Sunday, May 12, 2013

ಆ ಅಕಾಲ ಮಿಲನವೂ, ಈ ಅಕಾಲ ಮಳೆಯೂ...


-----------------------------------------------

ತಪದೊಳಗೆ ಕಶ್ಯಪನ ಮನ,
ಧೃತಿಗೆಟ್ಟಾಸೆಯಲಿ ದಿತಿಯ ತನು

ಹೆಣ್ಣ ಕಣ್ಣಲಿ ಕಣ್ಣಿಲ್ಲದ ಕಾಮಾತುರತೆ
ಸಲ್ಲದ ವೇಳೆ- ಒಪ್ಪಲಾಗದ ಋಷಿಯ ವ್ಯಥೆ.
ಎಚ್ಚರಾಗದ ಚಿತ್ತದಿ ಮೋಹ ಗೆದ್ದಿತು.
ಮಿಲನ ಫಲಿಸಿ ಹೆಣ್ತನ ಫಲ ಹೊತ್ತಿತು.
ಎಲ್ಲ ಮರೆಸುವ ಅಕಾಲ ಆಶಾಪಾಶ
ಮನಸೆಂಬುದಿದ್ದಲ್ಲಿ ಕ್ಷೀಣಕ್ಷಣದಿ ಅದರ ವಶ.
ಅದರ ಗೆಲುವು ಕಾಲಸಹಜ ನಡೆಗೆ ಸೋಲು
ಅಂಥ ಕ್ಷಣಗಳ ಮೊತ್ತ ಗೊಂದಲದ ಗೂಡು.
ಅರಿವು ಮೈಮರೆತ ಒಂದು ಕಪ್ಪುಚುಕ್ಕೆ
ಶುಭ್ರ ಸಾತ್ವಿಕ ಬಸಿರ ತಾಮಸದಿ ತುಂಬಿತು.
ಆನೆ ಕದ್ದರೂ ಕಳ್ಳ, ಅಡಿಕೆ ಕದ್ದರೂ ಅದೇ..
ಬಿತ್ತಿ ತನದು ಮತ್ತವನ ಬಾಳಲಿ ಬರೀ ಗೊಂದಲ,
ಋಷಿಪತ್ನಿ ಹೊತ್ತೇನೋ ಹೆತ್ತಳು ಅಸುರನ,
ಒಪ್ಪಲಾರದೆ ನೊಂದಳು ಬೆಳೆವ ಕಂದನ ಕ್ರೂರತೆ.

ಇಳೆಹೆಣ್ಣೂ ಈಚೆಗೆ ಅಂಥದೊಂದು ಲಹರಿಯಲಿಹಳು
ಅಲ್ಲಸಲ್ಲದ ವೇಳೆ ವರುಣನ ಮಿಲನಕ್ಕೆ ಕರೆವಳು.
ತಡೆದು, ಸಂಯಮಿಸಿ, ಮುಂದಿಟ್ಟ ಹೆಜ್ಜೆಯಾತ ಹಿಂದಿಟ್ಟರೂ
ನಿರಾಸೆಯಾಕೆಯ ಕುಗ್ಗಿಸದು, ಆಕೆ ಹಿಮ್ಮೆಟ್ಟಳು.
ನಿವೇದಿಸುತಾ ಬೆತ್ತಲಾಗುತಲೇ ಹತ್ತಿರಾಗುವಳು.
ತೆರೆದಿಟ್ಟಾಕೆಯ ಮೈಮನದುರಿಗಾತ ಕರಗುತಾನೆ
ತಾನು ಹನಿಸುತಾನೆ, ಆಕೆ ತಣಿಯುತಾಳೆ.
ಆಕೆಯೊಡಲಲಿದ್ದ ಬಸಿರು ಕಂಗೆಟ್ಟು ಅಕಾಲ ವರ್ಷಕೆ,
ಹಾಳಾಗಿದೆ, ಕೊಳೆತಿದೆ, ಕೊನೆಗೊಮ್ಮೆ ನಾಶವಾಗಿದೆ.
ಅಕಾಲ ತಾಳುತಿದೆ ಆಕಾರ ಈ ಮಿಲನದ ಫಲ,
ಸಲ್ಲದ ಕಾಲಮಾನದಲದೂ ತಾನಾಗಿ ಬೆಳೆಯುತಿಲ್ಲ.
ಪೂರ್ಣ ಬೆಳೆಯದ ಮೊಳಕೆಗಳು ಹುಣ್ಣಾಗುತಾವೆ,
ತಾಯ ಮಡಿಲ ತುಂಬಿ ನೋವಲಿ ಜೊಳ್ಳೆನಿಸುತಾವೆ.


ಬದಲಾದ ಕಾಲದಿ ಧರೆ ನಡೆ ಬದಲಿಸಿಹ,
ನರ ಮರೆತ ನಿಯಮವ ತಾನೂ ತೊರೆವ ಸೂಚನೆಯೇ?!
ಕಾಲಚಕ್ರವ ದಿಕ್ಕುತಪ್ಪಿಸಿ ತಿರುಗಿಸುವಾಲೋಚನೆಯೇ?!
ತುಳಿತುಳಿದು ಶೋಷಿಸಿದ್ದಕೆ ಸಿಡಿದೆದ್ದ ಸುಡುಭಾವನೆಯೇ?!
ಸ್ತ್ರೀ ಸ್ವಾತಂತ್ರ್ಯದ ಮೊದಲ ಸ್ವತಂತ್ರ ನಡೆಯಾಗಿ,
ಋತುಮಾನ ತಿರುಗುಮುರುಗಾಗಿಸುವ ಯೋಜನೆಯೇ?!
ಸಂಯಮವ ಮರೆತು, ಕಾಲಧರ್ಮ ತೊರೆದು ಅವನಿ,
ಸ್ವಾರ್ಥಕ್ಕೆ ಮಣಿದು, ಒಡಲಕುಡಿಗಳನೂ ಕಡೆಗಣಿಸುವ,
ಕುರುಡಿಗೆ ಶರಣಾದಂತನ್ನಿಸಿತು, ಯಾಕೋ ಭಯವೆನಿಸಿತು...

1 comment:

  1. "ಸಲ್ಲದ ಕಾಲಮಾನದಲದೂ ತಾನಾಗಿ ಬೆಳೆಯುತಿಲ್ಲ" ಸರಿಯಾದ ಮಾತು.

    ತಕ್ಕ ಶೀರ್ಷಿಕೆ ಮತ್ತು ಹಲವು ಭಾವಗಳ ಹೂರಣ ಕವಿತೆ.

    ReplyDelete