Friday, May 17, 2013

ನಿನ್ನನಲ್ಲಿಟ್ಟು ನೋಡಿಕೋ...


ಕುಂಬಳ ಕದ್ದ ಪಾಡು
ಹೆಗಲಿಗಂಟಿದ ಪುಡಿಬೂದಿ
ಒಣ ಅಬ್ಬರವಾಗಿ
ಸ್ವಾನುಕಂಪದ ಗಾಳಿಗೆ
ಚದುರಿ ಚಲ್ಲಾಪಿಲ್ಲಿ ಇಲ್ಲಿ.

ಗಳಿಸುವ ಕೈ ಬೇಕು,
ಲಕ್ವ ಹೊಡೆದು ನಿಷ್ಕ್ರಿಯವಾದರೆ
ಅರ್ಧ ಹೊಟ್ಟೆಗೊದಗುವ ಬಾಳಲಿ
ತಿಂದುಂಡದ್ದಲ್ಲಿಗೂ ಒದಗುವುದು
ವ್ಯರ್ಥವೆಂದು ಕಡಿದೀಯೇನೋ ತಮ್ಮಾ?

ಓಡುವ ಕಾಲು ಬೇಕು,
ಸಿಹಿಯುಂಡ ಬಾಯಿ ತಂದ ಕಾಯಿಲೆಗೆ
ಕೊಳೆತು ಹುಣ್ಣಾದಾಗಲೂ,
ನಂಜು ದೇಹವೇರುತಿದ್ದಾಗಲೂ,
ಕಡಿದೆಸೆಯಲು ಅಳುವುದಿಲ್ಲವೇನೋ ತಮ್ಮಾ?

ಬಳಸಿಕೊಂಡ ಜೀವಂತಿಕೆ
ಮೂಲೆಸೇರುವ ಹೊತ್ತು
ಪೂಜಿಸಿದ ಕೈಗಳೇ ಕಡಿವುದ
ಮೆಚ್ಚಿ ಅಹುದಹುದೆನುವ
ನರಗೂ ಮೃಗಕೂ ಭೇದವೆಲ್ಲಿಯದೋ ತಮ್ಮಾ?

ಉರುಳುವ ಕಾಲಕೆ ಮಣಿದು
ಕುಣಿದು ಕುಪ್ಪಳಿಸಿದ ತನುಮನವು
ಸೋತು ಚಲನೆ ಮರೆತಾಗಲೂ
ಪಡೆದಾದರೂ ಉಸಿರ ಎರವಲು
ಸಾವ ಮುಂದೂಡಬಯಸುವುದು
ಏರಿ ಹೆಗಲ ಹೊರೆಯಾಗಿ ಬಾಳಬಯಸುವುದು

ಜೀವಕಣವೊಂದೂ ರಚಿಸಲಾಗದ
ಮರುಕ್ಷಣವನೂ ದರ್ಶಿಸಲಾಗದ
ಹುಲುಜೀವಿಗಳು ಹೇಗೆ ನಿರ್ಧರಿಸಬಲ್ಲೆವು-
ಅಳಿಯಬೇಕಾದ್ದ್ಯಾವುದು,
ಉಳಿಯಬೇಕಾದ್ದ್ಯಾವುದು....







5 comments:

  1. ನಮ್ಮದೆನ್ನುವದನ್ನು ನಾವು ಹೇಗೆ ಕಡಿದುಕೊಂಡೇವು....

    ದೇಹ ಕಡಿದುಕೊಂಡರೆ ನೋವಾದೀತು.....

    ಮೋಹ ಕಡಿದುಕೊಂಡರೆ.....????
    ಖುಷಿಯೇ ಸಿಗಬಹುದಿತ್ತೇನೋ.... ಆದರೆ ನಮಗದು ಆದೀತೇ...?

    ನಮಗಾಗಿ ಬಂದಿದ್ದನ್ನು ಯಾವುದು ಬಿಟ್ಟಿದ್ದೇವೆ....
    ಒಳ್ಳೆಯದೋ ಕೆಟ್ಟದ್ದೋ..... ಹೆಗಲಿಗಿಟ್ಟುಕೊಂಡೇ
    ತಿರುಗುತ್ತಿದ್ದೇವೆ.

    ವ್ಯಾಮೋಹಿ ಜೀವಕ್ಕೆ ಸಿಕ್ಕಿದ್ದೇಲ್ಲವೂ ಬೇಕು......

    ಚಂದಾದ ಕವಿತೆ.....


    ReplyDelete
    Replies
    1. ಹೇಯ್... ನಾನು ಬರೆದದ್ದು ಸಿಂಪಲ್ ಆಗಿ ಗೋಹತ್ಯೆಯ ಬಗ್ಗೆ... ನೀನು ಬೇರೆ ಏನೋ ಕಂಡುಕೊಂಡುಬಿಟ್ಟೆಯಲ್ಲೋ ತಮ್ಮಾ... ರವಿ ಕಾಣದ್ದು ಬರೆವಾತ ಕಾಣ್ತಾನೆ, ಬರೇತಾನೆ, ಅವನೂ ಕಾಣದೇ ಇದ್ದದ್ದನ್ನ ಓದುಗ ಅಲ್ಲಿ ಕಂಡುಕೊಳ್ತಾನೆ.ಖುಶಿ ಆಯ್ತು.

      Delete
    2. ಹಾಂ...... ಈಗ ಹೇಳಿದ ಮೇಲೆ
      ಆ ಅರ್ಥವೂ ಕಾಣುತ್ತಿದೆ.

      Delete
  2. ಕಡೆಯಲ್ಲೇಟ್ಟುವ ಪ್ರಶ್ನೆ ಸಮಂಜಸವಾಗಿದೆ. ಭೂಮಿಗೆ ಭಾರ - ಅನ್ನಕ್ಕೆ ದಂಡ ಅಂತಾರಲ್ಲ ಹಾಗೆ.

    ಮನ ಸೆಳೆದ ಪದ ಪುಂಜ : ಸ್ವಾನುಕಂಪದ ಗಾಳಿ

    ReplyDelete