Sunday, June 16, 2013

ಹಾಗೇ ಸುಮ್ಮನೆ ಅವನಿಗೊಂದಷ್ಟು ಅವಳ ಮಾತುಗಳು


   ಬಿರುಸಾದ ಗಾಳಿ, ಹಿತವೂ ಅಲ್ಲದ ಅಹಿತವೂ ಅಲ್ಲದ ಶೈತ್ಯ, ಬಿಸಿಲ ಸುಳಿವೇ ಇಲ್ಲದೊಂದು ಹಗಲು, ಸುತ್ತಲಿನ ಸಂಬಂಧಗಳ ಸಂತೆಯಲ್ಲಿ ನನ್ನ ಭಾಗವಹಿಸುವಿಕೆಯ ಮೌನ, ಅಲ್ಲಿನ ಆಪ್ತತೆಯೆಡೆ ನನದೊಂದು ವಿಚಿತ್ರ ಉದಾಸೀನ, -ನಿಜವಾಗಲೂ ಜಾಡ್ಯಕ್ಕೋ, ಮಂಪರಿಗೋ ಹೀಗೆಯೇ ಒಂದು ಅಸ್ವಾಭಾವಿಕತೆಗೆ ಎಡೆ ಮಾಡ್ಕೊಡಬೇಕಾಗಿತ್ತು..ಆದರೆ ಇಂದು ಮನದಲ್ಲಿ ಹುಡುಕಿದರೂ ಅಸಹನೀಯವಾದದ್ದಕ್ಕೆ ಒಂದಿಷ್ಟೂ ಜಾಗವಿಲ್ಲ. ಯಾಕಿರಬಹುದು?! ಕ್ಷಣಕ್ಕೊಂದಷ್ಟರಂತೆ ಹಲವು ವಿಷಯಗಳು ಮನಃಪಟಲದಲ್ಲಿ ಹಾದುಹೋದವು. ಆದರೆ ಮುಚ್ಚಿದ ಕಣ್ಣ ಮುಂದಿದ್ದುದೊಂದೇ ಅಸ್ಪಷ್ಟ ಬಿಂಬ, ಅದು ನಿನ್ನದು. ನಿನ್ನೆಯಷ್ಟೇ ರಾತ್ರಿ  ಸುಂದರಸ್ವಪ್ನವಾಗಬಹುದಾದದ್ದು ನಿನ್ನಿಂದ ಎಷ್ಟು ಹೊತ್ತಿಗೆ ಮುಗಿದೀತೋ ಅನ್ನುವ ಭಯಂಕರತೆಯಿಂದ ಕೂಡಿತ್ತು ಅಂತ ದೂರಿದವಳೇನಾ ನಾನು, ಅನ್ನುವುದು ನನದೇ ಆಶ್ಚರ್ಯ.

   ಇರಲಿ ಬಿಡು, ನಿನ್ನ ಬಗೆಗೆ ಯೋಚಿಸಿದಾಗಲೆಲ್ಲಾ ನನಗೆ ಹೊಳೆಯುವುದು ಕವನ, ಅದೆಷ್ಟು ಬರೆದೆನೋ, ಅದೆಷ್ಟು ಅಳಿಸಿದೆನೋ, ಅದೆಷ್ಟು ಅರ್ಪಿಸಿದೆನೋ, ಅದೆಷ್ಟು ಅಡಗಿಸಿದೆನೋ ನನಗೇ ಲೆಕ್ಕ ಇಲ್ಲ. ಆದರೆ ಒಂದಂತೂ ನಿಜ, ನಾನೆಂದರೆ ಅದಷ್ಟೇ ಅಲ್ಲ, ಇದೂ ಹೌದು ಎಂದು ನನ್ನ ವ್ಯಕ್ತಿತ್ವದ ಅಡಗಿ ಕೂತಿದ್ದೊಂದು ಮಗ್ಗುಲನ್ನು ನನಗೆ ಪರಿಚಯಿಸಿಕೊಟ್ಟ ಇರುವು ನಿನ್ನದು. ನಿನ್ನೆಯೂ ನಿದ್ದೆ ದೂರ ಹೋದಾಗ, ಹಿಡಿಯ ಬಯಸಿ ನಾನೂ ಓಡಿಓಡಿ ಸಾಕಾಗಿ ಬಸವಳಿದಲ್ಲೇ ನಿಂತಾಗ ಹೊಳೆದದ್ದು ಮತ್ತೆ ಒಂದಷ್ಟು ಸಾಲುಗಳು. ಆ ಸೋತುಹೋದ ಗಳಿಗೆಯ ಮಾತುಗಳನ್ನೇನು ಕೇಳುತ್ತೀಯ ಬಿಡು. ಹೇಳುವುದೇನು ಬಂತು, ನಾನವನ್ನು ಹಾಳೆಯ ಮೇಲುದುರಲೂ ಬಿಡದೆ, ಹೊಸಕಿಹಾಕಿದೆ. ಯಾಕೋ, ತಂಗಿ ಆರು ತಿಂಗಳ ಮಗುವಾಗಿದ್ದಾಗ ಬಂದ ಅಮ್ಮನ ಬಸುರನ್ನು, ಅಸಮರ್ಪಕ ಮುಟ್ಟಿನ ಕಾರಣ ಮೊದಲು ಗಮನಕ್ಕೆ ತಂದುಕೊಳ್ಳದೆ, ಕೊನೆಗೆ ಮೂರು ತಿಂಗಳು ತುಂಬಿ, ತೆಗೆಸಲೇಬೇಕಾದಾಗ, ವೈದ್ಯೆ ಅಮ್ಮನ ಹೊಟ್ಟೆಯಿಂದ ಆ ಜೀವವನ್ನು   ತುಂಡುತುಂಡಾಗಿಸಿ ಹೊರತೆಗೆದ ಪಾಶವೀ ಸಂದರ್ಭವನ್ನು ಕಣ್ಣೀರಿನ ಜೊತೆ ನೆನಪಿಸಿಕೊಳ್ಳುತ್ತಿದ್ದ ಅಮ್ಮನ ಮುಖ ನೆನಪಾಯಿತು ಮತ್ತು ಅದರೊಡನೆ ನನ್ನ ಮುಖದ ಹೋಲಿಕೆ ಮನಸಿಗೆ ಬಂತು. ಸ್ವಲ್ಪ ಉತ್ಪ್ರೇಕ್ಷೆ ಅನಿಸಿದರೂ ತೀರಾ ಅಸಹಜವೆಂದನಿಸುತ್ತಿಲ್ಲ. ನನ್ನ ಕ್ರೌರ್ಯ ಆ ಗಳಿಗೆಗೇ ಏನು, ಈಗಲೂ ನನಗರ್ಥವಾಗುತ್ತಿಲ್ಲ, ಆದರೆ ಅಪರಿಚಿತವೂ ಅನಿಸುತಿಲ್ಲ.


   ಅಂದೊಮ್ಮೆ ಕೈಗೂಡಿದ ಭ್ರಮೆ ಕಳಚಿಕೊಳ್ಳುವ ಹೊತ್ತು.. ನಾ ಕೈಗೂಡಿದ್ದುದೊಂದು ಕೈಜಾರಿ ಹೋಗುತ್ತಿದೆ ಎಂಬ ದುಃಖದಲ್ಲಿದ್ದೆ, ನೀ ಕೈಜಾರಿ ಹೋದುದರ ಅಳಲನ್ನು ಸಾಲುಗಳಾಗಿಸಿ ಬರೆಯುತಿದ್ದೆ. ಸಮಾನದುಃಖಿಗಳಲ್ಲದಿದ್ದರೂ, ದುಃಖ ಇಬ್ಬರನ್ನೂ ಬಾಧಿಸುತ್ತಿದೆ ಎಂಬೊಂದೇ ಸಮಾನತೆಯಿಂದ ಪರಿಚಯದ ಪರಿಧಿಯೊಳ ಬಂದೆವು. ಅದು ಇಂದಿನ ಬೆಳವಣಿಗೆಯೋ ಅಧಃಪತನವೋ ಗೊತ್ತಿಲ್ಲ, ಈ ಹಂತಕ್ಕೆ ನಾ ಬರಲು ವಿಧಿಸಲ್ಪಟ್ಟ ವಿಧಿವಿಧಾನ ಅಂತನೇ ನಾನಿಂದು ಹೇಳುವುದು, ಇನ್ನಾವ ಕಾರಣವನ್ನೂ ಆರೋಪಿಸಲಾರೆ. ಎದುರಾದುದು ಹೂವೋ ಹಾವೋ ಆಮೆಯಂತೆ ಚಿಪ್ಪಿನೊಳ ಸೇರಿಹೋಗುತಿದ್ದ ನನ್ನತನ ಅಂದಿನ ದಿನಗಳಲ್ಲಿ ಎಗ್ಗಿಲ್ಲದೇ ನಿನ್ನ ಕಡೆ ವಾಲತೊಡಗಿ, ಪ್ರಕಟವಾಗಿ, ತೆರೆದುಕೊಂಡು, ಮುಂದೊಂದು ಹಂತದಲ್ಲಿ ಸಮರ್ಪಿತವಾದದ್ದರಲ್ಲಿ ಯಾವ ಅದೃಶ್ಯ ಶಕ್ತಿಯ ಕೈ ಇಲ್ಲವೆಂದು ಅದು ಹೇಗೆ ಭಾವಿಸಲಿ ಹೇಳು! ಚೆಲುವಿಗಿಂತ, ಬೌದ್ಧಿಕತೆಗಿಂತ, ಪಾಂಡಿತ್ಯಕ್ಕಿಂತ, ವ್ಯಕ್ತಿತ್ವದ ಇನ್ನ್ಯಾವುದೇ ಅಂಗಕ್ಕಿಂತ ಅದರೊಳಗೆ ಹಾಸುಹೊಕ್ಕಾಗಿರುವ, ಅಡಕ ಅಥವಾ ಅಭಿವ್ಯಕ್ತ ನೋವು, ಸತ್ಯ ಮೆಚ್ಚುವವರನ್ನು ತುಂಬಾ ಆಕರ್ಷಿಸುತ್ತದೆ- ಇದು ನಾನು ನನ್ನ ಅನುಭವದ ಮೂಲಕ ಕಂಡುಕೊಂಡದ್ದು. ಯಾಕೆಂದರೆ ನೋವಿನಲ್ಲಿರುವಷ್ಟು ಸತ್ಯ ಮತ್ತು ಅದರ ಅಭಿವ್ಯಕ್ತಿಯಲ್ಲಿ ಶಕ್ತಿಯುತವಾಗಿ ಅದು ಹೊರಹೊಮ್ಮುವಲ್ಲಿನ ಪ್ರಬಲ ನೈಜತೆ, ಸಹಜತೆ ಇನ್ನೆಲ್ಲೂ ಕಂಡುಬರಲಾರದು- ಇದು ನನ್ನ ತೀರಾ ವೈಯುಕ್ತಿಕ ಅನುಭವ. ಯಾಕೆ ತೀರಾ ಅಂತ ಒತ್ತು ಅಂದರೆ ಎಂದಿನಂತೆ ಇಂದೂ ಪುನಃ ಹಾಗೇನೂ ಇರಬೇಕಾಗಿಲ್ಲ ಅಂತನೋ ಅಥವಾ ಅದು ಹಾಗಲ್ಲ ಅಂತನೋ ಅನ್ನುತ್ತೀಯ.. ನನಗೆ ಗೊತ್ತು...
   ಸಂಪರ್ಕಗಳೆಲ್ಲ ಸಂಬಂಧಗಳಾಗವೆಂಬುದು ನನ್ನ ಅನುಭವ. ಕೆಲವೊಂದು ಪರಿಚಯಗಳು ಆಪ್ತತೆಯ ಕಡೆ ಮುಖ ಹಾಕಿಯೂ ನೋಡುವುದಿಲ್ಲ, ಹೊರಳಿಕೊಂಡು, ತೆವಳಿಕೊಂಡು ಜೀವನದುದ್ದಕ್ಕೂ ಜೊತೆಗಿರುತ್ತವೆ, ಕೆಲವು ಆಪ್ತತೆಯತ್ತ ಮುಖ ಮಾಡಿ ದಯನೀಯವಾಗಿ ಯಾಚಿಸುತ್ತಲೇ ಸಾಗಿ ಬರುತ್ತವೆ, ಇನ್ನು ಕೆಲವು ಆಪ್ತತೆಯ ಆಸುಪಾಸಿನ ಇನ್ಯಾವುದೋ ಒಂದು ಘಟ್ಟ ತಲುಪಿ ಅಲ್ಲೇ ಸಂತೃಪ್ತಿ ಹೊಂದಿ ನಿಲ್ಲುತ್ತವೆ. ಕೆಲವೊಂದು ಅನೈಚ್ಛಿಕ ಕ್ಷಣವೊಂದರ ಹಿಡಿಗೆ ಸಿಕ್ಕಿ ಅಪ್ಪಚ್ಚಿಯೇ ಆಗಿ ಹೋಗುತ್ತವೆ. ಆದರೆ ಎಲ್ಲೋ ಕೆಲವು ಅಪ್ರಯತ್ನ ಆಪ್ತತೆಯನ್ನು ಬಳಿಸಾರಿ, ಹಠಾತ್ತನೆ ಅಪ್ಪುತ್ತವೆ, ಮೆಲುವಾಗಿ ಹಣೆ ಚುಂಬಿಸಿ ನಿನ್ನ ನೋವಿಗೆಂದೇ ನಾನು ಬಂದೆ ಅನ್ನುತ್ತಾ, ನೋವಿಂದ ಕುಗ್ಗಿದಾಗಲೆಲ್ಲ ಹೆಗಲಾಗಿಯೋ, ಕಣ್ಣೀರಿಗೊಂದು ಕರವಸ್ತ್ರವಾಗಿಯೋ ಒದಗುತ್ತವೆ. ಇವಿಷ್ಟರ ಬಗ್ಗೆ ಗೊತ್ತಿತ್ತು, ಇತ್ತೀಚೆಗೆ ಇನ್ನೂ ಒಂದರ ಪರಿಚಯವಾಯಿತು. ಅದೇನೆಂದರೆ ನೋವಿನ ಮೂಲಕ ಬಳಿಬಂದು ನೋವನ್ನೇ ಸೇತುವೆಯಾಗಿಸಿ ಆಪ್ತತೆಯನ್ನು ತಲುಪಿ, ಬಿಡಿಸಲಾಗದ ಬಂಧಗಳು ಅನ್ನುವುದಕ್ಕಿಂತಲೂ ಗಂಟುಗಳಾಗುತ್ತವೆ, ಬೇಕೆಂದರೂ ಬಿಡಿಸಿಕೊಳ್ಳಲಾಗದ ಕಗ್ಗಂಟುಗಳು, ಮತ್ತು ನೋವನ್ನೇ ಕೊಡುತ್ತಾ ಆಪ್ತತೆಯ ತೀವ್ರತೆ ಹೆಚ್ಚಿಸಿಕೊಳ್ಳುತ್ತವೆ. ಕಣ್ಣೀರನ್ನೀಯುತ್ತಾ ಹಣೆ ಚುಂಬಿಸುತ್ತವೆ.

   ಬಳಿಸಾರಿದ ನಿನ್ನ ನೋವನ್ನು ನಾ ಬರಸೆಳೆದಪ್ಪಿ ಮುದ್ದಿಸಿದೆ,ಎದೆಯೊಳಗೆ ಭರಪೂರ ಬೆಚ್ಚನೆಯ ಆಶ್ರಯವಿತ್ತೆ, ಮತ್ತೆ ಅಂದಿನಿಂದ ಇಂದಿನವರೆಗೆ ಅಸಾಧ್ಯ ಗೌರವದಿಂದ ನಿನ್ನನ್ನು ಪ್ರೀತಿಸುತ್ತಲೇ ಬಂದೆ. ಯಾಕೆ ...ಅನ್ನುವುದು ನನಗೇ ಗೊತ್ತಿಲ್ಲ, ಗೊತ್ತಾಗಬೇಕಿಲ್ಲ. ನನ್ನಲ್ಲಿ ಪ್ರಶ್ನೆಗಳು ಬಹುಪಾಲು ಹುಟ್ಟುವುದೇ ಇಲ್ಲ, ಹುಟ್ಟಿದರೂ ಗಲಾಟೆ ಮಾಡುವುದಿಲ್ಲ, ಉತ್ತರಕಾಗಿ ಪೀಡಿಸುವುದಿಲ್ಲ, ಕಾಯುತ್ತವೆ, ಬಲು ತಾಳ್ಮೆಸಂಯಮದಿಂದ ಕಾಯುವ ಪ್ರಶ್ನೆಗಳು ನನ್ನವು, ಒಂದುವೇಳೆ ಉತ್ತರವೇ ಸಿಗಲಿಲ್ಲ ಅಂತಿಟ್ಟುಕೋ, ಅಂಥದ್ದೇ ಒಂದೇನಾದರೂ ಕೈಗಿತ್ತರೂ ಆಟಿಕೆಯ ಮೂಲಕ ಹಳೆಯ ಹಠ ಮರೆಯುವ ಕಂದನಂತೆ ನನ್ನ ಪ್ರಶ್ನೆಗಳು. ಅದಿರಲಿ, ಆ ದಿನಗಳಲ್ಲೇ ಒಂದು ತಪ್ಪು ಮಾಡಿದೆ, ನನ್ನಮ್ಮ ಯಾವಾಗಲೂ ಹೇಳುತ್ತಿದ್ದುದನ್ನು ಮರೆತುಬಿಟ್ಟು ನಡೆದುಕೊಂಡೆ. ಅಮ್ಮ ಯಾವಾಗಲೂ ಹೇಳುವುದಿತ್ತು, "ಸಂಕಟದಲ್ಲಿರುವವರನ್ನು ನೋಡಿ ಅಯ್ಯೋ ಪಾಪ ಅನ್ನುವುದು, ಅವರ ಕಷ್ಟವನ್ನು ನಾನೇ ಹೇಗಾದರೂ ಮಾಡಿ ಕಡಿಮೆ ಮಾಡುವೆ ಎಂದು ಹೊರಡುವುದೂ ಮಾಡಿದರೆ ಆ ಕಷ್ಟ ಬಂದು ನಮ್ಮನಂಟಿಕೊಳ್ಳುತ್ತದೆ"- ಹುರುಳಿಲ್ಲದ ಮಾತೆನಿಸಿದರೂ ಅರಿವಿಗೆ ಬರಲಾರದೊಂದು ಸಾಕ್ಷಿಪೂರ್ಣ ಸತ್ಯವದರಲ್ಲಿದೆ. ಇದು ನನ್ನ ಅನುಭವಕ್ಕೂ ಬಂದಿದೆ. ನಿನ್ನ ನೋವು ನಿನ್ನ ಕಾಡುತ್ತಿದೆ, ಲೋಕದ ಅದೆಷ್ಟೋ ನಿನ್ನವರು, ನಿನಗೆ ಬೇಕಾದವರು ಮಾಡುತ್ತಿರಬಹುದಾದ ನಿನ್ನ ನೋವಿನ ಕಣ್ಣೀರನ್ನು ಸಂತೋಷದ ನಗುವಾಗಿಸುವ ಯತ್ನದಲ್ಲಿ ನನದೊಂದು ಅಳಿಲ ಸೇವೆಯಿರಲಿ ಅಂದುಕೊಂಡೆ. ನೀನೆಸೆದ ಹಲ ಬಾಣಗಳನ್ನು ನನ್ನ ಪ್ರೀತಿಯ ಮೂಸೆಯಲ್ಲಿಳಿಸಿ ಪ್ರೀತಿಯದೇ ನಮೂನೆಗಳನ್ನಾಗಿಸಿದೆ. ನೀನೆಸೆದ ಹಲ ಕಲ್ಲುಗಳಲ್ಲಿ ನನ್ನ ನಿನ್ನ ಸಂಬಂಧದ ಶಿಲ್ಪಗಳನ್ನು ಕಡೆದು ಮನಸನ್ನು ಸಿಂಗರಿಸಿದೆ. ಅಂತೂ ನಾ ಹೇಗೆ ಬಯಸಿದ್ದೆನೋ ಹಾಗೆ ನಿನಗೊದಗತೊಡಗಿದೆ. ನಿನಗದು ಬಲವಂತದ ಮಾಘಸ್ನಾನದಂಥದ್ದೇನೋ ಆಗಿದ್ದಿರಬಹುದು. ನನ್ನೊದಗುವಿಕೆ ನಿನ್ನ ಎದೆಯನ್ನು ಬಿಡು, ಆಸುಪಾಸಿನವರೆಗೂ ತಲುಪಲಿಲ್ಲ ಅನ್ನುವುದೇ ನನ್ನ ದೊಡ್ಡ ನೋವಿಗೆ ಕಾರಣವಾದದ್ದು ಆಮೇಲಿನ ಮಾತು ಬಿಡು.

   ನಾನು ನಿನ್ನ ಹಚ್ಚಿಕೊಳ್ಳುತ್ತ ನಡೆದೆ, ನೀ ಒಂದು ಕೈ ನೋಡಿ ಕಳಚಿಕೊಳುವ ಹಂತದಲ್ಲಿದ್ದೆ. ನನಗಿದು ಅರಗಲಾಗದಾಯಿತು. ದಕ್ಕುವ, ದಕ್ಕದೇ ಉಳಿಯುವ ಮಾತೆಲ್ಲಿ ಬಂತು, ನಮ್ಮ ಕೈಯ್ಯಡುಗೆಯೇ ಹೊಟ್ಟೆಗೊಮ್ಮೊಮ್ಮೆ ದಕ್ಕದೇ ಹೋಗುವುದುಂಟು, ಅಂಥದ್ದರಲ್ಲಿ ಇನ್ನೊಂದು ಜೀವ ನಮಗೆ ದಕ್ಕುವ ಮಾತೆಲ್ಲಿಯದು? ಬಹುಶಃ ನಿನ್ನರ್ಥದಲ್ಲಿ ದಕ್ಕದುಳಿದ ಕಾರಣ ನಾ ಕೂತಿದ್ದ ಜಾಗವನ್ನು ದಕ್ಕುವ ಸಾಧ್ಯತೆಯಿರುವ ಇನ್ನೊಂದು ವ್ಯಕ್ತಿತ್ವಕ್ಕಾಗಿ ನಾನು ಖಾಲಿ ಮಾಡಬೇಕು ಎಂಬ ಅಪೇಕ್ಷೆಯನ್ನು ನೀನು ವ್ಯಕ್ತ ಮಾಡುತ್ತಾ ನಡೆದೆ, ನಾನು ನನ್ನಿಂದ ಅದಾಗದು ಎಂದು ನಿನ್ನ ಮುಂದೆ ನನ್ನನುಳಿಸಿಕೊಳ್ಳಲು ಗೋಗರೆಯುತ್ತಲೇ ನಡೆದೆ. ಎಷ್ಟು ಮೂರ್ಖಳಾಗಿದ್ದೆ ನಾನು!!

   ಬರಬೇಕಲ್ಲ ಎಂದು ಬರುವದ್ದು ನನ್ನುಸಿರೇ ಆಗಿದ್ದರೂ ಅದು ಬಾರದುಳಿಯಲಿ ಎಂದು ಬಯಸುತ್ತಿದ್ದ ನಾನು ಬಲವಂತವಾಗಿ ನನ್ನುಸಿರಲ್ಲಿ ನಿನ್ನ ಆವಾಹಿಸಿಕೊಳ್ಳಲು, ನಿನ್ನ ಕುತ್ತಿಗೆಗೆ ಹಗ್ಗ ಹಾಕಿ ಎಳೆದಾದರೂ ಕರೆ ತಂದಿಲ್ಲಿ ನನ್ನೆದೆಯಲ್ಲಿ ಬಂಧಿಸಿಟ್ಟುಕೊಳ್ಳಲು, ಎಲ್ಲದಕ್ಕಿಂತ ಹೆಚ್ಚಾಗಿ
ನಿನ್ನ ನೋವಿಂದ ಪಾರಾಗುವಲ್ಲಿ ನಾನು ಉಪಯೋಗಕ್ಕೆ ಬರಬಲ್ಲೆನೇ ಎಂದಷ್ಟೇ ಯೋಚಿಸುತ್ತಿದ್ದ ನಿನ್ನ ನೇರ ಮನಸನ್ನು ನನ್ನ ವಕ್ರ ಸಾಲುಗಳೊಳಗೆ ಪ್ರತಿಷ್ಠಾಪಿಸಿ ಅತಿ ಆದರ್ಶದ ವೇಷ ಮೆತ್ತಬಯಸಲು ನನ್ನ ಕವನಗಳನ್ನು ಉಪಯೋಗಿಸಿಕೊಂಡು ಬಿಟ್ಟೆ.. ಶತಾಯಗತಾಯ ನನಗೆ ನೀನೇನೋ, ಅದೇ ನಿನಗೆ ನಾನೆಂದು ಸಾಧಿಸಹೊರಟು ನನ್ನನ್ನೇ ನನಗೆ ಅಪರಿಚಿತ ಸ್ಥಾನಕೊಯ್ದುಬಿಟ್ಟಲ್ಲಿ ನಿಲ್ಲಿಸಿ, ಮತ್ತೆ ನನ್ನ ಆ ಅಸಹಾಯಕತೆಗೆ ಯಾರನ್ನು ದೂರಲಿ ಎಂದು ಯೋಚಿಸುತ್ತಿದ್ದೆ. ಎಂಥಾ ಮೂಢತನವಲ್ಲವೇ?
   ಪ್ರತಿದಿನ ಮುಂಜಾನೆ ಧ್ಯಾನದ ಹೊತ್ತು ನಾನು ನನ್ನ ಶಕ್ತಿಯನ್ನು ಕುರಿತು ಚಿಂತಿಸುವಾಗ ಮನಸನ್ನು ತೀರಾ ಕಟ್ಟುಪಾಡಿಗೊಳಪಡಿಸಿ ಬಲುನಿಯಂತ್ರಿತ ಅನಿಸುವ ಬದಲು ಆಚೀಚೆ ಓಡಾಡ ಬಿಟ್ಟು, ತೀರಾ ಅಪಾಯದ ಮಗ್ಗುಲಲ್ಲಿ ಅದನ್ನು ಹಗ್ಗ ಹಿಡಿದೆಳೆದು ಇತ್ತ ತರುವಲ್ಲಿ ಒದಗು ಅಂತ ಆದೇಶಿಸುತ್ತಿದ್ದೆ. ಯಾಕೆಂದರೆ ನನ್ನ ಮನಸನ್ನು ನಾನು ತುಂಬಾ ಪ್ರೀತಿಸುತ್ತೇನೆ ಮತ್ತು ನಂಬುತ್ತೇನೆ. ಜಗತ್ತಿನ ನಾ ಕಂಡ ಅತಿ ಸುಂದರ ವಿಷಯಗಳ ಪೈಕಿ ಅದೂ ಒಂದು. ಜೊತೆಗೆ ತಾ ನೊಂದಾದರೂ ಇತರರನ್ನು ನೋಯಿಸುವುದಿಲ್ಲ ಅಂತ ಅತಿ ಪ್ರಾಮಾಣಿಕವಾಗಿ ಪ್ರಯತ್ನಿಸುವ ಸೂಕ್ಷ್ಮಪ್ರಕೃತಿಯದ್ದದು. ನನ್ನ ಆದೇಶವು ಕೈಗೂಡಿದ್ದು ನಿನ್ನೆ ನನ್ನ ಅನುಭವಕ್ಕೆ ಬಂತು ನೋಡು.

   ರಾತ್ರಿ ನಿದ್ದೆ ಬರದ ಕಾರಣ, ನನ್ನ ನಿನ್ನ ನಡುವಿನ ಗೋಡೆಯೊಂದರ ಮೇಲೆ ಇಂದಿನ ನನ್ನ ನೋವಿನ ಕಾರಣವನ್ನಾರೋಪಿಸಿ ಕವನ ರಚಿಸತೊಡಗಿದೆ. ಹಠಾತ್ತನೆ ಅವರಿವರಲ್ಲಿ, ಅದರಿದರಲ್ಲಿ ನನ್ನ ಇಂದುಗಳ ಕುರೂಪಕ್ಕೆ ಕಾರಣ ಹುಡುಕುವ ಬಗ್ಗೆ ನನಗೆ ಅಸಹ್ಯವೆನಿಸಿತು. ಅಂದಗೆಡಿಸಿಕೊಂಡ ವರ್ತಮಾನ ನನ್ನದು, ಅಂದಗೆಡಿಸಿದ್ದು ನಾನು, ಮತ್ತೊಮ್ಮೆ ಅಂದವಾಗಿಸಲು ಸಾಧ್ಯವಿರುವುದಾದರೆ ಅದೂ ನನಗಷ್ಟೇ ಅನಿಸಿತು.
ಅಷ್ಟೇ...ಏನೋ ಅದಮ್ಯ ಚೈತನ್ಯ ಒಳಹೊಕ್ಕಂತಾಯಿತು. ಇದು ಈ ಗಳಿಗೆಗೆ ಅಗತ್ಯವೂ ಹೌದು ಮತ್ತು ಪ್ರಶಸ್ತವೂ ಹೌದು. ಮತ್ತೇನೂ ಯೋಚಿಸಲಿಲ್ಲ. ಹಾಗಾಗಿ ಈಗ ನಾನು ಮತ್ತೆ ನನ್ನ ಇಂದನ್ನು ಸಿಂಗರಿಸುವ ಕಾಯಕದಲ್ಲಿದ್ದೇನೆ. ಪ್ರಯತ್ನಿಸುತ್ತೇನೆ
ಚುರುಕು ಕಳಕೊಂಡಿರುವ ಕೈ, ಮಂದವಾಗಿರುವ ಸೌಂದರ್ಯದ ಪ್ರಜ್ಞೆ, ಮಂಕಾಗಿರುವ ಮನಸುಗಳ ಜೊತೆ ಕ್ರಮಿಸಬೇಕಾದ ಹಾದಿ ತುಂಬಾ ಉದ್ದವಿದೆ, ದುರ್ಗಮವಾಗಿರುವಂತೆಯೂ ಇದೆ, ಆದರೆ ನಿಷ್ಠಾವಂತ ಪ್ರಯತ್ನ ಮತ್ತು ನನ್ನ ಇಂದು ನನ್ನ ಕೈಯ್ಯಲ್ಲೇ ಇದೆ, ಅಲಂಕರಿಸಲು ಬೇಕಾದ ಆಸಕ್ತಿಯೂ ತಾಜಾಸ್ಥಿತಿಯಲ್ಲಿದೆ. ಈಗ ಮತ್ತು ಇನ್ನು ಮುಂದೆ ಅನ್ಯರ ನೋವು ಸಂಕಟಗಳಿಗೆ ಒದಗುವ ಮಹಾನತೆಯನ್ನು ಕಳಚಿಕೊಂಡು ಆ ಜಾಗದಲ್ಲಿ ನನ್ನ ಉದ್ಧಾರಕ್ಕೆ ಬೇಕಾಗುವ ಪುಟ್ಟಪುಟ್ಟ ಪ್ರಯತ್ನಗಳನ್ನಿಡಲು ಬಯಸುತ್ತೇನೆ.
   ಹಾಗಾಗಿ ನಿನ್ನ ಮೇಲಿನ ನನ್ನ ಪ್ರೀತಿಯನ್ನು ಇಷ್ಟು ಹೊತ್ತೂ ಬಗೆಬಗೆಯ ರೂಪಗಳೊಳಗೆ ಹೊಗಿಸಿ, ನನ್ನ ಹಲವು ನಿರೀಕ್ಷೆಗಳ ಮಟ್ಟಕ್ಕದನ್ನೇರಿಸಲು ಒತ್ತಾಯಿಸಿ ಸತಾಯಿಸಿದ್ದು ಸಾಕು, ಇನ್ನು ಕೆಲ ಹೊತ್ತು ಅಲ್ಲೇ ನನ್ನೆದೆಯ ತೊಟ್ಟಿಲಲ್ಲಿ ಲಾಲಿ ಹಾಡಿ ಮಲಗಿಸುತ್ತೇನೆ. ಅದು ವಿಶ್ರಾಂತಿಯಿಂದೇಳುವಾಗ ನನ್ನ ಇಂದು ಸುಂದರವಾಗಿ ಅಲಂಕರಿಸಲ್ಪಟ್ಟಿರುತ್ತದೆ, ಆ ಅಂದದಲ್ಲಿ ಅದು ಮುಕ್ತವಾಗಿ ಬಾಳಲಿ.

12 comments:

  1. ಅನು ಅಕ್ಕಾ,
    ಚೆನ್ನಾಗಿದೆ ಅವನೊಟ್ಟಿಗಿನ ಅವಳ ಮಾತು.
    ಬರಿಯ ಅವನಿಗೆ ಉಳಿಸದೇ ಓದುಗರ ಮನದಲ್ಲೂ ಅಚ್ಚೊತ್ತಿ ಬಿಟ್ರಿ ಈ ಭಾವವನ್ನ .

    ಪೀಡಿಸದೇ ಕಾಯೋ ಪ್ರಶ್ನೆಗಳ ಬಗೆಗೊಂದು ಆಶ್ಚರ್ಯ ಆದದ್ದು ಸುಳ್ಳಲ್ಲ .
    ಯಾಕಂದ್ರೆ ಪ್ರಶ್ನೆಗಳು ಯಾವಗ್ಲೂ ನನ್ನ ಕಾಡಿಸುತ್ಲೇ ಇರುತ್ತೆ .
    ಈ ಭಾವ ನಂಗೂ ಮಾದರಿ :)

    ಬರೀತಾ ಇರಿ

    ReplyDelete
    Replies
    1. ಥ್ಯಾಂಕ್ಸ್ ಪುಟ್ಟೀ, ಇದೇ ಭಾವ ಕವನವಾಗಿ ಬಂದಿದ್ರೆ ಬಹುಶಃ ಭಾಗ್ಯ ಒದುತ್ತಿರಲಿಲ್ಲ್ವೋ ಏನೋ, ಅಥವಾ ಓದಿದರೂ ಇಷ್ಟ ಆಗ್ತಿರಲಿಲ್ಲ್ವೋ ಏನೋ ಅಲ್ಲ್ವಾ... ಆಮೇಲೆ ಭಾಗ್ಯಾ, ಇದು ಯಾವುದೋ ಒಂದು ವ್ಯಕ್ತಿ ಅವನು ಅಥವಾ ಅವಳ ಜೀವನದ ಅಂಗ ಅಲ್ಲಮ್ಮಾ.. ಓದುಗರು, ಓದದವರು ಎಲ್ಲರ ಮಧ್ಯೆ ಅದೆಷ್ಟೋ ಮಂದಿ ಇದನ್ನೇ ಹೇಳಬಯಸುವ ಅವಳು ಅನ್ನುವವರಿರಬಹುದು, ಎಷ್ಟೋ ಮಂದಿ ಉದ್ದೇಶಿಸಲ್ಪಡುವ ಅವನು ಅನ್ನುವವರಿರಬಹುದು... ನೀನು ತುಂಬಾ ಬರೀತೀಯಾ, ಭಾವನಾಜೀವಿಯೂ ಹೌದು.. ಹಾಗಾಗಿ ನಿನಗೂ ಖಂಡಿತಾ ಇದು ಗೊತ್ತಿದೆ, ಆದರೂ ಹೇಳ್ತೀನಿ.. ಬರೆಯುವಾಗ ಎದುರಿಗೆ ಬಂದ ಭಾವ ಅಥವಾ ಒಳಗೇ ಹುಟ್ಟಿದ ಭಾವಗಳು ನಮ್ಮ ಕಲ್ಪನೆಯ ಮೂಸೆಗಿಳಿದು ಬರವಣಿಗೆಯ ರೂಪ ತಾಳುತ್ತವೆ ಅಲ್ಲವಾ, ಹಾಗೆ ಇದು ಒಂದು ಗಳಿಗೆ ಎದುರಾದ ಅವಳ ಭಾವದ ಮಾರ್ಪಾಟಾದ ರೂಪವೂ ಇರಬಹುದು ಅಥವಾ ಅದು ಹೀಗೆಯೇ ಇದ್ದಿರಲೂ ಬಹುದು, ನನಗೆ ಹೊಳೆದು ನಾನು ಬರೆದದ್ದು ಯಾವುದೂ ಅವನೊಬ್ಬನಿಗೆ ಅಥವಾ ಅವಳೊಬ್ಬಳಿಗೆ ಅಂತ ಉಳಿಯುವ ಪ್ರಶ್ನೆಯೇ ಇಲ್ಲ, ಹಾಗೆ ಉಳಿಯಬೇಕಾದದ್ದು ನನ್ನೊಳಗೆ ಬರೀ ಭಾವವಾಗಿ ಉಳಿದಿರುತ್ತದೆ, ಬರಹವಾಗುವುದಿಲ್ಲ. ಮತ್ತೆ ಪ್ರಶ್ನೆಗಳು ಕಾಯದೇ ಉಳಿಯುವ ಬಗ್ಗೆ, ಕಾಯಬೇಕು ಇನ್ನೂ ನೀನು, ಹುಟ್ಟುವ ಪ್ರಶ್ನೆಗಳೆಲ್ಲ ತಮಗೆ ಉತ್ತರ ಸಿಗದು ಅನ್ನುವ ಸತ್ಯ ನಿಧಾನಕ್ಕೆ ಗೊತ್ತಾದ ಮೇಲೆ, ವಯಸು ಮಾಗುತ್ತಾ, ಅವೂ ಮಾಗುತ್ತವೆ, ಮೆತ್ತಗಾಗುತ್ತವೆ ಮತ್ತೆ ಒಂದು ಹಂತದಲ್ಲಿ ಮೂಡಹೊರಟು, ಮೂಡಿದವುಗಳು ಕಾಡಹೊರಟು ಸುಮ್ಮನಾಗುತ್ತವೆ, ಕಾಡಿ ನೋಯಿಸಿ ನೋಯುವ ವ್ಯರ್ಥ ಪ್ರಯತ್ನಕ್ಕಿಂತ ಕಾಯುವದೇ ಮೇಲು ಅನ್ನಿಸುತ್ತದೆ, ಹಾಗಾಗಿ ಸುಮ್ಮನಾಗುತ್ತವೆಯೇ ಹೊರತು ಇದು ಅನುಅಕ್ಕನ ಶಕ್ತಿ ಅಂತ ಅಂದುಕೊಳ್ಳಬೇಡ.. ಹಾ ಹಾ..

      Delete
    2. ಅನು ಅಕ್ಕಾ ,
      ಕ್ಷಮೆ ಇರಲಿ ತುಂಬಾ ದಿನಗಳ ನಂತರ ನಿಮ್ಮ ಪ್ರತಿಕ್ರಿಯೆ ನೋಡ ಬಂದೆ .
      ಅಂದ ಹಾಗೆ ನಾ ಹೇಳಿದ್ದು ಅವಳ ಅವನನ್ನು ಬರಿಯ ಅವಳಿಗೆ ಮಾತ್ರ ಉಳಿಸದೇ ನಮಗೂ ಆ ಭಾವವೊಂದ ಸಲೀಸಾಗಿ ವರ್ಗಾಯಿಸಿದ್ರಿ ಅಂತ :)
      ಯಾಕೋ ತುಂಬಾ ಇಷ್ಟವಾಗಿತ್ತು ಈ ಭಾವ ...
      ಹಾ ಹಾ ..ನಿಜಕ್ಕೂ ಇದು ಕವಿತೆಯಾಗಿದ್ರೆ ನಂಗರ್ಥ ಆಗ್ತಿರ್ಲಿಲ್ಲ (ಯಾಕೋ ಕವಿತೆಗಳ ಭಾವ ಅರ್ಥ ಮಾಡಿಕೊಳ್ಳೋಕೆ ಸೋಲ್ತೀನಿ ಪ್ರತಿ ಸಲ )
      ಅನು ಅಕ್ಕನ ಶಕ್ತಿ ಏನಂತ ಎಲ್ರಿಗೂ ಗೊತ್ತು :)

      ನಿಮ್ಮೀ ಆತ್ಮೀಯ ರಿಪ್ಲೈ ಗೆ ನಾ ಕಳೆದು ಹೋದೆ ಮತ್ತೆ :)
      ಬರೀತಾ ಇರಿ

      Delete
  2. ಮಾರ್ಮಿಕವಾದ ಬರಹ :)

    ReplyDelete
  3. ಅನೂ, ತುಂಬಾನೆ ಇಷ್ಟವಾಯಿತು... ನಿಮ್ಮ ಬರಹದಲ್ಲಿ ಓದುಗನೂ ತನ್ನನ್ನು ತನ್ನವನನ್ನೋ ತನ್ನವಳನ್ನೋ ಕಂಡುಕೊಳ್ಳುತ್ತಾನೆ\ತ್ತಾಳೆ. ಎಲ್ಲಕ್ಕಿಂತಲೂ ಬರಹದ ಶೈಲಿ ತುಂಬಾನೇ ಖುಷಿ ನೀಡಿತು. ಆ ಕೊನೆಯ ಪ್ಯಾರ ನನ್ನ ಮನದ ಮಾತು.. ಅದನ್ನೇ ನಾನು ನನ್ನೊಳಗೆ ಹೇಳಿಕೊಂಡಿದ್ದೆ..ಅದನ್ನು ನೀನು ಸುಂದರ ಶಬ್ದಗಳಲ್ಲಿ ಪೋಣಿಸಿದಿಯಾ!

    ReplyDelete
  4. ನಮ್ಮ ಭಾವಗಳೂ ಸಹ ಎಲ್ಲೆಲ್ಲೋ ಅನು ಅಕ್ಕನ ಸಾಲುಗಳ ಜೊತೆ ರಾಗವಾಗಿ ತಲೆದೂಗಿ
    ಸಾಗುತ್ತವೆ ಓದುವಾಗ....
    ನಾನು ಎಷ್ಟೋ ಸಲ ಯೋಚಿಸಿದ್ದೇನೆ 'ಇವೆಲ್ಲ ಕೇವಲ ಅನು ಅಕ್ಕನ ಮಸ್ತಕದಲ್ಲಿ ಸುಳಿದು ಹೋದ ಭಾವಗಳು ಮಾತ್ರವೇ" ಎಂದು... ಅದಕ್ಕೆ ಉತ್ತರವನ್ನೂ ಹಿಂದೆ ಎಲ್ಲೋ ಹೇಳಿಯಾಗಿದೆ....
    ಏನೇ ಆದರೂ ಝರಿಯಂತೆ ನಿರುಮ್ಮಳವಾಗಿ ಭಾವನೆಗಳನ್ನು ಇಷ್ಟು ಆಕಾರವಾಗಿ ಹೊರ ಹಾಕೋದು
    ನನ್ನಂಥವರಿಗೆ ಆಗದ ಮಾತು...

    "ಎದುರಾದುದು ಹೂವೋ ಹಾವೋ ಆಮೆಯಂತೆ ಚಿಪ್ಪಿನೊಳ ಸೇರಿಹೋಗುತಿದ್ದ ನನ್ನತನ.........."
    ಮನಸ್ಸಿನ ಸೆಳವುಗಳಿಗೆ ಕೊಡುವ ಕೆಲವು ಅಕ್ಷರ ರೂಪ ತುಂಬಾ ಇಷ್ಟವಾಯಿತು....

    ಶುಕ್ರಿಯಾ.....

    ReplyDelete
    Replies
    1. ರಾಘವ, ಹಾಗೋ ಹೀಗೋ ನನ್ನ ಬರಹಗಳ ಮೂಲಕ ಒಂದು ಅಸ್ಪಷ್ಟತೆಯ ರೂಪದಲ್ಲಿ ನಿನ್ನ ಕಾಡುವಿಕೆಯಾಗಿಯಾದ್ರೂ ಈ ಅನಕ್ಕ ನಿನ್ನ ಮನಸಿನಲ್ಲಿ ಸ್ವಲ್ಪ ಹೊತ್ತು ಉಳ್ಕೊಳ್ತಾಳೆ ಅಂತಾಯ್ತು, ಇದಕ್ಕಿಂತ ಹೆಚ್ಚು ಬರೆಯುವವರಿಗೆ ಇನ್ನೇನು ಬೇಕು ಹೇಳು...feeling blessed for having such readers in my blog.. thanks a lot..... ಒಂದು ಪ್ರಶ್ನೆ ತಮ್ಮಾ, ಅನಕ್ಕನ ಮನಸಿನಲ್ಲಿ ಸುಳಿದಾಡುವ ಭಾವಗಳಷ್ಟೇ ಬರಹವಾಗೋದು ಸುಳ್ಳು ಅಂತಿಟ್ಟುಕೋ... ಆಗ ಇವಳು ನನ್ನಕ್ಕ ಅನ್ನಿಸ್ಕೊಳಕ್ಕೆ ಲಾಯಕ್ಕಲ್ಲ ಅಂತ ಅನ್ನಿಸೀತಾ ಹೇಗೆ?

      Delete
    2. ಲಾಯಕ್ಕಲ್ಲ ಅಂತ ಹೇಳಲಿಕ್ಕೆ ಮನಸ್ಸು ಬರಬಹುದೇ ನೀನೇ ಹೇಳು....
      ಬರಹಕ್ಕೆ ಇಂತಾದ್ದೇ ಅಂಥ ವಿಧ ಇದೆಯಾ... ಬರೆಯುವಾತನ ಕಲ್ಪನೆ... ಜೀವನ....
      ಬರವಣಿಗೆಗೆಂದೇ ಅವನು ಮನಸ್ಸಿನಲ್ಲಿ ಸುಳಿದಾಡಿಸಿಕೊಳ್ಳುವ ಭಾವಗಳು... ಏನೂ ಇರಬಹುದು...
      ಇಷ್ಟು ಮಾತ್ರಕ್ಕೆ ನೀನು ಇಂಥ ದೊಡ್ಡ ಪ್ರಶ್ನೆ ಕೇಳಬಹುದಾ...? ನೀನು ಬದುಕ ಕಂಡಷ್ಟು ನಾನು ಕನಸ ಕಂಡಿಲ್ಲಾ ಅಕ್ಕಾ....
      ಹೇಗಿದ್ದರೂ ಏನಿದ್ದರೂ ನೀನು ನನ್ನಕ್ಕನೇ....

      Delete
    3. thanks kano.. i dont have anything else to say now...

      Delete