Saturday, February 9, 2013

ಗಲ್ಲುಗಂಭದ ಸುತ್ತ ಕನಸು


---------------------

ಅಂದೊಂದು ಗಲ್ಲು ಇಂದೂ ಒಂದು,

ಹಿಂದೆಷ್ಟೋ...ಮುಂದೆಷ್ಟೋ...



ಒಂದು ಸಾವಸರಣಿಯ ಆ ತುದಿಯಲೂ ಅವನೆ

ಈ ತುದಿಯಲೂ ಅವನೇ...

ಅಲ್ಲಿ ಸತ್ತವರಾರೋ, ಇಲ್ಲವನೇ ಸತ್ತ.



ಅಪರಾಧಿ ಸತ್ತು ಅಪರಾಧವುಳಿದರೆ,

ಈ ಗಲ್ಲು ಕೊಲೆಗಳ ಕೊನೆಯಾದೀತೇ?

ಸಾಯಿಸಬೇಕಾದ್ದು ಜೊತೆಗಿನ್ನೇನೂ ಇಲ್ಲವೇ?



ಮತ್ಸರವ ಬಿತ್ತಿ ಬೆಳೆಸಲು ಗೆಲುವು ಫಲಿಸೀತೇ?.

ಗೆಲುವನಷ್ಟೇ ಬೆನ್ನತ್ತಿ ಅಂತಃಸತ್ವ ಬೆಳಗೀತೇ?

ಅಂತಃಸತ್ವ ಮರೆಮಾಡೋ ಮೌಢ್ಯಕಲ್ಲವೆ ಬೇಕು ಗಲ್ಲು?



ಸುಳ್ಳಿನತ್ತ ನಡೆಸುವವ ಗುರುವಾದಾನೇ?

ಗುರುವಿರದೆ ವಿಶ್ವಬಾಂಧವ್ಯದ ಗುರಿಸಾಧನೆಯೇ?

ವಿಶ್ವಬಂಧುತ್ವ ಕೊಲುವ ಪ್ರತ್ಯೇಕತಾವಾದಕಲ್ಲವೆ ಬೇಕು ಗಲ್ಲು?



ಧರ್ಮವ ಜಾತಿಮತವಾಗಿಸಿದ್ದು ಸಂಪ್ರದಾಯವೇ?

ಸಂಪ್ರದಾಯದ ಹೆಸರಲಿ ವಿಭಜನೆ ತರವೇ?

ವಿಭಜಿಸಿ ಬಲಗೆಡಿಸುವ ಮತಾಂಧತೆಗಲ್ಲವೆ ಬೇಕು ಗಲ್ಲು?



ಮುಂದಿದ್ದು ತಪ್ಪುದಾರಿಗೊಯ್ಯುವವ ನಾಯಕನೇ?

ಬೇಳೆಬೇಯಿಸಲು ಸೌಹಾರ್ದವ ಉರಿಸುವುದೇ?

ಉದ್ಧಾರದ ಹೆಸರಲಿ ವಿನಾಶಕೊಯ್ಯುವಗಲ್ಲವೇ ಬೇಕು ಗಲ್ಲು?



ಅಷ್ಟು ಸಾವಿಗೊಂದು ಮರಣದಂಡನೆಯೇ?

ಗಲ್ಲು ಉತ್ತರವೂ ಅಲ್ಲ, ಉಪಾಯವೂ...

ಸಾಯಿಸಬೇಕಾದು ಬೇರೆಯಿದೆ, ಬೆಳೆಯುತಿದೆ,

ಬೇರೂರುತಿದೆ, ಬೇರ್ಪಡಿಸುತಿದೆ, ಬಲವಾಗುತಿದೆ.



ಮನುಜಗೆ ಮನುಜನೆ ಬಂಧು, ಜಾತಿ-ಮತವಲ್ಲ..

ನೆಲವೊಂದೆ, ಜಲವೊಂದೆ ನಾವೆಲ್ಲರೊಂದೇ

ಈ ನಿಲುವಿನಡಿಪಾಯದ ನ್ಯಾಯಾಲಯದೊಳಗೆ,

ಗಲ್ಲುಗಂಭಕೆ ಮರಣತೀರ್ಪೆಂಬ ಕನಸು ನನದೀಗ...



1 comment:

  1. ಹಲವು ಪ್ರಶ್ನೆಗಳ ಸುತ್ತ ಹೆಣೆದ ಈ ಕವನವು ಪ್ರಸ್ತುತ ಎಂದಿಗೂ ಸಮಕಾಲೀನ.

    ReplyDelete