮ್ಮ ಪ್ರೀತಿಯಮೃತದಿಂದ

ಪಸೆಯನಿಷ್ಟು ತಂದವು

ಒಣಮರದಡಿ ಬಿದ್ದ ಅದರದೇ ಕಡ್ಡಿಗಳ

ಹೆಕ್ಕಿ ಗೂಡ ಕಟ್ಟಿದವು

ಮೊಟ್ಟೆಇಟ್ಟು, ಶಾಖ ಕೊಟ್ಟು

ಅಲ್ಲೇ ಮರಿ ಮಾಡಿದವು

ಮಳೆ ಬಂದಿಲ್ಲ, ಋತು ಬದಲಾಗಿಲ್ಲ,.

ಮರವೂ ಚಿಗುರಿಲ್ಲ, ಬಿಸಿಲೂ ಆರಿಲ್ಲ

ಆದರೆ,

ಈಗನ್ನಿಸುತ್ತಿಲ್ಲ, ಅದೊಂದು ಖಾಲಿ ಬಯಲು

ಜೀವಂತಿಕೆಯೆ ಬಂದಿತಲ್ಲಿ ಖಾಲಿಯನ್ನು ತುಂಬಲು

ಬರಡುತನ ಎಲ್ಲರಿಗು ಇದ್ದದ್ದೆ,

ಅವಗೆ ಇಂದು ಇವಗೆ ನಾಳೆ.

ಸಣ್ಣಪುಟ್ಟ ಖುಶಿ ಬಂದಾಗಲೂ

ಮನೆಮಾಡೆ ಒಳಗೆ ಸ್ವಾಗತಿಸಿದರೆ,

ಮುಂದೆ ಅವೇ ಮರಿಗಳ ಹುಟ್ಟಿಸಿ

ಖುಶಿಯನೇ ನೂರ್ಮಡಿಸಿಯಾವು

ಬರಡುತನ ಕಳೆದಾವು,

ಬಾಳು ಬೆಳಕಾಗಿಸಿಯಾವು



೩೦) ವಿವಶತೆ



ಗಂಧರ್ವಗಾಯನದೊಂದು ಸಂಜೆ

ಶ್ರುತಿ ಲಯ ಸಮ್ಮೇಳ, ಗಾಯಕನೂ ತನ್ಮಯ

ರಾಗಭಾವ ಸಮ್ಮೇಳ, ದೈವಸನ್ನಿಧಿಯ ಅನುಭವ

ಹಾಳುಗಳಿಗೆಯೊಂದರಲಿ, ತಂಬೂರಿ ತಂತಿ ಮುರಿಯಿತು,

ಬುರುಡೆ ಸೀಳಿತು, ರಸಭಂಗವಾಯ್ತು

ಅನುಭೂತಿ ನೊಂದು ವೇದಿಕೆಯಿಂದಿಳಿಯುವಂತಾಯ್ತು

ಸಿಂಗಾರಕ್ಕಿಟ್ಟ ಹೊನ್ನ ತಂಬೂರಿ ಕಪಾಟಿನೊಳಗೆ

ನುಡಿಯಲಾರದ ವಿವಶತೆಗೆ ಕಣ್ಣೀರಿಡುತಿತ್ತು.



೩೧) ಕ್ಷಮಿಸು



ಕ್ಷಮಿಸು

ನಿನ್ನ ಬಾಯಾರಿಕೆಗೆ ನಾ ನೀರಾಗಲಿಲ್ಲ,

ಹಸಿವೆಗೆ ತುತ್ತಿನೂಟವಾಗಲಿಲ್ಲ.

ನಿದ್ದೆಯಿಲ್ಲದ ರಾತ್ರಿಗೆ ಜೋಗುಳವಾಗಲಿಲ್ಲ.

ಬೇಸರ ತಣಿಸುವುದಕೆ ಹಾಡಾಗಲಿಲ್ಲ.

ದಣಿದು ಬಂದಾಗಲೆಲ್ಲ ನಗುವಾಗಲಿಲ್ಲ.

ಕಣ್ಣೀರೊರೆಸೊ ತುಂಡುವಸ್ತ್ರವಾಗಲಿಲ್ಲ.

ಪೂಜೆ ನಂಬದ ನೀನು ಪೂಜೆಗೆಂದೊಮ್ಮೆ

ಹೊರಟಾಗ ಹೂವಾಗಿಯೂ ಒದಗಲಿಲ್ಲ.

ಬಹುಶಃ........

ನಮ್ಮಿಬ್ಬರಿಗೂ ಇದೊಂದು ಅಪ್ರಿಯ ಸತ್ಯ

ನಾನೆಂದೂ ನಿನಗೊದಗಲೇ ಇಲ್ಲ.

ಯಾಕೆಂದರೆ, ಇದುವರೆಗೆ

ನಾನು ನಾನಾಗುವುದೇ ಸಾಧ್ಯವಾಗಿಲ್ಲ.



೩೨) ಹೂಗಳ ನಗು



ರಾತ್ರಿ ಗಾಳಿಮಳೆ ಜೋರಿಗೆ

ಪಾರಿಜಾತದ ಗೆಲ್ಲು ಕಿಟಕಿಯೆಡೆ ಬಾಗಿತ್ತು

ಮುಂಜಾನೆ ಕಿಟಕಿ ತೆರೆದೊಡನೆ

ಪುಟ್ಟರೆಂಬೆಯೊಂದು ಕಂಬಿಗಳೊಳ ಚಾಚಿತ್ತು

ರೆಂಬೆ ತುದಿಯಲ್ಲಲ್ಲಿ ಪುಟ್ಟ ಹೂ ಅರಳಿತ್ತು

ಕೆಂಪು ತೊಟ್ಟಿನ ಬಿಳಿಯ ಮೈ ಹಸುಗೂಸಿನಂತಿತ್ತು

ಅದಕೆ

ದೊಡ್ಡ ಮನೆಯ ಹಜಾರದ ದರ್ಶನವಾಗಿತ್ತು

ಶ್ರೀಮಂತಿಕೆಯ ಬಣ್ಣಗಳು ಕಣ್ಣು ಕುಕ್ಕಿತ್ತು

ಮೂಲೆಯಲಿತ್ತೊಂದು ದೊಡ್ಡ ಹೂದಾನಿ

ಅದರ ತುಂಬ ಅಂಗೈಯಗಲದ ಕೆಂಪು ಗುಲಾಬಿ

ಕಂಪಿಲ್ಲದ ಕೆಂಪು ಗುಲಾಬಿಯ ಕಂಡು

ಪಾರಿಜಾತಕೆ ಕಾಗದದ್ದೆಂಬ ವ್ಯಂಗ್ಯ ನಗು!

ಕ್ಷಣಕಾಲದದರ ಜೀವಿತವ ಕಂಡು ಗುಲಾಬಿಗೆ

ತನ್ನ ಜೀವನವೆ ಉದ್ದವೆಂಬ ಹೆಮ್ಮೆಯ ನಗು!









೩೩)ಯಾಕೆಂದರೆ.........

ನೀನಂದಿದ್ದೂ ಸರಿಯೇ

ನಿನ್ನಮ್ಮನ ಮುಂದುವರಿಕೆ ನೀನು,

ನಿನ್ನದು ನಿನ್ನ ಮಗಳು.

ಅಮ್ಮ ನಿನ್ನ ಗುರುವಾದರೆ,

ಮಗಳು ನಿನಗೆ ಗುರಿಯಾದಳು.

ಅಮ್ಮನದು ನಿನಗೆ ಧಾರೆಯಾದರೆ

ಮಗಳ ಪ್ರೀತಿ ಸೆಳೆವ ಅಯಸ್ಕಾಂತ.

ಅಮ್ಮ ನಿನಗೆ ಮಾದರಿಯಾದರೆ

ಮಗಳು ನಿನ್ನ ತದ್ರೂಪು.

ಅಮ್ಮ ಗಾಯಗಳಿಗೆ ಮುಲಾಮಾದರೆ

ಮಗಳು ಗಾಯಗಳೆಡೆಗಿನ ಮರೆವು

ಅಮ್ಮ ನಿನ್ನ ನುಡಿಗಳಲಿಹ ಸತ್ವವಾದರೆ

ಮಗಳು ಅದ ನಡೆಯಾಗಿಸುವ ಸತ್ಯ

ಅಮ್ಮ ಬಳಲಿಕೆಗೆ ಒರಗುಗಂಬವಾದರೆ

ಮಗಳು ನಿನ್ನ ತೂಗುವ ಉಯ್ಯಾಲೆ.

ಅಮ್ಮ ನಿನ್ನ ಕಣ್ಣೊರೆಸುವ ಕೈಯ್ಯಾದರೆ

ಮಗಳು ಕಣ್ಣೀರ ನಗುವಾಗಿಸುವ ಶಕ್ತಿ

ಹೀಗೆ ನನ್ನ ಬಾಳ ಭಾರ ಹೊತ್ತ

ಕಂಭಗಳಿವೆರಡು ಎಂದು ನೀನಂದದ್ದು

ನೂರಕ್ಕೆ ನೂರು ಸತ್ಯವಾದ ಮಾತು

ಯಾಕೆಂದರೆ ........

ನನ್ನಮ್ಮ ನನ್ನೆದುರಿನ ಕನ್ನಡಿಯಾದರೆ,

ನನ್ನ ಮಗಳದರೊಳಗಿನ ನನ್ನ ಪ್ರತಿಬಿಂಬ



೩೪) ಹೀಗೆರಡು ಅಗಲಿಕೆಗಳು



ಸಾವು ಅಗಲಿಸಿದವರ ನೋವು ಸಾವಬಯಕೆ ತಂದೀತು

ಬೇಡವೆಂದು ಬಿಟ್ಟುಹೋದವರದು ಕ್ಷಣಕ್ಷಣ ಸಾಯಿಸುವುದು

ಆ ಅಗಲಿಕೆಯಲಿ ತಲುಪಲಾಗದ ದೂರ ಚುಚ್ಚಿದರೆ

ಈ ತೊರೆಯುವಿಕೆಯಲಿ ತಿರಸ್ಕಾರದ ಉರಿ. .

ಆ ದೂರ ತಂದೀತು ಅಸಹಾಯಕತೆಯ ನೋವು,

ಈ ತಿರಸ್ಕಾರದಲಿ ಆತ್ಮವಿಶ್ವಾಸದ ಸಾವು.

ಅಸಹಾಯಕತೆಗೆ ಆತ್ಮವಿಶ್ವಾಸ ಆಸರೆಯಾದೀತು.

ಆತ್ಮವಿಶ್ವಾಸವಿಲ್ಲದ ಬಾಳು ಹೊರೆಯೇ ಹೌದು

ಹೊರೆಯಾದ ಬಾಳಿಗಿಂತ ಬೇಕೆ ಬೇರೆ ಸಾವು?



೩೫) ಮನಗಳೆರಡು ಸಂಧಿಸಿದಾಗ



ಮನಸುಗಳೆರಡು ಪರಸ್ಪರ ಸಂಧಿಸಿದ ಗಳಿಗೆ

ಅದು ಕರೆಯಿತು "ಈಗಲೇ ನನ್ನದಾಗು"

ಇದು ಹೇಳಿತು "ಬಹುಶಃ ಅದಾಗದು"

ಅದು ಹೇಳಿತು "ಅದಾಗಲೇಬೇಕು"

ಇದರುತ್ತರ "ಆಗಲೇಬೇಕಾದರೆ ಆದೀತು"

ಮರುಕ್ಷಣವೇ ಒಂದರೊಳಗೊಂದು ಇಳಿಯತೊಡಗಿ,

ಸಮರ್ಪಣೆ ಮೊಳೆಯತೊಡಗಿ,

ಇನ್ನುಳಿದದ್ದೆಲ್ಲಾ ಕರಗತೊಡಗಿ,

ಅದಕಿದಷ್ಟೆ ಇದಕದಷ್ಟೆ ಕಾಣುವಂತಾಯ್ತು.

ಆಗಲೇ ಅದಕೊಮ್ಮೆ ಭೂತದಾಳದ ಪ್ರಶ್ನೆ-

"ನೀ ನನ್ನದಲ್ಲವೇ?"

ಅದರ ಉತ್ತರ-

"ನೀ ನನ್ನ ದಾಟಿಹೋಗಿದ್ದೆಯಲ್ಲವೆ?"

"ಅದು ಕಾಲನಿರ್ಣಯ.

ಸಾವು ನಿನ್ನೊಳಗೆ ನನ್ನ ಕೊಂದಿತೆ?"

-ಮತ್ತೆ ಭೂತದ ಪ್ರಶ್ನೆ.

ಅದಕ್ಕೀಗ ಇಬ್ಬಗೆ- ನನ್ನದಲ್ಲದ ನಾನು

ಇದಕ್ಕೊದಗುವುದು ಹೇಗೆ?

ಅದು ನಿಂತಲ್ಲೆ ತಿರುಗಿ ಹಿಂದೆ ನೋಡುತ್ತಿದೆ,

ಇದು ನಡುವಲ್ಲಿ ನಿಂತು ತ್ರಿಶಂಕುವಾಗಿದೆ.

ಹಿಂತಿರುಗಲು ಇದಕ್ಕೆ ಹಿಂದೇನೂ ಇಲ್ಲ,

ಮುನ್ನಡೆಯಲು ಅಲ್ಲಿ ಸ್ವಾಗತವೂ ಇಲ್ಲ.



೩೬) ಹೆಣ್ಣಿನ ಪ್ರಶ್ನೆ



ಹೆಣ್ಣೊಂದರ ಮನ ಆಗಾಗ ಕೇಳುವುದು-

"ಎಲ್ಲಿದೆ ನನ್ನಮನೆ, ಯಾವುದು ನನ್ನಮನೆ?"

ಅಮ್ಮ ಹೇಳಿದ್ದಳು ಮದುವೆಯ ನಂತರ,

" ಇನ್ನು ನಿನ್ನ ಮನೆಯ ಸೇರಿ ಬೆಳಗು"

ಅಲ್ಲಿ ತಪ್ಪಾದಾಗಲೊಮ್ಮೆ ಅತ್ತೆ ಕೇಳುವರು

"ನಿನ್ನ ಮನೆಯಲ್ಲಿ ಇದು ಹೀಗೇ ಏನು?"

ಮೊದಲ ಆಷಾಢಕ್ಕೆ ತವರಿಗೆ ಹೋದಾಗ,

ಪಾತ್ರೆ ತೊಳೆದು ಇಟ್ಟ ಜಾಗ ಬದಲಾಯ್ತು.

ಅಮ್ಮ ನಕ್ಕುಹೇಳುತಾಳೆ "ನಿನ್ನ ಮನೆಯಲ್ಲಮ್ಮಾ"

ಹೊಸಿಲ ಬರೆವ ಗೆರೆಗಳಲ್ಲಿ ತವರ ಛಾಯೆಕಂಡು

ಅತ್ತೆ ಹೇಳುತಾರೆ- "ನಿನ್ನ ಮನೆಯಂತಲ್ಲಮ್ಮಾ,

ನನ್ನ ಮನೆಯಲ್ಲಿದ್ದೀಯ, ನಾ ಬರೆದಂತೆ ಬರಿ."

ಅಪ್ಪನ ಕನಸು, ಅಮ್ಮನ ಮನಸೇ ಅವಳಾದರೂ

ಅವರ ಪ್ರಕಾರ "ಈಗ ನೀ ಅವರವಳು"

ಅತ್ತೆಯ ಹೆಮ್ಮೆ, ಗಂಡನ ಒಲುಮೆ ಅವಳಾದರೂ,

ಅವರೂ ಹೇಳುವರು- "ಎಷ್ಟಾದರೂ ಅವರೆ ನಿನಗೆ ಹೆಚ್ಚು"

ಗೊಂಬೆಯಾಟದ ಗೊಂಬೆ ಈ ಹುಡುಗಿ

ಮತ್ತದೇ ಪ್ರಶ್ನೆಯೊಂದಿಗೆ ಕೂರುತಾಳೆ

"ಎಲ್ಲಿಗೆ, ಯಾರಿಗೆ ಸೇರಿದವಳು ನಾ?

ಎಲ್ಲಿದೆ ನನ್ನಮನೆ, ಇಲ್ಲಿಗೆ ಸುಮ್ಮನೆ ಬಂದೆನಾ? "



೩೭) ನಾ ಗರಿಕೆಯಾಗುವೆ



ಅಜ್ಜ ನೆಟ್ಟ ಮಾವಿನ ಮರದಲಿ

ನಾ ಮೊಳೆಯುತಿರುವೆ, ಪುಟ್ಟ ಚಿಗುರು.

ಇಲ್ಲಿ ಚಿಗುರುವ ಯೋಗವೋ, ಕರ್ಮವೋ-

ಅಪ್ಪ ಅಮ್ಮ ಇಲ್ಲಿದ್ದರು, ನಾನಿಲ್ಲಿ ಹುಟ್ಟಿದೆ,

ಬೇರಾವ ಕಾರಣವು ಇಲ್ಲ.

ಇಲ್ಲ, ಇಂದು ನನ್ನದಿದೆನಿಸುವುದಿಲ್ಲ

ಈಗಿನ ತುರ್ತಿಗಿದು ಶಕ್ಯವಾಗಿಲ್ಲ.

ಆಗಿನ ಮೌಲ್ಯಗಳನುಳಿಸಿಕೊಂಡಿಲ್ಲ

ನೆಟ್ಟವರ ಧ್ಯೇಯಗಳೂ ಕಾಣುತಿಲ್ಲ

ಹಣ್ಣು ನನ್ನವು ಮೇಲ್ವರ್ಗಕೇ ಎನ್ನುತಿದೆ

ಕೊಂಬೆಗಳಿಂದ ಅಕ್ಕಪಕ್ಕದವ ಚುಚ್ಚುತಿದೆ

ರೆಂಬೆಯಲೊಂದು ಕಾಳಸರ್ಪವನೂ ಸಾಕಿದೆ

ಒಣಗಿದೆಲೆಗಳ ಕಸವ ಸುತ್ತಲೂ ಬೀಳಿಸಿದೆ

ಭಯಗೊಂಡ ಜೀವಕುಲ ದೂರಕೇ ಓಡುತಿರೆ,

ಸ್ವಚ್ಛಗೊಳಿಸುವ ಕಾರ್ಯ ಅರ್ಧಕೇ ನಿಂತಿದೆ

ನೆರಳು ಇದ್ದರೂ, ದಣಿವಾರಿಸುತ್ತಿಲ್ಲ

ಹಣ್ಣಿದ್ದರೂ ಹಸಿವೆ ತಣಿಸುತ್ತಿಲ್ಲ

ಕೊಳೆತೆಲೆಗಳದೆ ನಾತ,

ಜೀವಸೆಲೆಯಿರದೆ ಮೌನದ್ದೆ ಕಾಟ

ಆದರೂ..........

ನಾನಿಲ್ಲೆ ಇರಬೇಕು, ಬೆಳೆಯಲೂ ಬೇಕು

ಇರುವೆ, ಆದರೆ.........

ಸಾವು ಬಂದಕ್ಷಣ ವರವೊಂದ ಕೇಳುವೆ,

ಮರುಜನ್ಮದಲಿ ನಾ ಗರಿಕೆಯಾಗುವೆ,

ಯಾರ ಗೆಲ್ಲೂ ಅಲ್ಲ, ಯಾರ ಹೂವೂ ಅಲ್ಲ

ಯಾರ ಹಣ್ಣೂ ಅಲ್ಲ, ಯಾರ ಬೀಜವೂ ಅಲ್ಲ.





೩೮) ಬಾಯಿಮಾತಷ್ಟೇ



ಮಾತು ಬೆಳ್ಳಿ ಮೌನ ಬಂಗಾರ ಅನ್ನುವರು,

ಬಾಯಿಗೇ ಕೈಹಾಕಿ ಮಾತು ಹೊರತೆಗೆಯುವರು.

ಕೈ ಕೆಸರಾದರೆ ಬಾಯಿ ಮೊಸರೆಂಬರು,

ಕೈ ಕೆಸರಾಗಿರುವವನ ಗೌರವಿಸಲರಿಯರು.

ಉಪ್ಪಿಗಿಂತ ರುಚಿ, ತಾಯಿಗಿಂತ ದೇವರಿಲ್ಲೆಂಬರು,

ಸ್ವಲ್ಪ ಹೆಚ್ಚುಕಮ್ಮಿಯಾದರೂ "ಥೂ" ಎಂದುಗಿಯುವರು.

ಅಜ್ಜ ನೆಟ್ಟ ಆಲದ ಮರದ ನೇಣು ಸಲ್ಲದೆಂಬರು,

ದೂರದಲಿ ಬಾಳು ಹುಡುಕಿದರೆ, ಭ್ರಷ್ಟನೆಂಬರು.

ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎಂಬರು,

ಹತ್ತಿರ ಸ್ಪಷ್ಟವಾಗಿರುವುದ ಕಾಣಬಯಸರು.

ಸೋಲೇ ಗೆಲುವಿಗೆ ಸೋಪಾನವೆಂಬರು

ಸೋತು ಕುಸಿವವಗಿನ್ನೆರಡು ಕಲ್ಲೆಸೆಯುವರು

ಗೆದ್ದೆತ್ತಿನ ಬಾಲ ಹಿಡಿವುದು ಸರಿಯಲ್ಲೆಂಬರು

ಗೆಲುವು ಇರದಲ್ಲಿ ಪ್ರೋತ್ಸಾಹಿಸಲರಿಯರು

ಮಾನವರ ನಡುವಿನಲಿ ಸಹಜತೆಯೆ ಕಳವಾಗಿ

ಕದ್ದ ಆಷಾಢಭೂತಿಗಳೆ ಜಗವಾಳುವವರಾಗಿ

ಮನದ ನುಡಿಯನು ಕೇಳಿ ಬಾಳುವೆ ಎಂದವಗೆ

ಸ್ವರ್ಗವೆನಿಸದೆ ನರಕವಾಗಿಹುದು ಈ ಭೂಮಿ.



೩೯) ನಾ ಮೂಲವಸ್ತುವಷ್ಟೆ.



ಕ್ಷಮಿಸು ಜೀವವೆ,

ನನ್ನ ನಡೆಗಳಿಗೆ ನಾ ಪ್ರತಿಕ್ರಿಯೆ ಕೇಳುವೆ.

ಮೀರಾಳಂತೆ ಅವಳ ಹಾಡಲ್ಲಿ ,

ರಾಧಾಳಂತೆ ಅವಳ ನಿರೀಕ್ಷೆಯಲ್ಲಿ,

ಅಕ್ಕಳಂತೆ ಅವಳ ಹಠಸಾಧನೆಯಲ್ಲಿ

ಅಭಿವ್ಯಕ್ತವಾಗದ ಅದ ನಾ ಕಾಣಲಾರೆ.

ಯಾಕೆಂದರೆ ಅವರು.........

ಹೆಣ್ಣುಜನ್ಮದ ಅತ್ಯುನ್ನತ ಮಾದರಿಗಳಾದರೆ,

ನಾನು ಹೆಣ್ಣು ಜೀವರಚನೆಯ ಮೂಲವಸ್ತುಗಳಾದ

ಆರಾಧನೆ ಮತ್ತದರ ಸ್ಪಂದನೆಗಳ ಮೊತ್ತ ಅಷ್ಟೇ.





೪೦) ಇಂದು



ಒಂದಕ್ಕೊಂದು ಅಪ್ಪಿಕೊಂಡಂತಿರುವ

ನಿನ್ನೆ ನಾಳೆಗಳೆಂಬೆರಡು ಬಂಡೆಗಳ

ನಡುವಿನ ಕಿರಿದಾದ ಅವಕಾಶವೇ ಇಂದು.

ಕಿರಿದಾದಾರೂ ಜಾಗವಿದ್ದಲ್ಲೆಲ್ಲ ಬಂದು ಸೇರುವ

ತ್ಯಾಜ್ಯಗಳಂತೆ ಇಲ್ಲು ಇವೆ ಕಸಕಡ್ಡಿ ಹಲವು

ಮೊದಲ ಕೆಲ ಹೆಜ್ಜೆಗಳಲಿ ರಭಸವಿದ್ದರೆ,

ತೊರೆಯದು ಕಸಕಡ್ಡಿ ಕೊಚ್ಚಿಕೊಂಡು ಹೋದೀತು,

ಇಂದೆಂಬ ಅವಕಾಶವದಕೆ ದಕ್ಕೀತು.

ನಿನ್ನೆನಾಳೆಗಳ ವಿಸ್ತಾರ ದಾಟಿದ ಮೇಲೆ,

ಬಯಲೆಲ್ಲ ಅದರದೇ ಆದೀತು.

ಸ್ವತಂತ್ರ ಹರಿವು, ಮಿತಿಯಿರದ ಸೆಳವು

ನೋಡಲೂ ಬಂದಾರು ಜನ ಆ ಮುಕ್ತ ಚೆಲುವು

೪೧)

೧) ಗೊಂಬೆ ಹೇಳಿದ್ದು



ದೊಡ್ಡ ಗೊಂಬೆಯೊಳಗೊಂದು ಗೊಂಬೆ,

ಅದರೊಳಗಿತ್ತು ಇನ್ನೊಂದು

ಇನ್ನೊಂದರೊಳಗೆ ಮತ್ತೊಂದು

ಆ ಮತ್ತೊಂದರೊಳಗೂ ಸಿಕ್ಕಿತ್ತು

ಕೊನೆಗೊಂದು ಪುಟ್ಟಗೊಂಬೆ.

ಎಲ್ಲೋ ಏನೋ ಹೋಲಿಕೆಯ ನೆನಪು!!!

ದೊಡ್ಡವರಂತೆ ಕಾಣುವ ಹಲವರು ಹೀಗೇ ತಾನೆ?

ಅವರೊಳಗ ಬಗೆಯುತ್ತಾ ಹೋದಂತೆಲ್ಲಾ

ಕೊನೆಗುಳಿಯುವುದು ಕ್ಷುದ್ರವ್ಯಕ್ತಿತ್ವವೇನೇ.



೨) ಕಳೆದು ಹೋಗುವಾ



ಉಳಿಸುವ ಇಚ್ಛೆಯಿಲ್ಲದಿದ್ದರೆ ಅಳಿಸಿಬಿಡು

ಎರವಲೆನಿಸುವ ಗಮನದ ಭಿಕ್ಷೆ ಬೇಡ

ಪ್ರೀತಿಯೆಂದೆಂದೂ ನಿಷ್ಕಲ್ಮಶ

ಅದು ನಂಜಾಗುವ ಮುನ್ನ

ನೀ ನಾನಿಲ್ಲವೆಂದುಕೊಳ್ಳುವ

ನಾ ನೀನಿರಲೇ ಇಲ್ಲವೆಂದುಕೊಳ್ಳುವ

ತಪ್ಪು ಕಲ್ಪನೆಯೊಳಗೆ ಕಳೆದುಹೋಗುವಾ.....



No comments:

Post a Comment