Saturday, July 11, 2015

ಸಂಜೆಯೊಂದು ಚಡಪಡಿಸಿ
ರಾತ್ರಿಯ ಮಡಿಲಲಿ
ಉಸ್ಸೆಂದು ಕುಸಿದು ಕೂತಾಗ
ಎಷ್ಟೆಲ್ಲ ಗುಟ್ಟುದುರಿದವಲ್ಲ!?
ಹುಡುಕುತಾ ಕಳಕೊಂಡದ್ದು,
ವರ ಸಿಕ್ಕಿತು ಅಂದುಕೊಂಡದ್ದು..
ಸಮೀಪಿಸುತಾ ತೀರವೆರಡು ಕಾಲಡಿ ಕಂಡದ್ದು,
ಕೂಡಿದೆವು ಅಂದುಕೊಂಡದ್ದು..
ತೆರಕೊಂಡು ಬಯಲಾದೆವೆನಿಸಿದ್ದು
ತೋರುಬೆರಳುಗಳಲಿ ಮೆಲ್ಲ ಚೈತನ್ಯವುಕ್ಕಿದ್ದು


ಕುಶಲ ಕಲೆಗಾರ ಬೆಳಕು
ತೋರಿ ತುಸುವೇ
ಅದೆಷ್ಟೊಂದು ಮರೆಯಿರುವಂತೆ
ಹಾಡಿತು, ಕುಣಿಯಿತು, ವರ್ಣಿಸಿತೂ ಕೂಡ.

ಸಂಜೆಯಲಷ್ಟು ಬಿಸಿಲೂ ಇತ್ತು
ಮತ್ತಿಷ್ಟೇ ಮಳೆ ಹನಿದಿತ್ತು.
ಬರಬೇಕಿತ್ತು ಮಳೆಬಿಲ್ಲು
ಕಾಯುತಲೇ ಹೊತ್ತು ಸುಸ್ತಾಗಿತ್ತು.

ಗೊಂದಲದ ಕಂಗಳು
ದಣಿದು ಸುಮ್ಮನಾದವು.
ಸಂಜೆಯೀಗ ತೆಪ್ಪಗೆ ಕರಗಿ ಕತ್ತಲ ತೆಕ್ಕೆಯಲ್ಲಿ
ಮತ್ತು ಕತ್ತಲೇ ಎಲ್ಲ ಸ್ಪಷ್ಟ ತೋರಿಕೊಟ್ಟಿತು.

ಭಾರದ ಗುಟ್ಟುಗಳಿಗೀಗ
ಈ ಜೋಳಿಗೆಯಲ್ಲದೆ ಗತಿಯಿಲ್ಲ.
ಜತನ ಗಂಟು ಕಟ್ಟಿಕೊಳಲೇಬೇಕು.
ಮುಂದೊಮ್ಮೆ ಪುರ್ರನೆ ಹಾರುವ ಹಗುರ ಚಿಟ್ಟೆಗಳಾದಾವು.
ಕಾಯಬೇಕು ಹಗುರಾಗಲಿಕೆ
ಸತ್ಯ ಅರಗಿಸುವಷ್ಟು ಹೊತ್ತು ಗಟ್ಟಿಯಾಗುವವರೆಗೆ...

No comments:

Post a Comment