Sunday, June 23, 2013

ಇಳೆಯ ಇಂದಿನ ಮಾತು

ನಾನಾಗಲೇ ಹೇಳಿದ್ದೆ,
ಅಂತರ ಕಾಪಾಡಿಕೊಳ್ಳಬೇಕು,
ಮೀರಿ ಮುನ್ನಡೆಯಬಾರದು,
ಎಲ್ಲಕ್ಕೂ ನಿಯಮ ಅನ್ನೋದಿದೆಯಲ್ಲಾ..

ಮನಸಿಗೇನೋ... ತುಂಬಾ ಕೇಳುತ್ತೆ,
ಎಲ್ಲ ಪಡೆಯುವ ಹಠ ಒಳ್ಳೆಯದಲ್ಲ...
ನೀನಿದ್ದಲ್ಲಿ ನಾ, ನಾನಿದ್ದಲ್ಲಿ ನೀ ಬರುವುದು
ಅದೊಂದು ಕನಸಾಗೇ ಉಳಿವ ಕನಸು
ಹೆಚ್ಚುಕಮ್ಮಿ ನಿತ್ಯ ಭೇಟಿಯಾಗುವ
ನೀನಲ್ಲಿಂದಲೇ ಹಿಡಿದುಂಬಿ ಸುರಿಯುವ
ನಾ ಇಲ್ಲೇ ಅಂಜಲಿಯೊಡ್ಡಿ ಪಡೆಯುವ
ನಡುವೆ ಯಾರೂ, ಏನೂ ಬರದಿರುವ
ಏಕಾಂತ ನಮ್ಮದಿತ್ತಲ್ಲಾ..

ಅಷ್ಟು ಕಾಲದಿಂದಲೇ ಸುಮ್ಮನಿರುತ್ತೀ
ಒಮ್ಮೊಮ್ಮೆ ಮಾತ್ರ ತಡೆಯದೇ
ಬುದ್ಧಿ ಮನಸ ಕೈಲಿಟ್ಟುಬಿಡುತ್ತೀ....
ಮನಸಿಗೇನೋ...ತುಂಬಾ ಮಿದು ಅದು
ಹಾಗಂತ ಸದಾ ಮುದ್ದಿಸಿದರಾದೀತೇ?!
ಬುದ್ಧಿ ಕೈಲಿಟ್ಟು ಒಮ್ಮೊಮ್ಮೆ ಹಿಂದೆಳೆಯಲೇಬೇಕು

ನಾನೋಡು.. ನಾನೂ ವಿರಹಿತೆಯೇ
ನಿನ್ನತ್ತ ನನಗೂ ಸೆಳೆತವಿದೆ
ನನಗಿಲ್ಲಿ ಬದ್ಧತೆಯ ಮಿತಿಯಿದೆ
ಅದರೊಳಗಿನ ತವಕದಲೂ
ಆತುರದಲೂ ನಾನಿದ್ದಲ್ಲೇ ಇದ್ದು
ಬರದ ತೃಪ್ತಿಯ ನೆರಳ ನೆರಳಲಿ
ತೃಪ್ತಳಂತೆ ಸ್ಥಿರವಾಗಿಲ್ಲವೇನೋ...

ನೋಡೀಗ ನೀ ಬಳಿ ಬಂದೆ..
ಬೀಳಬಾರದವರೆಲ್ಲ ಉರಿದು ಬಿದ್ದರು.
ಅವನೇನೋ ಸುದ್ಧಿಗೇ ಸ್ಫೋಟಗೊಂಡ
ಇವ ನೋಡು, ಕುಸಿದುಬಿದ್ದ ನನ್ನಮೇಲೆ
ಕಲ್ಲುಮಣ್ಣೆರಚಿ ಬಯ್ಗುಳ ಮಳೆ ಸುರಿಸಿದ
ಸಾಲದ್ದಕ್ಕೆ ಅವಳುಕ್ಕಿ ಹರಿಯುತಿದ್ದಾಳೆ
ಹತಾಶೆಯೋ ಅಸೂಯೆಯೋ
ದಿಕ್ಕುತಪ್ಪಿದ ನಡೆಗೆ ಕಳವಳವೋ
ಕಣ್ಣೀರು ಕಣ್ಣೀರೆನಿಸದ ಹಾಗೆ ಹರಿಸಿಬಿಟ್ಟಳು.

ಬಗೆಬಗೆಯ ನೋವುಕ್ಕಿಸಿದ ನಡೆಗಳು
ಬೇಕಿತ್ತೇನೋ ನಿನಗೆ..
ನೋಡೆಷ್ಟೆಲ್ಲ ಆಪಾದನೆಗಳು..
ಇರಲಿ ಬಿಡು... ಹಿಂದೆ ಹೋಗೀಗ
ಇವತ್ತೇ ಕೊನೆ...ಇನ್ಯಾವತ್ತೂ
ಸಮೀಪಿಸಬೇಡ... ಕೆಲವು ಹಣೆಗಳು
ತುಂಬಿಸಲ್ಪಟ್ಟಿರುತ್ತವೆ ನಿರಾಸೆಯಿಂದ
ಆದರೆ ಯತ್ನ ಕೈಯ್ಯಲ್ಲಿದೆ, ಹಣೆಯಲಲ್ಲ, ಮನದಲಲ್ಲ...
ದೂರವೆಂಬುದ ಮರೆತು ಇರುವ ಸಂಭ್ರಮಿಸುವಾ

ನೀನಲ್ಲೇ.. ನಾನಿಲ್ಲೇ..
ಮಿಲನವಿಲ್ಲದೇ ಬೆಳದಿಂಗಳ ಮಗುವ ಹುಟ್ಟಿಸಬಲ್ಲೆ ನೀ
ನಾನದ ಭರಿಸಬಲ್ಲೆ...ನೀ ಕೊಟ್ಟು, ನಾ ಹೊತ್ತು
ಬಾಳುತಲೇ ಸಾಗುವಾ..ನಿಯಮ ಮೀರದೆ....







.



1 comment:

  1. ವಾವ್, ಬುದ್ಧಿ ಮನಸ ಕೈಲಿಟ್ಟುಬಿಡುತ್ತೀ... ಇದು ನನ್ನ ಕಲ್ಪನೆಗೆ ಮೀರಿದ ಭಾವ.

    ReplyDelete