Monday, July 1, 2013

ಹೊಕ್ಕರಷ್ಟೇ......

ಸ್ಫೂರ್ತಿಯಾಗ ಹೊರಟ
ಉಪಸ್ಥಿತಿಯೊಂದು
ಅನುಪಸ್ಥಿತಿಗಳ ಹುಟ್ಟಿಗೊಂದು
ಕಾರಣಕರ್ತೃವಾದಾಗ
ಅದೇ ಹೆಜ್ಜೆಯಡಿ ತನ್ನ
ಗುಳಿ ತೋಡತೊಡಗಿತು...

ನಾಲ್ಕಾರು ಗುಪ್ಪೆಮಣ್ಣು ಅಗೆದಿತ್ತಷ್ಟೇ..
ಮುಸುಮುಸು ನಗು..
ಉಸಿರಿಲ್ಲದವರ ಮನೆಯಲೂ
ಉಸಿರಿನುಸಿರಾದ ನಗುವೇ?!

ಮಣ್ಣಹೆಂಟೆ-ಕಲ್ಲ ಮಧ್ಯೆ
ಕಲ್ಲಲ್ಲದ ಅಂಥದೊಂದು ಗೆಡ್ಡೆ...
ಆಗಷ್ಟೇ ಕಣ್ಣೊಂದೆರಡು ಮೂಡಿದ್ದು
ಮೈತುಂಬಾ ನಗುತಿತ್ತು,
ಕೇಳುತಿತ್ತು...

"ಎಲ್ಲಿ ಹೊರಟೆ?
ನೆಲದ ಮೇಲಷ್ಟೇ ಜಂಜಡವೇ?
ಗುಳಿ ಹೊಕ್ಕುವುದೆ ಬಿಡುಗಡೆಯೇ?
ಇಲ್ಲಿನದಕೆ ಇನ್ನೆಲ್ಲಿಗೆ ಹೋಗುವೆ?

ಹೊಕ್ಕರಷ್ಟೇ ತೆರಕೊಳ್ಳುವ
ಕಣ್ಕಟ್ಟಿಸುವ ಹಲ ಮಜಲಿವೆ ಬಾಳಲಿ...

ನಾ ಕಾದಿಲ್ಲವೇ ದಿನ ನೂರಾರು
ಹನಿನೀರು ಈ ಕಣ್ಣೊಡೆಸುವುದಕೆ?
ಹಸಿರಾಗಿ ಹೆಸರಾಗುವ ಈ
ಎಳೆಗಣ್ಣನಾಧರಿಸಲಿಕೆ?
ಮತ್ತೆಂದಿಗೂ ನೆಲದಡಿಯೇ ಉಳಿವುದಕೆ?

ಯಾವ ಸ್ಫೂರ್ತಿಯೂ ಅಲ್ಲ,
ಯಾವ ಕೀರ್ತಿಯೂ ಇಲ್ಲ,
ಕಳುಹಿದವ ಎಳಕೊಳ್ಳುವವರೆಗಿರುವೆ.
ಇದ್ದ ನೆಲೆಯಲೇ ನಗುವೆ.

ಕಂಡರೆಷ್ಟು, ಬಿಟ್ಟರೆಷ್ಟು,
ಮೆಚ್ಚೆನಗೆ ನನ್ನ ಪಾಲಿಷ್ಟು.

ಕಲ್ಲಂತಿರುವುದೂ ನಿಜವೇ,
ಕಲ್ಲಲ್ಲದಿರುವುದೂ ನಿಜವೇ..
ಸತ್ತಂತಿರುವುದೂ ನಿಜವೇ,
ಹಸಿರಡಗಿಸಿರುವುದೂ ನಿಜವೇ...

ತಲುಪಿದವರಷ್ಟೇ ಮುಟ್ಟಿ,
ಮುಟ್ಟಿದವರಷ್ಟೇ ಅರಿತಾರು
ಹಾದು, ತುಳಿದು ಹೋಗುವಗೆ
ಅನುಪಸ್ಥಿತಿಯೇ ನನದು

ಬಾಳ್ವೆಯೆಂದರೆ
ಬಾಳುವುದಷ್ಟೇ..
ಹಿಂದುಮುಂದಿನದೆಲ್ಲ
ಹಿಂದುಮುಂದಿಗೆ ಬಿಟ್ಟು..
ಇಂದಿನಲಿ, ಈ ಕ್ಷಣದಲಿ..."

ಭಾರ ಹೆಜ್ಜೆಯದು ಗಾಳಿಪಟವಾಗಿ
ನೆಲದಡಿಯ ಬಾಳ್ವೆಯ ಸೂತ್ರ ಕಟ್ಟಿ
ಕೆಳಗಿನ್ನೆಂದೂ ಇಳಿಯದ ನಗೆಯ
ತೃಪ್ತಿಯಾಗಸವ ಮುಟ್ಟಿತು...

2 comments:

  1. ಹೊಕ್ಕರಷ್ಟೇ ತೆರಕೊಳ್ಳುವ
    ಕಣ್ಕಟ್ಟಿಸುವ ಹಲ ಮಜಲಿವೆ ಬಾಳಲಿ...
    ಖಂಡಿತ ಮನನ ಮಾಡಿಕೊಳ್ಳಲೇಬೇಕಾದ ಅವಶ್ಯಕ ಸಾಲುಗಳು.

    ReplyDelete