Tuesday, January 22, 2013

ನಿಜವೇ ಕದ ಬಡಿದಾಗ....


-------------------------

ತಲೆಬಾಗಿಲಲೇನೋ ಅಸ್ಪಷ್ಟಸದ್ದು,

ಕದ ಬಡಿದದ್ದೇ?.. ಅಪ್ಪಣೆ ಬೇಡಿದ್ದೇ?



ಮನಸು ಏಳುಸುತ್ತಿನ ಕೋಟೆಯರಮನೆಗೆ

ರಾಜಕುಮಾರಿ, ಏಳುಸುತ್ತಿನರಳು ಮಲ್ಲಿಗೆ.

ಇಂದು ಹಲಕಾವಲಿಬಿಗಿಸುರಕ್ಷೆಯೊಳಗೆ.



ಅಂದಿನಂತೆ ಒಂದಷ್ಟೇ ಅಲ್ಲ, ಅದಿನ್ನಾರು ದಾಟಿ,

ನೂರು ಪ್ರಶ್ನೆಯ, ಸಂಶಯದ ಪರಿಹಾರವಾಗಿ,

ಬೇಡ-ತಡೆಗಳ ಹಾರಿ, ನಿರುತ್ಸಾಹ ತೂರಿ ಬರಬೇಕು.



ಕಲಿತ ಪಾಠ ಕಟ್ಟಿದೆ ಗಟ್ಟಿ ಗೋಡೆಯ ಭದ್ರ ಕೋಟೆ,

ಸಲೀಸಾಗಿ ಧುಮುಕಿದ್ದರ ಗಾಯದ ಗುರುತಲ್ಲೇ ಇದೆ.

ಸುಳ್ಳುನಿದ್ದೆಯ ಹಾಸಲಿ ನೆನಪು ಬೋರಲು ಮಲಗಿದೆ.



ನಗುವಂದು ಮೆಚ್ಚಿ ಬಾಗಿಲಲಿತ್ತು ಚಾಚಿ ಹಸ್ತ ಸ್ನೇಹಕೆ,

ಮರುಳು ಮನ ತಲೆಬಾಗಿಲಲೆ ಹಸಿದ ತಿರುಕನಂತೆ,

ತನನೊಡ್ಡಿಕೊಂಡಿತ್ತು, ನಂಬಿಕೆಯೆ ಮೂರ್ತಿವೆತ್ತಂತೆ.



ಭಿಕ್ಷೆಯಾಗಿ ಬಿದ್ದೊಳನಡೆದು ಆರ್ದೃತೆಯಲಿ ಮಿಂದೆದ್ದು,

ಕಾಲ ಮೈಯ್ಯೊರೆಸಿರೆ ಬಣ್ಣ ಕಳಚಿ ನಿಜರೂಪವಲ್ಲಿತ್ತು.

ನಗು, ಮೆಚ್ಚುಗೆ, ಸ್ನೇಹವೊಂದೂ ಅಲ್ಲ, ಬರೀ ನೋವದಾಗಿತ್ತು.



ಬಾಡಿದ ನಂಬಿಕೆ ಮತ್ತೆ ಚಿಗುರದೆ,

ಅಮೃತವೂ ವಿಷದ ಛದ್ಮವೇಷವೆನಿಸಿದೆ.

ಯಾರು ಬಂದವರು..ತಲೆಬಾಗಿಲ ಬಳಿಸಾರಬೇಕಿದೆ...



ಅರೇ..! ಇಂದು ನೋವೇ ಬಂದಿದೆ.

ಆಳದಿಂದೊಳದನಿ :"ಇದು ದಿಟವೆನಿಸುತಿದೆ"

ದಿಟವೇ...

ಏಳು ಬಾಗಿಲ ದಾಟಿಯೂ ಅದು ಸೋತಿಲ್ಲ,

ಭಾವನದಿಯಲಿ ಮಿಂದೂ ಬಣ್ಣ ಬದಲಾಗಿಲ್ಲ,

ಎಂದಿನಂತೆ ಮನವೀಗ ಹಿಂಜಾರುತಿಲ್ಲ,

ನಿಜವನಪ್ಪಿ, ಒಪ್ಪಿ ಮಲಗಿದೆ ಬೆಚ್ಚಗೆ ಹೊದ್ದು


ನನ್ನದಿದು, ಇದ ದಾಟಿ ಚುಚ್ಚುವದ್ದೇನೂ ಇಲ್ಲವೆಂದು.








No comments:

Post a Comment