Friday, January 18, 2013

ಕೈಮೀರಿದ ಸತ್ಯ


-----------------------

ಇಂದೇಕೋ ಎಂದಿನಂತಿಲ್ಲ

ನಿನ್ನೆಯೇ ಮುಂದುವರಿದಂತೆ,

ಅದಲ್ಲೇ ಸತ್ತ ಭ್ರಾಂತಿ ಸತ್ತಂತಿದೆ.



ಬೆಳಗು ಹೊಸತೆನಿಸದೆ,

ಕತ್ತಲ ವೃದ್ಧಾಪ್ಯದ ಖಾಲಿತನದಂತೆ,

ಮುಗಿವ ಕ್ಷಣದ ನಿರೀಕ್ಷೆ ಹೊತ್ತಂತಿದೆ.



ಜಗದ್ದು ತಡೆ ಇರದ ನಡಿಗೆ.

ಕಾಲೂರುವೆನೆಂದರು ಬಿಡದು,

ಸದ್ದಿರದೆ ಜೊತೆಯ್ಯುವ ಗುಪ್ತಗಾಮಿನಿ.



ಹೆಜ್ಜೆಗಳಿಗರಿವಿಲ್ಲ,

ನಡೆಯದ ಸ್ತಬ್ಧತೆಯೆನಿಸುವುದು

ಅಲೆಯಡಿ ಮರಳಲಿ ಹೂತ ಪಾದದ ಭ್ರಮೆ..



ತಟದ ಮರಳಕಣದ್ದೂ

ಎದೆಯ ಆಸೆಗಳದೂ ಒಂದೇ ಲೆಕ್ಕ.

ಸಾಗರ, ಮತ್ತೆದೆಯೊಳಗದೇ ಸುಭಿಕ್ಷದಾಹ .



ಇದ್ದುದರ ನಡುವೊಂದು ಹುಡುಕಾಟ,

ಪ್ರಾಪ್ತಿ ಪೂರ್ತಿಯಲ್ಲದ ಪರದಾಟ,

ಮಹತ್ತರ ಸಾಧನೆಯ ತಡಕಾಟ.



ಓ ಮನಸೇ,

ಆಗದು, ಆದರೂ ನಿಂತೊಮ್ಮೆ.

ಮೌನದೊಳ ಹೊಕ್ಕೊಮ್ಮೆ,

ಅನಿಸದೇನು ಈಗ ಹೀಗೆ?



ಮುಟ್ಟಿದ್ದೂ, ಮುಟ್ಟಬೇಕಾದ್ದೂ ಸುಳ್ಳು,

ವಶವಲ್ಲದ, ನಿನಗರಿವಿಲ್ಲದ ಆದರೂ

ನಿನದೇ ಆದ ಹೆಜ್ಜೆನಡಿಗೆಯಷ್ಟೆ ಸತ್ಯ.

ಈ ಕ್ಷಣ ಅದೂರಿದ ಬಿಂದುವಷ್ಟೆ ಸತ್ಯ,

ಅರಿವು ಸಾಗುವ ರೇಖೆಯಲ್ಲ,

ಅಜ್ಞಾನವೆಂಬ ವೃತ್ತವೂ ಅಲ್ಲ.

2 comments:

  1. ತಾತ್ತ್ವಿಕ ವಿಚಾರಗಳನ್ನು ಪದಗಳಲ್ಲಿ ಸೆರೆಹಿಡಿದು ಕವಿತೆಯಾಗಿಸುವ ನಿಮ್ಮ ಸಾಮರ್ಥ್ಯ ನನಗೆ ಇಷ್ಟವಾಯಿತು

    ReplyDelete
  2. ನಿಜ ಬದುಕು ಕೈ ಮೀರಿದ ಸತ್ಯ! ಅದು ನೀವು ಹೇಳುವಂತೆ,

    ಅರಿವು ಸಾಗುವ ರೇಖೆಯಲ್ಲ,

    ಅಜ್ಞಾನವೆಂಬ ವೃತ್ತವೂ ಅಲ್ಲ.

    ReplyDelete