Thursday, January 17, 2013

ಜ್ಞಾನದೆತ್ತರಕೇರುವಾ


------------------

ಭಾವಕೆಲ್ಲಿಯ ಸರಳತೆ, ಕ್ಲಿಷ್ಟತೆ?

ಸಹಜಜನಿತ ಅದು ಆತ್ಮಪ್ರೇರಿತ.

ಸಲಿಲಧಾರೆ ಒಮ್ಮೊಮ್ಮೆ,

ಲಾವಾರಸ ಒಮ್ಮೊಮ್ಮೆ.

ಸ್ಫುರಿತ ಬಿಂದುವೂ ಬಾಧ್ಯವಲ್ಲ,

ಅಭಿವ್ಯಕ್ತಿಗೆ ತಿದ್ದುಪಡಿ ಶಕ್ಯವಲ್ಲ.



"ನಾನರಿತುದಷ್ಟೆ ನಿಜ,

ತಲೆತಾಗಿ ಹೋದುದು ಅಸಹಜ"

ಎಂಬವರೇ,

ಕಬ್ಬಿಣದ ಕಡಲೆ ನಮಗೆ,

ಕರಗಿ ನೀರದು ಅಗ್ನಿಜ್ವಾಲೆಗೆ.

ಹಲ್ಲ ಪುಡಿ ಮಾಡುವ ಕಲ್ಲು,

ಧೂಳುಪುಡಿ ಯಂತ್ರದ ಹಲ್ಲಿಗೆ.



ಅಗ್ನಿಗನ್ನವಷ್ಟೇ ಪ್ರಪಂಚವಲ್ಲ,

ಯಂತ್ರದ ಭಾಷೆ ಬರೀ ಅಕ್ಷರವಲ್ಲ.

ಭಿನ್ನ ಕಣಕಣದ ರಚನೆ, ಸಂಯೋಜನೆಯಿರೆ

ಉದ್ದೇಶ, ಫಲಿತಾಂಶ ಒಂದೆಸಮ ಹೇಗೆ?!



ಲೋಕ ನಮ್ಮ ತಣಿಸಲಿಕಲ್ಲ,

ನಾವಲ್ಲಿ ದಣಿದು ತಣಿಯಬೇಕು.

ಗಡಿ ನಾವೇ ಬರೆದುಕೊಂಡಲ್ಲ,

ಮಿತಿಯಿರದುದ ಗುರಿಯೆನಬೇಕು.

ನಿಂತಲ್ಲಿಗೆ ಗಂಗೆ ತಾ ಬರಳು,

ಅತ್ತ ಸಾರುವ ಸಾಧನೆ ಬೇಕು.



ಲೋಕ ತನ್ನ ತಣಿಸದ್ದು,

ಗುರಿ ತನ್ನ ಗೆರೆ ಹೊರಗಿನದು,

ಗಂಗೆ ತಾ ಮೀಯದ್ದು,

ನಿರರ್ಥಕವೆಂದಾದೀತೇ?!



ಬನ್ನಿ ಸಾಗುವ,

ಅರಿವಾಗದುದ ಅರಿವತ್ತ.

ಜ್ಞಾನವೊಂದು ಮುಕುಟಮಣಿ

ಜರೆತವದ ಕೆಳಗಿಳಿಸದು.

ಅವನಿತ್ತ ಸಾಕಷ್ಟರಲಿ ಅಷ್ಟೆಷ್ಟೋ ಬಳಸಿ

ಮೇರುವ ಕುಬ್ಜವೆನ್ನದೆ,

ಅದರೆದೆತ್ತರಕೇರುವಾ.









1 comment:

  1. ಕುವೆಂಪುರವರು ರಾಮಾಯಣದರ್ಶನಂ ನಲ್ಲಿ ಬರೆದಂತೆ ನಿಮಗೆ ಹೊಸಗನ್ನಡದಲ್ಲಿ ಬರೆಯುವ ಸಾಮರ್ಥ್ಯವಿದೆ. ಒಂದು ದೊಡ್ಡ ಕಾವ್ಯವೊಂದನ್ನು ಬರೆದುಬಿಡಿ.

    ReplyDelete