Sunday, June 30, 2013

ಹೆಸರಾಂತ ಸಾಹಿತಿ ಶ್ರೀ ಸಿ ಪಿ ಕೆಯವರ ಗೀತಗಾಯನದ ಕಾರ್ಯಕ್ರಮಕ್ಕಾಗಿ ಹಾಡು ತಯಾರು ಮಾಡುತ್ತಿದ್ದಾಗ ಸುಮಾರು ಅವರ ೨೦ ಕವನಗಳು ಸಿಕ್ಕಿದವು. ಎಲ್ಲಾ ಕವನಗಳಲ್ಲೂ ಎದ್ದು ಕಾಣುತ್ತಿದ್ದ ಅವರ ಆಶಾವಾದಿತನ, ಸದಾಶಯದ ಭಾವ, ಅಲ್ಲಲ್ಲಿ ಹತಾಶೆಯ ಕಸಿವಿಸಿ ಕಂಡರೂ ಇನ್ನೂ ಏನೂ ಮುಗಿದಿಲ್ಲ, ಕಾಲ ನಮ್ಮ ಮುಂದಿದೆ, ಕೈಮೀರಿ ಹೋಗಿಲ್ಲ ಅನ್ನುವ ಭರವಸೆಯ ಭಾವ ಎದ್ದು ಕಂಡು ಬಂತು. ನಿನ್ನೆಯ ದಿನ ಸ್ಪರ್ಧೆ ನಡೆಯುತ್ತಿದ್ದ ಕಲಾಮಂದಿರದ ಮನೆಯಂಗಳ ಸಭಾಂಗಣಕ್ಕೆ ಪತ್ನೀಸಮೇತರಾಗಿ ಬಂದು ಇಬ್ಬರೂ ಸುಮಾರು ಎರಡೂವರೆ ಗಂಟೆಕಾಲ (ಸ್ಪರ್ಧೆ ಅಂದಮೇಲೆ ನಿಮಗೆ ಗೊತ್ತಿರಬಹುದಾದಂತೆ) ಎಲ್ಲಾ ತರಹದ ಹಾಡುವಿಕೆಯನ್ನೂ ಮುಂದೆಯೇ ಕೂತು ಆಲಿಸುವ ಸಹಿಷ್ಣುತೆ ತೋರಿದ್ದು ನೋಡಿ ಅವರ ಸರಳ ವ್ಯಕ್ತಿತ್ವದ ಬಗ್ಗೆ ಕಣ್ತುಂಬಿ ಬಂತು. ಮೊದಲಿಗೆ ಪ್ರಾಸ್ತಾವಿಕವಾಗಿ ಮಾತಾಡಿದ ಅವರು ನನ್ನ ರಚನೆಗಳು ಗಾಯನವಾಗಬಲ್ಲುವು ಅನ್ನುವ ಕಲ್ಪನೆಯಾಗಲಿ, ಆಶಯವಾಗಲಿ ಅವನ್ನು ಬರೆದಾಗ ನನ್ನಲ್ಲಿರಲಿಲ್ಲ, ಈಗ ಅದಾಗಿರುವಾಗ ಹಾಡುಗರ ಕಂಠದಲ್ಲಿ ನನ್ನ ಬರಹಗಳು ಭಾವಕ್ಕೆ ತಕ್ಕ ರಾಗದ ಹಾಡುಗಳಾಗಿ ಮೂಡುವಾಗ ಇವು ನನ್ನವೇನಾ ಅನ್ನುವ ಅಚ್ಚರಿ ತುಂಬಾ ಖುಶಿ ಕೊಡುವದ್ದಾಗಿದ್ದು, ಅದರಲ್ಲಿ ಭಾಗಿಯಾಗುವ ಆಸೆಗೆ ನಾನಿಲ್ಲಿ ಕೂತಿದ್ದು ಹೋಗುತ್ತೇನೆ ಅಂದವರು ಹಾಗೆಯೇ ಮಾಡಿ ತೋರಿಸಿದರು.




ಹಾಗೇ ಮನಸು ಅಪ್ರಯತ್ನವಾಗಿ ಅವರ ಕವನಗಳಲ್ಲಿನ ಭಾವವನ್ನು ಇಂದಿನ (ನನ್ನದೂ ಸೇರಿದಂತೆ) ನನ್ನ ಗಮನಕ್ಕೆ ಬರುತ್ತಿರುವ ಕವನಗಳಲ್ಲಿರುವದ್ದರ ಜೊತೆ ತುಲನೆ ಮಾಡಹತ್ತಿತು. ಇತ್ತೀಚೆಗೆ ಜನ ಉಘೇಉಘೇ ಎಂದು ಮೆಚ್ಚುಗೆ ತೋರುವ ಬರವಣಿಗೆಗಳು ರೋಷ, ಸಿಟ್ಟು, ಕೆಚ್ಚು, ನಿರಾಸೆ, ವ್ಯಂಗ್ಯಗಳೇ ಮೊದಲಾದ ಭಾವಗಳು ಮತ್ತು ಆಮೂಲಕ ಜಗತ್ತನ್ನು ಬರೀ ನೇತ್ಯಾತ್ಮಕವಾಗಿಯೇ ನೋಡುವ ದೃಷ್ಟಿಕೋನ ಹೊಂದಿರುವವಾಗಿವೆ ಅನ್ನಿಸಿತು. ನಾನು ನೇರವ್ಯಕ್ತಿ, ನಾನೇನಿದ್ದರೂ ವಾಸ್ತವವನ್ನು ಬರೆಯುವುದು, ನನದೇನಿದ್ದರೂ ನಿಷ್ಠುರ ಧ್ವನಿ, ನನದು ಸತ್ಯದ ಬರವಣಿಗೆ-ಹೀಗೇ ಹೇಳಿಕೊಳ್ಳುತ್ತಾ ಬರೀ ಸ್ಮಶಾನ, ಬೂದಿ, ನೇಣು, ಮೋಸ, ಮಚ್ಚು, ಕಿಚ್ಚು, ಬೆಂಕಿ, ಕತ್ತಲು, ಹಸಿವು, ಗಾಯ, ಸಾವು, ಈ ಪದಗಳ ಮೂಲಕ ಅಥವಾ ಲೈಂಗಿಕತೆಗೆ ಸಂಬಂಧಿಸಿದಂತೆ ಗೌಪ್ಯವಾಗಿದ್ದರೆನೇ ಸರಿ ಅನಿಸುವ ಕೆಲವಿಷಯಗಳ, ಕೆಲಶಬ್ಧಗಳ ಅನಾವಶ್ಯಕ ಮತ್ತು ಅನಪೇಕ್ಷಿತ ಅನಾವರಣಗಳ ಮೂಲಕ ಓದುಗನ ಮನಸನ್ನೊಂದು ಅನಾರೋಗ್ಯಕರ ಮಜಲಿಗೊಯ್ಯುವ ಕೆಲಸವನ್ನೂ, ನಿರಾಸೆ, ಹತಾಶೆಗಳನ್ನೂ, ಎಲ್ಲಾ ಮುಗಿದು ಹೋದ ಕಾಲದಲ್ಲಿ ಹುಟ್ಟಿ ಬಂದಿರುವ ನಮ್ಮದು ನತದೃಷ್ಟ ಬಾಳು ಎಂಬ ಪರಿಕಲ್ಪನೆಯಲ್ಲಿ ಒಂದು ಸ್ವಾನುಕಂಪದ ಅಲೆ ಸೃಷ್ಟಿ ಮಾಡುವುದನ್ನೂ ಮಾಡುತ್ತಿಲ್ಲವೇ ನಾವು ಇಂದಿನ ಬರಹಗಾರರು.. ಅನ್ನಿಸಿತು. ಸ್ವಾನುಕಂಪ ಅನ್ನುವದ್ದು ಬೆಳವಣಿಗೆಯ ಪ್ರಕ್ರಿಯೆಯಲ್ಲಿ ತುಂಬಾ ಅಪಾಯಕಾರಿ ಎನ್ನುವದ್ದು ನಮಗೆಲ್ಲರಿಗೂ ಗೊತ್ತಿರುವದ್ದೆ. ಸುತ್ತ ಮುತ್ತ ನಡೆಯುತ್ತಿರುವ ತೀರಾ ಅಸಹ್ಯ ಹುಟ್ಟಿಸುವ ವಿದ್ಯಮಾನಗಳು ನಮ್ಮೆಲ್ಲರ ಗಮನಕ್ಕೂ ಬಂದೇ ಇರುತ್ತವೆ. ಅದನ್ನು ಇದ್ದುದಕ್ಕಿಂತ ವೈಭವೀಕರಿಸಿ ಸಮಾಜದ ಮುಂದಿಡುವ ಕೆಲಸವನ್ನು ಮಾಧ್ಯಮಗಳಾಗಲೇ ಮಾಡುತ್ತಿವೆ. ಇನ್ನು ಕವಿಗಳೂ ಅದನ್ನೇ ವೈಭವೀಕರಿಸುತ್ತಾ, ಕೆದಕುತ್ತಾ, ತಮ್ಮ ಅಲಂಕಾರಗಳು, ಭಾವನಾತ್ಮಕ ಶೈಲಿ, ಪದಗಳ, ಉಪಮೆಗಳ ಮೂಸೆಯಲ್ಲಿಳಿಸಿ ಆಗಲೇ ಇರುವ ಕುರೂಪವನ್ನು ಇನ್ನಷ್ಟು ಕುರೂಪವಾಗಿಸಿ ಓದುಗನ ಮುಂದಿಡಬೇಕೆ? ಅಥವಾ ಅವೆಲ್ಲದದರ ಮಧ್ಯೆ ಇನ್ನೂ ಜೀವಂತವಾಗಿರುವ ಮನುಷ್ಯತ್ವ, ಸಹಜತೆ, ಸಹಿಷ್ಣುತೆ, ಪ್ರಕೃತಿ ಇನ್ನೂ ಮೊಗೆಮೊಗೆದು ಕೊಡುತ್ತಿರುವ ಅದ್ಭುತ ಉಡುಗೊರೆಗಳನ್ನು ಹುಡುಕಿ ಜಗತ್ತಿನ ಮುಂದಿರಿಸಿ, ಇಲ್ಲ, ಇನ್ನೂ ಕಾಲ ಮಿಂಚಿ ಹೋಗಿಲ್ಲ, ಕಳೆಯನ್ನು ಕಿತ್ತಿ, ಈ ಕೆಲವೇ ಸರಿ, ಉತ್ತಮ ಬೀಜಗಳನ್ನು ಮತ್ತೆಮತ್ತೆ ಬಿತ್ತಿ, ಹುಲುಸಾದ ಉಪಯುಕ್ತ ಬೆಳೆ ತೆಗೆಯಬಹುದು ಅನ್ನುವ ಅಶಾವಾದಿತನವನ್ನು ನಮ್ಮ ಬರಹಗಳಲ್ಲಿ ಮೂಡಿಸುವ ಅವಶ್ಯಕತೆ ಹೆಚ್ಚಿದೆಯಾ? ಇದು ನನ್ನ ಮನಸನ್ನು ಕಾಡುತ್ತಿರುವ ಪ್ರಶ್ನೆ.



ಈ ಪ್ರಶ್ನೆ ಮೂಡಲು ನಿನ್ನೆ ನಾನು ಹಾಡಲು ಆರಿಸಿಕೊಂಡ ಸಿ ಪಿ ಕೆಯವರ ಕವನದ ಆಶಯ ನನ್ನಲ್ಲಿ ಮೂಡಿಸಿದ ಧನಾತ್ಮಕ ಭಾವ ಮತ್ತದರ ಸಶಕ್ತ ಪ್ರಭಾವವೇ ಕಾರಣ. ಆ ಹಾಡು ಇಲ್ಲಿದೆ ನಿಮ್ಮೆಲ್ಲರ ಓದಿಗಾಗಿ.



ಹಸಿರಿನ ಸಿರಿಯಿದೆ ವಸುಧೆಯ ಮೇಲೆ ಇನ್ನೂ ಸತ್ತಿಲ್ಲ

ನೀರಿನ ಸೆಲೆಯಿದೆ ಈ ನೆಲದೊಡಲಲಿ ಇನ್ನೂ ಬತ್ತಿಲ್ಲ



ಸೂರ್ಯನ ಉದಯಕೆ ಚಂದ್ರನ ಉದಯಕೆ ಇನ್ನೂ ತಡೆಯಿಲ್ಲ

ನೀಲಿಯ ಬಾನಿಗೆ ಬೀಸುವ ಗಾಳಿಗೆ ಇನ್ನೂ ತಡೆಯಿಲ್ಲ

ವ್ಯೋಮದಿ ಕಟ್ಟುವ ಕಾಮನಬಿಲ್ಲು ಇನ್ನೂ ಅಳಿದಿಲ್ಲ

ಕಡಲಿನ ತಳದಲಿ ಮುತ್ತುಹವಳಗಳು ಇನ್ನೂ ಕಳೆದಿಲ್ಲ



ಗಗನದಿ ಹೊಳೆಯುವ ಗ್ರಹತಾರೆಗಳು ಇನ್ನೂ ಆರಿಲ್ಲ

ನೆಲದಲಿ ನವಿಲು ಹೂಮೊಲ ಚಿಗರೆ ಇನ್ನೂ ತೀರಿಲ್ಲ

ನಭದಲಿ ಹಾಡುವ ಹಕ್ಕಿಯ ಹಿಂಡಿಗೆ ಇನ್ನೂ ಬರವಿಲ್ಲ

ಜುಳುಜುಳು ಹರಿಯುವ ಹೊಳೆಗಳ ಹಾಡಿಗೆ ಇನ್ನೂ ತೆರವಿಲ್ಲ



ಮನುಜನ ಕಣ್ಣಲಿ ಮನದಲಿ ಏತಕೆ ಈ ಎಲ್ಲಕೆ ಅರಕೆ

ಕೊಳೆಯನು ತೊಳೆಯಲಿ ಬೆಳಕನು ತುಂಬಲಿ ಪರಮಾತ್ಮನ ಹರಕೆ

ಎಚ್ಚರಗೊಳ್ಳಲಿ ಮನುಕುಲದೆದೆಯಲಿ ಉದ್ಧಾರದ ಬಯಕೆ



ಸೂರ್ಯೋದಯ, ಚಂದ್ರೋದಯ, ಬಾನಿನ ನೀಲಿ, ಬೀಸುವ ಗಾಳಿ, ಕಾಮನಬಿಲ್ಲು, ಸಾಗರದ ಮುತ್ತುಹವಳಗಳು, ಗಗನದ ಗ್ರಹತಾರೆಗಳು, ನೆಲದ ನವಿಲು ಹೂ ಮೊಲ ಚಿಗರೆಗಳು, ನಭದ ಹಕ್ಕಿಯ ಹಿಂಡು, ಜುಳುಜುಳು ಹರಿಯುವ ಹೊಳೆಯ ಹಾಡು ಇವೆಲ್ಲವೂ ಅಂದಿನಿಂದ ಇಂದಿನವರೆಗೆ ಮನುಜನ ಪಾಲಿಗೆಂದು ಪ್ರಕೃತಿಯಿಂದ ಕೊಡಲ್ಪಟ್ಟವುಗಳು ಅದೇ ರೂಪದಲ್ಲಿ ಬದಲಾಗದೆ ಉಳಿದಿವೆ. ಅವುಗಳನ್ನು ನೋಡುತ್ತಿರುವ ನಮ್ಮ ದೃಷ್ಟಿ ಮಾತ್ರ ಬದಲಾಗಿರುವುದು ಅನ್ನುತ್ತಾ ಆರಂಭವಾಗುವ ಕವನ ನಾವಂದುಕೊಂಡಂತೆ ಹಿಂದೆ ಚಂದ ಇತ್ತು ಈಗದು ಹಾಗಿಲ್ಲ ಅನ್ನುವದ್ದಾಗಿಲ್ಲ, ನೋಡಿ ಇರಬೇಕಾದವೆಲ್ಲ ಇರಬೇಕಾದಲ್ಲೇ ಇರಬೇಕಾದ ರೀತಿಯಲ್ಲೇ ಇವೆ, ಅವಿಲ್ಲ ಅಂದುಕೊಂಡು ನಾವು ಅವನ್ನೇ ಹುಡುಕುತ್ತಾ ಹೊರಟು, ಸಮಯವನ್ನೂ ಶಕ್ತಿಯನ್ನೂ ವ್ಯಯಿಸುತ್ತಿದ್ದೇವೆ ಅನ್ನುತ್ತ ಮುನ್ನಡೆಯುತ್ತದೆ. ಈ ಮೌಢ್ಯದ ಕೊಳೆಯನ್ನು ತೊಳೆದು ನಮ್ಮಲ್ಲಿ ಇರುವ ಹಲವಾರು ವಿಷಯಗಳನ್ನು ನಮ್ಮರಿವಿಗೆ ತರುವ ಬೆಳಕನ್ನು ನಮ್ಮೊಳಗೆ ಪರಮಾತ್ಮನ ಹರಕೆ ತುಂಬಲಿ, ಮತ್ತಾವಾಗ ಮನುಕುಲದೆದೆಯಲಿ ನಿಜವಾದ ಉದ್ಧಾರದ ಬಯಕೆ ಮೂಡಲಿ ಅನ್ನುವ ಆಶಯದೊಂದಿಗೆ ಮುಗಿಯುತ್ತದೆ. ಸುಂದರವಾದ ಚಿತ್ರಣ, ಮನೋಭಾವ ಮತ್ತೆ ಆಶಯ.. ಅಲ್ಲವೇ?









No comments:

Post a Comment