Wednesday, January 30, 2013

ಬರೆದೂ ಬರೆದಂತನಿಸದೆ....


----------------------

ಒಣಒಣ ಬಣಬಣ ಹಾಳೆ,

ಒಳಗಿನ ನೂರರಲೊಂದೂ ಹೊರಬರದು.

ತಡೆಗೋಡೆ ಕೆಡವುವ ಪರಿಯೆಂತೋ,

ಕೈಹಿಡಿದೆಳೆತರುವ ತಂತು ಎಲ್ಲೋ,



ಇಬ್ಬನಿಯಿಂದ ಮಸಣದ ಗೋರಿವರೆಗೆ,

ಎಲ್ಲ ಬರೀ ಅಕ್ಷರಗಳಾಗಿ ಭ್ರಮನಿರಸನ.

ನೋಡಿದ್ದು, ಕೇಳಿದ್ದು, ಅನುಭವಿಸಿದ್ದು,

ಭಾವಗಳಾಗುತ್ತಿಲ್ಲ, ಬಣ್ಣ ತುಂಬುತಿಲ್ಲ.



ಲೇಖನಿಯಳುತಿದೆ ಜೀವ ಬಸಿದು

ತಾ ಚೆಲ್ಲಿದ ಹನಿಹನಿ ವ್ಯರ್ಥವಾದುದಕೆ.

ಹಾಳೆಯೂ ಅಳುತಿದೆ ತುಂಬಿದೊಡಲು

ಬರೀ ದಾಕ್ಷಿಣ್ಯಕ್ಕೆ ಬಸುರಾದುದಕೆ.



ಕೊಡವಿ ಕಿತ್ತೆಸೆವ ಕ್ಷಣಿಕ ಹತಾಶೆ

ಖಾಲಿಯಾಗಲಾಗದ ಭಾವಬಿಂದಿಗೆ

ತುಳುಕಿ ಹೊರಚೆಲ್ಲಿದ ಹನಿಹನಿ

ಅಳತೆಗೆ ಸಿಗದುಳಿದ ಬರೀ ನಿರಾಸೆ.



ತಲುಪುವ ಯತ್ನವಿರದ ಸಂವೇದನೆ,

ಬಗೆಹರಿಸುವ ಗುರಿಯಿರದ ಸ್ಪಂದನೆ,

ಆಳಕಿಳಿಯದ ನೋಟ ಮತ್ತದರ ನಿವೇದನೆ,

ಸಂವಹನ ಸಾಧಿಸದ ಮೂಕ ನಿರೂಪಣೆಯಷ್ಟೇ.



ಕೈಚೆಲ್ಲಿ ಕೂತಿದ್ದ ಸಾಮರ್ಥ್ಯ

ಹುಡುಕ ಹೊರಟಿದೆ ಸಾರ್ಥಕ್ಯ

ಬರೆವ ಕರಗಳಿಗಷ್ಟು ಸ್ವಾತಂತ್ರ್ಯ

ಬರೆಸುವ ಮನಕೊಂದಷ್ಟು ಸತ್ಯ.





No comments:

Post a Comment