Tuesday, June 25, 2013

ಇದೋ ಅಭಿನಂದನೆ, ಅಭಿವಂದನೆ

ಸೋತ ಕಾಲು
ಮುಳ್ಳು ಚುಚ್ಚಿದ ಪಾದ
ಚೂಪುಗಲ್ಲು ಹಾಸಿದ ಹಾದಿ
ನಡೆದೀಯಾದರೂ ಹೇಗೆಂದತ್ತಿತ್ತೇ ಕಾಲ?!

ಬಾಗಿದ ಬೆನ್ನು,
ಮಣಭಾರ ಹೆಗಲಲಿ
ತಲೆಯೆತ್ತದ ಋಣಭಾರದಡಿ
ನಿಂತೀಯಾದರೂ ಹೇಗಂದತ್ತಿತ್ತೇ ಕಾಲ?!

ಅತ್ತರೂ ಅತ್ತಿರಬಹುದದು,
ಕಾಲದೆಲ್ಲಾ ನಡೆಗಳೂ ಅರಿವಿಗತೀತ...

ಹಸಿವು, ನಿದ್ದೆ, ಕನಸುಗಳೂ ಮುನಿಸಿಕೊಂಡ
ಕ್ಷಣ ಒಳೊಳಗಿಳಿದು ಹೆಕ್ಕಿತೆಗೆದವೋ ಎಂಬಂತೆ
ಮಣ್ಣೊಳಗಿನ ಕಾವಿಗೆ ಮೊದಲಹನಿ ನೆಪವಾದಂತೆ
ನೋವಿನೆಳೆಯ ಹೆಳೆ ಹಿಡಿದೆದ್ದು ಹೊರಹೊಮ್ಮಿದ
ನಿನ್ನೊಳಗಿನ ಹನಿಹನಿ ಸತ್ವ ಅಕ್ಕರಗಳಾದವು...

ನೋವು, ನಲಿವು, ದೂರು, ಕೋಪ
ಹತಾಶೆ, ನಿರಾಸೆ, ವಿರಹ, ವೇದಾಂತ
ಮೆಚ್ಚುಗೆ, ಮುನಿಸು, ನೆನಪು, ಮರೆವು
ನಿವೇದನೆ, ಅರ್ಪಣೆ, ಆರಾಧನೆ, ನಿರೂಪಣೆ
ಆವೇಗ, ಆವೇಶ, ಪ್ರೇಮ, ಕಾಮ
ಬೆಂಕಿ-ಹೂವು, ಹಣ್ಣು-ಹುಣ್ಣು
ಒಂದೂ ಬಿಡದೆಲ್ಲವೂ ಬರಹವಾದವು..

ಹುಡುಕಿ ನಾ ಸೋತ ಮಾತೊಂದೇ-
ದ್ವೇಷ... ಬಲ್ಲೆ ನೀ ನಾ ಮೆಚ್ಚಿದ ಮನಸು
ನಿನ್ನ ದ್ವೇಷ..ನಿನ್ನೊಳಗದು ಸಾಕಾರವಾಗದ ಆಕಾರ.

ಇದೋ.. ನನದೊಂದು ಅಭಿನಂದನೆ, ಅಭಿವಂದನೆ
ಅಲ್ಲ ನಿನಗಲ್ಲ...
ನಿನ್ನೊಳಗಿನ ಪ್ರೇಮಕೆ
ಅದ ಬೆಳಗಿದ ಬೆಳಕಿಗೆ
ಅದು ಸಾಕ್ಷಾತ್ಕರಿಸಿದ ಮೌನಕೆ
ಮೌನಗರ್ಭದಿ ಮೊಳೆತ ಕನಸಿಗೆ
ಕನಸು ಕತ್ತಲಲಷ್ಟೇ ಉಳಿದ ನೋವಿಗೆ
ನೋವನೇ ನಲಿವ ಹೆರುವ ಬರಹ ಮಾಡಿದ ಪ್ರೇಮನಿಷ್ಠೆಗೆ...

5 comments:

  1. ಅಭಿನಂದನೆ
    ಅಭಿವಂದನೆ!

    ReplyDelete
  2. ತುಂಬಾ ಆಳವಾಗಿ ಆಲೋಚಿಸುವಂತ ಕವನವಿದು.

    ReplyDelete
  3. ಹುಟ್ಟು ಸಾವುಗಳೆಂಬೆರಡು ಅನಿಶ್ಚಿತತೆಗಳ ನಡುವೆ...
    ನೀನು ಹೇಳಿದ "ನೋವು, ನಲಿವು,.........
    ..............ಬೆಂಕಿ-ಹೂವು, ಹಣ್ಣು-ಹುಣ್ಣು ಇವುಗಳೆಲ್ಲಾ
    ನಮ್ಮಂಥದವರಿಗೆನೋ ಬರಹಗಳಾದವು.ಉಳಿದವರ ಪಾಡೇನು?

    ಮಳೆಯ ಮೊದಲ ಹನಿ ಬೀಳುವ ಉನ್ಮಾದದಲಿ ತಾನೆಲ್ಲಿ ಬಿದ್ದೇನೆಂದು
    ಎಲ್ಲಿ ಯೋಚಿಸೀತು.....??
    ಬಿದ್ದಿದ್ದು ಸಾಗರಕ್ಕೇ ಆದರೂ ಧೂಳಿಗೇ ಆದರೂ ಅದು ಪಡೆದ ಅವಸ್ಥೆ ಅದು...

    ಅಭಿನಂದನೆ.... ಚನ್ನಾಗಿದೆ....

    ReplyDelete
  4. ದೀಪದ ಬತ್ತಿಯಲ್ಲಿ ಪ್ರಕಾಶ ಅವಿತಿಟ್ಟುಕೊಂಡಹಾಗೆ ಮನದೊಳಗೆ ಜ್ಞಾನ ಜ್ಯೋತಿ ಹಚ್ಚಲು ನೆರವಾಗುವ ಸಾಲುಗಳು ಸೂಪರ್ ಇದೆ

    ReplyDelete
    Replies
    1. Thanks to atraadi anna, badari sir, raaghav and srikaant sir

      Delete