Tuesday, June 25, 2013

ಅಯೋಮಯ

ಕತ್ತಲ ಎದೆಯಯೊಳಗೆ
ಮುಷ್ಟಿ ಹಿಡಿದ ಬಿಗಿಯುಸಿರು
ಉಚ್ಛ್ವಾಸವಾಗಿ ಹೊಮ್ಮಿದ್ದಕೆ
ಸುರಿದಿದೆ ಕರಿಮಣಿ ಚಲ್ಲಾಪಿಲ್ಲಿ.
ಒಟ್ಟು ಹಿಡಿದಿದ್ದ ಬಂಧ ಸಡಿಲವೋ,
ತಡೆದಿದ್ದ ಉಸಿರ ತೀವ್ರತೆಗೋ,
ಕಪ್ಪಲಿ ಕಪ್ಪಾಗಿ ಕಂಡೂ ಕಾಣದ
ಸ್ವಾತಂತ್ರ್ಯ-ಸ್ವೇಚ್ಛೆಯ ನಡುವ
ಅವಕಾಶವನಾಕ್ರಮಿಸಿದ ಬಿಡುಗಡೆ..

ಹಸಿರ ಹೃದಯದೊಳಗೆ
ತೃಪ್ತ ಸಮೃದ್ಧಿಯೊರತೆ
ಮೆಲ್ಲ ಝಿಲ್ಲನೆ ಚಿಮ್ಮಿದ್ದಕೆ
ಗರಿಕೆ ಮೂಡಿದೆ ನೆಲದ ನರನಾಡಿ..
ಒಳಗುಳಿದ ಬೇರಕುಡಿಯ ಜೀವಂತಿಕೆಯೋ,
ಹೊರಗೆಳೆದ ಸೆಳೆತಕುತ್ತರವೋ,
ಎದ್ದು ಆದರೆ ನಿಂತಿಲ್ಲದೆ ಹಬ್ಬಿದ,
ಹೂ-ಕಾಯಿ-ಹಣ್ಣಿಲ್ಲದ ಸಸಿಯೆನಿಸಿದ
ಬೇರಲಡಗಿದ ಸ್ವಯಂಪೂರ್ಣಸತ್ಯ...

ಇದಮಿತ್ಥಂ ಎಂಬುದಿಲ್ಲದ ಜಗ
ಕಪ್ಪು ತೋರಲಾಗದ ಕಪ್ಪಿನಸ್ತಿತ್ವ,
ಫಲಿಸದೆ ಹಸಿರೆನಿಸೋ ಸತ್ವ..
ಕಂಡದ್ದೇ ಅಯೋಮಯ...
ಕಾಣದ್ದ ಅಂದುಕೊಂಡು
ಅರಿವ ಹೆಜ್ಜೆಯ ತೊರೆದು
ಮರುಗುವುದೂ, ನಲಿಯುವುದೂ
ಹರಿವ ನೀರಿಗೆ ಬಣ್ಣ ಮೆತ್ತಿದಂತೆ..

2 comments:

  1. ಕತ್ತಲ ಎದೆಯಯೊಳಗೆ
    ಮುಷ್ಟಿ ಹಿಡಿದ ಬಿಗಿಯುಸಿರು
    ಉಚ್ಛ್ವಾಸವಾಗಿ ಹೊಮ್ಮಿದ್ದಕೆ
    ಸುರಿದಿದೆ ಕರಿಮಣಿ ಚಲ್ಲಾಪಿಲ್ಲಿ.
    ಮತ್ತೆ
    ಗರಿಕೆ ಮೂಡಿದೆ ನೆಲದ ನರನಾಡಿ..
    ಇಲ್ಲಿನ ನಾಲ್ಕು ಸಾಲುಗಳು...
    ತುಂಬಾ ಚಂದ.....
    ಭಾವಗಳ ಬಗ್ಗೆ ನಾನು ಹೇಳಿದರೆ " ಅಯೋಮಯ"ವಾದೀತು....


    ReplyDelete
    Replies
    1. ಹೇಳೋ, ಹೇಳಿಬಿಡೋ ತಮ್ಮಾ.. ಬದುಕು ಹೇಳಿದ್ರೂ ಹೇಳದಿದ್ರೂ ಅಯೋಮಯನೇ ಕಣಪ್ಪಾ.. ಹುಟ್ಟುವ ಕ್ಷಣದವರೆಗೂ ಹುಟ್ಟಿಯಾಗಿಬಿಟ್ಟವರ ಮನಸಲ್ಲಿ ಹುಟ್ಟಲಿರುವ ನಮ್ಮ ಬಗ್ಗೆ ಅಯೋಮಯಭಾವನೇ.. ಮುಂದೆ ಬದುಕುವುದಂತೂ ಅಯೋಮಯದ ಪರಮಾವಧಿಯಲ್ಲೇ ನಡೀತದೆ.. ಹಾಗೇ ಬದುಕಿ ಒಂದು ದಿನ ಅಯೋಮಯದ ಸ್ಥಿತಿಯಲ್ಲೇ ನಾವೂ ಇದ್ದಂತೆ ಪ್ರಪಂಚವನ್ನೂ ಅಯೋಮಯವಾಗೇ ಬಿಟ್ಟು ಹೊರಟುಬಿಡುವುದು.. ಅಷ್ಟೇ ಅಲ್ಲ್ವೇನೋ..ಇನ್ನು ಹತ್ತರೊಟ್ಟಿಗೆ ಹನ್ನೊಂದು ಅನ್ನುವಂತೆ ನಿನ್ನ ಮಾತುಗಳು ಸೃಷ್ಟಿಸುವ ಇನ್ನೊಂದಷ್ಟು ಗೋಜಲು... ಬಣ್ಣಬಣ್ಣದ ಗೋಜಲುಗಳೂ ಒಂತರಾ ಚಂದಾನೆ ಅಲ್ಲವಾ ರಾಘವ?

      Delete